ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಚಂದ್ರಮ ಪ್ರಾಂತೀಯ ಸಮ್ಮೇಳನ ಪ್ರಾಂತೀಯ ಪ್ರಥಮ ಮಹಿಳೆ ಚಂದು ಮಹೇಶ್ ಉದ್ಘಾಟಿಸಿದರು.
ಭದ್ರಾವತಿ: ಸೇವೆಯನ್ನು ಗುರಿಯಾಗಿಸಿಕೊಂಡಿರುವ ಲಯನ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಡಾ. ಶರತ್ ಅನಂತಮೂರ್ತಿ ಹೇಳಿದರು.
ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಚಂದ್ರಮ ಪ್ರಾಂತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ವಿದ್ಯೆ ಜೊತೆಗೆ ಸೇವಾ ಮನೋಭಾವ ಸಹ ಬಹಳ ಮುಖ್ಯವಾಗಿದೆ. ಇದನ್ನುನಾವೆಲ್ಲರೂ ಅರ್ಥ ಮಾಡಿಕೊಂಡಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದಕಲು ಸಾಧ್ಯ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಮಾದರಿಯಾಗಿದೆ ಎಂದರು.
ಪ್ರಾಂತೀಯ ಅಧ್ಯಕ್ಷ, ನ್ಯಾಯವಾದಿ ಬಿ.ಎಸ್ ಮಹೇಶ್ ಕುಮಾರ್ ಮಾತನಾಡಿ, ಉಳ್ಳವರು ತಮ್ಮ ಅಲ್ಪ ಪ್ರಮಾಣದ ನೆರವು ಇತರರೊಂದಿಗೆ ಸೇರಿಕೊಂಡು ಹಂಚಿದಾಗ ಅದು ಬೃಹತ್ ಪ್ರಮಾಣದ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಸುತ್ತದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ. ಸೇವಾ ಮನೋಭಾವನೆ ಜೊತೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋದಾಗ ಮಾತ್ರ ಏನಾದರೂ ಕಾರ್ಯಗಳನ್ನು ಕೈಗೊಳ್ಳಬಹುದು. ಲಯನ್ಸ್ ಕ್ಲಬ್ನಲ್ಲಿ ಪ್ರತಿಯೊಬ್ಬರು ಸಹ ಸಹಕಾರ ನೀಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಸಹ ಕೈಗೊಳ್ಳಲು ಅಸಾಧ್ಯವಾಗಿರುವ ಕಾರ್ಯಗಳನ್ನು ಯಶಸ್ವಿಯಿಂದ ಕೈಗೊಳ್ಳಲಾಗುತ್ತಿದೆ ಎಂದರು.
ಸಮ್ಮೇಳನ ಉದ್ದೇಶ ನಾವು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ತಿಳಿದಾಗ ಅಸಹಾಯಕರು, ಅಶಕ್ತರು ನಮ್ಮಿಂದ ನೆರವನ್ನು ಬಯಸುತ್ತಾರೆ. ಅಲ್ಲದೆ ಲಯನ್ಸ್ ಕ್ಲಬ್ ಒಂದು ರೀತಿ ಸಂವಿಧಾನಾತ್ಮಕ ವ್ಯವಸ್ಥೆಯಂತೆ ತನ್ನದೇ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಇಲ್ಲೂ ಸಹ ರಾಜ್ಯಪಾಲರು, ನಂತರ ಪ್ರಾಂತೀಯ ಅಧ್ಯಕ್ಷರು, ವಲಯ ಅಧ್ಯಕ್ಷರು, ಈ ರೀತಿಯಲ್ಲಿ ಜವಾಬ್ದಾರಿಗಳನ್ನು ನೀಡಿದೆ. ನಮ್ಮ ನಮ್ಮ ಜವಾಬ್ದಾರಿಗಳನ್ನು ಪರಾಮರ್ಶಿಸಿಕೊಳ್ಳುವ ಜೊತೆಗೆ ಪರಸ್ಪರ ನಡುವೆ ಬಾಂಧವ್ಯ ವೃದ್ಧಿಸಿಕೊಳ್ಳುವ ಉದ್ದೇಶ ಸಮ್ಮೇಳನ ಹೊಂದಿದೆ ಎಂದರು.
ಪ್ರಾಂತೀಯ ಪ್ರಥಮ ಮಹಿಳೆ ಚಂದು ಮಹೇಶ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ.ಪಿ ಪುತ್ತುರಾಯ, ೨ನೇ ವಿಡಿಜಿ ರಾಜೀವ್ ಕೊಟಿಯನ್, ವಲಯ ಸಲಹೆಗಾರ, ಪಿಡಿಜಿ ಬಿ. ದಿವಾಕರಶೆಟ್ಟಿ, ಸಮ್ಮೇಳನ ಸಮಿತಿ ಸಂಯೋಜಕ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ಹೆಬ್ಬಂಡಿ ನಾಗರಾಜ್, ಖಜಾಂಚಿ ಕೆ.ಎಚ್ ರವಿಕುಮಾರ್, ಪ್ರಾಂತೀಯ ಕಾರ್ಯದರ್ಶಿ ಪರಮೇಶ್ವರಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್, ಖಜಾಂಚಿ ಕೆ.ಜಿ ರಾಜ್ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಜಯ್ ನಾರಾಯಣ್ ಮತ್ತು ಎಂ. ರಘುನಾಥ್ ಲಯನ್ಸ್ ಪ್ರಾರ್ಥನೆ ನೆರವೇರಿಸಿದರು. ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಪಾಟೀಲ್ ರಾಷ್ಟ್ರ ಧ್ವಜ ಗೌರವ ವಂದನೆ ನೆರವೇರಿಸಿಕೊಟ್ಟರು. ಸಮ್ಮೇಳನ ಸಮಿತಿ ಅಧ್ಯಕ್ಷ ಜಿ.ಡಿ ಪ್ರಭುದೇವ ಸ್ವಾಗತಿಸಿದರು. ಐರೆನ್ ಡಿಸೋಜ ಮತ್ತು ಡಿ ಶಂಕರ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ಪರಮೇಶ್ವರಪ್ಪ ವಂದಿಸಿದರು.
ಹಿರಿಯ ಮುಖಂಡ ಬಿ.ಕೆ ಜಗನ್ನಾಥ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉದ್ಯಮಿ ಎನ್ಟಿಸಿ ನಾಗೇಶ್, ಪ್ರಮುಖರಾದ ಡಾ. ರವೀಂದ್ರನಾಥ ಕೋಠಿ, ಡಾ. ಜಿ.ಎಂ ನಟರಾಜ್, ಎಚ್.ಬಿ ಸಿದ್ದೇಶ್, ಡಾ. ನವೀನ್ ನಾಗರಾಜ್, ವಿ. ರಾಜು, ಪೂರ್ಣಿಮಾ, ಮಹೇಶ್ ಜಾವಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಲಯನ್ಸ್ ವಲಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.