Sunday, July 10, 2022

ಬಿಜೆಪಿ ಹಿರಿಯೂರು ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಜಯದೇವ ನಿಧನ

ಜಯದೇವ
    ಭದ್ರಾವತಿ, ಜು. ೧೦ : ಭಾರತೀಯ ಜನತಾ ಪಕ್ಷದ ಹಿರಿಯೂರು ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಜಯದೇವ(೫೧) ಶನಿವಾರ ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಹೊಂದಿದ್ದರು. ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಗ್ರಾಮದ ಸ್ಮಶಾನ ಭೂಮಿಯಲ್ಲಿ ನೆರವೇರಿತು.   ಸಂಸದ ಬಿ ವೈ ರಾಘವೇಂದ್ರ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮ ಪ್ರಸಾದ್, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಯುವ ಮುಖಂಡ ಗೋಕುಲ್ ಕೃಷ್ಣ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

Saturday, July 9, 2022

ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಹೊಸದಾಗಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರಾತಿ ಮಾಡಿ

ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಮನವಿ

ಭದ್ರಾವತಿ ಹಳೇನಗರದಲ್ಲಿರುವ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು ಹಾಗು ಹೊಸದಾಗಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಮಂಜೂರಾತಿ ಮಾಡುವಂತೆ ಒತ್ತಾಯಿಸಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಜು. ೯ : ಹಳೇನಗರದಲ್ಲಿರುವ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು ಹಾಗು ಹೊಸದಾಗಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಮಂಜೂರಾತಿ ಮಾಡುವಂತೆ ಒತ್ತಾಯಿಸಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
      ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಮಂಜೂರಾತಿ ಮಾಡುವ ಜೊತೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದು ಹಾಗು ಪ್ರಸ್ತುತ ಇರುವ ಆಸ್ಪತ್ರೆಯನ್ನು ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಗಿದೆ.
      ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ಹಿರಿಯ ವೈದ್ಯ ಡಾ. ಶಿವಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಮನಾಥ್ ಬರ್ಗೆ, ಅನುಷಾ, ರಘುರಾವ್, ಕೃಷ್ಣಮೂರ್ತಿ, ಗಣೇಶ್ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಎಸ್. ಕುಮಾರ್, ಎಂ. ಪ್ರಭಾಕರ್, ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮಾಜದಲ್ಲಿ ವಿಕೃತ ಮನಸ್ಸಿನವರು ಹೆಚ್ಚಾಗುತ್ತಿದ್ದು, ಒಳ್ಳೆಯ ಕೆಲಸಗಳಿಗೆ ಬೆಲೆ ಇಲ್ಲದಂತಾಗಿದೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ವಿಷಾದ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ಶ್ರೀಮತಿ ಸರೋಜಮ್ಮನವರ ಮೊದಲ ವರ್ಷದ ಭಾವಸ್ಮರಣೆ ಅಂಗವಾಗಿ ಭದ್ರಾವತಿ ಉಜ್ಜನಿಪುರದ ಡಿ.ಜಿ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಣ್ಣದ ಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨ನೇ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಉದ್ಘಾಟಿಸಿದರು.
    ಭದ್ರಾವತಿ, ಜು. ೯: ಪ್ರಸ್ತುತ ಸಮಾಜದಲ್ಲಿ ವಿಕೃತ ಮನಸ್ಸಿನ ಜನರು ಹೆಚ್ಚಾಗುತ್ತಿದ್ದು, ಜನರು ನಮ್ಮನಾಳುವ ಸರ್ಕಾರ ಹಾಗು ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ವಿಷಾದ ವ್ಯಕ್ತ ಪಡಿಸಿದರು.
      ಅವರು ಶನಿವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ಶ್ರೀಮತಿ ಸರೋಜಮ್ಮನವರ ಮೊದಲ ವರ್ಷದ ಭಾವಸ್ಮರಣೆ ಅಂಗವಾಗಿ ಉಜ್ಜನಿಪುರದ ಡಿ.ಜಿ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಣ್ಣದ ಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨ನೇ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಇಂದು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಬೆಲೆ ಇಲ್ಲದಂತಾಗಿದೆ. ವಿಕೃತ ಮನಸ್ಸಿನವರು ಹೆಚ್ಚಾಗಿದ್ದು, ಇಂತಹ ವ್ಯವಸ್ಥೆಗೆ ನಾವುಗಳೇ ಕಾರಣರಾಗಿದ್ದೇವೆ. ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪುಗೊಳ್ಳಬೇಕಾದರೆ ಒಳ್ಳೆಯ ಸರ್ಕಾರ ಆಡಳಿತಕ್ಕೆ ತರಬೇಕೆಂದರು.
       ಇತ್ತೀಚೆಗೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಲಾಗಿದ್ದ ಜೊತೆಗಿರುವನು ಚಂದಿರ ನಾಟಕ ಪ್ರದರ್ಶನಕ್ಕೆ ಕಿಡಿಗೇಡಿಗಳು ಅಡ್ಡಿಪಡಿಸಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ನಾಡಿನಲ್ಲಿ ಕನ್ನಡ ತೇರು ಎಳೆಯುವವರು ಕಡಿಮೆಯಾಗುತ್ತಿದ್ದು, ಕತ್ತರಿ ಹಾಕುವವರು ಹೆಚ್ಚಾಗುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
       ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮನಷ್ಯನ ಅವಿಭಾಗ್ಯ ಅಂಗಗಳಾಗಿವೆ. ಮನಸ್ಸಿಗೆ ನೆಮ್ಮದಿ ಜೊತೆಗೆ ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಲಾವಿದ ಗುರು ಅವರು ಹೊಂದಿರುವ ಕ್ರಿಯಾಶೀಲತೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಸಂಘಟನೆಯ ನೇತೃತ್ವ ವಹಿಸಿರುವವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುನ್ನಡೆಯಬೇಕೆಂದರು.
       ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್, ಜಾತ್ಯಾತೀತ ಜನತಾದಳ ಮುಖಂಡರಾದ ಶಾರದ ಅಪ್ಪಾಜಿ, ಉಪಾಧ್ಯಕ್ಷ ಚನ್ನಪ್ಪ, ಅಂತರರಾಷ್ಟ್ರೀಯ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಬಿ.ಕೆ ಗುರುರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಕೋಡ್ಲು ಯಜ್ಞಯ್ಯ, ಎಂ.ಎಸ್ ಸುಧಾಮಣಿ, ಎಂ.ಎಸ್ ಶಿವಪ್ರಕಾಶ್, ಜಿ. ಬೊಮ್ಮಯ್ಯ, ಬಿ.ಎನ್ ಸುರೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
      ಹಾಡು-ಹಾಸ್ಯ-ಕವನ-ಹನಿಗವನ-ಕಥೆ-ವಿಚಾರ ಸಾಂಸ್ಕೃತಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಕರೋನಾ ಯೋಧರಿಗೆ ಅಭಿನಂದನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಕಲಾದೇಗುಲ ಶ್ರೀನಿವಾಸ್ ನಿರೂಪಿಸಿದರು. ಕಲಾವಿದ ಬಿ. ಗುರು ಸ್ವಾಗತಿಸಿದರು.

Friday, July 8, 2022

ತಾಲೂಕಿನಾದ್ಯಂತ ಸಾಧಾರಣ ಮಳೆ : ಹೆಚ್ಚಿನ ಹಾನಿ ಇಲ್ಲ

ಭದ್ರಾ ಜಲಾಶಯದಲ್ಲಿ ಕಳೆದ ಬಾರಿಗಿಂತ ೧೦ ಅಡಿ ಹೆಚ್ಚಿನ ನೀರು ಸಂಗ್ರಹ


ಭದ್ರಾವತಿ, ಜು. ೮: ಕಳೆದ ೫-೬ ದಿನಗಳಿಂದ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಸುಮಾರು ೧೪ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
      ಯಾವುದೇ ಜೀವ ಹಾನಿಯಾಗಿಲ್ಲ, ರಸ್ತೆಗಳು ಕಡಿತಗೊಂಡಿರುವ ಪ್ರಕರಣಗಳು ನಡೆದಿಲ್ಲ. ಪೂರ್ಣ ಪ್ರಮಾಣದಲ್ಲಿ ಮನೆಗಳು ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ಎಲ್ಲಿಯೂ ಕಾಳಜಿ ಕೇಂದ್ರ ತೆರೆದಿಲ್ಲ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಸ್ಪಷ್ಟಪಡಿಸಿದ್ದಾರೆ.
      ಅಡಕೆ ತೋಟಕ್ಕೆ ಕೊಳೆರೋಗ ಭೀತಿ :
      ಮಲೆನಾಡು ಭಾಗದಲ್ಲಿ ತೋಟದ ಬೆಳೆಗಳಿಗೆ ರೋಗಬಾಧೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತಾಲೂಕು ಅರೆಮಲೆನಾಡು ಭಾಗವಾಗಿರುವ ಹಿನ್ನಲೆಯಲ್ಲಿ ರೋಗಬಾಧೆಗಳು ಕಡಿಮೆ. ಆದರೂ ಒಂದು ವೇಳೆ ಮಳೆ ಇದೆ ರೀತಿ ಒಂದು ವಾರ ಮುಂದುವರೆದಲ್ಲಿ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದುವರೆಗೂ ತೋಟದ ಬೆಳೆಗಳಿಗೆ ಸಂಬಂಧಿಸಿದಂತೆ ಯಾವುದೇ ನಷ್ಟದ ಮಾಹಿತಿ ಬಂದಿಲ್ಲ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಾಂತರಾಜ್ ತಿಳಸಿದ್ದಾರೆ.
      ಮೆಕ್ಕೆಜೋಳಕ್ಕೆ ಹಾನಿ :
      ಪ್ರಸ್ತುತ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ಮಾತ್ರ ಇದ್ದು, ಉಳಿದಂತೆ ಭತ್ತ, ರಾಗಿ ಬೆಳೆಗಳು ಇನ್ನೂ ನಾಟಿಯಾಗಿಲ್ಲ. ಮಳೆ ಇದೆ ರೀತಿ ಮುಂದುವರೆದು ನೀರು ಹೆಚ್ಚಾದ್ದಲ್ಲಿ ಮೆಕ್ಕೆಜೋಳಕ್ಕೆ ಹಾನಿಯಾಗಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ.
      ಉಳಿದಂತೆ ಕೃಷಿ ಇಲಾಖೆಯಲ್ಲಿ ಈ ಬಾರಿ ಬಿತ್ತನೆ ಬೀಜ ಹಾಗು ಗೊಬ್ಬರ ಸಮಸ್ಯೆ ಇಲ್ಲ. ಈಗಾಗಲೇ ಬಿತ್ತನೆ ಬೀಜ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
      ಇಳಿಮುಖಗೊಂಡ ಕಬ್ಬು ಬೆಳೆ :
      ನಗರದಲ್ಲಿ ಎಂಪಿಎಂ ಸಕ್ಕರೆ ಕಾರ್ಖಾನೆ ಚಾಲನೆಯಲ್ಲಿದ್ದಾಗ ತಾಲೂಕಿನಲ್ಲಿ ಸುಮಾರು ೬ ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಬೆಳೆಯಾಗುತ್ತಿತ್ತು. ಇದೀಗ ಕಬ್ಬು ಬೆಳೆ ಕೇವಲ  ೩೦೦ ಹೆಕ್ಟೇರ್ ತಲುಪಿದೆ ಎಂದು ಕೃಷಿ ಅಧಿಕಾರಿ ರಾಕೇಶ್ ತಿಳಿಸಿದ್ದಾರೆ.
      ಒಂದು ಕಾಲದಲ್ಲಿ ಎಲ್ಲೆಡೆ ಕಬ್ಬು ಬೆಳೆ ರಾರಾಜಿಸುತ್ತಿತ್ತು. ಇದೀಗ ೩೦೦ ಹೆಕ್ಟೇರ್ ತಲುಪಿರುವುದು ವಿಷಾದನೀಯ ಸಂಗತಿಯಾಗಿದ್ದು, ಈ ನಡುವೆ ಕೆಲವು ಆಲೆಮನೆಗಳಿಗೆ ಕಬ್ಬಿನ ಕೊರತೆ ಎದುರಾಗುತ್ತಿದ್ದು, ಬೇರೆ ಜಿಲ್ಲೆಗಳಿಂದ ಕಬ್ಬು ಸರಬರಾಜು ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ರೈತರು ಕಬ್ಬು ಬೆಳೆ ಬದಲಾಗಿ ಅಡಕೆ ಬೆಳೆಗೆ ಮಾರುಹೋಗಿದ್ದಾರೆ. ಇದರಿಂದಾಗಿ ಕಬ್ಬು ಬೆಳೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎಂದರು.
      ಕಳೆದ ಬಾರಿ ೧೦ ಅಡಿ ಹೆಚ್ಚಿನ ನೀರು:
      ಭದ್ರಾ ಜಲಾಶಯ ವ್ಯಾಪ್ತಿಯ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿದ್ದು, ಇದರಿಂದಾಗಿ ಜಲಾಶಯದ ನೀರಿನ ಮಟ್ಟ ಕಳೆದ ಬಾರಿಗಿಂತ ೧೦ ಅಡಿ ಹೆಚ್ಚಾಗಿದೆ.
      ಶುಕ್ರವಾರ ೧೬೬.೫ ಅಡಿ ಅಡಿ ತಲುಪಿದ್ದು, ೪೯.೦೭೪ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ೧೫೫.೮ ಅಡಿ ಇದ್ದು, ೩೯.೦೧೪ ಟಿಎಂಸಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಒಳಹರಿವು ೨೯,೯೪೨ ಕ್ಯೂಸೆಕ್ಸ್ ಇದ್ದು, ಹೊರ ಹರಿವು ೧೪೩ ಕ್ಯೂಸೆಕ್ಸ್ ಆಗಿದೆ. ಈ ಬಾರಿ ೧೦ ಅಡಿ ನೀರು ಹೆಚ್ಚಾಗಿರುವುದು ರೈತರ ಮುಖದಲ್ಲಿ ಸಂತಸವನ್ನುಂಟು ಮಾಡಿದೆ.
     

ಬಿಳಿಕಿ ಶ್ರೀಗಳಿಂದ ಸಂಸದರಿಗೆ ಗುರುರಕ್ಷೆ

ಭದ್ರಾವತಿ ತಾಲೂಕಿನ ಬಿಳಿಕಿ ಶ್ರೀ ಹಿರೇಮಠಕ್ಕೆ ಸಂಸದ ಬಿ.ವೈ ರಾಘವೇಂದ್ರ ಶುಕ್ರವಾರ ಭೇಟಿ ನೀಡಿ ಶ್ರೀ ಮಠದ ಪೀಠಾಧಿಪತಿಗಳಿಂದ ಗುರುರಕ್ಷೆ ಸ್ವೀಕರಿಸಿದರು.
    ಭದ್ರಾವತಿ, ಜು. ೮: ತಾಲೂಕಿನ ಬಿಳಿಕಿ ಶ್ರೀ ಹಿರೇಮಠಕ್ಕೆ ಸಂಸದ ಬಿ.ವೈ ರಾಘವೇಂದ್ರ ಶುಕ್ರವಾರ ಭೇಟಿ ನೀಡಿ ಶ್ರೀ ಮಠದ ಪೀಠಾಧಿಪತಿಗಳಿಂದ ಗುರುರಕ್ಷೆ ಸ್ವೀಕರಿಸಿದರು.
      ತಾಲೂಕಿನ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಂಸದರು ಸಂಜೆ ಬಿಳಿಕಿ ಶ್ರೀ ಹಿರೇಮಠಕ್ಕೆ ತೆರಳಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಗುರುರಕ್ಷೆ ಸ್ವೀಕರಿಸಿ ಶ್ರೀ ಮಠದ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
      ಬಿಜೆಪಿ ತಾಲೂಕು ಮಂಡಲ ನಿಯೋಜಿದ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕರ್ನಾಟಕ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಭೋವಿ ನಿಗಮದ ಸದಸ್ಯ ಜಿ. ಆನಂದಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ಕೆ. ಮಂಜುನಾಥ್, ಬಿಳಿಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಪಿಬಾಯಿ, ಸದಸ್ಯ ಶಿವಕುಮಾರ್, ವಸಂತ್, ಚಿದಾನಂದ ಸ್ವಾಮಿ, ದೂದಾನಾಯ್ಕ, ಕೆಎಸ್‌ಆರ್‌ಟಿಸಿ ಸತೀಶ್, ಎಚ್. ಮಂಜುನಾಥ್, ರಮೇಶ್, ರೂಪಾ ನಾಗರಾಜ್, ಆನಂದ್, ಮಹಾದೇವ ಸೇರಿದಂತೆ ಶ್ರೀ ಮಠದ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗೃಹಿಣಿಗೆ ಖಾಸಗಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಚುಚ್ಚು ಮದ್ದು ನೀಡಿಕೆ

ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಆರೋಪ : ದೂರು

ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ಸ್ಥಳದಲ್ಲಿ ಪತ್ತೆಯಾಗಿರುವ ಅವಧಿ ಮೀರಿದ ಚುಚ್ಚು ಮದ್ದು ಎನ್ನಲಾಗಿದೆ.
    ಭದ್ರಾವತಿ, ಜು. ೮: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೊಟ್ಟೆ ನೋವು ಎಂದು ಚಿಕಿತ್ಸೆಗೆ ದಾಖಲಾದ ಮಹಿಳೆಗೆ ಅವಧಿ ಮುಕ್ತಾಯಗೊಂಡಿರುವ ಹಾಗು ಕಾಯಿಲೆಗೆ ಸಂಬಂಧವಿಲ್ಲದ ಚುಚ್ಚು ಮದ್ದು ನೀಡುವ ಮೂಲಕ ನಿರ್ಲಕ್ಷ್ಯತನ ವಹಿಸಲಾಗಿದ್ದು, ಈ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ತಾಲೂಕು ಅಧ್ಯಕ್ಷ ಜೋಯಲ್ ಥಾಮ್ಸನ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳಿಗೆ ಹಾಗು ತಾಲೂಕು ಆರೋಗ್ಯಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
      ಸಿರಿಯೂರು ಶಿವರಾಮನಗರದ ನಿವಾಸಿ ೨೨ ವರ್ಷದ ಶ್ವೇತ ಎಂಬ ಗೃಹಿಣಿ ಹೊಟ್ಟೆ ನೋವಿನಿಂದ ಬಳುತ್ತಿದ್ದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಜು.೬ರಂದು ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಇದ್ದಕ್ಕಿದ್ದಂತೆ ಶ್ವೇತ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಇವರ ಪತಿ ಎಂ. ವಿನೋದ್ ಹಾಗು ಕುಟುಂಬಸ್ಥರು, ಬೆಂಬಲಿಗರು ಅವಧಿ ಮುಕ್ತಾಯಗೊಂಡಿರುವ ಚುಚ್ಚು ಮದ್ದು ನೀಡಿರುವ ಹಿನ್ನಲೆಯಲ್ಲಿ ಅಸ್ವಸ್ಥಗೊಂಡಿದ್ದಾರೆಂದು ಆರೋಪಿಸಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
      ಈ ನಡುವೆ ಆಸ್ಪತ್ರೆಗೆ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ಪೊಲೀಸರು ಭೇಟಿ ನೀಡಿ ಕುಟುಂಬಸ್ಥರು ಹಾಗು ಬೆಂಬಲಿಗರ ಮತ್ತು ಆಸ್ಪತ್ರೆಯವರ ವಾದ ಆಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
      ಚುಚ್ಚು ಮದ್ದು ಎಲ್ಲಿಂದ ಬಂತು ಗೊತ್ತಿಲ್ಲ?
      ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ಸ್ಥಳದಲ್ಲಿ ಪತ್ತೆಯಾಗಿರುವ ಅವಧಿ ಮುಕ್ತಾಯಗೊಂಡಿರುವ ಚುಚ್ಚು ಮದ್ದು ಎಲ್ಲಿಂದ ಬಂತು ಎಂದು ಯಾರಿಗೂ ತಿಳಿದಿಲ್ಲ. ರೋಗಿಗೆ ಈ ಚುಚ್ಚು ಮದ್ದು ನೀಡಲು ಶಿಪಾರಸ್ಸು ಮಾಡಿಲ್ಲ. ಈ ಚುಚ್ಚುಮದ್ದು  ಕುರಿತ ಮಾಹಿತಿ ದಿನಪಟ್ಟಿಯಲ್ಲೂ ಹಾಗು ವೈದ್ಯರ ತಪಸಣಾ ಚೀಟಿಯಲ್ಲೂ ದಾಖಲಾಗಿಲ್ಲ ಎಂಬುದು ಆಸ್ಪತ್ರೆಯ ವಾದವಾಗಿದೆ. ಈ ನಡುವೆ ಕುಟುಂಬಸ್ಥರು ಹಾಗು ಬೆಂಬಲಿಗರು ಈ ಔಷಧಿ ಇಲ್ಲಿಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ. ಇದರಿಂದಾಗಿ ಸೂಕ್ತ ತನಿಖೆ ನಡೆಸುವುದು ಅನಿವಾರ್ಯವಾಗಿದೆ.
      ಮೆಗ್ಗಾನ್ ಆಸ್ಪತ್ರೆ ದಾಖಲು :
      ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯತನ ತೋರಿರುವ ಖಾಸಗಿ ಅಸ್ಪತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಹಾಗು ಬೆಂಬಲಿಗರು ಗೃಹಿಣಿ ತೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಆತಂಕಗೊಂಡು ಗುರುವಾರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಖಾಸಗಿ ಆಸ್ಪತ್ರೆಯವರು ಕಾಯಿಲೆ ಸಂಪೂರ್ಣವಾಗಿ ಗುಣಪಡಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕುಟುಂಬಸ್ಥರು ಹಾಗು ಬೆಂಬಲಿಗರು ಖಾಸಗಿ ಆಸ್ಪತ್ರೆಯವರ ಮೇಲೆ ನಂಬಿಕೆ ಹೊಂದಿಲ್ಲ ಎನ್ನಲಾಗಿದೆ.
      ಇದೀಗ ಪ್ರಕರಣಕ್ಕೆ ಸಂಬಂದಿಸಿದಂತೆ ಜೋಯಲ್ ಥಾಮ್ಸನ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳಿಗೆ ಹಾಗು ತಾಲೂಕು ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ನಿರ್ಲಕ್ಷ್ಯ ವಹಿಸಿರುವ ಖಾಸಗಿ ಆಸ್ಪತ್ರೆ ವಿರುದ್ಧ ಹಾಗು ಔಷಧಿ ತಯಾರಿಕ ಕಂಪನಿ ಮತ್ತು ಔಷಧಿ ಸರಬರಾಜು ಪ್ರತಿನಿಧಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಸಿಮೆಂಟ್ ರಸ್ತೆಗೆ ಸಂಸದ ಬಿ.ವೈ ರಾಘವೇಂದ್ರ ಗುದ್ದಲಿ ಪೂಜೆ

ಭದ್ರಾವತಿ ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಸುಮಾರು ೪೦ ಲಕ್ಷ ರು. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಶುಕ್ರವಾರ ಸಂಸದ ಬಿ.ವೈ ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಜು. ೮: ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಸುಮಾರು ೪೦ ಲಕ್ಷ ರು. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಶುಕ್ರವಾರ ಸಂಸದ ಬಿ.ವೈ ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.
      ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಒಟ್ಟು ೪೦ ಲಕ್ಷ ರು. ವೆಚ್ಚದಲ್ಲಿ ೪ ರಸ್ತೆಗಳ ನಿರ್ಮಾಣಕ್ಕೆ ಸಂಸದರು ಗುದ್ದಲಿ ಪೂಜೆ ನೆರವೇರಿಸಿದರು. ನೀರಾವರಿ ಇಲಾಖೆ ಭದ್ರಾ ಮೇಲ್ದಂಡೆ ವಿಭಾಗದಿಂದ ಕಾಮಗಾರಿ ಮಂಜೂರಾಗಿದ್ದು, ಗುತ್ತಿಗೆದಾರರಾಗಿ ಅಶೋಕ್ ಕಾಮಗಾರಿ ನಿರ್ವಹಿಸುತ್ತಿದ್ದಾರೆ.
      ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ತಾಲೂಕು ಮಂಡಲ ನಿಯೋಜಿತ ಅಧ್ಯಕ್ಷ ಜಿ. ಧರ್ಮಪ್ರಸಾದ್, ಎಂ. ಪ್ರಭಾಕರ್, ಕಾರ್ಯದರ್ಶಿ ಚಂದ್ರು ದೇವರನರಸೀಪುರ, ಕಾಚಗೊಂಡನಹಳ್ಳಿ ಬಿ. ಮಂಜುನಾಥ್, ರಾಮನಾಥ್ ಬರ್ಗೆ, ಕೆ. ಮಂಜುನಾಥ್, ಧನುಷ್‌ಬೋಸ್ಲೆ, ತೀರ್ಥಯ್ಯ, ಕವಿತಾರಾವ್, ಭಾಗಿರತಿ, ಗ್ರಾಮ ಪಂಚಾಯಿತಿ ಸದಸ್ಯ ಬಿ. ಮೋನಿಷಾ, ಗ್ರಾಮಸ್ಥರಾದ ಜೀಜಾಬಾಯಿ, ಮೀನಾ, ನಂದಿನಿ, ಕವಿತ, ರತ್ನಾಬಾಯಿ, ರೂಪ, ಆನಂದರಾವ್, ನರೇಂದ್ರ, ಮಂಜುನಾಥ್ ಗಾಯಕ್‌ವಾಡ್ ಸೇರಿದಂತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.