Saturday, April 10, 2021

ರಮೇಶ್ ಶಂಕರಘಟ್ಟ ಕಾಂಗ್ರೆಸ್ ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ - ಶಾಸಕ ಬಿ.ಕೆ.ಸಂಗಮೇಶ್

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶಂಕರಘಟ್ಟದ ರಮೇಶ್‌ರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.
     ಭದ್ರಾವತಿ, ಏ. ೧೦: ಸಹಕಾರಿ ಧುರೀಣ ಆರ್.ಎಂ ಮಂಜುನಾಥ್ ಗೌಡ ಹಾಗೂ ತಾಲ್ಲೂಕಿನ ರಮೇಶ್ ಶಂಕರಘಟ್ಟರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಪಕ್ಷದ ಬಲ ಮತ್ತಷ್ಟು ಹೆಚ್ಚಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ ಹೇಳಿದರು.
    ಅವರು ಶನಿವಾರ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶಂಕರಘಟ್ಟದ ರಮೇಶ್‌ರನ್ನು ತಮ್ಮ ನಿವಾಸದಲ್ಲಿ ಅಭಿನಂದಿಸಿ ಮಾತನಾಡಿದರು.
ರಮೇಶ್‌ರವರು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಉತ್ತಮ ಸ್ಫರ್ಧೆ ನೀಡಿದ್ದರು.  ಅಲ್ಲದೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ  ಉತ್ತಮ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ.  ಶಿಕ್ಷಣ ಹಾಗೂ ಪತ್ರಿಕಾ ಕ್ಷೇತ್ರದಲ್ಲಿನ  ಇವರ ಅನುಭವ ಪಕ್ಷ ಸಂಘಟನೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಸಿ.ಎಂ ಖಾದರ್, ತಾವರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ವರಪ್ಪ, ಸಿಂಗನಮನೆ ಗ್ರಾಮ ಪಂಚಾಯತಿ ಸದಸ್ಯರಾದ ಅವಿನಾಶ್, ಶಿವಶಂಕರ್, ಮಾಜಿ ಸದಸ್ಯರಾದ ಶಶಿಕುಮಾರ್, ರುದ್ರೇಶ್, ಶ್ರೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, April 9, 2021

ಸಾಹಿತ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಮುಖ್ಯ : ಡಿ.ಬಿ ಶಂಕರಪ್ಪ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ನಗರದ ಪದ್ಮನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಹಾಗು ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಮಾತನಾಡಿದರು.
   ಭದ್ರಾವತಿ, ಏ. ೯: ಸಾಹಿತ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಮುಖ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಹೇಳಿದರು.
   ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ನಗರದ ಪದ್ಮನಿಲಯ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ ಹಾಗು ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಯಾವುದೇ ಸಾಹಿತ್ಯ ಚಟುವಟಿಕೆಗಳು ಸಹ ಪಾರದರ್ಶಕವಾಗಿರಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ಮುಕ್ತವಾಗಿರಸಲಾಗಿದೆ. ಪರಿಷತ್ ಕಾರ್ಯ ವೈಖರಿಗಳ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲೂ ಇದೆ ರೀತಿಯ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದರು.
   ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರಾ, ತಾಲೂಕು ಪರಿಷತ್ ಅಧ್ಯಕ್ಷ ಅಪೇಕ್ಷಾ ಮಂಜುನಾಥ್, ಉಪಾಧ್ಯಕ್ಷ ಡಾ. ಬಿ.ಎಂ ನಾಸಿರ್‌ಖಾನ್ ಸೇರಿದಂತೆ ಇನ್ನಿತರರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಪ್ರಸ್ತುತ ತನ್ನತನವನ್ನು ಕಾಯ್ದುಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲಾ ಘಟಕದ ಪ್ರತಿಯೊಂದು ಕಾರ್ಯಚಟುವಟಿಕೆಗಳು ಇಂದು ಮುಕ್ತವಾಗಿವೆ. ಇದಕ್ಕೆ ಪರಿಷತ್‌ನ ಅಧ್ಯಕ್ಷರಾದ ಡಿ.ಬಿ ಶಂಕರಪ್ಪನವರ ಪರಿಶ್ರಮ ಕಾರಣವಾಗಿದೆ ಎಂದರು.
   ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ಅಧಿಕಾರಿ ಕೆ.ಜೆ ತಮ್ಮಣ್ಣಗೌಡ, ಪರಿಷತ್ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ, ಖಜಾಂಚಿ ಸತ್ಯಮೂರ್ತಿ, ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಉದ್ಯಮಿ ಎ. ಮಾಧುಸ್ವಾಮಿ, ಪ್ರಮುಖರಾದ ಸಿದ್ದಲಿಂಗಯ್ಯ, ಆಂಜನೇಯ, ಎನ್. ಮಂಜುನಾಥ್, ದಿವಾಕರ್, ಜೆ.ಎನ್ ಬಸವರಾಜಪ್ಪ, ಕತ್ತಲಗೆರೆ ತಿಮ್ಮಪ್ಪ, ಅರಳೇಹಳ್ಳಿ ಅಣ್ಣಪ್ಪ, ರಾಮಾಚಾರಿ, ಮಂಜುನಾಥ್, ಕಾಂತಪ್ಪ, ಮಹಿಳಾ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬಿಜೆಪಿ ಘೋಷಿತ ಅಭ್ಯರ್ಥಿಗಳಿಂದ, ಬಿ ಫಾರಂ ಇಲ್ಲದೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಭದ್ರಾವತಿ ನಗರಸಭೆ ೩ನೇ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಜೆ. ನಕುಲ್ ಶುಕ್ರವಾರ ನಾಮಪತ್ರ ಸಲ್ಲಿಸಿದರು.
     ಭದ್ರಾವತಿ, ಏ. ೯: ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ೨ನೇ ದಿನವಾದ ಶುಕ್ರವಾರ ಹಲವು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
     ನಗರಸಭೆ ೪ನೇ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ ಅನುಪಮ ಒಂದು ನಾಮಪತ್ರ, ೧೨ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ಸುದೀಪ್‌ಕುಮಾರ್ ೨ ನಾಮಪತ್ರ, ೧೩ನೇ ವಾರ್ಡಿಗೆ ಜೆ. ಅನುಸುಧಾ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ ಹಾಗು ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ, ೧೮ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ನಗರಸಭೆ ಮಾಜಿ ಸದಸ್ಯ ಆರ್. ಕರುಣಾಮೂರ್ತಿ ಒಂದು ನಾಮಪತ್ರ, ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ ಪುತ್ರ ಮಹಮ್ಮದ್ ಪರ್ವೀಜ್ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.


ಭದ್ರಾವತಿ ನಗರಸಭೆ ೬ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಶ್ರೇಯಸ್ ಶುಕ್ರವಾರ ಎರಡು ನಾಮಪತ್ರ ಸಲ್ಲಿಸಿದರು.
    ಬಿ ಫಾರಂ ಇಲ್ಲದೆ ೨೬ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿಯಾಗಿ ಪರಮೇಶ್ವರಿ ಒಂದು ನಾಮಪತ್ರ, ೨೫ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಕೆ. ಉದಯಕುಮಾರ್ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಂಜನಪ್ಪ, ೨೨ನೇ ವಾರ್ಡಿಗೆ ಪಕ್ಷೇತರ ಅಭ್ಯರ್ಥಿಯಾಗಿ ನರಸಯ್ಯ ಒಂದು ನಾಮಪತ್ರ, ೨೪ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ. ಮಸ್ತಾನ ಒಂದು ನಾಮಪತ್ರ, ೧೭ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಪ್ಪುಸುಲ್ತಾನ ಶಾಹೇ ಆಲಂ ಒಂದು ನಾಮಪತ್ರ, ೨೦ನೇ ವಾರ್ಡಿಗೆ ಹಾಲಿ ನಗರಸಭಾ ಸದಸ್ಯೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ದೇವಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.


ಭದ್ರಾವತಿ ನಗರಸಭೆ ೪ನೇ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ ಅನುಪಮ ಶುಕ್ರವಾರ ನಾಮಪತ್ರ ಸಲ್ಲಿಸಿದರು. 
    ೧೫ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ ಮಂಜುಳ ೨ ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ, ೧೬ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟೇಗೌಡ ಒಂದು ನಾಮಪತ್ರ, ಹಾಲಿ ನಗರಸಭಾ ಸದಸ್ಯೆ ವಿಶಾಲಾಕ್ಷಿ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಎರಡು ನಾಮಪತ್ರ, ೩೪ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ನಗರಸಭಾ ಸದಸ್ಯೆ ಎಂ.ಎಸ್ ಸುಧಾಮಣಿ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಆರ್ ಲತಾ ಚಂದ್ರಶೇಖರ್ ಒಂದು ನಾಮಪತ್ರ, ೩೩ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ವಿಐಎಸ್‌ಎಲ್ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಎರಡು ನಾಮಪತ್ರ, ೩ನೇ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಜೆ. ನಕುಲ್ ಒಂದು ನಾಮಪತ್ರ, ೬ನೇ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಕೆ.ಆರ್ ಸತೀಶ್ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಶ್ರೇಯಸ್ ಎರಡು ನಾಮಪತ್ರ, ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಚನ್ನಯ್ಯ ಒಂದು ನಾಮಪತ್ರ ಸಲ್ಲಿಸಿದ್ದಾರೆ.


ಭದ್ರಾವತಿ ನಗರಸಭೆ ೬ನೇ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಕೆ.ಆರ್ ಸತೀಶ್ ಶುಕ್ರವಾರ ನಾಮಪತ್ರ ಸಲ್ಲಿಸಿದರು. 
    ೧೧ನೇ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಎ. ಪಚ್ಛೆಯಪ್ಪನ್ ಒಂದು ನಾಮಪತ್ರ, ೮ನೇ ವಾರ್ಡಿಗೆ  ಘನಿ ಅಬುಲ್ ಖೈರ್ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಮಹಮದ್ ಇನಾಯಿತ್ ಒಂದು ನಾಮಪತ್ರ, ೭ನೇ ವಾರ್ಡಿಗೆ ಎಂ. ರೇಣುಕಾ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ, ೫ನೇ ವಾರ್ಡಿಗೆ ಕೆ.ಆರ್ ವೇದಾವತಿ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಮತ್ತು ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಾ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.


೩೫ ವಾರ್ಡ್‌ಗಳಲ್ಲೂ ಸ್ಪರ್ಧೆ : ಆಕಾಂಕ್ಷಿಗಳು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅವಕಾಶ

ಭದ್ರಾವತಿ ನಗರಸಭೆ ಚುನಾವಣೆಗೆ ೩೨ನೇ ವಾರ್ಡ್ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಲು ದಿವ್ಯಶ್ರೀಯವರಿಗೆ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಬಿ ಫಾರಂ ನೀಡಲಾಯಿತು.
    ಭದ್ರಾವತಿ, ಏ. ೯: ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಜನಸೇವೆಯಲ್ಲಿ ತೊಡಗುವ ಅಭಿಲಾಸೆಯೊಂದಿರುವ ಆಕಾಂಕ್ಷಿಗಳಿಗೆ ಈ ಬಾರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ, ಶಿವಮೊಗ್ಗ ಉಸ್ತುವಾರಿ ಶಶಿಕುಮಾರ್ ಎಸ್. ಗೌಡ ಹಾಗು ಜಿಲ್ಲಾ ಸಂಚಾಲಕ ದೇವರಾಜ್ ಸಿಂಧೆ ತಿಳಿಸಿದರು.
    ಅವರು ಶುಕ್ರವಾರ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ನಗರಸಭೆ ಚುನಾವಣೆಯಲ್ಲಿ ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಪಕ್ಷದ ವರಿಷ್ಠರು ಏ.೧೩ರವರೆಗೆ ನಗರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನಲೆಯಲ್ಲಿ ಆಕಾಂಕ್ಷಿಗಳು ನೇರವಾಗಿ ಬಂದು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬೇಹಳ್ಳಿ ಡಿ. ನಾಗರಾಜು, ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ  ಮೊ: ೯೪೪೮೨೦೨೨೩೩ ಅಥವಾ ದೇವರಾಜ್ ಸಿಂಧೆ, ಜಿಲ್ಲಾ ಸಂಚಾಲಕರು, ಮೊ: ೯೪೮೦೨೭೭೨೯೯ ಅಥವಾ ಶಶಿಕುಮಾರ್ ಎಸ್. ಗೌಡ, ಉಪಾಧ್ಯಕ್ಷರು, ರಾಜ್ಯ ಯುವ ಘಟಕ ಮೊ: ೯೦೦೮೭೮೭೩೫೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
    ಪಕ್ಷದ ವತಿಯಿಂದ ಮೊದಲ ಬಾರಿಗೆ ೩೨ನೇ ವಾರ್ಡ್‌ನ ಅಧಿಕೃತ ಅಭ್ಯರ್ಥಿಯಾಗಿ ದಿವ್ಯಶ್ರೀ ಶಶಿಕುಮಾರ್ ಎಸ್. ಗೌಡ ಸ್ಪರ್ಧಿಸುತ್ತಿದ್ದು, ರಾಜ್ಯಾಧ್ಯಕ್ಷರಾದ ಮಹಿಮಾ ಜೆ ಪಟೇಲ್‌ರವರ ಸೂಚನೆಮೇರೆಗೆ ಬಿ ಫಾರಂ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಯ್ದುಕೊಳ್ಳವುದು ಪಕ್ಷದ ಬಹುದೊಡ್ಡ ಆಶಯವಾಗಿದೆ ಎಂದರು.
   ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ರಾಜ್ಯ ಕಾರ್ಯದರ್ಶಿ ಕೆ.ಎಸ್ ಅಣ್ಣಪ್ಪ, ಮಹಿಳಾ ಘಟಕದ ತಾಲೂಕು ಸಂಚಾಲಕಿ ದಿವ್ಯಶ್ರೀ ಶಶಿಕುಮಾರ್ ಎಸ್. ಗೌಡ ಉಪಸ್ಥಿತರಿದ್ದರು.    

Thursday, April 8, 2021

ನಗರಸಭೆ ಚುನಾವಣೆ : ಮೊದಲ ದಿನ ೬ ನಾಮಪತ್ರ ಸಲ್ಲಿಕೆ

   ಭದ್ರಾವತಿ, ಏ. ೮: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಗುರುವಾರದಿಂದ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಸಲು ೫ ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲ ದಿನ ೬ ನಾಮಪತ್ರಗಳು ಸಲ್ಲಿಕೆಯಾಗಿವೆ.
    ವಾರ್ಡ್ ನಂ. ೧, ೨, ೩, ೪, ೩೩, ೩೪ ಮತ್ತು ೩೫ರ ವ್ಯಾಪ್ತಿಯಲ್ಲಿ ೨ ನಾಮಪತ್ರಗಳು, ವಾರ್ಡ್ ನಂ. ೫, ೬, ೭, ೮, ೯, ೧೦ ಮತ್ತು ೧೧ರ ವ್ಯಾಪ್ತಿಯಲ್ಲಿ ೧ ನಾಮಪತ್ರ, ವಾರ್ಡ್ ನಂ. ೧೨, ೧೩, ೧೪, ೧೫, ೧೬, ೧೭ ಮತ್ತು ೧೮ರ ವ್ಯಾಪ್ತಿಯಲ್ಲಿ ಒಬ್ಬ ಅಭ್ಯರ್ಥಿಯಿಂದ ೨ ನಾಮಪತ್ರ ಹಾಗು ವಾರ್ಡ್ ನಂ.೨೬, ೨೭, ೨೮, ೨೯, ೩೦, ೩೧ ಮತ್ತು ೩೨ರ ವ್ಯಾಪ್ತಿಯಲ್ಲಿ ೧ ನಾಮಪತ್ರ ಸಲ್ಲಿಕೆಯಾಗಿವೆ. ಮತ್ತು ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರ ವ್ಯಾಪ್ತಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.


ಏ.೧೧ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಏ. ೮: ಲೋಕೋಪಯೋಗಿ ಇಲಾಖೆವತಿಯಿಂದ ನಗರದ ಹೊಸಮನೆ ಭಾಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೧೧ರಂದು ಬೆಳಿಗ್ಗೆ ೧೦.೩೦ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ), ಹೊಳೆಹೊನ್ನೂರು ವೃತ್ತ, ಎನ್.ಎಂ.ಸಿ ರಸ್ತೆ, ಸಂತೆ ಮೈದಾನ, ಭೋವಿ ಕಾಲೋನಿ, ಹೊಸಮನೆ, ಕುವೆಂಪು ನಗರ, ಸುಭಾಷ್‌ನಗರ, ತ್ಯಾಗರಾಜ ನಗರ, ತಮ್ಮಣ್ಣ ಕಾಲೋನಿ, ಶಿವಾಜಿ ವೃತ್ತ, ಹನುಮಂತ ನಗರ, ವಿಜಯ ನಗರ, ಅಶ್ವತ್ಥ ನಗರ, ಕಬಳಿಕಟ್ಟೆ ಕೇಶವಪುರ ಮತ್ತು ಗಾಂಧಿನಗರ ಸೇರಿದಂತೆ ಇನ್ನಿತರ ಪ್ರದೇಶಗಳ ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ರಾಜ್ಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಆಯ್ಕೆ

ಭದ್ರಾವತಿ, ಏ. ೮: ದಾವಣಗೆರೆಯಲ್ಲಿ ಏ.೧೦ ಮತ್ತು ೧೧ರಂದು ನಡೆಯಲಿರುವ ರಾಜ್ಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಸ್ಟೀಲ್ ಫಿಟ್‌ನೆಸ್ ೨೪*೭ ಸುಜಿತ್‌ಕುಮಾರ್ ನೇತೃತ್ವದಲ್ಲಿ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗಿದೆ.
೪೭ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಭದ್ರಾವತಿ ಬೊಮ್ಮನಕಟ್ಟೆ ಶಮನ್ ಷಾವಲಿ ವ್ಯಾಯಾಮ ಶಾಲೆಯ ಎಂ. ಸಾನಿಯ, ಶಿವಮೊಗ್ಗ ಸೋಲಿಟ್ ಫಿಟ್‌ನೆಸ್ ಸೆಂಟರ್‌ನ ಎಸ್. ರಜನಿ ಮತ್ತು ಡಿ. ಸಹನ ೫೭ ಕೆ.ಜಿ ಸೀನಿಯರ್ ಮತ್ತು ಜ್ಯೂನಿಯರ್ ವಿಭಾಗಕ್ಕೆ, ಎಸ್.ಕೆ ಪಲ್ಲವಿ, ಬಿ.ಜೆ ಶಂಕೇಶ್ವರಿ ೬೩ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಹಾಗು ಬಿ.ಎಚ್ ಪದ್ಮಶ್ರೀ ೮೪ ಕೆ.ಜಿ ಜ್ಯೂನಿಯರ್ ವಿಭಾಗಕ್ಕೆ ಮತ್ತು ಶಿವಮೊಗ್ಗ ಸಹ್ಯಾದ್ರಿ ಸೈನ್ಸ್ ಕಾಲೇಜಿನ ಎಸ್. ಸ್ನೇಹ ೮೪ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಭದ್ರಾವತಿ ಕಾರಂತ್ ಜಿಮ್‌ನ ಲುಕ್‌ಮಾನ್ ಆಹ್ಮದ್ ೫೩ ಕೆ.ಜಿ ಹಾಗು ಲಿಂಗರಾಜು ೫೯ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ, ಎಸ್. ಹರ್ಷಿತ್ ೬೬ ಕೆ.ಜಿ ಸಬ್ ಜ್ಯೂನಿಯರ್, ಕೆ.ಎಲ್ ದಯಾನಂದ ೧೦೫ ಕೆ.ಜಿ ಸಬ್ ಜ್ಯೂನಿಯರ್ ಹಾಗು ಕೆ. ಪ್ರಕಾಶ್ ಕಾರಂತ್ ೮೩ ಕೆ.ಜಿ ಮಾಸ್ಟರ್-ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಸ್ಟೇಡಿಯಂ ಜಿಮ್‌ನ ಶಶಿಧರ್.ಎ ೭೪ ಕೆ.ಜಿ ಮಾಸ್ಟರ್-೨ ವಿಭಾಗ, ವರ್ಷಿತ್ ಎಸ್ ರಾವ್ ೯೩ ಕೆ.ಜಿ ಸಬ್ ಜ್ಯೂನಿಯರ್ ವಿಭಾಗ, ಕೆ. ಭಾಸ್ಕರ್ ೬೬ ಕೆ.ಜಿ ಮಾಸ್ಟರ್-೨ ವಿಭಾಗ ಹಾಗು ಇ. ರಕ್ಷಿತ್ ೧೦೫ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ, ಶಿವಮೊಗ್ಗ ಕಿಷನ್ ಬಾಡಿ ಲೈನ್‌ನ ಆರ್. ಅವಿನಾಶ್ ೬೬ ಕೆ.ಜಿ ಸೀನಿಯರ್, ಎಚ್. ಅರುಣ್ ೮೩ ಕೆ.ಜಿ ಸೀನಿಯರ್, ಸಾಗರ ಕಾರ್ಗಲ್ ಪೊಲೀಸ್ ಠಾಣೆಯ ಗಿಲ್ ಬರ್ಟ್ಸ್ ಡಯಾಸ್ ೮೩ ಕೆ.ಜಿ ಮಾಸ್ಟರ್-೨ ವಿಭಾಗಕ್ಕೆ ಹಾಗು ಭದ್ರಾವತಿ ಮಯೂರ್ ಜಿಮ್‌ನ ಶಶಿಧರ್ ಎಸ್. ೯೩ ಕೆ.ಜಿ ಮಾಸ್ಟರ್-೨ ವಿಭಾಗಕ್ಕೆ ಆಯ್ಕೆಯಾಗಿದ್ದಾರೆಂದು ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಕೆ. ಪ್ರಕಾಶ್ ಕಾರಂತ್ ತಿಳಿಸಿದ್ದಾರೆ.