Saturday, January 20, 2024

ವಿದ್ಯುತ್ ಅವಘಡ ; ನಗದು, ಚಿನ್ನಾಭರಣ ಅಗ್ನಿಗಾಹುತಿ

ಭದ್ರಾವತಿ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ನಗದು, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
    ಭದ್ರಾವತಿ: ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ನಗದು, ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
    ವಾಸು ಎಂಬುವರಿಗೆ ಸೇರಿದ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಶುಕ್ರವಾರ ರಾತ್ರಿ ಬೆಂಕಿ ಕಾಣಿಕೊಂಡಿದೆ. ಈ ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಲಕ್ಷಾಂತರ ರು ಮೌಲ್ಯದ ಚಿನ್ನಾಭರಣ, ನಗದು ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟುಹೋಗಿವೆ.
    ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿ

ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ  

ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶನ ನೀಡುವಂತೆ ಭದ್ರಾವತಿ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ: ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶನ ನೀಡುವಂತೆ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
    ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಾಗು ಕಾರ್ಯದರ್ಶಿ ಗಿರಿನಾಯ್ಡು ಅವರು ಮನವಿ ಸಲ್ಲಿಸಿದ್ದು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಉಂಬ್ಳೆಬೈಲು ಹಾಗು ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಸೇರಿದಂತೆ ೨೮ ಗ್ರಾಮಗಳನ್ನೊಳಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ದೊಣಬಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಗು ಸಿಂಗನಮನೆ ಗ್ರಾಮದ ಏಕಗ್ರಾಮ ಕುಡಿಯುವ ನೀರಿನ ಯೋಜನೆಯ ಮನಶ್ವೇತನ ಕಾಮಗಾರಿ ಮತ್ತು ಕಂಬದಾಳ್ ಹೊಸೂರು ಸೇರಿದಂತೆ ೨೧ ಗ್ರಾಮಗಳನ್ನೊಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗನ್ನು ತುರ್ತಾಗಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಡಿ. ದೇವರಾಜ ಅರಸು ಜನಸ್ಪಂದನಾ ಸೇವಾ ಟ್ರಸ್ಟ್ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಾದ ಕೆ. ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ನಿರ್ದೇಶಕರು ಈ ಸಂಬಂಧ ಕ್ರಮ ಕೈಗೊಳ್ಳುವಂತೆ ತಮಗೆ(ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ) ೧೮ ಅಕ್ಟೋಬರ್ ೨೦೨೩ರಂದು ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

Friday, January 19, 2024

ಪೆನ್ಸಿಲ್ ತುದಿಯಲ್ಲಿ ಭವ್ಯ ರಾಮಮಂದಿರ : ಕಲಾವಿದ ವರುಣ್ ಆಚಾರ್

ಭದ್ರಾವತಿಯಲ್ಲಿ ಸೂಕ್ಷ್ಮ ಕಲಾಕೃತಿ ಮಾದರಿಗಳ ತಯಾರಿಕೆ ಕಲಾವಿದ ಎಸ್. ವರುಣ್ ಆಚಾರ್ ಕೈಚಳಕದಲ್ಲಿ ತಯಾರಾಗಿರುವ ಆಕರ್ಷಕವಾದ ಅಯೋಧ್ಯೆ ಭವ್ಯ ರಾಮಮಂದಿರ ಕಲಾಕೃತಿ ಮಾದರಿ.
    ಭದ್ರಾವತಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದೇಶಾದ್ಯಂತ ವಿಭಿನ್ನ ಧಾರ್ಮಿಕ ಆಚರಣೆಗಳು ಜರುಗುತ್ತಿದ್ದು, ಈ ನಡುವೆ ಕಲಾ ಸಾಧಕರು ಪ್ರಭು ಶ್ರೀರಾಮ ಚಂದ್ರನಿಗಾಗಿ ತಮ್ಮಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಿ ಸಮರ್ಪಿಸುತ್ತಿದ್ದಾರೆ. ಈ ಸಾಲಿನಲ್ಲಿ ಹಳೇನಗರದ ಎನ್‌ಎಸ್‌ಟಿ ರಸ್ತೆ ನಿವಾಸಿ ಎಸ್. ವರುಣ್ ಆಚಾರ್ ಸಹ ಒಬ್ಬರಾಗಿದ್ದಾರೆ.
    ವರುಣ್ ಮೂಲತಃ ಸೂಕ್ಷ್ಮ ಕಲಾಕೃತಿ (ಮೈಕ್ರೋ ಆರ್ಟ್ಸ್) ಮಾದರಿ ತಯಾರಿಕೆ ಕಲಾವಿದರಾಗಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕರಾಗಿದ್ದಾರೆ. ಇದೀಗ ಪೆನ್ಸಿಲ್ ತುದಿಯಲ್ಲಿ ಆಯೋಧ್ಯೆ ಭವ್ಯ ರಾಮಮಂದಿರ ಮಾದರಿ ತಯಾರಿಕೆಯಲ್ಲಿ ಇವರ ಪ್ರತಿಭೆ ಅನಾವರಣಗೊಂಡಿದೆ. ೧.೯ ಸೆ.ಮೀ. ಅಳತೆಯ ಆಕರ್ಷಕವಾದ ಭವ್ಯ ರಾಮಮಂದಿರ ಮಾದರಿ ತಯಾರಿಸಲಾಗಿದ್ದು, ಮಂದಿರ, ಗೋಪುರಗಳು ಹಾಗು ಕೇಸರಿ ಧ್ವಜಕಂಬ ಒಳಗೊಂಡಿದೆ.  ಇದನ್ನು ತಯಾರಿಸಲು ಸುಮಾರು ೪ ಗಂಟೆ ಸಮಯ ವ್ಯಯ ಮಾಡಿದ್ದಾರೆ.
    ಪದವಿಧರರಾಗಿರುವ ವರುಣ್, ಸಿದ್ದರಾಜು-ಗಾಯಿತ್ರಿ ದಂಪತಿ ಪುತ್ರರಾಗಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಡುವಿನ ಅವಧಿಯಲ್ಲಿ ಸೂಕ್ಷ್ಮ ಕಲಾಕೃತಿ ಮಾದರಿಗಳನ್ನು ತಯಾರಿಸುತ್ತಿದ್ದಾರೆ. ಸೀಮೆಸುಣ್ಣ, ಅಕ್ಕಿಕಾಳು, ಬೆಂಕಿಕಡ್ಡಿ, ಕಡಲೆ ಬೀಜ ಸೇರಿದಂತೆ ಇತ್ಯಾದಿ ವಸ್ತುಗಳಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಕಲಾಕೃತಿ ಮಾದರಿಗಳು ಇವರ ಕೈಚಳಕದಲ್ಲಿ ಅನಾವರಣಗೊಂಡಿವೆ.  

ಡಿಎಸ್‌ಎಸ್ ಸುವರ್ಣ ಮಹೋತ್ಸವಕ್ಕೆ ಚಾಲನೆ : ದಲಿತರ ಏಳಿಗೆಗಾಗಿ ಶ್ರಮಿಸದ ಧೀಮಂತ ವ್ಯಕ್ತಿ ಪ್ರೊ. ಬಿ. ಕೃಷ್ಣಪ್ಪ

ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಹಿರಿಯ ಮುಖಂಡ ಜಿ. ಮೂರ್ತಿ

ಪ್ರೊ. ಬಿ. ಕೃಷ್ಣಪ್ಪ ಅವರು ಸಂಘಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇದೀಗ ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಭದ್ರಾವತಿ ನಗರದಲ್ಲಿ ಚಾಲನೆ ನೀಡಲಾಯಿತು.

    ಭದ್ರಾವತಿ : ಪ್ರೊ. ಬಿ. ಕೃಷ್ಣಪ್ಪ ಅವರು ಸಂಘಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇದೀಗ ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.
    ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತ, ಜೈಭೀಮ್ ನಗರದಿಂದ ಕಲಾ ತಂಡಗಳೊಂದಿಗೆ  ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ನಡೆಸಲಾಯಿತು. ನಂತರ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಸಮಿತಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
    ನಂತರ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಗೆ ಚಾಲನೆ ನೀಡಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಜಿ.ಮೂರ್ತಿ, ಬಿ. ಕೃಷ್ಣಪ್ಪ ಅವರು ಸದಾ ಕಾಲ ದಲಿತರ ಪರವಾದ ಚಿಂತನೆಗಳನ್ನು ಹೊಂದುವ ಮೂಲಕ ಅವರ ಏಳಿಗೆಗಾಗಿ ಶ್ರಮಿಸಿದ ಧೀಮಂತ ವ್ಯಕ್ತಿ. ತಮ್ಮ ಸ್ವಂತ ಹಣದಲ್ಲಿಯೇ ಸಂಘಟನೆ ಕಟ್ಟುವ ಜೊತೆಗೆ ನಗರದ ವಿಐಎಸ್‌ಎಲ್ ಹಾಗು ಎಂಪಿಎಂ ಈ ಎರಡು ಅವಳಿ ಕಾರ್ಖಾನೆಗಳ ಕಾರ್ಮಿಕರು ನೀಡಿದ ತಲಾ ಎರಡು ರುಪಾಯಿ ಕೆಂಪು ನೋಟಿನ ಹಣದಲ್ಲಿ ಇಡೀ ರಾಜ್ಯಾದ್ಯಂತ ಸಂಘಟನೆ ವಿಸ್ತರಿಸಿದರು. ಆ ಮೂಲಕ ಹಲವು ಹೋರಾಟಗಳಲ್ಲಿ ಯಶಸ್ಸು ಸಾಧಿಸಿ ಶೋಷಿತರಿಗೆ ನ್ಯಾಯ ಒದಗಿಸಿಕೊಟ್ಟರು ಎಂದರು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಆಶಯ ಹಾಗು ಸಂವಿಧಾನದ ಆಧಾರದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಲಾಗಿದೆ. ಇಂಥದೊಂದು ಸಂಘಟನೆವ ೫೦ ವರ್ಷಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


ಪ್ರೊ. ಬಿ. ಕೃಷ್ಣಪ್ಪ ಅವರು ಸಂಘಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇದೀಗ ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಭದ್ರಾವತಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.
    ಅನೇಕ ಚಳವಳಿಗಳು ಆರಂಭಗೊಂಡು ಕೆಲಕಾಲದಲ್ಲಿಯೇ ನಶಿಸಿವೆ. ಆದರೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ನಡುವೆ ಹುಟ್ಟಿದ ಚಳವಳಿಯಾಗಿದ್ದರಿಂದ ಇಂದಿಗೂ ಜೀವಂತವಾಗಿದೆ. ಸಾಮಾಜಿಕ ಮಾಧ್ಯಮಗಳಿಲ್ಲದ ಕಾಲದಲ್ಲಿಯೂ ಸದೃಢವಾಗಿ ಬಲಗೊಂಡ ಸಂಘಟನೆ ದಲಿತ ಸಂಘರ್ಷ ಸಮಿತಿ ಎಂದರು.
    ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ದಲಿತ ಸಂಘರ್ಷ ಸಮಿತಿ ಅನೇಕ ಕಾಯ್ದೆಗಳು ರೂಪಿಸಲು ಕಾರಣವಾಗಿದೆ. ಅನೇಕ ಬಡವರ ಜಮೀನುಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರಸ್ತುತ ದಲಿತರು ಅನೇಕ ಸೌಲಭ್ಯಗಳನ್ನು ಪಡೆಯುವಲ್ಲಿ ಕದಸಂಸ ಪಾತ್ರ ಪ್ರಮುಖವಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಸದಸ್ಯ ಚನ್ನಪ್ಪ, ಮುಖಂಡರುಗಳಾದ ಈಶ್ವರಪ್ಪ, ಪ್ರಸನ್ನಕುಮಾರ್, ರಂಗನಾಥ್, ಕಾಣಿಕ್ ರಾಜ್, ಎಸ್. ಉಮಾ, ಶಾಂತಿ, ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ಗಂಗಾಧರ್, ವಿ. ವಿನೋದ್, ಜಿಂಕ್‌ಲೈನ್ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ೧೦೬ನೇ ಸಂಸ್ಥಾಪಕರ ದಿನಾಚರಣೆ : ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೬ನೇ ಸ್ಥಾಪನೆ ವರ್ಷದ ಅಂಗವಾಗಿ ಅತ್ಯುತ್ತಮ ಇಂಜಿನಿಯರ್, ರಾಜನೀತಿಜ್ಞ ಸರ್. ಮೋಕ್ಷ ಗುಂಡಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಖಾನೆ ವತಿಯಿಂದ ಗೌರವ ಸಲ್ಲಿಸಲಾಯಿತು.
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೬ನೇ ಸ್ಥಾಪನೆ ವರ್ಷದ ಅಂಗವಾಗಿ ಅತ್ಯುತ್ತಮ ಇಂಜಿನಿಯರ್, ರಾಜನೀತಿಜ್ಞ ಸರ್. ಮೋಕ್ಷ ಗುಂಡಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಖಾನೆ ವತಿಯಿಂದ ಗೌರವ ಸಲ್ಲಿಸಲಾಯಿತು.
    ಕಾರ್ಖಾನೆ ಆವರಣದಲ್ಲಿರುವ ಪ್ರತಿಮೆಗೆ ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಮತ್ತು ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಕೆ.ಎಸ್ ಸುರೇಶ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.  
    ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಪ್ರಭಾರಿ ಅಧ್ಯಕ್ಷ ಎಂ.ಎಲ್ ಯೋಗೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಉಪಪ್ರಬಂಧಕ(ಸಿಬ್ಬಂದಿ) ಕೆ.ಎಸ್ ಶೋಭ ಸೇರಿದಂತೆ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.

Thursday, January 18, 2024

ಹಿರಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎಚ್.ಬಿ ವಸಂತಕುಮಾರ್

ಭದ್ರಾವತಿ ತಾಲೂಕಿನ ಹಿರಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎಚ್.ಬಿ ವಸಂತಕುಮಾರ್ ಹಾಗು ಉಪಾಧ್ಯಕ್ಷರಾಗಿ ನೇತ್ರಾವತಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ: ತಾಲೂಕಿನ ಹಿರಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎಚ್.ಬಿ ವಸಂತಕುಮಾರ್ ಹಾಗು ಉಪಾಧ್ಯಕ್ಷರಾಗಿ ನೇತ್ರಾವತಿ ಆಯ್ಕೆಯಾಗಿದ್ದಾರೆ.
    ಉಳಿದಂತೆ ಸದಸ್ಯರಾಗಿ ಎಚ್.ಎಂ ಲೋಕೇಶ್, ಎಚ್.ಪಿ ಚಂದ್ರಶೇಖರ್, ಎಚ್.ಎಸ್ ಕುಮಾರ್, ಎಚ್.ಆರ್ ಜಗದೀಶ್, ಎಚ್.ಎ ಶಿವಣ್ಣ, ಎಂ. ಶಿವಕುಮಾರ್, ಸತ್ಯನಾರಾಯಣರಾವ್ ಮತ್ತು ಮಂಜುಳ ಸೇರಿದಂತೆ ೮ ಮಂದಿ ಆಯ್ಕೆಯಾಗಿದ್ದಾರೆ.
    ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರಿಗೆ ಹಿರಿಯೂರು ಗ್ರಾಮಸ್ಥರು, ಹಾಲು ಉತ್ಪಾದಕರು ಹಾಗು ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಜ.೨೨ರಂದು ನಗರಸಭೆ ಅಧ್ಯಕ್ಷರ ಚುನಾವಣೆ : ಲತಾ ಚಂದ್ರಶೇಖರ್ ಆಯ್ಕೆ ಬಹುತೇಕ ಖಚಿತ

ಲತಾ ಚಂದ್ರಶೇಖರ್
    ಭದ್ರಾವತಿ:  ನಗರಸಭೆ ಅಧ್ಯಕ್ಷರ ಚುನಾವಣೆ ಜ.೨೨ರಂದು ನಡೆಯಲಿದ್ದು, ಅಧ್ಯಕ್ಷರಾಗಿ ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
    ನಗರಸಭೆ ಆಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಮೀಸಲಾತಿ ಮೊದಲ ೩೦ ತಿಂಗಳ ಅವಧಿ ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನಿರ್ದೇಶನದಂತೆ ಅರ್ಹ ಸದಸ್ಯರಿಗೆ ಬಿಡುಕೊಡಲಾಗುತ್ತಿದೆ. ಸಾಮಾನ್ಯ ಮಹಿಳಾ ಮೀಸಲು ಹೊಂದಿರುವ ಅಧ್ಯಕ್ಷ ಸ್ಥಾನ ಅಧಿಕಾರ ಈಗಾಗಲೇ ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ ಮತ್ತು ಶೃತಿ ಸಿ. ವಸಂತಕುಮಾರ್ ಕೆ.ಸಿ ಒಟ್ಟು ೩ ಮಂದಿ ಸದಸ್ಯರು ಅನುಭವಿಸಿದ್ದಾರೆ. ಉಳಿದ ಅವಧಿಗೆ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
    ಈ ಹಿಂದೆಯೇ ಅಧಿಕಾರ ಅನುಭವಿಸಬೇಕಾಗಿದ್ದ ಲತಾ ಚಂದ್ರಶೇಖರ್ ಅವರಿಗೆ ಮೀಸಲಾತಿ ಕೊನೆ ಅವಧಿ ಅಧಿಕಾರ ಬಿಟ್ಟುಕೊಡುವುದಾಗಿ ತೀರ್ಮಾನಿಸಲಾಗಿತ್ತು. ಅದರಂತೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಜ.೨೨ರಂದು ಚುನಾವಣೆ ನಡೆಯಲಿದೆ.
    ಪ್ರಸ್ತುತ ನಗರಸಭೆಯಲ್ಲಿ ೧೮ ಕಾಂಗ್ರೆಸ್, ೧೨ ಜೆಡಿಎಸ್, ೪ ಬಿಜೆಪಿ ಹಾಗು ೧ ಪಕ್ಷೇತರ ಸದಸ್ಯರಿದ್ದಾರೆ. ಲತಾ ಚಂದ್ರಶೇಖರ್‌ರವರು ಮೂಲತಃ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಮೊದಲ ಬಾರಿಗೆ ವಾರ್ಡ್ ನಂ.೩೪ರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
    ಜ.೨೨ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧ ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ ೧.೧೫ ರಿಂದ ೧.೩೦ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ. ೧.೩೦ರ ನಂತರ ಅಧ್ಯಕ್ಷ ಘೋಷಣೆ ನಡೆಯಲಿದೆ. ಈ ಸಂಬಂಧ ಜ.೧೦ರಂದು ಉಪವಿಭಾಗಾಧಿಕಾರಿ ಚುನಾವಣೆ ಸೂಚನೆ ಪತ್ರ ಹೊರಡಿಸಿದ್ದಾರೆ.