Friday, May 12, 2023

ಅಂಕಗಳನ್ನು ಮಾನದಂಡವಾಗಿರಿಸಿಕೊಳ್ಳದೆ ಪ್ರತಿಭಾವಂತರಾಗುವ ನಿಟ್ಟಿನಲ್ಲಿ ಗಮನ ಹರಿಸಿ : ಮನುಕುಮಾರ್

ಭದ್ರಾವತಿ ನಗರಸಭೆ ವತಿಯಿಂದ ಶುಕ್ರವಾರ ಸಂಜೆ ಈ ಬಾರಿ ಎಸ್‌ಎಸ್‌ಎಲ್‌ಸಿ ಹಾಗು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಪೌರಕಾರ್ಮಿಕರ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
    ಭದ್ರಾವತಿ, ಮೇ. ೧೨ : ವಿದ್ಯಾರ್ಥಿಗಳು ಅಂಕಗಳನ್ನು ಮಾನದಂಡವಾಗಿರಿಸಿಕೊಳ್ಳದೆ ಪ್ರತಿಭಾವಂತರಾಗುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದು ನಗರಸಭೆ ಪೌರಾಯುಕ್ತ ಮನುಕುಮಾರ್ ಹೇಳಿದರು.
    ಅವರು ಶುಕ್ರವಾರ ಸಂಜೆ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಬಾರಿ ಎಸ್‌ಎಸ್‌ಎಲ್‌ಸಿ ಹಾಗು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಪೌರಕಾರ್ಮಿಕರ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದರು.
    ನಿಮ್ಮಲ್ಲಿನ ಪ್ರತಿಭೆಗೆ ಅನುಗುಣವಾಗಿ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಬೇಕು. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಪ್ರತಿಭಾ ಪುರಸ್ಕಾರ ಮಕ್ಕಳನ್ನು ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದಾಗಿದೆ. ಮಕ್ಕಳು ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕು. ಭವಿಷ್ಯದ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಪಡೆದುಕೊಳ್ಳಬೇಕು. ನಗರಸಭೆವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.  
    ಪರಿಸರ ಅಭಿಯಂತರ ಪ್ರಭಾಕರ್, ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ, ಕಛೇರಿ ವ್ಯವಸ್ಥಾಪಕಿ ಎಂ. ಸುನಿತಾ ಕುಮಾರಿ ಉಪಸ್ಥಿತರಿದ್ದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಾಕಾರ್ಮಿಕರು ಪಾಲ್ಗೊಂಡಿದ್ದರು.
ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕೆಂದರು.
    ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಎನ್. ಮಂಜುಳಾ, ಡಿ. ಮೋನಿಕಾ, ಎ.ವಿದ್ಯಾ, ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಎನ್. ಪದ್ಮ, ಓ. ಸುಪ್ರಿಯ, ಎಂ. ನಯನ, ಬಿ. ಕೇಶವ, ಆರ್. ಪೂಜಾ, ಎಚ್. ರಮ್ಯ, ಎ. ಸ್ವಾತಿ, ಎನ್. ಭುವನ ಮತ್ತು ಎಂ. ಸೌಂದಯ್ಯ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಶಾರದ ಗೆದ್ದಲ್ಲಿ ಕ್ಷೇತ್ರದ ಮೊದಲ ಶಾಸಕಿ

    ಶಾರದ ಅಪ್ಪಾಜಿ
ಭದ್ರಾವತಿ, ಮೇ. ೧೨ : ಈ ಬಾರಿ ಚುನಾವಣೆ ಮತದಾನ ಫಲಿತಾಂಶ ಮೇ.೧೩ರ ಶನಿವಾರ ಪ್ರಕಟಗೊಳ್ಳಲಿದ್ದು, ಒಂದು ವೇಳೆ ಶಾರದ ಅಪ್ಪಾಜಿ ಗೆಲುವು ಸಾಧಿಸಿದ್ದಲ್ಲಿ ಕ್ಷೇತ್ರದ ಮೊದಲ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
    ಕ್ಷೇತ್ರದಲ್ಲಿ ಇದುವರೆಗೂ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಮಹಿಳಾ ಪ್ರತಿಸ್ಪರ್ಧಿ ಯಾರು ಇಲ್ಲ ಎಂಬುದು ವಿಶೇಷವಾಗಿದೆ. ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿ ಶಾರದ ಅಪ್ಪಾಜಿ ಈ ಬಾರಿ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
    ರಾಜಕೀಯದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ಎಂ.ಜೆ ಅಪ್ಪಾಜಿ ನಿಧನದ ನಂತರ ಕೇವಲ ೨ ವರ್ಷದಲ್ಲಿ ಶಾರದ ಅಪ್ಪಾಜಿ ಸಾಕಷ್ಟು ಬದಲಾವಣೆಯಾಗುವ ಮೂಲಕ ಪಕ್ಷವನ್ನು ಸಂಘಟಿಸಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದಾರೆ. ಇದೀಗ ಫಲಿತಾಂಶ ಅವರ ಮುಂದಿನ ಭವಿಷ್ಯ ನಿರ್ಧರಿಸಲಿದೆ.
    ಕ್ಷೇತ್ರದಲ್ಲಿ ಇದುವರೆಗೂ ಮಹಿಳೆಯರು ವಿಧಾನಸಭೆಗೆ ಆಯ್ಕೆಯಾಗಿಲ್ಲ. ಈ ಬಾರಿ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಪ್ರಬಲ ಎದುರಾಳಿಯಾಗಿದ್ದು, ಈ ಹಿನ್ನಲೆಯಲ್ಲಿ ಒಂದು ವೇಳೆ ಅವರು ಆಯ್ಕೆಯಾದಲ್ಲಿ ಕ್ಷೇತ್ರದ ಮೊದಲ ಶಾಸಕಿಯಾಗಲಿದ್ದಾರೆ.

ಈ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ನಡುವೆಯೇ ಬೆಟ್ಟಿಂಗ್

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಮೇ. ೧೨ : ಈ ಬಾರಿ ವಿಧಾನಸಭಾ ಚುನಾವಣೆ ಮತದಾನ ಮುಕ್ತಾಯಗೊಂಡ ತಕ್ಷಣ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂಬ ಕುತೂಹಲ ಹೆಚ್ಚಾಗುತ್ತಿದ್ದು, ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಸುಮಾರು ೩೦ ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಹೇಳಿಕೆ ನೀಡುತ್ತಿದ್ದವರು ಸಹ ಇದೀಗ ಮೌನಕ್ಕೆ ಶರಣಾಗಿದ್ದಾರೆ. ಮತ್ತೊಂದೆಡೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಗೆಲುವು ಸಾಧಿಸುದ್ದಾರೆಂದು ಆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ವಿಶ್ವಾಸವಾಗಿದೆ.
    ಬಿ.ಕೆ ಸಂಗಮೇಶ್ವರ್ ಮತ್ತು ಶಾರದ ಅಪ್ಪಾಜಿ ನಡುವೆಯೇ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಈ ಹಿಂದೆ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಪೈಪೋಟಿ ನೀಡಲು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಶಾರದ ಅಪ್ಪಾಜಿ ಅಭ್ಯರ್ಥಿಯಾದ್ದಲ್ಲಿ ಪ್ರಚಾರ ನಡೆಸದೇ ಮನೆಯಲ್ಲಿಯೇ ಇದ್ದು ಶಾಸಕರು ಗೆಲ್ಲುತ್ತಾರೆಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಶಾರದ ಅಪ್ಪಾಜಿ ಪ್ರಬಲ ಎದುರಾಳಿಯಾಗಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂಬ ಕುತೂಹಲ ಹೆಚ್ಚಾಗುತ್ತಿದೆ.


ಶಾರದ ಅಪ್ಪಾಜಿ
    ಉಳಿದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಹಾಗು ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಅಭ್ಯರ್ಥಿ ಆನಂದ್ ಮೆಡಿಕಲ್‌ರವರು ಪಡೆಯುವ ಮತಗಳ ಮೇಲೂ ಕುತೂಹಲ ಹೆಚ್ಚಾಗಿದೆ. ಈ ಇಬ್ಬರು ಪಡೆಯುವ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀಳಲಿದೆ ಎನ್ನಲಾಗಿದೆ.
    ಸಂಗಮೇಶ್ವರ್ ಅತಿ ಕಡಿಮೆ ಅಂತರದಲ್ಲಿ ಗೆಲುವು :
    ೨೦೦೮ರ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ವಿರುದ್ಧ ಅತಿ ಕಡಿಮೆ ಮತದಲ್ಲಿ ಗೆಲುವು ಸಾಧಿಸಿದ್ದರು. ಚಲಾವಣೆಯಾದ ಒಟ್ಟು ೧,೨೫,೩೦೦ ಮತಗಳ ಪೈಕಿ ಸಂಗಮೇಶ್ವರ್ ೫೩,೨೫೭ ಮತಗಳು ಶೇ.೪೨.೫ರಷ್ಟು ಹಾಗು  ಅಪ್ಪಾಜಿ ೫೨,೭೭೦ ಮತಗಳು ಶೇ.೪೨.೧೧ರಷ್ಟು ಮತಗಳನ್ನು ಪಡೆದುಕೊಂಡಿದ್ದರು. ಸಂಗಮೇಶ್ವರ್ ಕೇವಲ ೪೮೭ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
    ಅಪ್ಪಾಜಿ ಅತಿ ಹೆಚ್ಚು ಅಂತರದಲ್ಲಿ ಗೆಲುವು :
    ೨೦೧೩ರ ಚುನಾವಣೆಯಲ್ಲಿ ಅಪ್ಪಾಜಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಚಲಾವಣೆಯಾದ ಒಟ್ಟು ೧,೪೩,೫೫೬ ಮತಗಳ ಪೈಕಿ ಅಪ್ಪಾಜಿ ೭೮,೩೭೦ ಮತಗಳು ಶೇ.೫೪.೫೯ರಷ್ಟು ಹಾಗು ಸಂಗಮೇಶ್ವರ್ ೩೪,೨೭೧ ಮತಗಳು ಶೇ.೨೩.೮೭ರಷ್ಟು ಪಡೆದುಕೊಂಡಿದ್ದರು. ಅಪ್ಪಾಜಿ ಅತಿ ಹೆಚ್ಚು ೪೪,೦೯೯ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
    ಮೇ.೧೩ರ ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದು, ಸಂಗಮೇಶ್ವರ್ ಪುನಃ ಆಯ್ಕೆಯಾಗಿ ಮಂತ್ರಿಯಾಗುವ ಕನಸು ಕನಸಾಗುವುದೇ ಅಥವಾ ಅಪ್ಪಾಜಿಯವರ ವರ್ಚಸ್ಸು, ಅನುಕಂಪದ ಅಲೆ ಶಾರದ ಅಪ್ಪಾಜಿ ಕೈ ಹಿಡಿದಿದೆಯೇ ಎಂಬುದು ತಿಳಿದು ಬರಲಿದೆ.

ವಿಜೃಂಭಣೆಯಿಂದ ಜರುಗಿದ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವ

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸ್ವಾಮಿಯ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
    ಭದ್ರಾaವತಿ, ಮೇ. ೧೨: ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸ್ವಾಮಿಯ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
    ಮಹಾರಥೋತ್ಸವ ಅಂಗವಾಗಿ ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ, ರಥ ಶುದ್ಧಿ ಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಸುಮಾರು ೧.೩೦ರ ಸಮಯದಲ್ಲಿ ದೇವಸ್ಥಾನ ಮುಂಭಾಗದಿಂದ ಮಹಾರಥೋತ್ಸವ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೂ ಸಾಗಿತು. ನಂತರ ಅನ್ನಸಂರ್ಪಣೆ ನಡೆಯಿತು.
    ದೇವಸ್ಥಾನ ಪ್ರಧಾನ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.

Thursday, May 11, 2023

ಭಾರಿ ಗಾಳಿ ಮಳೆಗೆ ಧರೆಗುರುಳಿ ಬಿದ್ದ ಮರಗಳು, ಹಾರಿ ಹೋದ ತಗಡಿನ ಮೇಲ್ಛಾವಣಿ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಡಬಲ್ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕೊಂಬೆಗಳು ಮುರಿದು ಬಿದ್ದಿವೆ.
ಭದ್ರಾವತಿ, ಮೇ. ೧೧: ಕ್ಷೇತ್ರದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಕೆಲವೆಡೆ ಮರಗಳು ಧರೆಗುರುಳಿದ್ದು, ಮತ್ತೆ ಕೆಲವೆಡೆ  ಮರದ ಕೊಂಬೆಗಳು ಮುರಿದು ಬಿದ್ದಿರುವ ಘಟನೆ ನಡೆದಿದೆ.
ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಡಬಲ್ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕೊಂಬೆಗಳು ಮುರಿದು ಬಿದ್ದಿವೆ. ಹುಡ್ಕೋ ಕಾಲೋನಿಯಲ್ಲಿ ಮನೆಯೊಂದರ ಮುಂಭಾಗ ತೆಂಗಿನ ಮರ ಉರುಳಿ ಬಿದ್ದಿದ್ದು, ಇದೆ ರೀತಿ ಹಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿ ಬಿದ್ದಿವೆ. ಉಜ್ಜನಿಪುರದಲ್ಲಿ ಮನೆಯೊಂದರ ತಗಡಿನ ಮೇಲ್ಛಾವಣಿ ಹಾರಿ ಹೋಗಿರುವ ಘಟನೆ ನಡೆದಿದೆ.


ಭದ್ರಾವತಿ ಉಜ್ಜನಿಪುರದಲ್ಲಿ ಮನೆಯೊಂದರ ತಗಡಿನ ಮೇಲ್ಛಾವಣಿ ಹಾರಿ ಹೋಗಿರುವುದು.
    ಸಂಜೆ ೪.೩೦ ರಿಂದ ಸುಮಾರ ೧ ತಾಸು ಸುರಿದ ಗಾಳಿಮಳೆಯಿಂದಾಗಿ ಮತದಾರರು ಮತದಾನ ಮಾಡಲು ಪರದಾಡುವಂತಾಯಿತು. ಕೆಲವು ಮತಗಟ್ಟೆಗಳಲ್ಲಿ ಗಾಳಿ ಮಳೆಯಿಂದ ಸೋರಿಕೆ ಉಂಟಾಗಿದ್ದು, ಮಳೆಯಲ್ಲಿಯೇ ಮತದಾರರು ಮತದಾನ ಮಾಡುವ ಸ್ಥಿತಿ ಕಂಡು ಬಂದಿತು. ಗುರುವಾರ ಸಂಜೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ವಿಧಾನಸಭಾ ಚುನಾವಣೆ : ಕಳೆದ ಬಾರಿಗಿಂತ ಕಡಿಮೆ ಮತದಾನ, ಫಲ ನೀಡದ ಜಾಗೃತಿ

೭೫,೭೧೫ ಪುರುಷ, ೭೮,೧೪೮ ಮಹಿಳಾ 

ಒಟ್ಟು ೧,೫೩,೯೦೦ ಮತದಾರರು ಹಕ್ಕು ಚಲಾವಣೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಎಸ್. ಮಹಾದೇವರವರು ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
    ಭದ್ರಾವತಿ, ಮೇ. ೧೧ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಒಟ್ಟು ೨,೧೨,೧೬೫ ಮತದಾರರಲ್ಲಿ ೧,೫೩,೯೦೦ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು,  ಒಟ್ಟಾರೆ ೭೨.೫೪ರಷ್ಟು ಮತದಾನವಾಗಿದೆ.
    ೧,೦೩,೧೯೮ ಪುರುಷ ಮತದಾರರ ಪೈಕಿ ೭೫,೭೧೫ ಮಂದಿ ಶೇ.೭೩.೩೭ರಷ್ಟು ಮತ್ತು ೧,೦೮,೯೬೨ ಮಹಿಳಾ ಮತದಾರರ ಪೈಕಿ ೭೮,೧೮೪ ಮಂದಿ ಶೇ.೭೧.೭೫ರಷ್ಟು ಹಾಗು ಇತರೆ ೧ ಸೇರಿ ಒಟ್ಟು ೧,೫೩,೯೦೦ ಮಂದಿ ಶೇ.೭೨.೫೪ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದಲ್ಲಿ ಪುರುಷ ಮತದಾರರು ಮೇಲುಗೈ ಸಾಧಿಸಿದ್ದಾರೆ.
    ಕಳೆದ ಬಾರಿಗಿಂತ ಕಡಿಮೆ ಮತದಾನ :
    ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮತದಾನವಾಗಿದ್ದು, ೨೦೧೮ರಲ್ಲಿ  ಚುನಾವಣೆಯಲ್ಲಿ ೭೩.೫೯ರಷ್ಟು ಮತದಾನ ನಡೆದಿದ್ದು, ಈ ಬಾರಿ ೭೨.೫೪ರಷ್ಟು ಕಡಿಮೆ ಮತದಾನ ನಡೆದಿದೆ.  
ಈ ಹಿಂದಿನ ೪ ಚುನಾವಣೆಗಳು ಹಾಗು ಪ್ರಸ್ತುತ ಚುನಾವಣೆ ಸೇರಿದಂತೆ ಒಟ್ಟು ೫ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲ. ಈ ಬಾರಿ ಹೆಚ್ಚಿನ ಗುರಿ ಸಾಧಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೆಚ್ಚಿನ ಗಮನ ಹರಿಸಿತ್ತು. ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಮತದಾನ ಜಾಗೃತಿ ಮೂಡಿಸಿತ್ತು. ಆದರೆ ನಿರೀಕ್ಷೆಯಂತೆ ಹೆಚ್ಚಿನ ಗುರಿ ತಲುಪಿಲ್ಲ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.೭೯.೫೯ರಷ್ಟು ಮತದಾನ :
    ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಮತಗಟ್ಟೆಗಳ ಒಟ್ಟು ೩,೮೯೬ ಮತದಾರರ ಪೈಕಿ ೩೧೦೧ ಮತದಾರರು ಒಟ್ಟು ಶೇ.೭೯.೫೯ರಷ್ಟು ಮತದಾನವಾಗಿದೆ ಎನ್ನಲಾಗಿದೆ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಎಸ್. ಮಹಾದೇವರವರು ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮೇ.೧೨ರಂದು ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವ

    ಭದ್ರಾವತಿ, ಮೇ. ೧೧: ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೇ.೧೨ರಂದು ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ ನಡೆಯಲಿದೆ.
    ಗುರುವಾರ ಬೆಳಿಗ್ಗೆ ಗುರು ಗಣಪತಿ ಪೂಜೆ, ಪುಣ್ಯಾಹ ದೇವನಾಂದಿ ಪಣ್ಣಾರಿಕೇಳ ಗಣಯಾಗ ಧ್ವಜಾರೋಹಣ, ಕೌತುಕ ಬಂಧನ, ಅಂಕುರಾರ್ಪಣ, ಸಂಜೆ ಬೇರಿತಾಡನ, ಅಗ್ನಿಜನನ ಹೋಮ, ಆಧಿವಾಸ ಹೋಮ, ಉತ್ಸವ, ಬಲಿದಾನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮೇ.೧೨ರ ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ, ರಥ ಶುದ್ಧಿ ಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ, ಮಧ್ಯಾಹ್ನ ೧೨ ಗಂಟೆಗೆ ದೇವಸ್ಥಾನ ಮುಂಭಾಗದಿಂದ ಮಹಾರಥೋತ್ಸವ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೂ ಸಾಗಲಿದೆ. ಸಂಜೆ ರಥಾವರೋಹಣ, ಅಷ್ಟಾವಧಾನ ಸೇವೆ, ಶಯನೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಸೇವಾ ಸಮಿತಿ ಕೋರಿದೆ.