Wednesday, June 23, 2021

ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಬುಧವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
  ಭದ್ರಾವತಿ, ಜೂ. ೨೩: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಬುಧವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
   ಸರ್ವೆ ನಂ.೧೧೨ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಸುಮಾರು ೮೦೦ ವರ್ಷಗಳ ಇತಿಹಾಸವುಳ್ಳ ಸರ್ಕಾರಿ ಹಿರೇಕೆರೆ ಸುತ್ತಲೂ ಬಸಿಕಾಲುವೆ(ಟ್ರಂಚ್) ನಿರ್ಮಿಸುವುದು. ಕೆರೆಯ ನೀರು ಸರಾಗವಾಗಿ ಹರಿಯಲು ೪ ಅಡಿ ವಿಸ್ತೀರ್ಣವುಳ್ಳ ೮ ಪೈಪ್‌ಗಳನ್ನು ಅಳವಡಿಸುವುದು. ನಗರಸಭೆ ನ್ಯೂಟೌನ್ ಶಾಖಾ ಕಛೇರಿಯಲ್ಲಿ ಜನಸಂದಣಿ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿನಿತ್ಯ ಕ್ರಿಮಿನಾಶಕ ಸಿಂಪಡಿಸುವುದು ಹಾಗು  ಆವರಣದಲ್ಲಿ ಬ್ಯಾರಿಕೇಡ್ ಅಳವಡಿಸುವಂತೆ ಕೋರಲಾಗಿದೆ.
    ನಗರಸಭೆ ವ್ಯಾಪ್ತಿಯ ನ್ಯೂಟೌನ್ ಭಾಗದಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ತಕ್ಷಣ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣಗೊಳಿಸುವುದು. ಜನ್ನಾಪುರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಾಮಗಾರಿಗಳನ್ನು ಪೂರ್ಣಗೊಳಿಸುವುದು. ನಗರಸಭೆ ನ್ಯೂಟೌನ್ ಶಾಖಾ ಕಛೇರಿಯಲ್ಲಿ ಮನೆ ಹಾಗು ನೀರಿನ ಕಂದಾಯ ಪಾವತಿಸಲು ಕೌಂಟರ್ ತೆರೆಯುವಂತೆ ಮನವಿ ಮಾಡಲಾಗಿದೆ.
   ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್, ಕಾರ್ಯಾಧ್ಯಕ್ಷೆ ರಮಾವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಆರ್. ಮುರುಗೇಶ್, ಸಂಚಾಲಕರಾದ ಶೈಲಜಾ ರಾಮಕೃಷ್ಣ, ಗೀತಾಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, June 22, 2021

ಗೋಣಿಬೀಡು, ಮಲ್ಲಿಗೇನಹಳ್ಳಿ ವ್ಯಾಪ್ತಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ಭದ್ರಾವತಿ ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ.
ಭದ್ರಾವತಿ, ಜೂ. ೨೨: ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚು ಮಾಡಿದೆ.
    ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ  ಒಂಟಿ ಸಲಗ ಕಾಣಿಸಿಕೊಂಡಿದೆ. ತಕ್ಷಣ ಅಕ್ಕಪಕ್ಕದ ಗ್ರಾಮಸ್ಥರು ಪಟಾಕಿ ಸಿಡಿಸಿ ಕಾಡಿಗೆ ಓಡಿಸಿದ್ದಾರೆ. ಒಂಟಿ ಸಲಗ ಕಾಣಿಸಿಕೊಂಡಿರುವ ರಸ್ತೆಯಲ್ಲಿಯೇ ಬೆಳಗಿನ ಸಮಯದಲ್ಲಿ ಜನರು ವಾಯುವಿಹಾರಕ್ಕೆ ತೆರಳುತ್ತಾರೆ. ಇದರಿಂದಾಗಿ ಆತಂಕ ಹೆಚ್ಚು ಮಾಡಿದೆ.
   ಒಂಟಿ ಸಲಗ ಕಾಣಿಸಿಕೊಂಡಿರುವ ದೃಶ್ಯ ಸಾಮಾಜಿಕ ಸುದ್ದಿ ಜಾಲಗಳಲ್ಲಿ ಹರಿಡಾಡುತ್ತಿದೆ. ಒಂಟಿ ಸಲಗ ಕಾಣಿಸಿಕೊಂಡಿರುವುದು ನಿಜ ಎಂದು ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಭದ್ರಾ ಅಭಯಾರಣ್ಯದಿಂದ ಆನೆಗಳು ಬಂದು ಹೋಗುವುದು ಸಹಜ ಎಂದು ತಿಳಿಸಿದ್ದಾರೆ.

ಕೇವಲ ೧೮ ಸೋಂಕು : ೩ ಬಲಿ

ಭದ್ರಾವತಿ, ಜೂ. ೨೨: ತಾಲೂಕಿನಲ್ಲಿ ಕೊರೋನಾ ಸೋಂಕು ಬಹುತೇಕ ಉಳಿಮುಖವಾಗಿದ್ದು, ಮಂಗಳವಾರ ಕೇವಲ ೧೮ ಸೋಂಕು ಮಾತ್ರ ಪತ್ತೆಯಾಗಿದೆ. 
    ಗ್ರಾಮಾಂತರ ಭಾಗದಲ್ಲಿ ೧೦ ಹಾಗು ನಗರ ಭಾಗದಲ್ಲಿ ೮ ಸೋಂಕು ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಸೋಂಕಿಗೆ ೩  ಮಂದಿ ಬಲಿಯಾಗಿದ್ದಾರೆ. ಸೋಂಕು ಕಡಿಮೆಯಾದರೂ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕ ಹೆಚ್ಚು ಮಾಡಿದೆ.

ಜೂ.೨೩ರಂದು ಉಚಿತ ಟ್ಯಾಬ್ ವಿತರಣೆ

ಭದ್ರಾವತಿ, ಜೂ. ೨೨: ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬೊಮ್ಮನಕಟ್ಟೆ ಸರ್‌ಎಂವಿ ವಿಜ್ಞಾನ ಕಾಲೇಜು ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮ ಜೂ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲರಾದ ಡಾ. ವಿಷ್ಣುಮೂರ್ತಿ, ಡಾ. ರವೀಂದ್ರ, ಪ್ರೊ. ವರದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನ : ಸಸಿ ನೆಡುವ ಕಾರ್ಯಕ್ರಮ

ಭದ್ರಾವತಿ, ಜೂ. ೨೨: ಜನ ಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ದಿನದ ಅಂಗವಾಗಿ ಬಿಜೆಪಿ ರೈತ ಮೋರ್ಚಾ ತಾಲೂಕು ಮಂಡಲ ವತಿಯಿಂದ ಜೂ.೨೩ರಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಬಿಳಿಕಿ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಠದ ಶ್ರೀ ರಾಚೋಟೇಶ್ವರಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮಂಡಲದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವಿ ಸಂತೋಷ್ ಕೋರಿದ್ದಾರೆ.

ಬಿ.ಎಸ್ ಶಾಂತಣ್ಣ ನಿಧನ

ಬಿ.ಎಸ್ ಶಾಂತಣ್ಣ
   ಭದ್ರಾವತಿ, ಜೂ. ೨೨:  ನಗರದ ಹೊಸಮನೆ ಓಎಸ್‌ಎಂ ನಿವಾಸಿ, ವೀರಶೈವ ಸಮಾಜದ ಮುಖಂಡ ಬಿ.ಎಸ್ ಶಾಂತಣ್ಣ(೬೭) ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವಪುತ್ರ ಹೊಂದಿದ್ದರು. ಮೃತರ  ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ  ನೆರವೇರಿಸಲಾಯಿತು. ಶಾಸಕ ಬಿ.ಕೆ. ಸಂಗಮೇಶ್ವರ್, ತಾಲೂಕು ವೀರಶೈವ ಸಮಾಜ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

Monday, June 21, 2021

ಲಾಕ್‌ಡೌನ್ ಸಡಿಲ : ಜನ ಸಂದಣಿ


ಸೆಮಿ ಲಾಕ್‌ಡೌನ್ ಸಡಿಲಗೊಳಿಸಿದ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ.
   ಭದ್ರಾವತಿ, ಜೂ. ೨೧: ಸೆಮಿ ಲಾಕ್‌ಡೌನ್ ಸಡಿಲಗೊಳಿಸದ ಹಿನ್ನಲೆಯಲ್ಲಿ ಸೋಮವಾರ ನಗರದಲ್ಲಿ ಮಧ್ಯಾಹ್ನದವರೆಗೂ ಜನಸಂದಣಿ ಕಂಡು ಬಂದಿತು.
   ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಎಂದಿನಂತೆ ಸಂಚರಿಸಿದವು. ಲಾರಿ, ಆಟೋ, ಕಾರು ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬಹುತೇಕ ಎಲ್ಲಾ ಅಂಗಡಿಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು. ಅದರಲ್ಲೂ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನಸಂದಣಿ ಅಧಿಕವಾಗಿತ್ತು. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.
   ಲಾಕ್‌ಡೌನ್ ಆರಂಭಗೊಂಡಾಗಿನಿಂದಲೂ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣವನ್ನು ಸೇವೆಗೆ ಮುಕ್ತಗೊಳಿಸಲಾಗಿತ್ತು. ದೂರದ ಊರುಗಳು ಹಾಗು ಶಿವಮೊಗ್ಗ-ಭದ್ರಾವತಿ ನಡುವೆ ಬಸ್‌ಗಳು ಸಂಚರಿಸಿದವು.