Saturday, November 12, 2022

ಭವಿಷ್ಯ ನಿಧಿ ಹಣ, ಸಂಚಿತ ಬಡ್ಡಿ ಜಮಾ ಮಾಡಿ : ಎಂಪಿಎಂ ನಿವೃತ್ತ ಕಾರ್ಮಿಕರಿಂದ ಮನವಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು ಶಾಸನಬದ್ಧವಾಗಿ ಬರಬೇಕಾದ ಭವಿಷ್ಯ ನಿಧಿ ಹಣ ಹಾಗು ಸಂಚಿತ ಬಡ್ಡಿಯನ್ನು ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ನ. ೧೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು ಶಾಸನಬದ್ಧವಾಗಿ ಬರಬೇಕಾದ ಭವಿಷ್ಯ ನಿಧಿ ಹಣ ಹಾಗು ಸಂಚಿತ ಬಡ್ಡಿಯನ್ನು ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ನಿವೃತ್ತ ಕಾರ್ಮಿಕರಿಗೆ ಡಿಎ ಬಾಕಿ ವಿತರಿಸುವಾಗ ಶಾಸನಬದ್ದವಾಗಿ ನೀಡಬೇಕಾಗಿದ್ದ ಉದ್ಯೋಗಿ ಮತ್ತು ಉದ್ಯೋಗದಾತರ ಭಾಗದ ಭವಿಷ್ಯನಿಧಿ ಹಣ ಮತ್ತು ಸಂಚಿತ ಬಡ್ಡಿಯನ್ನು ಕಾರ್ಮಿಕರ ಭವಿಷ್ಯನಿಧಿ ಖಾತೆಗೆ ಜಮಾ ಮಾಡದೆ ಕಾರ್ಖಾನೆ ಆಡಳಿತ ಮಂಡಳಿ ಅನ್ಯಾಯವೆಸಗಿದ್ದು, ಇದರ ವಿರುದ್ಧ ಸುಮಾರು ೫೫೦ ನಿವೃತ್ತ ಕಾರ್ಮಿಕರು ವೈಯುಕ್ತಿಕವಾಗಿ ಭವಿಷ್ಯನಿಧಿ ಆಯುಕ್ತರಿಗೆ ಈ ಹಿಂದೆ ದೂರು ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಶುಕ್ರವಾರ ನಡೆದ ಭವಿಷ್ಯ ನಿಧಿ ಅದಾಲತ್‌ನಲ್ಲಿ ಎಂಪಿಎಂ ನಿವೃತ್ತ ನೊಂದ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
    ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಪ್ರಮುಖರಾದ ವೆಂಕಟೇಶಮೂರ್ತಿ, ರಘುನಾಥರಾವ್, ಶಿವಲಿಂಗಯ್ಯ, ತಾರಕೇಶ್ವರ, ಗೋವಿಂದಪ್ಪ, ಬಾಪು ಸೇರಿದಂತೆ ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.

ಕನಕದಾಸ ಜಯಂತಿ : ಕಿವುಡು, ಅಂಧ ವಿಕಲಚೇತನರಿಗೆ ಸಿಹಿ ಹಂಚಿಕೆ, ಹಣ್ಣು ವಿತರಣೆ

ಭದ್ರಾವತಿ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಹಾಗು ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಕನಕ ಜಯಂತಿ ಅಂಗವಾಗಿ ಸಸಿ ನೆಡುವ ಮೂಲಕ ಮಕ್ಕಳು ಮತ್ತು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸಲಾಯಿತು.
    ಭದ್ರಾವತಿ, ನ. ೧೨: ದಾಸ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ಶನಿವಾರ ನಗರದ ಹೊಸಸೇತುವೆ ರಸ್ತೆಯಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಸಿಹಿ ಮತ್ತು ಹಣ್ಣು ವಿತರಿಸಲಾಯಿತು.
    ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಹಾಗು ಪ್ರೌಢಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಮಕ್ಕಳು ಮತ್ತು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸಲಾಯಿತು.
    ಸಿದ್ದಾರ್ಥ ಅಂಧರ ಕೇಂದ್ರದ ಅಂಧ ವಿಕಲಚೇತನರಿಗೆ ಹಾಗು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸುವ ಮೂಲಕ ಕನಕದಾಸರ ಜಯಂತ್ಯೋತ್ಸವ ಶುಭ ಕೋರಲಾಯಿತು.
    ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಡಿ. ಪ್ರಭಾಕರ ಬೀರಯ್ಯ, ವೈ. ನಟರಾಜ್, ತಾಲೂಕು ಕುರುಬರ ಸಂಘದ ನಿರ್ದೇಶಕರಾದ ಕೆ. ಕೇಶವ, ಮಂಜುನಾಥ್(ಕೊಯ್ಲಿ), ಪ್ರಮುಖರಾದ ಹನುಮಂತು, ಷಣ್ಮುಖ, ಉಮೇಶ್, ಸತ್ಯನಾರಾಯಣ ಕೋಡಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಸಿದ್ದಾರ್ಥ ಅಂಧರ ಕೇಂದ್ರದ ಅಂಧ ವಿಕಲಚೇತನರಿಗೆ ಹಾಗು ಸಿಬ್ಬಂದಿಗಳಿಗೆ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಸಿಹಿ ಹಂಚಿ, ಹಣ್ಣು ವಿತರಿಸುವ ಮೂಲಕ ಕನಕದಾಸರ ಜಯಂತ್ಯೋತ್ಸವ ಶುಭ ಕೋರಲಾಯಿತು

Friday, November 11, 2022

ಕನಕದಾಸರ ವಿಚಾರಧಾರೆಗಳು ನಿತ್ಯನಿರಂತವಾಗಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ನಡೆದ ಕನಕಜಯಂತಿ ಹಾಗೂ ಒನಕೆ ಓಬವ್ವ ಜಯತ್ಯೋಂತ್ಸವ ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೧೧ ; ದಾಸ ಶ್ರೇಷ್ಠ ಕನಕದಾಸರ ವಿಚಾರಧಾರೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯನಿರಂತರವಾದಾಗ ಮಾತ್ರ ಆವರ ಜನ್ಮದಿನಾಚರಣೆ ಸಾರ್ಥಕಗೊಳ್ಳುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುರುಬರ ಸಮಾಜ ಮತ್ತು ಛಲವಾದಿ ಸಮಾಜದ ವತಿಯಿಂದ ತಾಲೂಕು ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸ ಶ್ರೇಷ್ಠ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕನಕದಾಸರು ಕೇವಲ ಒಂದು ಕುಲಕ್ಕೆ ಸೀಮಿತರಾದವರಲ್ಲ ಇಡೀ ಮಾನವಕುಲಕ್ಕೆ ಸೀಮಿತರಾದವರು. ಅವರ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ದಾರ್ಶನಿಕರ ಜಯಂತಿಗೆ ಅರ್ಥ ಬರುತ್ತದೆ. ಸಮಾಜದಲ್ಲಿ ಜಾತೀಯತೆ, ಅಸೂಯೆ ಭಾವನೆಗಳು ಹೋಗಲಾಡಿಸಿ ಸಹೋದರತ್ವ ಸಹಬಾಳ್ವೆಗಳನ್ನು ಬೆಳಸಿಕೊಳ್ಳಬೇಕೆಂದರು.
  ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ವೀರವನಿತೆ ಒನಕೆ ಓಬವ್ವ ಅವರು ಈ ನಾಡಿಗೆ ಕೊಟ್ಟಂತಹ ಕೊಡುಗೆ ಅಪಾರವಾಗಿದೆ. ಅವರು ನಾಡಿನ ರಕ್ಷಣೆಯಲ್ಲಿ ತೋರಿದ ಹೋರಾಟದ ಗುಣಗಳು, ಆದರ್ಶತನಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.  
    ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಮಾತನಾಡಿ, ಕನಕದಾಸರಂತೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಸಹ ಈ ನಾಡಿನ ಅಭಿವೃದ್ದಿಗೆ ಶ್ರಮಿಸಿದವರು. ಕನಕದಾಸರ ಜಯಂತಿಯಂದು ಅವರ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಈ ನಾಡಿನ ಜನರ ಹೆಮ್ಮೆಯ ಸಂಗತಿಯಾಗಿದೆ.  ಕನಕದಾಸರು ಮತ್ತು ಒನಕೆ ಓಬವ್ವ ಜಯಂತ್ಯೋತ್ಸವ ಈ ಬಾರಿ ಒಟ್ಟಿಗೆ ಆಚರಣೆ ಮಾಡುತ್ತಿರುವುದು ಅರ್ಥ ಪೂರ್ಣವಾಗಿದ್ದು, ಈ ಇಬ್ಬರು ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
    ಛಲವಾಧಿ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ, ಸರ್ಕಾರ ಈ ಬಾರಿ ಒನಕೆ ಓಬವ್ವ ಜಯಂತ್ಯೋತ್ಸವ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಒನಕೆ ಓಬವ್ವ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರ ಮಾಡಬಾರದು. ರಾಜಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದ ಓಬವ್ವರಂತೆ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಛಲವಾಧಿ ಸಮಾಜದಿಂದ ಹೋರಾಟ ಮಾಡಲಾಗುವುದು ಎಂದರು.
    ಉಪನ್ಯಾಸ ನೀಡಿದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಹಿಂದುಳಿದ ಶೋಷಿತ ಸಮುದಾಯದಲ್ಲಿ ಜನಿಸಿದ ಕನಕದಾಸರು,  ಜಾತಿ ಅಂಧಕಾರ, ಮೌಡ್ಯತೆಯಿಂದ ತುಂಬಿದ ಅಂದಿನ ಸಮಾಜದಲ್ಲಿ ತಮ್ಮದೇ ವಿಚಾರಧಾರೆಗಳ ಮೂಲಕ ದಾಸರಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಜೊತೆಗೆ ಸಮಾಜ ಸುಧಾರಣೆಗಾಗಿ ಶ್ರಮಿಸಿದವರು. ಕನ್ನಡ ಭಾಷೆ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕನಕದಾಸರ ವಿಚಾರಧಾರೆಗಳು ಸರ್ವಕಾಲಿಕವಾಗಿದ್ದು, ಇವರ ಕುರಿತ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದರು
    ತಹಸೀಲ್ದಾರ್ ಆರ್. ಪ್ರದೀಪ್, ಗ್ರೇಡ್-೨ ತಹಸೀಲ್ದಾರ್ ರಂಗಮ್ಮ, ನಗರಸಭೆ ಪೌರಾಯುಕ್ತ ಮನುಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭಾ ಸದಸ್ಯರಾದ ಶಶಿಕಲಾ, ಕಾಂತರಾಜ್, ಮಂಜುಳಾ, ಆರ್. ಶ್ರೇಯಸ್(ಚಿಟ್ಟೆ), ತಾಲೂಕು ಕುರುಬ ಸಮಾಜದ ನಿರ್ದೇಶಕರಾದ ಬಿ.ಎಸ್ ನಾರಾಯಣಪ್ಪ, ಹೇಮಾವತಿ, ಮಂಜುನಾಥ್(ಕೊಯ್ಲಿ), ಕೆ. ಕೇಶವ, ಪ್ರವೀಣ್, ಜಿ. ವಿನೋದ್ ಕುಮಾರ್, ನಾಗರಾಜ್, ಸಣ್ಣಯ್ಯ, ಬಿ.ಎಚ್ ವಸಂತ, ಬಿ.ಎ ರಾಜೇಶ್, ಜೆ. ಕುಮಾರ್, ಛಲವಾದಿ ಸಮಾಜದ ಹಿರಿಯ ಮುಖಂಡ ಎನ್. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಂಗೊಳ್ಳಿ ರಾಯಣ್ಣ ಯುವ ಪಡೆ ಅಧ್ಯಕ್ಷ ಅಭಿಲಾಷ್ ನಿರೂಪಿಸಿದರು. ಉಪತಹಸೀಲ್ದಾರ್ ಮಂಜಾನಾಯ್ಕ ಸ್ವಾಗತಿಸಿದರು. ನಗರದ ಗಾಯಕ ಸುಬ್ರಮಣ್ಯ ಅವರ ಕಂಠದಲ್ಲಿ ಕನಕದಾಸರ ಕೀರ್ತನೆಗಳ ಧ್ವನಿ ಸುರಳಿ ಬಿಡುಗಡೆಗೊಳಿಸಲಾಯಿತು. ತಾಲೂಕು ಕುರುಬರ ಸಂಘ ಹಾಗು ಕನಕ ವಿದ್ಯಾಸಂಸ್ಥೆಗೆ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ದಾನಿಗಳಿಂದ ಕೊಡುಗೆಯಾಗಿ ನೀಡಲಾಯಿತು.

ಕನಕ ಜಯಂತಿ : ಭವ್ಯ ಮೆರವಣಿಗೆ

ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ  ದಾಸ ಶ್ರೇಷ್ಠ  ಕನಕದಾಸರ ಮತ್ತು ವೀರವನಿತೆ ಓನಕೆ ಓಬವ್ವ ಜಯಂತೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆ ಸಂಗಮೇಶ್ವರ್ ಚಾಲನೆ ನೀಡಿದರು.
  ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಿಂದ ಆರಂಭಗೊಂಡ ಮೆರವಣಿಗೆ ಅಂಬೇಡ್ಕರ್‌ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು. 
     ತಹಸೀಲ್ದಾರ್ ಆರ್ ಪ್ರದೀಪ್,  ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್,  ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್,  ಪೌರಾಯುಕ್ತ ಮನುಕುಮಾರ್ ಹಾಗು ಸದಸ್ಯರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ  ಬಿ. ಸಿದ್ದಬಸಪ್ಪ, ತಾಲೂಕು ಕುರುಬ ಸಮಾಜ, ಸಂಗೊಳ್ಳಿ ರಾಯಣ್ಣ ಯುವ ಪಡೆ, ಕನಕ ಯುವ ಪಡೆ, ಕನಕ ಪತ್ತಿನ ಸಹಕಾರ ನಿಯಮಿತ, ಛಲವಾದಿ ಮಹಾಸಭಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Thursday, November 10, 2022

ಕನಕದಾಸರ ಜಯಂತಿ : ಹಾಲು, ಹಣ್ಣು, ಬ್ರೆಡ್ ವಿತರಣೆ



ಭದ್ರಾವತಿ, ನ. 10: ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ನ.11ರಂದು ಬೆಳಿಗ್ಗೆ 9 ಗಂಟೆಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ನಡೆಯಲಿದೆ. ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕನಕ ಯುವ ಪಡೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಕನಕ ಜಯಂತಿ : ಹಲವು ಕಾರ್ಯಕ್ರಮ

ಯಶಸ್ವಿಗೊಳಿಸಲು ವೈ. ನಟರಾಜ್ ಮನವಿ

ವೈ. ನಟರಾಜ್
    ಭದ್ರಾವತಿ, ನ. ೧೧: ಈ ಬಾರಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅಲ್ಲದೆ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ದೇಶಕ ವೈ. ನಟರಾಜ್ ತಿಳಿಸಿದ್ದಾರೆ.
    ಅನ್ನಸಂತರ್ಪಣೆ, ಸಿಹಿ ಹಾಗು ಹಣ್ಣು ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಲಿವೆ. ನಗರದ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳಿಂದ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನಕದಾಸರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.



ನಿಧಿ ರೂಪದ ಚಿನ್ನದ ನಾಣ್ಯ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ವಂಚನೆ


    ಭದ್ರಾವತಿ, ನ. ೧೧: ನಿಧಿ ರೂಪದಲ್ಲಿ ಸಿಕ್ಕಿರುವ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರು. ಪಡೆದು ವಂಚಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮುಡ ಗ್ರಾಮದ ನಿವಾಸಿ ಸದಾಶಿವಪ್ಪ ಮೇಸ್ತ್ರೀ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಕಳೆದ ೪ ದಿನಗಳ ಹಿಂದೆ ಪ್ರಕರಣ ದಾಖಲಾಗಿದೆ.  
    ಘಟನೆ ವಿವರ :  ಸದಾಶಿವಪ್ಪ ಮೇಸ್ತ್ರೀಯವರು ಕಳೆದ ೩ ತಿಂಗಳ ಹಿಂದೆ ಆಗಸ್ಟ್‌ನಲ್ಲಿ ಶ್ರೀಶೈಲಕ್ಕೆ ತೆರಳಿದ್ದಾಗ ಇವರ ಕಾರಿನ ಚಾಲಕ ಸೋಮಯ್ಯ ಹಿರೇಮಠರಿಗೆ ಶಿವಮೊಗ್ಗ ಜಿಲ್ಲೆಯವನು ಎಂದು ನಾಗರಾಜ್ ಎಂಬಾತ ಪರಿಚಯವಾಗಿದ್ದು, ಚಾಲಕನ ಮೂಲಕ ಪರಿಚಯವಾದ ನಾಗರಾಜ್ ಸದಾಶಿವಪ್ಪನವರ ಮೊಬೈಲ್ ನಂಬರ್ ಪಡೆದು ಸ್ನೇಹ ಸಂಪಾದಿಸಿದ್ದಾನೆ.
    ಹೀಗೆ ಒಂದು ವಾರದ ನಂತರ ಸದಾಶಿವಪ್ಪನವರ ಮೊಬೈಲ್‌ಗೆ ಕರೆ ಮಾಡಿದ ನಾಗರಾಜ್, ನಮ್ಮ ಅಜ್ಜಿಗೆ ೮ ಕೆ.ಜಿ. ನಿಧಿಯ ರೂಪದಲ್ಲಿ ಚಿನ್ನ ನಾಣ್ಯಗಳು ಸಿಕ್ಕಿವೆ. ಇದನ್ನು ನಿಮಗೆ ಕೊಡಬೇಕೆಂದು ಕನಸು ಬಿದ್ದಿದೆ. ಇಷ್ಟುದೊಡ್ಡ ಪ್ರಮಾಣದ ಚಿನ್ನದ ನಾಣ್ಯಗಳನ್ನು ಕೇವಲ ೨೦ ಲಕ್ಷಕ್ಕೆ ಕೊಡುತ್ತೇವೆ ನೀವು ಖರೀದಿಸಲೇಬೇಕೆಂದು ನಂಬಿಸಿದ್ದಾನೆ.
    ಚಿನ್ನವನ್ನು ಎಲ್ಲಿ ಬೇಕಾದರು ತಪಾಸಣೆ ನಡೆಸಿ ಪರಿಶೀಲಿಸಿ ನಂತರ ನಮಗೆ ಹಣ ಕೊಡಿ ಎಂದಿದ್ದು, ಇದಕ್ಕೆ ಒಪ್ಪಿದ ಸದಾಶಿವಪ್ಪ ತಾಲೂಕಿನ ದಾನವಾಡಿ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಗರಾಜ್ ಸದಾಶಿವಪ್ಪನ ಪತ್ನಿ ಮತ್ತು ಚಾಲಕನಿಗೆ ಎರಡು ಚಿನ್ನದ ನಾಣ್ಯಗಳನ್ನು ನೀಡಿ ಪರಿಶೀಲಿಸಲು ತಿಳಿಸಿದ್ದಾನೆ. ಚಿನ್ನದ ನಾಣ್ಯ ಅಸಲಿ ಎಂದು ತಿಳಿದುಬಂದಿದೆ.
    ಈ ಹಿನ್ನಲೆಯಲ್ಲಿ ಸದಾಶಿವಪ್ಪ ತನ್ನ ಜಮೀನನ್ನು ಮಾರಾಟ ಮಾಡಿ ೨೦ ಲಕ್ಷ ರು. ಹಣ ಹೊಂದಿಸಿಕೊಂಡು ಬಂದಿದ್ದು,  ನಾಗರಾಜ್ ಹಣ ಪಡೆದು ಕೇವಲ ೪-೫ ಚಿನ್ನದ ನಾಣ್ಯಗಳನ್ನು ನೀಡಿ ಉಳಿದ ಚಿನ್ನ ನಾಣ್ಯ ತಂದುಕೊಡುವುದಾಗಿ ಹೇಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.