ಉಪವಿಭಾಗದ ಪೊಲೀಸರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಭಾಗಿ
ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಭದ್ರಾವತಿ ನಗರದ ಉಪವಿಭಾಗದ ಪೊಲೀಸರು ಸೋಮವಾರ ವಾಹನ ಸವಾರರಿಗೆ ಪೂರ್ಣ ಪ್ರಮಾಣದ ಐಎಸ್ಐ ಪ್ರಮಾಣೀಕೃತ ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಭದ್ರಾವತಿ: ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ನಗರದ ಉಪವಿಭಾಗದ ಪೊಲೀಸರು ಸೋಮವಾರ ವಾಹನ ಸವಾರರಿಗೆ ಪೂರ್ಣ ಪ್ರಮಾಣದ ಐಎಸ್ಐ ಪ್ರಮಾಣೀಕೃತ ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ವಾಹನ ಸವಾರರಿಗೆ ತಿಳುವಳಿಕೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ವಾಹನ ಸವಾರರಿಗೆ ಈ ಹಿಂದೆ ಅರ್ಧ ಹೆಲ್ಮೆಟ್ ಧರಿಸದಂತೆ ಸೂಚನೆ ನೀಡಿದ್ದರೂ ಸಹ ಬಳಸುತ್ತಿರುವುದು ಸರಿಯಲ್ಲ. ನಿಯಮ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಹೆಲ್ಮೆಟ್ ವಿಚಾರ ಕಾನೂನು ಕ್ರಮ ಮಾತ್ರವಲ್ಲ. ವಾಹನ ಸವಾರರ ಜವಾಬ್ದಾರಿ. ದಂಡ ಪಾವತಿಯಿಂದ ಸಮಸ್ಯೆ ಸಂಪೂರ್ಣ ನಿವಾರಣೆ ಅಸಾಧ್ಯ. ಜನರು ಸುರಕ್ಷತೆಯನ್ನು ತಮ್ಮ ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರ ಸುರಕ್ಷತೆ ಸಾಧ್ಯ ಎಂದು ಸಲಹೆ ನೀಡಿದರು.
ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್, ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ವಿವಿಧ ಠಾಣೆಗಳ ಠಾಣಾಧಿಕಾರಿಗಳಾದ ಶಾಂತಲ, ರಮೇಶ್, ಶರಣಪ್ಪ ಹಂಡ್ರಾಗಲ್, ಸಹಾಯಕ ಠಾಣಾಧಿಕಾರಿ ಎಂ. ರಾಜಪ್ಪ ಸೇರಿದಂತೆ ಹಲವು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಗರದ ಪ್ರಮುಖ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿ ಅರ್ಧ ಹೆಲ್ಮೆಟ್ ಧರಿಸಿರುವ ದ್ವಿಚಕ್ರ ವಾಹನ ಸವಾರರಿಂದ ಹೆಲ್ಮೆಟ್ಗಳನ್ನು ವಶಪಡಿಸಿಕೊಳ್ಳಲಾಯಿತು.