Tuesday, December 19, 2023

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ-ಜೆಡಿಎಸ್ ಕೈಜೋಡಿಸಲಿ : ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟಕ್ಕೆ ಕಾಂಗ್ರೆಸ್ ಬೆಂಬಲವಿಲ್ಲ

ತಾಲೂಕು ಕಚೇರಿ ಅವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್

ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಗೂಂಡಾ ವರ್ತನೆ, ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಹಾಗೂ ಸಂಸತ್ ಭವನದಲ್ಲಿ ನಡೆದ ಭದ್ರತಾ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ಭದ್ರಾವತಿ ತಾಲೂಕು ಕಚೇರಿ ಅವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿದರು.
    ಭದ್ರಾವತಿ : ಕ್ಷೇತ್ರದಲ್ಲಿ ಓಸಿ, ಇಸ್ಪೀಟ್ ಯಾರಿಂದ ಆರಂಭವಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಇಸ್ಪೀಟ್ ಸ್ಪರ್ಧೆ ನಡೆಸಿದ ಕರಾಳ ಇತಿಹಾಸ ಕೂಡ ಜನತೆಗೆ ತಿಳಿದಿದೆ. ಗೂಂಡಾಗಿರಿ, ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟ ಕಾಂಗ್ರೆಸ್ ಪಕ್ಷ ಬೆಂಬಲಿಸುವುದಿಲ್ಲ. ಇವುಗಳ ವಿರುದ್ಧ ಹೋರಾಟಕ್ಕೆ ನಮ್ಮ ಬೆಂಬಲ ಸಹ ಇದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
    ಅವರು ಮಂಗಳವಾರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಗೂಂಡಾ ವರ್ತನೆ, ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಹಾಗೂ ಸಂಸತ್ ಭವನದಲ್ಲಿ ನಡೆದ ಭದ್ರತಾ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ತಾಲೂಕು ಕಚೇರಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡಲಿ, ಇಲ್ಲವಾದರೆ ಸುಮ್ಮನಿದ್ದು ಬಿಡಲಿ. ಗೊಂದಲ ಸೃಷ್ಟಿಸಿ ರಾಜಕಾರಣ ಮಾಡುವುದು ಸರಿಯಲ್ಲ. ಯಾವುದೋ ಸಣ್ಣ ಗಲಾಟೆಯನ್ನು ದೊಡ್ಡ ವಿಷಯವನ್ನಾಗಿಸಿಕೊಂಡು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುವುದು ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ವೈಫಲ್ಯ ಎದ್ದು ಕಾಣುವಂತಾಗಿದೆ. ಪೊಲೀಸರು ತಮ್ಮ ಕರ್ತವ್ಯ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರ ದಿಕ್ಕು ತಪ್ಪಿಸುವ ಕೆಲಸ ಮಾಡದಿರುವುದು ಒಳ್ಳೆಯದು. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕುತಂತ್ರ ಕೆಲಸಗಳು ಪೊಲೀಸ್ ಇಲಾಖೆಗೂ ತಿಳಿದಿದೆ. ಯಾರು ತಪ್ಪು ಮಾಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದರು.
    ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ಪ್ರಶ್ನಿಸುವ ಬದಲು ಕ್ಷುಲ್ಲಕ ಹಲ್ಲೆ ಪ್ರಕರಣ ಪ್ರಸ್ತಾಪಿಸಿ, ಬಿಜೆಪಿ ತನ್ನ ಜವಾಬ್ದಾರಿ ಮರೆತ್ತಿರುವುದನ್ನು ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ೨೫ ಲೋಕಸಭಾ ಸದಸ್ಯರಿದ್ದು, ಇವರು ಸಂಸತ್ ಸಭೆಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೊಳಿಸುವ ವಿಚಾರ, ಕಾವೇರಿ ವಿಚಾರ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು, ಪ್ರವಾಹ ಪೀಡಿತರಿಗೆ ಪರಿಹಾರ ನೀಡುವ ವಿಚಾರ ಸೇರಿದಂತೆ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಆದರೆ ಕ್ಷೇತ್ರಕ್ಕೆ ಆಗಮಿಸಿದಾಗ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಬಿಜೆಪಿ ನಾಯಕರ ಈ ನಡೆಗೆ ತಕ್ಕ ಉತ್ತರ ದೊರೆಯಲಿದೆ. ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
    ಪೊಲೀಸ್ ಇಲಾಖೆ ದುರ್ಬಳಕೆ:
    ಅಧಿಕಾರ ಇಲ್ಲದಿದ್ದರೂ ಪೊಲೀಸ್ ಭದ್ರತೆ ಪಡೆಯುವ ಮೂಲಕ ಪೊಲೀಸ್ ಇಲಾಖೆಯನ್ನು ಕೆ.ಎಸ್.ಈಶ್ವರಪ್ಪ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
    ಕೆ.ಎಸ್ ಈಶ್ವರಪ್ಪ ಬಾಯಿಬಿಟ್ಟರೆ ಬೆಂಕಿಯ ಮಾತುಗಳನ್ನಾಡುತ್ತಾರೆ. ಜೊತೆಗೆ ಇವರು ಮಾತುಗಳ ಮೂಲಕವೇ ಬೆಂಕಿಹಚ್ಚಿ ಅಶಾಂತಿ ಸೃಷ್ಟಿಸುತ್ತಾರೆಂದು ಆರೋಪಿಸಿ ಇಂತಹ ಕಾರಣದಿಂದಾಗಿಯೇ ಮೆದುಳು-ನಾಲಗೆಗೂ ಸಂಬಂಧವಿಲ್ಲದ ಮನುಷ್ಯ ಈಶ್ವರಪ್ಪ ಎಂದು ಸಿದ್ದರಾಮಯ್ಯರ ಟೀಕೆ ಮಾಡಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
    ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಿ.ಕೆ ಸಂಗಮೇಶ್ವರ್‌ರವರು ೪ ಬಾರಿ ಶಾಸಕರಾಗಿದ್ದಾರೆ. ಅವರಾಗಲಿ ಅಥವಾ ಕುಟುಂಬ ವರ್ಗದವರಾಗಲಿ ಎಂದಿಗೂ ಗೂಂಡಾಗಿರಿ, ಓ.ಸಿ, ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟ, ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿಸಿಲ್ಲ. ಶಾಸಕರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಪೊಲೀಸರು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ಕೈಗೊಳ್ಳುತ್ತಿದ್ದು, ಅವರ ದಿಕ್ಕು ತಪ್ಪಿಸುವ ಕೆಲಸದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತೊಡಗಿಸಿಕೊಂಡಿವೆ. ಶಾಸಕರು ಮತ್ತು ಅವರ ಕುಟುಂಬ ವರ್ಗದವರ ವಿರುದ್ಧ ಹಲವಾರು ಕುತಂತ್ರಗಳನ್ನು ನಡೆಸಲಾಗಿದ್ದು, ಎಲ್ಲವೂ ವಿಫಲವಾಗಿವೆ. ಎಲ್ಲವೂ ಕ್ಷೇತ್ರದ ಜನರಿಗೆ ತಿಳಿದಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
    ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮುಖಂಡರಾದ ಎಸ್. ಮಣಿಶೇಖರ್, ಬಿ.ಟಿ ನಾಗರಾಜ್, ವೈ. ರೇಣುಕಮ್ಮ, ಬಾಲಕೃಷ್ಣ, ಸಿ.ಎಂ ಖಾದರ್, ವೈ.ಎಚ್ ನಾಗರಾಜ್, ರಮೇಶ್ ಶಂಕರಘಟ್ಟ, ಸುಕನ್ಯ, ಶೃತಿ ಸಿ. ವಸಂತಕುಮಾರ್ ಕೆ.ಸಿ, ಸರ್ವಮಂಗಳ ಭೈರಪ್ಪ, ಕೆ. ಸುದೀಪ್ ಕುಮಾರ್, ಲತಾ ಚಂದ್ರಶೇಖರ್, ಮಣಿ ಎಎನ್‌ಎಸ್, ಚನ್ನಪ್ಪ, ಜಾರ್ಜ್, ಕಾಂತರಾಜ್, ಗೋಪಿ, ರವಿಕುಮಾರ್, ಬದರಿನಾರಾಯಣ, ಪ್ರಾನ್ಸಿಸ್, ಬಿ. ಗಂಗಾಧರ್, ಸಿ. ಜಯಪ್ಪ, ಅಂತೋಣಿ ವಿಲ್ಸನ್, ಅಂತರಗಂಗೆ ನಾಗೇಶ್, ಗೌರವಪುರ ಶಿವರಾಂ, ವೈ. ನಟರಾಜ್, ವೆಂಕಟಯ್ಯ, ಕೇಸರಿಪಡೆ ಗಿರೀಶ್, ಮಂಜುನಾಥ್(ಕೊಯ್ಲಿ), ಕುಮಾರ್, ಲಕ್ಷ್ಮೀಕಾಂತ್, ರೂಪ ನಾಗರಾಜ್, ವಿಜಯಲಕ್ಷ್ಮೀ, ರೇಷ್ಮಬಾನು, ಶೋಭಾ ರವಿಕುಮಾರ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Monday, December 18, 2023

ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ : ವಿಐಎಸ್‌ಎಲ್ ವ್ಯಾಯಾಮ ಶಾಲೆಗೆ ಸಮಗ್ರ ಪ್ರಶಸ್ತಿ

ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಒಟ್ಟು ೨೯೮ ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದು, ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆ ಕ್ರೀಡಾಪಟುಗಳು ಒಟ್ಟು ೨೦೫ ಅಂಕಗಳೊಂದಿಗೆ ಪ್ರತಿಸ್ಪರ್ಧಿ ಸ್ಥಾನ ಪಡೆದುಕೊಂಡಿದ್ದಾರೆ.
    ಮಹಿಳೆಯರ ಜ್ಯೂನಿಯರ್ ವಿಭಾಗದಲ್ಲಿ ಕಾರಂತ್ ವ್ಯಾಯಾಮ ಶಾಲೆಯ ಜೆ. ಪ್ರತಿಕ್ಷಾ ಮತ್ತು ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ಅಶ್ವಿನಿ ಹಾಗು ವರ್ಲ್ಡ್ ಸ್ಪೋರ್ಟ್ಸ್ ವ್ಯಾಯಾಮ ಶಾಲೆಯ ಎಸ್.ವಿ ಸಿಂಧೂರ ಬೆಸ್ಟ್ ಲಿಫ್ಟರ್ ಬಿರುದು ಪಡೆದುಕೊಂಡಿದ್ದಾರೆ.
    ಪುರುಷರ ಜ್ಯೂನಿಯರ್ ವಿಭಾಗದಲ್ಲಿ ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ವಿ. ಸುಹಾಸ್ ಮತ್ತು ವಿಐಎಸ್‌ಎಲ್ ವ್ಯಾಯಾಮ ಶಾಲೆಯ ಎಂ. ಫಜಿಲ್ ಹಾಗು ಹಿರಿಯರ ವಿಭಾಗದಲ್ಲಿ  ಎಸ್. ರಂಜಿತ್ ಬೆಸ್ಟ್ ಲಿಫ್ಟರ್ ಬಿರುದು ಪಡೆದುಕೊಂಡಿದ್ದಾರೆ.
ಉಳಿದಂತೆ ಪುರುಷರ ಮಾಸ್ಟರ್ ವಿಭಾಗದಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ರಾಘವೇಂದ್ರ ಶೆಟ್ಟಿ ಮತ್ತು ಸಿಲ್ವರ್ ಸ್ಟೋನ್ ವ್ಯಾಯಮ ಶಾಲೆಯ ಎಸ್. ದೇವಕುಮಾರ್ ಪ್ರಥಮ ಸ್ಥಾನ ಹಾಗು ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ಸಿ. ಕುಮಾರ್ ಪ್ರಥಮ ಹಾಗು ವಿಐಎಸ್‌ಎಲ್ ವ್ಯಾಯಾಮ ಶಾಲೆಯ ಶಫಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
    ಪುರುಷರ ಮಾಸ್ಟರ್-೨ ವಿಭಾಗದಲ್ಲಿ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ಡಾ ವರದರಾಜ ಹಾಗು ಶ್ರೀನಿವಾಸ್ ಪ್ರಥಮ ಸ್ಥಾನ ಹಾಗು ಲೋಕನಾಥ್ ಪ್ರಥಮ ಮತ್ತು ಕಾರಂತ್ ವ್ಯಾಯಾಮ ಶಾಲೆಯ ಎ. ಮಸ್ತಾನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
    ಪುರುಷರ ಸಬ್ ಜ್ಯೂನಿಯರ್ ವಿಭಾಗದಲ್ಲಿ ಮೊಹೊಜಿಯನ್ ಪ್ರಥಮ, ಭರತ್‌ಕುಮಾರ್ ದ್ವಿತೀಯ ಮತ್ತು ಎ. ವಿನಯ್ ತೃತೀಯ ಸ್ಥಾನ ಪಡೆದುಕೊಂಡಿದ್ದು, ಓವೈಸ್ ಅಹಮದ್ ಖಾನ್ ಪ್ರಥಮ, ಎಂ.ಬಿ ನಿತಿನ್ ದ್ವಿತೀಯ ಮತ್ತು ಎಸ್.ವಿ ಪ್ರಜ್ವಲ್ ತೃತೀಯ ಸ್ಥಾನ ಕಾಯ್ದುಕೊಂಡಿದ್ದು, ೮೮ ಕೆ.ಜಿ ತೂಕದಲ್ಲಿ ವಿ. ಪ್ರಮೋದ್ ಮತ್ತು ೯೮ ಕೆ.ಜಿ ತೂಕದಲ್ಲಿ ಪಿ. ದರ್ಶನ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಸಬ್ ಜ್ಯೂನಿಯರ್ ಮಹಿಳೆಯರ ವಿಭಾಗದ ೭೬ಕೆ.ಜಿ ತೂಕದಲ್ಲಿ ಎಂ.ಕೆ ಜ್ಞಾನವಿ ಪ್ರಥಮ, ಜ್ಯೂನಿಯರ್ ವಿಭಾಗದಲ್ಲಿ ಜ್ಞಾನಿತಾ ಪ್ರಥಮ, ಅಶ್ವಿನಿ ದ್ವಿತೀಯ ಮತ್ತು ಸೀನಿಯರ್ ವಿಭಾಗದಲ್ಲಿ ವಹೀದಾ ಬೇಗಂ ಪ್ರಥಮ, ಎ. ಸುನೀತಾ ದ್ವಿತೀಯ ಮತ್ತು ಎಸ್.ಡಿ ಮಂಜುಶ್ರೀ ತೃತೀಯ, ಮಾಸ್ಟರ್ ವಿಭಾಗದಲ್ಲಿ ಸಂಧ್ಯಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಜ್ಯೂನಿಯರ್ ೮೪ ಕೆ.ಜಿ ಒಳಗಿನ ವಿಭಾಗದಲ್ಲಿ ಟಿ.ಜೆ ಮೋನಿಕಾ ಪ್ರಥಮ, ಸೀನಿಯರ್ ವಿಭಾಗದಲ್ಲಿ ಎಂ.ಕೆ ಸೌಮ್ಯ ಪ್ರಥಮ, ಕೆ. ಸ್ವಪ್ನ ದ್ವಿತೀಯ ಹಾಗು ಡಿ. ಸೌಮ್ಯ ತೃತೀಯ ಮತ್ತು ಮಾಸ್ಟರ್ ವಿಭಾಗದಲ್ಲಿ ಶಶಿಕಲಾ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು,  ೮೪ ಕೆ.ಜಿ ಮೇಲ್ಪಟ್ಟ ಸೀನಿಯರ್ ವಿಭಾಗದಲ್ಲಿ ಆರ್. ಸಂಗೀತ ಪ್ರಥಮ, ಎನ್. ತಾರಾ ದ್ವಿತೀಯ ಹಾಗು ಮಾಸ್ಟರ್ ವಿಭಾಗದಲ್ಲಿ ಕೆ. ಕವಿತಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಸಬ್ ಜ್ಯೂನಿಯರ್ ೪೭ ಕೆ.ಜಿ ವಿಭಾಗದಲ್ಲಿ ಜೆ. ಪ್ರತಿಕ್ಷಾ ಪ್ರಥಮ, ಜ್ಯೂನಿಯರ್ ವಿಭಾಗದಲ್ಲಿ ಸಿ. ಭಾವನಾ ಪ್ರಥಮ, ಸೀನಿಯರ್ ಎಸ್.ವಿ ಸಿಂಧೂರಾ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು, ಸಬ್ ಜ್ಯೂನಿಯರ್ ೫೨ ಕೆ.ಜಿ ವಿಭಾಗದಲ್ಲಿ ಎಂ. ಸಾನಿಯಾ ಪ್ರಥಮ, ಜ್ಯೂನಿಯರ್ ಅರ್ಷಿತಾ ಪ್ರಥಮ, ೫೭ ಕೆ.ಜಿ ಮಾಸ್ಟರ್ ವಿಭಾಗದಲ್ಲಿ ಗೀತಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಸಬ್ ಜ್ಯೂನಿಯರ್ ೬೩ ಕೆ.ಜಿ ವಿಭಾಗದಲ್ಲಿ ಅನಿತಾ ಪ್ರಥಮ, ೬೯ ಕೆ.ಜಿ ವಿಭಾಗದಲ್ಲಿ ಕೆ. ಜನ್ನಿಫರ್ ಪ್ರಥಮ, ಸೀನಿಯರ್ ವಿಭಾಗದಲ್ಲಿ ಎನ್.ಪಿ ಚಂದನ ಪ್ರಥಮ ಹಾಗು ಮಾಸ್ಟರ್ ವಿಭಾಗದಲ್ಲಿ ಎಚ್. ಅನ್ನಪೂರ್ಣೇಶ್ವರಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.


ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೨ ದಿನಗಳ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ೬ ಮಂದಿ ಕ್ರೀಡಾಪಟುಗಳು ಬೆಸ್ಟ್ ಲಿಫ್ಟರ್ ಬಿರುದು ಪಡೆದುಕೊಂಡರು.  

ಮುಖಂಡರ ವಿರುದ್ಧ ವಿನಾಕಾರಣ ಕೊಲೆಯತ್ನ ಪ್ರಕರಣ ದಾಖಲು ಆರೋಪ

ಜೆಡಿಎಸ್-ಬಿಜೆಪಿ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಡೈರಿ ಚುನಾವಣೆ ಸಂಬಂಧ ಭಾನುವಾರ ಯಾವುದೇ ರೀತಿಯ ಗಂಭೀರವಾದ ಘಟನೆಗಳು ನಡೆದಿರುವುದಿಲ್ಲ. ವಿನಾಕಾರಣ ಇಬ್ಬರು ಮುಖಂಡರ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ. ತಕ್ಷಣ ಪ್ರಕರಣ ಹಿಂಪಡೆಯಬೇಕೆಂದು ಆಗ್ರಹಿಸಿ ಸೋಮವಾರ ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮುಂಭಾಗ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕತರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
    ಭದ್ರಾವತಿ : ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಡೈರಿ ಚುನಾವಣೆ ಸಂಬಂಧ ಭಾನುವಾರ ಯಾವುದೇ ರೀತಿಯ ಗಂಭೀರವಾದ ಘಟನೆಗಳು ನಡೆದಿರುವುದಿಲ್ಲ. ವಿನಾಕಾರಣ ಇಬ್ಬರು ಮುಖಂಡರ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ. ತಕ್ಷಣ ಪ್ರಕರಣ ಹಿಂಪಡೆಯಬೇಕೆಂದು ಆಗ್ರಹಿಸಿ ಸೋಮವಾರ ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಮುಂಭಾಗ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕತರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
    ಕಾಚಗೊಂಡನಹಳ್ಳಿ ಗ್ರಾಮದ ನಿವಾಸಿ ಸಿ. ರವಿಕುಮಾರ್ ಎಂಬುವರು ಡೈರಿ ಚುನಾವಣೆ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಡಿ. ಚಂದ್ರಶೇಖರ್ ಮತ್ತು ಡಿ. ಆನಂದ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಈ ಇಬ್ಬರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಠಾಣೆ ಮುಂಭಾಗ ಏಕಾಏಕಿ ಪ್ರತಿಭಟನೆ ನಡೆಸಿದರು.
    ಪೊಲೀಸರು ವಾಸ್ತವಾಂಶ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು. ಗ್ರಾಮದಲ್ಲಿ ಕೊಲೆಯತ್ನ ಅಥವಾ ಯಾವುದೇ ರೀತಿಯ ಗಂಭೀರವಾದ ಪ್ರಕರಣ ನಡೆದಿರುವುದಿಲ್ಲ. ವ್ಯಕ್ತಿಯೊಬ್ಬರು ದೂರು ನೀಡಿದ ಮಾತ್ರಕ್ಕೆ ವಿನಾಕಾರಣ ಕೊಲೆಯತ್ನ ಪ್ರಕರಣ ದಾಖಲಿಸುವುದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನಲೆಯಲ್ಲಿ ಸೂಕ್ತ ತನಿಖೆ ಕೈಗೊಂಡು ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಜಿ. ಧರ್ಮಪ್ರಸಾದ್, ಎಚ್.ಬಿ ರವಿಕುಮಾರ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ರಂಗಸ್ವಾಮಿ, ಸಾವಿತ್ರಮ್ಮ ಪುಟ್ಟೇಗೌಡ, ಉಮೇಶ್ ಸೇರಿದಂತೆ ಇನ್ನಿತರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಭದ್ರಾವತಿ ಉಪವಿಭಾಗದ ಪೊಲೀಸರ ಕಾರ್ಯಾಚರಣೆ : ಕಳವು ಮಾಡಲಾಗಿದ್ದ ೧೪ ದ್ವಿಚಕ್ರ ವಶ

ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರ ವಾಹನ ಸೇರಿ ಒಟ್ಟು ೫.೮೦ ಲಕ್ಷ ರು. ಮೌಲ್ಯ, ೩ ಮಂದಿ ಸೆರೆ

ಭದ್ರಾವತಿ ಉಪವಿಭಾಗದ ಪೊಲೀಸರು ವಿವಿಧೆಡೆ ಕಳವು ಮಾಡಲಾಗಿದ್ದ ೧೪ ಹಾಗು ಕಳವು ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ ೨ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ೫.೮೦ ಲಕ್ಷ ರು. ಮೌಲ್ಯದ ಒಟ್ಟು ೧೬ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ: ಉಪವಿಭಾಗದ ಪೊಲೀಸರು ವಿವಿಧೆಡೆ ಕಳವು ಮಾಡಲಾಗಿದ್ದ ೧೪ ಹಾಗು ಕಳವು ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ ೨ ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ೫.೮೦ ಲಕ್ಷ ರು. ಮೌಲ್ಯದ ಒಟ್ಟು ೧೬ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ ತಿಳಿಸಿದರು.
    ಅವರು ಸೋಮವಾರ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಹಿತಿ ನೀಡಿ, ತಾಲೂಕಿನ ಸಿದ್ದಾಪುರ ಹೊಸೂರು ಉರ್ದು ಶಾಲೆಯ ಹಿಂಭಾಗ ನಿವಾಸಿಗಳಾದ ಅಬುಲ್ ಕರೀಂ ಅಲಿಯಾಸ್ ಮನ್ನಾ(೨೭) ಮತ್ತು ಅರ್ಷೀಲ್ ಪಾಷಾ ಅಲಿಯಾಸ್ ಹರ್ಷೀಲ್(೩೪) ಹಾಗು  ಶಿವಮೊಗ್ಗ ರಾಗಿಗುಡ್ಡ ಮೊರಾರ್ಜಿ ಶಾಲೆಯ ಬಳಿ ನಿವಾಸಿ ಪ್ರಭು ಅಲಿಯಾಸ್ ಕೋಳಿ(೨೭) ಒಟ್ಟು ೩ ಮಂದಿಯನ್ನು ಬಂಧಿಸಿ ನ್ಯೂಟೌನ್ ಪೊಲೀಸ್ ಠಾಣೆಗೆ ಸೇರಿದ ೭, ತರೀಕೆರೆ ಪೊಲೀಸ್ ಠಾಣೆಗೆ ೧, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸೇರಿದ ೧, ಪೇಪರ್‌ಟೌನ್ ಪೊಲೀಸ್ ಠಾಣೆಗೆ ಸೇರಿದ ೧, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಸೇರಿದ ೨, ಹೊಳೆ ಹೊನ್ನೂರು ಪೊಲೀಸ್ ಠಾಣೆಗೆ ಸೇರಿದ ೧ ಮತ್ತು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಗೆ ಸೇರಿದ ೧ ಹಾಗು ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
    ಪತ್ತೆ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನೀಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಮೇಲ್ವಿಚಾರಣೆಯಲ್ಲಿ ವೃತ್ತ ನಿರೀಕ್ಷಕರಾದ ಶ್ರೀ ಶ್ರೀಶೈಲ್ ಕುಮಾರ್ ಮತ್ತು ಜಗದೀಶ ಸೋಮನಾಳ, ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ  ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆ ನಿರೀಕ್ಷಕ ಲಕ್ಷ್ಮೀಪತಿ ನೇತ್ರತ್ವದಲ್ಲಿ ಠಾಣಾಧಿಕಾರಿಗಳಾದ ಸುರೇಶ್ ಮತ್ತು ರಮೇಶ್, ಉಪ ಠಾಣಾಧಿಕಾರಿ ಚಂದ್ರಶೇಖರ್ ಹಾಗು ಪೊಲೀಸ್ ಸಿಬ್ಬಂದಿಗಳಾದ ನವೀನ್, ಚನ್ನಕೇಶವ, ನಾಗರಾಜ ಹಾಗು ಆದರ್ಶ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಡಿ. ೧೬ರಂದು ೩ ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌ರವರು ತಂಡವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ ಎಂದರು.  

Saturday, December 16, 2023

ಗೆಲುವು-ಸೋಲಿನ ಚಿಂತೆ ಬಿಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳಿ : ಮಹೇಶ್ವರಯ್ಯ

ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಶನಿವಾರ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಉದ್ಘಾಟಿಸಿದರು.
    ಭದ್ರಾವತಿ: ಕ್ರೀಡಾಕೂಟಗಳಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಮುಖ್ಯ. ಪಾಲ್ಗೊಳ್ಳುವ ಮೊದಲೆ ಗೆಲುವು-ಸೋಲಿನ ಬಗ್ಗೆ ಚಿಂತಿಸಬಾರದು. ಪಾಲ್ಗೊಳ್ಳುವಿಕೆಯಿಂದ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಮಹೇಶ್ವರಯ್ಯ ಹೇಳಿದರು.
    ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಶನಿವಾರ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪುರುಷರ ಹಾಗೂ ಮಹಿಳೆಯರ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಎಲ್ಲಾ ವಿಭಾಗದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ, ಅಂತರಾಷ್ಟ್ರೀಯ ಪವರ್ ಲಿಫ್ಟರ್ ಪ್ರಕಾಶ್ ಕಾರಂತ್ ಮಾತನಾಡಿ, ೮೦ರ ದಶಕದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಕ್ರೀಡಾಪಟುಗಳಿಗೆ ನೀಡಿದ ಪ್ರೋತ್ಸಾಹ ಇಂದು ದಂತಕಥೆ. ಅನೇಕ ಕ್ರೀಡಾಪಟುಗಳ ಬೆಳವಣಿಗೆಯಲ್ಲಿ ವಿಐಎಸ್‌ಎಲ್ ಕೊಡುಗೆ ಮಹತ್ವದ್ದಾಗಿದೆ ಎಂದು ಕಾರ್ಖಾನೆ ಸಹಕಾರ ಸ್ಮರಿಸಿದರು.
    ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ ಮಾತನಾಡಿ,  ಕಾಲೇಜು ಹಲವಾರು ಪ್ರತಿಭಾನ್ವಿತ ಪವರ್ ಲಿಪ್ಟರ್ ಪ್ರತಿಭೆಗಳನ್ನು ಒಳಗೊಂಡಿದೆ. ಈ ಕಾಲೇಜಿಗೆ ಲಭಿಸಿರುವ ಬಹುಮಾನಗಳ ಪಟ್ಟಿಯನ್ನು ಗಮನಿಸಿದರೆ ಈ ಕಾಲೇಜಿನ ಕ್ರೀಡಾ ಸಾಧನೆ ತಿಳಿಯುತ್ತದೆ ಎಂದರು.
    ವೇದಿಕೆಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ, ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವೈ. ನಟರಾಜ್, ಹಿರಿಯ ಕ್ರೀಡಾಪಟುಗಳಾ ವೀರಭದ್ರಯ್ಯ, ಮಸ್ತಾನ್, ವರದರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಚ್.ಎಸ್ ಶಿವರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ವಿಶಿಷ್ಟ ಚೇತನರಿಗೆ ಪೋಷಕರ ಸಹಕಾರ ಅತಿ ಮುಖ್ಯ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ೨೦೦೩ ರಿಂದ ೨೦೦೬ನೇ ಸಾಲಿನ ಹಳೇಯ ವಿದ್ಯಾರ್ಥಿಗಳ ಸ್ನೇಹ ಬಳಗದ ಸಹಯೋಗದೊಂದಿಗೆ ವಿಶಿಷ್ಟಚೇತನರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ: ವಿಶಿಷ್ಟ ಚೇತನರಿಗೆ ಪೋಷಕರ ಸಹಕಾರ ಅತಿ ಅವಶ್ಯಕವಾಗಿದ್ದು, ಇದರಿಂದ ವಿಶಿಷ್ಟ ಚೇತನರ ಆತ್ಮಬಲ ಮತ್ತಷ್ಟು ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶನಿವಾರ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ೨೦೦೩ ರಿಂದ ೨೦೦೬ನೇ ಸಾಲಿನ ಹಳೇಯ ವಿದ್ಯಾರ್ಥಿಗಳ ಸ್ನೇಹ ಬಳಗದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶಿಷ್ಟಚೇತನರಿಗೆ ಅಗತ್ಯ ಸಾಮಗ್ರಿ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದ ಎಲ್ಲರೂ ವಿಶಿಷ್ಟ ಚೇತನರ ನೆರವಿಗೆ ಮುಂದಾಗಬೇಕು. ಅವರಿಗೆ ಇನ್ನೂ ಹೆಚ್ಚಿನ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು ಎಂದರು.    
    ಕ್ಷೇತ್ರ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಮಾತನಾಡಿ, ವಿಶಿಷ್ಟಚೇತನರ ಬಗ್ಗೆ ಅನುಕಂಪ ಪಡುವುದರಿಂದ ಉಪಯೋಗವಾಗುವುದಿಲ್ಲ. ಬದಲಾಗಿ ಅವರಿಗೆ ಅಗತ್ಯವಿರುವ ಸಹಾಯ, ಸಹಕಾರ ನೀಡುವುದು ಮುಖ್ಯ. ಎಲ್ಲರು ತಮ್ಮ ಸಂಪಾದನೆಯಲ್ಲಿ ಅಲ್ಪ ಮೊತ್ತದ ಹಣ ಈ ರೀತಿಯ ಸೇವಾ ಕಾರ್ಯಗಳಿಗೆ ಬಳಸಿದರೆ ಮಾನವತ್ವ ವೃದ್ಧಿಸುತ್ತದೆ ಎಂದರು.
    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್ ಮಾತನಾಡಿ, ಹಣವಿದ್ದರಿಗೆ ಮತ್ತಷ್ಟು ಹಣಮಾಡುವ ಆಸೆ ಇರುತ್ತದೆ. ಆದರೆ ಉತ್ತಮ ಮಾನವೀಯ ಮೌಲ್ಯ ಹೊಂದಿದವರಿಂದ ಮಾತ್ರ ಸೇವಾ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು.
    ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧಕ್ಷೆ ಎಸ್. ಉಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ್ರು, ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಸರ್.ಎಂ.ವಿ ಕಾಲೇಜಿನ ೨೦೦೩ ರಿಂದ ೨೦೦೬ನೇ ಸಾಲಿನ ಸ್ನೇಹ ಬಳಗದ ಸದಸ್ಯರಾದ ಸುಬ್ರಮಣ್ಯ, ವೀರೇಂದ್ರ ಪಾಟೀಲ್, ಹೇಮ, ಶ್ರೀಕಾಂತ್, ಶರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಸ್ನೇಹಬಳಗದ ವತಿಂದ ವಿಶಿಷ್ಟಚೇತನ ವಿದ್ಯಾರ್ಥಿಗಳಿಗೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಲತಾ ಪ್ರಾರ್ಥಿಸಿದರು. ಟಿ.ಎನ್ ಪ್ರತಿಭಾ ಸ್ವಾಗತಿಸಿದರು. ರೇಣುಕಾ ಸಿ.ಜಿ. ನಿರೂಪಿಸಿ ಡಿ.ಎಚ್ ತೀರ್ಥಪ್ಪ ವಂದಿಸಿದರು.

Friday, December 15, 2023

ಕೋಟ್ಪಾ ಕಾಯ್ದೆಯಡಿ ೩೨ ಪ್ರಕರಣ ದಾಖಲು : ರು. ೬ ಸಾವಿರ ದಂಡ ವಸೂಲಿ

ಕೋಟ್ಪಾ ಕಾಯ್ದೆಯಡಿ ಭದ್ರಾವತಿ  ನಗರದ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಯಶ್ರೀ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಸುತ್ತಾಮುತ್ತ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಿರುವ ಘಟನೆ ನಡೆದಿದೆ.
    ಭದ್ರಾವತಿ :  ಕೋಟ್ಪಾ ಕಾಯ್ದೆಯಡಿ ನಗರದ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಯಶ್ರೀ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಸುತ್ತಾಮುತ್ತ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಿರುವ ಘಟನೆ ನಡೆದಿದೆ.
    ೩೨ ಪ್ರಕರಣಗಳನ್ನು ದಾಖಲಿಸಿ ಒಟ್ಟು ರು. ೬ ಸಾವಿರ ದಂಡ ವಿಧಿಸಲಾಗಿದೆ. ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್ ಅರಸ್, ಸಮಾಜ ಕಾರ್ಯಕರ್ತ ರವಿರಾಜ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಆನಂದಮೂರ್ತಿ, ಚೇತನ್,  ಆಕಾಶ್ ಹಾಗೂ ಪೊಲೀಸ್ ಸಿಬ್ಬಂದಿ ಎಚ್. ಪ್ರಸನ್ನ  ಪಾಲ್ಗೊಂಡಿದ್ದರು.