Friday, August 25, 2023

ಆ.೩೦ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ : ಸಂವಾದ ಕಾರ್ಯಕ್ರಮ

ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ : ಶೃತಿ ವಸಂತಕುಮಾರ್‌

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಶೃತಿ ವಸಂತಕುಮಾರ್‌ ಮಾತನಾಡಿದರು.
    ಭದ್ರಾವತಿ, ಆ. ೨೫: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ  ʻಗೃಹ ಲಕ್ಷ್ಮೀ ʼ ಯೋಜನೆಗೆ ಆ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಅಂದು ನಡೆಯಲಿರುವ ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌ಹೇಳಿದರು.
    ಅವರು ಈ ಕುರಿತು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ೧೨ ಗಂಟೆಗೆ  ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ಬಿಡುಗಡೆ ಮತ್ತು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.  
    ಈ ಸಂಬಂಧ ನಗರಸಭಾ ವ್ಯಾಪ್ತಿಯ ೯ ಸ್ಥಳಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ʻಗೃಹ ಲಕ್ಷ್ಮೀʼ ಯೋಜನೆಯ ಫಲಾನುಭವಿಗಳು, ಸಾರ್ವಜನಿಕರು, ಜನಪ್ರತಿನಿದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಕಾರ್ಯಕ್ರಮ ಯಶಸ್ವಿಗೊಳಿಬೇಕೆಂದು ಕೋರಿದರು.
    ಶಾಸಕರಿಂದ ಚಾಲನೆ:
    ನಗರದ ವೀರಶೈವ ಸಭಾ ಭವನದಲ್ಲಿ ಯೋಜನೆಗೆ ಶಾಸಕ ಬಿ.ಕೆ ಸಂಗಮೇಶ್ವರ್‌ ಚಾಲನೆ ನೀಡಲಿದ್ದು, ನಗರ ವ್ಯಾಪ್ತಿಯಲ್ಲಿ ೩೯,೮೮೩ ಹಾಗು ಗ್ರಾಮಾಂತರ ಭಾಗದಲ್ಲಿ ೩೦,೩೩೭ ಸೇರಿದಂತೆ ಒಟ್ಟು ೭೦,೨೨೦ ʻಗೃಹಲಕ್ಷ್ಮೀʼ ಫಲಾನುಭವಿಗಳಿದ್ದಾರೆ.  ಸರ್ಕಾರದ ಈ ಯೋಜನೆಯ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
    ನೇರ ಪ್ರಸಾರ ಕಾರ್ಯಕ್ರಮದ ಕೇಂದ್ರಗಳು:
    ವೀರಶೈವ ಸಭಾ ಭವನ, ತಾಲ್ಲೂಕು ಕಛೇರಿ ರಸ್ತೆ, ಭದ್ರಾವತಿ (03, 04, 05, 06), ಮಲ್ಲೇಶ್ವರ ಕಲ್ಯಾಣ ಮಂಟಪ, ಜನ್ನಾಪುರ, ಭದ್ರಾವತಿ(28, 29, 30, 31, 32), ಬಸವ ಮಂಟಪ, ಮಾಧವನಗರ, ತರೀಕೆರೆ ರಸ್ತೆ, ಭದ್ರಾವತಿ (13, 16, 17, 18),  ಶ್ರೀ ವಿದ್ಯಾದಿರಾಜ ಸಭಾ ಭವನ, ಕಡದಕಟ್ಟೆ, ಭದ್ರಾವತಿ (01, 02 33, 34, 35),  ಮದರಸಾ ಶಾದಿ ಮಹಲ್, ಅನ್ವರ್ ಕಾಲೋನಿ, ಭದ್ರಾವತಿ (07, 08, 09), ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನ, ಹೊಸಮನೆ, ಭದ್ರಾವತಿ (10, 11, 12, 14, 15), ಲಯನ್ಸ್ ಕಮ್ಯೂನಿಟಿ ಹಾಲ್, ಶುಗರ್ ಟೌನ್, ಜೆ.ಟಿ.ಎಸ್ ಶಾಲೆ ಪಕ್ಕ, ಭದ್ರಾವತಿ (25, 26, 27), ಡಾನ್ ಬೋಸ್ಕೊ ಐ.ಟಿ.ಐ ಅಡಿಟೋರಿಯಂ, ಉಜ್ಜನೀಪುರ, ಭದ್ರಾವತಿ (19, 20, 21, 22) ಮತ್ತು ಎಸ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜು, ಆಡಿಟೋರಿಯಂ, ಬೊಮ್ಮನಕಟ್ಟೆ (23, 24)
    ಪೌರಾಯುಕ್ತ ಎಚ್.ಎಂ ಮನುಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್‌, ನಗರಸಭಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Thursday, August 24, 2023

ಚಂದ್ರಯಾನ-೩ ಯಶಸ್ವಿ : ಬಿಜೆಪಿ ಸಂಭ್ರಮಾಚರಣೆ

ಚಂದ್ರಯಾನ -3  ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
ಭದ್ರಾವತಿ, ಆ. ೨೪ :  ಚಂದ್ರಯಾನ -3  ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
  ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಗರದ ರಂಗಪ್ಪವೃತ್ತದಿಂದ ತಿರಂಗಾ ಯಾತ್ರೆ ಮೂಲಕ ಅಂಬೇಡ್ಕರ್ ವೃತ್ತದ ವರೆಗೆ ಪಕ್ಷದ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದೇಶದ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಶಂಸಿಸಿದರು.
    ಚಂದಿರನ ದಕ್ಷಿಣ ಧ್ರುವದ ಮಾಹಿತಿಗಾಗಿ ಪ್ರಪಂಚದ ಎಲ್ಲಾ ದೇಶಗಳು ಭಾರತವನ್ನೇ ಅವಲಂಬನೆ ಯಾಗುವ ರೀತಿ ಸಾಧನೆಗೈದ ನಮ್ಮ ವಿಜ್ಞಾನಿಗಳ ಕಾರ್ಯ ಅಭಿನಂದನಾರ್ಹ ಎಂದರು.  ಸಿಹಿ ಹಂಚಲಾಯಿತು.

ಚಂದ್ರಯಾನ-೩ ಯಶಸ್ವಿ : ನೋಟು ಮೂಲಕ ಇಸ್ರೋ ಸಾಧನಗೆ ಅಭಿನಂದನೆ

ಚಂದ್ರಯಾನ-೦೩
ಭದ್ರಾವತಿ, ಆ. ೨೪:  ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರ ಗಣೇಶ್‌ರವರು ಚಂದ್ರಯಾನ-೦೩ ಯಶಸ್ವಿಯಾದ ಹಿನ್ನಲೆಯಲ್ಲಿ ಇಸ್ರೋ ಸಾಧನೆಯನ್ನು ನೋಟು  ಸಮರ್ಪಿಸಿ ಅಭಿನಂದಿಸಿದ್ದಾರೆ.
    ಐತಿಹಾಸಿಕ ಸಾಧನೆಯ ದಿನಾಂಕ ಹೊಂದಿರುವ ರು.೧೦ ಮುಖ ಬೆಲೆಯ ನೋಟು ಸಮರ್ಪಿಸಿದ್ದಾರೆ.  

ಐತಿಹಾಸಿಕ ಸಾಧನೆಯ ದಿನಾಂಕ ಹೊಂದಿರುವ ನೋಟು.
ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ.


ಹಿರಿಯ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರ ಗಣೇಶ್‌

Wednesday, August 23, 2023

ಕೋಟ್ಪಾ ಕಾಯ್ದೆಯಡಿ ೨೨ ಪ್ರಕರಣ ದಾಖಲು : ೩,೫೦೦ ರು. ದಂಡ ವಸೂಲಿ

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ  ಸುತ್ತಮುತ್ತಲ ವ್ಯಾಪ್ತಿಯಲ್ಲಿ  ಹಾಗೂ ತರೀಕೆರೆ ರಸ್ತೆಯಲ್ಲಿ ಬುಧವಾರ ಕೋಟ್ಪಾ ಕಾಯ್ದೆಯಡಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಆ. ೨೩ :  ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ  ಸುತ್ತಮುತ್ತಲ ವ್ಯಾಪ್ತಿಯಲ್ಲಿ  ಹಾಗೂ ತರೀಕೆರೆ ರಸ್ತೆಯಲ್ಲಿ ಬುಧವಾರ ಕೋಟ್ಪಾ ಕಾಯ್ದೆಯಡಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಕಾರ್ಯಾಚರಣೆಯಲ್ಲಿ ಒಟ್ಟು ೨೨ ಪ್ರಕರಣಗಳನ್ನು ದಾಖಲಿಸಿಕೊಂಡು ೩,೫೦೦ ರು. ದಂಡ ಸಂಗ್ರಹಿಸಲಾಗಿದೆ. ಅಲ್ಲದೆ ತಂಬಾಕು ಮಾರಾಟಗಾರರಿಗೆ ತಿಳುವಳಿಕೆ ನೀಡಲಾಗಿದೆ.
    ತಂಡದ ನೇತೃತ್ವ  ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ. ಓ. ಮಲ್ಲಪ್ಪ ವಹಿಸಿದ್ದರು. ತಂಡದಲ್ಲಿ ಜಿಲ್ಲಾ ಸಲಹೆಗಾರ  ಹೇಮಂತ್ ರಾಜ್ ಅರಸ್,  ಸಮಾಜ ಕಾರ್ಯಕರ್ತ ರವಿರಾಜ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆನಂದಮೂರ್ತಿ ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು.

ಡಾ. ಅಮದಾ ಸಿ. ಮುನಿರಾಜ್‌ಗೆ ಪಿಎಚ್‌ಡಿ : ಬಿಜಿಎಸ್‌ ಆಡಳಿತ ಮಂಡಳಿ ಸನ್ಮಾನ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ (ಬಿಜಿಎಸ್)ದ  ಪ್ರಾಂಶುಪಾಲರಾದ  ಡಾ. ಅಮದಾ ಸಿ. ಮುನಿರಾಜ್ ರವರಿಗೆ ಪಿಎಚ್‌ಡಿ ಪದವಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಇವರನ್ನು ವಿದ್ಯಾಲಯದ  ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು.
    ಭದ್ರಾವತಿ, ಆ. ೨೩ : ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ (ಬಿಜಿಎಸ್)ದ  ಪ್ರಾಂಶುಪಾಲರಾದ  ಡಾ. ಅಮದಾ ಸಿ. ಮುನಿರಾಜ್ ರವರಿಗೆ ಪಿಎಚ್‌ಡಿ ಪದವಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಇವರನ್ನು ವಿದ್ಯಾಲಯದ  ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು.
    ಡಾ. ಅಮದಾ ಸಿ. ಮುನಿರಾಜ್‌ರವರು ಹಲವಾರು ವರ್ಷಗಳಿಂದ ವಿದ್ಯಾಲಯದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನಡುವೆ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಿ  ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
    ಆಡಳಿತ ಅಧಿಕಾರಿ ಬಿ. ಜಗದೀಶ, ಉಪಪ್ರಾಂಶುಪಾಲ ಎಂ.ಎಂ ವೀರರಾಜೇಂದ್ರ ಸ್ವಾಮಿ, ಮುಖ್ಯೋಪಾಧ್ಯಾಯಿನಿ ಕೆ.ಎನ್ ದಿವ್ಯ,ವಾಹನ ವ್ಯವಸ್ಥಾಪಕ ಸೋಮಶೇಖರ್  ಸೇರಿದಂತೆ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀ ವಿನಯ್‌ ಗುರೂಜಿ ಹುಟ್ಟುಹಬ್ಬದ ಪ್ರಯುಕ್ತ ಆ.೨೪ರಂದು ಆರೋಗ್ಯ ಶಿಬಿರ

    ಭದ್ರಾವತಿ, ಆ. ೨೩ : ತಾಲೂಕಿನ ಗೋಣಿಬೀಡು ಮಲ್ಲಿಗೇನಹಳ್ಳಿ ಶ್ರೀ ನವನಾಗ ಬ್ರಹ್ಮ ದತ್ತ ಕ್ಷೇತ್ರ ಸೇವಾ ಟ್ರಸ್ಟ್‌ ವತಿಯಿಂದ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ಹಾಗು ಶಂಕರ್‌ ಕಣ್ಣಿನ ಆಸ್ಪತ್ರೆ ಮತ್ತು ಬಿಆರ್‌ಪಿ ಸಂಯುಕ್ತ ಆಸ್ಪತ್ರೆ ಸಹಯೋಗದೊಂದಿಗೆ ಆ. ೨೪ರ ಗುರುವಾರ ಬೃಹತ್‌ ರಕ್ತದಾನ ಮತ್ತು ಆರೋಗ್ಯ ಹಾಗು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಚಿಕ್ಕಮಗಳೂರು ಗೌರಿಗದ್ದೆ ದತ್ತಾಶ್ರಮದ ಅವಧೂತ ಶ್ರೀ ವಿನಯ್‌ ಗುರೂಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಬಿ.ಆರ್‌.ಪಿ ಬಸ್‌ ನಿಲ್ದಾಣ ಮುಂಭಾಗ  ಒಕ್ಕಲಿಗರ ಸಂಘದಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೯೦೬೧೮೧೦೬೬ ಅಥವಾ ೯೪೪೯೫೩೩೯೬೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಸಾರ್ವಜನಿಕರ ಶಿಬಿರದ ಸದುಯಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

೫೦ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರಿಗೆ ಐಎಂಎ ಸನ್ಮಾನ

ಭಾರತೀಯ ವೈದ್ಯಕೀಯ ಸಂಘದ ಭದ್ರಾವತಿ ತಾಲೂಕು ಶಾಖೆವತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೨೩:  ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆವತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ನಗರದಲ್ಲಿ sಸುಮಾರು ೫೦ ವರ್ಷಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರ ಸೇವೆಯನ್ನು ಶ್ಲಾಘಿಸುವ ಜೊತೆಗೆ ಇಂದಿನ ಯುವ ವೈದ್ಯರಿಗೆ ಮಾದರಿಯಾಗುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಐಎಂಎ ತಾಲೂಕು ಶಾಖೆಯಿಂದ ಕೋರಲಾಯಿತು.
    ಹಿರಿಯ ವೈದ್ಯರಾದ ಡಾ. ಪದ್ಮಾವತಿ, ಡಾ. ರಾಜಣ್ಣ, ಡಾ.ಆರ್.ಆರ್ ಶೆಟ್ಟಿ, ಡಾ. ಕೃಷ್ಣ ಎಸ್ ಭಟ್, ಡಾ.ಎಂ. ರವೀಂದ್ರನಾಥ್ ಕೋಠಿ, ಮೆಗ್ಗಾನ್ ಆಸ್ಪತ್ರೆ ನಿವೃತ್ತ ಜಿಲ್ಲಾ ಸರ್ಜನ್ ಡಾ. ನಂದಾ ಆರ್. ಕೋಠಿ, ಹಾಗು ಡಾ. ಹಂಚಾಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಚಿಕ್ಕಮಗಳೂರು ಗೌರಿಗದ್ದೆ ದತ್ತಾಶ್ರಮದ ಅವಧೂತ ಶ್ರೀ ವಿನಯ್ ಗುರುಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ. ವಿದ್ಯಾ, ಡಾ. ವೀಣಾ ಭಟ್, ಡಾ. ಸುನಿತಾ ಭಟ್, ಡಾ.ಪ್ರಶಾಂತ ಭಟ್, ,. ಡಾ.ಅರುಣ್ ಶೆಟ್ಟಿ ರವರುಗಳು ಉಪಸ್ಥಿತರಿದ್ದರು.