Monday, February 24, 2025

ಧಾರ್ಮಿಕ ಆಚರಣೆ : ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯಕ್ಕೆ ಪಾದಯಾತ್ರೆ

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಶಿವಮೊಗ್ಗ ಸೆಕ್ರೆಟ್ ಹಾರ್ಟ್ ಪ್ರಧಾನಾಲಯಕ್ಕೆ ಭಕ್ತಾದಿಗಳು ಪಾದಯಾತ್ರೆ ಕೈಗೊಂಡರು. 
    ಭದ್ರಾವತಿ : ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಶಿವಮೊಗ್ಗ ಸೆಕ್ರೆಟ್ ಹಾರ್ಟ್ ಪ್ರಧಾನಾಲಯಕ್ಕೆ ಭಕ್ತಾದಿಗಳು ಪಾದಯಾತ್ರೆ ಕೈಗೊಂಡರು. 
    ೨೦೨೫ ಜ್ಯೂಬಿಲಿ ವರ್ಷವನ್ನು ಯಾತ್ರಾತ್ರಿ ವರ್ಷವನ್ನಾಗಿ ಕ್ರೈಸ್ತ ಕಥೋಲಿಕ ಧರ್ಮದ ಜಗದ್ಗುರು ಫ್ರಾನ್ಸಿಸ್‌ರವರು ಘೋಷಿಸಿದ್ದು,  ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಸಾಧ್ಯವಾದಷ್ಟು ಪುಣ್ಯಕ್ಷೇತ್ರಗಳಿಗೆ ತೆರಳಿ ಪ್ರಾರ್ಥಿಸಲು ಕರೆ ನೀಡಲಾಗಿದೆ ಎಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ ತಿಳಿಸಿದರು. 
    ಇದರ ಅಂಗವಾಗಿ ಧರ್ಮ ಕೇಂದ್ರದ ಇನ್ನೂರಕ್ಕೂ ಅಧಿಕ ಭಕ್ತರು ಧರ್ಮ ಕೇಂದ್ರದಿಂದ ಸುಮಾರು ೨೦ ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಪ್ರಾರ್ಥಿಸುತ್ತಾ ಶಿವಮೊಗ್ಗಕ್ಕೆ ಯಾತ್ರೆ ಕೈಗೊಂಡರು. 
    ನಂತರ ಶಿವಮೊಗ್ಗ ಪ್ರಧಾನಾಲಯದ ಧರ್ಮ ಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜರವರಿಂದ ಪೂಜಾ ವಿಧಿ-ವಿಧಾನಗಳು ನೆರವೇರಿದವು. ಶಿವಮೊಗ್ಗ ವಿವಿಧ ಧರ್ಮ ಕೇಂದ್ರಗಳ ಗುರುಗಳು, ಸೈಂಟ್ ಚಾರ್ಲ್ಸ್ ಬರೋಮಿಯೋ ಸಂಸ್ಥೆಯ ಧರ್ಮ ಭಗಿನಿಯರು, ಮಕ್ಕಳು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಬ್ಬ ಆರೋಪಿ, ರೌಡಿಶೀಟರ್ ಕಾಲಿಗೆ ಗುಂಡೇಟು

ಆರೋಪಿ, ರೌಡಿಶೀಟರ್ ಶಹೀದ್ 
    ಭದ್ರಾವತಿ:  ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿರುವ ಮತ್ತೊಂದು ಘಟನೆ ನಡೆದಿದೆ.
    ರೌಡಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ, ಸುಮಾರು ೧೨ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಶಹೀದ್ ಕಾಲಿಗೆ ಗುಂಡು ಹಾರಿಸಲಾಗಿದೆ. ನಗರದ ಪೇಪರ್‌ಟೌನ್ ಠಾಣೆ ಪೊಲೀಸರು ಈತನನ್ನು ಹಿಡಿಯಲು ಹೋದಾಗ ಪೊಲೀಸ್ ಕಾನ್ಸ್‌ಸ್ಟೇಬಲ್ ನಾಗರಾಜ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಠಾಣೆಯ ನಿರೀಕ್ಷಕಿ ನಾಗಮ್ಮ ಈತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಗಾಯಗೊಂಡಿರುವ ಶಹೀದ್‌ಗೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಳೆದ ೩ ದಿನಗಳ ಹಿಂದೆ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ರೌಡಿಶೀಟರ್ ಗುಂಡ ಅಲಿಯಾಸ್ ರವಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. 
    ಶಹೀದ್ ೨೦೨೪ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಸಹ  ಆರೋಪಿಯಾಗಿದ್ದ. ಯಾಸಿನ್ ಖುರೇಷಿಯ ಆಪ್ತ ಹಾಗೂ ಆದಿಲ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಈತ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಎಂಬ ಆರೋಪ ಈತನ ಮೇಲಿದೆ. 

Sunday, February 23, 2025

ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ

ಸಮುದಾಯದವರ ಏಳಿಗೆಗೆ ಬದ್ಧ, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದ : ಬಿ.ವೈ ರಾಘವೇಂದ್ರ 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಸಂಸದ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ: ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
     ಸಮಾವೇಶದಲ್ಲಿ ಮೊದಲಿಯಾರ್ ಸಮುದಾಯದವರು ಇನ್ನೂ ಹೆಚ್ಚು ಕ್ರಿಯಾಶೀಲರಾಗುವ ಮೂಲಕ ಸಂಘಟನೆಗೆ ಒತ್ತು ನೀಡಬೇಕು. ಸಮುದಾಯದವರ ಹಿತರಕ್ಷಣೆಗೆ ಬದ್ಧರಾಗಿ ಪರಿಣಾಮಕಾರಿ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳುವಂತೆ ಕರೆ ನೀಡಲಾಯಿತು. 
    ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರವರು ತಾಲೂಕು ಸಂಘದ ನೂತನ ಕಛೇರಿ ಉದ್ಘಾಟಿಸುವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಮೊದಲಿಯಾರ್ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಸಮುದಾಯದವರ ಏಳಿಗೆಗೆ ಬದ್ಧನಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದ್ದೇನೆ ಎಂದರು.  
    ಸಮಾವೇಶಕ್ಕೂ ಮೊದಲು ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ದ್ವಜಾರೋಹಣ ನೆರವೇರಿಸಿದರು. ಸಮಾವೇಶದಲ್ಲಿ ಪಾಂಡಿಚೆರಿ, ತಮಿಳುನಾಡು, ಹೈದರಬಾದ್ ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.  ತಾಲೂಕು ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಐಎಂಪಿಎ ಸಂಸ್ಥಾಪಕ ಚೆವಲಿಯಾರ್ ಡಾ. ಆರ್. ಅರುಣಾಚಲ, ಎಐಎಟಿವಿಎಸ್ ಕಾರ್ಯದರ್ಶಿ ಗೋಪಾಲಮಣಿ, ಎನ್. ಮಂಜುನಾಥ್, ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಲೂಕು ಸಂಘದ ಉಪಾಧ್ಯಕ್ಷ ಎ. ಸುಬ್ರಮಣಿ,  ಕಾರ್ಯದರ್ಶಿ ವಿ. ಶಿವಕುಮಾರ್(ಪೆಟ್ರೋಲ್ ಬಂಕ್), ಖಜಾಂಚಿ ಜಿ. ಸುರೇಶ್ ಕುಮಾರ್, ಸಹ ಕಾರ್ಯದರ್ಶಿ ಎನ್. ರವಿಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶದಲ್ಲಿ ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. 

ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಣ


    ಭದ್ರಾವತಿ : ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಬೈಪಾಸ್ ರಸ್ತೆ ಬಳಿ ನಡೆದಿದೆ. 
    ಕಳೆದ ೨ ದಿನಗಳ ಹಿಂದೆ ಸಿರಿಯೂರು ಗ್ರಾಮದ ನಿವಾಸಿ ಹನುಮಂತೇಗೌಡರವರು ತಮ್ಮ ಪತ್ನಿ ಭಾಗ್ಯಮ್ಮರ ಜೊತೆ ರಾತ್ರಿ ೮ ಗಂಟೆ ಸಮಯದಲ್ಲಿ ನ್ಯೂಕಾಲೋನಿಯಲ್ಲಿರುವ ಸಂಬಂಧಿಕರ ಮಗಳ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಪುನಃ ಹಿಂದಿರುಗಿ ತಮ್ಮ ಗ್ರಾಮಕ್ಕೆ ತೆರಳುವಾಗ ರಾತ್ರಿ ೯.೪೫ರ ಸಮಯದಲ್ಲಿ ಜಿಂಕ್‌ಲೈನ್, ಶ್ರೀ ಮಾದೇಶ್ವರ ದೇವಸ್ಥಾನ ರಸ್ತೆ ಮೂಲಕ ಬೈಪಾಸ್ ಬಳಿ ಬಂದಾಗ ವಾಹನ ದಟ್ಟಣೆ ಅಧಿಕವಾದ ಹಿನ್ನಲೆಯಲ್ಲಿ ಹನುಮಂತೇಗೌಡರು ತಮ್ಮ ದ್ವಿಚಕ್ರ ವಾಹನ ಚಾಲನೆ ನಿಧಾನಗೊಳಿಸಿದ್ದಾರೆ. ಇದೆ ಸಂದರ್ಭದಲ್ಲಿ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ವಾಹನದಲ್ಲಿ ಬರುತ್ತಿದ್ದ ಇಬ್ಬರು ಅಪರಿಚಿತರು ಭಾಗ್ಯಮ್ಮರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 
    ಸುಮಾರು ೩೫ ಗ್ರಾಂ ತೂಕದ ೨ ಎಳೆಯ, ೨ ತಾಳಿ ಇರುವ ಸುಮಾರು ೧.೭೫ ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಅಪಹರಿಸಲಾಗಿದ್ದು, ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಅಪರಿಚಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ವಿದ್ಯಾರ್ಥಿಗಳಿಗೆ ಸಹನೆ, ಉತ್ತಮ ನಡವಳಿಕೆ ಮುಖ್ಯ : ಪ್ರೊ. ಆರ್. ಹಿರೇಮಣಿ ನಾಯ್ಕ್

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ `ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವೇದಿಕೆ' ಉದ್ಘಾಟನೆ ಕಾರ್ಯಕ್ರಮ ಕುವೆಂಪು ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗು ವಾಣಿಜ್ಯ ನಿಕಾಯದ ಡೀನ್ ಪ್ರೊ. ಆರ್. ಹಿರೇಮಣಿ ನಾಯ್ಕ್ ನೆರವೇರಿಸಿದರು. 
    ಭದ್ರಾವತಿ : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಹನೆ, ಶಿಕ್ಷಕರೊಂದಿಗೆ ಉತ್ತಮ ನಡವಳಿಕೆ ಹೊಂದಿರಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗು ವಾಣಿಜ್ಯ ನಿಕಾಯದ ಡೀನ್ ಪ್ರೊ. ಆರ್. ಹಿರೇಮಣಿ ನಾಯ್ಕ್ ಹೇಳಿದರು. 
    ಅವರು ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ `ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವೇದಿಕೆ' ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. 
    ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ಪ್ರಸ್ತುತ ಕಾರ್ಪೋರೇಟ್ ಕಂಪನಿಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳು ರೂಪುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಲಹೆ, ಸಹಕಾರ ಪಡೆದುಕೊಳ್ಳಬೇಕು. ಕೃತಕ ಬುದ್ದಿಮತ್ತೆ (ಎ.ಐ) ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದ್ದು, ಆಧುನಿಕತೆಯಲ್ಲಿ ಇದರ ಪ್ರಭಾವ ಹೆಚ್ಚಿನದ್ದಾಗಿದೆ ಎಂದರು. 
    ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಎಂ. ಮಹಮದ್ ನಜೀಬ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್. ಮಂಜಪ್ಪ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಟಿ.ಜಿ ಉಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಸ್. ಶಿಲ್ಪ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ಆರ್. ವೆಂಕಟೇಶ್ ಸ್ವಾಗತಿಸಿದರು. ವೇದಿಕೆ ಸಂಯೋಜಕ ವಿ.ಬಿ ಚಿರಂಜೀವಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಚ್.ಎನ್ ಸುಷ್ಮ ಅತಿಥಿ ಪರಿಚಯ ನೆರವೇರಿಸಿದರು. ಕೆ. ಶಂಕರ್ ಯಾದವ್ ವಂದಿಸಿದರು. ಡಾ. ಬಿ.ಜಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 

Saturday, February 22, 2025

ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಕನ್ನಡ ಕಲಿಯಿರಿ : ಪರುಸಪ್ಪ ಕುರುಬರ

ಭದ್ರಾವತಿಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಈ ಬಾರಿ ಸಹ ಹಳೇನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ತಹಸೀಲ್ದಾರ್ ಪರುಸಪ್ಪ ಕುರುಬರ ಉದ್ಘಾಟಿಸಿದರು.  
    ಭದ್ರಾವತಿ: ಕಡ್ಡಾಯವಾಗಿ ಎಲ್ಲಾ ಕಛೇರಿಗಳಲ್ಲೂ ಕನ್ನಡ ಭಾಷೆ  ಬಳಸಬೇಕು. ಎಲ್ಲರೂ ಕನ್ನಡದಲ್ಲಿ ಮಾತನಾಡುವುದನ್ನು ಕಲಿಯಬೇಕು. ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ತಹಸೀಲ್ದಾರ್ ಪರುಸಪ್ಪ ಕುರುಬರ ಹೇಳಿದರು. 
    ಅವರು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಈ ಬಾರಿ ಸಹ ಹಳೇನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.   
    ಉರ್ದು ಶಾಲೆಯಲ್ಲಿ ವಿಶೇಷವಾಗಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ನಮ್ಮ ಮಾತೃ ಭಾಷೆಯಾದ ಕನ್ನಡ ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಂಡು ಕಲಿಯುವ ಮೂಲಕ ಇತರರಿಗೂ ಕಲಿಸಬೇಕೆಂದರು. 
  ವಿಶ್ವ ಮಾತೃ ಭಾಷೆ ದಿನಾಚರಣೆ ಕುರಿತು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ. ಎಂ. ಚಂದ್ರಶೇಖರಯ್ಯ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆ ಕನ್ನಡದ ಅಸ್ತಿತ್ವ ಮತ್ತು ಕನ್ನಡ ಬಳಸುವ ರೀತಿಯ ಸೂಚಕವಾಗಿದೆ. ಪ್ರಸ್ತುತ ಕನ್ನಡ ವಿಶ್ವದ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಬೇರೆ ಭಾಷೆಯವರು ಕನ್ನಡ ಭಾಷೆಯನ್ನು ಕಲಿತು ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಕಲಾವಿದರು, ಸಾಹಿತಿ, ಕವಿಗಳಾಗಿ ಮುಂಚೂಣಿಯಲ್ಲಿದ್ದಾರೆ. ಇಂತಹವರ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ.ರಾ ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಹ ಸೇರಿದ್ದಾರೆ ಎಂದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಶಹನ ಫಾತೀಮ ಸೇರಿದಂತೆ ಇನ್ನಿತರರು ಮಾತನಾಡಿದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
  ವೇದಿಕೆಯ ಖಜಾಂಚಿ ಗಂಗರಾಜ್, ಮಲ್ಲಿಕಾ, ಕೋಕಿಲ, ಸುಚಿತ್ರ ಸೇರಿದಂತೆ ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಣ ಬೆಳೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು

ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಭದ್ರಾವತಿ ನಗರದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು. 
    ಭದ್ರಾವತಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ನಗರದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು. 
    ನಗರದ ರೈಲ್ವೆ ನಿಲ್ದಾಣಕ್ಕೆ ಶಿವಮೊಗ್ಗದಿಂದ ಸಂಜೆ ೫.೨೦ಕ್ಕೆ ಆಗಮಿಸಿದ ರೈಲಿನಲ್ಲಿ ಮಂಗೋಟೆ ರುದ್ರೇಶ್, ಕವಿತಾ ರಾವ್, ಬಾರಂದೂರು ಪ್ರಸನ್ನ, ರವಿಕುಮಾರ್, ಸುಲೋಚನಾ, ದೇವರಾಜ್ ಸೇರಿದಂತೆ ಬಿಜೆಪಿ ಪಕ್ಷದ ಹಾಗು ಹಿಂದೂಪರ ಸಂಘಟನೆಗಳ  ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪ್ರಯಾಣ ಬೆಳೆಸಿದರು. ಇದಕ್ಕೂ ಮೊದಲು ರೈಲ್ವೆ ನಿಲ್ದಾಣದಲ್ಲಿ ಮುಖಂಡರು, ಕಾರ್ಯಕರ್ತರು ಸಂಭ್ರಮ ಹಂಚಿಕೊಂಡರು. 
    ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಹಿಂದುಳಿದ ಮೋರ್ಚಾದ ರಾಜಶೇಖರ್ ಉಪ್ಪಾರ ಸೇರಿದಂತೆ ಇನ್ನಿತರರು ಶುಭಕೋರಿದರು.