Friday, July 16, 2021

ಜನಸಂಖ್ಯೆ ನಿಯಂತ್ರಣ ಅಗತ್ಯ : ಡಾ. ಎಂ.ವಿ ಅಶೋಕ್

ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೧೬: ಪ್ರಸ್ತುತ ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಿರಾಗಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಜನಸಂಖ್ಯೆ ಹೆಚ್ಚಳದಿಂದ ಲಿಂಗಾನುಪಾತ ಉಂಟಾಗುವ ಜೊತೆಗೆ ದೇಶದಲ್ಲಿ ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ವಿವರಿಸಿದರು.
    ಕಾರ್ಯಕ್ರಮವನ್ನು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಉದ್ಘಾಟಿಸಿದರು. ಸರ್ಜನ್ ಡಾ. ಶಿವಪ್ರಕಾಶ್ ಮತ್ತು ಸ್ತ್ರೀ ರೋಗ ತಜ್ಞೆ ಡಾ. ವರ್ಷ ಮಾತನಾಡಿ, ಜನಸಂಖ್ಯಾ ನಿಯಂತ್ರಣದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
   ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ರೇವತಿ, ಆನಂದ ಮೂರ್ತಿ, ರಾಜೇಗೌಡ, ವಸಂತ ಹಾಗೂ ನೇತ್ರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವೃತ್ತಿ ಬದುಕಿನ ಜೊತೆಗೆ ಸೇವಾ ಕಾರ್ಯ ಕೈಗೊಳ್ಳಲು ರೋಟರಿ ಕ್ಲಬ್ ಸಹಕಾರಿ : ಎಚ್.ಎಲ್ ರವಿ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು  ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಎಲ್ ರವಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
     ಭದ್ರಾವತಿ, ಜು. ೧೬: ವೃತ್ತಿ ಬದುಕಿನ ಜೊತೆಗೆ ಸಮಾಜದಲ್ಲಿ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಬಯಸುವವರಿಗೆ ರೋಟರಿ ಕ್ಲಬ್‌ನಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಎಲ್ ರವಿ ಹೇಳಿದರು.  
    ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
    ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೇವಾ ಕಾರ್ಯ ಕೈಗೊಳ್ಳಲು ರೋಟರಿ ಕ್ಲಬ್ ಹೆಚ್ಚು ಸಹಕಾರಿಯಾಗಿದ್ದು, ಸದಸ್ಯರು ತಮ್ಮ ವೃತ್ತಿ, ಕುಟುಂಬ, ಸೇವೆಗಳ ಮಧ್ಯೆ ಸಮತೋಲನ ಸಾಧಿಸುವುದು ಬಹಳ ಮುಖ್ಯ. ಆ ಮೂಲಕ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಬೇಕು.  ಕ್ಲಬ್‌ನಲ್ಲಿ ಕೇವಲ ಪುರುಷರಿಗೆ ಮಾತ್ರ ಉನ್ನತ ಹುದ್ದೆಗಳು ಮೀಸಲಾಗಿಲ್ಲ. ಮಹಿಳೆರಿಗೂ ಸಹ ಮೀಸಲಿವೆ ಎಂದರು.
     ಕೊರೊನಾ ಸೋಂಕಿನಿಂದ ಮೃತಪಟ್ಟ ಸಮಾರು ೧೦೫ಕ್ಕೂ ಹೆಚ್ಚು ಮೃತದೇಹಗಳ ಅಂತ್ಯ ಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಬಜರಂಗದಳ ಕಾರ್ಯರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಾಯಕ ರಾಜ್ಯಪಾಲ ಎಂ.ಪಿ ಆನಂದಮೂರ್ತಿ, ವಲಯಾಧಿಕಾರಿ ಪಿ.ಎನ್ ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ಬಿ.ಎಂ.ಶಾಂತಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯುಲ್ಲಿ ಉಪಸ್ಥಿತರಿದ್ದರು.  
         ಎಚ್.ವಿ ಆದರ್ಶ ಅಧ್ಯಕ್ಷತೆ ವಹಿಸಿದ್ದರು. ಶೃತಿ, ಕುಸುಮಾ ಪ್ರಾರ್ಥಿಸಿದರು. ಕೆ.ಎಸ್ ಶೈಲೇಂದ್ರ ಸ್ವಾಗತಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಎಂ.ಎನ್ ಗಿರೀಶ್  ವರದಿ ಮಂಡಿಸಿದರು. ಎಸ್. ಅಡವೀಶಯ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.
           ನೂತನ ಪದಾಧಿಕಾರಿಗಳು:
     ಅಧ್ಯಕ್ಷರಾಗಿ ಎಚ್.ವಿ ಆದರ್ಶ, ಉಪಾಧ್ಯಕ್ಷರಾಗಿ ಪಿ. ಸುಧಾಕರ ಶೆಟ್ಟಿ, ಕಾರ್ಯದರ್ಶಿಯಾಗಿ ಜಿ. ರಾಘವೇಂದ್ರ ಉಪಾಧ್ಯಾಯ,  ಜಂಟಿ ಕಾರ್ಯದರ್ಶಿಯಾಗಿ ಎಂ. ನಿರಂಜನ, ಖಜಾಂಚಿಯಾಗಿ ಅಮಿತ್‌ಕುಮಾರ್ ಜೈನ್, ವಿವಿಧ ಸೇವಾ ಚಟುವಟಿಕೆಗಳ ನಿರ್ದೇಶಕರುಗಳಾಗಿ ಕೂಡ್ಲಿಗೆರೆ ಹಾಲೇಶ್, ಕೆ.ಎಚ್ ತೀರ್ಥಯ್ಯ, ಪ್ರಭಾಕರ ಬೀರಯ್ಯ, ಕೆ.ಎಸ್ ಶೈಲೇಂದ್ರ, ಡಾ.ಕೆ ನಾಗರಾಜ್, ಧರ್ಮೇಂದ್ರ ಹಾಗು ಆಧ್ಯಕ್ಷರುಗಳಾಗಿ ಕೆ. ಸುಂದರ ಬಾಬು, ಸಿ. ಭರತ್, ಟಿ.ಎಸ್ ದುಷ್ಯಂತರಾಜ್, ವಾದಿರಾಜ ಅಡಿಗ  ನೇಮಕಗೊಂಡರು.
    ನೂತನ ಸದಸ್ಯರಾಗಿ ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಆಸ್ಮಯ, ಶಕುಂತಲ ಕೂಡ್ಲಿಗೆರೆ ಹಾಲೇಶ್, ಕುಸುಮಾ ತೀರ್ಥಯ್ಯ ಸೇರ್ಪಡೆಗೊಂಡರು.
    ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಲತಾ ದುಷ್ಯಂತರಾಜ್, ಉಪಾಧ್ಯಕ್ಷರಾಗಿ ಗೀತಾ ಡಾ.ಆರ್.ಸಿ ಬೆಂಗಳೂರಿ, ಕಾರ್ಯದರ್ಶಿಯಾಗಿ ಡಾ.ಮಯೂರಿ ಮಲ್ಲಿಕಾರ್ಜುನ್, ಖಜಾಂಚಿಯಾಗಿ ಲತಾ ಬಾಲಚಂದ್ರ ನೇಮಕಗೊಂಡರು.

ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರ ಸೆರೆ

ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರನ್ನು ಸೆರೆ ಹಿಡಿಯುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
     ಭದ್ರಾವತಿ, ಜು. ೧೬: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರನ್ನು ಸೆರೆ ಹಿಡಿಯುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಹೊಸಮನೆ ಎನ್‌ಎಂಸಿ ನಿವಾಸಿ ದಕ್ಷಿಣಾಮೂರ್ತಿ(೩೭),  ಅಶ್ವಥ್‌ನಗರದ ನಿವಾಸಿ ಸುದೀಪ್ ಕುಮಾರ್ ಅಲಿಯಾಸ್ ಗ್ಯಾರೇಜ್ ಸುದೀಪ್ (೩೦), ತಮ್ಮಣ್ಣ ಕಾಲೋನಿ ನಿವಾಸಿ  ಡ್ಯಾನಿಯಲ್ ಅಲಿಯಾಸ್ ಸ್ನೇಕ್ ಡ್ಯಾನಿಯಲ್(೨೫), ಬೋವಿ ಕಾಲೋನಿ ನಿವಾಸಿ, ಕಿರಣ್ ಅಲಿಯಾಸ್ ಕಿರಣ್‌ಕುಮಾರ್ ಅಲಿಯಾಸ್ ಪಾಂಡು(೨೩), ಜನ್ನಾಪುರ ಹಾಲಪ್ಪ ಶೆಡ್ ನಿವಾಸಿ ಪವನ್ ಕುಮಾರ್(೨೫) ಮತ್ತು ಹೊಸ ಕೋಡಿಹಳ್ಳಿ ರಸ್ತೆ ನಿವಾಸಿ ನವೀನ್ ಕುಮಾರ್(೨೬) ಬಂಧಿತರಾಗಿದ್ದು, ೧ ಕೆ.ಜಿ ೩೭೫ ಗ್ರಾಂ. ತೂಕದ ಗಾಂಜಾ, ೮೦೦ ರು. ನಗದು ಹಾಗು ೨ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
   ನಗರಸಭೆ ವ್ಯಾಪ್ತಿಯ ಹಳೇಸೀಗೆಬಾಗಿ ಹಾಗು ಹೊಳೆಹೊನ್ನೂರು ರಸ್ತೆಗೆ ಸೇರುವ ಬಡಾವಣೆಯೊಂದರ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಸೆರೆ ಹಿಡಿಯಲಾದ ೬ ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.
     ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಹಾಗು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಠಾಣಾಧಿಕಾರಿ ಮಹೇಶ್ವರನಾಯ್ಕ, ಸಿಬ್ಬಂದಿಗಳಾದ ಹಾಲಪ್ಪ, ಹಾಲೇಶ್, ಪಿರೋಜ್, ಸುನಿಲ್ ಎಸ್. ಬಾಸೂರ, ವಿಜಯ್‌ಕುಮಾರ್ ಹಾಗು ಮಧುಸೂಧನ್ ಮತ್ತು ಇನ್ನಿತರರು ಪಾಲ್ಗೊಂಡಿದ್ದರು.
   ೬ ಜನರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

Thursday, July 15, 2021

ಸಹಾಯವಾಣಿ ಕೇಂದ್ರದಿಂದ ಬಡ ಮಕ್ಕಳಿಗೆ ದಿನಸಿ ಸಾಮಗ್ರಿ ವಿತರಣೆ, ಜಾಗೃತಿ ಕಾರ್ಯಕ್ರಮ

ಸಂಕಷ್ಟಕ್ಕೆ ಒಳಗಾಗಿರುವ ಮಕ್ಕಳ ರಕ್ಷಣೆಯಲ್ಲಿ ನಿರಂತರವಾಗಿ ತೊಡಗಿರುವ ಶಿವಮೊಗ್ಗದ ಮಕ್ಕಳ ಸಹಾಯವಾಣಿ ೧೦೯೮ ವತಿಯಿಂದ ನಗರಸಭೆ ವ್ಯಾಪ್ತಿಯ ಭದ್ರಾವತಿ ಬೊಮ್ಮನಕಟ್ಟೆಯಲ್ಲಿ ಬಡ ಮಕ್ಕಳಿಗೆ ದಿನಸಿ ಸಾಮಗ್ರಿ ವಿತರಣೆ ಹಾಗು ಜಾಗೃತಿ ಕಾರ್ಯಕ್ರಮ ನಡೆಯಿತು.
    ಭದ್ರಾವತಿ, ಜು. ೧೫: ಸಂಕಷ್ಟಕ್ಕೆ ಒಳಗಾಗಿರುವ ಮಕ್ಕಳ ರಕ್ಷಣೆಯಲ್ಲಿ ನಿರಂತರವಾಗಿ ತೊಡಗಿರುವ ಶಿವಮೊಗ್ಗದ ಮಕ್ಕಳ ಸಹಾಯವಾಣಿ ೧೦೯೮ ವತಿಯಿಂದ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಬಡ ಮಕ್ಕಳಿಗೆ ದಿನಸಿ ಸಾಮಗ್ರಿ ವಿತರಣೆ ಹಾಗು ಜಾಗೃತಿ ಕಾರ್ಯಕ್ರಮ ನಡೆಯಿತು.
    ಮಕ್ಕಳು ಯಾವುದೇ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದಲ್ಲಿ ತಕ್ಷಣ ಸಹಾಯವಾಣಿ ೧೦೯೮ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವನ್ನು ಪಡೆಯಬಹುದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಲಾಯಿತು.
   ಕಾರ್ಯಕ್ರಮವನ್ನು ನಗರಸಭಾ ಸದಸ್ಯ ಕೋಟೇಶ್ವರರಾವ್ ಉದ್ಘಾಟಿಸಿದರು. ಶಿವಮೊಗ್ಗ ಶಾಂತಿನಗರದ ಗುರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಎನ್‌ಎಸ್‌ಎಸ್ ನಿರ್ದೇಶಕ ಪಾದರ್ ಅಬ್ರಹಂ, ಸಹ ನಿರ್ದೇಶಕ ಪಾದರ್ ಜೋಸ್, ಯೋಜನಾ ವ್ಯವಸ್ಥಾಪಕಿ ಸಿಸ್ಟರ್ ಸುಪ್ರಿಯಾ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಕವಿತಾ, ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಎ. ತಿಪ್ಪೇಸ್ವಾಮಿ, ಸಹಾಯವಾಣಿ ಕೇಂದ್ರದ ತಾಲೂಕು ಸಂಯೋಜಕರಾದ ಪ್ರಮೋದ್ ಮತ್ತು ಸುಮಿತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದಿಂದ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಜು. ೧೫: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
     ಜನ್ನಾಪುರ-ಹುತ್ತಾ ವ್ಯಾಪ್ತಿಯಲ್ಲಿ ಯು.ಜಿ.ಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಶೌಚಾಲಯದ ಗುಂಡಿಗಳು ಭರ್ತಿಯಾಗಿ ಸಮಸ್ಯೆಗಳು ಎದುರಾಗಿವೆ. ಈ ಹಿನ್ನಲೆಯಲ್ಲಿ ತಕ್ಷಣ ಯು.ಜಿ.ಡಿ ಕಾಮಗಾರಿ ಪೂರ್ಣಗೊಳಿಸಿ ಸಂಪರ್ಕ ಕಲ್ಪಿಸುವುದು. ಎಲ್ಲರಿಗೂ ಕುಡಿಯುವ ನೀರು ಸಮರ್ಪಕವಾಗಿ ಕಲ್ಪಿಸಿಕೊಡುವುದು. ಅಲ್ಲಲ್ಲಿ ನೀರಿನ ಕೊಳವೆಗಳು ಹಾಳಾಗಿದ್ದು, ಇದರಿಂದಾಗಿ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಹಾಳಾದ ನೀರಿನ ಕೊಳವೆಗಳನ್ನು ದುರಸ್ತಿಗೊಳಿಸುವುದು. ಜನ್ನಾಪುರ ಕೆರೆ ಶುದ್ಧೀಕರಣ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
     ಬೀದಿನಾಯಿಗಳ ಕಾಟ, ಸೊಳ್ಳೆಕಾಟ ಹೆಚ್ಚಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವುದು. ನಗರಸಭೆ ಎನ್‌ಟಿಬಿ ಶಾಖಾ ಕಛೇರಿಯಲ್ಲಿ ಕಂದಾಯ ಪಾವತಿಸಲು ಕಂಪ್ಯೂಟರ್ ವಿಭಾಗ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮನವಿ ಮಾಡಲಾಗಿದೆ.
    ಸಂಘದ ಅಧ್ಯಕ್ಷ ಕೆ.ಎಂ ಸತೀಶ್, ಉಪಾಧ್ಯಕ್ಷ ಬಿ. ಯಲ್ಲಪ್ಪ, ಕಾರ್ಯದರ್ಶಿ ಬಿ. ಚಂದ್ರಶೇಖರಯ್ಯ, ಸಹಕಾರ್ಯದರ್ಶಿ ಬಿ.ಎಂ ಚಂದ್ರಪ್ಪ, ಖಜಾಂಚಿ ಭದ್ರಯ್ಯ, ಸದಸ್ಯರಾದ ಜೆಪಿಎಸ್ ಚಂದ್ರಶೇಖರ್, ಪಿ. ಶಿವನ್, ಚಂದು, ಜಿ.ಟಿ ಚಂದ್ರಶೇಖರ್, ಎನ್. ಕೃಷ್ಣಪ್ಪ ಮತ್ತು ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗೃಹರಕ್ಷಕ ದಳದ ಪ್ಲಟೂನ್ ಸಾರ್ಜೆಂಟ್ ಬಿ.ಇ ವಿಜಯೇಂದ್ರಗೆ ಮುಖ್ಯಮಂತ್ರಿ ಪದಕ

ಗೃಹರಕ್ಷಕ ದಳದಲ್ಲಿ ಎರಡು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಭದ್ರಾವತಿ ಮಹಾತ್ಮಗಾಂಧಿ ವೃತ್ತದ ಸಮೀಪದ ತರೀಕೆರೆ ರಸ್ತೆ ನಿವಾಸಿ ಬಿ.ಇ ವಿಜಯೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
    ಭದ್ರಾವತಿ, ಜು. ೧೫: ಗೃಹರಕ್ಷಕ ದಳದಲ್ಲಿ ಎರಡು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನಗರದ ಮಹಾತ್ಮಗಾಂಧಿ ವೃತ್ತದ ಸಮೀಪದ ತರೀಕೆರೆ ರಸ್ತೆ ನಿವಾಸಿ ಬಿ.ಇ ವಿಜಯೇಂದ್ರ ಅವರಿಗೆ ಈ ಬಾರಿ ಮುಖ್ಯಮಂತ್ರಿಗಳ ಪದಕ ಲಭಿಸಿದೆ. 
ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಜಯೇಂದ್ರ ಪದಕ ಸ್ವೀಕರಿಸಿದ್ದು, ಗೃಹರಕ್ಷಕದಳದಲ್ಲಿ ಪ್ರಸ್ತುತ ಪ್ಲಟೂನ್ ಸಾರ್ಜೆಂಟ್ ಆಗಿರುವ ಇವರು ೧೯೯೯ರಲ್ಲಿ ಸ್ವಯಂ ಸೇವಕರಾಗಿ ನೇಮಕಗೊಂಡಿದ್ದರು. ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಗೃಹರಕ್ಷಕ ದಳದ ಸಮವಸ್ತ್ರ ನೀತಿ ನಿಯಮಗಳಿಗನುಸಾರವಾಗಿ ಎಲ್ಲಾ ವಿಧವಾದ ಕರ್ತವ್ಯಗಳಲ್ಲಿ ಲೋಪದೋಷಗಳಿಲ್ಲದೆ ಕರ್ತವ್ಯ ನಿರ್ವಹಿಸಿರುವುದು ಇವರ ಹೆಗ್ಗಳಿಕೆಯಾಗಿದೆ. ಪ್ರತಿ ವರ್ಷ ಕೇಂದ್ರ ಕಛೇರಿ ವತಿಯಿಂದ ಆಯೋಜಿಸುವ ವಿವಿಧ ತರಬೇತಿಯಲ್ಲಿ ಭಾಗವಹಿಸಿ ೨ ಚಿನ್ನ ಹಾಗು ೧ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
ಪತ್ರಿಕೆಯೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಶಸ್ತಿ ಲಭಿಸಿರುವುದು ಸಂತಸದ ವಿಚಾರವಾಗಿದೆ. ಕೃಷಿಕರಾಗಿ ತೋಟದ ಕೆಲಸದ ಜೊತೆಗೆ ಗೃಹ ರಕ್ಷಕದಳದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಜೊತೆಗೆ ವೈಯಕ್ತಿಕವಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಹೊಳೆಯಲ್ಲಿ ಕಂಡು ಬರುವ ಅನಾಥ ಶವಗಳ ಪತ್ತೆ ಕಾರ್ಯ, ಸನ್ಮಾರ್ಗ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿರುವ ಬಡವರಿಗೆ ನೆರವು, ಡ್ಯಾನ್ಸ್ ಸ್ಕೂಲ್ ವತಿಯಿಂದ ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ದೇಶ ಭಕ್ತಿ ಗೀತೆ ಮೂಲಕ ಜಾಗೃತಿ ಮೂಡಿಸುವುದು. ಸ್ವಯಂ ಪ್ರೇರಣೆಯಿಂದ ರಕ್ತದಾನ ಸೇರಿದಂತೆ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಇತ್ಯಾದಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. 
ಪ್ರಶಸ್ತಿ ಲಭಿಸಿರುವ ಸಂಭ್ರಮದಲ್ಲಿ ವಿಜಯೇಂದ್ರ ಗುರುಗಳಾದ ವೆಂಕಟರಮಣಯ್ಯ, ರಾಜಣ್ಣ ಜಿಲ್ಲಾ ಸಮಾದೇಷ್ಟರು, ಬೋಧಕರು, ತಾಲೂಕು ಘಟಕಾಧಿಕಾರಿ ಹಾಗು ಗೃಹರಕ್ಷಕ ದಳದ ಎಲ್ಲಾ ಹಿರಿಯರನ್ನು ಮತ್ತು ಸಹದ್ಯೋಗಿಗಳನ್ನು ಸ್ಮರಿಸಿದ್ದಾರೆ.  

Wednesday, July 14, 2021

ಭದ್ರಾವತಿಯಲ್ಲಿ ೧೦ ಮಂದಿಯಲ್ಲಿ ಕೊರೋನಾ ಸೋಂಕು

     ಭದ್ರಾವತಿ, ಜು. ೧೪: ತಾಲೂಕಿನಲ್ಲಿ ಬುಧವಾರ ಒಟ್ಟು ೧೦ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
     ಒಟ್ಟು ೮೨೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೦ ಸೋಂಕು ದೃಢಪಟ್ಟಿದೆ. ೧೨ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೭೪೫೫ ಸೋಂಕು ಪತ್ತೆಯಾಗಿದ್ದು, ೭೩೯೫ ಮಂದಿ ಗುಣಮುಖರಾಗಿದ್ದಾರೆ. ೬೦ ಸಕ್ರಿಯ ಪ್ರಕರಣಗಳು ಇದ್ದು, ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
    ತಾಲೂಕಿನಲ್ಲಿ ಸೋಂಕು ಇಳಿಮುಖವಾದರೂ ಸಾವಿನ ಪ್ರಮಾಣ ಇಳಿಮುಖವಾಗುತ್ತಿಲ್ಲ. ಇದರಿಂದಾಗಿ ನಾಗರಿಕರಲ್ಲಿ ಆತಂಕ ಹೆಚ್ಚು ಮಾಡಿದೆ.