Sunday, November 3, 2024

ಹಿರಿಯ ಪತ್ರಕರ್ತ ಕಣ್ಣಪ್ಪರಿಗೆ ಬಿಜೆಪಿ ಪಕ್ಷದಿಂದ ಸನ್ಮಾನ

ಅಲ್ ಇಂಡಿಯಾ ಮೊದಲಿಯಾರ್ ಸಂಘದ ನೂತನ ಅಧ್ಯಕ್ಷರಾದ ಭದ್ರಾವತಿ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪರವರನ್ನು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಅಲ್ ಇಂಡಿಯಾ ಮೊದಲಿಯಾರ್ ಸಂಘದ ನೂತನ ಅಧ್ಯಕ್ಷರಾದ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪರವರನ್ನು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಕಣ್ಣಪ್ಪರವರು ತಾಲೂಕು ತಮಿಳು ಸಂಘ ಹಾಗು ಮೊದಲಿಯಾರ್ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ತಾಲೂಕು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾಗಿ, ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮೊದಲಿಯಾರ್ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
    ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತತ್ರಿ ಕಣ್ಣಪ್ಪರವರಿಗೆ ಉನ್ನತ ಮಟ್ಟದಲ್ಲಿ ಸಂಘದ ಜವಾಬ್ದಾರಿ ವಹಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು. 
    ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಎಂ.ಮಂಜುನಾಥ್, ಎಚ್. ತೀರ್ಥಯ್ಯ, ಬಿ.ಕೆ ಶ್ರೀನಾಥ್, ಅಣ್ಣಪ್ಪ, ಚನ್ನೆಶ್, ರಾಜಶೇಖರ್ ಉಪ್ಪಾರ, ಅವಿನಾಶ್, ಪಿ.ಜಿ ರಾಮಲಿಂಗಯ್ಯ, ಕಾ.ರಾ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಸೇತುವೆಯಿಂದ ಕಾಲು ಜಾರಿ ನದಿಗೆ ಬಿದ್ದ ಯುವಕನನ್ನು ರಕ್ಷಿಸಿದ ಅಗ್ನಿಶಾಮಕ ಇಲಾಖೆ ತಂಡ

ಸೇತುವೆ ಮೇಲಿಂದ ಆಯ ತಪ್ಪಿ ಭದ್ರಾ ನದಿಗೆ ಬಿದ್ದ ಯುವಕನನ್ನು ಅಗ್ನಿಶಾಮಕ ಇಲಾಖೆ ತಂಡ ರಕ್ಷಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ಭದ್ರಾವತಿಯಲ್ಲಿ ನಡೆದಿದೆ. 
    ಭದ್ರಾವತಿ: ಸೇತುವೆ ಮೇಲಿಂದ ಆಯ ತಪ್ಪಿ ಭದ್ರಾ ನದಿಗೆ ಬಿದ್ದ ಯುವಕನನ್ನು ಅಗ್ನಿಶಾಮಕ ಇಲಾಖೆ ತಂಡ ರಕ್ಷಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. 
    ನಗರದ ಬೈಪಾಸ್ ರಸ್ತೆ, ಆನೆಕೊಪ್ಪ ನಗರಸಭೆ ಪಂಪ್ ಹೌಸ್ ಸಮೀಪದ ಹೊಸ ಸೇತುವೆ ಮೇಲೆ ದುರ್ಘಟನೆ ನಡೆದಿದ್ದು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡದ ಯಶಸ್ವಿ ಕಾರ್ಯಾಚರಣೆಯಿಂದಾಗಿ ಪವನ್(೨೫) ಪ್ರಾಣಾಪಾಯದಿಂದ ಪಾರಾಗಿದ್ದಾನೆ. 
    ಘಟನೆ ವಿವರ : 
    ಕಾರಿನಲ್ಲಿ ಬೆಂಗಳೂರಿಗೆ ತೆರಳಲು ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆ ಮೇಲೆ ಬೆಳಗಿನ ಜಾವ ಸುಮಾರು ೫.೩೦ರ ಸಮಯದಲ್ಲಿ ಕಾರು ನಿಲ್ಲಿಸಿ ಪೂಜೆ ಸಲ್ಲಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಕತ್ತಲೆ ಇದ್ದ ಕಾರಣ ಸೇತುವೆ ಒಂದು ಬದಿಯಲ್ಲಿ ನಿಂತಿದ್ದ ಪವನ್ ಆಕಸ್ಮಿಕವಾಗಿ ಕಾಲು ಜಾರಿ ಸೇತುವೆಯಿಂದ ನದಿಗೆ ಬಿದ್ದಿದ್ದಾನೆ. ಜೊತೆಯಲ್ಲಿದ್ದವರು ತಕ್ಷಣ ಆಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. 
    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ತಂಡ ಸುಮಾರು ೧ ಗಂಟೆ ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಪವನ್ ನದಿಗೆ ಬಿದ್ದ ಸ್ಥಳದಲ್ಲಿ ಹೆಚ್ಚಿನ ನೀರು ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಆಂಬ್ಯುಲೆನ್ಸ್ ನೆರವಿನೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 
    ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್, ಸಿಬ್ಬಂದಿಗಳಾದ ಬಾಬು ಎಸ್. ಗೌಡ, ಪಿ. ಮಂಜುನಾಥ್, ಬಾಬಲು ಮಾನಿಕ ಬಾಯ್, ಪ್ರಜ್ವಲ್, ಉದಯ್, ಹಿರೇಮಠ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿರು. 

Saturday, November 2, 2024

ದ್ವಿಚಕ್ರ ವಾಹನ ಕಳವು



    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳವು ಮಾಡಿರುವ ಘಟನೆ ನಡೆದಿದೆ. 
    ತರಿಕೆರೆ ಕರಕುಚ್ಚಿ ಗ್ರಾಮದ ನಿವಾಸಿ ಎಸ್.ಸಿ ಮನೋಜ್ ಎಂಬುವರು ಅ.೩೦ರಂದು ಬೆಳಿಗ್ಗೆ ೯ ಗಂಟೆ ಸಮಯದಲ್ಲಿ ತಮ್ಮ ಹಿರೋ ಸ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಬಸ್ ನಿಲ್ದಾಣದ ಮಳಿಗೆಯೊಂದರ ಮುಂಭಾಗ ನಿಲ್ಲಿಸಿದ್ದು, ಸಂಜೆ ೫ ಗಂಟೆ ಸಮಯದಲ್ಲಿ ನೋಡಿದಾಗ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಸುಮಾರು ೪೦ ಸಾವಿರ ರು. ಮೌಲ್ಯದ ದ್ವಿಚಕ್ರ ವಾಹನ ಕಳವು ಮಾಡಲಾಗಿದ್ದು, ಪತ್ತೆ ಮಾಡಿ ಕೊಡುವಂತೆ ದೂರು ದಾಖಲಾಗಿದೆ. 

ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು

    ಭದ್ರಾವತಿ: ದ್ವಿಚಕ್ರ ವಾಹನ ಸವಾರನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್(ಎಚ್.ಕೆ ಜಂಕ್ಷನ್) ಸಮೀಪನಡೆದಿದೆ. 
    ನಗರಸಭೆ ವ್ಯಾಪ್ತಿಯ ಹೊಸಮನೆ ನಿವಾಸಿ ಮಂಜುನಾಥ್ ಮೃತಪಟ್ಟಿದ್ದು, ಅ.೩೧ರಂದು ಬೆಳಿಗ್ಗೆ ಸುಮಾರು ೧೧.೩೦ರ ಸಮಯದಲ್ಲಿ ಬಿ.ಆರ್.ಪಿ ರಸ್ತೆಯಲ್ಲಿ ಬರುತ್ತಿರುವಾಗ ಎಚ್.ಕೆ ಜಂಕ್ಷನ್ ಸಮೀಪ ಅಪಘಾತ ಸಂಭವಿಸಿದೆ. ಈ ಸಂಬಂಧ ಇವರ ಸಹೋದರ ಎಂ.ಎಸ್ ಉಮೇಶ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಹಿನ್ನಲೆಯಲ್ಲಿ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.  . 

ವಕ್ಫ್ ಕಾಯ್ದೆ ಮುಸ್ಲಿಂ ಮತಗಳಿಕೆ, ತುಷ್ಠಿಕರಣಕ್ಕಾಗಿ ರಚಿಸಿರುವ ಕಾಯ್ದೆ : ಆರೋಪ

ಕೇಂದ್ರ ಸರ್ಕಾರ ನೂತನ ವಕ್ಫ್ ಕಾಯ್ದೆ ಜಾರಿಗೆ ತರಲು ಎಸ್. ದತ್ತಾತ್ರಿ ಆಗ್ರಹ 

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತತ್ರಿ ಮಾತನಾಡಿದರು. 
    ಭದ್ರಾವತಿ : ಪ್ರಸ್ತುತ ರಾಜ್ಯದಲ್ಲಿ ವಕ್ಫ್ ಕಾಯ್ದೆ ದುರ್ಬಳಕೆ ಹಿನ್ನಲೆಯಲ್ಲಿ ರೈತರು, ಮಠಮಾನ್ಯಗಳು, ಹಿಂದೂ ದೇವಾಲಯಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್‌ನವರು ರೂಪಿಸಿರುವ ವಕ್ಫ್  ಕಾಯ್ದೆ ಮುಸ್ಲಿಂ ತುಷ್ಠಿಕರಣಕ್ಕಾಗಿ, ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ. ಕೇಂದ್ರ ಸರ್ಕಾರ ತಕ್ಷಣ ಹೊಸ ವಕ್ಫ್ ಕಾಯ್ದೆ ಜಾರಿಗೊಳಿಸುವಂತೆ ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತತ್ರಿ ಆಗ್ರಹಿಸಿದರು. 
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಬೋರ್ಡ್ ರಾಜ್ಯ ಸರ್ಕಾರದ ಭಾಗವಾಗಿದ್ದರೂ ಸಹ ಸರ್ಕಾರದ ಹಿಡಿತದಲ್ಲಿ ಎಷ್ಟರಮಟ್ಟಿಗೆ ಇದೆ ಎನ್ನುವ ಪ್ರಶ್ನೆ ಮೂಡಿಸಿದೆ. ರಾಜ್ಯದ ಅಲ್ಪಸಂಖ್ಯಾತರ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್‌ಖಾನ್‌ರವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನೆ ಹಾಗೂ ವಕ್ಫ್ ಆದಾಲತ್‌ಗಳನ್ನು ನಡೆಸಿ ಸರ್ಕಾರದ ೧೯೭೪ರ ಗೆಜೆಟ್ ಆಗಿರೋ ಪ್ರಕಾರ ರೈತರ ಕೃಷಿ ಜಮೀನುಗಳನ್ನು, ಮಠ-ಮಂದಿರಗಳ ಆಸ್ತಿಗಳನ್ನೂ ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಸ್ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ ಇಂಡೀಕರಿಸಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ೧೯೭೪ರ ಸರ್ಕಾರದ ಗೆಜೆಟ್ ರಾಜ್ಯದಲ್ಲಿ ಉಂಟಾಗಿರುವ ಈ ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ. ೫೦ ವರ್ಷದವರೆಗೂ ಇಂಡೀಕರಣ ಮಾಡದ ಇಲಾಖೆಗೆ ಈ ತಕ್ಷಣ ಇಂಡೀಕರಿಸಿಕೊಳ್ಳುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. 
    ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ವಕ್ಸ್ ಕಾಯ್ದೆಯ ಕರಾಳತೆ ಅರಿತು ಹೊಸ ವಕ್ಫ್ ಕಾಯ್ದೆ ರಚಿಸುವ ಕ್ರಮಕ್ಕೆ ಮುಂದಾಗಿ, ಕರಡು ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದಾರೆ. ಆ ಕಾಯ್ದೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಸಂಸತ್ತಿನ ಸಮಿತಿಗೆ ಒಪ್ಪಿಸಲಾಗಿದೆ. ಬಹುತೇಕ ಮುಂದಿನ ಅಧಿವೇಶನದಲ್ಲಿ ಮಂಜೂರಾಗಬಹುದು ಎನ್ನುವ ಆತಂಕದೊಂದಿಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಖಾನ್ ಅವರು ಎಲ್ಲ ಜಿಲ್ಲೆಗಳಿಗೂ ಹೋಗಿ, ಅಧಿಕಾರಿಗಳ ಮೇಲೆ ಒತ್ತಡ ನಿರ್ಮಾಣ ಮಾಡಿ ರೈತರ ಜಮೀನುಗಳನ್ನು, ಮಠ-ಮಂದಿರಗಳನ್ನು ಕಂದಾಯ ದಾಖಲೆಗಳಲ್ಲಿ ವಕ್ಫ್ ಆಸ್ತಿಯಾಗಿ ದಾಖಲೆಯನ್ನು ಸೃಷ್ಟಿಸುವ ಹುನ್ನಾರ ಮಾಡಿದ್ದಾರೆಂದು ಆರೋಪಿಸಿದರು.
    ಪಸ್ತುತ ರೈತರು, ಮಠಗಳ ಮಠಾಧೀಶರು, ಮಂದಿರದ ಮುಖ್ಯಸ್ಥರು ಆತಂಕಗೊಂಡಿದ್ದಾರೆ. ಕಂದಾಯ ದಾಖಲೆಗಳಲ್ಲಿ ತಮ್ಮ ಮಾಲೀಕತ್ವವದ ಆಸ್ತಿಗಳು ವಕ್ಫ್ ಪಾಲಾಗಿವೆಯೇ ಎನ್ನುವುದನ್ನು ದೃಢೀಕರಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಂದು ಕಂದಾಯ ದಾಖಲೆಗಳಲ್ಲಿ ರೈತರ ಹೆಸರುಗಳನ್ನು ತೆಗೆದು ಹಾಕದೆ ೧೯೭೪ರ ಗೆಜೆಟ್ ಪ್ರಕಾರ ಇದೀಗ ೫೦ ವರ್ಷಗಳ ನಂತರ ಇಂಡೀಕರಿಸಲು ಸೂಚನೆ ನೀಡಿದ್ದರ ಪರಿಣಾಮ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಎಂದರು. 
    ಕೆಲವು ಜನರ ಆಸ್ತಿಗಳು ೧೯೭೪ರ ವಕ್ಫ್ ಗೆಜೆಟ್ ಪಟ್ಟಿಯಲ್ಲಿವೆ. ಆದರೆ ಯಾವುದೇ ಕಂದಾಯ ದಾಖಲೆಗಳಲ್ಲಿ ನಮೂದಾಗಿಲ್ಲ, ಕೆಲವು ಜನರ ಆಸ್ತಿ ೧೯೭೪ ರ ವಕ್ಸ್ ಗೆಜೆಟ್ ಪಟ್ಟಿಯಲ್ಲಿವೆ, ಅವುಗಳನ್ನು ಆರ್‌ಟಿಸಿ ಕಲಂ ೦೯ರಲ್ಲಿ ವಕ್ಫ್ ಹೆಸರು ನಮೂದಿಸಲಾಗಿದೆ. ಕೆಲವೊಬ್ಬರ ಆಸ್ತಿ ೧೯೭೪ರ ವಕ್ಫ್ ಪಟ್ಟಿಯಲ್ಲಿಯೂ ಇದೆ. ಆರ್‌ಟಿಸಿ ಕಲಂ ೧೧ರಲ್ಲಿ ವಕ್ಫ್ ಹೆಸರು ನಮೂದಿಸಲಾಗಿದೆ. ಇನ್ನೊಂದಷ್ಟು ಜನ ರೈತರಿಗೆ ೧೯೭೪ರ ವಕ್ಸ್ ಪಟ್ಟಿಯಲ್ಲಿದೆ ಎಂದು ತಿಳಿಸಿ ನೋಟಿಸ್ ನೀಡಲಾಗಿದೆ. ಹೀಗೆ ರೈತರು ವಿಭಿನ್ನ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ; ಅಷ್ಟೇ ಅಲ್ಲದೆ ಆಸ್ತಿ ಕಳೆದುಕೊಳ್ಳುವ ಭೀತಿ ನಿರ್ಮಾಣವಾಗಿದೆ ಎಂದರು. 
    ಇದೀಗ ರಾಜ್ಯ ಸರ್ಕಾರ ನೋಟಿಸ್ ಹಿಂಪಡೆಯುವುದಾಗಿ ಹೇಳಿದರೂ ಕೂಡ ಆರ್‌ಟಿಸಿಯ ಕಲಂ ೧೧ ರಲ್ಲಿ ವಕ್ಫ್ ಹೆಸರು ದಾಖಲಾಗಿರುವುದನ್ನು ತೆಗೆಯುವುದಾಗಿ ಹೇಳಿದರು ಕೂಡ ಕೃಷಿಯೇತರ ಭೂಮಿಯ (ಎನ್‌ಎ) ರೈತರ ಸಮಸ್ಯೆಯು ಪರಿಹಾರವಾಗುವುದಿಲ್ಲ. ವಕ್ಫ್ ಬೋರ್ಡ್ ಬರಿ ಅಲ್ಪಸಂಖ್ಯಾತರ ನಿರ್ದಿಷ್ಟ ಕೋಮಿನವರಿಗೆ ಸೇರಿದ ಸಂಸ್ಥೆಯಾಗಿರುವುದರಿಂದ, ಬೇರೆ ಬೇರೆ ಸರ್ಕಾರಗಳ ಸಂದರ್ಭದಲ್ಲಿ ಕೂಡ ಚಿತಾವಣೆ ಮಾಡಿರುವ ಸಾಧ್ಯತೆ ಇದೆ. ಬಿಜೆಪಿ ಸೇರಿದಂತೆ ಯಾವುದೇ ಸರ್ಕಾರದ ಸಂದರ್ಭದಲ್ಲಿ ಚಿತಾವಣೆ ನಡೆದಿದ್ದರೂ, ರೈತರ ಆಸ್ತಿ ಮುಟ್ಟುವ ಪ್ರಯತ್ನ ನಡೆದಿದ್ದರೂ ಅದನ್ನು ನಾವು ಖಂಡಿಸುತ್ತೇವೆ. ಸರಿ ಮಾಡುವ ಗುರುತರ ಜವಾಬ್ದಾರಿ ಈಗ ಆಡಳಿತದಲ್ಲಿರುವ ಸರ್ಕಾರಕ್ಕೆ ಇರುತ್ತದೆ ಎಂದರು. 
    ಒಂದು ವೇಳೆ ಕೇಂದ್ರದ ನೂತನ ವಕ್ಫ್ ಕಾಯ್ದೆ ಜಾರಿಗೆ ಬಂದರೆ ಅದು ಪೂರ್ವಾನ್ವಯ ಜಾರಿ ಆಗುವುದಿಲ್ಲ, ಅದು ಭವಿಷ್ಯಾನ್ವಯವಾಗಿ ಜಾರಿ ಆಗುತ್ತದೆ. ಹೀಗಾಗಿ ಆ ಕಾಯ್ದೆ ಬರುವುದರ ಒಳಗಾಗಿ ಹಿಂದೂಗಳ, ರೈತರ ಆಸ್ತಿಗಳನ್ನು ವಕ್ಫ್ ಪರವಾದ ದಾಖಲೆ ಸೃಷ್ಟಿಸುವ ಅಪರಾಧಿಕ ಕೃತ್ಯ ಎಸಗಲಾಗಿದೆ. ಇದೀಗ ರೈತರಿಗೆ ಕೊಟ್ಟಿರುವ ನೋಟಿಸ್‌ಗಳು, ಇಂಡೀಕರಣ ಮಾಡಿರುವ ೧೧ನೇ ಕಾಲಂ, ಇಂಡೀಕರಣ ಮಾಡಿ ತೆಗೆದು ಹಾಕಿರುವ ದಾಖಲೆಗಳು, ೯ನೇ ಕಾಲಂನಲ್ಲಿ ಸೇರಿಸಿರುವ ದಾಖಲೆಗಳು ಈ ಎಲ್ಲ ಕಂದಾಯ ದಾಖಲೆಗಳಲ್ಲಿ ಆಗಿರುವ ವಹಿವಾಟುಗಳು ಹೊಸ ಕಾಯ್ದೆ ಬರುವ ಮೊದಲು ಸೃಷ್ಟಿಸಿರುವ ವಕ್ಫ್ ಪರ ಸಾಕ್ಷಿ ದಾಖಲೆಗಳಾಗುತ್ತವೆ. ರೈತರಿಗೆ, ಹಿಂದೂ ಧರ್ಮದ ಮಠ-ಮಾನ್ಯಗಳಿಗೆ, ಸರ್ಕಾರಿ ಆಸ್ತಿಗಳಿಗೆ ಕಂಟಕಪ್ರಾಯವಾಗಿದೆ. ಕಾನೂನಾತ್ಮಕ ಹೋರಾಟಗಳಲ್ಲಿ ಮಾರಣಾಂತಿಕ ಸಾಕ್ಷಿಗಳಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು. 
    ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕಳ್ಳಾಟ ಮಾಡಬಾರದು. ರೈತರಿಗೆ, ಹಿಂದುಗಳಿಗೆ ದ್ರೋಹ ಬಗೆಯಬಾರದು. ಯಾವ ರೈತರು ಕೃಷಿ ಜಮೀನನ್ನು ಸಾಗುವಳಿ ಮಾಡುತ್ತಿದ್ದಾರೋ, ಯಾವ ಮಠ- ಮಂದಿರಗಳಲ್ಲಿ ಹತ್ತು ಹಲವು ವರ್ಷಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿವೆಯೋ, ಅವೆಲ್ಲವುಗಳನ್ನು ವಕ್ಫ್ ಪಾಲಾಗಲು ಬಿಜೆಪಿ ಬಿಜೆಪಿ ಬಿಡುವುದಿಲ್ಲ. ಆಸ್ತಿ ಮಾಲೀಕರಿಗೆ ಯಾವ ಮಾಹಿತಿಯೂ ಕೊಡದೆ ಗೊತ್ತೇ ಇರದಂತೆ ಸೃಷ್ಟಿ ಮಾಡಿಕೊಂಡಿರುವ ವಕ್ಫ್ ಗೆಜೆಟ್ ಅಧಿಸೂಚನೆಗಳನ್ನು ರದ್ದುಗೊಳಿಸುವ ಕ್ರಮ ರಾಜ್ಯ ಸರ್ಕಾರ ತಕ್ಷಣ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಎಂ.ಮಂಜುನಾಥ್, ಎಚ್. ತೀರ್ಥಯ್ಯ, ಬಿ.ಕೆ ಶ್ರೀನಾಥ್, ಅಣ್ಣಪ್ಪ, ಚನ್ನೆಶ್, ರಾಜಶೇಖರ್ ಉಪ್ಪಾರ, ಅವಿನಾಶ್, ಪಿ.ಜಿ ರಾಮಲಿಂಗಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Friday, November 1, 2024

ಯಲ್ಲಮ್ಮ ನಿಧನ

ಯಲ್ಲಮ್ಮ
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ನಂದಿನಿ ಹೋಟೆಲ್ ಮಾಲೀಕ ಮಹದೇವರವರ ಮಾತೃಶ್ರೀ ಯಲ್ಲಮ್ಮ (೮೫) ಶುಕ್ರವಾರ ಸಂಜೆ ನಿಧನ ಹೊಂದಿದರು. 
    ಪತಿ ಎಂ. ವಜ್ರಪ್ಪ, ಓವ ಪುತ್ರಿ, ಇಬ್ಬರು ಪುತ್ರರು ಇದ್ದರು. ಇವರ ಕ್ರಿಯೆ ನ.೨ರಂದು ಬೆಳಿಗ್ಗೆ ೧೧ ಗಂಟೆಗೆ ಹಗರಿಬೊಮ್ಮನಹಳ್ಳಿ, ಗದ್ದಿಕೇರಿ, ಹನುಮಗೊಂಡನಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ಯಲ್ಲಮ್ಮ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಉಕ್ಕಿನ ಎಲ್ಲೆಡೆ ನರಕ ಚತುರ್ದಶಿ, ಲಕ್ಷ್ಮೀಪೂಜೆ ಸಂಭ್ರಮಾಚರಣೆ

ಭದ್ರಾವತಿ ಮನೆಯೊಂದರಲ್ಲಿ ಲಕ್ಷ್ಮೀಪೂಜೆ ಸಂಭ್ರಮದಲ್ಲಿ ತೊಡಗಿರುವುದು. 
    ಭದ್ರಾವತಿ : ಕ್ಷೇತ್ರದಾದ್ಯಂತ ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ ಹಬ್ಬ ವಿಜೃಂಭಣೆಯಿಂದ ಜರುಗುತ್ತಿದ್ದು, ಈ ಬಾರಿ ವಿಶೇಷ ಎಂದರೆ ಲಕ್ಷ್ಮೀ ಪೂಜೆ ಮತ್ತು ನರಕ ಚತುರ್ದಶಿ ಎರಡು ಒಂದೇ ದಿನ ಬಂದ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ರಂಗೇರಿದೆ. 
    ಮನೆಗಳಲ್ಲಿ ಸಂಪ್ರದಾಯದಂತೆ ಲಕ್ಷ್ಮೀ ಆರಾಧನೆ ಸಾಮಾನ್ಯವಾಗಿ ಕಂಡಬಂದರೆ, ದೊಡ್ಡ ದೊಡ್ಡ ಮಳಿಗೆಗಳಲ್ಲಿ, ಮಾಲ್‌ಗಳಲ್ಲಿ, ಪೆಟ್ರೋಲ್ ಬಂಕ್, ಚಿತ್ರಮಂದಿರ, ಹೋಟೆಲ್ ಹಾಗು ಸಣ್ಣಪುಟ್ಟ ಅಂಗಡಿಮುಂಗಟ್ಟುಗಳಲ್ಲಿ ಈ ಬಾರಿ ಲಕ್ಷ್ಮೀ ಆರಾಧನೆ ವಿಜೃಂಭಣೆಯಿಂದ ಜರುಗಿತು. ಬಹುತೇಕ ಮಂದಿ ಗುರುವಾರ ಲಕ್ಷ್ಮೀ ಆರಾಧನೆ ನೆರವೇರಿಸಿದರೇ, ಕೆಲವು ಶುಕ್ರವಾರ ಆರಾಧಿಸಿದರು. 
    ಎಲ್ಲೆಡೆ ವಾಣಿಜ್ಯ ರಸ್ತೆಗಳಲ್ಲಿ ವಿದ್ಯುತ್ ದೀಪಾಂಲಕಾರ ಕಂಗೊಳಿಸಿದ್ದು, ಈ ನಡುವೆ ಸರ್ಕಾರ ಪಟಾಕಿ ಮಾರಾಟ ಹಾಗು ಬಳಕೆಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿದ್ದರು ಸಹ ಪಟಾಕಿ ಸದ್ದು ಈ ಬಾರಿ ಸಹ ಮಾಮೂಲಿಯಾಗಿ ಕಂಡು ಬಂದಿತು. 
    ಮನೆಗಳಲ್ಲಿ ಬಣ್ಣ ಬಣ್ಣದ ಹೊಸ ಬಟ್ಟೆ ಧರಿಸಿ ಕುಟುಂಬಸ್ಥರು, ನೆರೆಹೊರೆಯವರೊಂದಿಗೆ ಸಂಭ್ರಮಿಸುವ ಜೊತೆಗೆ ಹಬ್ಬದ ಸಾಂಪ್ರದಾಯಕ  ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ನಡೆದಿರುವಂತೆ ಕಂಡು ಬಂದಿತು. 
ಬೆಲೆ ಏರಿಕೆಗೂ ಕಡಿಮೆಯಾಗದ ಸಂಭ್ರಮ : 
    ಹೂ, ಹಣ್ಣು, ತರಕಾರಿ, ದಿನಸಿ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡೆವೆಯೂ ಹಬ್ಬದ ಸಂಭ್ರಮ ಕಂಡು ಬಂದಿತು. ವ್ಯಾಪಾರಸ್ಥರು ಕೇಳಿದಷ್ಟು ಹಣ ನೀಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಜನಸಂದಣಿ ಕಂಡು ಬಂದಿತು.