![](https://blogger.googleusercontent.com/img/a/AVvXsEjHSBouo5q33_sxwedxbtXFnoDVJvgii12uE5OGsyzPV77oZ3jJ9L_qM2jBUXqZZ44OuDiJblMPwJK_9msNb4k5bpvz-KiwkEUmQFfyYrCKUpbU40sN3WOPgB6bp3aBldZihcX9O5nYkNwV6BRQnT-KaiinDwEG4Z_sTinIdB4nd0a-cWeNVKKIpeBti0zH=w400-h211-rw)
ಭದ್ರಾವತಿಯಲ್ಲಿಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಅವರಿಗೆ ಡಾ.ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭದ್ರಾವತಿ, ಜು. ೧೮ : ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಯಶಸ್ಸು, ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗುತ್ತೇವೆ ಎಂದು ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಿ ತಂದೆ-ತಾಯಿ, ಗುರುಗಳು, ನೆರೆಹೊರೆಯವರ ಆಶೀರ್ವಾದೊಂದಿಗೆ ಮುನ್ನಡೆಯಬೇಕು. ಮನುಷ್ಯ ಮನುಷ್ಯರಲ್ಲಿ ಪ್ರೀತಿ ವಿಶ್ವಾಸ ಹಂಚಿ ಸಹಬಾಳ್ವೆ ಮೂಲಕ ರಾಗ ದ್ವೇಷ ಕಿತ್ತೊಗೆದಾಗ ಸಮಾಜದ ಅಭಿವೃಧ್ಧಿ ಆಗುತ್ತದೆ. ಧರ್ಮ ನಂಬಿ, ಜಾತಿ ನಂಬಬೇಡಿ. ಮನುಷ್ಯತ್ವ, ಮಾನವೀಯತೆಯ ಕಳಕಳಿ ಬೆಳೆಸಿಕೊಳ್ಳಿ ಎಂದರು.
ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್ ಮಾತನಾಡಿ, ಮನುಷ್ಯ ಎಷ್ಟೇ ಐಶ್ವರ್ಯ, ಅಂತಸ್ತು, ಪ್ರಸಿದ್ದಿ, ಪ್ರಶಸ್ತಿ, ಸನ್ಮಾನಗಳು ಪಡೆದರೂ ಆತನಿಗೆ ಅಂತಿಮವಾಗಿ ಮನಸ್ಸಿಗೆ ಶಾಂತಿ ಸಿಗುವುದು ಆಧ್ಯಾತ್ಮ, ಗುರುವಿನ ಮಾರ್ಗದರ್ಶನದ ಸಾನಿಧ್ಯದಿಂದ ಮಾತ್ರ ಎಂದರು.
ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಾಜುಗೌಡ ಹಾಗು ಶ್ರೀಧರ್ ಮಾತನಾಡಿ, ವಿಷ್ಣುವರ್ಧನ್ ನಿಧನರಾಗಿ ಹಲವು ವರ್ಷಗಳು ಕಳೆದರೂ ಸಹ ಅವರ ಸ್ಮಾರಕ ಇನ್ನೂ ನಿರ್ಮಾಣ ಆಗಿಲ್ಲ. ಇದರ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ರೀತಿಯ ಅಗತ್ಯ ಕ್ರಮ ಕೈಗಳ್ಳುತ್ತಿಲ್ಲ. ಅಭಿಮಾನ್ ಸ್ಟುಡಿಯೋದವರು ಅವರ ಸಮಾಧಿ ಸ್ಥಳದಲ್ಲಿ ೧೦ ಗುಂಟೆ ಜಾಗ ನೀಡಿದ್ದರು. ಆದರೆ ನಂತರ ಇದರ ಬಗ್ಗೆ ವಾದ ವಿವಾದ ಉಂಟಾಗಿ, ಈಗ ವ್ಯಾಜ್ಯ ಹೈಕೋರ್ಟ್ನಲ್ಲಿದೆ. ಇದರ ಬಗ್ಗೆ ವಿಷ್ಣು ಸೇನಾ ಸಮಿತಿಯಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ. ರಾಜ್ ಕಲಾ ಭವನ ಇದೆ, ಅಂಬರೀಷ್ ಕಲಾ ಭವನ ಇದೆ. ಆದರೆ ವಿಷ್ಣುವರ್ಧನ್ ಹೆಸರಿನಲ್ಲಿ ಕಲಾ ಭವನ ಇಲ್ಲ. ಸ್ಮಾರಕನೂ ಇಲ್ಲ. ಆದ್ದರಿಂದ ಇನ್ನಾದರೂ ಇದರ ಬಗ್ಗೆ ಕಾರ್ಯ ಪ್ರವೃತರಾಗ ಬೇಕು. ಇದರ ಬಗ್ಗೆ ಸರ್ಕಾರದ ಜೊತೆ ವ್ಯವಹರಿಸಲಾಗುತ್ತಿದೆ ಎಂದರು.
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್, ಗಾಯಕ ಸುಬ್ರಮಣ್ಯ ಕೆ. ಐಯ್ಯರ್, ಅರ್ಜುನ್, ರಾಧಾ ಗಂಗಾಧರ್, ಆನಂದ ರಾಜ್, ರಘು, ತುಳಸಿಕೃಷ್ಣ, ವಸಂತ ಆರ್ ಮಾಧವ, ಹರೀಶ್ ಗೌಡ, ಶರಾವತಿ, ಯದುನಂದನ್ ಗೌಡ, ಎಸ್. ಮಂಜುನಾಥ್ರವರುಗಳಿಗೆ ಅಪೇಕ್ಷ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೀರಕಪುತ್ರ ಶ್ರೀನಿವಾಸ್ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾರತಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್. ಮಣಿಶೇಖರ್, ಶ್ರೀಧರ್, ಎಂ. ಶ್ರೀನಿವಾಸ್, ಕೋಕಿಲ, ಬನಶಂಕರಿ, ರಾಧಾ, ವೈ.ಕೆ ಹನುಮಂತಯ್ಯ, ಕವಿತಾ ರಾವ್, ರವಿ, ನಟರಾಜ್, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚನ್ನಪ್ಪ ಸ್ವಾಗತಿಸಿ, ಅರಳಿಹಳ್ಳಿ ಅಣ್ಣಪ್ಪ ನಿರೂಪಿಸಿದರು.