Friday, March 21, 2025

ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ : ಎಂಪಿಎಂ ಕಾರ್ಖಾನೆ ಪುನರ್ ಪ್ರಾರಂಭಿಸುವ ಭರವಸೆ

ಭದ್ರಾವತಿ ಎಂಪಿಎಂ ಕಾರ್ಖಾನೆ ಪುನರ್ ಪ್ರಾರಂಭಿಸುವ ಕುರಿತು ಸದನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್  ಚರ್ಚಿಸಿದ ಪರಿಣಾಮ ಶುಕ್ರವಾರ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಸಭೆ ಜರುಗಿತು. 
    ಭದ್ರಾವತಿ : ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ (ಎಂ.ಪಿ.ಎಂ) ಪುನರ್ ಪ್ರಾರಂಭಿಸುವ ಸಂಬಂಧ ಅರಣ್ಯ ಇಲಾಖೆಯಿಂದ ಎದುರಾಗಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದ್ದಾರೆ. 
    ಕಳೆದ ೩ ದಿನಗಳ ಹಿಂದೆ ಎಂಪಿಎಂ ಕಾರ್ಖಾನೆ ಪುನರ್ ಪ್ರಾರಂಭಿಸುವ ಕುರಿತು ಸದನದಲ್ಲಿ ನಾನು ಚರ್ಚಿಸಿದ ಪರಿಣಾಮ ಶುಕ್ರವಾರ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಸಭೆ ಜರುಗಿತು. ಪ್ರಸ್ತುತ ಎಂಪಿಎಂ ಕಾರ್ಖಾನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಸಚಿವರಿಗೆ ತಿಳಿಸುವ ಮೂಲಕ ಕಾರ್ಖಾನೆ ಪುನರ್ ಪ್ರಾರಂಭಿಸುವುದರಿಂದ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸುವಂತಹ ಕಾರ್ಯ ಸಾಕಾರಗೊಳ್ಳುವ ಕುರಿತು ಮನವರಿಕೆ ಮಾಡಿಕೊಡಲಾಯಿತು. 
    ಸಚಿವರು, ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹಾಗೂ ಹಿರಿಯ ಅರಣ್ಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗನೆ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸಲು ಎಲ್ಲ ರೀತಿಯ ಸಹಕಾರ ನೀಡಲು ಬದ್ಧರಿರುವುದಾಗಿ ತಿಳಿಸಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾರ್ಖಾನೆ ಪುನರ್ ಪ್ರಾರಂಭಿಸುವ ವಿಶ್ವಾಸ ಹೆಚ್ಚಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. 

ಮಾ.೨೨ರಂದು ಪುನೀತ್‌ರಾಜ್‌ಕುಮಾರ್ ೫೦ನೇ ಹುಟ್ಟುಹಬ್ಬ



    ಭದ್ರಾವತಿ: ನಗರದ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಮಾ.೨೨ರ ಶನಿವಾರ ಸಂಜೆ ೪ ಗಂಟೆಗೆ ನ್ಯೂಟೌನ್ ಅಯ್ಯಪ್ಪ ಸ್ವಾಮಿ ಸಭಾಭವನದಲ್ಲಿ ಆಯೋಜಿಸಲಾಗಿದೆ. 
    ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎರೇಹಳ್ಳಿ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಕೋಗಲೂರು ತಿಪ್ಪೇಸ್ವಾಮಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. 
    ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನಟರಾಜ್, ಸಂಘದ ಗೌರವ ಸಲಹೆಗಾರ ರಾಜವಿಕ್ರಂ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ದೇವರಾಜ್, ಹಿರಿಯ ಕಲಾವಿದ ಜೆ.ಪಿ ನಂಜುಂಡೇಗೌಡ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ಮತ್ತು ರಂಗ ಕಲಾವಿದ ವೈ.ಕೆ ಹನುಮಂತಯ್ಯ ಅವರಿಗೆ ಸನ್ಮಾನ ನಡೆಯಲಿದೆ. ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಕೇಂದ್ರ ಉಕ್ಕು ಸಚಿವರಿಂದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ದಿನ ಹೆಚ್ಚಿಸುವ ಭರವಸೆ

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ನಿಯೋಗ ಶುಕ್ರವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ದಿನ ಹೆಚ್ಚಿಸುವುದಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರ ಸ್ವಾಮಿಯವರು ಭರವಸೆ ನೀಡಿದ್ದಾರೆ. 
    ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಗುತ್ತಿಗೆ ಕಾರ್ಮಿಕರ ನಿಯೋಗ ಶುಕ್ರವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. 
    ಕಾರ್ಖಾನೆ ಅಭಿವೃದ್ಧಿ ಹೊಂದುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರಿಂದಾಗಿ ಕಾರ್ಮಿಕ ವಲಯ ಹಾಗು ಕ್ಷೇತ್ರದ ಜನತೆಯಲ್ಲಿ ಆತಂಕ ಛಾಯೆ ಆವರಿಸಿಕೊಂಡಿದ್ದು, ಅಲ್ಲದೆ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ದಿನಗಳು ಹೆಚ್ಚಳವಾಗದ ಕಾರಣ ಸಂಕಷ್ಟದಲ್ಲಿ ಬದುಕುವಂತಾಗಿದೆ ಎಂದು ಎಂದು ನಿಯೋಗ ಅಳಲು ವ್ಯಕ್ತಪಡಿಸಿದೆ.  
    ಸಚಿವ ಕುಮಾರಸ್ವಾಮಿ ನಿಯೋಗಕ್ಕೆ ಸ್ಪಂದಿಸಿ ಕಾರ್ಖಾನೆ ಅಭಿವೃದ್ಧಿ ಹಾಗು ಗುತ್ತಿಗೆ ಕಾರ್ಮಿಕರಿಗೆ ಕೆಲಸ ದಿನ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆಂದು ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ತಿಳಿಸಿದ್ದಾರೆ.  
    ನಿಯೋಗದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸೇರಿದಂತೆ ಪದಾಧಿಕಾರಿಗಳು, ನಿರ್ದೇಶಕರು ಪಾಲ್ಗೊಂಡಿದ್ದರು. 

ಮಾ.೨೩ರಂದು ದೈವಜ್ಞ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾಹಿತಿ ನೀಡಿದರು. 
    ಭದ್ರಾವತಿ: ಮುಂಬರಲಿರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಆದೇಶದ ಮೇರೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಮಾ.೨೩ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು. 
    ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿರುವರು ಎಂದರು. 
    ಮುಂಬರಲಿರುವ ತಾಲೂಕು ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು. ಈ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಪಕ್ಷದ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು. 
    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಮುಖಂಡರಾದ ಸಿ. ಜಯಪ್ಪ, ಮಂಜಪ್ಪ, ಬಿ. ಗಂಗಾಧರ್, ಅಮೀರ್ ಜಾನ್, ಜುಂಜ್ಯಾನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, March 20, 2025

ಫಲಾನುಭವಿ ದಂಪತಿಗೆ ಮಂಜೂರಾದ ಜಮೀನು ದೌರ್ಜನ್ಯ, ದಬ್ಬಾಳಿಕೆ, ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಯತ್ನ

ನ್ಯಾಯಾಲಯದ ಆದೇಶ ಫಲಕ ಧ್ವಂಸ, ಕಂಗಲಾದ ದಂಪತಿ 

ಭದ್ರಾವತಿ ತಾಲೂಕಿನ ಹುಳಿಯಾರ್ ರಾಮನಕೊಪ್ಪ ಗ್ರಾಮದ ಸರ್ವೆ ನಂ. ೧೫ರಲ್ಲಿ ೪ ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಅಳವಡಿಸಲಾಗಿರುವ ನ್ಯಾಯಾಲಯದ ಆದೇಶದ ಫಲಕ ಧ್ವಂಸಗೊಳಿಸುತ್ತಿರುವುದು. 
    ಭದ್ರಾವತಿ: ಸರ್ಕಾರದಿಂದ ಮಂಜೂರಾಗಿರುವ ಸಾಗುವಳಿ ಜಮೀನನ್ನು ಮೂಲ ಫಲಾನುಭವಿ ದಂಪತಿಗೆ ವಂಚಿಸಿ ದೌರ್ಜನ್ಯ, ದಬ್ಬಾಳಿಕೆ ಹಾಗು ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಯತ್ನಿಸುತ್ತಿರುವ ಘಟನೆ ನಡೆದಿದ್ದು, ಇದರಿಂದಾಗಿ ಬಡ ಕುಟುಂಬದವರು ಅತಂತ್ರರಾಗಿದ್ದಾರೆ. 
    ತಾಲೂಕಿನ ಹುಳಿಯಾರ್ ರಾಮನಕೊಪ್ಪ ಗ್ರಾಮದ ಸರ್ವೆ ನಂ. ೧೫ರಲ್ಲಿ ೪ ಎಕರೆ ವಿಸ್ತೀರ್ಣದ ಜಮೀನನ್ನು ೨೨ ಮಾರ್ಚ್, ೨೦೧೮ರಲ್ಲಿ ಗ್ರಾಮದ ನಿವಾಸಿ ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ಅವರಿಗೆ ಸಾಗುವಳಿಗಾಗಿ ಕೆಲ ಷರತ್ತಿನೊಂದಿಗೆ ಜಂಟಿ ಖಾತೆಯಲ್ಲಿ ಮಂಜೂರು ಮಾಡಿದ್ದು, ಅದರಂತೆ ೨೦೨೪-೨೫ನೇ ಸಾಲಿನ ಪಹಣಿ ಪ್ರತಿಯಲ್ಲೂ ಸಹ ಸ್ಪಷ್ಟವಾಗಿ ನಮೂದಾಗಿದೆ. ಅಲ್ಲದೆ ಪ್ರಸ್ತುತ ಜಮೀನು ಸಾಗುವಳಿ ಮಾಡಲಾಗುತ್ತಿರುತ್ತದೆ. 
    ಈ ನಡುವೆ ಇದೆ ಸರ್ವೆ ನಂ. ಜಮೀನು ವಿಭಾಗಿಸಿ ೧೯೯೬-೯೭ನೇ ಸಾಲಿನಲ್ಲಿ ದರಖಾಸ್ತು ಮೂಲಕ ವೆಂಕಟೇಶ ಅವರಿಗೆ ೩ ಎಕರೆ ಜಮೀನು ಹಾಗು ಇವರ ಪತ್ನಿ ನಂಜಮ್ಮ ಅವರಿಗೆ ೩ ಎಕರೆ ಜಮೀನು ಮಂಜೂರಾತಿ ಮಾಡಲಾಗಿದೆ. ಅಲ್ಲದೆ ೧೯೯೬-೯೭ನೇ ಸಾಲಿನಲ್ಲಿ ಸಾಗುವಳಿ ನೀಡಿ ಪ್ರಸ್ತುತ ಪಹಣಿ ಸಹ ಚಾಲ್ತಿಯಲ್ಲಿದೆ. ಆದರೆ ಮಂಜೂರಾದ ಜಮೀನು ವೆಂಕಟೇಶ್ ಮತ್ತು ಇವರ ಪತ್ನಿ ನಂಜಮ್ಮ ಅವರ ಅನುಭವದಲ್ಲಿ ಇರುವುದಿಲ್ಲ. 
    ಇದೊಂದು ವಿಚಿತ್ರ ಪ್ರಕರಣವಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು ಪ್ರಕರಣದ ದಾಖಲಾತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಕಾನೂನು ಅಭಿಪ್ರಾಯ ಸೂಚಿಸಿದ್ದು, ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ದಂಪತಿ ಜಮೀನಿನ ಜಂಟಿ ಮಾಲೀಕರಾಗಿದ್ದಾರೆಂದು ತಿಳಿಸಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶಾಶ್ವತ ನಿರ್ಬಂಧಕ ತಡೆಯಾಜ್ಞೆ ನೀಡಿದೆ. 
    ಇದೀಗ ಜಮೀನನ್ನು ದೌರ್ಜನ್ಯ, ದಬ್ಬಾಳಿಕೆ ಹಾಗು ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಮುಂದಾಗಿದ್ದು, ಇದರಿಂದಾಗಿ ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ರಕ್ಷಣೆ ಕೋರಿದ್ದರು. ತಾಲೂಕು ಆಡಳಿತ ದಂಪತಿಗೆ ರಕ್ಷಣೆ ನೀಡಲು ಮುಂದಾಗಿದೆ. ಈ ನಡುವೆ ತಾಲೂಕು ಆಡಳಿತ ಜಮೀನಿನ ಸರ್ವೇ ನಡೆಸಿ ೪ ಎಕರೆ ಜಮೀನು ಗುರುತಿಸಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕಳೆದ ೩-೪ ದಿನಗಳ ಹಿಂದೆ ಜಮೀನಿನಲ್ಲಿ ಅಳವಡಿಸಲಾಗಿರುವ ನ್ಯಾಯಾಲಯದ ಆದೇಶದ ಫಲಕ ಧ್ವಂಸಗೊಳಿಸಿ ಜೆಸಿಬಿ ಹಾಗು ಟ್ರ್ಯಾಕ್ಟರ್ ಇನ್ನಿತರ ವಾಹನಗಳನ್ನು ಬಳಸಿ ಅಕ್ರಮವಾಗಿ ಜಮೀನು ಪ್ರವೇಶಿಸಿ ದೌರ್ಜನ್ಯ, ದಬ್ಬಾಳಿಕೆ ನಡೆಸಲಾಗಿದೆ. ಇದರಿಂದಾಗಿ ಬಡ ಕುಟುಂಬಕ್ಕೆ ದಾರಿ ದೋಚದಂತಾಗಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕಾಗಿದೆ.   

ಮಹಿಳೆಯರಿಗೆ ಎಂದಿಗೂ ಸುರಕ್ಷತೆ ಇಲ್ಲ : ಆರ್.ಎಸ್ ಶೋಭಾ ಕಳವಳ


ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಏರ್ಪಡಿಸಲಾಗಿತ್ತು. 
    ಭದ್ರಾವತಿ : ಇಂದಿಗೂ ಸಮಾಜದಲ್ಲಿ ಮಹಿಳೆಯರನ್ನು ನೋಡುವ ಭಾವನೆ ಬದಲಾಗಿಲ್ಲ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳನ್ನು ಗಮನಿಸಿದಾಗ ಮಹಿಳೆಯರಿಗೆ ಎಂದಿಗೂ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ನೋಟರಿ ಆರ್.ಎಸ್ ಶೋಭಾ ಕಳವಳ ವ್ಯಕ್ತಪಡಿಸಿದರು. 
    ಅವರು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಮಹಿಳೆಯರು ಸಮಾಜದಲ್ಲಿ ಯಾವುದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ತಮ್ಮ ಇರುವಿಕೆಯನ್ನು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇಂತಹ ಮಹಿಳೆಯರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
    ಮಹಿಳಾ ಸಮಾಜದ ಯಶೋಧ ವೀರಭದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಅಬಲೆಯರಲ್ಲ ಸಬಲೆಯರಾಗಿದ್ದಾರೆ. ಸ್ವಾಭಿಮಾನದಿಂದ ಬದುಕು ನಡೆಸಬೇಕು. ಸಮಾಜದ ಅನಿಷ್ಟ ಪದ್ಧತಿಗಳು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಕಾನೂನು ಬಾಹೀರ ಚಟುವಟಿಕೆಗಳ ವಿರುಧ್ಧ ಹೋರಾಡಬೇಕೆಂದು ಕರೆ ನೀಡಿದರು.
    ಸಮಾಜದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಸುಳ್ಳು ಮಾಡಿ ನಾಗರೀಕ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಬಾಳಬೇಕು. ಸರ್ಕಾರ ಮಹಿಳೆಯರಿಗೆ ನೀಡಬೇಕಾದ ಸೌಲಭ್ಯಗಳನ್ನು ಸರಿಯಾಗಿ ಸರಿಯಾದ ಕಾಲಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
    ಇತ್ತೀಚೆಗೆ ರಾಜ್ಯಮಟ್ಟದ ಪ್ರಶಸ್ತಿಗೆ ಪುರಸ್ಕೃತರಾದ ಸಮಾಜದ ಹಿರಿಯ ಸದಸ್ಯೆ ಕಮಲಾ ಕುಮಾರಿ ಹಾಗು ವಿಜಯ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ವೇದಿಯಲ್ಲಿ ಗೌರಮ್ಮ ಶಂಕರಯ್ಯ, ಶೋಭಾ ಗಂಗರಾಜ್, ಜಯಂತಿ ಶೇಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಇಂದಿರಾ ರಮೇಶ್ ಸ್ವಾಗತಿಸಿದರು. ಕಲ್ಪನಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ಗೀತಾ ರಘುನಂದನ್ ವಂದಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಬಾರಿ ಅದೃಷ್ಟದ ಮಹಿಳೆಯಾಗಿ ಮಲ್ಲಿಕಾಂಬ ಮಲ್ಲಿಕಾರ್ಜುನ ಆಯ್ಕೆಯಾದರು.

Wednesday, March 19, 2025

ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು, ಮದ್ಯ ದರೋಡೆ

    

ಭದ್ರಾವತಿ: ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು ಹಾಗು ಬೆಲೆ ಬಾಳುವ ಮದ್ಯ ದರೋಡೆ ಮಾಡಿರುವ ಘಟನೆ ತಾಲೂಕಿನ ಬಾರಂದೂರು ಗ್ರಾಮದಲ್ಲಿ ನಡೆದಿದೆ. 
    ಶಿವಮೊಗ್ಗ ವಿನೋಬನಗರ ನಿವಾಸಿ ಎಚ್.ಆರ್ ಪಂದೇಶ್ ಬಾರಂದೂರು ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವೈನ್ ಶಾಪ್ ಮಾಲೀಕರಾಗಿದ್ದು, ವೈನ್ ಶಾಪ್ ಕ್ಯಾಷಿಯರ್ ಸಚಿನ್ ಮಾ.೧೬ರಂದು ದಿನದ ವ್ಯಾಪಾರ ಮುಗಿಸಿಕೊಂಡು ರಾತ್ರಿ ೧೦.೨೦ರ ಸಮಯದಲ್ಲಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ವೈನ್‌ಶಾಪ್‌ಗೆ ಹೊಂದಿಕೊಂಡಂತೆ ಇರುವ ರೆಸ್ಟ್ ರೂಂ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಗೆ ಪ್ರವೇಶಿಸಿ ರೆಸ್ಟ್ ರೂಂ ಒಳಗಿನ ಗೋಡೆ ಒಬ್ಬ ವ್ಯಕ್ತಿ ಒಳಗೆ ನುಸುಳ ಬಹುದಾದಷ್ಟು ದೊಡ್ಡದಾದ ಕನ್ನ ಕೊರೆದು ದರೋಡೆ ಮಾಡಿರುವುದು ಕಂಡು ಬಂದಿರುತ್ತದೆ. 
    ಬ್ಯಾಂಕ್ ಖಾತೆಗೆ ಜಮಾ ಮಾಡಲು ಇಡಲಾಗಿದ್ದ ೧,೦೦,೦೦೦ ರು. ನಗದು ಹಣ ಮತ್ತು ಮಾ. ೧೫ ಹಾಗು ೧೬ ಶನಿವಾರ ಮತ್ತು ಭಾನುವಾರ ಎರಡು ದಿನದ ವ್ಯಾಪಾರದ ಹಣ ೨,೫೬,೫೦೦ ರು. ಮತ್ತು ವೈನ್ ಶಾಪ್ ಕ್ಯಾಶ್ ಡ್ರಾನಲ್ಲಿದ್ದ ಚಿಲ್ಲರೆ ಹಣ ಒಟ್ಟು ೪,೦೦೦g ರು. ಹಾಗೂ ವೈನ್ ಶಾಪ್ ಶೋಕೇಸ್‌ನಲ್ಲಿದ್ದ ಬ್ಲಾಕ್ & ವ್ಹೈಟ್ ೧೮೦ ಎಂ.ಎಲ್ ಒಟ್ಟು ಸುಮಾರು ೪೬೮೦ ರು. ಮೌಲ್ಯದ ೮ ಬಾಟಲ್‌ಗಳು ಮತ್ತು ವೋಡ್ಕಾ ೧೮೦ ಎಂ.ಎಲ್ ಒಟ್ಟು ಸುಮಾರು ೮೯೦ ರು. ಮೌಲ್ಯದ ೨ ಕ್ವಾಟರ್‌ಗಳನ್ನು ಕಳವು ಮಾಡಲಾಗಿದೆ. ಒಟ್ಟು ನಗದು ಹಣ ೩,೬೦,೫೦೦ ರು. ಮತ್ತು ೫೫೭೦ ರು. ಬೆಲೆಬಾಳುವ ಮಧ್ಯದ ಬಾಟಲ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.