Sunday, March 28, 2021

ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ಆತಂಕ : ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ

ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೬ನೇಯ ಶರಣ ಸಾಹಿತ್ಯ ಸಮ್ಮೇಳನವನ್ನು ಕುವೆಂಪು ವಿಶ್ವ ವಿದ್ಯಾನಿಯಲದ ಕುಲಪತಿ ಪ್ರೊ. ಡಾ. ಬಿ.ಪಿ ವೀರಭದ್ರಪ್ಪ ಉದ್ಘಾಟಿಸಿದರು.
   ಭದ್ರಾವತಿ, ಮಾ. ೨೮: ಕೋವಿಡ್-೧೯ರ ಪರಿಣಮ ಕಳೆದ ೧ ವರ್ಷದಿಂದ ಮನುಷ್ಯನ ಬದುಕು ಸಂಯಮ ಕಳೆದು ಕೊಂಡಿದ್ದು, ನಮ್ಮನ್ನು ನಾವು ಸ್ವಯಂ ನಿಯಂತ್ರಣಕ್ಕೆ ಒಳಗಾಗಿ ಸ್ವೇಚ್ಛೆಯಿಂದ ಬದುಕುವಂತಾಗಿದೆ. ಈಗಲೂ ನಾವು ನಮ್ಮನ್ನು ಅರ್ಥ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಆತಂಕ ಎದುರಿಸಬೇಕಾಗುತ್ತದೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
    ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೬ನೇಯ ಶರಣ ಸಾಹಿತ್ಯ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
   ಮನುಷ್ಯನ ಮಿತಿಮೀರಿದ ದುರಾಸೆಗಳಿಗೆ ಸ್ವಯಂ ಕಡಿವಾಣ ಹಾಕುವಲ್ಲಿ ಕೋವಿಡ್-೧೯ ಯಶಸ್ವಿಯಾಗಿದೆ. ಇಂದು ಮನುಷ್ಯ ಕೇವಲ ಹಣ, ಅಧಿಕಾರವೇ ಬದುಕು ಎಂಬುದನ್ನು ತಿಳಿದುಕೊಂಡಿದ್ದಾನೆ. ಇದರಿಂದ ತನ್ನತನವನ್ನು ಕಳೆದುಕೊಂಡಿದ್ದಾನೆ.  ಕೋವಿಡ್-೧೯ರ ಪರಿಣಾಮ ಕಳೆದ ೧ ವರ್ಷದಿಂದ ಏಕಾಂಗಿಯಾಗಿ ಕಾಲ ಕಳೆಯುವಂತಾಗಿದೆ. ಒಬ್ಬಂಟಿಯಾಗಿ ಮನೆಯಲ್ಲಿ ಉಳಿದುಕೊಳ್ಳಲಾಗದ ಬಹಳಷ್ಟು ಮಂದಿ ಮಾನಸಿಕವಾಗಿ ಅಸ್ವಸ್ಥತೆಗೆ ಒಳಗಾಗಿದ್ದಾರೆ. ಕೆಲವರು ಗೃಹ ಬಂಧನ, ಇನ್ನೂ ಕೆಲವರು ಸೆರೆವಾಸ ಎಂಬ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಮನೆಯಲ್ಲಿನ ಪ್ರೀತಿ, ಸಹಬಾಳ್ವೆ, ಕುಟಂಬದ ಮಹತ್ವ ಅರಿಯಲು ಕೋವಿಡ್-೧೯ ಸಹಕಾರಿಯಾಗಿದೆ. ಇದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಪುನಃ ನಮ್ಮ ಬದುಕು ಶರಣರ ಬದುಕಿನ ಕಡೆ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಅವರ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕೆಂದರು.
    ಸಮ್ಮೇಳನ ಉದ್ಘಾಟಿಸಿದ ಕುವೆಂಪು ವಿಶ್ವ ವಿದ್ಯಾನಿಯಲದ ಕುಲಪತಿ ಪ್ರೊ. ಡಾ. ಬಿ.ಪಿ ವೀರಭದ್ರಪ್ಪ ಮಾತನಾಡಿ, ೧೨ನೇ ಶತಮಾನದ ಶರಣರ ಬದುಕು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಎಲ್ಲರನ್ನು ನಮ್ಮವರು ಎಂದು ಕಾಣುವ ಮನೋಭಾವ, ಕಾಯಕದ ಮಹತ್ವ, ದಾಸೋಹದ ಮಹತ್ವ, ಸಮಸಮಾಜ ನಿರ್ಮಾಣದ ಪರಿಕಲ್ಪನೆ. ಇವೆಲ್ಲವನ್ನು ವಚನ ಸಾಹಿತ್ಯದ ಮೂಲಕ ಕೊಡುಗೆಯಾಗಿ ನೀಡಿದ ಶರಣರ ಬದುಕು ಆದರ್ಶಪ್ರಾಯ. ಅವರ ಆದರ್ಶಗಳನ್ನು ಇಂದಿನ ಸಮಾಜದಲ್ಲಿ ನಾವುಗಳು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ. ನಮ್ಮ ಭವಿಷ್ಯದ ಮುಂದಿನ ಗುರಿ ಯಾವ ನಿಟ್ಟಿನಲ್ಲಿ ಸಾಗಬೇಕು. ಎದುರಾಗುವ ಸವಾಲುಗಳು ಸೇರಿದಂತೆ ಎಲ್ಲವನ್ನು ಈ ರೀತಿಯ ಸಾಹಿತ್ಯ ಸಮ್ಮೇಳನಗಳಿಂದ ಕಂಡುಕೊಳ್ಳಲು ಸಾಧ್ಯ ಎಂದರು.
     ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಪ್ರಾಸ್ತಾವಿಕ ಹಾಗು ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯನುಡಿಗಳನ್ನಾಡಿದರು.
     ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಡಾ. ವೀಣಾ ಎಸ್. ಭಟ್, ಜಿಲ್ಲಾ ಖಜಾನೆ ಉಪನಿರ್ದೇಶಕಿ ಎಚ್.ಎಸ್ ಸಾವಿತ್ರಿ ಮತ್ತು ಶ್ರೀ ಬಸವೇಶ್ವರ ಸಭಾಭವನ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಡಾ. ಬಿ.ಜಿ ಧನಂಜಯ್ಯ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಎನ್.ಎಸ್ ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಕತ್ತಲಗೆರೆ ತಿಮ್ಮಪ್ಪ ನಿರೂಪಿಸಿದರು.

Saturday, March 27, 2021

ಮಾ.೨೮ರಂದು ತಾತಯ್ಯನವರ ೧೮೬ನೇ ಆರಾಧನಾ ಮಹೋತ್ಸವ

ಭದ್ರಾವತಿ, ಮಾ. ೨೭: ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೬ನೇ ಆರಾಧನಾ ಮಹೋತ್ಸವ ಮಾ.೨೮ರಂದು ಬೆಳಿಗ್ಗೆ ೧೦.೩೦ಕಕ್ಕೆ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ನಡೆಯಲಿದೆ.
ಕುಳ್ಳೂರು ಸುಕ್ಷೇತ್ರ ಶ್ರಿ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದು, ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
ಎಂ.ಎಸ್ ರಾಮಯ್ಯ ಶಿಕ್ಷಣ ಸಂಸ್ಥೆ ವೈಸ್ ಛೇರ್‌ಮನ್ ಎಂ.ಎಸ್ ಸೀತರಾಮ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಮಹಿಳಾ ಬಲಿಜ ಸಮಾಜದ ಅಧ್ಯಕ್ಷೆ ಶಾಂತಮ್ಮ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಲಿಜ ಸಂಘದ ಅಧ್ಯಕ್ಷ ಎಸ್.ಎನ್ ಸುಬ್ರಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಉತ್ತಮ ವ್ಯಾಯಾಮ, ದೈಹಿಕ ಶ್ರಮಗಳಿಂದ ಮೂಳೆ ಸವೆತಕ್ಕೆ ಕಡಿವಾಣ : ಡಾ. ವೀಣಾ ಎಸ್ ಭಟ್

ಹಳೇನಗರ ಮಹಿಳಾ ಸೇವಾ ಸಮಾಜ, ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಹುಬ್ಬಳ್ಳಿಯ ಮೇಯರ್ ಆರ್ಗ್ಯಾನಿಕ್ ಪ್ರೈವೇಟ್ ಲಿ., ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಮೂಳೆ ಸಾಂದ್ರತೆ ಚಿಕಿತ್ಸೆ ಹಾಗು ತಪಾಸಣಾ ಶಿಬಿರ ಡಾ. ವೀಣಾ ಎಸ್ ಭಟ್, ಹೇಮಾವತಿ ವಿಶ್ವನಾಥ್, ಅನ್ನಪೂರ್ಣ ಸತೀಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಮಹಿಳೆಯರು ಉತ್ತಮ ವ್ಯಾಯಾಮ ಹಾಗು ದೈಹಿಕ ಶ್ರಮಗಳಿಂದ ೪೦ ವರ್ಷಗಳ ನಂತರ ಕಾಣಿಸಿಕೊಳ್ಳುವ ಮೂಳೆ ಸವೆತ ಹಾಗು ಇನ್ನಿತರ ಸಮಸ್ಯೆಗಳಿಂದ ಪಾರಾಗಲು ಸಾಧ್ಯ ಎಂದು ನಗರದ ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಭಟ್ ತಿಳಿಸಿದರು.
    ಅವರು ಹಳೇನಗರ ಮಹಿಳಾ ಸೇವಾ ಸಮಾಜ, ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಹುಬ್ಬಳ್ಳಿಯ ಮೇಯರ್ ಆರ್ಗ್ಯಾನಿಕ್ ಪ್ರೈವೇಟ್ ಲಿ., ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಮೂಳೆ ಸಾಂದ್ರತೆ ಚಿಕಿತ್ಸೆ ಹಾಗು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಋತು ಚಕ್ರ ಆರಂಭದಿಂದ ನಿಲ್ಲುವವರೆಗೂ ಮಹಿಳೆಯರು ಹಲವಾರು ಹಂತಗಳನ್ನು ದಾಟಿ ಜೀವನ ನಡೆಸಬೇಕಿದೆ. ಈ ಹಿನ್ನಲೆಯಲ್ಲಿ ಉತ್ತಮ ಆರೋಗ್ಯ ಹೊಂದುವುದು ಅವಶ್ಯಕ.
    ೩೦ ವರ್ಷಗಳವರೆಗೆ ಮಹಿಳೆಯರು ನಿರಂತರವಾಗಿ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳುವ ಜೊತೆಗೆ ಭವಿಷ್ಯದಲ್ಲಿ ಎದುರಾಗುವ ಮೂಳೆ ಸವೆತದಿಂದ ಪಾರಾಗಲು ಅಗತ್ಯವಿರುವ ಕ್ರಮಗಳನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
    ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಿದ್ದರು.
   ಪ್ರಮುಖರಾದ ಶೋಭಾ ಗಂಗರಾಜ್, ಜಯಂತಿ ಶೇಟ್, ಶಕುಂತಲ, ಲೋಹಿತಾ ನಂಜಪ್ಪ, ವಿಶ್ವೇಶ್ವರಯ್ಯ, ಪ್ರಜ್ವಲ್, ಉಮೇಶ್, ಶಾರದ ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಂಗ ಕಲೆ ಮೂಲಕ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ : ಅಪರಂಜಿ ಶಿವರಾಜ್

ಭದ್ರಾವತಿ ಜನ್ನಾಪುರದ ಅಪರಂಜಿ ಅಭಿನಯ ಶಾಲೆಯಲ್ಲಿ ಶನಿವಾರ ವಿಶ್ವ ರಂಗಭೂಮಿ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
   ಭದ್ರಾವತಿ, ಮಾ. ೨೭: ರಂಗ ಕಲೆ ಮೂಲಕ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ರಂಗಕಲಾವಿದ, ಚಲನಚಿತ್ರ ನಟ ಅಪರಂಜಿ ಶಿವರಾಜ್ ಹೇಳಿದರು.
   ಅವರು ಶನಿವಾರ ಜನ್ನಾಪುರದಲ್ಲಿ ಆರಂಭಿಸಿರುವ ಅಪರಂಜಿ ಅಭಿನಯ ಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಸರಳವಾಗಿ ಆಚರಿಸುವ ಮೂಲಕ ಮಾತನಾಡಿದರು.
ಬಾಲ್ಯದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲು ರಂಗಕಲೆ ಸಹಕಾರಿಯಾಗಿದೆ. ಉತ್ತಮ ವ್ಯಕ್ತಿತ್ವದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳ ಹಿಂದೆ ಆರಂಭಿಸಿದ ಶಾಲೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
   ರಂಗ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ತೊಡಗಿಸಿಕೊಂಡಲ್ಲಿ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಲಿದೆ ಎಂಬ ತಪ್ಪು ಕಲ್ಪನೆಯನ್ನು ಕೆಲವರು ಹೊಂದಿದ್ದಾರೆ. ಆದರೆ ರಂಗ ಕಲೆ ಮೂಲಕ ಮಕ್ಕಳು ಸುಲಲಿತವಾಗಿ ಮಾತನಾಡುವ ಜೊತೆಗೆ ತಮ್ಮ ಪ್ರತಿಭೆಗಳನ್ನು ಹೊರಹಾಕುವ  ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದರು.
    ಅಭಿನಯ ಶಾಲೆಯ ಪುಷ್ಪಲತಾ ಮಾತನಾಡಿ, ಮಕ್ಕಳನ್ನು ಅಭಿನಯ ಶಾಲೆಗೆ ಸೇರಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕೆಂದರು.
ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ಹಾಗು ಪೋಷಕರು ಉಪಸ್ಥಿತರಿದ್ದರು.  

ರತಿ, ಮನ್ಮಥ ಪ್ರತಿಷ್ಠಾಪನೆಯೊಂದಿಗೆ ಹೋಳಿ ಹಬ್ಬ ಆಚರಣೆಗೆ ಚಾಲನೆ

ಭದ್ರಾವತಿ ಹಳೇನಗರದ ಕುಂಬಾರರ ಬೀದಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸ ಲಾಗಿರುವ ರತಿ, ಮನ್ಮಥ.
   ಭದ್ರಾವತಿ, ಮಾ. ೨೭: ರತಿ, ಮನ್ಮಥ ಪ್ರತಿಷ್ಠಾಪನೆಯೊಂದಿಗೆ ಹಳೇನಗರದ ವಿವಿಧೆಡೆ ಕಳೆದ ೩ ದಿನಗಳಿಂದ ಹೋಳಿ ಹಬ್ಬ ಆಚರಣೆಗೆ ಚಾಲನೆ ನೀಡಲಾಗಿದೆ.
   ಕೋವಿಡ್-೧೯ರ ನಡುವೆಯೂ ಪ್ರತಿವರ್ಷದಂತೆ ಈ ಬಾರಿ ಸಹ ಹಳೇನಗರದ ಕುಂಬಾರರ ಬೀದಿಯಲ್ಲಿ ಹೋಳಿ ಮಹೋತ್ಸವ ಸೇವಾ ಸಮಿತಿ ವತಿಯಿಂದ ಮತ್ತು ಪೇಟೆ ಬೀದಿಯಲ್ಲಿ ರತಿ, ಮನ್ಮಥ ಇಬ್ಬರನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ ಬ್ರಾಹ್ಮಣರ ಬೀದಿಯಲ್ಲಿ ಶ್ರೀ ಮನ್ಮಥ ಸೇವಾ ಸಮಿತಿ ವತಿಯಿಂದ ಕೇವಲ ಮನ್ಮಥ ಮಾತ್ರ ಪ್ರತಿಷ್ಠಾಪಿಸಲಾಗಿದೆ.
   ಸಾಂಸ್ಕೃತಿಕ ಹಾಗು ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತಿದ್ದು, ಮಾ.೨೯ರ ಸೋಮವಾರ ಬೆಳಿಗ್ಗೆ ರತಿ ಮನ್ಮಥ ರಾಜಬೀದಿ ಉತ್ಸವ ಮೆರವಣಿಗೆಗಳೊಂದಿಗೆ ಕಾಮದಹನ ನಡೆಯಲಿದೆ.
ಈಗಾಗಲೇ ಸರ್ಕಾರ ಕೋವಿಡ್-೧೯ರ ಹಿನ್ನಲೆಯಲ್ಲಿ ಹೋಳಿ ಹಬ್ಬ ಆಚರಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು, ಹೆಚ್ಚಿನ ಜನಸಂದಣಿ ಉಂಟಾಗದಂತೆ ಎಚ್ಚರವಹಿಸುವಂತೆ ಸೂಚಿಸಿದೆ.


ಭದ್ರಾವತಿ ಹಳೇನಗರದ ಬ್ರಾಹ್ಮಣರ ಬೀದಿಯಲ್ಲಿ ಹೋಳಿ ಹಬ್ಬದ ಪ್ರಮುಕ್ತ ಪ್ರತಿಷ್ಠಾಪಿಸಲಾಗಿರುವ ಮನ್ಮಥ.

Friday, March 26, 2021

ಮಾ.೨೭ರಂದು ಮೂಳೆ ಖನಿಜ ಸಾಂದ್ರತೆ ಚಿಕಿತ್ಸೆ, ತಪಾಸಣೆ ಶಿಬಿರ

ಭದ್ರಾವತಿ, ಮಾ. ೨೬: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹುಬ್ಬಳ್ಳಿಯ ಮೇಯರ್ ಆರ್ಗ್ಯಾನಿಕ್ ಪ್ರೈವೇಟ್ ಲಿ., ಮಹಿಳಾ ಸೇವಾ ಸಮಾಜ ಹಾಗು ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾ.೨೭ರಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ ಚಿಕಿತ್ಸೆ ಹಾಗು ತಪಾಸಣಾ ಶಿಬಿರ ಆಯೋಜಿಸಲಾಗಿದೆ.
   ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್ ಭಟ್ ಶಿಬಿರ ಉದ್ಘಾಟಿಸಲಿದ್ದು, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಮತ್ತು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೋಭ ಗಂಗರಾಜ್, ಕೆ. ರಾಧ, ಜಯಂತಿ ಶೇಟ್ ಮತ್ತು ರಾಧ ಶ್ರೀಗಂಧ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

ಪ್ರಭು ಶ್ರೀರಾಮ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

ಸಿ.ಎಂ ಇಬ್ರಾಹಿಂ ಕ್ಷಮೆಯಾಚನೆಗೆ ಆಗ್ರಹ


ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮ ಕುರಿತು ಮಾಜಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ವಿರುದ್ಧ ಶುಕ್ರವಾರ ಸಂಜೆ ಬಜರಂಗದಳ ಕಾರ್ಯಕರ್ತರು ಭದ್ರಾವತಿ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
   ಭದ್ರಾವತಿ, ಮಾ. ೨೬: ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮ ಕುರಿತು ಮಾಜಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ವಿರುದ್ಧ ಶುಕ್ರವಾರ ಸಂಜೆ ಬಜರಂಗದಳ ಕಾರ್ಯಕರ್ತರು ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ಸಿ.ಎಂ ಇಬ್ರಾಹಿಂ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಕಾರ್ಯಕರ್ತರು, ಪ್ರಭು ಶ್ರೀರಾಮ ಕುರಿತ ಅವಹೇಳನಕಾರಿ ಹೇಳಿಕೆಯಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆಯುಂಟಾಗಿದೆ. ತಕ್ಷಣ ಹಿಂದೂಗಳ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಕ್ಷೇತ್ರಕ್ಕೆ ಆಗಮಿಸಲು ಬಿಡುವುದಿಲ್ಲ. ಒಂದು ವೇಳೆ ಆಗಮಿಸಿದ್ದಲ್ಲಿ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
   ಪ್ರತಿಭಟನೆಯಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕ ವಡಿವೇಲು, ಸುನಿಲ್‌ಕುಮಾರ್, ದೇವರಾಜ್, ಚಂದ್ರು, ಕಿರಣ್, ಕೃಷ್ಣ, ಸವಾಯಿ ಸಿಂಗ್, ಶ್ರೀಕಾಂತ್, ಸಂಜು, ರಮೇಶ್, ಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.