Monday, February 13, 2023

ಅರ್ಹ ಬಗರ್‌ಹುಕುಂ ಸಾಗುವಳಿದಾರರಿಗೆ ವಂಚನೆ : ದಾಖಲೆಪತ್ರ ವಿತರಣೆಯಲ್ಲಿ ಭ್ರಷ್ಟಾಚಾರ

ತಾಲೂಕು ಬಗರ್‌ಹುಕುಂ ಹೊರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ


ಭದ್ರಾವತಿ ತಾಲೂಕು ಕಛೇರಿಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸಾಗುವಳಿದಾರರಿಗೆ ಲಭಿಸಬೇಕಾದ ಸರ್ಕಾರಿ ಸೌಲಭ್ಯಗಳಿಂದ ವಂಚಿಸುತ್ತಿರುವುದನ್ನು ಖಂಡಿಸಿ ಸೋಮವಾರ ತಾಲೂಕು ಬಗರ್‌ಹುಕುಂ ಹೊರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಫೆ. ೧೩ : ತಾಲೂಕು ಕಛೇರಿಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸಾಗುವಳಿದಾರರಿಗೆ ಲಭಿಸಬೇಕಾದ ಸರ್ಕಾರಿ ಸೌಲಭ್ಯಗಳಿಂದ ವಂಚಿಸುತ್ತಿರುವುದನ್ನು ಖಂಡಿಸಿ ಸೋಮವಾರ ತಾಲೂಕು ಬಗರ್‌ಹುಕುಂ ಹೊರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ಸಾಗುವಳಿದಾರರು ಹಲವಾರು ದಶಕಗಳಿಂದ ಗೋಮಾಳ, ಸೊಪ್ಪಿನಬೆಟ್ಟ, ಹುಲ್ಲುಬನ್ನಿ ಹರಾಜು ಸರಕಾರಿ ಪಡ, ಖರಾಬು ಸೇರಿದಂತೆ ಇನ್ನಿತರ ಸರ್ಕಾರಿ ಭೂಮಿಯಲ್ಲಿ ಗಿಡಗಂಟೆಗಳನ್ನು ತೆಗೆದು ಸ್ವಚ್ಛ ಮಾಡಿ ವ್ಯವಸಾಯಕ್ಕೆ ಯೋಗ್ಯವನ್ನಾಗಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕಾಲ ಕಾಲಕ್ಕೆ ಆಯಾ ಸರ್ಕಾರಗಳು ಸಹ ಸಾಗುವಳಿದಾರರ ಪರವಾದ ನಿಲುವುಗಳನ್ನು ಕೈಗೊಳ್ಳುತ್ತಿವೆ.  ಅಲ್ಲದೆ ಸಾಗುವಳಿದಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರಿಗೆ ದಾಖಲೆ ಪತ್ರಗಳನ್ನು ವಿತರಿಸಲು ಮುಂದಾಗಿವೆ. ಇದಕ್ಕೆ ಪೂರಕವೆಂಬಂತೆ ನಮೂನೆ ೫೦, ೫೩, ೫೭ರ ಅಡಿಯಲ್ಲಿ ಅರ್ಜಿ ಕರೆದಿದ್ದು, ನಿಯಮಾನುಸಾರ ಅರ್ಹ ಸಾಗುವಳಿದಾರರಿಗೆ ದಾಖಲೆಪತ್ರಗಳನ್ನು ನೀಡಬೇಕಾಗಿದೆ. ಆದರೆ ಅರ್ಹ ಸಾಗುವಳಿದಾರರಿಗೆ ದಾಖಲೆಪತ್ರಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.  
ತಾಲೂಕಿನಲ್ಲಿ ಸುಮಾರು ೧೨ ಸಾವಿರಕ್ಕೂ ಅಧಿಕ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದು, ಆದರೆ ಸರ್ಕಾರದ ನಿಯಮಗಳನ್ನು ಪಾಲಿಸದೆ ೧೨ ಸಾವಿರ ಅರ್ಜಿಗಳ ಪೈಕಿ ಶ್ರೀಮಂತರಿಗೆ, ರಾಜಕೀಯ ಪ್ರಭಾವಿಗಳಿಗೆ ದಾಖಲೆಪತ್ರಗಳನ್ನು ನೀಡಲು ಟಿ.ಟಿ ಚಲನ್ ತಯಾರಿಸಿದ್ದು, ಕಾನೂನು ಉಲಂಘನೆ ಮಾಡಿ ಕಛೇರಿ ಸಮಯ ಮುಗಿದನಂತರವು ಕೆಲವು ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಶಾಸಕರ ಹಿಂಬಾಲಕರು, ಮಧ್ಯವರ್ತಿಗಳು ಅರ್ಹ ಸಾಗುವಳಿದಾರರಿಗೆ ವಂಚಿಸುತ್ತಿದ್ದಾರೆ. ದಾಖಲೆಪತ್ರಗಳ ವಿತರಣೆಯಲ್ಲಿ  ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ತಕ್ಷಣ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ದಾಖಲೆಪತ್ರಗಳನ್ನು ವಿತರಿಸಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಗೊಂದಿ ಜಯರಾಂ, ಧರ್ಮರಾಜ್, ಹನುಮಂತನಾಯ್ಕ, ಗೋಕುಲ್ ಕೃಷ್ಣನ್, ದಿಲೀಪ್, ಗುಣಶೇಖರ್, ನಕುಲ್, ಯುವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, February 12, 2023

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಟ್ಟಡ ಕಾರ್ಮಿಕರು ಸಂಘಟಿತರಾಗಿ : ಮೆಡಿಕಲ್ ಆನಂದ್

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದಿಂದ ಭಾನುವಾರ ಭದ್ರಾವತಿ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಐಕ್ಯತಾ ಜಾಗೃತಿ ಸಮಾವೇಶ ಯುವ ಮುಖಂಡ, ವಿಧಾನ ಸಭಾ ಕ್ಷೇತ್ರದ ಎಎಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಮೆಡಿಕಲ್ ಆನಂದ್ ಉದ್ಘಾಟಿಸಿದರು. 
    ಭದ್ರಾವತಿ, ಫೆ. ೧೨: ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನೆಯಾಗಬೇಕೆಂದು ಯುವ ಮುಖಂಡ, ವಿಧಾನ ಸಭಾ ಕ್ಷೇತ್ರದ ಎಎಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಮೆಡಿಕಲ್ ಆನಂದ್ ಕರೆ ನೀಡಿದರು.
     ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದಿಂದ ಭಾನುವಾರ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಐಕ್ಯತಾ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಕಾರ್ಮಿಕರ ಮೇಲೆ ಶೋಷಣೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಮೊದಲು ಜಾಗೃತರಾಗಿ ಸಂಘಟಿತರಾಗಬೇಕಾಗಿದೆ. ಕಾರ್ಮಿಕರೆಲ್ಲರೂ ಸಂಘಟಿತರಾಗಲು ಈ ರೀತಿಯ ಸಮಾವೇಶಗಳು ಹೆಚ್ಚು ಸಹಕಾರಿಯಾಗಿವೆ. ಅಲ್ಲದೆ ಕಾರ್ಮಿಕರ ಸೇವೆಯನ್ನು ಗುರುತಿಸಿ ಸನ್ಮಾನಿಸುವುದು ವಿಶೇಷವಾಗಿದೆ ಎಂದರು.


    ಕ್ಷೇತ್ರದಲ್ಲಿ ಶಾಸಕರು ಸೇರಿದಂತೆ ಸಾಕಷ್ಟು ಮಂದಿ ಜನಪ್ರತಿನಿಧಿಗಳು ಶ್ರೀಮಂತರಿದ್ದಾರೆ. ಆದರೆ ಬಡವರ ನೆರವಿಗೆ ಮುಂದಾಗುವವರು ವಿರಳ. ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಡು ಬಡವರನ್ನು ಗುರುತಿಸಿ ನನ್ನ ಸ್ವಂತ ಹಣದಲ್ಲಿ ಅವರಿಗೆ ಆಹಾರ ಪದಾರ್ಥಗಳನ್ನು ವಿತರಿಸಿದ್ದೇನೆ. ಅಲ್ಲದೆ ಹಲವಾರು ಸೇವಾ ಕಾರ್ಯಗಳನ್ನು ಕೈಗೊಂಡಿದ್ದೇನೆ. ವಿನೋದ್‌ರವರು ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಪರವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಸಮಾವೇಶದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸುವ ಜೊತೆಗೆ ಪ್ರಶಸ್ತಿಗಳನ್ನು ನೀಡಲಾಯಿತು. ಅಲ್ಲದೆ ಆಯ್ಕೆಯಾದ ಫಲಾನುಭವಿಗಳಿಗೆ ಫ್ಲಂಬರ್ ಟೂಲ್ ಕಿಟ್, ಎಲೆಕ್ಟ್ರಿಷಿಯನ್ ಟೂಲ್ ಕಿಟ್ ಹಾಗು ಮಹಿಳೆಯರಿಗೆ ಪೌಷ್ಠಿಕಾಂಶ ಕಿಟ್, ನೊಂದಾಯಿತ ಫಲಾನುಭವಿಯ ಗುರುತಿನ ಚೀಟಿ ಹಾಗು ಒಕ್ಕೂಟದ ಸದಸ್ಯತ್ವ ಗುರುತಿನ ಚೀಟಿ ವಿತರಿಸಲಾಯಿತು.  
    ನ್ಯಾಯವಾದಿ ವೈ. ವಿಠ್ಠಲ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವುದು ಇಂದು ಅಗತ್ಯವಾಗಿದ್ದು, ಈ ಹಿನ್ನಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗಪಡೆದುಕೊಳ್ಳಬೇಕೆಂದರು.


    ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷರಾದ ರಾಜಚಾರಿ, ಸುಬ್ರಮಣಿ, ರಾಜ್ಯ ಖಜಾಂಚಿ ಚಲುವರಾಜ್, ಸಹಕಾರ್ಯದರ್ಶಿ  ಎಸ್.ವೆಂಕಟೇಶ್, ನಿರ್ದೇಶಕರಾದ ಯಲ್ಲಪ್ಪ, ವಿ. ಅರವಿಂದ್, ಪವಿತ್ರ, ಕೆ. ರಾಜು, ಬಿ.ವೆಂಕಟೇಶ್, ಸುರೇಶ್, ಕುಮಾರ್, ಮಂಜುನಾಥ ರಾವ್, ಪಳನಿ, ಮಧು, ಮೋಹನ್ ಕುಮಾರ್, ಸಂಧ್ಯಾ, ತಾಲೂಕು ಸಮಿತಿ ಪ್ರಮುಖರಾದ ರಮೇಶ್, ಯು. ರಘು, ಜಯಣ್ಣ, ಜಗದೀಶ್, ಆಶೀರ್ವಾದ್, ಗೀತಾ, ಎ. ಆನಂದ್(ಆರ್ಟ್ಸ್) ರೇಖಾ, ಸುಬ್ರಮಣಿ, ಟಿ.ಜೆ ನೇತ್ರಾವತಿ, ಎಚ್. ಮಂಜುನಾಥ್, ಶ್ರೀಕಾಂತ್, ಸೋಮಶೇಖರ್, ಗ್ರಾಮಾಂತರ ಸಮಿತಿ ಪ್ರಮುಖರಾದ ವಸಂತರಾವ್, ಪುನೀತ್, ಪಿ. ವಿಜಯ್ ಕುಮಾರ್, ಶೇಖರಪ್ಪ, ಸಂದೇಶ್ ಪೈ, ಕೆ. ಸಂತೋಷ್, ಟಿ. ಕುಮಾರ್, ಎನ್.ಮುನಿಯಪ್ಪ, ಆಕಾಶ್, ಪಿ.ಪ್ರವೀಣ್, ಮುರುಗನ್, ಈಶಣ್ಣ, ಡಿ.ಪ್ರಶಾಂತ್, ಜಯಣ್ಣ, ಆರ್. ಮುನಿಯಪ್ಪ, ಆರ್. ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮನು ಆರ್ಕೇಸ್ಟ್ರಾ ಮಾಲೀಕ ಮನು ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ವಿ. ಶಶಿಕುಮಾರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಸುಶೀಲ ವಂದಿಸಿದರು.

ವಿಐಎಸ್‌ಎಲ್ ಕಾರ್ಮಿಕರ ನಿಯೋಗದಿಂದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿ ಭೇಟಿ : ಪ್ರಧಾನಿ ಗಮನ ಸೆಳೆಯಲು ಮನವಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿಯವರನ್ನು ಭಾನುವಾರ ಭೇಟಿಮಾಡಿ ಮನವಿ ಸಲ್ಲಿಸಿದರು.
    ಭದ್ರಾವತಿ, ಫೆ. ೧೨: ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿಯವರನ್ನು ಭಾನುವಾರ ಭೇಟಿಮಾಡಿ ಮನವಿ ಸಲ್ಲಿಸಿತು.
    ಪೀಠಾಧ್ಯಕ್ಷರಿಗೆ ಮನವಿ ಸಲ್ಲಿಸಿದ ನಿಯೋಗದ ಪ್ರಮುಖರು, ಕಳೆದ ೨೫ ದಿನಗಳಿಂದ ಹಮ್ಮಿಕೊಳ್ಳಲಾಗಿರುವ ಅನಿರ್ಧಿಷ್ಟಾವಧಿ ಹೋರಾಟದ ಬೆಳವಣಿಗೆ  ಹಾಗು ಕಾರ್ಖಾನೆ ಆಡಳಿತ ಮಂಡಳಿ ಕೈಗೊಳ್ಳುತ್ತಿರುವ ತೀರ್ಮಾನಗಳ ಕುರಿತು ವಿವರಿಸಿದರು.
 ಶ್ರೀ ಕ್ಷೇತ್ರದ ಕಾರ್ಯದರ್ಶಿಯಾಗಿರುವ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಗೂ ಸಹ ಗುತ್ತಿಗೆ ಕಾರ್ಮಿಕರ ನಿಯೋಗದಿಂದ ಮನವಿ ಸಲ್ಲಿಸಲಾಯಿತು. ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ನಿವೃತ್ತ ಕಾರ್ಮಿಕ ಮುಖಂಡರು ಸೇರಿದಂತೆ ಇನ್ನಿತರರು ನಿಯೋಗದಲ್ಲಿ ಪಾಲ್ಗೊಂಡಿದ್ದರು.

Saturday, February 11, 2023

ರಾಜಕೀಯ ಶಕ್ತಿ ಪಡೆದುಕೊಂಡಾಗ ಮಾತ್ರ ಕಾರ್ಖಾನೆ ಉಳಿಸಿಕೊಳ್ಳಲು ಸಾಧ್ಯ :

ಗುತ್ತಿಗೆ ಕಾರ್ಮಿಕರ ೨೪ನೇ ದಿನದ ಹೋರಾಟದಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೪ನೇ ದಿನ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಶನಿವಾರ ಆಮ್ ಆದ್ಮಿ  ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಬೆಂಬಲ ಸೂಚಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೧೧: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳಲು ರಾಜಕೀಯ ಶಕ್ತಿ ಅವಶ್ಯಕವಾಗಿದ್ದು, ಈ ಹಿನ್ನಲೆಯಲ್ಲಿ ನಿಮ್ಮಲ್ಲಿಯೇ ಒಬ್ಬರನ್ನು ಅಭ್ಯರ್ಥಿಯನ್ನಾಗಿಸಿ ಅವರನ್ನು ನಾವು ಗೆಲ್ಲಿಸುತ್ತೇವೆ. ಆ ಮೂಲಕ ಉಳಿಸಿಕೊಳ್ಳುವ ರಾಜಕೀಯ ಶಕ್ತಿ ತುಂಬುತ್ತೇವೆ ಎಂದು ಆಮ್ ಆದ್ಮಿ  ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದರು.
    ಅವರು ಶನಿವಾರ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೪ನೇ ದಿನ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
    ದೇಶಾದ್ಯಂತ ಭ್ರಷ್ಟಾಚಾರ ವ್ಯಾಪಕವಾಗಿದ್ದು, ದೇಶದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದೆ. ಸಾರ್ವಜನಿಕರ ಹಣ ಬಂಡವಾಳ ಶಾಹಿಗಳು ಲೂಟಿ ಮಾಡುತ್ತಿದ್ದಾರೆ.  ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಇರುವ ನಮ್ಮ ಹಣಕ್ಕೆ ಭದ್ರತೆ ಇಲ್ಲದಂತಾಗಿದೆ.  ಈ ಕಾರ್ಖಾನೆ ವಿಚಾರದಲ್ಲೂ ಸಹ ಇದೆ ರೀತಿಯ ಹುನ್ನಾರ ನಡೆಸಲಾಗುತ್ತಿದೆ. ಕಾರ್ಖಾನೆಯನ್ನು ನಷ್ಟಕ್ಕೆ ಒಳಪಡಿಸಿ ನಂತರ ಅದನ್ನು ಕಡಿಮೆ ಬೆಲೆಗೆ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಆರೋಪಿಸಿದರು.
    ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ಉಳಿಸಿಕೊಳ್ಳಬೇಕಾದರೆ ಮೊದಲು ರಾಜಕೀಯ ಶಕ್ತಿ ಪಡೆದುಕೊಳ್ಳಬೇಕು. ಹೋರಾಟ ನಡೆಸುತ್ತಿರುವ ಕಾರ್ಮಿರಲ್ಲಿ ಯಾರಾದರೊಬ್ಬರನ್ನು ಆಯ್ಕೆ ಮಾಡಿ ನಾವು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ಸ್ವತಃ ಕೇಜ್ರಿವಾಲ್‌ರವರನ್ನು ಕರೆ ತಂದು ಅವರ ಪರವಾಗಿ ಪ್ರಚಾರ ನಡೆಸುತ್ತೇವೆ. ಉತ್ತಮ ಆಡಳಿತ ನೀಡಲು ಪ್ರತಿಯೊಬ್ಬರು ಮುಂದೆ ಬರಬೇಕು. ಈಗಾಗಲೇ ಪಂಜಾಬ್ ಮತ್ತು ದೆಹಲಿಯಲ್ಲಿ ನಮ್ಮ ಪಕ್ಷ ಜನರು ನಿರೀಕ್ಷಿಸಿರುವ ಆಡಳಿತ ನೀಡುತ್ತಿದೆ ಎಂದರು.
    ಮಾ.೪ರಂದು ಕೇಜ್ರಿವಾಲ್‌ರವರು ದಾವಣಗೆರೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಕಾರ್ಖಾನೆ ಸಮಸ್ಯೆ ಕುರಿತು ಅವರ ಗಮನಕ್ಕೆ ತರಲಾಗುವುದು.  ಈ ಹಿನ್ನಲೆಯಲ್ಲಿ ಅಂದು ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರು ಸಹ ಹಾಜರಿರುವಂತೆ ಮನವಿ ಮಾಡಿದರು.
    ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಮಾತನಾಡಿ, ಕಾರ್ಖಾನೆ ಅಭಿವೃದ್ಧಿಗೊಳಿಸುವಂತೆ ಈ ಹಿಂದೆ ಸಾಕಷ್ಟು ಹೋರಾಟ ನಡೆಸಲಾಗಿದೆ. ಆದರೆ ಈ  ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಕಂಡು ಬರುತ್ತಿದೆ. ಎಲ್ಲಾ ಮೂಲ ಸೌಲಭ್ಯಗಳನ್ನು ಹೊಂದಿರುವ ಕಾರ್ಖಾನೆಯನ್ನು ಈಗಲೂ ಉಳಿಸಿಕೊಳ್ಳಬಹುದಾಗಿದೆ. ಕಾರ್ಖಾನೆ ಹೊಂದಿರುವ ಭೂಮಿಯಲ್ಲಿ ಕೇವಲ ಕಾಲು ಭಾಗ ಭೂಮಿ ಮಾರಾಟ ಮಾಡಿದರೆ ಸಾಕು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಲಭ್ಯವಾಗಲಿದೆ ಎಂದರು.
    ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ನಮ್ಮ ತೆರಿಗೆ ಹಣದಲ್ಲಿ ಮುನ್ನಡೆಯುತ್ತಿರುವ ನಮ್ಮ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಪ್ರಸ್ತುತ ನಾವುಗಳು ಪರದಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಮಿಳುನಾಡು, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅಲ್ಲಿನ ಜನರು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಅದು ಸಾಧ್ಯವಾಗದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಆಮ್ ಆದ್ಮಿ ಪಕ್ಷದ ಪ್ರಮುಖರಾದ ಕಿರಣ್, ನಜೀರ್ ಅಹಮದ್, ಮುಕಬುಲ್, ಹರೀಶ್, ಲಿಂಗರಾಜು, ಎಚ್. ರವಿಕುಮಾರ್, ರೇಷ್ಮಬಾನು, ಜಾವೀದ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಫೆ.೧೨ರಂದು ಗುತ್ತಿಗೆ ಕಾರ್ಮಿಕರ ನಿಯೋಗದಿಂದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿ ಭೇಟಿ:
    ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಗುತ್ತಿಗೆ ಕಾರ್ಮಿಕರ ನಿಯೋಗ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಲಿದೆ.
    ಈಗಾಗಲೇ ಶ್ರೀ ಕ್ಷೇತ್ರದ ಕಾರ್ಯದರ್ಶಿಯಾಗಿರುವ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಗೂ ಸಹ ಗುತ್ತಿಗೆ ಕಾರ್ಮಿಕರ ನಿಯೋಗದಿಂದ ಮನವಿ ಸಲ್ಲಿಸಲಾಗಿದ್ದು, ಇದೀಗ ಪೀಠಾಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಿದೆ.

ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಎಸ್. ಮಣಿಶೇಖರ್, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ

ಭದ್ರಾವತಿಯಲ್ಲಿ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಸ್. ಮಣಿಶೇಖರ್ ಹಾಗು ಸುಮಾರು ೫೦೦ ಮಂದಿ ಬೆಂಬಲಿಗರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಫೆ. ೧೧: ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಸ್. ಮಣಿಶೇಖರ್ ಹಾಗು ಸುಮಾರು ೫೦೦ ಮಂದಿ ಬೆಂಬಲಿಗರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಹಳೇನಗರದ ಕನಕಮಂಟಪದಲ್ಲಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಎಸ್. ಮಣಿಶೇಖರ್‌ರವರನ್ನು ಪಕ್ಷಕ್ಕೆ ಸ್ವಾಗತಿಸಿ ಅಭಿನಂದಿಸಿದರು.
    ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಆರ್. ನಾಗೇಶ್, ದೇಶ ಪ್ರೇಮಿ ಟಿಪ್ಪು ಯುವಕರ ಸಂಘದ ಅಧ್ಯಕ್ಷ ಮೆಹಬೂಬ್, ಕುರುಬ ಸಮಾಜದ ಪ್ರಮುಖರಾದ ಕುಮಾರ್(ಮಾಸ್ಟರ್), ರಾಜು ಹೋಬಳಿದಾರ್, ಮಂಜುನಾಥ್, ನಾಗತಿಬೆಳಗಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್. ವೇಲುಸ್ವಾಮಿ, ನದೀಮ್ ಪಾಷ, ಜಾವೀದ್, ಕೈಸರ್, ನಾಗರಾಜ್ ಸಿಂಧ್ಯಾ, ಕೋಡಿಹಳ್ಳಿ ರುದ್ರೇಶ್, ಹೊಸಮನೆ ಹೇಮಂತ್‌ಕುಮಾರ್, ಕೂಡ್ಲಿಗೆರೆ ರವಿಕುಮಾರ್, ಮುಕುಂದ ಸೇರಿದಂತೆ ಸುಮಾರು ೫೦೦ ಮಂದಿ ಬೆಂಬಲಿಗರು ಎಸ್. ಮಣಿಶೇಖರ್ ಅವರೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು.
    ಎಸ್. ಮಣಿಶೇಖರ್ ಮೂಲತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಯುವ ಕಾಂಗ್ರೆಸ್ ರಾಜ್ಯ ವಕ್ತಾರರಾಗಿ ವರುಣ್‌ಗೌಡ

ವರುಣ್‌ಗೌಡ
    ಭದ್ರಾವತಿ, ಫೆ. ೧೧: ಒಕ್ಕಲಿಗ ಸಮಾಜದ ಯುವ ಮುಖಂಡ, ಕಾಗದನಗರ ವಾರ್ಡ್ ನಂ. ೬ರ ನಿವಾಸಿ ವರುಣ್‌ಗೌಡರನ್ನು ಯುವ ಕಾಂಗ್ರೆಸ್ ರಾಜ್ಯ ವಕ್ತಾರರಾಗಿ ನೇಮಕಗೊಳಿಸಲಾಗಿದೆ.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ ಶ್ರೀನಿವಾಸ್‌ರವರು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸೂಚನೆ ಮೇರೆಗೆ ವರುಣ್‌ಗೌಡರನ್ನು ಯುವ ಕಾಂಗ್ರೆಸ್ ರಾಜ್ಯ ವಕ್ತಾರರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿ ಆದೇಶ ಹೊರಡಿಸಿದ್ದಾರೆ.  ಕಾಂಗ್ರೆಸ್ ಸರ್ಕಾರದಲ್ಲಿನ ಸಾಧನೆಗಳು ಹಾಗೂ ಪಕ್ಷದ ಕಾರ್ಯಕ್ರಮಗಳ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ರಾಜ್ಯ ವಕ್ತಾರರಾಗಿ ನೇಮಕಗೊಂಡಿರುವ ವರುಣ್‌ಗೌಡರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಪಕ್ಷದ ನಗರ ಹಾಗು ಗ್ರಾಮಾಂತರ ಘಟಕದ ಅಧ್ಯಕ್ಷರು, ಮುಖಂಡರು ಅಭಿನಂದಿಸಿದ್ದಾರೆ.

Friday, February 10, 2023

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಐಕ್ಯತಾ ಜಾಗೃತಿ ಸಮಾವೇಶ


 ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದಿಂದ ಫೆ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸಿ.ಎನ್ ರಸ್ತೆ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಐಕ್ಯತಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ