Friday, May 9, 2025

ರೈಲ್ವೆ ಕ್ಯಾಂಟೀನ್ ಮಾಲೀಕ ಗುರುಪ್ರಸಾದ್ ನಿಧನ

 ಕೆ.ಬಿ.ಗುರುಪ್ರಸಾದ್(ಉನ್ನಿ) 
    ಭದ್ರಾವತಿ : ಬಹಳ ವರ್ಷಗಳಿಂದ ನಗರದ ರೈಲ್ವೆ ಕ್ಯಾಂಟೀನ್ ಮಾಲೀಕರಾಗಿರುವ, ನಗರಸಭೆ ವಾರ್ಡ್ ೩ರ ವ್ಯಾಪ್ತಿಯ ಚಾಮೇಗೌಡ ಏರಿಯಾ ನಿವಾಸಿ ಕೆ.ಬಿ.ಗುರುಪ್ರಸಾದ್(೫೮) ಗುರುವಾರ ರಾತ್ರಿ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಸಮೀಪದ ಭದ್ರಾ ನದಿ ತೀರದ ತೋಟದಲ್ಲಿ ನೆರವೇರಿತು.  ಸುಮಾರು ೫ ದಶಕಗಳಿಂದ ರೈಲ್ವೆ ಕ್ಯಾಂಟೀನ್ ಇವರ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿದ್ದು, ಗುರುಪ್ರಸಾದ್‌ರವರು ಉನ್ನಿ ಎಂಬ ಹೆಸರಿನಲ್ಲಿ ಚಿರಪರಿಚಿತರಾಗಿದ್ದರು. 
    ಸಂತಾಪ:
    ಶಾಸಕ ಬಿ.ಕೆ.ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಎರೇಹಳ್ಳಿ ಗ್ರಾ.ಪಂ. ಸದಸ್ಯ ಸಿ.ಆರ್ ಶಿವರಾಂ, ಬಿಜೆಪಿ ಮುಖಂಡ ಕೂಡ್ಲಿಗೆರೆ ಹಾಲೇಶ್, ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಮುಖಂಡರಾದ ಕರುಣಾಕರ್, ಮುಕುಂದರಾವ್, ರೈಲ್ವೆ ಅಧಿಕಾರಿಗಳು ಸಿಬ್ಬಂದಿಗಳು, ಅನೇಕ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. 

ಮೇ.೧೦ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ: ಮೆಸ್ಕಾಂ ಗ್ರಾಮೀಣ ಉಪವಿಭಾಗ, ಘಟಕ-೧ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ.೧೦ರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಹೊಸನಂಜಾಪುರ, ಹಳೇನಂಜಾಪುರ, ಹಿರಿಯೂರು, ಹಳೇಹಿರಿಯೂರು, ಅಮಲಮಾತಾ ಆಸ್ಪತ್ರೆ, ತಿಮ್ಲಾಪುರ, ಮೂಲೆಕಟ್ಟೆ, ಹೌಸಿಂಗ್ ಬೋರ್ಡ್ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್‌ರವರು ಕೋರಿದ್ದಾರೆ. 

ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾನೂನುಗಳು ಸಹಕಾರಿ : ಎಂ. ಶಿವಕುಮಾರ್

ಭದ್ರಾವತಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಮಾಚೇನಹಳ್ಳಿ, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಕಾರ್ಯಾಗಾರ ನ್ಯಾಯವಾದಿ ಎಂ. ಶಿವಕುಮಾರ್, ಕಾರ್ಮಿಕ ನಿರೀಕ್ಷಕ ರಕ್ಷಿತ್, ವ್ಯವಸ್ಥಾಪಕ ನಿರ್ದೇಶಕ ಡಿ.ಬಿ ಅಶೋಕ್, ನಂಜುಂಡೇಶ್ವರ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕಾರ್ಮಿಕರು ನ್ಯಾಯಯುತವಾದ ಸೌಲಭ್ಯಗಳು ಪಡೆದುಕೊಳ್ಳುವಲ್ಲಿ ಕಾನೂನುಗಳು ಹೆಚ್ಚಿನ ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಕಾನೂನಿನ ಬಗ್ಗೆ ಅರಿವು ಹೊಂದಬೇಕೆಂದು ನ್ಯಾಯವಾದಿ ಎಂ. ಶಿವಕುಮಾರ್ ಹೇಳಿದರು. 
    ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಮಾಚೇನಹಳ್ಳಿ, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕ ಅಧಿನಿಯಮ ಹಾಗೂ ಕಾರ್ಮಿಕರ ಹಕ್ಕುಗಳ ಬಗ್ಗೆ  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. 
    ಕಾರ್ಮಿಕರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಶ್ರಮ ಶ್ಲಾಘನೀಯವಾಗಿದ್ದು, ಕಾರ್ಮಿಕರಿಗೆ ನ್ಯಾಯಯುತವಾಗಿ ಲಭಿಸಬೇಕಾಗಿರುವ ವೈದ್ಯಕೀಯ ಹಾಗೂ ವಿಮಾ  ಸೌಕರ್ಯಗಳು ಸುಲಭವಾಗಿ ಸಿಗುತ್ತಿಲ್ಲ. ಕಾರ್ಮಿಕ ಸಂಘಗಳ ಮೂಲಕ ಸಂಘಟಿತ ಹೋರಾಟ ನಡೆಸಿ ಅಥವಾ ಕಾನೂನು ಹೋರಾಟದ ಮೂಲಕ ಪಡೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಕಾನೂನಿನ ಅರಿವನ್ನು ಪಡೆದು ಹೆಚ್ಚಿನ ಪರಿಹಾರ ಪಡೆದುಕೊಳ್ಳಬಹುದು ಎಂದರು. 
    ಕಾರ್ಮಿಕರ ಶ್ರಮ ಬಂಡವಾಳಕ್ಕಿಂತ ದೊಡ್ಡದು. ಅವರ ಶ್ರಮ ಮತ್ತು ಕೌಶಲ್ಯ ಬಂಡವಾಳ ಶಾಹಿಗಳು ಗುರುತಿಸಬೇಕು. ಅವರಿಗೆ ಮೂಲಭೂತ ಸೌಕರ್ಯಗಳು, ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದರು. 
    ಕಾರ್ಮಿಕ ನಿರೀಕ್ಷಕ  ರಕ್ಷಿತ್, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಬಿ ಅಶೋಕ್ ಹಾಗೂ ನಂಜುಂಡೇಶ್ವರ, ಹಿರಿಯ ನ್ಯಾಯವಾದಿಗಳಾದ ರಮೇಶ್‌ಸಿಂಗ್ ಮತ್ತು ವಿಶ್ವನಾಥ್ ಹಾಗು ಕಾನೂನು ಸೇವಾ ಸಮಿತಿ ಸಂಯೋಜಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಜೃಂಭಣೆಯಿಂದ ಜರುಗಿದ ಶ್ರೀ ಚೌಡೇಶ್ವರಿ ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಕಾಗದನಗರ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೪.೩೦ ರಿಂದ ೬.೩೦ರ ವರೆಗೆ ಗಂಗಾಪೂಜೆ, ಆಲಯ ಪ್ರವೇಶ, ಪಂಚಾಮೃತ ಅಭಿಷೇಕ, ಅಲಂಕಾರ ಮೂರ್ತಿ ಕ್ಷೇಮ ಮಹಾಪ್ರತಿಷ್ಠೆ ಹಾಗು ಮಹಾಪೂರ್ಣಾಹುತಿ ಹಾಗು ಅಭಿಜಿತ್ ಲಗ್ನದ ಶುಭ ಮುಹೂರ್ತದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಕಳಸಾರೋಹಣ ಮತ್ತು ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಮುರಳಿಧರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕಾಗದನಗರ ೭ನೇ ವಾರ್ಡ್ ಶ್ರೀ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ತರಳಿಮಠ ಅವರ ನೇತೃತ್ವದಲ್ಲಿ ಅಮ್ಮನವರ ಮೂಲ ವಿಗ್ರಹ ಹಾಗು ಹೊರಭಾಗದಲ್ಲಿ ಉತ್ಸವ ಮೂರ್ತಿ ಮತ್ತು ಇನ್ನಿತರ ದೇವಾನುದೇವತೆಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. 


ಭದ್ರಾವತಿ ಕಾಗದನಗರ ೭ನೇ ವಾರ್ಡ್ ಶ್ರೀ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ತರಳಿಮಠ ಅವರ ನೇತೃತ್ವದಲ್ಲಿ ಅಮ್ಮನವರ ಮೂಲ ವಿಗ್ರಹ ಹಾಗು ಹೊರಭಾಗದಲ್ಲಿ ಉತ್ಸವ ಮೂರ್ತಿ ಮತ್ತು ಇನ್ನಿತರ ದೇವಾನುದೇವತೆಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. 
    ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಚ್ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸುರಗಿತೋಪು, ಕಾಗದನಗರ, ನ್ಯೂಟೌನ್, ಜೆಪಿಎಸ್ ಕಾಲೋನಿ, ಬಾಲಭಾರತಿ, ಆಂಜನೇಯ ಅಗ್ರಹಾರ, ಜನ್ನಾಪುರ, ಉಜ್ಜನಿಪುರ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. 
    ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಎಂ. ರಾಮಕೃಷ್ಣಪ್ಪ, ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷ ಎನ್. ಉಮೇಶ್, ಪ್ರಧಾನ ಕಾರ್ಯದರ್ಶಿ ಕೆ. ಪರಮೇಶ್, ಸಹ ಕಾರ್ಯದರ್ಶಿ ತಿಮ್ಮಪ್ಪ ಬಾನು ತೇಜ, ಖಜಾಂಚಿ ಶ್ಯಾಮ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಜಿ.ಆರ್ ಸಾಗರ್, ವೈ. ಗೌತಮ್, ಟ್ರಸ್ಟಿಗಳಾದ ಅವಿನಾಶ್, ವಿ. ಯತಿರಾಜ್, ಚೇತನ್‌ಕುಮಾರ್, ಚಂದ್ರಶೇಖರ್, ಕರಿಯಪ್ಪ, ಯಲ್ಲಪ್ಪ ಮತ್ತು ಸಿ. ಕಾಶಿ ಹಾಗು ಸೇವಾಕರ್ತರು, ಊರಿನ ಪ್ರಮುಖರು ಉಪಸ್ಥಿತರಿದ್ದರು. 
 

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

Thursday, May 8, 2025

ಯಶಸ್ವಿಯಾಗಿ ಜರುಗಿದ ಸರ್.ಎಂ.ವಿ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ

ಭದ್ರಾವತಿ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಎಸ್‌ಎಸ್ ಘಟಕ-೧ ಮತ್ತು ಘಟಕ-೨ರ ಸಹಯೋಗದೊಂದಿಗೆ ಶಿವಮೊಗ್ಗ ತಾಲೂಕಿನ ಕಾಟಿಕೆರೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದವರೆಗೆ ವಾರ್ಷಿಕ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ : ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಎಸ್‌ಎಸ್ ಘಟಕ-೧ ಮತ್ತು ಘಟಕ-೨ರ ಸಹಯೋಗದೊಂದಿಗೆ ಶಿವಮೊಗ್ಗ ತಾಲೂಕಿನ ಕಾಟಿಕೆರೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದವರೆಗೆ ವಾರ್ಷಿಕ ಶಿಬಿರ ಆಯೋಜಿಸಲಾಗಿತ್ತು.
ಮೇ.೨ರಿಂದ ಜರುಗಿದ ವಾರ್ಷಿಕ ಶಿಬಿರದಲ್ಲಿ ಶ್ರಮದಾನ, ವ್ಯಕ್ತಿತ್ವ ವಿಕಸನ, ಉಚಿತ ಕಾನೂನು ಅರಿವು-ನೆರವು, ಕೃಷಿ ಸಮಸ್ಯೆ ಸವಾಲುಗಳು, ಶಾಲಾ ಆಟದ ಮೈದಾನ ಸ್ವಚ್ಛತೆ, ರಸ್ತೆ ನಿರ್ಮಾಣ ಮತ್ತು ರಸ್ತೆ ಸುರಕ್ಷತಾ ಕ್ರಮಗಳು, ಯೋಗ ಮತ್ತು ಧ್ಯಾನ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ, ಸಂಸ್ಕೃತಿ, ಸಮುದಾಯ ಜೀವನ ಮೌಲ್ಯಗಳ ಅರಿವು, ಅಗ್ನಿ ದುರಂತಗಳ ಬಗ್ಗೆ ಅರಿವು ಮತ್ತು ಜಾಗೃತಿ, ದೇವಸ್ಥಾನ ಆವರಣದ ಸ್ವಚ್ಛತೆ, ರಸ್ತೆ ಮತ್ತು ಚರಂಡಿ ಸ್ವಚ್ಛತೆ, ನಿರ್ಮಾಣ, ಉಚಿತ ಜಾನುವಾರುಗಳ ಲಸಿಕೆ/ತಪಾಸಣೆ, ಆರೋಗ್ಯ ಮಾಹಿತಿ ಮತ್ತು ಗ್ರಾಮ ಸಮೀಕ್ಷೆ ಕಾರ್ಯಕ್ರಮಗಳು ಜರುಗಿದವು. 
`ಸಂವಿಧಾನ ಮತ್ತು ಮಹಿಳಾ ಸಂರಕ್ಷಣೆ ಹಕ್ಕುಗಳು' ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ನಗರದ ನ್ಯಾಯವಾದಿ ಎಂ. ಶಿವಕುಮಾರ್ ಮಾತನಾಡಿದರು. ಪ್ರತಿಯೊಬ್ಬರು ಸಂವಿಧಾನದ ಮಹತ್ವ ಅರಿತು ಅದನ್ನು ಗೌರವಿಸಬೇಕು. ವಿಶೇಷವಾಗಿ ಮಹಿಳಾ ಸಂರಕ್ಷಣೆ ಹಕ್ಕುಗಳನ್ನು ತಿಳಿದುಕೊಳ್ಳಬೇಕೆಂದರು. 
ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ, ಶಿಬಿರಾಧಿಕಾರಿಗಳಾದ ಕೆ.ಎಂ ಮಹೇಶ್ ಕುಮಾರ್, ಎಂ. ಸತೀಶ್, ಸಹ ಶಿಬಿರಾಧಿಕಾರಿ ಎಸ್.ಕೆ ಶಂಕರಯಾದವ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಬೋಧಕ/ಬೋಧಕೇತರ ವರ್ಗ, ಅತಿಥಿ ಉಪನ್ಯಾಸಕರ ವರ್ಗ, ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಹಿರಿಯ ವಿದ್ಯಾರ್ಥಿಗಳು ಮತ್ತು ಕಾಟಿಕೆರೆ ಗ್ರಾಮಸ್ಥರು. ಶಿಬಿರದಲ್ಲಿ ಪಾಲ್ಗೊಂಡಿದ್ದರು. 

ಮಧು ಲ್ಯಾಬ್‌ನಿಂದ ಪೌರ ಕಾರ್ಮಿಕರಿಗೆ ಗೌರವಾರ್ಪಣೆ

ಭದ್ರಾವತಿ ನಗರದ ರಂಗಪ್ಪ ವೃತ್ತದ ಮಧು ಲ್ಯಾಬೋರೇಟರಿ ವತಿಯಿಂದ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ವಿನೂತನವಾಗಿ ಆಚರಿಸಲಾಯಿತು. 
    ಭದ್ರಾವತಿ : ನಗರದ ರಂಗಪ್ಪ ವೃತ್ತದಲ್ಲಿರುವ ಮಧು ಲ್ಯಾಬೋರೇಟರಿ ವತಿಯಿಂದ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ವಿನೂತನವಾಗಿ ಆಚರಿಸಲಾಯಿತು. 
    ರಂಗಪ್ಪ ವೃತ್ತ ಮತ್ತು ಕೇಶವಪುರ ಬಡಾವಣೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಗರಸಭೆ ಪೌರ ಕಾರ್ಮಿಕರಾದ ಎಸ್. ಶರವಣ, ಲಕ್ಷ್ಮಮ್ಮ ಮತ್ತು ತಿರುಮಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲ್ಯಾಬ್ ಮಾಲೀಕ ಎಸ್.ಆರ್ ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಸಮಾಜದ ಸ್ವಾಸ್ಥ್ಯ, ಸ್ವಚ್ಚತೆ ಮತ್ತು ನೈರ್ಮಲ್ಯ ಕಾಪಾಡುವ, ಜನರ ಆರೋಗ್ಯ ರಕ್ಷಿಸುವ ನಿಜವಾದ ವೈದ್ಯರು. ಜಗತ್ತು ಸುಖ ನಿದ್ರೆಯಲ್ಲಿದ್ದಾಗ ಎದ್ದು ತಮ್ಮ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಕಾರ್ಯ ಅಭಿನಂದನೀಯ ಎಂದರು. 
    ಪೌರ ಕಾಮಿಕರ ಕುಟುಂಬ ವರ್ಗ ಉತ್ತಮ ಗುಣಮಟ್ಟದ ಜೀವನ ನಡೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಸಮಾಜದ ಪ್ರತಿಯೊಬ್ಬ ನಾಗರಿಕ ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವಂತಾಗಬೇಕೆಂದರು.
    ಕಾರ್ಯಕ್ರಮದಲ್ಲಿ ಮಧು ಸಾರಥಿ, ಎಚ್. ಲೀಲಾವತಿ, ಎಂ. ದೀಪಿಕಾ, ಚಿರಾಗ್ ಸಾರಥಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಲಾಯಿತು.

ತಾಯ್ತನಕ್ಕಿಂತ ತಾಯಿ ಹೃದಯ ಅತ್ಯಂತ ಮುಖ್ಯ : ಬಿ.ಕೆ ಮಾಲಕ್ಕ

ಭದ್ರಾವತಿ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನ ಕಾರ್ಯಕ್ರಮದಲ್ಲಿ ಪತ್ರಕರ್ತ ಸುಭಾಷ್ ರಾವ್ ಸಿಂಧ್ಯಾ ಹಾಗು ಸವಿತಾ ದಂಪತಿ ಪುತ್ರಿ ಎಸ್. ಹರ್ಷಿತಾ ಅವರ ಭರತನಾಟ್ಯ ಮನಸೂರೆಗೊಳಿಸಿತು. ವಿಶ್ವವಿದ್ಯಾಲಯದ ವತಿಯಿಂದ ಹರ್ಷಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ತಾಯ್ತನಕ್ಕಿಂತ ತಾಯಿ ಹೃದಯ ಅತ್ಯಂತ ಮುಖ್ಯವಾಗಿದ್ದು, ಜಗತ್ತಿಗೆ ತಾಯಿ ಪ್ರೀತಿ ಹಂಚಿದ ಮದರ್ ತೆರೇಸಾ ಹಾಗೂ ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇಂತಹ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ ಮಾಲಕ್ಕ ಹೇಳಿದರು. 
    ಅವರು ಗುರುವಾರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಭಗವಂತನನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ತಾಯಿಯನ್ನು ಪ್ರತ್ಯಕ್ಷ ದೈವ ಎಂದು ಪೂಜಿಸಲಾಗುತ್ತದೆ. ಸಹಿಷ್ಣುತ ಗುಣವುಳ್ಳ ತಾಯಿಯನ್ನು ಪ್ರಕೃತಿಯಲ್ಲಿ ಭೂಮಿ ಸೇರಿದಂತೆ ವಿವಿಧ ರೀತಿಯಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.
    ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮಾತನಾಡಿ, ತಾಯಿಯನ್ನು ಮೊದಲ ಗುರು ಎಂದು ಪೂಜಿಸಲ್ಪಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶದಲ್ಲಿ ತಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ತಾಯಿಯ ಋಣ ತೀರಿಸಲು ಅಸಾಧ್ಯವಾಗಿದ್ದು, ಮಕ್ಕಳು ಹೆತ್ತವರನ್ನು ಕೊನೆಯ ಕಾಲದಲ್ಲಿ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದರು.
    ಹೇಮಶ್ರೀ ಪ್ರಾರ್ಥಿಸಿ, ಪುಷ್ಪಲತಾ, ದೇವರಾಜ್ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಸುಭಾಷ್ ರಾವ್ ಸಿಂಧ್ಯಾ ಹಾಗು ಸವಿತಾ ದಂಪತಿ ಪುತ್ರಿ ಎಸ್. ಹರ್ಷಿತಾ ಅವರ ಭರತನಾಟ್ಯ ಮನಸೂರೆಗೊಳಿಸಿತು. ವಿಶ್ವವಿದ್ಯಾಲಯದ ವತಿಯಿಂದ ಹರ್ಷಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.