Monday, November 14, 2022

೨೬ನೇ ವರ್ಷದ ಚಿದಂಬರ ಜಯಂತಿ



ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸೋಮವಾರ ೨೬ನೇ ವರ್ಷದ ಚಿದಂಬರ ಜಯಂತಿ ವಿಜೃಂಭಣೆಯಿಂದ ಜರುಗಿತು.  
    ಭದ್ರಾವತಿ, ನ. ೧೪ : ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸೋಮವಾರ ೨೬ನೇ ವರ್ಷದ ಚಿದಂಬರ ಜಯಂತಿ ವಿಜೃಂಭಣೆಯಿಂದ ಜರುಗಿತು.  
    ಮುಂಜಾನೆ ಕಾಕಡಾರತಿ ನಡೆಸಿ ನಂತರ ಶ್ರೀ ರಾಮೇಶ್ವರ ದೇವರಿಗೆ ಅಭಿಷೇಕ, ಈಶ್ವರ ದೇವರಿಗೆ ರುದ್ರಾಭಿಷೇಕ, ರುದ್ರವೇದಮಂತ್ರ ಜರುಗಿತು. ದೇವರಿಗೆ ವಿಶೇಷ ಅಲಂಕಾರ ಕೈಗೊಂಡ ನಂತರ ಚಿದಂಬರರ ಭಾವಚಿತ್ರ ಪುಷ್ಪಾಲಂಕೃತ ಅಡ್ಡಪಲ್ಲಿಕ್ಕಿಯಲ್ಲಿರಿಸಿ ಮಂಗಳವಾದ್ಯದೊಂದಿಗೆ ಪುರಾಣಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೂ ಉತ್ಸವ ಮೆರವಣಿಗೆ ನಡೆಸಲಾಯಿತು. ಕೊನೆಯಲ್ಲಿ ಉತ್ಸವ ಮೆರವಣಿಗೆ ಪುನಃ ಇದೆ ಮಾರ್ಗದಲ್ಲಿ ಹಿಂದಿರುಗಿ ದೇವಸ್ಥಾನ ತಲುಪಿತು.  
    ನಂತರ ಪಂಡಿತರಾದ ಪ್ರಕಾಶ ಮತ್ತು ಸೋಮಯಾಜಿಯವರಿಂದ ಚಿದಂಬರರ ಕುರಿತಂತೆ ಉಪನ್ಯಾಸ ನಡೆಯಿತು. ದೇವರಿಗೆ, ಗುರುಗಳಿಗೆ ಮಹಾಮಂಗಳಾರತಿ, ತೊಟ್ಟಿಲು ಪೂಜೆ ನಡೆಸಿ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು
    ಸಮಿತಿ ಅಧ್ಯಕ್ಷ ದೇಶಪಾಂಡೆ, ಇಂದ್ರಸೇನ, ಜೆ.ಎನ್ ಆನಂದರಾವ್, ಸಿ.ಕೆ ರಾಮಣ್ಣ, ಮಂಜುನಾಥ್, ರಮಾಕಾಂತ, ಗಾಯತ್ರಿ, ಶೋಭ, ಗೀತಾ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.

ಪತ್ರಕರ್ತ ನಾಗರಾಜ್ ನಿಧನ

ಭದ್ರಾವತಿ, ನ. 14:  ಹಿರಿಯ ಪತ್ರಕರ್ತ, ತಾಲೂಕಿನ ಕಾರೆಹಳ್ಳಿ ಗ್ರಾಮದ ನಿವಾಸಿ ನಾಗರಾಜ್(69) ಭಾನುವಾರ  ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.  
     ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದರು.  ಮೂಲತಃ ಶಿಕ್ಷಕರಾಗಿದ್ದ ನಾಗರಾಜ್ ರವರು ಸುಮಾರು 15 ವರ್ಷಗಳಿಗೂ ಹೆಚ್ಚಿನ  ಕಾಲ ಜಿಲ್ಲೆಯ ಹಲವು ಸ್ಥಳೀಯ ದಿನಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.  
       ಕೆಲವು ವರ್ಷಗಳಿಂದ  ಅನಾರೋಗ್ಯ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಇವರ ನಿಧನಕ್ಕೆ ನಗರದ ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಸಮಾಜ ಸೇವೆ ಮಾಡುವ ಗುಣ ಬೆಳೆಸಿ ಕೊಳ್ಳಿ : ನಿವೃತ್ತ ಶಿಕ್ಷಕ ಎಸ್.ಬಿ ಹಿರೇಮಠ್

ಭದ್ರಾವತಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ೧೯೮೭-೯೦ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ, ನ. ೧೪: ಸಮಾಜದಲ್ಲಿ ಸೇವೆ ಮಾಡುವ ಗುಣ ಬೆಳೆಸಿಕೊಳ್ಳುವುದು ಗುರುಗಳಿಗೆ ನೀಡುವ ದೊಡ್ಡ ಗೌರವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಬಿ ಹಿರೇಮಠ್ ಹೇಳಿದರು.
    ಅವರು ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ೧೯೮೭-೯೦ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಗುರುಗಳು ಹೇಳಿಕೊಡುವ ವಿದ್ಯೆಯಿಂದ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಾಗ ಗುರುಗಳ ಬದುಕು ಸಾರ್ಥಕಗೊಳ್ಳುತ್ತದೆ. ಇಂದಿನ ಕಾಲಘಟ್ಟದಲ್ಲಿ ಹಳೇಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಕರೆತಂದು ಗುರು ವಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಈ ಬೆಳವಣಿಗೆ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಸಹ ಸ್ಪೂರ್ತಿದಾಯಕವಾಗಬೇಕು. ಈ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಸಹ ಕರೆತರಬೇಕೆಂದರು.
    ೧೯೮೭-೯೦ನೇ ಸಾಲಿನಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಎಸ್.ಬಿ ಹಿರೇಮಠ್, ಜಿ.ಟಿ ರುದ್ರಪ್ಪ, ಕೆ.ಜಿ ಸೋಮಶೇಖರ್, ಟಿ. ಲೋಕೇಶ್, ಜಿ. ವಿಮಲಮ್ಮ ಮತ್ತು ಎನ್.ಎಂ ಸುನಂದ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
    ಹಳೇವಿದ್ಯಾರ್ಥಿಗಳಾದ ಸುಧೀರ್, ಸ್ನೇಹಜೀವಿ ಪೊಲೀಸ್ ಉಮೇಶ್, ರವಿ, ಮಂಜುನಾಥ ಮೋರೆ, ರೂಪ, ಇಂದೂಮತಿ, ಮಂಜುನಾಥ್, ಮೇಘರಾಜ್, ಅಜಯ್, ಕೊಮಾರನಹಳ್ಳಿ ರವಿಕುಮಾರ್, ಸರೋಜಾ, ಜೋಸ್ನಾ, ಭವಾನಿ ದಂಪತಿ, ಪುಷ್ಪ, ಹಾಲಮ್ಮ, ರಾಘವೇಂದ್ರ ಹೆಗಡೆ, ರತ್ನಾಕರ್(ಎಎಸ್‌ಐ), ಕೂಡ್ಲಿಗೆರೆ ಸುರೇಖಾ, ಜನ್ನಾಪುರ ಲೋಕೇಶ್, ದೇವರಾಜ ಮತ್ತು ಜಿ. ಆನಂದಕುಮಾರ್ ಸೇರಿದಂತೆ ಸುಮಾರು ೫೦ ರಿಂದ ೬೦ ಹಳೇವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಶಾಲಾ ದಿನದ ಹಳೇಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.


    ಇದಕ್ಕೂ ಮೊದಲು ಹಾಲಪ್ಪವೃತ್ತದಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಹಳೇಯ ವಿದ್ಯಾರ್ಥಿಗಳು ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಗುರುಗಳನ್ನು ಕರೆ ತಂದರು. ಮೆರವಣಿಗೆಯಲ್ಲಿ ಹಳೇಯ ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು.

Saturday, November 12, 2022

ಡಿ. ನಾಗರಾಜ್‌ಗೆ ಚಿನ್ನದ ಪದಕ

ಯೋಗಾಸನ ಪ್ರದರ್ಶನದಲ್ಲಿ ತೊಡಗಿರುವ ಭದ್ರಾವತಿ ವಿವೇಕಾನಂದ ಯೋಗ ಕೇಂದ್ರದ ಅಧ್ಯಕ್ಷ ಡಿ. ನಾಗರಾಜ್ 
    ಭದ್ರಾವತಿ, ನ. ೧೨ : ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಇನ್‌ಸ್ಟಿಟ್ಯೂಟ್, ಜಮುನಾ ರವಿ ಫೌಂಡೇಷನ್ ವತಿಯಿಂದ ಬೆಂಗಳೂರು ಮಹಾನಗರ ಪಾಲಿಕೆಯ ಡಾ. ರಾಜ್‌ಕುಮಾರ್ ಗ್ಲಾಸ್ ಹೌಸ್‌ನಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಯೋಗಾಸನ ಕಪ್ ಮೊದಲ ಮುಕ್ತ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಕೇಂದ್ರದ ಅಧ್ಯಕ್ಷ ಡಿ. ನಾಗರಾಜ್‌ರವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ೫೫ ವರ್ಷ ವಯೋಮಾನ ಮೇಲ್ಪಟ್ಟವರ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಕೆ. ಪ್ರಭಾಕರ್ ಹಾಗು ಕಾರ್ಯದರ್ಶಿ ಡಿ. ಪುಟ್ಟೇಗೌಡ ಮತ್ತು ಕ್ರೀಡಾಭಿಮಾನಿಗಳು ನಾಗರಾಜ್‌ರವರನ್ನು ಅಭಿನಂದಿಸಿದ್ದಾರೆ.
    ನಾಗರಾಜ್‌ರವರು ಕಳೆದ ಸುಮಾರು ೪ ದಶಕಗಳಿಗೂ ಹೆಚ್ಚು ಕಾಲದಿಂದ ಯೋಗಾಸನದಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ಸಹ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಿದೆ.

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಬಲೂನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
    ಭದ್ರಾವತಿ, ನ. ೧೨: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಬಲೂನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸರ್ಕಾರಿ ನೌಕರರೊಂದಿಗೆ ಕ್ರಿಕೆಟ್ ಆಟ ಆಡುವ ಮೂಲಕ ಸಂಭ್ರಮಿಸಿ ಶುಭ ಕೋರಿದರು.
  ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್,  ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಸಂಘದ ಉಪಾಧ್ಯಕ್ಷೆ ಡಿ. ನಾಗರತ್ನ, ರಾಜ್ಯ ಪರಿಷತ್ ಸದಸ್ಯ ಎಸ್.ಪ್ರಕಾಶ್, ಕ್ರೀಡಾ ಕಾರ್ಯದರ್ಶಿ ಕೆ. ಶ್ರೀಕಾಂತ್  ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
    ಕಾರ್ಯದರ್ಶಿ ಡಿ.ಎಸ್ ರಾಜಪ್ಪ ಸ್ವಾಗತಿಸಿದರು. ಖಜಾಂಚಿ ಎಸ್.ಕೆ ಮೋಹನ್ ನಿರೂಪಿಸಿದರು. ಜಾನ್ ನಿರ್ಮಲ್ ವಂದಿಸಿದರು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕ್ರಿಕೆಟ್ ಆಟ ಆಡುವ ಮೂಲಕ ಸಂಭ್ರಮಿಸಿ ಶುಭ ಕೋರಿದರು.

ಭವಿಷ್ಯ ನಿಧಿ ಹಣ, ಸಂಚಿತ ಬಡ್ಡಿ ಜಮಾ ಮಾಡಿ : ಎಂಪಿಎಂ ನಿವೃತ್ತ ಕಾರ್ಮಿಕರಿಂದ ಮನವಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು ಶಾಸನಬದ್ಧವಾಗಿ ಬರಬೇಕಾದ ಭವಿಷ್ಯ ನಿಧಿ ಹಣ ಹಾಗು ಸಂಚಿತ ಬಡ್ಡಿಯನ್ನು ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ನ. ೧೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು ಶಾಸನಬದ್ಧವಾಗಿ ಬರಬೇಕಾದ ಭವಿಷ್ಯ ನಿಧಿ ಹಣ ಹಾಗು ಸಂಚಿತ ಬಡ್ಡಿಯನ್ನು ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ನಿವೃತ್ತ ಕಾರ್ಮಿಕರಿಗೆ ಡಿಎ ಬಾಕಿ ವಿತರಿಸುವಾಗ ಶಾಸನಬದ್ದವಾಗಿ ನೀಡಬೇಕಾಗಿದ್ದ ಉದ್ಯೋಗಿ ಮತ್ತು ಉದ್ಯೋಗದಾತರ ಭಾಗದ ಭವಿಷ್ಯನಿಧಿ ಹಣ ಮತ್ತು ಸಂಚಿತ ಬಡ್ಡಿಯನ್ನು ಕಾರ್ಮಿಕರ ಭವಿಷ್ಯನಿಧಿ ಖಾತೆಗೆ ಜಮಾ ಮಾಡದೆ ಕಾರ್ಖಾನೆ ಆಡಳಿತ ಮಂಡಳಿ ಅನ್ಯಾಯವೆಸಗಿದ್ದು, ಇದರ ವಿರುದ್ಧ ಸುಮಾರು ೫೫೦ ನಿವೃತ್ತ ಕಾರ್ಮಿಕರು ವೈಯುಕ್ತಿಕವಾಗಿ ಭವಿಷ್ಯನಿಧಿ ಆಯುಕ್ತರಿಗೆ ಈ ಹಿಂದೆ ದೂರು ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಶುಕ್ರವಾರ ನಡೆದ ಭವಿಷ್ಯ ನಿಧಿ ಅದಾಲತ್‌ನಲ್ಲಿ ಎಂಪಿಎಂ ನಿವೃತ್ತ ನೊಂದ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
    ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಪ್ರಮುಖರಾದ ವೆಂಕಟೇಶಮೂರ್ತಿ, ರಘುನಾಥರಾವ್, ಶಿವಲಿಂಗಯ್ಯ, ತಾರಕೇಶ್ವರ, ಗೋವಿಂದಪ್ಪ, ಬಾಪು ಸೇರಿದಂತೆ ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.

ಕನಕದಾಸ ಜಯಂತಿ : ಕಿವುಡು, ಅಂಧ ವಿಕಲಚೇತನರಿಗೆ ಸಿಹಿ ಹಂಚಿಕೆ, ಹಣ್ಣು ವಿತರಣೆ

ಭದ್ರಾವತಿ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಹಾಗು ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಕನಕ ಜಯಂತಿ ಅಂಗವಾಗಿ ಸಸಿ ನೆಡುವ ಮೂಲಕ ಮಕ್ಕಳು ಮತ್ತು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸಲಾಯಿತು.
    ಭದ್ರಾವತಿ, ನ. ೧೨: ದಾಸ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ಶನಿವಾರ ನಗರದ ಹೊಸಸೇತುವೆ ರಸ್ತೆಯಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಸಿಹಿ ಮತ್ತು ಹಣ್ಣು ವಿತರಿಸಲಾಯಿತು.
    ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಹಾಗು ಪ್ರೌಢಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಮಕ್ಕಳು ಮತ್ತು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸಲಾಯಿತು.
    ಸಿದ್ದಾರ್ಥ ಅಂಧರ ಕೇಂದ್ರದ ಅಂಧ ವಿಕಲಚೇತನರಿಗೆ ಹಾಗು ಸಿಬ್ಬಂದಿಗಳಿಗೆ ಸಿಹಿ ಹಂಚಿ, ಹಣ್ಣು ವಿತರಿಸುವ ಮೂಲಕ ಕನಕದಾಸರ ಜಯಂತ್ಯೋತ್ಸವ ಶುಭ ಕೋರಲಾಯಿತು.
    ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಡಿ. ಪ್ರಭಾಕರ ಬೀರಯ್ಯ, ವೈ. ನಟರಾಜ್, ತಾಲೂಕು ಕುರುಬರ ಸಂಘದ ನಿರ್ದೇಶಕರಾದ ಕೆ. ಕೇಶವ, ಮಂಜುನಾಥ್(ಕೊಯ್ಲಿ), ಪ್ರಮುಖರಾದ ಹನುಮಂತು, ಷಣ್ಮುಖ, ಉಮೇಶ್, ಸತ್ಯನಾರಾಯಣ ಕೋಡಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಸಿದ್ದಾರ್ಥ ಅಂಧರ ಕೇಂದ್ರದ ಅಂಧ ವಿಕಲಚೇತನರಿಗೆ ಹಾಗು ಸಿಬ್ಬಂದಿಗಳಿಗೆ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದಿಂದ ಸಿಹಿ ಹಂಚಿ, ಹಣ್ಣು ವಿತರಿಸುವ ಮೂಲಕ ಕನಕದಾಸರ ಜಯಂತ್ಯೋತ್ಸವ ಶುಭ ಕೋರಲಾಯಿತು