Thursday, June 23, 2022

ಕೋಟ್ಪಾ ಕಾಯ್ದೆಯಡಿ ದಾಳಿ : ೨,೧೦೦ ರು. ದಂಡ ವಸೂಲಾತಿ

ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಹಾಗೂ ಕಾಗದನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-೨೦೦೩ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ.
    ಭದ್ರಾವತಿ, ಜೂ. ೨೩ : ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಹಾಗೂ ಕಾಗದನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-೨೦೦೩ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ.
  ಉಜ್ಜನಿಪುರ ಮತ್ತು ಕಾಗದನಗರದ ಹಲವೆಡೆ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಒಟ್ಟು ೨,೧೦೦ ರೂ  ದಂಡ ವಿಧಿಸಲಾಯಿತು. ಅಲ್ಲದೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ವಿ ಅಶೋಕ್, ಎಚ್‌ಐಓ ಆನಂದಮೂರ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ, ಶಿವಮೊಗ್ಗ ಜಿಲ್ಲಾ  ತಂಬಾಕು ನಿಯಂತ್ರಣ ಕೋಶದ ರವಿರಾಜ್, ಪೇಪರ್ ಟೌನ್  ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ್ ಹಾಗೂ ನಗರ ಆರೋಗ್ಯ ಕೇಂದ್ರದ ಮನೋಹರ್, ಚೇತನ್ ಪಾಲ್ಗೊಂಡಿದ್ದರು.



೭೦ರ ಪೈಕಿ ೨೫ ಕೆರೆಗಳ ಬೌಂಡರಿ ನಿಗದಿ : ಹೋರಾಟಕ್ಕೆ ಸ್ಪಂದನೆ

ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೃತಜ್ಞತೆ

೨೫ನೇ ಕೆರೆ ಬೌಂಡರಿ ನಿಗದಿಪಡಿಸುವ ಕಾರ್ಯ ಭದ್ರಾವತಿ ನಗರಸಭೆ ವ್ಯಾಪ್ತಿಯ ಗೋಲ್ಡನ್ ಜ್ಯೂಬಿಲಿ ಕಾಲೋನಿ ಸಮೀಪವಿರುವ ಹುತ್ತಾ ಸರ್ವೇ ನಂ.೪೮ರ ಸರ್ಕಾರಿ ಕೆರೆಯಲ್ಲಿ ನಡೆದಿದ್ದು, ಈ ಕರೆ ೮ ಎಕರೆ ೩೬ ಗುಂಟೆ ವಿಸ್ತೀರ್ಣ ಹೊಂದಿದೆ. ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್ ಹಾಗು ಆರ್. ಮೋಹನ್‌ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ    
    ಭದ್ರಾವತಿ, ಜೂ. ೨೩ : ಅಂತರ್ಜಲ ಹೆಚ್ಚಿಸಿ ದನಗಾಹಿಗಳಿಗೆ, ಪ್ರಾಣಿಪಕ್ಷಿಗಳಿಗೆ, ರೈತರಿಗೆ ಅನುಕೂಲ ಕಲ್ಪಿಸಿ ಕೊಡುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸುಮಾರು ೭೦ ಕೆರೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ ೨೫ ಕೆರೆಗಳ ಬೌಂಡರಿ ನಿಗದಿಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಾಗು ನಗರಸಭೆ ಆಡಳಿತಕ್ಕೆ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
    ಕೆರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೇದಿಕೆ ವತಿಯಿಂದ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಈ ಹೋರಾಟಕ್ಕೆ ಇದೀಗ ಪ್ರತಿಫಲ ಲಭಿಸುತ್ತಿದೆ. ಸುಮಾರು ೭೦ ಕೆರೆಗಳ  ಬೌಂಡರಿ ನಿಗದಿಪಡಿಸಲು ಆದೇಶವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.  ೨೫ನೇ ಕೆರೆ ಬೌಂಡರಿ ನಿಗದಿಪಡಿಸುವ ಕಾರ್ಯ ನಗರಸಭೆ ವ್ಯಾಪ್ತಿಯ ಗೋಲ್ಡನ್ ಜ್ಯೂಬಿಲಿ ಕಾಲೋನಿ ಸಮೀಪವಿರುವ ಹುತ್ತಾ ಸರ್ವೇ ನಂ.೪೮ರ ಸರ್ಕಾರಿ ಕೆರೆಯಲ್ಲಿ ನಡೆದಿದ್ದು, ಈ ಕರೆ ೮ ಎಕರೆ ೩೬ ಗುಂಟೆ ವಿಸ್ತೀರ್ಣ ಹೊಂದಿದೆ. ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್ ಹಾಗು ಆರ್. ಮೋಹನ್‌ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ವೇದಿಕೆ ಅಧ್ಯಕ್ಷ ಆರ್. ವೇಣುಗೋಪಾಲ್ ಅವರನ್ನು ಅಭಿನಂದಿಸಿದರು.
    ತಹಸೀಲ್ದಾರ್ ಆರ್. ಪ್ರದೀಪ್, ಗ್ರಾಮ ಲೆಕ್ಕಾಧಿಕಾರಿ ಅನಿಲ್‌ರಾಜ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಎನ್. ದೇವೇಂದ್ರಪ್ಪ, ಪರ್ಯಾವೇಕ್ಷಕ ಎ.ಎಲ್ ನಟರಾಜ್, ಸರ್ವೇಯರ್ ಎಚ್.ಎಲ್ ಮಂಜಾನಾಯ್ಕ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಎಚ್.ಎಂ ಮನುಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗರಾಜಪುರೆ, ಕಂದಾಯ ಅಧಿಕಾರಿ ರಾಜ್‌ಕುಮಾರ್, ರಾಜ್ಯಸ್ವ ನಿರೀಕ್ಷಕ ಆರ್. ಚೇತನ್, ಸಿಬ್ಬಂದಿ ವರ್ಗದವರಾದ ದೊಡ್ಡಯ್ಯ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ದೇವರಾಜ್ ಹಾಗು ಸಿಬ್ಬಂದಿ ವರ್ಗದವರಿಗೆ ಆರ್. ವೇಣುಗೋಪಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.

Wednesday, June 22, 2022

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಾಸವಿದ್ದ ಚಿರತೆ..?

ಭದ್ರಾವತಿ ನ್ಯೂಟೌನ್ ವಸತಿ ಗೃಹದಲ್ಲಿ ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾದ ಚಿರತೆ. 

    ಭದ್ರಾವತಿ, ಜೂ. ೨೨ : ನಗರದ ನ್ಯೂಟೌನ್ ವಸತಿ ಗೃಹದಲ್ಲಿ ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾದ ಚಿರತೆ ವಿಐಎಸ್‌ಎಲ್ ಕಾರ್ಖಾನೆಯಿಂದ ಬಂದಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
    ಈ ಹಿಂದೆ ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆಯಲ್ಲಿ ಚಿರತೆ ವಾಸವಿರುವ ಬಗ್ಗೆ ಸುಳಿವುಗಳು ಲಭ್ಯವಾಗಿದ್ದವು. ಅಲ್ಲದೆ ಚಿರತೆಗೆ ನಾಯಿಗಳು ಬಲಿಯಾಗಿರುವ ಮಾಹಿತಿ ಸಹ ಲಭ್ಯವಾಗಿದ್ದವು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕೆಲವು ಕಾರ್ಮಿಕರು ಸಹ ಚಿರತೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಖಾನೆಯಲ್ಲಿ ಬೀಡುಬಿಟ್ಟು ಜಾಲಾಡಿದ್ದರು. ಅಲ್ಲದೆ ಬೋನ್ ಸಹ ಇಡಲಾಗಿತ್ತು. ಆದರೆ ಚಿರತೆ ಮಾತ್ರ ಪ್ರತ್ಯಕ್ಷವಾಗಿರಲಿಲ್ಲ.
    ಇದೀಗ ಈ ಕುರಿತು ಅರಣ್ಯ ಇಲಾಖೆ ಸಹ ಚಿರತೆ ವಿಐಎಸ್‌ಎಲ್ ಕಾರ್ಖಾನೆಯಿಂದ ಬಂದಿರುವ ಅನುಮಾನ ವ್ಯಕ್ತಪಡಿಸುತ್ತಿದೆ. ಅದರಲ್ಲೂ ಜನವಸತಿ ಪ್ರದೇಶಕ್ಕೆ ಚಿರತೆ ದೂರದಿಂದ ಬಂದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಾಸ್ತವ್ಯವಾಗಿ ಚಿರತೆ ಮೂಲ ನೆಲೆ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಉಪ ಅರಣ್ಯ ಸಂಕರ್‍ಷಣಾಧಿಕಾರಿಯಾಗಿ ಶಿವಶರಣಯ್ಯ ಅಧಿಕಾರ ಸ್ವೀಕಾರ

ಶಿವಶರಣಯ್ಯ
    ಭದ್ರಾವತಿ, ಜೂ. ೨೨ : ಇಲ್ಲಿನ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹಿರಿಯ ಎಸ್‌ಎಫ್‌ಎಸ್ ಅಧಿಕಾರಿ ಶಿವಶರಣಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.
    ಈ ಹಿಂದೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೆ.ಎಂ ಗಾಮನಗಟ್ಟಿಯವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಶಿವಶರಣಯ್ಯ ಅವರನ್ನು ನೇಮಕಗೊಳಿಸಲಾಗಿದೆ. ಶಿವಶರಣಯ್ಯರವರು ಈ ಹಿಂದೆ ಧಾರವಾಡದ ಅರಣ್ಯ ಇಲಾಖೆ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಅರಣ್ಯ ಇಲಾಖೆಯ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ, ಪೋಷಕರ ಸಭೆ

ಭದ್ರಾವತಿ ತಾಲೂಕಿನ ಸೀತಾರಾಮಪುರದ ಶ್ರೀ ಲೇಪಾಕ್ಷಸ್ವಾಮಿ  ಪ್ರೌಢಶಾಲೆಯಲ್ಲಿ ಬುಧವಾರ ಪೋಷಕರ ಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ ನಡೆಯಿತು.
    ಭದ್ರಾವತಿ, ಜೂ. ೨೨ : ತಾಲೂಕಿನ ಸೀತಾರಾಮಪುರದ ಶ್ರೀ ಲೇಪಾಕ್ಷಸ್ವಾಮಿ  ಪ್ರೌಢಶಾಲೆಯಲ್ಲಿ ಬುಧವಾರ ಪೋಷಕರ ಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ ನಡೆಯಿತು.
    ಶಿಕ್ಷಕರು ಹಾಗು ದಾನಿಗಳ ನೆರವಿನೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಯಿತು. ಈ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದಿಸಿದರು.
    ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್, ಶಾಲೆಯ ಮುಖ್ಯ ಶಿಕ್ಷಕ ಎಸ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ವಸತಿಗೃಹಗಳಲ್ಲಿ ಪ್ರತ್ಯಕ್ಷವಾದ ಚಿರತೆ : ೪ ಗಂಟೆಗೂ ಹೆಚ್ಚು ಸಮಯ ನಿರಂತರ ಕಾರ್ಯಾಚರಣೆ

ಚಿರತೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಸಿಬ್ಬಂದಿಗಳು

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ.
    ಭದ್ರಾವತಿ, ಜೂ. ೨೨:  ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದನ್ನು ಸುಮಾರು ೪ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ  ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ನೋಡಲು ಜಮಾಯಿಸಿರುವ ಜನರು.
    ಬೆಳಿಗ್ಗೆ ಪಾಳು ಬಿದ್ದಿದ್ದ ಮನೆಯಿಂದ ಏಕಾಏಕಿ ಹೊರಬಂದು ಕಾಣಿಸಿಕೊಂಡಿದ್ದ ಚಿರತೆ ಮಹಿಳೆಯೊಬ್ಬರ ಮೈ ಪರಚಿ ಮತ್ತೊಂದು ಮನೆಯ ಹಿಂಬದಿಯಲ್ಲಿ ಅವಿತುಕೊಂಡಿದ್ದು, ತಕ್ಷಣ ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡರು. ಚಿರತೆ ಬೇರೆ ಕಡೆಗೆ ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಿದ ಅರಣ್ಯ ಸಿಬ್ಬಂದಿಗಳು ಸುತ್ತುವರೆದು ಕಾರ್ಯಾಚರಣೆ ನಡೆಸಿದರು. ವನ್ಯಜೀವಿ ವಿಭಾಗದ ಶಿವಮೊಗ್ಗ ವೃತ್ತದ ಹಿರಿಯ ಪಶು ವೈದ್ಯಾಧಿಕಾರಿ ಡಾ. ವಿನಯ್‌ರವರ ತಂಡ ಚುಚ್ಚು ಮದ್ದು ನೀಡಿದ ನಂತ ಅರಣ್ಯ ಸಿಬ್ಬಂದಿಗಳು  ಚಿರತೆಯನ್ನು ಬಲೆ ಬೀಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ ಮಹಿಳೆಯೊಬ್ಬರ ಮೈ ಪರಚಿರುವುದು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಟ್ನಳ್ಳಿ, ವಲಯ ಅರಣ್ಯಾಧಿಕಾರಿ ರಾಜೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಬಿ.ಆರ್ ದಿನೇಶ್‌ಕುಮಾರ್, ನವೀನ್, ಅರಣ್ಯ ರಕ್ಷಕರಾದ ಬಾಲರಾಜ್, ಶ್ರೀಧರ್, ಅರಣ್ಯ ವೀಕ್ಷಕರಾದ ಶಶಿಲ್‌ಕುಮಾರ್, ನಾಗೇಂದ್ರಪ್ಪ ಹಾಗು ವ್ಯನ್ಯಜೀವಿ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಚುಚ್ಚುಮದ್ದು ನೀಡಿದ ನಂತರ ಬಲೆ ಬೀಸಿ ಸೆರೆ ಹಿಡಿದಿರುವುದು.
    ಸ್ಥಳಕ್ಕೆ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ಹಾಗು ಸಿಬ್ಬಂದಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟು ಕಾರ್ಯಾಚರಣೆಗೆ ಸಹಕರಿಸಿದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದು ಬೋನಿಗೆ ಬಿಡಲಾಯಿತು. 
    ಇದಕ್ಕೂ ಮೊದಲು ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಯಿತು. ಚಿರತೆ ಪತ್ತೆಯಾದ ಸ್ಥಳದ ಸಮೀಪದಲ್ಲಿಯೇ ಶ್ರೀ ಸತ್ಯಸಾಯಿಬಾಬಾ ಶಾಲೆ, ವಿಐಎಸ್‌ಎಲ್ ಆಸ್ಪತ್ರೆ(ದೊಡ್ಡಾಸ್ಪತ್ರೆ) ಹಾಗು ಅಂಗಡಿ ಮುಂಗಟ್ಟುಗಳಿವೆ. ಸದ್ಯ ಚಿರತೆ ಶಾಲೆ ಆವರಣ ಪ್ರವೇಶಿಸಿಲ್ಲ. ಅಲ್ಲದೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  
    ಚಿರತೆ ಬಗ್ಗೆ ಮಾಹಿತಿ ತಿಳಿದು ನಗರದ ವಿವಿಧೆಡೆಗಳಿಂದ ಜನರು ಸ್ಥಳಕ್ಕೆ ಆಗಮಿಸಿ ಜಮಾಯಿಸಿದ್ದರು. ಇದರಿಂದಾಗಿ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಜನರ ಸದ್ದು ಗದ್ದಲದಿಂದಾಗಿ ಸೆರೆ ಹಿಡಿಯುವುದು ಸ್ವಲ್ಪ ವಿಳಂಬವಾಯಿತು ಎನ್ನಲಾಗಿದೆ.

Tuesday, June 21, 2022

ಭದ್ರಾವತಿ ನ್ಯೂಟನ್ ಶ್ರೀ ಸತ್ಯ ಸಾಯಿಬಾಬಾ ಶಾಲೆ ಹತ್ತಿರ ಚಿರತೆ ಪ್ರತ್ಯಕ್ಷ

 


ಭದ್ರಾವತಿ ನ್ಯೂಟನ್ ಶ್ರೀ ಸತ್ಯ ಸಾಯಿಬಾಬಾ ಶಾಲೆ ಹತ್ತಿರ ವಿಐಎಸ್ಎಲ್  ವಸತಿಗೃಹಗಳ ಬಳಿ ಚಿರತೆ ಬುಧವಾರ ಬೆಳಗ್ಗೆ ಪ್ರತ್ಯಕ್ಷವಾಗಿದ್ದು ಜನರು ನೋಡಲು ಜಮಾಯಿಸಿರುವುದು ಕಂಡುಬಂದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಹಿಡಿಯಲು ಹರಸಹಾಸ ಪಡುತ್ತಿದ್ದು ಸುಮಾರು ಎರಡು ಗಂಟೆಗಳಿಂದ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ.