Tuesday, October 15, 2024

ಅಂಧ ವಿಕಲಚೇತನರ ಸ್ವಾಭಿಮಾನದ ಬದುಕು ಸಮಾಜಕ್ಕೆ ಮಾದರಿ


ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಮತ್ತು ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ವಿಶ್ವ ದೃಷ್ಟಿ ದಿನಾಚರಣೆ ಹಾಗೂ ಸೇವಾ ದಿವಸ್ ಕಾರ್ಯಕ್ರಮ ಆಯೋಜಿಲಾಗಿತ್ತು.  
    ಭದ್ರಾವತಿ: ಪ್ರಸ್ತುತ ಸಮಾಜದಲ್ಲಿ ಕಣ್ಣಿದ್ದು ಕುರುಡರಾಗಿರುವ, ಕೈಕಾಲು ಚೆನ್ನಾಗಿದ್ದು ಸೋಮಾರಿಗಳಾಗಿರುವವರ ಮಧ್ಯೆ ಉತ್ತಮ ಶಿಕ್ಷಣ, ತರಬೇತಿ ಪಡೆದು ಸ್ವಾಭಿಮಾನದಿಂದ ಜೀವನ ಕಟ್ಟಿಕೊಳ್ಳುತ್ತಿರುವ ಅಂಧರು ನಮಗೆ ಆದರ್ಶ ಪ್ರಾಯರಾಗಿ ಕಾಣಿಸುತ್ತಾರೆ ಎಂದು ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ, ಬಿ.ಎಸ್ ಮಹೇಶ್ ಕುಮಾರ್ ಹೇಳಿದರು.          
    ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಮತ್ತು ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ವಿಶ್ವ ದೃಷ್ಟಿ ದಿನಾಚರಣೆ ಹಾಗೂ ಸೇವಾ ದಿವಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
     ಕಣ್ಣುಗಳ ದೋಷ ಮತ್ತು ಅವುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವದೃಷ್ಟಿ ದಿನಾಚರಣೆ ಆಚರಿಸಲಾಗುತ್ತಿದೆ. ಅಂಧರು ಸಹ ತಮ್ಮ ಪ್ರತಿಭೆಗಳ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಅಂಧರಿಗೆ ಉನ್ನತ ಶಿಕ್ಷಣ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಸಂಗೀತ ತರಬೇತಿ ನೀಡುವ ಮೂಲಕ ಅವರ ಸ್ವಾವಲಂಬನೆಯ ಜೀವನೋಪಾಯಕ್ಕೆ ದಾರಿಯಾಗಿರುವ ಸಿದ್ದಾರ್ಥ ಅಂಧರ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
     ಲಯನ್ಸ್ ಕ್ಲಬ್ ಅಧ್ಯಕ್ಷ ರಾಮೂರ್ತಿ ಲಯನ್ಸ್ ಕ್ಲಬ್ ಸೇವಾ ದಿವಸ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಲಯನ್ಸ್ ಕ್ಲಬ್ ಖಜಾಂಚಿ ರಾಜಕುಮಾರ್, ಸಿದ್ದಾರ್ಥ್ ಅಂಧರ ಕೇಂದ್ರದ ನಿರ್ದೇಶಕಿ ಹಾಗೂ ಉಪನ್ಯಾಸಕಿ ಸೃಷ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿ ವಂದಿಸಿದರು. ಅಂಧರ ಕೇಂದ್ರದ ಮಂಜುನಾಥ್ ಪ್ರಾರ್ಥಿಸಿದರು. 

Monday, October 14, 2024

`ಸ್ವಚ್ಛತಾ ಹಿ ಸೇವಾ-೨೦೨೪' ಅಭಿಯಾನ : ವಿಐಎಸ್‌ಎಲ್ ಅಧಿಕಾರಿಗಳು, ಕಾರ್ಮಿಕರಿಗೆ ಸಸಿ ವಿತರಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ `ಸ್ವಚ್ಛತಾ ಹಿ ಸೇವಾ-೨೦೨೪' ಅಭಿಯಾನದ ಅಂಗವಾಗಿ ಕಾರ್ಖಾನೆ ಆವರಣ ಮತ್ತು ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನೌಕರರು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸಸಿಗಳನ್ನು ವಿತರಿಸಲಾಯಿತು.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ `ಸ್ವಚ್ಛತಾ ಹಿ ಸೇವಾ-೨೦೨೪' ಅಭಿಯಾನದ ಅಂಗವಾಗಿ ಕಾರ್ಖಾನೆ ಆವರಣ ಮತ್ತು ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನೌಕರರು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸಸಿಗಳನ್ನು ವಿತರಿಸಲಾಯಿತು.
    ಕಾರ್ಖಾನೆ ವತಿಯಿಂದ ಸೆಪ್ಟಂಬರ್ ಮತ್ತು ಅಕ್ಟೋಬರ್ ಎರಡು ತಿಂಗಳ ಅವಧಿಯಲ್ಲಿ ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು,   ಈ ಅಭಿಯಾನದ ಭಾಗವಾಗಿ ಹೊಂಗೆ, ಅಶೋಕ, ಹಲಸು, ಅಡಕೆ ಮತ್ತು ತುಳಸಿ ತಳಿಯ ಸುಮಾರು ೭೦೦ ಸಸಿಗಳನ್ನು ಈಗಾಗಲೇ ನೌಕರರಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ವಿತರಿಸಲಾಗಿದೆ. ತಾಲೂಕು ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹಸಿರು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. 
    ಈ ನಡುವೆ ಅಭಿಯಾನದ ಸಂದರ್ಭದಲ್ಲಿ ಶಿವಮೊಗ್ಗ ಪರಿಸರ ಅಧಿಕಾರಿ ವಿ. ರಮೇಶ್ ಮತ್ತು ಉಪ ಪರಿಸರ ಅಧಿಕಾರಿ ಕೆ. ಶಿಲ್ಪಾ ಕಾರ್ಖಾನೆ ಹಾಗು ವಿಐಎಸ್‌ಎಲ್ ಅತಿಥಿ ಗೃಹ ಆವರಣದಲ್ಲಿರುವ ಸರ್.ಎಂ ವಿಶ್ವೇಶ್ವರಾಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು. 
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ,   ಪ್ರಭಾರ ಮುಖ್ಯ ಪ್ರಧಾನ ವ್ಯವಸ್ಥಾಪಕ(ಕಾರ್ಯಗಳು) ಟಿ. ರವಿಚಂದ್ರನ್, ಮುಖ್ಯ ಪ್ರಧಾನ ವ್ಯವಸ್ಥಾಪಕ(ಎಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕಗಳು) ಎಲ್. ಪ್ರವೀಣ್ ಕುಮಾರ್, ಮುಖ್ಯ ಪ್ರಧಾನ ವ್ಯವಸ್ಥಾಪಕ (ಇಎಂಡಿ ಮತ್ತು ಸಿಇ-ಸ್ಥಾವರ) ಎಂ. ಸುಬ್ಬರಾವ್ ಹಾಗು ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಕಾಸ್ ಬಾಸರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವಿಐಎಸ್‌ಎಲ್ ನಿವೃತ್ತ ನೌಕರರ ಬಿ.ಪಿ ಪಾಲಾಕ್ಷಪ್ಪ ನಿಧನ

ಬಿ.ಪಿ ಪಾಲಾಕ್ಷಪ್ಪ 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಬಿ.ಪಿ ಪಾಲಾಕ್ಷಪ್ಪ(೭೮) ನಿಧನ ಹೊಂದಿದರು. 
    ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ದಾವಣಗೆರೆ ಗ್ರಾಸ್ ಹೌಸ್ ರುದ್ರಭೂಮಿಯಲ್ಲಿ ಅ.೧೫ರ ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ನೆರವೇರಲಿದೆ. ಪಾಲಾಕ್ಷಪ್ಪರವರು ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ. 

೨ನೇ ಹಂತದ ಕಾಮಗಾರಿಗೆ ಸಂಸದರ ನಿಧಿಯಿಂದ ೩೦ ಲಕ್ಷ ರು. ಅನುದಾನ : ಬಿವೈಆರ್

ಭದ್ರಾವತಿ ಹಳೇನಗರದ ವೀರಶೈವ ಸೇವಾ ಸಮಿತಿವತಿಯಿಂದ ಶ್ರೀ ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದುರ್ಗಾಸಪ್ತಶತಿ ಪಾರಾಯಣ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡಿದ್ದರು. 
    ಭದ್ರಾವತಿ : ಹಳೆನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀಮಾತಾ ಬನಶಂಕರಿ ದೇವಿ ಸಭಾಂಗಣದ ೨ನೇ ಹಂತದ ಕಾಮಗಾರಿಗೆ ಮುಂದಿನ ದಿನಗಳಲ್ಲಿ ೫೦ ಲಕ್ಷ ರು. ಸಂಸದರ ಅನುದಾನದಿಂದ ನೀಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು. 
    ಅವರು ಹಳೇ ನಗರದ ವೀರಶೈವ ಸೇವಾ ಸಮಿತಿವತಿಯಿಂದ  ಶ್ರೀ ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದುರ್ಗಾಸಪ್ತಶತಿ ಪಾರಾಯಣ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀ ವೀರಭದ್ರೇಶ್ವರಿ ಸ್ವಾಮಿ ಸಮುದಾಯ ಭವನ ಸುಸಜ್ಜಿತವಾಗಿ ನಿರ್ಮಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವ ನಿಟ್ಟಿನಲ್ಲಿ ಸಹಕಾರ ನೀಡುತ್ತೇನೆ ಎಂದರು. 
       ಸಮಿತಿ ಪ್ರಮುಖರಾದ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಎಂ. ವಾಗೀಶ್ ಕುಮಾರ್ ಕೋಠಿ, ಮಲ್ಲಿಕಾರ್ಜುನ್, ನಂಜಪ್ಪ, ಷಣ್ಮುಖಪ್ಪ, ಉದಯ್ ಕುಮಾರ್, ನಾಗಾನಂದ, ಶೋಭಾ ಮತ್ತು ನಾಗರತ್ನ ಹಾಗು ಮುಖಂಡರಾದ ಎಚ್. ತೀರ್ಥಯ್ಯ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.೧೫ರಂದು ನಗರ-ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ

    ಭದ್ರಾವತಿ : ಮೆಸ್ಕಾಂ ನಗರ ಮತ್ತು ಗ್ರಾಮೀಣ ಉಪವಿಭಾಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದ ರಿಂದ ಅ.೧೫ರ ಮಂಗಳವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ವಕಾಗದ ನಗರದ ೧ನೇ ವಾರ್ಡ್ ನಿಂದ ೧೦ನೇ ವಾರ್ಡ್‌ವರೆಗೆ, ಎಂ.ಪಿ.ಎಂ ವಸತಿ, ಎಂ.ಪಿ.ಎಂ ಲೇಔಟ್, ಆನೆಕೊಪ್ಪ, ಜೆಪಿಎಸ್ ಕಾಲೋನಿ, ಉಜ್ಜನಿಪುರ, ದೊಡ್ಡಗೊಪ್ಪೇನಹಳ್ಳಿ, ಬಾರಂದೂರು, ಮೊಸರಹಳ್ಳಿ, ಕಾರೇಹಳ್ಳಿ, ಹಡ್ಲಘಟ್ಟ, ಶಿವಪುರ, ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಕೆರೆ ಕಾಲೋನಿ, ಅಂತರಗಂಗೆ, ಭೋವಿ ಕಾಲೋನಿ, ಗಂಗೂರು, ದೊಡ್ಡೇರಿ, ಉಕ್ಕುಂದ, ಕೆಂಚಮ್ಮನಹಳ್ಳಿ, ಜನ್ನಾಪುರ, ಹುತ್ತಾ ಕಾಲೋನಿ, ಭಂಡಾರಹಳ್ಳಿ, ಕಡದಕಟ್ಟೆ, ನಾಗಮ್ಮ ಬಡಾವಣೆ, ಸಂಜಯ ಕಾಲೋನಿ, ವೇಲೂರು ಶೆಡ್, ಜಿಂಕ್‌ಲೈನ್, ಅಪ್ಪರ್ ಹುತ್ತಾ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ಹಾಗು ೧೦.೩೦ ರಿಂದ ೨.೩೦ರವರೆಗೆ ಸೀಗೆಬಾಗಿ, ಭದ್ರಾ ಕಾಲೋನಿ, ಸೈಯ್ಯದ್ ಕಾಲೋನಿ, ಶ್ರೀರಾಮ ನಗರ, ವೀರಾಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ  ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ. 

ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ


ಭದ್ರಾವತಿ:  ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಭವಾನಿ ಸಂಕೀರ್ಣದಲ್ಲಿ ಸೋಮವಾರ ನೂತನ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
. ಬೆಂಗಳೂರು ಗವಿಪುರಂ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಜಾಮೀನುಸಾಲ, ಗೋಲ್ಡ್ ಲೋನ್, ಹಿರಿಯ ನಾಗರಿಕರ ಹಾಗೂ ಮಹಿಳೆಯರ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿದರ ನೀಡುವುದು, ಆರ್.ಟಿ.ಜಿ.ಎಸ್, ನೆಫ್ಟ್ ನಂತಹ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಆರ್. ಪಾಗೋಜಿ, ಸೊಸೈಟಿ ಅಧ್ಯಕ್ಷ ಲೋಕೇಶ್ವರರಾವ್ ದೊಂಬಾಳೆ, ಸೊಸೈಟಿ ಉಪಾಧ್ಯಕ್ಷ ಆರ್. ನಾಗರಾಜ್‌ರಾವ್ ಸಿಂಘಾಡೆ, ನಿರ್ದೇಶಕರಾದ ರಾಮಾನಾಥ ವಿ ಬರ್ಗೆ, ಕೃಷ್ಣೋಜಿರಾವ್ ಗಾಯಕ್‌ವಾಡ್, ಗೀತಾಬಾಯಿ, ಭಾರತಿಗಾಯಕ್‌ವಾಡ್, ಬಸಂತರಾವ್ ದಾಳೆ, ಸುರೇಶ್ ಎಸ್. ಬೋಸ್ಲೆ, ರಂಗೋಜಿರಾವ್ ಬಂಡಗಾರ್, ಬಿ. ಹಾಲೋಜಿರಾವ್, ಟಿ.ಆರ್ ಭೀಮರಾವ್, ಎಸ್. ಶಾಂತಕುಮಾರ್ ಗಾಯಕ್‌ವಾಡ್, ಪರಶುರಾಮ್‌ರಾವ್ ಜಾಧವ್, ಎಚ್.ಡಿ ಮಹೇಶ್‌ರಾವ್, ಮಂಜುನಾಥರಾವ್ ಮೋರೆ ಮತ್ತು ಜಿ.ವೈ ರಂಗನಾಥರಾವ್ ಹಜಾರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಭದ್ರಾವತಿ ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಭವಾನಿ ಸಂಕೀರ್ಣದಲ್ಲಿ ಸೋಮವಾರ ನೂತನ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 

Sunday, October 13, 2024

ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಕುಸಿದು ಬಿದ್ದ ಭದ್ರಾ ನಾಲೆಗೆ ನಿರ್ಮಿಸಿದ್ದ ಸೇತುವೆ

ಭದ್ರಾವತಿ ತಾಲೂಕಿನಲ್ಲಿ ಕಳೆದ ಎರಡು ದಿನದ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಭದ್ರಾ ನಾಲೆಗೆ ನಿರ್ಮಿಸಲಾಗಿದ್ದ ಸೇತುವೆ ಶಿಥಿಲಗೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ. 
    ಭದ್ರಾವತಿ:  ತಾಲೂಕಿನಲ್ಲಿ ಕಳೆದ ಎರಡು ದಿನದ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಭದ್ರಾ ನಾಲೆಗೆ ನಿರ್ಮಿಸಲಾಗಿದ್ದ ಸೇತುವೆ ಶಿಥಿಲಗೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ. 
    ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಭದ್ರಾ ನಾಲೆಗೆ ನಿರ್ಮಿಸಿದ್ದ ಸೇತುವೆ ಕುಸಿದು ಬಿದ್ದಿದೆ. ಹಂಚಿನ ಸಿದ್ದಾಪುರ ಗ್ರಾಮದಿಂದ ಸಿದ್ದೇಶ್ವರ ದೇವಸ್ಥಾನ ಹಾಗು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಸೇತುವೆ ಕುಸಿದು ಬಿದ್ದಿರುವ ಹಿನ್ನಲೆಯಲ್ಲಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ತಕ್ಷಣ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 
    ಧಾರಾಕಾರವಾಗಿ ಸುರಿದ ಮಳೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿರುವ ಘಟನೆಗಳು ಸಹ ನಡೆದಿದ್ದು, ನಾಡಹಬ್ಬ ಹಬ್ಬ ದಸರಾ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮದ ಸಂಭ್ರಮದಲ್ಲಿ ತೊಡಗಿದ್ದ ಗ್ರಾಮಸ್ಥರ ಸಂತಸ ಕಸಿದುಕೊಂಡಿದೆ.