Monday, December 5, 2022

ವಿಜೃಂಭಣೆಯಿಂದ ಜರುಗಿದ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹುತ್ತಾಕಾಲೋನಿಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಡಿ. ೫ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಹುತ್ತಾಕಾಲೋನಿಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
    ರಥೋತ್ಸವ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ ಮತ್ತು ರಥಶುದ್ದಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.  ಮಧ್ಯಾಹ್ನ ೧೨.೩೦ಕ್ಕೆ ದೇವಸ್ಥಾನದ ಮುಂಭಾಗ ಆರಂಭಗೊಂಡ ರಥೋತ್ಸವ ವಿಶ್ವೇಶ್ವರಾಯ ಆಟೋ ನಿಲ್ದಾಣದವರೆಗೂ ಸಾಗಿತು. ಉತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜೈಕಾರಗಳನ್ನು ಹಾಕಿದರು.  ಸಂಜೆ ರಥೋತ್ಸವ ಅಷ್ಟಾವದಾನಸೇವೆ, ಮಹಾಪೂಜೆ. ಮಹಾಮಂಗಳಾರತಿ ನೆರವೇರಿತು.
.    ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಸಿ.ದಾಸೇಗೌಡರವರು ಹಲವಾರು ವರ್ಷಗಳಿಂದ ಅನ್ನಸಂತರ್ಪಣೆ ಸೇವಾ ಕಾರ್ಯ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಸಹ ಸೇವಾ ಕಾರ್ಯ ಮುಂದುವರೆಸುವ ಮೂಲಕ ಗಮನ ಸೆಳೆದರು.  ವಿಶ್ವೇಶ್ವರಾಯ ಆಟೋ ನಿಲ್ದಾಣದ ಚಾಲಕರು ಮಜ್ಜಿಗೆ ವಿತರಣೆ ಹಾಗು ವೀರಾಂಜನೇಯಸ್ವಾಮಿ ದೇವಸ್ಥಾನ ಸಮಿತಿವತಿಯಿಂದ ಪಾನಕ, ಕೋಸಂಬರಿ ವಿತರಣೆ ನಡೆಯಿತು.
    ಶಾಸಕ ಬಿ.ಕೆ.ಸಂಗಮೇಶ್ವರ್, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಮುಖಂಡರು, ಹಾಗು ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ಕ್ಷೇತ್ರ ಭದ್ರಗಿರಿ ದೇವಸ್ಥಾನ ಜಾಗ ಸಮಸ್ಯೆ ಬಗೆಹರಿಸಿಕೊಳ್ಳಲು ಹೋರಾಟ ಅಗತ್ಯ : ಕೆ.ಎಸ್ ಈಶ್ವರಪ್ಪ


ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ(ಮಠ) ಆಶ್ರಮದ ಎಂ.ಸಿ ಹಳ್ಳಿಯ ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ಸೋಮವಾರ ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿ(ದವತ್ತಿರು ಸ್ವಾಮೀಜಿ)ಯವರ ೬ನೇ ವರ್ಷದ ಗುರುಪೂಜೆ ಮತ್ತು ಪುತ್ಥಳಿ ಪ್ರತಿಷ್ಠಾಪನೆ ಹಾಗು ಕಾರ್ತಿಕ ದೀಪೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಮತ್ತು ಧಾರ್ಮಿಕ ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೫: ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ(ಮಠ) ಆಶ್ರಮದ ಎಂ.ಸಿ ಹಳ್ಳಿಯ ಶ್ರೀ ಕ್ಷೇತ್ರ ಭದ್ರಗಿರಿ ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರ ತಕ್ಷಣ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರು ಒಗ್ಗಟ್ಟಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
    ಅವರು ಸೋಮವಾರ ಶ್ರೀ ಕ್ಷೇತ್ರದಲ್ಲಿ ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿ(ದವತ್ತಿರು ಸ್ವಾಮೀಜಿ)ಯವರ ೬ನೇ ವರ್ಷದ ಗುರುಪೂಜೆ ಮತ್ತು ಪುತ್ಥಳಿ ಪ್ರತಿಷ್ಠಾಪನೆ ಹಾಗು ಕಾರ್ತಿಕ ದೀಪೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಮತ್ತು ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
    ಸಮಾಜಕ್ಕೆ ಶ್ರೀ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಸಿದ್ದರ್ ಮಹಾ ಸ್ವಾಮೀಜಿಯರು ಶ್ರೀ ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಶ್ರೀ ಕ್ಷೇತ್ರದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ದೃಢಸಂಕಲ್ಪ ಕೈಗೊಳ್ಳಬೇಕಾಗಿದೆ. ಈ ಮೂಲಕ ಭವಿಷ್ಯದಲ್ಲಿ ಶ್ರೀ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದುವಂತಾಗಲಿ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ತಮಿಳು ಸಮಾಜ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಸಮಾಜದ ಏಳಿಗೆಗೆ ಬದ್ಧವಾಗಿದ್ದೇನೆ. ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ದರು. ಸೌಹಾರ್ದತೆ, ಸಮನ್ವಯತೆ ಕಾಯ್ದುಕೊಂಡು ಎರಡು ರಾಜ್ಯಗಳ ನಡುವಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ ಶ್ರೀ ಕ್ಷೇತ್ರದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಯನ್ನು ಸಹ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
    ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಗಿರಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ, ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಸ್ವಾಮಿವಿವೇಕಾನಂದ, ಮಹಾತ್ಮಗಾಂಧಿ, ಬಿ.ಆರ್ ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನ್ ಆದರ್ಶ ವ್ಯಕ್ತಿಗಳು, ಸಾಧು-ಸಂತರು ಜನಿಸಿರುವ ದೇಶ ನಮ್ಮದಾಗಿದೆ. ಇಂತಹ ಪುಣ್ಯ ನೆಲದಲ್ಲಿ ನಮ್ಮ ನಡೆ-ನುಡಿ, ಚಿಂತನೆಗಳು ಬದಲಾಗಿವೆ. ಸಮಾಜಕ್ಕೆ ಅನನ್ಯ ಸೇವೆ ನೀಡಿರುವವರನ್ನು ಸ್ಮರಿಸಿ ಅವರಿಗೆ ಗೌರವ ನೀಡುವ ಕೃತಜ್ಞತಾ ಭಾವನೆ ಸಹ ಇಲ್ಲವಾಗಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.
    ಚಿತ್ರದುರ್ಗ ಬಂಜಾರ ಮಠದ ಪೀಠಾಧ್ಯಕ್ಷರಾದ ಶ್ರೀ ಸೇವಾಲಾಲ್ ಸರ್ದಾರ್‌ಜೀ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಕ್ಷೇತ್ರದ ಸಿದ್ದರ್ ಮಹಾ ಸ್ವಾಮೀಜಿಯವರು ತಮ್ಮದೇ ಆದ ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದ್ದರು. ಜಾತ್ಯಾತೀತ ಮನೋಭಾವನೆಯೊಂದಿಗೆ ಕ್ಷೇತ್ರವನ್ನು ಕಟ್ಟಿಬೆಳೆಸಿವಲ್ಲಿ ಯಶಸ್ವಿಯಾಗಿದ್ದರು. ಅವರು ಇಂದಿಗೂ ನಮ್ಮೆಲ್ಲರ ಮುಂದೆ ಜೀವಂತವಾಗಿ ಉಳಿದುಕೊಂಡಿದ್ದಾರೆಂಬ ಭಾವನೆ ವ್ಯಕ್ತವಾಗುತ್ತಿದೆ. ಅವರ ದಾರಿಯಲ್ಲಿ ನಾವೆಲ್ಲರೂ ಸಾಗುವಂತಾಗಬೇಕಾಗಿದೆ ಎಂದರು.
    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ,  ಬಾಗಲಕೋಟೆ ಸುಕ್ಷೇತ್ರ ಕುಳ್ಳೂರು ಶ್ರೀ ಗುರು ಶಿವಯೋಗೀಶ್ವರ ಸಂಸ್ಥಾನ ಕಲ್ಮಠದ ಶ್ರೀ ಬಸವಾನಂದ ಭಾರತಿ ಸ್ವಾಮೀಜಿ, ಜಮ್ಮು ಹಾಕನೋರ್ ಶ್ರೀರಾಮ್ ಮಂದಿರ ಪೌಲಿವಾಲ ಆಶ್ರಮಂ ಶ್ರೀ ಅಣ್ಣಮಲೈಮೌನ ಸ್ವಾಮೀಜಿ ಮತ್ತು ಹರಿದ್ವಾರ್ ಕನ್ಕಾಲ್, ಭೈರಾಗಿ ಕ್ಯಾಂಪ್, ಅಭಿದ್ ಗಂಗಾ ಮೈಯ್ಯ ಅಮಂ ಶ್ರೀ ಕೃಷ್ಣನಂದ ಭಾರತಿ ಸ್ವಾಮೀಜಿ, ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮುಖಂಡರಾದ ಸುಂದರ್ ಬಾಬು, ಜಿ. ಧರ್ಮಪ್ರಸಾದ್, ಕೆ. ಮಂಜುನಾಥ್, ಎಂ.ಸಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಬಸಪ್ಪ ಮತ್ತು ಭದ್ರಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಶ್ಯಾಮರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶ್ರೀ ಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷನ್ ಅಧ್ಯಕ್ಷತೆ ವಹಿಸಿದ್ದರು.  ಸ್ವಾಗತ ಸಮಿತಿ ಅಧ್ಯಕ್ಷರಾದ ಹಾ. ರಾಮಪ್ಪ, ಗೌರವಾಧ್ಯಕ್ಷ ಆರ್. ಕರುಣಾಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಲ್ ಸಂಜೀವ್‌ಕುಮಾರ್, ಜೆ. ಮಂಜುನಾಥ್, ಕಾರ್ಯದರ್ಶಿಗಳಾದ ಆರ್. ವೆಂಕಟೇಶ್, ವಿ. ರವಿ, ಜಿ. ಸಿದ್ದಾರ್ಥ, ಕೆ. ಚಂದ್ರಶೇಖರ್, ಖಜಾಂಚಿ ಜಿ.ಟಿ ಮೂರ್ತಿ, ಕೆ. ಕುಮಾರನ್, ಸಲಹೆಗಾರರಾದ ಕಣ್ಣಪ್ಪ, ವಿ. ಕದಿರೇಶ್, ವಿ. ಸುಬ್ರಮಣಿ, ಸದಸ್ಯರಾದ ವೈ.ಎಸ್ ರಾಮಮೂರ್ತಿ, ಎಂ.ಎಲ್ ನಾರಾಯಣಸ್ವಾಮಿ, ಮೂರ್ತಿ, ಕೆ. ರಾಜಗೋಪಾಲ್, ಎಂ. ವೇಲು, ಎಸ್.ಎಸ್ ಬೀರಾದಾರ್, ಕೆ. ಶ್ರೀನಿವಾಸ್, ನಲ್ಲುಸ್ವಾಮಿ, ಕಾಳಯಣ್ಣ, ಧನಂಜಯ, ಪಂಚಾಕ್ಷರಿ, ಷಣ್ಮುಗಂ, ಜಗದೀಶ್ ಆಚಾರ್, ಡಾ. ವಿಕ್ರಮ್‌ಘೋಷ್ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. ಎಚ್. ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು.

Sunday, December 4, 2022

ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರಿಗೆ ಭಕ್ತರಿಂದ ಅದ್ದೂರಿ ಸ್ವಾಗತ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿದರು. 
    ಭದ್ರಾವತಿ, ಡಿ. ೪: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭಕ್ಕೆ ಶನಿವಾರ ಸಂಜೆ ಆಗಮಿಸಿದ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರಿಗೆ ಭಕ್ತರಿಂದ ಅದ್ದೂರಿ ಸ್ವಾಗತ ಕೋರಲಾಯಿತು.    
    ಶ್ರೀ ಮಹಾರಾಜರ ದಿವ್ಯ ಪಾದುಕೆಗಳೊಂದಿಗೆ ಆಗಮಿಸಿದ ಪ.ಪೂ ದತ್ತಾವಧೂತ ಮಹಾರಾಜರು ಹಾಗು ಆಶ್ರಮ ವಾಸಿಗಳನ್ನು ಮಂಗಳವಾದ್ಯ, ನಾದಸ್ವರ ಹಾಗು ಪುಷ್ಪವೃಷ್ಟಿಯೊಂದಿಗೆ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಆರತಿ ಮಂತ್ರಪುಷ್ಪ, ಪ್ರಸಾದ ವಿನಿಯೋಗ ಜರುಗಿತು.
    ಭಾನುವಾರ ಬೆಳಿಗ್ಗೆ  ಕಾಕಡಾರತಿ ಹಾಗು ಪಂಚಪದಿ ಭಜನೆ, ಪ್ರಾತಃಕಾಲ ಪೂಜೆ, ಸಾಮೂಹಿಕ ಜಪ ಮತ್ತು ಶ್ರೀ ಹನುಮಾನ್ ಚಾಲೀಸ ಪಾಠ ಹಾಗು ಮಧ್ಯಾಹ್ನ ಆಶೀರ್ವಚನ ಹಾಗು ಮಾಹಾನೈವೇದ್ಯ, ಮಹಾಮಂಗಳಾರತಿ ಹಾಗು ಮಹಾಪ್ರಸಾದ ವಿನಿಯೋಗ ಜರುಗಿತು. ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪ.ಪೂ ದತ್ತಾವಧೂತ ಮಹಾರಾಜರ ದರ್ಶನ ಪಡೆದರು.

ರೋಟರಿ ಸಮುದಾಯದಿಂದ ಯಶಸ್ವಿಯಾಗಿ ಜರುಗಿದ ‘ತುಂಗಾಭದ್ರಾ ಕ್ರೀಡೋಲ್ಲಾಸ’

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ, ಡಿ. ೪ : ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ರೋಟರಿ ಜೋನ್-೧೦ರ ಶಿವಮೊಗ್ಗ, ಭದ್ರಾವತಿ, ಶಿವಮೊಗ್ಗ ನಾರ್ತ್, ಶಿವಮೊಗ್ಗ ಮಿಡ್-ಟೌನ್, ಶಿವಮೊಗ್ಗ ರಿವರ್‌ಸೈಡ್, ಶಿವಮೊಗ್ಗ ಜ್ಯೂಬ್ಲಿ, ಕದಂಬ(ಶಿಕಾರಿಪುರ) ಮತ್ತು ಶಿವಮೊಗ್ಗ ಮಲೆನಾಡು ಹಾಗೂ ಜೋನ್-೧೧ರ ಶಿವಮೊಗ್ಗ ಈಸ್ಟ್, ಶಿವಮೊಗ್ಗ ಸೆಂಟ್ರಲ್, ತೀರ್ಥಹಳ್ಳಿ, ಸಾಗರ, ಕೋಣಂದೂರು, ರಿಪ್ಪನ್‌ಪೇಟೆ ಮತ್ತು ಸೊರಬ ಒಟ್ಟು ೧೬ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.


    ಭದ್ರಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪ್ರಮುಖರಾದ ಡಾ. ಗುಡದಪ್ಪ ಕಸಬಿ, ಸುನೀತ ಶ್ರೀಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕ್ರಿಕೆಟ್ ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಿ.ಎಲ್ ಚಾಂದ್ವಾನಿಯವರು ರೋಟರಿ ಸಮುದಾಯ ಒಂದೆಡೆ ಸೇರಿ ಕ್ರೀಡಾಕೂಟ ಆಯೋಜಿಸಿರುವುದು ಒಳ್ಳೆಯ ಬೆಳವಣಿಯಾಗಿದ್ದು, ಕ್ರೀಡಾಕೂಟ ಯಶಸ್ವಿಯಾಗಲಿ ಶುಭ ಹಾರೈಸಿದರು.

ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಗೀತಾ ಜಯಂತಿ

ಭದ್ರಾವತಿ ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಡಿ. ೪ : ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ವಿಜೃಂಭಣೆಯಿಂದ ಜರುಗಿತು.
    ಬಿ.ಕೆ ಮಾಲಕ್ಕ ನೇತೃತ್ವದಲ್ಲಿ ಬೆಳಿಗ್ಗೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾ ಜಯಂತಿ ಮಹತ್ವ ವಿವರಿಸಲಾಯಿತು. ಜಯಂತಿ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಗೀತಾ ಜಯಂತಿ ಪುಸ್ತಕ ವಿತರಿಸಲಾಯಿತು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕೇಂದ್ರ ಮೀಸಲು ಪೊಲೀಸ್ ಪಡೆ, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ೯೭ ಬೆಟಾಲಿಯನ್ ಡೆಪ್ಯೂಟಿ ಕಮಾಂಡೆಂಟ್‌ಗಳಾದ ಬಿ.ಸಿ ರಾಯ್, ನಯನ್ ನಂದಿ ಮತ್ತು ಸಂತೋಷ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾಕರ್ತರು, ಗೃಹ ರಕ್ಷಕದಳ ಘಟಕಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿಗಳು, ಆರ್‌ಎಎಫ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು. ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಜಿ.ಎಂ ನಟರಾಜ್ ವಂದಿಸಿದರು.


ಭದ್ರಾವತಿ ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಗೀತಾ ಜಯಂತಿ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.  

Saturday, December 3, 2022

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಿ : ಡಾ. ಮಹಾಬಲೇಶ್ವರ

ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸೈನಿಕ ಹಾಗು ರೈತ ಪೋಷಕರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ, ಡಿ. ೩: ಶಿಕ್ಷಣ ಸಂಸ್ಥೆಗಳ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಸೇವಾ ಕಾರ್ಯದ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ತರುಣ ಭಾರತಿ ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಡಾ. ಮಹಾಬಲೇಶ್ವರ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವವರು ತಮ್ಮನ್ನು ತಾವು ಸೇವಾ ಮನೋಭಾವದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಸಂಸ್ಕಾರಯುತವಾದ, ಮೌಲ್ಯಯುತವಾದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕೆಂದರು.

ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ತರುಣ ಭಾರತಿ ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಡಾ. ಮಹಾಬಲೇಶ್ವರ ಮತ್ತು ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಿ. ಪ್ರಭಾಕರ ಬೀರಯ್ಯ, ಈ ಶಿಕ್ಷಣ ಸಂಸ್ಥೆ ಹಣ ಮಾಡುವ ದುರುದ್ದೇಶ ಹೊಂದಿಲ್ಲ. ಮೌಲ್ಯಯುತ ಶಿಕ್ಷಣ ನೀಡುವುದು ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.
    ತರುಣ ಭಾರತಿ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್, ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸೈನಿಕ ಹಾಗು ರೈತ ಪೋಷಕರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.  
    ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ದೇವೇಂದ್ರಪ್ಪ, ಕುವೆಂಪು ವಿಶ್ವವಿದ್ಯಾನಿಲಯ ಎಂ.ಎಸ್ಸಿ ಗೋಲ್ಡ್ ಮೆಡಲಿಸ್ಟ್, ಶಿಕ್ಷಣ ಸಂಸ್ಥೆಯ ಹಳೇಯ ವಿದ್ಯಾರ್ಥಿ ಧನುಷ್ ಚವ್ಹಾಣ್, ಶಿಕ್ಷಣ ಸಂಸ್ಥೆಯ ಜಂಟಿ ಆಡಳಿತಾಧಿಕಾರಿ ಕೆ. ಸೌಮ್ಯರೂಪ, ಪ್ರಾಂಶುಪಾಲ ಮೃತ್ಯುಂಜಯ ಕಾನಿಟ್ಕರ್, ಪ್ರಶಾಂತಿ ಸೇವಾ ಟ್ರಸ್ಟ್ ಸದಸ್ಯರಾದ ಎಚ್.ಪಿ ಶಿವಪ್ಪ, ರಾಮಕೃಷ್ಣಯ್ಯ, ಡಾ. ವೀಣಾ ಎಸ್. ಭಟ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಈಶ್ವರಮ್ಮ ಪ್ರೌಢಶಾಲೆ-ಕನ್ನಡ ಮತ್ತು ಆಂಗ್ಲ ಮಾಧ್ಯಮ, ಶ್ರೀ ಸತ್ಯ ಸಾಯಿ ಜ್ಞಾನಪೀಠ ಸಿ.ಬಿ.ಎಸ್.ಇ ವತಿಯಿಂದ ಮೊದಲಬಾರಿಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳಿಂದ ನಡೆದ ಮಹಿಷಾಸುರಾಮರ್ಧಿನಿ ನೃತ್ಯ ಹೆಚ್ಚು ಗಮನ ಸೆಳೆಯಿತು.
    ಶಿಕ್ಷಣ ಸಂಸ್ಥೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಅವರು ಇಷ್ಟಪಡುವ ವಸ್ತುಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು. ವಿಶೇಷ ಎಂದರೆ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರು ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಿವೇಶನ ರಹಿತರಿಗೆ ಭೂಮಿ ಮೀಸಲಿಡಿ : ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ಮನವಿ


ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಜಂಬರಘಟ್ಟ ಗ್ರಾಮದ ಸರ್ವೆ ನಂ.೯೭ರ ೧೩೮ ಎಕರೆ ವಿಸ್ತೀರ್ಣದ ದನಗಳ ಮುಪ್ಪತ್ತು ಮತ್ತು ಮೂಡಲವಿಠಲಾಪುರ ಗ್ರಾಮದ ಸರ್ವೆ ನಂ.೨೫ರ ೨೬ ಎಕರೆ ೦೯ ಗುಂಟೆ ಹಾಗು ಅರಹತೊಳಲು ಗಡಿ ಗ್ರಾಮದ ಸರ್ವೆ ನಂ. ೫೨ರ ೪ ಎಕರೆ ೨೫ ಗುಂಟೆ ಗುಂಡುತೋಪಿನ ಭೂಮಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಮೀಸಲಿಡುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ 
ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೩ : ತಾಲೂಕಿನ ಹೊಳೆಹೊನ್ನೂರು ಹೋಬಳಿ ಜಂಬರಘಟ್ಟ ಗ್ರಾಮದ ಸರ್ವೆ ನಂ.೯೭ರ ೧೩೮ ಎಕರೆ ವಿಸ್ತೀರ್ಣದ ದನಗಳ ಮುಪ್ಪತ್ತು ಮತ್ತು ಮೂಡಲವಿಠಲಾಪುರ ಗ್ರಾಮದ ಸರ್ವೆ ನಂ.೨೫ರ ೨೬ ಎಕರೆ ೦೯ ಗುಂಟೆ ಹಾಗು ಅರಹತೊಳಲು ಗಡಿ ಗ್ರಾಮದ ಸರ್ವೆ ನಂ. ೫೨ರ ೪ ಎಕರೆ ೨೫ ಗುಂಟೆ ಗುಂಡುತೋಪಿನ ಭೂಮಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಮೀಸಲಿಡುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
      ಸುಮಾರು ವರ್ಷಗಳ ಹಿಂದೆ ಈ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಮೂಲಕ ಕೋಟ್ಯಾಂತರ ರು. ಲೂಟಿ ಮಾಡಿಕೊಂಡಿದ್ದು, ಅಲ್ಲದೆ ಪರಿಸರಕ್ಕೆ ಧಕ್ಕೆಯನ್ನುಂಟು ಮಾಡಲಾಗಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ಭೂಮಿಯನ್ನು ಸರ್ವೆ ಮಾಡಬೇಕೆಂದು ಮನವಿ ಮಾಡಲಾಗಿದೆ.
      ಈ ಭೂಮಿಯ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ನಿವೇಶನ ರಹಿತ ಬಡವರು, ವಿಧವೆಯರು, ಅಂಗವಿಕಲರು, ಮಂಗಳಮುಖಿಯರು ಹಾಗು ಪರಿಶಿಷ್ಟ ಜಾತಿ/ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹಾಗು ಅಲೆಮಾರಿ ಸಮುದಾಯ ಜನಾಂಗದವರು, ನಿರಾಶ್ರಿತರು ಮತ್ತು ನಿರ್ಗತಿಕರು ವಾಸಿಸುತ್ತಿದ್ದಾರೆ. ಇವರಿಗೆ ನಿವೇಶನ ಹಂಚಿಕೆ ಮಾಡಲು ಭೂಮಿ ಮೀಸಲಿಡುವಂತೆ ಕೋರಲಾಗಿದೆ.
       ಚಾಣುಕ್ಯ ಸೇನೆ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ ಮತ್ತು ರಾಜ್ಯ ಗೌರವಾಧ್ಯಕ್ಷ ರಾಮಚಂದ್ರರಾವ್ ಪವಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.