Sunday, June 12, 2022

ಎಲ್ಲರೂ ಶಿಕ್ಷಣವಂತರಾಗುವ ಮೂಲಕ ಅಂಬೇಡ್ಕರ್ ಆಶಯ ಈಡೇರಿಸಲಿ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಜೂ. ೧೨: ವಿಶ್ವ ಜ್ಞಾನಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ನಮಗೆ ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು, ಸಂವಿಧಾನ ನಮ್ಮೆಲ್ಲರನ್ನೂ ಒಗ್ಗೂಡಿ ಬದುಕುವಂತೆ ಮಾಡಿದೆ. ಅಲ್ಲದೆ ಇದರಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಿದೆ. ಅಂಬೇಡ್ಕರ್‌ರವರ ಆಶಯದಂತೆ ಭವಿಷ್ಯದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಸಂಘ-ಸಂಸ್ಥೆಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ನಗರದ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸರ್ವ ಜನಾಂಗದ ಶಾಂತಿಯ ತೋಟ ಎಂಬ ರಾಷ್ಟ್ರಕವಿ ಕುವೆಂಪುರವರ ನುಡಿಗೆ ಸಾರ್ಥಕತೆ ತಂದುಕೊಡುವ ಕೆಲಸವನ್ನು ಕೆಜಿಎನ್ ನೌಜವಾನ್ ಕಮಿಟಿ ಕೈಗೊಳ್ಳುತ್ತಿರುವುದು  ಶ್ಲಾಘನೀಯ.  ಎಲ್ಲಾ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
     ಎಲ್ಲಾ ಧರ್ಮದ ಸುಮಾರು ೪೦ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಆಮ್ ಆದ್ಮಿ ಪಾರ್ಟಿ ಮುಖಂಡ, ಸಮಾಜ ಸೇವಕ ಮಡಿಕಲ್ ಆನಂದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್, ಸಿಆರ್‌ಪಿ ಇಮ್ತಿಯಾಜ್, ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ ಮುತುರ್ಜಾಖಾನ್, ಶಿಕ್ಷಕ ಮುನಿರ್ ಸಾಬ್, ಜಾವಿದ್ ಪಾಷ, ರೇಷ್ಮಾ ಬಾನು, ಉಪನ್ಯಾಸಕ ನಾಸಿರ್ ಖಾನ್, ಪತ್ರಕರ್ತ ಮುಜಾಸಿರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆಜಿಎನ್ ನೌಜವಾನ್ ಕಮಿಟಿ ಅಧ್ಯಕ್ಷ ಅಸಾದುಲ್ಲಾ ಅಧ್ಯಕ್ಷತೆ ವಹಿಸಿದ್ದರು.  ಸೋಫಿಯಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ನದೀಮ್ ಪಾಷ ಸ್ವಾಗತಿಸಿದರು. ಮುಸ್ವೀರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಶಿಕ್ಷಕಿ ಬೀ ಬೀ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಮುಸ್ತಫಾ, ಇಮ್ರಾನ್, ಶಾಹಿದ್, ರಂಗಣ್ಣ, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Saturday, June 11, 2022

ನಾವು ಪ್ರಕೃತಿ ಉಳಿಸುವ ನಮ್ಮ ಧರ್ಮ ಪಾಲಿಸುತ್ತಿಲ್ಲ : ಡಾ. ಅನುರಾಧ ಪಟೇಲ್

ಭದ್ರಾವತಿ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಧನ್ವಂತರಿ ಉದ್ಯಾನವನದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಶನಿವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
    ಭದ್ರಾವತಿ, ಜೂ. ೧೧ : ಪ್ರಕೃತಿ ನಮ್ಮ ಬದುಕಿಗೆ ಅಗತ್ಯವಿರುವ ಎಲ್ಲವನ್ನು ನೀಡುವ ಮೂಲಕ ಅದರ ಧರ್ಮವನ್ನು ಪಾಲಿಸುತ್ತಿದೆ. ಆದರೆ ನಾವು ಪ್ರಕೃತಿ ಉಳಿಸುವ ನಮ್ಮ ಧರ್ಮವನ್ನು ಪಾಲಿಸುತ್ತಿಲ್ಲ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ವಿಷಾದ ವ್ಯಕ್ತಪಡಿಸಿದರು.
    ಅವರು ವೇದಿಕೆ ವತಿಯಿಂದ ಶನಿವಾರ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಧನ್ವಂತರಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಕೃತಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಇದನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕೆಂದರು.  
    ಸಹಾಯಕ ಅರಣ್ಯಾಧಿಕಾರಿ ರಮೇಶ್ ಪುಟ್ನಳ್ಳಿ, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಇನ್ನಿತರರು ಮಾತನಾಡಿ, ಪ್ರತಿಯೊಬ್ಬರು ಪರಿಸರ ಉಳಿಸುವ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ.  ಉಪಸ್ಥಿತರಿದ್ದರು.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ, ಪೌರ ಕಾರ್ಮಿಕರಾದ ಅಂತೋಣಿ, ಶಾಂತ ಹಾಗು ಉದ್ಯಾನವನ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ಹಿರಿಯರಾದ ನಂಜುಂಡೇಗೌಡ, ತಮ್ಮಯ್ಯಗೌಡ, ರಾಜಣ್ಣ, ಶಿವರಾಮಣ್ಣ,  ರೆಡ್ಡಿ, ಭೈರಪ್ಪಗೌಡ ಹಾಗು ದಿನೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಸಿ ಸಿಹಿ ಹಂಚಲಾಯಿತು. ವೇದಿಕೆ ಕಾರ್ಯದರ್ಶಿ ಲತಾ ಪ್ರಭಾಕರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಶೀಲಾ ರವಿ ವಂದಿಸಿದರು.

ಏಕಾಏಕಿ ಬೆಂಕಿ : ನಡುರಸ್ತೆಯಲ್ಲಿಯೇ ಸುಟ್ಟು ಕರಕಲಾದ ವಾಹನ

ಚಲಿಸುತ್ತಿದ್ದ ಓಮ್ನಿ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ನಡು ರಸ್ತೆಯಲ್ಲಿಯೇ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಶನಿವಾರ ಭದ್ರಾವತಿ ತಾಲೂಕಿನ ಬಿಆರ್‌ಪಿ ಗೋಣಿಬೀಡು ಸಮೀಪ ನಡೆದಿದೆ.
    ಭದ್ರಾವತಿ, ಜೂ. ೧೧: ಚಲಿಸುತ್ತಿದ್ದ ಓಮ್ನಿ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ನಡು ರಸ್ತೆಯಲ್ಲಿಯೇ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಶನಿವಾರ ತಾಲೂಕಿನ ಬಿಆರ್‌ಪಿ ಗೋಣಿಬೀಡು ಸಮೀಪ ನಡೆದಿದೆ.
    ತರೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಓಮ್ನಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಮಹಮದ್ ಅರ್ಷದ್ ಓಮ್ನಿ ವಾಹನದಿಂದ ಕೆಳಗೆ ಇಳಿದು ಹೊರ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ವಾಹನವನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡಿದ್ದು, ತಕ್ಷಣ ಸ್ಥಳೀಯರು ಅಗ್ನಿ ನಂದಿಸಲು ಮುಂದಾಗಿದ್ದಾರೆ. ಆದರೂ ಅಗ್ನಿ ಮತ್ತಷ್ಟು ವ್ಯಾಪಕಗೊಂಡ ಹಿನ್ನಲೆಯಲ್ಲಿ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
    ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಸುಬ್ರಮಣ್ಯ, ಶ್ರೀನಿವಾಸ್, ವಿನೂತನ್, ಕರಿಯಣ್ಣ ಮತ್ತು ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



Friday, June 10, 2022

ರಾಜ್ಯದಲ್ಲಿ ಬಿಎಸ್‌ಪಿ ಪಕ್ಷ ಸಂಘಟಿಸಲು ದಲಿತರೆಲ್ಲರೂ ಒಗ್ಗೂಡಿ : ರಹಮತ್ ಉಲ್ಲಾ ಖಾನ್

ಭದ್ರಾವತಿಯಲ್ಲಿ ಶುಕ್ರವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರೊ. ಬಿ. ಕೃಷ್ಣಪ್ಪನವರ ೮೫ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು. 
    ಭದ್ರಾವತಿ, ಜೂ. ೧೦: ಬಹುಜನ ಸಮಾಜ ಪಕ್ಷ ದಲಿತರ ಪಕ್ಷವಾಗಿದ್ದು, ಎಲ್ಲಾ ದಲಿತರು ಪಕ್ಷ ಸಂಘಟನೆಗೆ ಕೈಜೋಡಿಸುವ ಮೂಲಕ ಪ್ರೊ. ಬಿ. ಕೃಷ್ಣಪ್ಪನವರ ಕನಸನ್ನು ನನಸಾಗಿಸಬೇಕೆಂದು ಪಕ್ಷದ ತಾಲೂಕು ಅಧ್ಯಕ್ಷ ರಹಮತ್ ಉಲ್ಲಾ ಖಾನ್(ಸರ್ದಾರ್) ಹೇಳಿದರು.
    ಪಕ್ಷದ ವತಿಯಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ ಕೃಷ್ಣಪ್ಪನವರ ೮೫ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಪಕ್ಷವನ್ನು ಮೊದಲು ಸಂಘಟಿಸಿದವರು ಕೃಷ್ಣಪ್ಪನವರಾಗಿದ್ದು, ಆದರೆ ಅವರು ಕಂಡ ಕನಸು ನನಸು ಮಾಡಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿರುವ ದಲಿತರೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸುವ ಮೂಲಕ ಕೃಷ್ಣಪ್ಪನವರ ಕನಸು ನನಸಾಗಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪಕ್ಷ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
       ತಾಲೂಕು ಸಂಯೋಜಕ ಎಂ. ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಶೋಷಿತರ, ದಲಿತರ ಆಶಾಕಿರಣ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನಾಚರಣೆಯನ್ನು ಪಕ್ಷದ ವತಿಯಿಂದ ಸರಳವಾಗಿ ಆಚರಿಸಲಾಗುತ್ತಿದೆ. ಇಂದು ನಾವೆಲ್ಲರೂ ಅವರ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
    ಪಕ್ಷದ ಕಾರ್ಯದರ್ಶಿ  ಪಿ. ಮೂರ್ತಿ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪನವರು ದಲಿತರು ಹೋರಾಟಕ್ಕೆ ಮಾತ್ರ ಸೀಮಿತವಾಗಿರದೆ ಯಾರ ಗುಲಾಮಗಿರಿಗೂ ಒಳಗಾಗದೆ ರಾಜಕೀಯವಾಗಿ ಸಹ ಮುಂದುವರೆಯಬೇಕೆಂಬ ಉದ್ದೇಶದೊಂದಿಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯ ಕೈಗೊಂಡರು. ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಹಕ್ಕು ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಕಲ್ಪಿಸಿಕೊಟ್ಟಿದ್ದಾರೆ. ಇದನ್ನು ಅರಿತು ದಲಿತರು ಸಹ ರಾಜಕೀಯವಾಗಿ ಅಧಿಕಾರ ಹೊಂದಲು ಶಕ್ತಿ ಮೀರಿ ಶ್ರಮಿಸಬೇಕೆಂದರು.
 .ಉಪಾಧ್ಯಕ್ಷರಾದ ಚಂದ್ರು ಹಾಗೂ ಶೋಭಾ ಮೂರ್ತಿ ಉಪಸ್ಥಿತರಿದ್ದರು.  ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಗಾಲಿ ಕುರ್ಚಿ, ಪ್ರೋಟಿನ್ ಪೌಂಡರ್ ವಿತರಣೆ ಕಾರ್ಯಕ್ರಮ

ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಚಾಲನೆ

ಭದ್ರಾವತಿ, ಜೂ. ೧೦: ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಹಾಗು ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಗಾಲಿ ಕುರ್ಚಿ ಹಾಗು ಪ್ರೋಟಿನ್ ಪೌಂಡರ್ ಮತ್ತು ಮೊಟ್ಟೆ ವಿತರಣೆ ನಡೆಯಿತು.
ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಸುರೇಶ್‌ಕುಮಾರ್, ಕಾರ್ಯಾಧ್ಯಕ್ಷ ಅಭಿಲಾಷ್, ಮನೋಹರ್, ಶಿವಣ್ಣಗೌಡ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ತಾಲೂಕು ಅಧ್ಯಕ್ಷೆ ಚಂದ್ರಕಲಾ, ಪುಷ್ಪ, ಕವಿತಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಯುವ ಘಟಕದ ಅಧ್ಯಕ್ಷ ವಿಜಯ್ ಸಾರಥಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಮನಾಥ್ ಬರ್ಗೆ, ಪಿ. ಗಣೇಶ್‌ರಾವ್, ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಓರ್ವ ಫಲಾನುಭವಿಗೆ ಗಾಲಿ ಕುರ್ಚಿ ಹಾಗು ಸುಮಾರು ೫ ಮಂದಿ ಕ್ಷಯಾ ರೋಗ ಪೀಡಿತರಿಗೆ ಸುಮಾರು ೬ ತಿಂಗಳಿಗೆ ಅಗತ್ಯವಿರುವಷ್ಟು ಪ್ರೋಟಿನ್ ಪೌಂಡರ್ ಹಾಗು ಮೊಟ್ಟೆ ಉಚಿತವಾಗಿ ವಿತರಿಸಲಾಯಿತು.


ಭದ್ರಾವತಿಯಲ್ಲಿ ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಹಾಗು ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಗಾಲಿ ಕುರ್ಚಿ ಹಾಗು ಪ್ರೋಟಿನ್ ಪೌಂಡರ್ ಮತ್ತು ಮೊಟ್ಟೆ ವಿತರಣೆ ನಡೆಯಿತು.


Thursday, June 9, 2022

ತಾಲೂಕು ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ಅಸ್ತಿತ್ವಕ್ಕೆ

ನೂತನ ಅಧ್ಯಕ್ಷರಾಗಿ ದೇವಿಕಾ ನಾಗರಾಜ್ ನೇಮಕ


ನೂತನವಾಗಿ ಭದ್ರಾವತಿ ತಾಲೂಕು ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷರಾಗಿ ದೇವಿಕಾ ನಾಗರಾಜ್ ನೇಮಕಗೊಂಡಿದ್ದಾರೆ.
    ಭದ್ರಾವತಿ, ಜೂ. ೯: ನೂತನವಾಗಿ ಭದ್ರಾವತಿ ತಾಲೂಕು ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ದೇವಿಕಾ ನಾಗರಾಜ್ ನೇಮಕಗೊಂಡಿದ್ದಾರೆ.
    ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ರಾಜ್ಯಾಧ್ಯಕ್ಷೆ ನಾಗವೇಣಿಯವರ ಅಧ್ಯಕ್ಷತೆಯಲ್ಲಿ ನಗರದ ಅಪ್ಪರ್‌ಹುತ್ತಾ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ನೂತನ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.
    ಗೌರವಾಧ್ಯಕ್ಷರಾಗಿ ಪದ್ಮಾವತಿ, ಉಪಾಧ್ಯಕ್ಷರಾಗಿ ಆರತಿ ಸಿಂಗ್, ಪ್ರಧಾನ ಕಾರ್ಯದರ್ಶಿಯಾಗಿ ಕವಿತಾ ನವೀನ್, ಸಹಕಾರ್ಯದರ್ಶಿಯಾಗಿ ಸುಮಿತ್ರ ಶ್ರೀನಿವಾಸ್, ಖಜಾಂಚಿಯಾಗಿ ಭಾರತಿ ಹಾಗು ಚೈತನ್ಯ ನವೀನ್ ಮತ್ತು ನಿರ್ದೇಶಕರಾಗಿ ಪ್ರೇಮ ಶ್ರೀನಿವಾಸ್, ವೀಣಾ, ತಬಿತ, ರೋಜಾ, ಪವಿತ್ರ, ಆಶಾ, ಸೋನಿ, ಜಾನ್ಸಿ, ಶ್ರೀಲಕ್ಷ್ಮಿ, ಎಸ್. ರೂಪಾ, ಮಾಧುರಿ ಮತ್ತು ಕಮಲ ನೇಮಕಗೊಂಡಿದ್ದಾರೆ.

ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್‌ಗೆ ಚಿನ್ನದ ಪದಕ

೩ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್‌ರವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಭದ್ರಾವತಿ, ಜೂ. ೯: ೩ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್‌ರವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್ ಇಂಜನಿಯರಿಂಗ್ ಕಾಲೇಜಿನಲ್ಲಿ ಯೋಗ ಗಂಗೋತ್ರಿ ವತಿಯಿಂದ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೬೦ ವರ್ಷ ಮೇಲ್ಪಟ್ಟವರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್‌ರವರು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಕರ್ನಾಟಕ ಯೋಗ ಸಂಸ್ಥೆ ಕಾರ್ಯದರ್ಶಿ ಡಿ. ಪುಟ್ಟೇಗೌಡ ಹಾಗು ಕ್ರೀಡಾಭಿಮಾನಿಗಳು ನಾಗರಾಜ್‌ರವರನ್ನು ಅಭಿನಂದಿಸಿದ್ದಾರೆ.