Monday, December 6, 2021

ಅಂಬೇಡ್ಕರ್‌ರವರ ೬೫ನೇ ಪರಿನಿರ್ವಾಣ : ವಿವಿಧ ಸಂಘಟನೆಗಳಿಂದ ಮಾಲಾರ್ಪಣೆ

ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ನೌಕರರ ಒಕ್ಕೂಟದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು.
    ಭದ್ರಾವತಿ, ಡಿ. ೬: ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೫ನೇ ವರ್ಷದ ಪರಿನಿರ್ವಾಣ ಅಂಗವಾಗಿ ನಗರದ ವಿವಿಧ ಸಂಘಟನೆಗಳಿಂದ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ನೌಕರರ ಒಕ್ಕೂಟದ ವತಿಯಿಂದ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.


ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ತಾಲೂಕು ಘಟಕದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
    ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಕೆ. ರಂಗನಾಥ್, ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ, ದಲಿತ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷೆ ಎಸ್. ಉಮಾ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ವಿದ್ಯಾರ್ಥಿ ಘಟಕದ ಪ್ರಸನ್ನಕುಮಾರ್,  ಪ್ರಮುಖರಾದ ಸಿ. ಜಯಪ್ಪ, ನರಸಿಂಹ, ದಾಸ್, ಮಂಜು, ಮಣಿ, ಪರಮೇಶ್ವರಪ್ಪ, ಈಶ್ವರಪ್ಪ, ಎನ್. ಗೋವಿಂದ, ಲೋಕೇಶ್, ಎ. ತಿಪ್ಪೇಸ್ವಾಮಿ, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ತಾಲೂಕು ಘಟಕದ ವತಿಯಿಂದ ಅಧ್ಯಕ್ಷ ರಹಮತುಲ್ಲಾ ಖಾನ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಕೈಸರ್ ಷರೀಫ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.  
ಛಲವಾದಿ ಮಹಾಸಭಾ ವತಿಯಿಂದ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಪ್ರಮುಖರಾದ ಎನ್. ಶ್ರೀನಿವಾಸ್,  ಕೃಷ್ಣಛಲವಾದಿ, ಮಂಜುನಾಥ್, ಮರಿಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಛಲವಾದಿ ಮಹಾಸಭಾ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ, ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆ


ಭದ್ರಾವತಿ ನ್ಯೂಟೌನ್ ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಕಾಮ್ರೇಡ್ ಕಾಳೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೬: ನಗರದ ನ್ಯೂಟೌನ್ ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಯಶಸ್ವಿಯಾಗಿ ಜರುಗಿತು.
    ಸಭೆಯಲ್ಲಿ ಪಿಂಚಣಿ ಮತ್ತು ಭವಿಷ್ಯ ನಿಧಿ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ೨೦೦೪-೦೫ನೇ ಸಾಲಿನಲ್ಲಿ ಆರಂಭಗೊಂಡ ಸಂಘ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಹಿತ ಕಾಪಾಡುವಲ್ಲಿ ನಿರಂತರವಾಗಿ  ಹೋರಾಟ ನಡೆಸಿಕೊಂಡು ಬರುತ್ತಿದೆ.
    ಕಾಮ್ರೇಡ್ ಕಾಳೇಗೌಡರವರು ಕಾರ್ಮಿಕರಿಗಾಗಿ ನಡೆಸಿರುವ ಹೋರಾಟಗಳು ಹಾಗು ಅವರು ನಡೆದು ಬಂದ ದಾರಿ ಹಾಗು ಚಿಂತನೆಗಳನ್ನು ಸಭೆಯಲ್ಲಿ ನೆನಪಿಕೊಳ್ಳುವ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ದುಗ್ಗೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನರಸಿಂಹಚಾರ್, ಚಂದ್ರಕಾಂತ್, ನಾಗರಾಜ್, ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಮಮೂರ್ತಿ ವಂದಿಸಿದರು.

Sunday, December 5, 2021

ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ : ಗಮನ ಹರಿಸಲಿ ನಗರಸಭೆ ಆಡಳಿತ

ಭದ್ರಾವತಿ ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ದೇವಸ್ಥಾನ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು.
    ಭದ್ರಾವತಿ, ಡಿ. ೫: ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಜೊತೆಗೆ ಸ್ವಚ್ಛತೆ ಇಲ್ಲದಂತಾಗಿದ್ದು, ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
    ಬೈಪಾಸ್ ರಸ್ತೆಯ ಆನೇಕೊಪ್ಪದಲ್ಲಿ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿರ್ಮಾಣಗೊಂಡಿರುವ ಎಂಪಿಎಂ ಬಡಾವಣೆ ಕಳೆದ ಕೆಲವು ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸೂಕ್ತ ರಸ್ತೆ, ಚರಂಡಿಗಳಿಲ್ಲ, ಮಳೆಗಾಲದಲ್ಲಿ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
    ಬಡಾವಣೆಯಲ್ಲಿ ಸುಮಾರು ೩೦ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದು, ಆದರೂ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕೈಗೊಂಡಿಲ್ಲ. ಸೂಕ್ತ ಚರಂಡಿ ವ್ಯವಸ್ಥೆ ಕೈಗೊಳ್ಳದ ಕಾರಣ ನೀರು ಮುಂದೆ ಹರಿಯದೆ ನಿಂತುಕೊಂಡು ದುರ್ವಾಸನೆ ಬೀರುತ್ತಿದ್ದು, ಜೊತೆಗೆ ಖಾಲಿ ನಿವೇಶನಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದುನಿಂತು ಹಾವು, ಮುಂಗುಸಿ, ಹೆಗ್ಗಣಗಳ ಆವಾಸ ತಾಣಗಳಾಗಿ ಮಾರ್ಪಟ್ಟಿವೆ.
    ಈ ನಡುವೆ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಸುಮಾರು ೬ ವರ್ಷಗಳು ಕಳೆದಿದ್ದು, ಬಹುತೇಕ ಕಾರ್ಮಿಕ ಕುಟುಂಬಗಳು ಊರು ತೊರೆದು ವಲಸೆ ಹೋಗಿವೆ.  ಉಳಿದುಕೊಂಡಿರುವ ಕೆಲವು ಕುಟುಂಬಗಳಿಗೆ ಬಡಾವಣೆಯೇ ಆಧಾರವಾಗಿದೆ. ಈ ಹಿನ್ನಲೆಯಲ್ಲಿ ಬಡಾವಣೆ ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿದೆ.
    ಪ್ರಸ್ತುತ ಗೃಹ ನಿರ್ಮಾಣ ಸಹಕಾರ ಸಂಘ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ತಟಸ್ಥವಾಗಿ ಉಳಿದುಕೊಂಡಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳು ಅನಿವಾರ್ಯವಾಗಿ ನಗರಸಭೆ ಬಾಗಿಲು ತಟ್ಟುವಂತಾಗಿದೆ. ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
    ಬಡಾವಣೆಯಲ್ಲಿ ಇನ್ನೂ ಉದ್ಯಾನವನ ನಿರ್ಮಾಣಗೊಂಡಿಲ್ಲ. ಪ್ರಸ್ತುತ ನಿವಾಸಿಗಳು ಚೌಡೇಶ್ವರಿ ದೇವಿ ದೇವಸ್ಥಾನ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ. ದೇವಸ್ಥಾನ ತಗ್ಗು ಪ್ರದೇಶದಲ್ಲಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ದೇವಸ್ಥಾನ ಬಳಿ ನೀರು ಮುಂದೆ ಹರಿಯದೆ ನಿಂತುಕೊಳ್ಳುತ್ತಿದೆ. ಈ ಸ್ಥಳದಲ್ಲಾದರೂ ತಕ್ಷಣ ನಗರಸಭೆ ವತಿಯಿಂದ ಸೂಕ್ತ ಚರಂಡಿ ವ್ಯವಸ್ಥೆ ಕೈಗೊಳ್ಳಬೇಕೆಂಬುದು ನಿವಾಸಿಗಳ ಒತ್ತಾಯವಾಗಿದೆ.


ಭದ್ರಾವತಿ ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ಸ್ವಚ್ಛತೆ ಇಲ್ಲದಿರುವುದು.

ಸ್ವಾಗತ್ ಗ್ರೂಪ್ಸ್‌ನಿಂದ ಕನ್ನಡ ರಾಜ್ಯೋತ್ಸವ, ಪುನೀತ್‌ರಾಜ್‌ಕುಮಾರ್ ಪುಣ್ಯಸ್ಮರಣೆ


ಭದ್ರಾವತಿ ನಗರಸಭೆ ವಾರ್ಡ್ ನಂ.೩೨ರ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿ ಸ್ವಾಗತ್ ಗ್ರೂಪ್ಸ್ ವತಿಯಿಂದ ಭಾನುವಾರ ಪ್ರತಿವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಹಾಗು ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್‌ರವರ ಪುಣ್ಯ ಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೫:  ನಗರಸಭೆ ವಾರ್ಡ್ ನಂ.೩೨ರ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿ ಸ್ವಾಗತ್ ಗ್ರೂಪ್ಸ್ ವತಿಯಿಂದ ಭಾನುವಾರ ಪ್ರತಿವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಹಾಗು ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್‌ರವರ ಪುಣ್ಯ ಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಪ್ರಮುಖರು ಸಂಘಟನೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುವ ಮೂಲಕ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗುವ ಮೂಲಕ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯುವಂತಾಗಲಿ. ಸಂಘಟನೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು.
    ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಕಾಂತರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್‌ಕುಮಾರ್, ವೀರಶೈವ ಯುವ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕೃಷ್ಣರಾಜ್, ಹರೀಶ್, ಚಂದ್ರಣ್ಣ, ಮಂಜಣ್ಣ ಹಾಗು ಸ್ವಾಗತ್ ಗ್ರೂಪ್ಸ್ ಪದಾಧಿಕಾರಿಗಳು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.

Saturday, December 4, 2021

ಅರಣ್ಯ ಇಲಾಖೆಯಲ್ಲಿ ಅವ್ಯವಹಾರ : ತನಿಖೆಗೆ ಸಚಿವರ ಆದೇಶ


ಭದ್ರಾವತಿ ವಿಭಾಗದ ಅರಣ್ಯದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲು ಅರಣ್ಯ ಸಚಿವ ಉಮೇಶ್ ಕತ್ತಿ ಆದೇಶಿಸಿರುವುದು.
    ಭದ್ರಾವತಿ, ಡಿ. ೪: ತಾಲೂಕಿನ ಭದ್ರಾವತಿ ವಿಭಾಗದ ಅರಣ್ಯದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲು ಅರಣ್ಯ ಸಚಿವ ಉಮೇಶ್ ಕತ್ತಿ ಆದೇಶಿಸಿದ್ದಾರೆ.
    ಶಾಂತಿಸಾಗರ ವಲಯದಲ್ಲಿ ಸರಿಯಾದ ರೀತಿಯಲ್ಲಿ ನೆಡುತೋಪುಗಳನ್ನು ಮಾಡದೆ ಪ್ಲಾಸ್ಟಿಕ್ ಚೀಲಗಳನ್ನು ಬೇರ್ಪಡಿಸದೆ ಸಸಿಗಳನ್ನು ನೆಡುವ ಮೂಲಕ ಅರಣ್ಯ ನಾಶ ಮಾಡಲಾಗಿದ್ದು, ಸರ್ಕಾರದ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಜೊತೆಗೆ ಅರಣ್ಯ ಒತ್ತುವರಿ ನಡೆಸಲಾಗಿದ್ದು, ಅಲ್ಲದೆ ಅರಣ್ಯ ಕಾವಲು ಪಡೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗೆ ಒಟ್ಟು ೧೨ ಅಂಶಗಳನ್ನು ಒಳಗೊಂಡ ದೂರನ್ನು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅರಣ್ಯ ಪಡೆ ಮುಖ್ಯಸ್ಥರಿಗೆ ಜ.೯, ೨೦೨೦ರಂದು ಅಂಚೆ ಮೂಲಕ ಸಲ್ಲಿಸಿದ್ದರು.


ಸಾಮಾಜಿಕ ಹೋರಾಟಗಾರ ಶಿವಕುಮಾರ್
    ಶಿವಕುಮಾರ್‌ರವರು ೨೦೧೯ರಿಂದ ನಿರಂತರವಾಗಿ ಈ ಸಂಬಂಧ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಅರಣ್ಯ ನಾಶ ಒತ್ತುವರಿ ಹಾಗು ಮರುಳುದಂಧೆ ಕುರಿತು ಮೇ.೨೫, ೨೦೧೯ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ,  ಶಾಂತಿ ಸಾಗರ(ಮಾವಿನಕಟ್ಟೆ) ವಲಯದಲ್ಲಿ ಅರಣ್ಯೀಕರಣದ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಡಿ.೪, ೨೦೧೯ರಂದು ಸಿ.ಸಿ.ಎಫ್ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ ಇವರಿಗೆ ದೂರು ಸಲ್ಲಿಸಿದ್ದರು.
    ಸೂಕ್ತ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರೂ ಸಹ ಪ್ರಕರಣದ ತನಿಖೆ ಆರಂಭಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಶಿವಕುಮಾರ್‌ರವರು ಸೆ.೨೩ರಂದು ಅರಣ್ಯ ಸಚಿವರಿಗೆ ಅಂಚೆ ಮೂಲಕ ದೂರು ಸಲ್ಲಿಸಿದ್ದರು. ದೂರಿಗೆ ಸ್ಪಂದಿಸಿರುವ ಸಚಿವರು ನ.೨೯ರಂದು ಪ್ರಕರಣಗಳ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಇಲಾಖೆಯ ಆಪ್ತ ಕಾರ್ಯದರ್ಶಿ ಸುರೇಶ ಕ. ಅಳಗುಂಡಿ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
    ಪತ್ರಿಕೆ ಜೊತೆ ಮಾತನಾಡಿ, ತಕ್ಷಣ ತಪ್ಪಿತಸ್ಥ ಅಧಿಕಾರಿಗಳು ಹಾಗು ನೌಕರರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಬೇಕು. ಅಲ್ಲದೆ ಸರ್ಕಾರ ತಪ್ಪಿತಸ್ಥರನ್ನು ಕರ್ತವ್ಯದಿಂದ ವಜಾಗೊಳಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಭ್ರಷ್ಟ ಅಧಿಕಾರಿಗಳು ಹಾಗು ನೌಕರರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

ದೀಪದ ಬೆಳಕಿನಲ್ಲಿ ಕಂಗೊಳಿಸಿದ ಶ್ರೀ ಶಿವ ಸಾಯಿ ಕೃಪ ಧಾಮ


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪ ಧಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶನಿವಾರ ಲಕ್ಷ ದೀಪೋತ್ಸವ ಯಶಸ್ವಿಯಾಗಿ ಜರುಗಿತು.
    ಭದ್ರಾವತಿ, ಡಿ. ೪: ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪ ಧಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶನಿವಾರ ಲಕ್ಷ ದೀಪೋತ್ಸವ ಯಶಸ್ವಿಯಾಗಿ ಜರುಗಿತು.
    ದೀಪೋತ್ಸವದ ಅಂಗವಾಗಿ ಧಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರಗಳೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ದೀಪದ ಬೆಳಕಿನಲ್ಲಿ ಕಂಗೊಳಿಸಿದ ಧಾಮ:
    ಶ್ರೀ ಶಿವ ಸಾಯಿ ಕೃಪ ಧಾಮದ ವಿಶಾಲವಾದ ಆವರಣ ಸೇರಿದಂತೆ ಎಲ್ಲೆಡೆ ದೀಪಗಳು ಕಂಗೊಳಿಸಿದವು. ಭಕ್ತಾಧಿಗಳು ಸರದಿ ಸಾಲಿನಲ್ಲಿ ಬಂದು ದೀಪಗಳನ್ನು ಬೆಳಗುವ ಜೊತೆಗೆ ಕಣ್ತುಂಬಿ ಕೊಂಡರು.
    ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಶ್ರೀ ಶಿವ ಸಾಯಿ ಕೃಪ ಧಾಮದ ಟ್ರಸ್ಟಿಗಳು, ಪ್ರಧಾನ ಅರ್ಚಕರು ಹಾಗು ಸೇವಾಕರ್ತರು ಉಪಸ್ಥಿತರಿದ್ದರು. ನ್ಯೂಟೌನ್, ಆಂಜನೇಯ ಅಗ್ರಹಾರ, ಕೂಲಿಬ್ಲಾಕ್‌ಶೆಡ್, ವಿದ್ಯಾಮಂದಿರ, ಜನ್ನಾಪುರ, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.

ಡಿ.5 ರಂದು ಕೋವಿಡ್ ಲಸಿಕೆ ಅಭಿಯಾನ

  


ಭದ್ರಾವತಿ, ಡಿ. 4: ಅಮಲೋದ್ಭವಿ ಮಾತೆಯ ದೇವಾಲಯ ಹಾಗೂ ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವತಿಯಿಂದ ಡಿ.5 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಕೋವಿಡ್  ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ಆವರಣದಲ್ಲಿ ನಡೆಯಲಿರುವ ಅಭಿಯಾನದಲ್ಲಿ ಇದುವರೆಗೂ ಲಸಿಕೆ ಪಡೆಯದವರು ಹಾಗೂ ಮೊದಲನೇ  ಡೋಸ್ ಪಡೆದರು ಪಾಲ್ಗೊಳ್ಳಬಹುದಾಗಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್  ಎರಡೂ ಬಗೆಯ ಲಸಿಕೆಗಳನ್ನು ನೀಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಮಲೋದ್ಭವಿ ಮಾತೆಯ ದೇವಾಲಯದ ಧರ್ಮಗುರು  ಫಾದರ್ ಲಾನ್ಸಿ  ಡಿಸೋಜಾ ಮತ್ತು ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಕೋರಿದ್ದಾರೆ .