Wednesday, November 9, 2022

ಪರಿಸರದ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಸ್ವಚ್ಛತೆ ತಾನಾಗಿಯೇ ಮೂಡಲಿದೆ : ಆಶಾ ಭಟ್



ಭದ್ರಾವತಿ, ನ. 10: ನಗರದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಸುತ್ತಮುತ್ತಲ ಪರಿಸರದ ಮೇಲೆ ಅಭಿಮಾನ ಬೆಳೆಸಿ ಕೊಂಡಾಗ ಮಾತ್ರ ಸ್ವಚ್ಛತೆಯ ಅರಿವು ಸಹ ತಾನಾಗಿಯೇ ಬರಲಿದೆ ಎಂದು ನಗರಸಭೆ ಸ್ವಚ್ಛತಾ ರಾಯಭಾರಿ, ಚಲನಚಿತ್ರ ನಟಿ ಆಶಾ ಭಟ್ ಹೇಳಿದರು.
ಅವರು ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಂಡ ಕಂಡಲ್ಲಿ ಕಸ ಎಸೆಯುವುದು, ಮಲಿನಗೊಳಿಸುವುದು ಸೇರಿದಂತೆ ಪರಿಸರಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಬಾರದು. ನಮ್ಮ ಮನೆಯನ್ನು ಯಾವ ರೀತಿ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ, ಅದೇ ರೀತಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರು. ನಮ್ಮ ಪರಿಸರದ ಸ್ವಚ್ಛತೆಯಲ್ಲಿ  ಪ್ರಮುಖ ಪಾತ್ರ ವಹಿಸಿರುವ ಪೌರ ಕಾರ್ಮಿಕರಿಗೆ ನಾವೆಲ್ಲರೂ ಮೊದಲು ಗೌರವ ನೀಡಬೇಕು. ಸ್ವಚ್ಛತೆ ಎಂಬುದು ಒಂದು ದಿನಕ್ಕೆ ಸೀಮಿತ ಅಲ್ಲ ಅದು ನಮ್ಮ ಬದುಕಿನುದ್ದಕ್ಕೂ ಸಾಗಬೇಕು ಎಂದರು. 
 ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಮನು ಕುಮಾರ್, ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದಾಗಿದೆ. ಸಾರ್ವಜನಿಕರು ಕಸ ವಿಲೇವಾರಿಯಲ್ಲಿ ಹೆಚ್ಚಿನ ಸಹಕಾರ ನೀಡಬೇಕು. ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಬೇಕು.  ಸಾಧ್ಯವಾದಷ್ಟು ಮರುಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸ್ವಚ್ಛತೆಯಲ್ಲಿ ನಗರಸಭೆ ಉನ್ನತ ಮಟ್ಟ ತಲುಪಬೇಕು. ಈ ನಿಟ್ಟಿನಲ್ಲಿ  ಸಾರ್ವಜನಿಕರು  ಸಹಕಾರ ನೀಡಬೇಕೆಂದು ಮನವಿ ಮಾಡಿದರು. 
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. 
ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್ ಸದಸ್ಯರಾದ ಅನುಪಮ ಚೆನ್ನೇಶ್ ಲತಾ ಚಂದ್ರಶೇಖರ್ ಜಾರ್ಜ್ ಆರ್ ಮೋಹನ್ ಕುಮಾರ್ ಮಣಿ ಎಎನ್ಎಸ್, ಬಸವರಾಜ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹಾಗೂ ಆಶಾ ಭಟ್ ಪೋಷಕರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಾ ಭಟ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. ಕಂದಾಯ ಅಧಿಕಾರಿ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ವಿವಿಧ ಶಾಲೆಗಳ ಮಕ್ಕಳು ಅಭಿಯಾನದಲ್ಲಿ ಭಾಗವಹಿಸಿದ್ದರು.

ನ.10ರಂದು ನಗರಸಭೆ ವತಿಯಿಂದ ಸ್ವಚ್ಛತಾ ಅಭಿಯಾನ

ಭದ್ರಾವತಿ: ನಗರಸಭೆ ವತಿಯಿಂದ ನ.10ರಂದು ಬೆಳಗ್ಗೆ 11 ಗಂಟೆಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿಯಾನಕ್ಕೆ ಚಲನಚಿತ್ರ ನಟಿ, ನಗರ ಸಭೆ ಸ್ವಚ್ಛತಾ ರಾಯಭಾರಿ ಆಶಾ ಭಟ್ ಉದ್ಘಾಟಿಸುವರು.
ಅಭಿಯಾನ ನಗರದ ಬಿ.ಹೆಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಆರಂಭಗೊಳ್ಳಲಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸುವಂತೆ ಪೌರಾಯುಕ್ತ  ಮನು ಕುಮಾರ್ ಕೋರಿದ್ದಾರೆ.

ಶೌಚಾಲಯ ಬಳಸಿ ನೈರ್ಮಲ್ಯ ಕಾಪಾಡಿ : ಬಿ.ಕೆ ಸಂಗಮೇಶ್ವರ್

ಬೆಂಗಳೂರಿನ ನ್ಯಾಬ್‌ಫಿನ್ಸ್ ಕಂಪನಿ ವತಿಯಿಂದ ಸಾಮಾಜಿಕ ಕಾರ್ಯಯೋಜನೆಯಡಿ(ಸಿಎಸ್‌ಆರ್) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ವತಿಯಿಂದ ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ, ನ. ೯: ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಕರೆ ನೀಡಿದರು.
ಅವರು ಬುಧವಾರ ಬೆಂಗಳೂರಿನ ನ್ಯಾಬ್‌ಫಿನ್ಸ್ ಕಂಪನಿ ವತಿಯಿಂದ ಸಾಮಾಜಿಕ ಕಾರ್ಯಯೋಜನೆಯಡಿ(ಸಿಎಸ್‌ಆರ್) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ವತಿಯಿಂದ ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು. 
ಪ್ರತಿ ದಿನ ಆಸ್ಪತ್ರೆಗೆ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅವಶ್ಯವಿರುವ ಕಡೆ ಸರ್ಕಾರ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದು, ಬಳಕೆಗೆ ಮುಂದಾಗುವ ಸಾರ್ವಜನಿಕರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ನಿರ್ವಾಹಕ ಎಂ. ವಿಶ್ವನಾಥ್ ಮಾತನಾಡಿ, ಸಂಸ್ಥೆವತಿಯಿಂದ ದೇಶದಲ್ಲಿ ಇದುವರೆಗೂ ೧೦ ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ೩೦೦ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ಇದು ಹಣ ನೀಡಿ ಬಳಸುವ (ಪೇ ಅಂಡ್ ಯೂಸ್) ಶೌಚಾಲಯವಾಗಿದ್ದು, ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯಾರು ಸಹ ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡದೆ ಈ ಶೌಚಾಲಯ ಬಳಸುವಂತೆ ಮನವಿ ಮಾಡಿದರು. 
ನ್ಯಾಬ್‌ಫಿನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ದಿವಾಕರ್ ಹೆಗಡೆ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಕಂಪನಿ ವತಿಯಿಂದ ಸಾಲಸೌಲಭ್ಯ ನೀಡುತ್ತಿದೆ. ಇದರಿಂದ ಬರುವ ಲಾಭದಲ್ಲಿ ಸ್ವಲ್ಪ ಹಣ ಸಾಮಾಜಿಕ ಕಾರ್ಯಯೋಜನೆ ನಿಧಿ(ಸಿಎಸ್‌ಆರ್)ಯಲ್ಲಿ ಮೀಸಲಿಡಲಾಗುತ್ತಿದೆ. ದೇಶದ ೧೭ ರಾಜ್ಯಗಳಲ್ಲಿ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು, ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ಜೊತೆ ಕೈಜೋಡಿಸಿರುವ ಕಂಪನಿ ಶೌಚಾಲಯಗಳನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನ್ಯಾಬ್ ಫಿನ್ಸ್ ಕಂಪನಿ ಕಾರ್ಯದರ್ಶಿ ಸುಮತಿ ಶರ್ಮ,  ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ ಹಾಗು ವೈದ್ಯಾಧಿಕಾರಿಗಳು, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯ, ಸ್ನಾನದ ಗೃಹಗಳು ಉದ್ಘಾಟನೆ

ಭದ್ರಾವತಿ: ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಕರೆ ನೀಡಿದರು.
ಅವರು ಬುಧವಾರ ಬೆಂಗಳೂರಿನ ನ್ಯಾಬ್ ಫಿನ್ಸ್ ಕಂಪನಿ ವತಿಯಿಂದ ಸಾಮಾಜಿಕ ಕಾರ್ಯಯೋಜನೆಯಡಿ(ಸಿಎಸ್ಆರ್) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ವತಿಯಿಂದ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು. 
ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನ್ಯಾಬ್ ಫಿನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ದಿವಾಕರ ಹೆಗಡೆ, ಕಾರ್ಯದರ್ಶಿ ಸುಮತಿ ಶರ್ಮ,  ) ಸುಲಬ್ ಇಂಟರ್ನ್ಯಾಷನಲ್ ಸೇವಾ ಸಂಸ್ಥೆ ನಿರ್ವಾಹಕ ಎಂ. ವಿಶ್ವನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂವಿ ಅಶೋಕ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಶಂಕರಪ್ಪ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, November 7, 2022

ಕ್ಷೇತ್ರದಲ್ಲಿ ಪುನಃ ಒಕ್ಕಲಿಗರು ಪ್ರಾಬಲ್ಯ ಸಾಧಿಸಲು ವೇದಿಕೆ ಅಸ್ತಿತ್ವಕ್ಕೆ : ಎಸ್. ಕುಮಾರ್

ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ  ಪೂರ್ವಭಾವಿ ಸಭೆ ಜರುಗಿತು.
    ಭದ್ರಾವತಿ, ನ. ೭ : ಈ ಹಿಂದೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದ ಒಕ್ಕಲಿಗರು ಇದೀಗ ತಮ್ಮ ಪ್ರಾಬಲ್ಯ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ರಂಗದಲ್ಲೂ ಶೋಷಣೆಗೆ ಒಳಗಾಗುತ್ತಿದ್ದು, ಈಗಲಾದರೂ ಎಚ್ಚೆತ್ತುಕೊಂಡು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಒಕ್ಕಲಿಗ ಸಮಾಜದ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹೇಳಿದರು.
ಅವರು ಸೋಮವಾರ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಸಾಕಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಸಮುದಾಯದವರ ರಕ್ಷಣೆ ಇಂದು ಅಗತ್ಯವಾಗಿದ್ದು, ಪಕ್ಷ ಭೇದ, ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರು ಒಗ್ಗಟ್ಟಾಗಿ ಸಂಘಟಿತರಾಗಬೇಕಾಗಿದೆ. ಆಗ ಮಾತ್ರ ಸಮುದಾಯಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ. ನಮ್ಮ ಹೋರಾಟಗಳು ಯಶಸ್ವಿಯಾಗುತ್ತವೆ ಎಂದರು.
ಸಮುದಾಯದ ಅನೇಕ ಮುಖಂಡರು ಮಾತನಾಡಿ, ಈಗಲಾದರೂ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಎಲ್ಲರಿಗೂ ಮೊದಲು ಸಮುದಾಯದವರ ಹಿತರಕ್ಷಣೆ ಮುಖ್ಯವಾಗಿದ್ದು, ಈ ಹಿನ್ನಲೆಯಲ್ಲಿ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬರುತ್ತಿರುವುದು ಸಮುದಾಯಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದರು.
ರೈತ ಮುಖಂಡ ಮಂಜಪ್ಪ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಾಲಕೃಷ್ಣ, ಕಬಡ್ಡಿ ಕೃಷ್ಣೇಗೌಡ, ಟಿ. ವೆಂಕಟೇಶ್, ಸಾವಿತ್ರಿ ಪುಟ್ಟೇಗೌಡ, ಕೃಷ್ಣಮೂರ್ತಿ, ರಮೇಶ್, ಮಣಿ ಎಎನ್‌ಎಸ್, ಮಹೇಶ್, ಅನಿಲ್‌ಕುಮಾರ್, ಜಯರಾಮ್, ಲವೇಶ್‌ಗೌಡ,  ಕ್ಲಬ್ ಸುರೇಶ್, ಕೃಷ್ಣಪ್ಪ, ಎನ್. ರಾಮಕೃಷ್ಣ, ಸುರೇಶ್, ಜಯರಾಂ ಗೊಂದಿ, ಗಂಗಾಧರ್, ಎಲ್. ದೇವರಾಜ್  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಇಂಟರ್ ಸಿಬಿಎಸ್‌ಇ ಸ್ಕೂಲ್ ಅಥ್ಲೆಟಿಕ್ ಮೀಟ್‌ನಲ್ಲಿ ಬಿಜಿಎಸ್ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಇಂಟರ್ ಸಿಬಿಎಸ್‌ಇ ಸ್ಕೂಲ್ ಅಥ್ಲೆಟಿಕ್ ಮೀಟ್ ೧೪ ವರ್ಷದೊಳಗಿನ ವಯೋಮಾನದ ಕ್ರೀಡಾಕೂಟದಲ್ಲಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್) ಶಾಲೆಯ ಮಕ್ಕಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿಕೊಂಡಿದ್ದಾರೆ.
    ಭದ್ರಾವತಿ, ನ. ೭ : ಶಿವಮೊಗ್ಗ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಸಹಕಾರದೊಂದಿಗೆ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಇಂಟರ್ ಸಿಬಿಎಸ್‌ಇ ಸ್ಕೂಲ್ ಅಥ್ಲೆಟಿಕ್ ಮೀಟ್ ೧೪ ವರ್ಷದೊಳಗಿನ ವಯೋಮಾನದ ಕ್ರೀಡಾಕೂಟದಲ್ಲಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್) ಶಾಲೆಯ ಮಕ್ಕಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿಕೊಂಡಿದ್ದಾರೆ.
    ೮ನೇ ತರಗತಿ ವಿದ್ಯಾರ್ಥಿಗಳಾದ ಜಸ್ವಂತ್ ರೆಡ್ಡಿ ಉದ್ದ ಜಿಗಿತ ಹಾಗು ೨೦೦ ಮೀಟರ್ ಓಟದಲ್ಲಿ ಪ್ರಥಮ, ವೇದಾಂತ್ ಬಿ.ಎಂ ಗುಂಡು ಎಸೆತದಲ್ಲಿ ದ್ವಿತೀಯ, ಸಮರ್ಥ್ ಚಕ್ರವರ್ತಿ ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗು ಬಾಲಕರ ವಿಭಾಗದ ರಿಲೇ ಸಮರ್ಥ್ ಚಕ್ರವರ್ತಿ ಮತ್ತು ಜಸ್ವಂತ್ ರೆಡ್ಡಿ ಹಾಗು ೭ನೇ ತರಗತಿ ವಿದ್ಯಾರ್ಥಿಗಳಾದ ಕಾರ್ತಿಕ್ ರೆಡ್ಡಿ ಮತ್ತು ಶ್ರೀಧರ್ ಹಾಗು ಬಾಲಕಿಯರ ವಿಭಾಗದಲ್ಲಿ ೭ನೇ ತರಗತಿ ವಿದ್ಯಾರ್ಥಿನಿಯರಾದ ಕೆ. ಬಿಂದು, ಎಸ್. ಹರ್ಷಿತ, ಆರ್. ಶ್ರೇಯ ಮತ್ತು ೮ನೇ ತರಗತಿ ವಿದ್ಯಾರ್ಥಿನಿ ತನಿಷಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಜಸ್ವಂತ್ ರೆಡ್ಡಿ ಕ್ರೀಡಾಕೂಟ ಸಮಗ್ರ ಬಹುಮಾನ ಪಡೆದುಕೊಂಡು ಕೀರ್ತಿ ತಂದಿದ್ದಾರೆ.
    ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಲ್. ವೆಂಕಟೇಶ್ ನಾಯ್ಕ್, ಪ್ರಭಾಕರನ್ ಮತ್ತು ಭಾಗ್ಯಶ್ರೀ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೆ ಕಾರಣಕರ್ತರಾಗಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ತಮ್ಮದಾಗಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಹಾಗು ದೈಹಿಕ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.  

ನ.೮ರಂದು ಪಾರ್ಶ್ವ ಚಂದ್ರಗ್ರಹಣ : ಬರೀಗಣ್ಣಿನಿಂದ ವೀಕ್ಷಿಸಿ, ಆನಂದಿಸಿ

ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ

ಪಾರ್ಶ್ವ ಚಂದ್ರಗ್ರಹಣ ಸಂಭವಿಸುವ ಪ್ರಕ್ರಿಯೆ
    ಭದ್ರಾವತಿ, ನ. ೭ :  ಪಾರ್ಶ್ವ ಚಂದ್ರಗ್ರಹಣ ನ.೮ರ ಮಂಗಳವಾರ ಗೋಚರಿಸಲಿದ್ದು, ನಿಸರ್ಗ ಚಲನೆಯ ಈ ನೆರಳು ಬೆಳಕಿನ ಆಟದ ವಿಸ್ಮಯ ಬರೀಗಣ್ಣಿನಿಂದ ವೀಕ್ಷಿಸಿ ಆನಂದಿಸಬಹುದಾಗಿದೆ ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ತಿಳಿಸಿದ್ದಾರೆ.
    ಇತ್ತೀಚೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದ್ದು, ಇದೀಗ ಪಾರ್ಶ್ವ ಚಂದ್ರಗ್ರಹಣ ಎದುರಾಗುತ್ತಿದೆ. ಸಂಜೆ ೫.೫೭ ರಿಂದ ೬.೧೮ರ ವರೆಗೆ ಗೋಚರಿಸಲಿದ್ದು, ನಿಸರ್ಗದ ಈ ನೆರಳು ಬೆಳಕಿನ ಆಟವನ್ನು ಕಣ್ತುಂಬಿಕೊಂಡು ಆನಂದಿಸಬಹುದಾಗಿದೆ. ಬರೀಗಣ್ಣಿನಿಂದ ವೀಕ್ಷಿಸಬಹುದಾಗಿದ್ದು, ಕಣ್ಣಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದು ಸಂಪೂರ್ಣ ಖಗ್ರಾಸ ಚಂದ್ರಗ್ರಹಣವಾಗಿದ್ದು, ದಕ್ಷಿಣ ಭಾರತೀಯರಿಗೆ ಗೋಚರಿಸಲಿದೆ.
    ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ ?
    ಸೂರ್ಯನ ಸುತ್ತಾ ಭೂಮಿ, ಭೂಮಿಯ ಸುತ್ತಾ ಚಂದ್ರ ಗುರುತ್ವ ಬಲದ ಕಾರಣ ಸುತ್ತುತ್ತಿವೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿಯು ಒಂದೇ ಸಮತಲದೊಂದಿಗೆ ಸರಳ ರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿ ಚಂದ್ರನನ್ನು ಮರೆ ಮಾಡುವ ಘಟನೆಯೇ ಚಂದ್ರಗ್ರಹಣ.
    ಚಂದ್ರನನ್ನು ಭೂಮಿಯ ನೆರಳು ಪೂರ್ಣ ಮುಚ್ಚಿದಾಗ ಪೂರ್ಣ ಚಂದ್ರಗ್ರಹಣ, ಭಾಗಶಃ ಮರೆಮಾಡಿದರೆ ಪಾರ್ಶ್ವ ಚಂದ್ರಗ್ರಹಣ ಎನ್ನುತ್ತೇವೆ.
    ಕೆಂಪು ಬಣ್ಣದ ಚಂದ್ರ ಗೋಚರ :
    ಹುಣ್ಣಿಮೆ ಪೂರ್ವದಲ್ಲಿ ಚಂದ್ರ ಉದಯವಾಗುತ್ತಿದ್ದರೆ, ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿರುವಾಗ ಸೂರ್ಯನ ಬೆಳಕು ಭೂಮಿಯ ವಾತಾವರಣದ ಕೆಂಪುಧೂಳಿನ ಮೂಲಕ ಹಾದು ಬರುವಾಗ ಬೆಳಕಿನ ವಕ್ರೀಭವನದ ಕಾರಣ ಕೆಂಪು ಬಣ್ಣ ನಮ್ಮ ಕಣ್ಣು ತಲುಪುವುದರಿಂದ ಚಂದ್ರ ಕೆಂಪು ಬಣ್ಣದಿಂದ ಗೋಚರಿಸುವನು. ಕೆಂಪು ಬಣ್ಣ ಹೆಚ್ಚಾಗಿದ್ದರೆ, ಧೂಳಿನ ಮಾಲಿನ್ಯ ಹೆಚ್ಚಾಗಿದೆ ಎಂದರ್ಥ,
    ಹಿರಿಯೂರು ಗ್ರಾಮದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ :
    ಟೆಲಿಸ್ಕೋಪ್ ಮೂಲಕ ಸಂಜೆ ಹಿರಿಯೂರು ರಂಗಮಂದಿರದಲ್ಲಿ ಗ್ರಹಣ, ಗುರು, ಶನಿ ಗ್ರಹಗಳ ವೀಕ್ಷಣೆ, ಚಂದ್ರನ ಕುಳಿಗಳ ದರ್ಶನ, ಆಶಾಕ ವೀಕ್ಷಣೆ ಮಾಡಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಹರೋನಹಳ್ಳಿ ಸ್ವಾಮಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೭೮೯೨೧೫೪೬೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.