ಭದ್ರಾವತಿ, ಮೇ. 26: ನಗರಸಭೆ ವಾರ್ಡ್ ನಂ.3ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಸ್ಥಾನವನ್ನು ಎಲ್ಲರ ಸಹಕಾರದೊಂದಿಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಸಿದ್ಧವಿದ್ದು ಅಗತ್ಯವಿರುವ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಾರಿಯಮ್ಮ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ವಾರ್ಡ್ ನಗರಸಭಾ ಸದಸ್ಯ ಜಾರ್ಜ್, ಶಿಲ್ಪಿ ಜಯರಾಂ, ಕೃಷ್ಣಮೂರ್ತಿ , ಪುಟ್ಟಸ್ವಾಮಿ, ಗೋವಿಂದಪ್ಪ , ಶ್ರೀನಿವಾಸ ನಾಯ್ಡು, ಮಹಾದೇವಯ್ಯ, ಮಾಣಿಕ್ಯಂ, ಮಹಾದೇವ, ಉಮೇಶ, ಕೃಷ್ಣ, ತಿಮ್ಮಯ್ಯ, ವೆಂಕಟೇಶ್ ಮತ್ತು ಅರ್ಚಕರಾದ ಷಣ್ಮುಗಂ, ರಾಘು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು . ದೇವಸ್ಥಾನ ಗೋಪುರವನ್ನು ಸುಮಾರು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
Thursday, May 26, 2022
ವಿಐಎಸ್ಎಲ್ ಕಾರ್ಮಿಕ ಸಂಘದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜೆ.ಸಿ ರಾಜಮ್ಮ ನಿಧನ
ಜೆ.ಸಿ ರಾಜಮ್ಮ
ಭದ್ರಾವತಿ, ಮೇ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕ ಸಂಘದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್) ನಿವಾಸಿ ಜೆ.ಸಿ ರಾಜಮ್ಮ(೮೭) ಗುರುವಾರ ನಿಧನ ಹೊಂದಿದರು.
೫ ಜನ ಸಹೋದರಿಯರು ಮತ್ತು ೬ ಜನ ಸಹೋದರರು ಇದ್ದರು. ರಾಜಮ್ಮ ನಗರದ ವಿಐಎಸ್ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿದ್ದು, ಕಾರ್ಮಿಕ ಸಂಘಕ್ಕೆ ಆಯ್ಕೆಯಾಗಿ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ತಮ್ಮ ಅವಧಿಯಲ್ಲಿ ಕಾರ್ಮಿಕರಿಗೆ ಬರಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ಇವರ ಅಂತ್ಯಕ್ರಿಯೆ ಸಂಜೆ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
ಇವರ ನಿಧನಕ್ಕೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಎನ್ ಬಾಲಕೃಷ್ಣ, ಜೆ.ಎನ್ ಚಂದ್ರಹಾಸ, ಎಸ್. ನರಸಿಂಹಚಾರ್, ಪ್ರಸ್ತುತ ಕಾರ್ಮಿಕ ಸಂಘದ ಅಧ್ಯಕ್ಷರಾಗಿರುವ ಜೆ. ಜಗದೀಶ್ ಹಾಗು ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಲಿಂಗಯ್ಯ, ಪದಾಧಿಕಾರಿಗಳಾದ ಹನುಮಂತರಾವ್, ಶಂಕರ್, ಮಹೇಶಪ್ಪ, ಬಸವರಾಜ್, ಜಯರಾಜ್, ಕೆಂಪಯ್ಯ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ರಮಕಾಂತ್ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
೧೦೦ ಲೀಟರ್ ಮಂಡಕ್ಕೆ ಬೆಲೆ ೪೫೦ ರು. ನಿಗದಿ
ಭದ್ರಾವತಿ ಸೀಗೆಬಾಗಿಯಲ್ಲಿ ಗುರವಾರ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆ ನಡೆಯಿತು.
ಭದ್ರಾವತಿ, ಮೇ. ೨೬: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ೧೦೦ ಲೀಟರ್ ಮಂಡಕ್ಕಿ ಬೆಲೆ ೪೫೦ ರು. ನಿಗದಿಪಡಿಸಲಾಗಿದ್ದು, ಎಲ್ಲರೂ ಸಹಕರಿಸುವಂತೆ ಮಂಡಕ್ಕಿ ಉತ್ಪಾದನಾ ಮಾಲೀಕರು ಮನವಿ ಮಾಡಿದರು.
ಗುರುವಾರ ನಗರಸಭೆ ವ್ಯಾಪ್ತಿಯ ಸೀಗೆಬಾಗಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆಯಲ್ಲಿ ಮಾತನಾಡಿದ ಮಂಡಕ್ಕಿ ಉತ್ಪಾದನಾ ಮಾಲೀಕರು, ಭತ್ತದ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೂಲಿ ಹೆಚ್ಚಳ ಹಾಗು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಂಡಕ್ಕಿ ಉತ್ಪಾದಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಮಂಡಕ್ಕಿ ಉದ್ಯಮ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕೂಲಿ ಕಾರ್ಮಿಕರು ದಿನದ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಪ್ರಸ್ತುತ ಮಂಡಕ್ಕಿ ದರ ಅತ್ಯಂತ ಕಡಿಮೆ ಇದ್ದು, ಈ ದರದಲ್ಲಿ ಮಂಡಕ್ಕಿ ಉದ್ಯಮ ನಡೆಸುವುದು ಅಸಾಧ್ಯವಾಗಿದೆ. ಮಂಡಕ್ಕಿ ಹೆಚ್ಚಾಗಿ ಬಡವರ್ಗದವರು ಬಳಸುವ ಆಹಾರ ಪದಾರ್ಥವಾಗಿದ್ದು, ಇಂತಹ ಆಹಾರ ಪದಾರ್ಥದ ಬೆಲೆ ಏರಿಕೆ ಮಾಡುವುದು ಇಂದು ಅನಿವಾರ್ಯವಾಗಿದೆ. ಈಗಾಗಲೇ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಹಕಾರ ಸಂಘದವರು ಸಭೆ ನಡೆಸಿ ಮಂಡಕ್ಕಿ ಬೆಲೆ ಏರಿಕೆ ಮಾಡಲು ತೀರ್ಮಾಣ ಕೈಗೊಂಡಿದ್ದಾರೆ. ೧೦೦ ಲೀಟರ್ ಮಂಡಕ್ಕಿ ದರವನ್ನು ೪೫೦ ರು.ಗಳಿಗೆ ನಿಗದಿ ಪಡಿಸಲಾಗುತ್ತಿದೆ. ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಖಾದರ್ ಖಾನ್ ಸಭೆ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಚಿಕ್ಕಮಗಳೂರಿನ ಪಾಪಣ್ಣ, ತರೀಕೆರೆಯ ಚಾಂದ್ ಪಾಷ, ಬೇಲೂರಿನ ತಜಮ್ಮುಲ್ ಪಾಷ, ಶಿವಮೊಗ್ಗದ ಚಂದ್ರಣ್ಣ, ಹಾಸನದ ಕೃಷ್ಣೇಗೌಡ ಸೇರಿದಂತೆ
ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಮಂಡಕ್ಕಿ ಉತ್ಪಾದಕರು ಹಾಗೂ ಮಾರಾಟಗಾರರು ಪಾಲ್ಗೊಂಡಿದ್ದರು.
ಮಂಡಕ್ಕಿ ಉತ್ಪಾದನೆದಾರರು, ಮಾರಾಟಗಾರರ ಸಭೆ
ಭದ್ರಾವತಿ, ಮೇ. 26: ಸೀಗೆಬಾಗಿ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಭತ್ತದ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೂಲಿ ಹೆಚ್ಚಳ ಹಾಗು ಕಚ್ಚಾ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಯಿತು. ಶಿವಮೊಗ್ಗ ಚಿಕ್ಕಮಗಳೂರು ಮತ್ತು ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಮಂಡಕ್ಕಿ ಉತ್ಪಾದಕರು ಹಾಗೂ ಮಾರಾಟಗಾರರು ಪಾಲ್ಗೊಂಡಿದ್ದರು.
Wednesday, May 25, 2022
ಬಿಳಿಕಿ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಅಂತಿಮಗೊಳಿಸಿ
ಭದ್ರಾವತಿ ನಗರದ ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆ ಡಾಬಾ ಎದುರಿನ ಬಿಳಿಕಿ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯನ್ನು ಹಿಂಪಡೆಯಬಾರದು. ಯಾವುದೇ ಹೊಸ ಹೆಸರನ್ನು ಅನುಮೋದಿಸಬಾರದು ಎಂದು ಆಗ್ರಹಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನುಕುಮಾರ್ ಅವರಿಗೆ ತಾಲೂಕು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ.
ಭದ್ರಾವತಿ, ಮೇ. ೨೫ : ನಗರದ ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆ ಡಾಬಾ ಎದುರಿನ ಬಿಳಿಕಿ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯನ್ನು ಹಿಂಪಡೆಯಬಾರದು. ಯಾವುದೇ ಹೊಸ ಹೆಸರನ್ನು ಅನುಮೋದಿಸಬಾರದು ಎಂದು ಆಗ್ರಹಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನುಕುಮಾರ್ ಅವರಿಗೆ ತಾಲೂಕು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ.
ಈ ಹಿಂದೆ ನಗರಸಭೆ ಆಡಳಿತಕ್ಕೆ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಜನವರಿ ೨೦೧೬ರಂದು ಸಾಮಾನ್ಯಸಭೆಯಲ್ಲಿ ಅನುಮೋದನೆ ಸಹ ಪಡೆಯಲಾಗಿದೆ. ೨೦೧೯ರಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಂದ ಅನುಮತಿ ಸಹ ಪಡೆಯಲಾಗಿರುತ್ತದೆ. ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಇದೀಗ ಸರ್ಕಾರದ ಮಟ್ಟದಲ್ಲಿದೆ. ಇದೀಗ ಈ ವೃತ್ತಕ್ಕೆ ಬೇರೆಂದು ಹೆಸರನ್ನು ನಾಮಕರಣ ಗೊಳಿಸುವಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಲಾಗಿದೆ.
ಸಂಘದ ಅಧ್ಯಕ್ಷ ಎ ಟಿ ರವಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್, ಖಜಾಂಚಿ ಎ.ಎನ್ ಕಾರ್ತಿಕ್, ನಂಜುಂಡೇಗೌಡ, ಕೃಷ್ಣೇಗೌಡ, ಉಮೇಶ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸಿ
ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸಿ : ಶಶಿಕುಮಾರ್ ಗೌಡ ಆಗ್ರಹ
ಭದ್ರಾವತಿ ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ದಿವಂಗತ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸುವಂತೆ ಹಾಗು ೩೨ನೇ ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಭದ್ರಾವತಿ, ಮೇ. ೨೫: ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ದಿವಂಗತ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸುವಂತೆ ಹಾಗು ೩೨ನೇ ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡಪರ ಹಾಗು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಬಿ.ವಿ ಗಿರೀಶ್ರವರ ಮೊದಲ ವರ್ಷದ ಪುಣ್ಯಸ್ಮರಣೆಯಂದು ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ತಹಸೀಲ್ದಾರ್ ಹಾಗು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ವರ್ಗದ ಬಿಪಿಎಲ್ ಪಡಿತರ ಚೀಟಿ ಕುಟುಂಬಗಳಿಗೆ ನಗರಸಭೆ ವತಿಯಿಂದ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಆದರೆ ವಾರ್ಡ್ ನಂ.೩೨ರ ಫಿಲ್ಟರ್ ಶೆಡ್ನಲ್ಲಿ ವಾಸಿಸುತ್ತಿರುವ ಸುಮಾರು ೨೦೦ ಬಿಪಿಎಲ್ ಪಡಿತರ ಚೀಟಿದಾರರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿರುವುದಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಕೈಗೊಂಡಿರುವುದಿಲ್ಲ. ಮುಂದಿನ ಒಂದು ವಾರದೊಳಗೆ ಬಡ ಜನರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವಂತೆ ಮನವಿ ಮಾಡಿದ್ದಾರೆ.
ವಾರ್ಡ್ ನಂ.೩೨ರ ಫಿಲ್ಟರ್ಶೆಡ್ನಲ್ಲಿ ಚರಂಡಿ ನಿರ್ವಹಣೆ ಸರಿಯಾಗಿ ಕೈಗೊಳ್ಳದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಲ್ಲದೆ ಮನೆ ಮನೆಗೆ ಸಂಪರ್ಕ ಕಲ್ಪಿಸಿರುವ ಕುಡಿಯುವ ನೀರು ಕಳೆದ ಸುಮಾರು ೩ ತಿಂಗಳಿನಿಂದ ಮಣ್ಣು ಮಿಶ್ರಿತವಾಗಿ ಕೂಡಿದೆ. ಈ ಸಂಬಂಧ ಸಹ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Tuesday, May 24, 2022
ಕರ್ತವ್ಯಕ್ಕೆ ಅಡ್ಡಿ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ವೈದ್ಯರು, ಸಿಬ್ಬಂದಿಗಳಿಂದ ಮನವಿ
ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದ್ದು, ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರಿಗೆ ಮನವಿ ಸಲ್ಲಿಸಲಾಗಿದೆ
ಭದ್ರಾವತಿ, ಮೇ. ೨೪: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದ್ದು, ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಆರೋಗ್ಯ ಸೇವೆ ಪಡೆಯಲು ಆಸ್ಪತ್ರೆಗೆ ಪ್ರತಿದಿನ ಸಾವಿರಾರು ಮಂದಿ ಬರುತ್ತಿದ್ದು, ವೈದ್ಯರು ಹಾಗು ಸಿಬ್ಬಂದಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ರಾತ್ರಿ ವೇಳೆ ಆಸ್ಪತ್ರೆಗೆ ಬರುವ ಕೆಲವರು ರಾಜಕಾರಣಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಸೋಗಿನಲ್ಲಿ ವೈದ್ಯರು ಹಾಗು ಸಿಬ್ಬಂದಿಗಳ ವಿರುದ್ಧ ಅಸಭ್ಯವಾಗಿ ವರ್ತಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದ್ದು, ಮುಂದೊಂದು ದಿನ ವೈದ್ಯರು, ಸಿಬ್ಬಂದಿಗಳ ಮೇಲೆ ಹಲ್ಲೆ ಸಹ ನಡೆಯುವ ಸಾಧ್ಯತೆಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ತಕ್ಷಣ ತುರ್ತು ಕ್ರಮ ಕೈಗೊಂಡು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ಕಲ್ಪಿಸಿಕೊಡಬೇಕೆಂದು ಆಗ್ರಹಿಸಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ವೈದ್ಯರಾದ ಡಾ. ಡಿ.ಎಸ್ ಶಿವಪ್ರಕಾಶ್, ಡಾ. ಮಂಜುನಾಥ್, ಡಾ. ವರ್ಷ, ಕ್ಷ-ಕಿರಣ ತಂತ್ರಜ್ಞ ಸಿದ್ದೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಕಾಂತ್ ಹಾಗು ಡಿ ಗ್ರೂಪ್ ನೌಕರರಾದ ಮುನಿರಾಜ್, ಶಶಿಕುಮಾರ್, ಸಿದ್ದಪ್ಪ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Subscribe to:
Posts (Atom)