Sunday, April 3, 2022

ಏ.೫ರಂದು ನಗರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

    ಭದ್ರಾವತಿ, ಏ. ೩:  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಏ.೫ರಂದು ನಗರಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ನಡೆಸಲಾಗಿರುವ ಪಕ್ಷದ ಡಿಜಿಟಲ್ ನೋಂದಾಣಿ ಸದಸ್ಯತ್ವ ಅಭಿಯಾನ ಕುರಿತು ಮಾಹಿತಿ ಪಡೆಯಲಿದ್ದಾರೆ.
    ಅಂದು ಮಧ್ಯಾಹ್ನ ೩ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಚೇರಿಗೆ ಭೇಟಿ ನೀಡಲಿದ್ದು, ಪಕ್ಷದ ಜಿಲ್ಲಾ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.



ಬೌದ್ಧ ವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

    
ಭದ್ರಾವತಿ ಹೊಸ ನಂಜಾಪುರ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿರುವ ಬೌದ್ಧವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 
    ಭದ್ರಾವತಿ, ಏ. ೩:  ಹೊಸ ನಂಜಾಪುರ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿರುವ ಬೌದ್ಧವಿಹಾರದಲ್ಲಿ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ, ಬೌದ್ಧ ಧರ್ಮದ ಅನುಯಾಯಿಯಾಗಿರುವ ಶ್ರೀನಿವಾಸ್‌ರವರು ತಮ್ಮ ಸ್ವಂತ ಜಮೀನಿನಲ್ಲಿ ೨ ಎಕರೆ ಜಾಗ ಬೌದ್ಧ ವಿಹಾರ ನಿರ್ಮಾಣಕ್ಕೆ ಉಚಿತವಾಗಿ ನೀಡಿದ ಹಿನ್ನಲೆಯಲ್ಲಿ ‘ಸಂಬುದ್ಧ ಧಮ್ಮಾಂಕುರ ಟ್ರಸ್ಟ್’ ಅಸ್ತಿತ್ವಕ್ಕೆ ಬರುವ ಮೂಲಕ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 
ಇದೀಗ ಧ್ಯಾನ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಟ್ರಸ್ಟ್ ಅಧ್ಯಕ್ಷ, ಬೌದ್ಧ ಧರ್ಮ ಉಪಾಸಕ ಪ್ರೊ. ಎಚ್. ರಾಚಪ್ಪ ಬೌದ್ಧ ಧರ್ಮದ ಆಚರಣೆಗಳನ್ನು ನೆರವೇರಿಸಿಕೊಟ್ಟರು. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದು, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಪ್ರೇಮಾ, ಉದಯಕುಮಾರ್, ಎಂಜಿನಿಯರ್ ರಂಗರಾಜಪುರೆ,  ಟ್ರಸ್ಟ್ ಪ್ರಮುಖರಾದ ಸುರೇಶ್, ಬದರಿನಾರಾಯಣ, ಶಿವಬಸಪ್ಪ, ಬಿ.ಡಿ ಸಾವಕ್ಕನವರ್, ಬಿ.ಎಸ್  ಗಣೇಶ್, ಶಾಂತಿ, ಅನಿಲ್‌ಕುಮಾರ್, ಪುಟ್ಟರಾಜು, ಕಿರಣ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Friday, April 1, 2022

ಕೂಡ್ಲಿಗೆರೆ ಗ್ರಾಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬ ಆಚರಣೆ


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಹುಟ್ಟುಹಬ್ಬ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು. 
    ಭದ್ರಾವತಿ, ಏ. ೧: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಹುಟ್ಟುಹಬ್ಬ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು. 
ಈ ಬಾರಿ ಗ್ರಾಮದ ಪ್ರಮುಖರು ಒಂದೆಡೆ ಸೇರಿ ವಿಶೇಷವಾಗಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು. ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಸಿಹಿ ಹಂಚಿಕೆಯೊಂದಿಗೆ ದಾಸೋಹ ನಡೆಸಲಾಯಿತು. 
ಕಾರ್ಯಕ್ರಮದಲ್ಲಿ ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷೆ ಗೌರಮ್ಮ, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ, ಮಾಜಿ ಅಧ್ಯಕ್ಷೆ ಮಲ್ಲಕ್ ವೀರಪ್ಪನ್, ಸದಸ್ಯರಾದ ವಿಶ್ವನಾಥ್, ಸಿದ್ದಮ್ಮ ನಾಗೇಶ್,  ಮುಖಂಡರಾದ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಎಸ್. ಮಹಾದೇವ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಆರ್. ನಾಗರಾಜ್ ಕೂಡ್ಲಿಗೆರೆ, ಮಂಜುನಾಥ್ ವೆಲ್ಡಿಂಗ್, ಜಯಣ್ಣ, ಶಾಲಿನಿ, ಪ್ರಶಾಂತ್ ಕೋಳಿ ಮತ್ತು ತಂಡದವರು, ಕಾಂಗ್ರೆಸ್ ಮಾಧ್ಯಮ ವಿಭಾಗದ ಪ್ರವೀಣ್‌ನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಕ್ಷಣ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ : ತಾಲೂಕು ಆಡಳಿತಕ್ಕೆ ಮನವಿ

ವಿಳಂಬವಾದಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ


ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗಿರುವುದನ್ನು ಖಂಡಿಸಿ ಶುಕ್ರವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಏ. ೧: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗಿರುವುದನ್ನು ಖಂಡಿಸಿ ಶುಕ್ರವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಲಾಯಿತು.
    ನಿರಂತರವಾಗಿ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಹಾಗು ಈ ಹಿಂದಿನ ನಗರಸಭೆ ಪೌರಾಯುಕ್ತರಾದ ಮನೋಹರ್‌ರವರ ಪರಿಶ್ರಮದಿಂದ ನಗರಸಭೆ ವ್ಯಾಪ್ತಿಯಲ್ಲಿ ೭೦ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ತಾಲೂಕು ಆಡಳಿತದಿಂದ ಆದೇಶವಾಗಿರುತ್ತದೆ. ಈ ಪೈಕಿ ಈಗಾಗಲೇ ಉಜ್ಜನಿಪುರದ ಬಳಸೋಕಟ್ಟೆ ಕೆರೆ, ಬಳಕಟ್ಟೆ ಕೆರೆ, ಜನ್ನಾಪುರ ಕೆರೆ, ಬುಳ್ಳಾಪುರದ ಸರ್ಕಾರಿ ಚಿಕ್ಕಯ್ಯನ ಕೆರೆ ಮತ್ತು ಗೌಡನಕಟ್ಟೆ ಕೆರೆ, ಸಿದ್ದಾಪುರದ ಬಳಸೋಕೆರೆ, ಬಿದಿರೊಡ್ಡು ಕೆರೆ ಮತ್ತು ಚಿಕ್ಕಯ್ಯನ ಕೆರೆ, ಬುಳ್ಳಾಪುರದ ಸರ್ಕಾರಿ ಕೆರೆ ಮತ್ತು ಬಾಳೆಕಟ್ಟೆ ಕೆರೆ, ಕಡದಕಟ್ಟೆ ಸರ್ಕಾರಿ ಕೆರೆ, ಬೊಮ್ಮನಕಟ್ಟೆ ಕೆರೆ, ದೊಡ್ಡಗೊಪ್ಪೇನಹಳ್ಳಿ ಸರ್ಕಾರಿ ಕೆರೆ, ಹೆಬ್ಬಂಡಿ ಕೆರೆ, ಕಣಕಟ್ಟೆ ಕೆರೆ, ಆನೆಕೊಪ್ಪ ಕೆರೆ, ಕವಲಗುಂದಿ ಯಳವಪ್ಪನಕೆರೆ, ಸೀಗೆಬಾಗಿ ಕೆರೆ, ಹೆಬ್ಬಂಡಿ ಕೆರೆ ಮತ್ತು ಹೊಸಮನೆ ಕೆರೆ ಸೇರಿದಂತೆ ಒಟ್ಟು ೨೩ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಮುಕ್ತಾಯಗೊಂಡಿರುತ್ತದೆ. ಆದರೆ ಇದುವರೆಗೂ ಒತ್ತುವರಿ ತೆರವು ಕಾರ್ಯ ನಡೆದಿರುವುದಿಲ್ಲ.
    ಇದೆ ರೀತಿ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿಕೆರೆ, ಬಳಸೋಕೆರೆ, ಸಿರಿಯೂರು ಕೆರೆ ಹಾಗು ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಬಳಸೋಕೆರೆ, ಕೆಂಚವೀರಪ್ಪನ ಕೆರೆ, ಬಸವನಕಟ್ಟೆ ಕೆರೆ ಮತ್ತು ನಾಯಕನ ಕೆರೆ ಸೇರಿದಂತೆ ಒಟ್ಟು ೭ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಮುಕ್ತಾಯಗೊಂಡಿರುತ್ತದೆ. ಆದರೆ ತೆರವು ಕಾರ್ಯಾಚರಣೆ ನಡೆದಿರುವುದಿಲ್ಲ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಕೆರೆಗಳ ಒತ್ತುವರಿ ಕಾರ್ಯ ಬಿರುಸಿನಿಂದ ನಡೆದಿದೆ. ಆದರೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಳಂಬವಾಗುತ್ತಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಹತ್ವಾಂಕ್ಷೆ ಯೋಜನೆಗಳಲ್ಲಿ ಒಂದಾದ ಕ್ಯಾಚ್ ದ ರೈನ್(ಮಳೆ ನೀರು ಹಿಡಿಯಿರಿ) ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
    ಮುಂದಿನ ವರ್ಷ ಮಾರ್ಚ್ ೨೨ರಂದು ಕ್ಷೇತ್ರದಲ್ಲಿ ಕೆರೆ ಕಟ್ಟೆಗಳ ಉತ್ಸವ ನಡೆಯುತ್ತಿದ್ದು, ಉತ್ಸವಕ್ಕೆ ಪೂರಕವೆಂಬಂತೆ ಹಾಗು ಕ್ಯಾಚ್ ದ ರೈನ್ ಯೋಜನೆಗೆ ಹಿಂಬುಕೊಡಲು ತಕ್ಷಣ ತಾಲೂಕು ಆಡಳಿತ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ತುರ್ತಾಗಿ ನಡೆಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಮುಖಂಡರುಗಳಾದ ಆರ್. ವೇಣುಗೋಪಾಲ್, ಮುರುಗೇಶ್, ಚಂದ್ರಶೇಖರ್, ಇಂದ್ರಾಣಿ, ಶೈಲಜಾ ಮಹೇಶ್, ಮೊಹಮ್ಮದ್ ಹನೀಫ್, ಪ್ರಸನ್ನ, ವೆಂಕಟೇಶ್, ಶಂಭೂಗೌಡ, ನಾಗೇಶ್, ಉಮೇಶ್‌ನಾಯ್ಕ, ಕುಮಾರನಾಯ್ಕ, ಕಸ್ನಾನಾಯ್ಕ, ಪಾಂಡುರಂಗೇಗೌಡ ಸೇರಿದಂತೆ ಇನ್ನೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಆದರ್ಶತನ ಮೈಗೂಡಿಸಿಕೊಂಡು ಮುನ್ನಡೆಯಿರಿ : ಬಿಳಿಕಿ ಶ್ರೀ

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಹುಟ್ಟುಹಬ್ಬದ ಅಂಗವಾಗಿ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಒಳ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು.
    ಭದ್ರಾವತಿ, ಏ. ೧: ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಅವರು ಶುಕ್ರವಾರ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಒಳ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಹುಟ್ಟುಹಬ್ಬವನ್ನು ಮಹಾಸಭಾ ವತಿಯಿಂದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಮಹಾಸಭಾ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಅರಳಿಹಳ್ಳಿ ರವಿ(ರೇವಪ್ಪ), ಬಾರಂದೂರು ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಕಾರ್ಯದರ್ಶಿ ಕವಿತಾ ಸುರೇಶ್, ಯುವ ಘಟಕದ ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷ ಮಹಾದೇವ, ಖಜಾಂಚಿ ರಮೇಶ್,  ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ರವಿಕುಮಾರ್, ಜಗದೀಶ್ ಪಾಟೀಲ್, ಸಚ್ಚಿದಾನಂದ, ಬಿ.ಎಸ್ ಮಹೇಶ್‌ಕುಮಾರ್, ಕಲ್ಪನಾ, ಲಕ್ಷ್ಮಿಕಾಂತ್, ಕುಮಾರ್ ಹಾಗು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಹುಟ್ಟುಹಬ್ಬ:
   ಉಜ್ಜನಿಪುರ ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲೂ ಮಹಾಸಭಾ ವತಿಯಿಂದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟುಹಬ್ಬ ಆಚರಿಸಲಾಯಿತು.
    ಬಿಳಿಕಿ ಶ್ರೀಗಳು ಹಿರಿಯ ನಾಗರೀಕರೊಂದಿಗೆ ಹುಟ್ಟುಹಬ್ಬದ ಸಂಭ್ರಮ ಹಂಚಿಕೊಂಡರು. ಮಹಾಸಭಾ ಪ್ರಮುಖರು, ಹಿರಿಯ ನಾಗರೀಕರ ಆರೈಕೆ ಕೇಂದ್ರದ ಮೇಲ್ವಿಚಾರಕರು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, March 31, 2022

ಏ.೧ರಂದು ಹಾಲು, ಬ್ರೆಡ್, ಹಣ್ಣು ವಿತರಣೆ

    ಭದ್ರಾವತಿ, ಮಾ. ೩೧: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನದ ಅಂಗವಾಗಿ ಏ.೧ರಂದು ಬೆಳಿಗ್ಗೆ ೧೦ ಗಂಟೆಗೆ ಹಾಲು, ಬ್ರೆಡ್ ಮತ್ತು ಹಣ್ಣು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಹಾಸಭಾ ಪ್ರಧಾನ ಕಾರ್ಯದರ್ಶಿ ಅರಳಿಹಳ್ಳಿ ರವಿ ಕೋರಿದ್ದಾರೆ.

ಹಲಾಲ್ ಅಭಿಯಾನ : ಬಜರಂಗದಳ ಕಾರ್ಯಕರ್ತರ ವಿರುದ್ಧ ಹಲ್ಲೆ, ಬೆದರಿಕೆ ಪ್ರಕರಣ ದಾಖಲು

ಸಿ.ಎಂ ಖಾದರ್ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಅಭಿಯಾನ : ಬಜರಂಗದಳ ಆರೋಪ

ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಬಜರಂಗದಳ ಕಾರ್ಯಕರ್ತರು ಕೋಳಿ ಹಾಗು ಮಾಂಸದಂಗಡಿಗಳಲ್ಲಿ ಹಲಾಲ್ ಅಭಿಮಾನ ಕೈಗೊಂಡಿರುವುದು.
    ಭದ್ರಾವತಿ, ಮಾ. ೩೧: ಒಂದೆಡೆ ಹಲಾಲ್ ಅಭಿಯಾನದ ಹೆಸರಿನಲ್ಲಿ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು, ಮತ್ತೊಂದೆಡೆ ಮಾಂಸದಂಗಡಿ ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದಾರೆಂಬ ಎರಡು ಪ್ರತ್ಯೇಕ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಘಟನೆ ನಡೆದಿದೆ.
    ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಹಲಾಲ್ ಸಂಬಂಧ ಅಭಿಯಾನ ಕೈಗೊಂಡು ಬಿ.ಎಚ್ ರಸ್ತೆ ಜನತಾ ಹೋಟೆಲ್‌ನಲ್ಲಿ ಹಿಂದುಗಳಿಗೆ ಹಲಾಲ್ ಅಲ್ಲದ ಊಟ ನೀಡುವಂತೆ ಮಾಲೀಕರಿಗೆ ಮನವಿ ಮಾಡಿದ್ದು, ಈ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಕೆಲವು ವ್ಯಕ್ತಿಗಳು ಈ ವಿಚಾರಕ್ಕೆ ವಿನಾಕಾರಣ ತಕರಾರು ತೆಗೆದಿದ್ದಾರೆ. ಈ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
    ಈ ಸಂಬಂಧ ಬಜರಂಗದಳ ಪ್ರಮುಖರಾದ ವಡಿವೇಲು, ಶ್ರೀಕಾಂತ್, ಗುಂಡ, ಸವಾಯಿ ಸಿಂಗ್, ಮಂಜ, ಲೋಕಿ ಮತ್ತು ಸಂಜು ಸೇರಿದಂತೆ ಒಟ್ಟು ೭ ಜನರ ವಿರುದ್ಧ  ಹಲ್ಲೆ ನಡೆಸಿದ್ದಾರೆಂಬ ದೂರು ಹಳೇನಗರ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.
    ಹೊಸಮನೆ ಶಿವಾಜಿ ವೃತ್ತದಲ್ಲಿ ಅಭಿಯಾನ ಕೈಗೊಂಡಿದ್ದ ಬಜರಂಗದಳ ಕಾರ್ಯಕರ್ತರು, ಕೋಳಿ ಹಾಗು ಮಾಂಸದಂಗಡಿಗಳಿಗೆ ಭೇಟಿ ನೀಡಿ ಈ ಭಾಗದಲ್ಲಿ ಶೇ.೯೦ರಷ್ಟು ಹಿಂದೂಗಳಿದ್ದು, ಈ ಹಿನ್ನಲೆಯಲ್ಲಿ ಹಲಾಲ್ ಅಲ್ಲದೆ ಮಾಂಸ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಮಾಂಸದಂಗಡಿಯಲ್ಲಿ ಹಲಾಲ್ ಅಲ್ಲದ ಮಾಂಸ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಇದರಿಂದಾಗಿ ಅಂಗಡಿ ಮಾಲೀಕ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಬೆದರಿಕೆ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
       ವಿನಾಕಾರಣ ಪ್ರಕರಣ ದಾಖಲು:
    ಬಜರಂಗದಳ ಪ್ರಮುಖ್ ವಡಿವೇಲು ಮಾತನಾಡಿ, ನಮ್ಮ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ. ಜನತಾ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಎಸ್‌ಡಿಪಿಐ ಕಾರ್ಯಕರ್ತನೋರ್ವ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಆಕ್ರೋಶಗೊಂಡು ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರವನ್ನು ದೊಡ್ಡದು ಮಾಡಿ ಕಾರ್ಯಕರ್ತರ ವಿರುದ್ಧ ಹಲ್ಲೆ ಮಾಡಿದ್ದಾರೆಂದು ಸುಳ್ಳು ದೂರು ದಾಖಲಿಸಲಾಗಿದೆ ಎಂದರು.
        ಸಿ.ಎಂ ಖಾದರ್ ವಿರುದ್ಧ ಆರೋಪ :
    ಕೇಂದ್ರ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಸಹೋದರ ಸಿ.ಎಂ ಖಾದರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬಜರಂಗದಳ ಪ್ರಮುಖ್ ವಡಿವೇಲು ತಿಳಿಸಿದ್ದಾರೆ.
 ಹಲಾಲ್ ಸಂಬಂಧ ಸಿ.ಎಂ ಖಾದರ್ ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಅಭಿಮಾನ ಕೈಗೊಳ್ಳುವಂತಾಯಿತು. ಪ್ರಸ್ತುತ ನಡೆದಿರುವ ಅಹಿತಕರ ಬೆಳವಣಿಗೆಗಳಿಗೆ ಸಿ.ಎಂ ಖಾದರ್ ಕಾರಣಕರ್ತರಾಗಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ ವಿನಾಕಾರಣ ಸುಳ್ಳು ದೂರು ನೀಡಿರುವ ಎಸ್‌ಡಿಪಿಐ ಕಾರ್ಯಕರ್ತನ ವಿರುದ್ಧ ಸಹ ದೂರು ನೀಡಲಾಗುವುದು ಎಂದರು.
      ಮುಸ್ಲಿಂ ವ್ಯಾಪಾರಸ್ಥರ ಮೇಲೆ ಹಲ್ಲೆ :
    ನಗರದದಲ್ಲಿ ಬಜರಂಗದಳ ಕಾರ್ಯಕರ್ತರು ಕೋಳಿ ಹಾಗು ಮಾಂಸದಂಗಡಿಗಳಿಗೆ ಹಾಗು ಹೋಟೆಲ್‌ಗಳಿಗೆ ನುಗ್ಗಿ ಮುಸ್ಲಿಂ ವ್ಯಾಪಾರಸ್ಥರು ಹಾಗು ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದು, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
    ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಇದೀಗ ಹಲಾಲ್ ವಿಚಾರಕ್ಕೆ ಸಂಬಂಧಿಸಿದಂತೆ  ಬಜರಂಗದಳ ಕಾರ್ಯಕರ್ತರ ವರ್ತನೆ ಮಿತಿಮೀರಿದ್ದು, ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಸ್ಲಿಂ ವ್ಯಾಪಾರಸ್ಥರಿಗೆ ರಕ್ಷಣೆ ನೀಡಬೇಕೆಂದು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸಯ್ಯದ್ ರಿಜ್ವಾನ್ ಒತ್ತಾಯಿಸಿದ್ದಾರೆ.