Thursday, July 6, 2023

ಆಧುನಿಕ ಕಾವ್ಯ ಓದು, ವಿಶ್ಲೇಷಣೆಗೆ ಆಧುನಿಕ ಕಾಲಘಟ್ಟದ ಅರಿವು ಅಗತ್ಯ : ಡಾ. ಕುಮಾರ ಚಲ್ಯ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಹಾಗು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರದಲ್ಲಿ ಆಧುನಿಕ ಕಾವ್ಯ ಓದು, ವಿಶ್ಲೇಷಣೆ ಕುರಿತು ಮಾತನಾಡಿದರು. 
    ಭದ್ರಾವತಿ, ಜು. ೬ : ಆಧುನಿಕ ಕಾಲಘಟ್ಟದ ಅರಿವು ಹೊಂದಿರುವವರಿಗೆ ಮಾತ್ರ ಆಧುನಿಕ ಸಾಹಿತ್ಯದ ಅರಿವು ತಿಳಿಯಲು ಸಾಧ್ಯ. ಆ ನೆಲೆಗಟ್ಟಿನಲ್ಲಿಯೇ ಒಂದು ಸಾಹಿತ್ಯದ ಕಾವ್ಯದ ಓದು, ವಿಶ್ಲೇಷಣೆ ನಡೆಯಬೇಕಾಗಿದೆ  ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕುಮಾರ ಚಲ್ಯ ಹೇಳಿದರು.
    ಅವರು ಗುರುವಾರ  ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಹಾಗು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರದಲ್ಲಿ ಆಧುನಿಕ ಕಾವ್ಯ ಓದು, ವಿಶ್ಲೇಷಣೆ ಕುರಿತು ಮಾತನಾಡಿದರು.
    ಪ್ರಾಚೀನ ಕಾಲಘಟ್ಟ ಹಾಗು ಆಧುನಿಕ ಕಾಲಘಟ್ಟಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಆಧುನಿಕತೆ ಬೆಳೆದಂತೆ ನಾಗರೀಕ ಸಮಾಜ ಸಹ ಬೆಳವಣಿಗೆ ಹೊಂದಿದೆ. ಈ ನಡುವೆ ರೂಪುಗೊಂಡ ಸಾಹಿತ್ಯದ ಕುರಿತು ಹೆಚ್ಚಿನ ಅರಿವು ಅಗತ್ಯವಾಗಿದೆ. ಆಧುನಿಕ ಸಾಹಿತ್ಯದ ಕಾವ್ಯ-ಓದು, ವಿಶ್ಲೇಷಣೆ ವಿಭಿನ್ನವಾಗಿದೆ. ಇದರ ಕುರಿತು ಇಂದಿನ ಪೀಳಿಗೆಯವರು ತಿಳಿದುಕೊಳ್ಳಬೇಕಾಗಿದೆ ಎಂದರು.
    ಆಧುನಿಕ ಸಾಹಿತ್ಯದ ಕಾವ್ಯ ಓದುವ ಬಗೆ ಹಾಗು ವಿಶ್ವೇಷಣೆ ಮಾಡುವ ವಿಧಾನಗಳನ್ನು ಶಿಕ್ಷಕರಿಗೆ ವಿವರಿಸಿದರು.
    ನಗರಸಭೆ ಸದಸ್ಯ ಬಿ.ಕೆ ಮೋಹನ್‌ ಶಿಬಿರ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಪರ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಶಾಸಕರು ಬದ್ದರಾಗಿದ್ದು, ಶಿಕ್ಷಕರು ಶಿಬಿರದ ಸದುಪಯೋಗಪಡೆದುಕೊಳ್ಳಬೇಕೆಂದರು.
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ  ಎಂ.ಎಸ್  ಸುಧಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ. ಬಸವರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಮತ್ತು ಪ್ರಶಾಂತ ಸಣ್ಣಕ್ಕಿ ಉಪಸ್ಥಿತರಿರುವರು.
    ಹಳೇನಗರ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವಾನಾಥ್‌, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ರಾಜಸ್ವ ನಿರೀಕ್ಷಕ ಪ್ರಶಾಂತ್‌, ಶಿಕ್ಷಣ ಸಂಯೋಜಕ ರವಿಕುಮಾರ್‌, ಶಿಕ್ಷಕ ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುಮತಿ ಕಾರಂತ್‌ ಪ್ರಾರ್ಥಿಸಿದರು. ಶಿಕ್ಷಕಿ ಮಾಯಮ್ಮ ನಿರೂಪಿಸಿದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.

Wednesday, July 5, 2023

ವಿಐಎಸ್‌ಎಲ್‌ ಕಾರ್ಖಾನೆ ಮುಂಭಾಗ ಮುಂದುವರೆದ ಹೋರಾಟ

ರಾಜ್ಯ ಸರ್ಕಾರ ಗಮನ ಹರಿಸಲಿ 

    ಭದ್ರಾವತಿ, ಜು. ೫ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಸುಮಾರು ೬ ತಿಂಗಳಿನಿಂದ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
    ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹಾಗು ಅಗತ್ಯವಿರುವ ಬಂಡವಾಳ ತೊಡಗಿಸಿವಂತೆ ಮತ್ತು ಕಾರ್ಮಿಕರ ಹಿತಕಾಪಾಡುವಂತೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಈಗಾಗಲೇ ಹಲವು ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ರಾಜ್ಯದ ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳು, ಹೋರಾಟಗಾರರು, ಶಾಲಾ-ಕಾಲೇಜುಗಳ ವಿದ್ಯಾಸಂಸ್ಥೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ನಾಗರೀಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಹಲವಾರು ಬಾರಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಆದರೆ ಹೋರಾಟಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ.
    ಈ ನಡುವೆ ಇದೀಗ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಸ್ವತಃ ಶಾಸಕ ಬಿ.ಕೆ ಸಂಗಮೇಶ್ವರ್‌ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದು, ಆದರೂ ಸಹ ಆಡಳಿತ ಮಂಡಳಿ ಯಾವುದೇ ನಿರ್ಧಾರ ಕೈಗೊಳ್ಳದೆ ಅಸಹಾಯಕತೆ ವ್ಯಕ್ತಪಡಿಸಿದೆ.
    ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಇಚ್ಛಾ ಶಕ್ತಿ ಪ್ರದರ್ಶಿಸಬೇಕಾಗಿದೆ. ಕಳೆದ ೩ ದಿನಗಳಿಂದ ವಿಧಾನಮಂಡಲ ಅಧಿವೇಶ ನಡೆಯುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಗಮನ ಹರಿಸಬೇಕಾಗಿದೆ.
    ಮಳೆ ನಡುವೆ ಹೋರಾಟ:
    ಶಾಮಿಯಾನ ಬಳಸಿಕೊಂಡು ಕಳೆದ ೬ ತಿಂಗಳಿನಿಂದ ಮಳೆ-ಗಾಳಿ-ಬಿಸಿಲನ್ನು ಲೆಕ್ಕಿಸದೆ ಗುತ್ತಿಗೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಕಳೆದ ಸುಮಾರು ೨ ತಿಂಗಳ ಹಿಂದೆ ಶಾಮಿಯಾನ ಬದಲಿಸಿದ್ದು, ವಾಟರ್‌ ಪ್ರೂಫ್‌ ಶಾಮಿಯಾನ ಹಾಕಲಾಗಿದೆ. ಕಳೆದ ೨ ದಿನಗಳಿಂದ ಮಳೆಯಾಗುತ್ತಿದ್ದು, ಆದರೂ ಸಹ ಹೋರಾಟ ಮುಂದುವರೆಯುತ್ತಿದ್ದು, ಶಾಮಿಯಾನ ಭಾಗದಲ್ಲಿ ಮಳೆ ನೀರು ನಿಂತುಕೊಂಡಿದ್ದು, ಹೋರಾಟಗಾರರು ನೀರನ್ನು ತೆರವುಗೊಳಿಸುವ ಮೂಲಕ ಹೋರಾಟಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಿದ್ದಾರೆ.


ಭದ್ರಾವತಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಸುಮಾರು ೬ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದು, ಕಳೆದ ೨ ದಿನಗಳಿಂದ ಮಳೆಯಾಗುತ್ತಿದೆ. ಬುಧವಾರ ಹೋರಾಟದ ಸ್ಥಳದಲ್ಲಿ ಮಳೆ ನೀರು ನಿಂತುಕೊಂಡಿದ್ದು, ತೆರವುಗೊಳಿಸುತ್ತಿರುವುದು.

ಜು.೯ರಂದು ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರ




    ಭದ್ರಾವತಿ, ಜು. ೫ : ಸಿದ್ಧಾರೂಢ ನಗರದ ಶೃಂಗೇರಿ ಶಂಕರ ಮಠದ ವತಿಯಿಂದ ಜು. ೯ರಂದು ಬೆಳಿಗ್ಗೆ ೧೦.೩೦ ಕ್ಕೆ ೨೩ನೇ ವರ್ಷದ ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರವನ್ನು ರಾಜಲಕ್ಷ್ಮಿ ಟೀಚರ್ ಮತ್ತು ಸಂಗಡಿಗರಿಂದ ಹಮ್ಮಿಕೊಳ್ಳಲಾಗಿದೆ.  
    ಶೃಂಗೇರಿ ಶ್ರೀ ವಿಭೂಷಿತ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಕೃಪಾಶೀರ್ವಾದೊಂದಿಗೆ  ಕಾರ್ಯಕ್ರಮ ನಡೆಯಲಿದ್ದು, ಶ್ರೀಶೃಂಗೇರಿ ಶಂಕರ ಮಠ ಧರ್ಮಾಧಿಕಾರಿ ಕೆ.ಆರ್‌ ಸುಬ್ಬರಾವ್‌ ಉಪಸ್ಥಿತರಿರುವರು.   ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
    ಶಾರದಾ ಶಂಕರ ಭಕ್ತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಲು ಕೋರಲಾಗಿದೆ.

ಜು.೭ರಂದು ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರ



ಭದ್ರಾವತಿ, ಜು. ೫  : ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಛೇರಿ ಹಾಗು ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದ  ಸಹಯೋಗದೊಂದಿಗೆ ಜು. ೭ರಂದು ಉಚಿತ ನೇತ್ರ ತಪಾಸಣೆ , ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರ ಆಯೋಜಿಸಲಾಗಿದೆ.  
      ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಶಿಬಿರ ನಡೆಯಲಿದ್ದು,  ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಕಣ್ಣಿನ ವಿಭಾಗದ ನುರಿತ ಅನುಭವಿ ತಜ್ಞ ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ:  ೭೮೯೨೯ ೫೨೧೭೬, ೭೮೯೨೭ ೦೩೯೬೧ ಇವರನ್ನು ಸಂಪರ್ಕಿಸಬಹುದಾಗಿದೆ.

ಚುಂಚಾದ್ರಿ ಮಹಿಳಾವೇದಿಕೆಯಿಂದ ಗುರು ಪೂರ್ಣಿಮಾ ಆಚರಣೆ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ವಿಶೇಷವಾಗಿ ಗುರುಪೂರ್ಣಿಮಾ ಆಚರಿಸಲಾಯಿತು.

    ಭದ್ರಾವತಿ, ಜು. : ನಗರದ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ವಿಶೇಷವಾಗಿ ಗುರುಪೂರ್ಣಿಮಾ ಆಚರಿಸಲಾಯಿತು.

   ಇಂದಿನ ಪೀಳಿಗೆಗೆ ಗುರುಪೂರ್ಣಿಮಾ ಮಹತ್ವ ತಿಳಿಸಿಕೊಂಡುವ  ಜೊತೆಗೆ ಧಾರ್ಮಿಕ ಪರಂಪರೆ ಎತ್ತಿ ಹಿಡಿಯುವ ಕಾರ್ಯದಲ್ಲಿ ವೇದಿಕೆ ತೊಡಗಿಸಿಕೊಂಡಿದೆ. ಹಲವಾರು ವರ್ಷಗಳಿಂದ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಮೂಲಕ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ.

   ಕಾರ್ಯಕ್ರಮದಲ್ಲಿ ಗುರು ಪೂರ್ಣಿಮಾ ಕುರಿತು ಪುಷ್ಟ ಕೇಶವ ಮಾತನಾಡಿದರುನಗರಸಭೆ ಮಾಜಿ ಅಧ್ಯಕ್ಷೆ, ವೇದಿಕ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.

      ಶೀಲಾ ರವಿ ಪ್ರಾರ್ಥಿಸಿ, ಲತಾ ಪ್ರಭಾಕರ್ ಸ್ವಾಗತಿಸಿದರು. ಭಾರತಿ ಕುಮಾರ್, ಮಂಗಳಾ, ಮಂಜುಳಾ, ಪ್ರೇಮ, ಕುಸುಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 


Tuesday, July 4, 2023

ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಎರಡು ದಿನಗಳ ಸಾಹಿತ್ಯ ರಸಗ್ರಹಣ ಶಿಬಿರ


    ಭದ್ರಾವತಿ, ಜು. ೪  : ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಹಾಗು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರ  ಜು.೬ ಮತ್ತು ೭ರಂದು  ಏರ್ಪಡಿಸಲಾಗಿದೆ.
    ನ್ಯೂಟೌನ್‌ ಎಸ್ಎವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿರುವ ಶಿಬಿರವನ್ನು ಜು.೬ರ ಬೆಳಿಗ್ಗೆ ೧೦ ಗಂಟೆಗೆ ಶಾಸಕ ಬಿ. ಕೆ. ಸಂಗಮೇಶ್ವರ್ ಉದ್ಘಾಟಿಸಲಿದ್ದು,  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ  ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.    ‌
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಕುಮಾರಚಲ್ಯ  ಆಧುನಿಕ ಕಾವ್ಯಗಳು, ಅವುಗಳನ್ನು ಪಾಠಮಾಡುವ ಕ್ರಮಗಳ ಕುರಿತು ಮಾತನಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ  ಬಿ. ಸಿದ್ಧಬಸಪ್ಪ, ವಿ. ಜಗದೀಶ್, ಕೋಡ್ಲು ಯಜ್ಞಯ್ಯ ಮತ್ತು ಪ್ರಶಾಂತ ಸಣ್ಣಕ್ಕಿ ಉಪಸ್ಥಿತರಿರುವರು.
     ವಿಶ್ರಾಂತ ಪ್ರಾಂಶುಪಾಲ, ಸಾಹಿತಿ ಡಾ. ಬಿ. ಎಂ ಜಯಶೀಲಾ  ಪ್ರಾಚೀನ ಕಾವ್ಯ ಓದು-ವಿಶ್ಲೇಷಣೆ ಕುರಿತು ಹಾಗು  ಹಳೆಗನ್ನಡ, ನಡುಗನ್ನಡ, ಗಮಕ ಓದು ವಾಚನ ಕುರಿತು  ಲಲಿತಮ್ಮ ವಿಠಲದಾಸ್ ಮಾಹಿತಿ ನೀಡಲಿದ್ದಾರೆ.   ಹಿರಿಯ ಸಾಹಿತಿ ವಿಶ್ರಾಂತ ಉಪನ್ಯಾಸಕ ಡಾ. ಶಾಂತಾರಾಮ್ ಪ್ರಭು  ಭಾಷೆ-ವ್ಯಾಕರಣ ಕುರಿತು ಮಾತನಾಡಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ, ಚಿಂತಕ ಡಾ. ಎಚ್. ಟಿ. ಕೃಷ್ಣಮೂರ್ತಿ ಕಾವ್ಯ ಮಿಮಾಂಸೆ - ಶೋಧನೆ ಕುರಿತು ಮಾಹಿತಿ ನೀಡಲಿದ್ದಾರೆ.
      ಜು. 7ರಂದು ಶುಕ್ರವಾರ ಬೆಳಿಗ್ಗೆ 10ಕ್ಕೆ ಕನ್ನಡ ಪಠ್ಯದಲ್ಲಿರುವ ಕಥೆ-ಪ್ರಬಂಧ ಗಳನ್ನು ಓದುವ, ವಿಶ್ಲೇಷಣೆ ಮಾಡುವ ಬಗೆಯನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ ವಿವರಿಸುವರು. ವಚನ ಸಾಹಿತ್ಯ ಹಿರಿಮೆ ಕುರಿತು ಕಸ್ತೂರಿಬಾ ಬಾಲಿಕಾ ಪ್ರೌಢಶಾಲಾ ಶಿಕ್ಷಕರಾದ ಡಾ. ಬಿ. ಎಸ್. ತಂಬೂಳಿ ಅವರು ಮಾತನಾಡಲಿದ್ದಾರೆ. ಜನಪದ ಸಾಹಿತ್ಯ ಕುರಿತು ಡಾ. ಎಸ್. ಎಂ. ಮುತ್ತಯ್ಯ ಹಾಗು ಭಾಷಾ ಕೌಶಲ್ಯ-ಮಹತ್ವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡುವರು.  ಪಠ್ಯದಲ್ಲಿರುವ ನಾಟಕ ಕುರಿತು ಓದು, ಪ್ರದರ್ಶನ ಕುರಿತು ಉಪನ್ಯಾಸಕ, ರಂಗನಿರ್ದೇಶಕ ಡಾ. ಜಿ. ಆರ್. ಲವ ಮಾಹಿತಿ ನೀಡಲಿದ್ದಾರೆ.
    ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಲು, ಫಲಿತಾಂಶದಲ್ಲಿ ಪ್ರಗತಿ ಕಾಣುವ ಉದ್ದೇಶದಿಂದ ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿದೆ.  ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು, ಉರ್ದು ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಲು ವೇದಿಕೆ ತಾಲೂಕು ಅಧ್ಯಕ್ಷೆ  ಎಂ.ಎಸ್  ಸುಧಾಮಣಿ  ಕೋರಿದ್ದಾರೆ. 

ಗುರು ಕೃಪೆಯಿಂದ ಎಲ್ಲವೂ ಸಾಧ್ಯ : ಶ್ರೀ ಕೃಷ್ಣಮೂರ್ತಿ ಸೋಮಯಾಜಿ

ಭದ್ರಾವತಿ ತಾಲೂಕು ಶಂಕರ ಸಮಿತಿ ಸಂಚಾಲಕರಾದ ವೇದಬ್ರಹ್ಮ ಶ್ರಿ ಕೃಷ್ಣ ಮೂರ್ತಿ ಸೋಮಯಾಜಿ ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾ‍ರ್ಯಕ್ರಮದ ನೇತೃತ್ವ ವಹಿಸಿ  ಮಾತನಾಡಿದರು.

    ಭದ್ರಾವತಿ, ಜು. : ಜೀವನದಲ್ಲಿ ಗುರು ಕೃಪೆಯಿಂದ  ಲೌಕಿಕ ಹಾಗೂ ಅಲೌಕಿಕ ಸಾಧನೆ ಗುರಿ ತಲುಪಲು ಸಾಧ್ಯ ಎಂದು ತಾಲೂಕು ಶಂಕರ ಸಮಿತಿ ಸಂಚಾಲಕರಾದ  ವೇದಬ್ರಹ್ಮ ಶ್ರಿ ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.

    ಅವರು ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾ‍ರ್ಯಕ್ರಮದ ನೇತೃತ್ವವಹಿಸಿ  ಮಾತನಾಡಿದರು

   ಗುರುಪೂರ್ಣಿಮೆ ಮಹತ್ವ ತಿಳಿಸಿಕೊಡಲಾಯಿತು. ಅಲ್ಲದೆ  ಭಜನೆ ಹಾಗೂ ಅಷ್ಟೋತ್ತರ ಪಠಣ ನಡೆಯಿತು.  ಜಯಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.  ಎನ್ ಎಸ್ ಸುಬ್ರಹ್ಮಣ್ಯ ಸ್ವಾಗತಿಸಿ, ಸ್ವರ್ಣ ನಾಗೇಂದ್ರ ವಂದಿಸಿದರು