Sunday, October 15, 2023

ನಾಡಹಬ್ಬ ದಸರಾ ೯ ದಿನಗಳ ವಿಶೇಷ ಆಚರಣೆಗಳಿಂದ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ : ಪಿ. ವೆಂಕಟರಮಣ ಶೇಟ್

ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಯನ್ನು ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಭಾನುವಾರ ಉದ್ಘಾಟಿಸಿದರು.
    ಭದ್ರಾವತಿ; ನವದುರ್ಗೆಯರನ್ನು ಪೂಜಿಸುವ ಮೂಲಕ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವ ಕೆಲಸ ೯ ದಿನಗಳ ವಿಶೇಷ ಆಚರಣೆಗಳಿಂದ ಸಾಧ್ಯವಾಗುತ್ತದೆ. ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಕ್ಷೇತ್ರದ ಜನತೆಗೆ ಸುಖ ಶಾಂತಿ ನೀಡಲಿ ಎಂದು ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಹೇಳಿದರು.
    ಅವರು ಭಾನುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ನಗರಸಭೆ ಕಚೇರಿ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
    ದಸರಾ ಶಕ್ತಿ ದೇವತೆಗಳ ಹಬ್ಬ ಮಾತ್ರವಲ್ಲದೆ ನಾಡಿನ ಸಂಪ್ರದಾಯ ಸಂಸ್ಕೃತಿ ಬಿಂಬಿಸುವ ಹಬ್ಬವಾಗಿದೆ. ಇಂತಹ ಹಬ್ಬಕ್ಕೆ ಚಾಲನೆ ನೀಡಲು ಅವಕಾಶ ಮಾಡಿಕೊಟ್ಟ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆವತಿಯಿಂದ ಆಯೋಜಿಸಿರುವ ನಾಡಹಬ್ಬ ದಸರಾ  ಸೌಹಾರ್ದತೆಯ ಹಬ್ಬವಾಗಬೇಕು. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಸೇರಿದಂತೆ ಎಲ್ಲಾ ಸಮಾಜದ ಸಮುದಾಯದ, ಧರ್ಮದ ಜನರು ಒಟ್ಟಾಗಿ ಆಚರಿಸುವಂತಾಗಬೇಕು. ಆಗ ಮಾತ್ರ ಏಕತೆ ಕಾಣಲು ಸಾಧ್ಯವಾಗುತ್ತದೆ. ಅಂತಹ ಸೌಹಾರ್ದತೆಯ ಹಬ್ಬಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಮಾತನಾಡಿ, ಹಲವು ಸಂಸ್ಕೃತಿಗಳನ್ನು ಒಳಗೊಂಡಿರುವ ಭಾರತದಲ್ಲಿ ಸಂಸ್ಕೃತಿಯ ಉಳಿವಿಗೆ ದಸರಾ ಪೂರಕವಾಗಿದೆ ಎಂದರು.
    ಪೌರಾಯುಕ್ತ ಮನುಕುಮಾರ್ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ದುಷ್ಟಶಕ್ತಿಗಳ ನಿವಾರಣೆ ಹಾಗು ಶಿಷ್ಟಶಕ್ತಿಗಳ ಏಳಿಗೆಗಾಗಿ ದಸರಾ ಆಚರಿಸಲಾಗುತ್ತದೆ. ಭದ್ರಾವತಿ ದಸರಾ ಆಚರಣೆಯಲ್ಲಿ ಕುಸ್ತಿ ಪಂದ್ಯಾವಳಿಗೆ ಜನರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ ಎಂದರು.


ಭದ್ರಾವತಿಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ನಾಗರೀಕರು ನಾಡಹಬ್ಬ ದಸರಾ ಉದ್ಘಾಟಕರಾದ ಸಮಾಜ ಸೇವಕ ಪಿ. ವೆಂಕಟರಮಣಶೇಟ್ ಹಾಗೂ ಪ್ರೇಮಾ ಶೇಟ್ ದಂಪತಿಯನ್ನು ಮಾಧವಚಾರ್ ವೃತ್ತದಿಂದ ನಗರಸಭೆ ಕಚೇರಿ ಆವರಣದವೆರಗೂ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.
    ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ವಿವಿಧ ಸಮಿತಿಗಳ ಅಧ್ಯಕ್ಷರಾದ ಬಷೀರ್ ಅಹಮದ್, ಬಸವರಾಜ ಬಿ. ಆನೇಕೊಪ್ಪ, ಚನ್ನಪ್ಪ, ಆರ್. ಮೋಹನ್‌ಕುಮಾರ್, ವಿ. ಕದಿರೇಶ್, ಮಣಿ ಎಎನ್‌ಎಸ್, ಅನುಸುಧಾಮೋಹನ್ ಪಳನಿ, ಬಿ.ಕೆ ಮೋಹನ್,  ಬಿ.ಟಿ ನಾಗರಾಜ್,  ಲತಾಚಂದ್ರಶೇಖರ್, ಅನುಪಮ ಚನ್ನೇಶ್, ಮಂಜುಳ ಸುಬ್ಬಣ್ಣ, ಜಾರ್ಜ್, ಬಿ.ಎಂ ಮಂಜುನಾಥ್, ಅನಿತಾ ಮಲ್ಲೇಶ್, ಕೋಟೇಶ್ವರ ರಾವ್, ಪಲ್ಲವಿ ದಿಲೀಪ್, ರೇಖಾ ಪ್ರಕಾಶ್, ಎಸ್. ಜಯಶೀಲ ಸುರೇಶ್, ಸವಿತಾ ಉಮೇಶ್, ಶಶಿಕಲಾ ನಾರಾಯಣಪ್ಪ, ಆರ್. ಶ್ರೇಯಸ್, ಸೈಯದ್ ರಿಯಾಜ್, ಕಾಂತರಾಜ್, ಉದಯಕುಮಾರ್ ಸೇರಿದಂತೆ  ಉಪಸ್ಥಿತರಿದ್ದರು.
    ಇದಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ನಾಗರೀಕರು ಪಿ. ವೆಂಕಟರಮಣಶೇಟ್ ಹಾಗೂ ಪ್ರೇಮಾ ಶೇಟ್ ದಂಪತಿಯನ್ನು ಮಾಧವಚಾರ್ ವೃತ್ತದಿಂದ ನಗರಸಭೆ ಕಚೇರಿ ಆವರಣದವೆರಗೂ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.
    ಕಂದಾಯಾಧಿಕಾರಿ ರಾಜ್‌ಕುಮಾರ್ ನಿರೂಪಿಸಿ, ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ಪವನ್‌ಕುಮಾರ್ ಉಡುಪ, ನರಸಿಂಹಚಾರ್, ರಮಾಕಾಂತ್ ನೇತೃತ್ವದ ತಂಡದ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.

Saturday, October 14, 2023

ಭದ್ರಾವತಿ ನಗರಸಭೆ : ನಾಡಹಬ್ಬ ದಸರಾ ಆಚರಣೆಗೆ ಭರದ ಸಿದ್ಧತೆ

ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆ ಕಛೇರಿ ಕಲಾವಿದ ಗುರುರವರ ಕೈಚಳಕದಲ್ಲಿ ಕಂಗೊಳಿಸುತ್ತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
    ಭದ್ರಾವತಿ: ನಗರಸಭೆ ವತಿಯಿಂದ ನಾಡಹಬ್ಬ ದಸರಾ ಆಚರಣೆಗೆ ಭರದ ಸಿದ್ಧತೆಗಳು ನಡೆದಿದ್ದು, ಅ.೧೫ರಂದು ಬೆಳಿಗ್ಗೆ ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್‌ರವರು ಚಾಲನೆ ನೀಡಲಿದ್ದಾರೆ.
    ನಾಡಹಬ್ಬ ಹಿನ್ನಲೆಯಲ್ಲಿ ನಗರದ ವಿವಿಧೆಡೆ ಪ್ರಮುಖ ವೃತ್ತಗಳಲ್ಲಿ ಅಲಂಕಾರ ಕೈಗೊಳ್ಳಲಾಗಿದ್ದು, ಅದರಲ್ಲೂ ಈ ಬಾರಿ ವಿಶೇಷ ಎಂದರೆ ವಿದ್ಯುತ್ ದೀಪಗಳ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ಕಛೇರಿ ಕಲಾವಿದ ಗುರುರವರ ಕೈಚಳಕದಲ್ಲಿ ಕಂಗೊಳಿಸುತ್ತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.


ಭದ್ರಾವತಿ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ನೇತೃತ್ವದ ತಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ದಸರಾ ಆಚರಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಲಾಗಿದೆ.
    ಬಿ.ಎಸ್.ವೈ & ಬಿ.ವೈ.ಆರ್ ಆಹ್ವಾನ:
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ನೇತೃತ್ವದ ತಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ದಸರಾ ಆಚರಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಲಾಗಿದೆ.
    ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಜಿಲ್ಲಾ ಯೋಜನಾ ನಿರ್ದೇಶಕರು ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗಿದೆ. ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗು ಸದಸ್ಯರು ತಂಡದಲ್ಲಿ ಪಾಲ್ಗೊಂಡಿದ್ದರು.

ಅ.೨೪ರವರೆಗೆ ನವರಾತ್ರಿ ಮಹೋತ್ಸವ

ಶ್ರೀ ಮಾರಿಯಮ್ಮ
    ಭದ್ರಾವತಿ: ನ್ಯೂಟೌನ್ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ಅ.೨೪ರವರೆಗೆ ನವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಅಮ್ಮನವರಿಗೆ ವಿವಿಧ ಅಲಂಕಾರಗಳು ನಡೆಯಲಿವೆ.
    ಪ್ರತಿದಿನ ಬೆಳಿಗ್ಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ದೇವಿ ಪಾರಾಯಣ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಮತ್ತು ಸಂಜೆ ೭ ಗಂಟೆಗೆ ಭಜನೆ ಮತ್ತು ಸಂಗೀತ, ೮.೩೦ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
    ಅಮ್ಮನವರಿಗೆ ಅ.೧೫ರಂದು ವಿಶಾಲಾಕ್ಷಿ, ೧೬ರಂದು ಮೀನಾಕ್ಷಿ, ೧೭ರಂದು ಕಾಮಾಕ್ಷಿ, ೧೮ರಂದು ಮೂಕಾಂಬಿಕ, ೧೯ರಂದು ಅನ್ನಪೂರ್ಣೇಶ್ವರಿ, ೨೦ರಂದು ಸರಸ್ವತಿ, ೨೧ರಂದು ಲಕ್ಷ್ಮೀ, ೨೨ರಂದು ದುರ್ಗಾ ಮತ್ತು ೨೩ರಂದು ರಾಜರಾಜೇಶ್ವರಿ ಅಲಂಕಾರ ಕೈಗೊಳ್ಳಲಾಗುವುದು. ೨೭ರಂದು ಶಾಂತಿಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Friday, October 13, 2023

ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ

ಭದ್ರಾವತಿ ವಿಐಎಸ್‌ಎಲ್ ಆಸತ್ರೆ, ನಾರಾಯಣ ಆಸ್ಪತ್ರೆ ಹಾಗೂ ಬೆಂಗಳೂರಿನ ಮಜುಂದಾರ್ ಷಾ ಕ್ಯಾನ್ಸರ್ ಸಂಸ್ಥೆ ಸಹಯೋಗದಲ್ಲಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ: ವಿಐಎಸ್‌ಎಲ್ ಆಸತ್ರೆ, ನಾರಾಯಣ ಆಸ್ಪತ್ರೆ ಹಾಗೂ ಬೆಂಗಳೂರಿನ ಮಜುಂದಾರ್ ಷಾ ಕ್ಯಾನ್ಸರ್ ಸಂಸ್ಥೆ ಸಹಯೋಗದಲ್ಲಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ವಿಐಎಸ್‌ಎಲ್ ಕಾರ್ಖಾನೆ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕಿ ಶೋಭಾ ಶಿವಶಂಕರನ್ ಶಿಬಿರ ಉದ್ಘಾಟಿಸಿದರು. ವಿಐಎಸ್‌ಎಲ್ ಆಸ್ಪತ್ರೆ ಮುಖ್ಯ ಸಲಹೆಗಾರರಾದ ಡಾ. ಎಚ್. ಶೋಭಾ(ಮೆಡಿಕಲ್), ಡಾ. ಟಿ.ಎನ್. ಸುಷ್ಮಾ(ಮೆಡಿಕಲ್) ಮತ್ತು ಸಹಾಯಕ ಪ್ರಬಂಧಕರಾದ ಕೆ.ಎಸ್. ಶೋಭಾ, (ಸಿಬ್ಬಂದಿ), ನಾರಾಯಣ ಆಸ್ಪತ್ರೆ ಡಾ. ಕೀರ್ತನ, ಮಾರುಕಟ್ಟೆ ಕಾರ್ಯನಿರ್ವಾಹಕ ಕೆ.ಸಿ. ಆಕಾಶ್, ಎಕ್ಸ್ ರೇ-ತಂತ್ರಜ್ಞರಾದ ನಿರ್ಮಲ ಮತ್ತು ಲಲಿತ ಕ್ಯಾನ್ಸರ್ ತಪಾಸಣಾ ತಂಡದ ನೇತೃತ್ವದ ವಹಿಸಿದ್ದರು.  ವಿಐಎಸ್‌ಎಲ್ ಆಸ್ಪತ್ರೆ ವೈದ್ಯರಾದ ಡಾ. ಕೆ.ಎಸ್ ಸುಜೀತ್ ಕುಮಾರ್ ಮತ್ತು ಡಾ. ಎಸ್.ಎನ್ ಸುರೇಶ್ ಉಪಸ್ಥಿತರಿದ್ದರು.

ನಾಡಹಬ್ಬ ದಸರಾ ಉದ್ಘಾಟಿಸಲಿರುವ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್

ಧಾರ್ಮಿಕ, ಶಿಕ್ಷಣ, ಸಾಮಾಜಿಕ ಸೇವಾಕಾರ್ಯಗಳ ಬಹುವ್ಯಕ್ತಿತ್ವ


ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಉದ್ಘಾಟಿಸಲಿರುವ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ದಂಪತಿ.
ಭದ್ರಾವತಿ: ನಗರಸಭೆ ವತಿಯಿಂದ ಈ ಬಾರಿ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಚಾಲನೆ ನೀಡಲಿದ್ದಾರೆ.
    ನಾಡಹಬ್ಬ ದಸರಾ ಆಚರಣೆ ಉದ್ಘಾಟನೆಗೆ ಆಗಮಿಸಲಿರುವ ಪಿ. ವೆಂಕಟರಮಣ ಶೇಟ್ ಬಹುವ್ಯಕ್ತಿತ್ವದವರಾಗಿದ್ದು, ಬಳಹ ವರ್ಷಗಳಿಂದ ಧಾರ್ಮಿಕ, ಶಿಕ್ಷಣ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೆರೆಮರೆಯಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಇವರನ್ನು ನಗರಸಭೆ ಗುರುತಿಸಿರುವುದು ಈ ಬಾರಿ ವಿಶೇಷವಾಗಿದೆ.



    ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಕುರಿತು ವೆಂಕಟರಮಣ ಶೇಟ್ ಪತ್ರಿಕೆಯೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ. ನಾನು ಜೀವನೋಪಾಯಕ್ಕಾಗಿ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಇಲ್ಲಿಯೇ ನಾನು ಬದುಕು ಕಟ್ಟಿಕೊಳ್ಳುವ ಜೊತೆಗೆ ಹಲವು ಕ್ಷೇತ್ರಗಳಲ್ಲಿ ನನ್ನ ಕೈಲಾದಷ್ಟು ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇನೆ. ನನ್ನ ಅಳಿಲು ಸೇವೆಯನ್ನು ಗುರುತಿಸಿರುವುದಕ್ಕೆ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಭದ್ರಾವತಿ ಕ್ಷೇತ್ರದ ಜನತೆಗೆ ಒಳಿತು ಮಾಡಲಿ, ಯಾವುದೇ ಸಂಕಷ್ಟಗಳು ಎದುರಾಗದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
    ವೆಂಕಟರಮಣ ಶೇಟ್‌ರವರ ಪತ್ನಿ ಪ್ರೇಮ ಶೇಟ್‌ರವರು ಮಾತನಾಡಿ, ನನ್ನ ಪತಿಯವರು ಸಮಾಜದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಅವರನ್ನು ನಾಡಹಬ್ಬ ಉದ್ಘಾಟನೆಗೆ ಆಹ್ವಾನಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.
    ವೆಂಕಟರಮಣ ಶೇಟ್ ಪರಿಚಯ:
    ಇವರು ಮೂಲತಃ ಉದ್ಯಮಿಯಾಗಿದ್ದು, ೧೯೪೮ರಲ್ಲಿ ಹೊನ್ನಾವರ ತಾಲೂಕಿನ ಉಪ್ಪಾಣಿಯಲ್ಲಿ ಜನಿಸಿದ್ದಾರೆ. ಇವರಿಗೆ ಪತ್ನಿ ಪ್ರೇಮ ಶೇಟ್, ೪ ಹೆಣ್ಣು, ೨ ಗಂಡು ಮಕ್ಕಳಿದ್ದಾರೆ. ೧೯೬೯ರಲ್ಲಿ ಭದ್ರಾವತಿಗೆ ಆಗಮಿಸಿ ಉದ್ಯಮ ಆರಂಭಿಸಿ, ಹಳೇನಗರದಲ್ಲಿಯೇ ವಾಸವಾಗಿದ್ದಾರೆ.


    ಸಾಮಾಜಿಕ ಸೇವೆ: ನಗರದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ, ಜಿಲ್ಲಾ ಛೇರ್‍ಮನ್‌ರಾಗಿ, ಪ್ರಾಂತೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಗರದ ದೈವಜ್ಞ ಬ್ರಾಹ್ಮಣ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದು, ಅಲ್ಲದೆ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಸುಮಾರು ೨೮ ವರ್ಷಗಳಿಂದ ಎಸ್‌ಬಿಸಿ/ಸಿ.ಬಿ.ಸಿ ಸದಸ್ಯರಾಗಿ, ಕಾರ್ಯಾಧ್ಯಕ್ಷರಾಗಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಿವಮೊಗ್ಗ ಗಾಯತ್ರಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷರಾಗಿ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರಾಗಿ, ಕಾಳಿಕಾಂಬ ಸೇವಾ ಸಮಿತಿ ಹಾಗು ಕರ್ನಾಟಕ ಜಾನಪದ ಪರಿಷತ್ ಗೌರವಾಧ್ಯಕ್ಷರಾಗಿ, ಪತಂಜಲಿ ಯೋಗ ಸಂಸ್ಥೆ ಅಧ್ಯಕ್ಷರಾಗಿ, ಸೈಂಟ್ ಜೋಸೆಫ್ ಕಾಲೇಜಿನ ಉಪಾಧ್ಯಕ್ಷರಾಗಿ ಹಾಗು ಸಂಧ್ಯಾದೀಪ ವೃದ್ಧಾಶ್ರಮದ ಟ್ರಸ್ಟಿಗಳಾಗಿ, ದೈವಜ್ಞ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  
    ದಸರಾ ಉದ್ಘಾಟನೆ:
    ಈ ಬಾರಿ ದಸರಾ ಉದ್ಘಾಟನೆ ಅ.೧೫ರಂದು ಬೆಳಿಗ್ಗೆ ೧೦.೧೫ ರಿಂದ ೧೦.೩೬ರವರೆಗೆ ನಡೆಯಲಿದ್ದು, ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್‌ರವರು ನಗರಸಭೆ ಆವರಣದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯೊಂದಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರುವರು.

೮ನೇ ಇಂಟರ್‌ನ್ಯಾಷನಲ್ ಗೇಮ್ಸ್ : ಪವನ್ ಕುಮಾರ್ ಚಿನ್ನದ ಪದಕ

ನೇಪಾಳ ಪೊಖಾರದಲ್ಲಿ ನಡೆದ ೮ನೇ ಇಂಟರ್‌ನ್ಯಾಷನಲ್ ಗೇಮ್ಸ್ - ೨೦೨೩ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭದ್ರಾವತಿ ಪವನ್‌ಕುಮಾರ್ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ
    ಭದ್ರಾವತಿ: ನೇಪಾಳ ಪೊಖಾರದಲ್ಲಿ ನಡೆದ ೮ನೇ ಇಂಟರ್‌ನ್ಯಾಷನಲ್ ಗೇಮ್ಸ್ - ೨೦೨೩ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪವನ್‌ಕುಮಾರ್ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಪಂದ್ಯಾವಳಿ ಅ.೫ ರಿಂದ ೯ರವರೆಗೆ ಜರುಗಿತು. ಸೌತ ಏಷ್ಯಾದ ೯ ದೇಶಗಳು ಭಾಗವಹಿಸಿದ್ದವು. ಮೆನ್ಸ್ ಅಂಡರ್-೩೦ ಸಿಂಗಲ್ಸ್‌ನಲ್ಲಿ ಪವನ್ ಕುಮಾರ್ ಉತ್ತಮ ಸಾಧನೆ ಮಾಡುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಪವನ್‌ಕುಮಾರ್ ನಗರದ ಎಂಪಿಎಂ ಕಾರ್ಖಾನೆ ನಿವೃತ್ತ ಉದ್ಯೋಗಿ, ಹೊಸಮನೆ ನಿವಾಸಿ ಕೃಷ್ಣ ಮತ್ತು ಸರಸ್ವತಿ ದಂಪತಿ ಪುತ್ರರಾಗಿದ್ದಾರೆ. ಇವರ ಸಾಧನೆಯನ್ನು ಕ್ರೀಡಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂದಿಸಿದ್ದಾರೆ.

ಹಳೇನಗರ ಮಹಿಳಾ ಸೇವಾ ಸಮಾಜ ಮಾದರಿ ಸಂಘಟನೆ : ಎಚ್.ಎಂ ಮನುಕುಮಾರ್

ಭದ್ರಾವತಿ ಹಳೇನಗರ ಮಹಿಳಾ ಸೇವಾ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಅರಕೆರೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಬಬಿತ ಕುಮಾರಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
    ಭದ್ರಾವತಿ: ಹಳೇನಗರದ ಮಹಿಳಾ ಸೇವಾ ಸಮಾಜ ಇತರೆ ಸಂಘಟನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೌರಾಯುಕ್ತ ಎಚ್.ಎಂ ಮನುಕುಮಾರ್ ಹೇಳಿದರು.
    ಅವರು ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಒಗ್ಗಟ್ಟಾಗಿ ಸಂಘಟನೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
    ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಅರಕೆರೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಬಬಿತ ಕುಮಾರಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉಪಸ್ಥಿತರಿದ್ದರು.
    ಶಾರದ ಶ್ರೀನಿವಾಸ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಶೋಭಾಗಂಗರಾಜ್ ಸ್ವಾಗತಿಸಿದರು. ಕಮಲ ರಾಯ್ಕರ್ ನಿರೂಪಸಿ, ಖಜಾಂಚಿ ಶಾಂತಿ ನಾಗರಾಜ್ ಶೇಟ್ ವಂದಿಸಿದರು.