Friday, November 26, 2021

ನಕಲಿ ನೋಟು ಚಲಾವಣೆಗೆ ಯತ್ನ : ಇಬ್ಬರ ಬಂಧನ


ನಕಲಿ ನೋಟುಗಳ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಬಂಧಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವುದು.
    ಭದ್ರಾವತಿ, ನ. ೨೬: ನಕಲಿ ನೋಟುಗಳ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ತರೀಕೆರೆ ನಿವಾಸಿ ಅರುಣ್‌ಕುಮಾರ್(೨೩) ಮತ್ತು ಶಿವಮೊಗ್ಗ ನಿವಾಸಿ ಪ್ರೇಮ್‌ರಾಜ್(೨೩) ಬಂಧಿತರಾಗಿದ್ದು, ಈ ಇಬ್ಬರು ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಆಧಾರ ಮೇಲೆ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಇವರಿಂದ ರು.೫೦೦ ಮುಖ ಬೆಲೆಯ ೧೮೨ ನಕಲಿ ನೋಟುಗಳನ್ನು ಹಾಗು ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
    ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಹಳೇನಗರ ಪೊಲೀಸ್ ಠಾಣಾಧಿಕಾರಿ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಶ್ಲೀಲ ನೃತ್ಯ ಪ್ರದರ್ಶನ : ಕಲಾವಿದರಿಗೆ ಅಗೌರವ

ಕಾನೂನು ಕ್ರಮಕ್ಕೆ ಆಗ್ರಹಿಸಿ ನ.೨೯ರಂದು ಪ್ರತಿಭಟನೆ


ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾದ್ಯ ಗೋಷ್ಠಿ ಕಲಾವಿದರು ಮತ್ತು ದಲಿತ ಮುಖಂಡರು ಮಾತನಾಡಿದರು.
    ಭದ್ರಾವತಿ, ನ. ೨೬: ಕಲೆಯ ನೈಜತೆ ಉಳಿಸುವ ಜೊತೆಗೆ ರಾಜ್ಯಾದ್ಯಂತ ಗುರುತಿಸಿಕೊಂಡಿರುವ, ಸಮಾಜದಲ್ಲಿ ಗೌರವಯುತವಾಗಿ ಕಾಣುತ್ತಿರುವ ವಾದ್ಯ ಗೋಷ್ಠಿ ಸಾಂಸ್ಕೃತಿಕ ಕಲಾವಿದರನ್ನು (ಆರ್ಕೆಸ್ಟ್ರಾ) ಅಗೌರವದಿಂದ ಕಾಣುವಂತಹ ಕೃತ್ಯಗಳು ನಡೆಯುತ್ತಿದ್ದು, ಇಂತಹ ಕೃತ್ಯಗಳಿಗೆ ಕಾರಣಕರ್ತರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನ.೨೯ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಾದ್ಯಗೋಷ್ಠಿ ಕಲಾವಿದರು ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ನಿವಾಸಿ ಹರೀಶ್ ಮಾಲೀಕತ್ವದ ಸೋನಿ ಮೆಲೋಡಿ ವಾದ್ಯ ಗೋಷ್ಠಿ ತಂಡ ಇತ್ತೀಚೆಗೆ ತುರುವೇಕೆರೆಯಲ್ಲಿ ಜರುಗಿದ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರನ್ನು ಬಳಸಿಕೊಂಡು ತುಂಡು ಉಡುಗೆಯ ಅಶ್ಲೀಲ ನೃತ್ಯ ಪ್ರದರ್ಶನ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ವ್ಯಾಪಾಕವಾಗಿ ಪ್ರಸಾರಗೊಳ್ಳುವ ಮೂಲಕ ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರಿಗೆ ಮಸಿ ಬಳಿದಂತಾಗಿದೆ. ಕಲಾವಿದರನ್ನು ಅವಮಾನಿಸಿರುವ ಈ ಕೃತ್ಯವನ್ನು ಖಂಡಿಸುತ್ತೇವೆ ಎಂದರು.
    ಈ ರೀತಿಯ ಘಟನೆ ಈ ಹಿಂದೆ ಸಹ ನಡೆದಿದ್ದು, ಈ ಸಂದರ್ಭದಲ್ಲಿ ಪುನಃ ಮರುಕಳುಹಿಸದಂತೆ ಎಚ್ಚರ ವಹಿಸುವುದಾಗಿ ಕ್ಷಮೆಯಾಚಿಸಲಾಗಿತ್ತು. ಆದರೆ ಇದೀಗ ಪುನಃ ಘಟನೆ ನಡೆದಿರುವುದು ಕಲಾವಿದರಿಗೆ ಅದರಲ್ಲೂ ಮಹಿಳಾ ಕಲಾವಿದರಿಗೆ ಹೆಚ್ಚಿನ ನೋವುಂಟು ಮಾಡಿದೆ. ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕುತ್ತಿರುವ ಬಹಳಷ್ಟು ಕಲಾವಿದರಿಗೆ ಈ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕಲಾತಂಡಗಳಿಗೆ ಬೇಡಿಕೆ ಸಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯ ನಡೆಸಿರುವುದು ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೂ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ರಚಿಸಿಕೊಂಡಿರುವ ಹರೀಶ್ ಅದರ ಜಿಲ್ಲಾಧ್ಯಕ್ಷರಾಗಿದ್ದು, ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇವರ ಈ ವರ್ತನೆಯನ್ನು ಈ ಸಂಘದ ಪದಾಧಿಕಾರಿಗಳು ಸಹ ಪ್ರಶ್ನಿಸುತ್ತಿಲ್ಲ. ಹರೀಶ್ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಕೃತ್ಯವನ್ನು ಖಂಡಿಸಿ ನ.೨೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
        ಗೌರವಯುತವಾಗಿ ಬದುಕುತ್ತಿರುವ ಕಲಾವಿದರ ಮೇಲೆ ದೌರ್ಜನ್ಯ :
   ಕಲಾವಿದರ ನೋವುಗಳಿಗೆ ಸ್ಪಂದಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡರು, ಕೆಲವರು ದುರುದ್ದೇಶದ ಹಿನ್ನಲೆಯಲ್ಲಿ ಸಂಘಟನೆ ಕಟ್ಟಿಕೊಂಡು ಗೌರವಯುತವಾಗಿ ಬದುಕುತ್ತಿರುವ ಕಲಾವಿದರ ಮೇಲೆ ದೌರ್ಜನ್ಯವೆಸಗುತ್ತಿರುವುದು ಸರಿಯಲ್ಲ. ಕಲಾವಿದರಿಗೆ ಹಣ ಮುಖ್ಯವಲ್ಲ ಗೌರವ ಮುಖ್ಯವಾಗಿದೆ. ತಾಲೂಕಿನ ಕಲಾವಿದರಿಗೆ ರಾಜ್ಯಾದ್ಯಂತ ದೊಡ್ಡ ದೊಡ್ಡ ನಗರಗಳಲ್ಲೂ ಬೇಡಿಕೆ ಇದೆ. ಉತ್ತಮ ಕಲಾವಿದರು ಇಲ್ಲಿದ್ದು, ತಾಲೂಕಿನ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೃತ್ಯಕ್ಕೆ ಕಾರಣರಾಗಿರುವ ಹರೀಶ್ ತಕ್ಷಣ ಕ್ಷಮೆಯಾಗಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯ ನಡೆಸಬಾರದೆಂದು ಎಚ್ಚರಿಸುವ ಮೂಲಕ ಕಲಾವಿದರ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಪಳನಿರಾಜ್, ಅನಿತಾ, ಬಿ.ಆರ್ ಗೋಪಾಲ್, ವಿಜಯ್ ದಯಾಕರ್, ನೂರುಲ್ಲಾ, ಎ. ರಾಜು, ವೆಂಕಟೇಶ್, ಪುಟ್ಟಣ್ಣ ಹಾಗು ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ರಂಗನಾಥ್, ಈಶ್ವರಪ್ಪ, ಎನ್. ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಜೃಂಭಣೆಯಿಂದ ಜರುಗಿದ ಆಶ್ಲೇಷ ಬಲಿ ಪೂಜೆ


ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಪೂಜೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ನ. ೨೬: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಪೂಜೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
    ಪ್ರಧಾನ ಅರ್ಚಕ ಪ್ರಮೋದ್‌ಕುಮಾರ್ ನೇತೃತ್ವದಲ್ಲಿ ಆಶ್ಲೇಷ ಬಲಿ ಪೂಜೆ ಆಚರಣೆಗಳೊಂದಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು.
    ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷರಾದ ಮುರುಳಿಧರ, ನಿರಂಜನ ಆಚಾರ್, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಉಪಾಧ್ಯಕ್ಷೆ ಉಮಾ ರಾಘವೇಂದ್ರ ತಂತ್ರಿ, ಸುಜಾತ ರಮಾಕಾಂತ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.


ನ.೨೮ರಿಂದ ಅಮಲೋದ್ಭವಿ ಮಾತೆ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವ

ಭದ್ರಾವತಿ ನ್ಯೂಟೌನ್  ಅಮಲೋದ್ಭವಿ ಮಾತೆ ದೇವಾಲಯ
    ಭದ್ರಾವತಿ, ನ. ೨೬: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ೮೩ನೇ ವರ್ಷದ ವಾರ್ಷಿಕೋತ್ಸವ ನ.೨೮ ರಿಂದ ಡಿ.೮ರ ವರೆಗೆ ನಡೆಯಲಿದೆ.
    ಜಗದ್ಗುರು ಪೋಪ್‌ರವರ ಕರೆಯೋಲೆಯಂತೆ ೨೦೨೩ರಲ್ಲಿ ನಡೆಯುವ ವಿಶ್ವ ಸಿನೋದ್ ಸಭೆಯ ಸಿದ್ದತಾ ಪ್ರಕ್ರಿಯೆಗಳಿಗೆ ಪೂರಕವಾಗಿರುವಂತೆ ಈ ಬಾರಿ ಹಲವು ಕಾರ್ಯಕ್ರಮಗಳೊಂದಿಗೆ 'ಅಮಲೋದ್ಭವಿ ಮಾತೆಯೊಡನೆ ಅನ್ಯೋನ್ಯತೆ, ಸಹಭಾಗಿತ್ವ ಮತ್ತು ಸುವಾರ್ತಾ ಸೇವೆಯೆಡೆಗೆ ಜೊತೆಯಾಗಿ ನಮ್ಮ ಪಯಣ' ಎಂಬ ಶೀರ್ಷಿಕೆಯೊಂದಿಗೆ ವಾರ್ಷಿಕೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂಬಂಧ ಪ್ರತಿದಿನ ಸಂಜೆ ೫.೩೦ ರಿಂದ ಜಪಸರ ಪ್ರಾರ್ಥನೆ, ಪೂಜೆ ಮತ್ತು ಪ್ರಬೋಧನೆಗಳು ಜರುಗಲಿವೆ.
    ನ.೨೮ರಂದು ಸಂಜೆ ೫.೩೦ಕ್ಕೆ ಧ್ವಜಾರೋಹಣ, ಜಪಸರ ಪ್ರಾರ್ಥನೆ, ಪೂಜೆ ಮತ್ತು ಪ್ರಬೋಧನೆಯೊಂದಿಗೆ ವಾರ್ಷಿಕೋತ್ಸವಕ್ಕೆ ಚಾಲನೆ ದೊರೆಯಲಿದೆ. ಶಿವಮೊಗ್ಗ ಗುಡ್ ಶೆಪರ್ಡ್ ಧರ್ಮಕೇಂದ್ರದ ಗುರು ಫಾದರ್ ವಿರೇಶ್ ಮೋರಾಸ್ ಅಮಲೋದ್ಭವಿ ಮಾತೆ, ಅನ್ಯೋನ್ಯತೆ, ಸಹಭಾಗಿತ್ವ ಮತ್ತು ಸುವಾರ್ತಾ ಸೇವೆಯೆಡೆಗೆ ಜೊತೆಯಾಗಿ ಸಾಗುವ ನಮ್ಮ ಪಯಣಕ್ಕೆ ದಾರಿದೀಪ ವಿಷಯ ಕುರಿತು ಮಾತನಾಡಲಿದ್ದಾರೆ.  
    ನ.೨೯ರಂದು ನಡೆಯುವ ಕಾರ್ಯಕ್ರಮದಲ್ಲಿ ಅಮಲೋದ್ಭವಿ ಮಾತೆ ಜಪಸರ ಮಾಡಲು ಪ್ರೇರೆಪಿಸಿದ ತಾಯಿ ವಿಷಯ ಕುರಿತು ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸಮ್ಮನವರ ಸುವಾರ್ತ ಕೇಂದ್ರದ ಧರ್ಮಗುರು ಫಾದರ್ ವೀನಸ್ ಪ್ರವೀಣ್, ನ.೩೦ರಂದು  ಅಮಲೋದ್ಭವಿ ಮಾತೆ ತಾಳ್ಮೆಯ ನಿಧಿ ವಿಷಯ ಕುರಿತು ಶಿವಮೊಗ್ಗ ಸೇಕೆರ್ಡ್ ಆರ್ಟ್ ಶಾಲೆ ಪ್ರಾಂಶುಪಾಲ ಫಾದರ್ ಲಾರೆನ್ಸ್, ಡಿ.೧ರಂದು ಅಮಲೋದ್ಭವಿ ಮಾತೆ ವಿಧೇಯತೆಯ ಮಾಗದರ್ಶಿ ವಿಷಯ ಕುರಿತು ಹಿರಿಯೂರು ವಿಯಾನ್ನಿ ಪ್ರೇಷಿತರ ಗೃಹದ ನಿರ್ದೇಶಕ ಫಾದರ್ ಸಂತೋಷ್, ಡಿ.೨ರಂದು ಅಮಲೋದ್ಭವಿ ಮಾತೆ ಪ್ರಾರ್ಥನೆ ಮಾಡಲು ಆದರ್ಶ ವಿಷಯ ಕುರಿತು ಕಾಗದನಗರ ಸಂತ ಜೋಸೆಫ್‌ರ ದೇವಾಲಯದ ಎಸ್‌ಡಿಬಿ ಫಾದರ್ ಡೋಮಿನಿಕ್, ಡಿ.೩ರಂದು ಅಮಲೋದ್ಭವಿ ಮಾತೆ ಅಚಲ ವಿಶ್ವಾಸದ ರಾಣಿ ವಿಷಯ ಕುರಿತು ಉಜ್ಜನಿಪುರ ಡಾನ್ ಬೋಸ್ಕೋ ಐಟಿಐ ನಿರ್ದೇಶಕ ಎಸ್‌ಡಿಬಿ ಫಾದರ್ ಆರೋಗ್ಯರಾಜ್ ಮತ್ತು ಡಿ.೪ರಂದು ಅಮಲೋದ್ಭವಿ ಮಾತೆ ದೇವರ ವಾಕ್ಯವನ್ನು ನಿಷ್ಠೆಯಿಂದ ಪಾಲಿಸಿದ ತಾಯಿ ವಿಷಯ ಕುರಿತು ಹಿರಿಯೂರು ಸ್ವರ್ಗ ಸ್ವೀಕೃತ ಮಾತೆಯ ದೇವಾಲಯದ ಧರ್ಮಗುರು ಫಾದರ್ ಫ್ರಾಂಕ್ಲಿನ್ ಡಿಸೋಜ ಮಾತನಾಡಲಿದ್ದಾರೆ.
    ಡಿ.೫ರಂದು ಫಾದರ್ ಫ್ರಾಂಕ್ಲಿನ್ ಡಿಸೋಜ ನೇತೃತ್ವದಲ್ಲಿ ಬ್ರದರ್ ಟಿ.ಕೆ ಜಾರ್ಜ್ ಮತ್ತು ತಂಡದವರಿಂದ ರೋಗಿಗಳಿಗೆ ವಿಶೇಷ ಪ್ರಾರ್ಥನೆ ಒಳಗೊಂಡಂತೆ ಧ್ಯಾನಕೂಟ, ಡಿ.೬ರಂದು ಜೇಡಿಕಟ್ಟೆ ಆಶಾಕಿರಣ ನಿರ್ದೇಶಕ ಫಾದರ್ ಪ್ರಕಾಶ್ ನೇತೃತ್ವದಲ್ಲಿ ಅಮಲೋದ್ಭವಿ ಮಾತೆ ಭಕ್ತಿಯ ಸುಧೆ ಕಾರ್ಯಕ್ರಮ ನಡೆಯಲಿದ್ದು, ಡಿ.೭ರಂದು ಕಡೂರಿನ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಫಾದರ್ ರಾಜೇಂದ್ರ ಅಮಲೋದ್ಭವಿ ಮಾತೆ ಕುಟುಂಬಗಳ ಮಹಾರಾಣಿ ವಿಷಯ ಕುರಿತು ಹಾಗು ಡಿ.೮ರಂದು ಹಾಸನ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ಫಾದರ್ ಜೋನಾಸ್ ಪ್ಯಾಟ್ರಿಕ್ ರಾವ್ ಅಮಲೋದ್ಭವಿ ಮಾಥೆ ಉದಾರತೆಯ ಗಣಿ ವಿಷಯ ಕುರಿತು ಮಾತನಾಡಲಿದ್ದಾರೆ.
    ಡಿ.೭ರಂದು ಸಂಜೆ ಅಲೋದ್ಭವಿ ಮಾತೆಯ ಭವ್ಯ ತೇರಿನ ಮೆರವಣಿಗೆ, ಭಕ್ತರಿಗೆ ಆಶೀರ್ವಾದ ಹಾಗು ಅನ್ನಸಂತರ್ಪಣೆ ಕಾರ್ಯಕ್ರಮಗಳು ಹಾಗು ಡಿ.೮ರಂದು ಸಂಜೆ ಅಡಂಬರದ ಬಲಿ ಪೂಜೆ, ವಿಶೇಷ ದಾನಿಗಳ ಸರಣೆ ಮತ್ತು ಸನ್ಮಾನ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಮುಕ್ತಾಯಗೊಳ್ಳಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಮತ್ತು ಪಾಲನ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಕೋರಿದ್ದಾರೆ.

Thursday, November 25, 2021

ವಿಜೃಂಭಣೆಯಿಂದ ಜರುಗಿದ ಶ್ರೀ ಚಿದಂಬರ ಜಯಂತಿ

ಭದ್ರಾವತಿ ಹಳೆನಗರದ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ೨೫ನೇ ವರ್ಷದ ಶ್ರೀ ಚಿದಂಬರ ಜಯಂತಿ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ನ. ೨೫: ಹಳೆನಗರದ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ೨೫ನೇ ವರ್ಷದ ಶ್ರೀ ಚಿದಂಬರ ಜಯಂತಿ ವಿಜೃಂಭಣೆಯಿಂದ ನೆರವೇರಿತು.
    ಜಯಂತಿ ಅಂಗವಾಗಿ ಬೆಳಿಗ್ಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮ ಹಾಗೂ ಶ್ರೀ ಚಿದಂಬರ ಮೂಲಮಂತ್ರ ಹೋಮ, ರಾಜಬೀದಿ ಉತ್ಸವ ಮತ್ತು ಮಹಾಮಂಗಳಾರತಿ, ಪೂರ್ಣಾಹುತಿ, ಶ್ರೀ ಚಿದಂಬರ ತೊಟ್ಟಿಲು ಸೇವೆ ಹಾಗೂ ಹಾಗೂ ಲಲಿತ ಮಹಿಳಾ ಮಂಡಳಿಯಿಂದ ದೀಪೋತ್ಸವ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ  ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಚಿದಂಬರ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಇಂದ್ರಸೇನರಾವ್, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಜೆ.ಎಂ ಬಾಲಚಂದ್ರ ಗುತ್ತಲ್, ಆನಂದರಾವ್, ಪ್ರಭಾಕರರಾವ್, ರಾಮಚಂದ್ರ, ದತ್ತಾತ್ರಿ, ವಾಸುದೇವ್, ರಾಜಣ್ಣ ಸೇರಿದಂತೆ ಇನ್ನಿತರ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾವಹಿಸಿ : ಎಸಿಬಿ ಮಹಾನಿರ್ದೇಶಕರಿಗೆ ಮನವಿ

 


ಭದ್ರಾವತಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ  ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾ ವಹಿಸುವಂತೆ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾನಿರ್ದೇಶಕರಿಗೆ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಮನವಿ ಮಾಡಿದ್ದಾರೆ. 

ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಸುಮಾರು  10 ರಿಂದ 15 ವರ್ಷಗಳವರೆಗೆ ಒಂದೇ ಕಡೆ ಕೆಲವು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು,  ಇವರಿಗೆ ಇಲಾಖೆ ಹಾಗೂ ಕಚೇರಿಯ ಸಂಪೂರ್ಣ ಮಾಹಿತಿ ಇದ್ದು, ಅಕ್ರಮವಾಗಿ ಹಣ, ಆಸ್ತಿ  ಸಂಪಾದಿಸಬೇಕೆಂಬ ಉದ್ದೇಶದೊಂದಿಗೆ ತಮ್ಮದೇ ಆದ ಪ್ರಭಾವ ಬಳಸಿಕೊಂಡು ಒಂದೇ ಸ್ಥಳದಲ್ಲಿಯೇ ಉಳಿದುಕೊಂಡು ಬಲಿಷ್ಠರಾಗಿದ್ದಾರೆ.   ಹಣವನ್ನು ಯಾವ ರೀತಿ ಪಡೆಯಬೇಕು. ಯಾರ ಮುಖಾಂತರ ಪಡೆಯಬೇಕು. ಯಾವ ರೀತಿ ಹಣ, ಆಸ್ತಿ ಹೊಂದಬೇಕೆಂಬ  ತಂತ್ರಗಾರಿಕೆಗಳನ್ನು ಅರಿತು ಕೊಂಡಿದ್ದಾರೆ.   

ಅರಣ್ಯ ಇಲಾಖೆ, ಪಂಚಾಯತ್ ರಾಜ್ ಖಾತೆ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕೆಲವು ನೌಕರರು ತಮ್ಮ ನಿವೃತ್ತಿ ಅವಧಿಯನ್ನು ಸಂಪೂರ್ಣವಾಗಿ ಮುಗಿಸಿರುತ್ತಾರೆ. ಒಂದೇ ಕಡೆ ಕರ್ತವ್ಯ ನಿರ್ವಹಿಸಿರುವ ನೌಕರರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸುಮಾರು ೪-೫ ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾವಹಿಸಿದ್ದಲ್ಲಿ ಭ್ರಷ್ಟಾಚಾರಗಳು ಕಡಿಮೆಯಾಗುವ ಜೊತೆಗೆ  ಸಾ‍ರ್ವಜನಿಕರಿಗೆ ಲಂಚ ನೀಡುವ ಅನಿವಾರ್ಯತೆ, ಒತ್ತಡಗಳು ಕಡಿಮೆಯಾಗಲಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.  

ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ ನಿಧನ


  ಕೆ.ಸಿ ವೀರಭದ್ರಪ್ಪ
 ಭದ್ರಾವತಿ, ನ. ೨೫: ತಾಲೂಕು ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆ ನಿವಾಸಿ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ(೬೯) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು.
    ಪತ್ನಿ, ಸಹೋದರ, ಸಹೋದರಿಯರನ್ನು ಹೊಂದಿದ್ದರು. ಸದಾಕಾಲ ಕ್ರಿಯಾಶೀಲರಾಗಿದ್ದ ಕೆ.ಸಿ ವೀರಭದ್ರಪ್ಪರವರು ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಮೂಲತಃ ಜಮೀನ್ದಾರ್ ಕುಟುಂಬದವರಾದ ವೀರಭದ್ರಪ್ಪ, ಪ್ರಸ್ತುತ ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾಗಿ, ಭದ್ರಾ ಕಾಲೋನಿ ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ, ಹಾಲಪ್ಪವೃತ್ತ ಭದ್ರಾ ಪ್ರೌಢಶಾಲೆ ಆಡಳಿತ ಮಂಡಳಿ ನಿರ್ದೇಶಕರಾಗಿ ಹಾಗು ಜನ್ನಾಪುರ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅಲ್ಲದೆ ೧೯೯೯ ರಿಂದ ೨೦೦೧ರವರೆಗೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಅಧ್ಯಕ್ಷರಾಗಿ, ೧೯೮೬ ರಿಂದ ೧೯೯೬ರವರೆಗೆ ವೀರಾಪುರ ರೈತರ ಸಹಕಾರ ಸಂಘ ಬ್ಯಾಂಕ್ ಅಧ್ಯಕ್ಷರಾಗಿ ಮತ್ತು ೨೦೦೫ ರಿಂದ ೨೦೧೭ರವರೆಗೆ ಸೀಗೆಬಾಗಿ ರೈತರ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    ೧೯೮೭ರಿಂದ ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಭದ್ರಪ್ಪನವರು, ಖಜಾಂಚಿಯಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ವಲಯ ಸಲಹೆಗಾರರಾಗಿ, ವಲಯ ರಾಯಬಾರಿಯಾಗಿ, ಡಿ.ಜಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಸಮುದಾಯ ಸೇವೆ, ಜಿಲ್ಲಾ ಗೌರ್‍ನರ್ ಪ್ರತಿನಿಧಿಯಾಗಿ, ಜಿಎಲ್‌ಟಿ ಮತ್ತು ಜಿಎಂಟಿ ಸಂಯೋಜಕರಾಗಿ, ಜಿಲ್ಲಾ ರಾಯಬಾರಿಯಾಗಿ ಹಾಗು ಪ್ರಸ್ತುತ ಲಯನ್ಸ್ ಕ್ಲಬ್ ೩೧೭-ಸಿ ಮೊದಲನೇ ಜಿಲ್ಲಾ ಉಪಗೌರ್‍ನರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
    ವೀರಶೈವ ಸಮಾಜದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ವೀರಭದ್ರಪ್ಪ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.