Monday, November 25, 2024

ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಪ್ರಕಾಶ್ ವೈ. ನಾಯ್ಕ್

ಭದ್ರಾವತಿಯಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಕುರಿತು ಯೋಜನಾಧಿಕಾರಿ ಪ್ರಕಾಶ್ ವೈ. ನಾಯ್ಕ್ ಮಾಹಿತಿ ನೀಡಿದರು.  
    ಭದ್ರಾವತಿ: ೧೯೮೨ರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಸಾಮರ್ಥ್ಯ ವರ್ಧನೆಗಾಗಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಮಾರು ೪೦ ವರ್ಷಗಳ ಸುಧೀರ್ಘ ಪ್ರಯಾಣದಲ್ಲಿ ಸ್ವಾವಲಂಬನೆ, ಆರ್ಥಿಕ ಸಾಮರ್ಥ್ಯ, ಕೌಶಲ್ಯಭಿವೃದ್ಧಿಯನ್ನು ಸಬಲೀಕರಣದ ವ್ಯಾಖ್ಯೆಯಲ್ಲಿ ಸೇರಿಸಿಕೊಂಡಿದೆ. ಪ್ರಸ್ತುತ ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ತಾಲೂಕಿನ ಯೋಜನೆ-೧ರ ಯೋಜನಾಧಿಕಾರಿ  ಪ್ರಕಾಶ್ ವೈ. ನಾಯ್ಕ್ ಹೇಳಿದರು. 
    ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ವೈಖರಿ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ ೨೦೦೭-೦೮ ರಿಂದ ಸುಮಾರು ೧೭ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮಗಳಲ್ಲಿ ಸುಸ್ಥಿರ ಪ್ರಗತಿಯ ಅನೇಕ ಮಾದರಿಗಳನ್ನು ಪ್ರಾರಂಭಿಸಿದೆ. ತನ್ನ ಪಾಲುದಾರ ಕುಟುಂಬಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಸರ್ಕಾರದ ಪ್ರತಿನಿಧಿಯಾಗಿ ಬಡವರು ಯಾವುದೇ ತೊಂದರೆ ಇಲ್ಲದೆ ಸೌಲಭ್ಯಗಳನ್ನು ಪಡೆಯಲು ನೆರವಿಗನಾಗಿ ಯೋಜನೆಯು ಯಶಸ್ವಿಯಾಗಿದೆ ಎಂದರು. 
    ಸಾಮೂಹಿಕವಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಲು ಗ್ರಾಮಗಳಲ್ಲಿ ಸತ್ಯನಾರಾಯಣ ಪೂಜೆ ಹಾಗೂ ವರಮಹಲಕ್ಷ್ಮಿ ವ್ರತವನ್ನು ಆಯೋಜನೆ ಮಾಡಿ ಜನರಲ್ಲಿ ಧಾರ್ಮಿಕ ಸಂಸ್ಕೃತಿಯ ಮತ್ತು ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ೫೧ ಜನ ಸೇವಾಪ್ರತಿನಿಧಿಗಳು, ೩೫ ಜನ ಸಿ.ಎಸ್.ಸಿ ಸೇವಾದಾರರು, ೩೫ ಜನ ಸುವಿಧಾ ಸಹಾಯಕರು, ೨ ಜನ ಶುದ್ಧಗಂಗಾ ಪ್ರೇರೇಕರು ೨೪ ಜನ ಖಾಯಂ ಸಿಬ್ಬಂದಿಗಳು ತಾಲೂಕು ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. 
    ನ.೨೬ರಿಂದ ಲಕ್ಷ ದೀಪೋತ್ಸವ : 
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ಈ ಬಾರಿ ನ.೨೬ ರಿಂದ ೩೦ರವರೆಗೆ ಲಕ್ಷದೀಪೋತ್ಸವ ಜರುಗಲಿದ್ದು,  ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನ.೨೯ ಮತ್ತು ೩೦ ರಂದು ೯೨ನೇ ವರ್ಷದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು, ವಸ್ತು ಪ್ರದರ್ಶನ, ಲಲಿತ ಕಲಾಗೋಷ್ಠಿ ಹಾಗು ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಿದರು. 
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ, ಯೋಜನೆಯ ಕಾರ್ಯ ವೈಖರಿಗಳನ್ನು ಪ್ರಶಂಸಿಸಿದರು. ಯೋಜನೆ-೨ರ ಯೋಜನಾಧಿಕಾರಿ ಅಜಯ್‌ಕುಮಾರ್ ಉಪಸ್ಥಿತರಿದ್ದರು. 

Sunday, November 24, 2024

ಸರ್ಕಾರದಿಂದ ಮಂಜೂರಾದ ಜಮೀನು ಮೂಲ ವಾರಸುದಾರರಿಗೆ ಬಿಡಿಸಿಕೊಡಲು ಆಗ್ರಹಿಸಿ ಪ್ರತಿಭಟನೆ

ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಭದ್ರಾವತಿ ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ: ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 
    ಹಳ್ಳಿಕೆರೆ ಗ್ರಾಮದ ಸ.ನಂ ೧೪/೬ ರಲ್ಲಿ  ಸೋಮ್ಲಾನಾಯ್ಕ ಬಿನ್ ಭಜನಾನಾಯ್ಕ ರವರಿಗೆ (ಆರ್.ಆರ್ ನಂ.೧೫೨ ರಂತೆ ಆದೇಶ ನಂ.ಜಿ.ಡಿ ೩೫/೫೨-೫೩ ದಿನಾಂಕ: ೨೮-೧೧-೧೯೫೬ರ ರೀತ್ಯಾ ಸಾಗುವಳಿ ಚೀಟಿ ಸಂಖ್ಯೆ ೬೫/೫೬-೫೭) ೪ ಎಕರೆ ಜಮೀನು ೧೦ ವರ್ಷ ಪರಭಾರೆ ಮಾಡಬಾರದೆಂಬ ನಿಬಂಧನೆಗಳಿಗೆ ಒಳಪಟ್ಟು ದರಖಾಸ್ತಿನಡಿ ಮಂಜೂರಾಗಿತ್ತು. 
    ಸೋಮ್ಲಾನಾಯ್ಕ ಅವರಿಗೆ ಮಂಜೂರಾದ ಈ ಜಮೀನನ್ನು ಇತರೆ ವ್ಯಕ್ತಿಗಳು ಖರೀದಿಸಿದ್ದು, ಪಿಟಿಸಿಎಲ್ ಕಾಯ್ದೆಯಡಿ ಸರ್ಕಾರದ ಅನುಮತಿ ಇಲ್ಲದೆ ಜಮೀನು ಖರೀದಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಜಮೀನಿನ ಸಂಬಂಧ ಉಪ ವಿಭಾಗಾಧಿಕಾರಿಗಳ ಪ್ರಾಧಿಕಾರದಲ್ಲಿ ವಿಚಾರಣೆ ನಡೆದು ಪಿ.ಟಿ.ಸಿ.ಎಲ್.ಸಿ ಆರ್.೦೬/೮೧-೮೨ ರ ದಿನಾಂಕ: ೨೪-೦೧-೧೯೮೬ ರಂತೆ ಆದೇಶವಾಗಿದ್ದು, ಈ ಆದೇಶದಂತೆ ಅಂದಿನಿಂದ ಇಂದಿನವರೆಗೂ ವಾರಸುದಾರರಿಗೆ ಜಮೀನಿನ ಸ್ವಾಧೀನತೆಯನ್ನು ಬಿಡಿಸಿಕೊಟ್ಟಿರುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. 
    ಈ ಸಂಬಂಧ ಉಪ ವಿಭಾಗಾಧಿಕಾರಿಗಳಿಗೆ ಜಮೀನು ಬಿಡಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಆದರೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ತಕ್ಷಣ ಜಮೀನು ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿದರು. 
    ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಸೇರಿದಂತೆ ದಲಿತ ಮುಖಂಡರು, ಜಮೀನಿನ ಮೂಲ ವಾರಸುದಾರ ಕುಟುಂಬದವರು, ಸ್ಥಳೀಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ನ.೨೫ರಂದು ರಕ್ತದಾನ-ರಕ್ತ ಗುಂಪು ತಪಾಸಣೆ ಶಿಬಿರ



    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕಡದಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಮತ್ತು ಶಿವಮೊಗ್ಗ ರೋಟರಿ ರಕ್ತ ನಿಧಿ ಸಹಯೋಗದೊಂದಿಗೆ ದಿವಂಗತ ಡಾ. ಪಿ. ಪ್ರವೀಣ್ ಮತ್ತು ದಿವಂಗತ ಆರ್. ನಾರಾಯಣಸ್ವಾಮಿ ನಾಯ್ಡು ಸ್ಮರಣಾರ್ಥವಾಗಿ ನ.೨೫ರಂದು ರಕ್ತದಾನ ಹಾಗು ರಕ್ತ ಗುಂಪು ತಪಾಸಣೆ ಶಿಬಿರ ಆಯೋಜಿಸಲಾಗಿದೆ. 
    ಐಟಿಐ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗು ರಕ್ತ ಗುಂಪು ತಪಾಸಣೆ ಶಿಬಿರ ಬೆಳಿಗ್ಗೆ ೮.೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ನಡೆಯಲಿದ್ದು, ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶಿಬಿರ ಉದ್ಘಾಟಿಸಲಿದ್ದಾರೆ. 
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಐಟಿಐ ಆಡಳಿತಾಧಿಕಾರಿ ಎಸ್.ಎಲ್ ರಂಗನಾಥ್, ದಾನಿಗಳಾದ ಇಂಜಿನಿಯರ್ ಟಿ. ಪುಷ್ಪರಾಜ್ ಮತ್ತು ಆಲೆಮನೆ ಮಾಲೀಕ ಎನ್. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಐಟಿಐ ಪ್ರಾಚಾರ್ಯ ಕಾಳಿದಾಸ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಶಿಬಿರ ಯಶಸ್ವಿಗೊಳಿಸಲು ಕೋರಲಾಗಿದೆ. 

ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರದ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಮುಂಭಾಗದ ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಜಯಶ್ರೀ ಕಲ್ಯಾಣ ಮಂದಿರ ಮುಂಭಾಗದ ಶ್ರೀ ರವೀಂದ್ರನಾಥ ಠಾಗೂರ್ ಆಟೋ ನಿಲ್ದಾಣದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 
    ಬೆಳಿಗ್ಗೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಬಾರಿ ವಿಶೇಷವಾಗಿ ಜನ್ನಾಪುರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ನಗರಸಭೆ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಅನ್ನಸಂತರ್ಪಣೆ ನೆರವೇರಿತು. 
    ಪ್ರಮುಖರಾದ ರಮೇಶ್ ನಾಯ್ಕ, ಪರಮೇಶ್, ಶಿವು, ಕಂಠ, ಸತೀಶ್, ಸೋಮಣ್ಣ, ರಾಜು, ವೆಂಕಟೇಶ್, ಎ.ಎನ್ ಬಸವರಾಜ್, ಪರಶುರಾಮ್, ವಿನೋದ್, ಬಾಬು, ಉದಯ್, ಸದಾನಂದ ಮತ್ತು ಮೋಹನ್ ಕುಮಾರ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು. 

Saturday, November 23, 2024

ಅಂತರಗಂಗೆ ಕ್ಯಾಂಪ್‌ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ : ದಾಳಿ

ಭದ್ರಾವತಿ: ತಾಲೂಕಿನ ಅಂತರಗಂಗೆ ಕ್ಯಾಂಪ್ ಚಾನಲ್ ಬಳಿ ಗುಡ್ಡದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಲಾರಿಗೆ ಜೆಸಿಬಿ ಮೂಲಕ ಕಲ್ಲು ತುಂಬಿಕೊಂಡು ಹೋಗುತ್ತಿರುವುದು. 
    ಭದ್ರಾವತಿ: ತಾಲೂಕಿನ ಅಂತರಗಂಗೆ ಕ್ಯಾಂಪ್ ಚಾನಲ್ ಬಳಿ ಗುಡ್ಡದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಶನಿವಾರ ರಾತ್ರಿ ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿರುವ ಘಟನೆ ನಡೆದಿದೆ. 
    ಚಾನಲ್ ಬಳಿ ಜಮೀನಿನಲ್ಲಿರುವ ಗುಡ್ಡದಲ್ಲಿ ಜೆಸಿಬಿ ಹಾಗು ಟ್ರ್ಯಾಕ್ಟರ್ ಬಳಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಲಾರಿ ಮೂಲಕ ಬೇರೆಡೆಗೆ ಸಾಗಾಟ ಮಾಡಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಕೆ.ಆರ್ ನಾಗರಾಜು, ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ ಹಾಗು ಭೂ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ನಡೆಸಿದೆ.  ದಾಳಿ ವೇಳೆ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

ವಿಜೃಂಭಣೆಯಿಂದ ಜರುಗಿದ ಶ್ರೀ ಸತ್ಯ ಸಾಯಿ ಬಾಬಾರ ೯೯ನೇ ಜನ್ಮದಿನೋತ್ಸವ

ಭದ್ರಾವತಿ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ೮ ದಿನಗಳ ಕಾಲ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೯ನೇ ಜನ್ಮದಿನೋತ್ಸವ ಸಾಮಾಜಿಕ ಸೇವಾ ಕಾರ್ಯಗಳು ಹಾಗು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಶನಿವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಡಾ. ಕೊಟೇಶ್ ಶರ್ಮ ಶಿಬಿರ ಉದ್ಘಾಟಿಸುವ ಜೊತೆಗೆ ರಕ್ತದಾನ ಮಾಡಿದರು. 
    ಭದ್ರಾವತಿ: ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ೮ ದಿನಗಳ ಕಾಲ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೯ನೇ ಜನ್ಮದಿನೋತ್ಸವ ಸಾಮಾಜಿಕ ಸೇವಾ ಕಾರ್ಯಗಳು ಹಾಗು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. 
    ಶನಿವಾರ ಬೆಳಿಗ್ಗೆ ಓಂಕಾರ, ಜ್ಯೋತಿರ್ಧ್ಯಾನ, ಸುಪ್ರಭಾತ, ನಗರಸಂಕೀರ್ತನೆ, ಪ್ರಶಾಂತಿ ಧ್ವಜಾರೋಹಣ, ಶಿವಮೊಗ್ಗ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಹಯೋಗದೊಂದಿಗೆ ಉಚಿತ ರಕ್ತದಾನ ಶಿಬಿರ, ಸಾಮೂಹಿಕ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಶ್ರೀ ಸತ್ಯ ಸಾಯಿ ಬಾಬಾರವರ ಪಲ್ಲಕ್ಕಿ ಉತ್ಸವ, ಶ್ರೀ ಸತ್ಯ ಸಾಯಿ ಸಹಸ್ರನಾಮಾರ್ಚನೆ, ಮಧ್ಯಾಹ್ನ ಮಹಾಮಂಗಳಾರತಿ, ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ ಹಾಗು ಶಾಲಾ ಮಕ್ಕಳಿಗೆ, ಪೋಷಕರಿಗೆ ಮತ್ತು ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ, ಸಂಜೆ ವೇದ ಪಠಣ ಹಾಗು ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ಪ್ರಶಾಂತಿ ದ್ವಜಾರೋಹಣ ಹಿರಿಯ ಸಾಯಿ ಭಕ್ತರಾದ ಶಿವಾಜಿರಾವ್ ನೆರವೇರಿಸಿದರು. ಉಚಿತ ರಕ್ತದಾನ ಶಿಬಿರ ಡಾ. ಕೊಟ್ರೇಶ್ ಶರ್ಮ ಉದ್ಘಾಟಿಸಿದರು.  ಶಿವಮೊಗ್ಗ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಂಡು ಭಕ್ತರನ್ನು ಆಶೀರ್ವದಿಸಿದರು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಶ್ಯಾಮರಾಯ ಆಚಾರ್, ಮೃತ್ಯುಂಜಯ ಕಾನಿಟ್ಕರ್ ಸೇರಿದಂತೆ ಬೋಧಕ ಹಾಗು ಬೋಧಕೇತರ  ವರ್ಗದವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ ಶಾಖೆಯ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಭಕ್ತರು, ಸೇವಾಕರ್ತರು, ಶಾಲಾ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು. 
 

ಭದ್ರಾವತಿ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ೮ ದಿನಗಳ ಕಾಲ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೯ನೇ ಜನ್ಮದಿನೋತ್ಸವ ಸಾಮಾಜಿಕ ಸೇವಾ ಕಾರ್ಯಗಳು ಹಾಗು ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಶನಿವಾರ ಮಧ್ಯಾಹ್ನ ಸಾವಿರಾರು ಮಂದಿಗೆ ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. 

೩ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು : ವಿಜಯೋತ್ಸವ

ರಾಜ್ಯದ ೩ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಶನಿವಾರ ಭದ್ರಾವತಿಯಲ್ಲಿ ನಗರ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯೋತ್ಸವ ನಡೆಸಲಾಯಿತು. 
    ಭದ್ರಾವತಿ: ರಾಜ್ಯದ ೩ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಶನಿವಾರ ನಗರ ಹಾಗು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯೋತ್ಸವ ನಡೆಸಲಾಯಿತು. 
    ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಅಭಿಮಾನಿಗಳು ನಗರದ ರಂಗಪ್ಪ ವೃತ್ತದಲ್ಲಿ ವಿಜಯೋತ್ಸವ ನಡೆಸಿದರು. ಪಕ್ಷದ ಪ್ರಮುಖರು ಮಾತನಾಡಿ, ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿ ಕ್ಷೇತ್ರದಿಂದ ಯಾಸಿರ್ ಅಹಮದ್ ಪಠಾಣ್ ಮತ್ತು ಸಂಡೂರ್ ಕ್ಷೇತ್ರದಿಂದ ಅನ್ನಪೂರ್ಣ ತುಕಾರಾಂರವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ನಡೆಸಿದ ಅಪಪ್ರಚಾರಕ್ಕೆ ಕಿವಿಗೊಡದೆ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದರು.  
    ರಾಜ್ಯದ ೩ ವಿಧಾನಸಭಾ ಕ್ಷೇತ್ರಗಳ ಗೆಲುವಿನ ನಡುವೆ ಜಾರ್ಖಂಡ್ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗು ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪಕ್ಷ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಂಘಟಿಗೊಳ್ಳುವ ಆಶಾಭಾವನೆ ಪಕ್ಷದ ಕಾರ್ಯಕರ್ತರಲ್ಲಿ ಮೂಡಿಸಿದೆ ಎಂದರು. 
    ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಜಯಪ್ಪ ಹೆಬ್ಬಳಗೆರೆ, ಪ್ರಮುಖರಾದ ಚನ್ನಪ್ಪ, ಬಿ. ಗಂಗಾಧರ್, ಕೆ. ಮಂಜುನಾಥ್, ಅಮೀರ್ ಜಾನ್,  ಜಹೀರ್‌ಜಾನ್, ಮುಸ್ವೀರ್ ಬಾಷಾ, ಕುಮಾರ್(ಮಾಸ್ಟರ್), ಬಷೀರ್ ಅಹಮದ್, ಜುಂಜ್ಯಾನಾಯ್ಕ, ಎಂ. ಅನಸೂಯ, ಕೆ. ರುಕ್ಮಿಣಿ, ಅರುಣ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.  
    ಗೆಲುವು ಸಾಧಿಸಿದ ೩ ಅಭ್ಯರ್ಥಿಗಳಿಗೆ ಶಾಸಕರಿಂದ ಅಭಿನಂದನೆ : 
    ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್, ಶಿಗ್ಗಾಂವಿ ಕ್ಷೇತ್ರದಿಂದ ಯಾಸಿರ್ ಅಹಮದ್ ಪಠಾಣ್ ಮತ್ತು ಸಂಡೂರ್ ಕ್ಷೇತ್ರದಿಂದ ಅನ್ನಪೂರ್ಣ ತುಕಾರಾಂರವರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬಂದಿದ್ದು, ಗೆಲುವು ಸಾಧಿಸಿರುವ ೩ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದ್ದಾರೆ. 
    ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಅಭಿಮಾನಿಗಳು ಮತ್ತು ಮತ ನೀಡಿದ ೩ ಕ್ಷೇತ್ರಗಳ ಮತದಾರರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.