ಜೆಸಿಬಿಯಿಂದ ಪಾಯ ತೆಗೆಯುವಾಗ ದುರ್ಘಟನೆ : ಲಕ್ಷಾಂತರ ರು. ನಷ್ಟ
ಭದ್ರಾವತಿ: ಪಕ್ಕದ ಮನೆಯವರು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿಯಿಂದ ಪಾಯ ತೆಗೆದ ಕಾರಣ ನಮ್ಮ ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ನಾವುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅಲ್ಲದೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಹಳೇನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಭೂತನಗುಡಿ ೨ನೇ ತಿರುವಿನ ನಿವಾಸಿ ಜಿ.ಎನ್ ನಾಗರಾಜರಾವ್ ಎಂಬುವರು ನೀಡಿದ್ದು, ಮಳೆಯಿಂದಾಗಿ ಗೋಡೆ ಕುಸಿದಿಲ್ಲ ಬದಲಾಗಿ ನಮ್ಮ ಮನೆಯ ಪಕ್ಕದ ರಂಗನಾಥ ಎಂಬುವರು ತಮ್ಮ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ನಮ್ಮಿಬ್ಬರ ಮನೆಗಳ ನಡುವೆ ಜಾಯಿಂಟ್ ಗೋಡೆ ಇದ್ದು, ರಂಗನಾಥರವರು ತಮ್ಮ ಮನೆಯನ್ನು ನೆಲಸಮ ಮಾಡಿ ಜೆಸಿಬಿ ಮೂಲಕ ಪಾಯ ತೆಗೆಸಿದಾಗ ನಮ್ಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಈ ಸಂಬಂಧ ದೂರು ಕೊಡಲು ಮುಂದಾದ ಸಂದರ್ಭದಲ್ಲಿ ಕೆಲವರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿ ಉಂಟಾಗಿರುವ ನಷ್ಟ ತುಂಬಿ ಕೊಡುವ ಭರವಸೆ ನೀಡಿದ್ದರು.
ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಶೀತಗೊಂಡು ಕಳೆದ ತಿಂಗಳು ಏ. ೨೭ ರಂದು ರಾತ್ರಿ ಕುಟುಂಬ ಸದಸ್ಯರು ಊಟ ಮಾಡುವಾಗ ಗೋಡೆ ಕುಸಿದು ಬಿದ್ದಿದೆ. ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಗೋಡೆ ಕುಸಿದು ಬಿದ್ದ ಕಾರಣ ಮನೆಯಲ್ಲಿದ್ದ ಅನೇಕ ವಸ್ತುಗಳು ಹಾಳಾಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ದುರ್ಘಟನೆ ನಡೆದರೂ ಸಹ ಪಕ್ಕದ ಮನೆಯ ರಂಗನಾಥ ಆಗಲಿ ಅಥವಾ ಈ ಹಿಂದೆ ಪರಿಹಾರ ಕೊಡಿಸುವುದಾಗಿ ಹೇಳಿದವರಾಗಲಿ ಯಾರು ಸಹ ಏನಾಗಿದೆ ಎಂದು ಬಂದು ನೋಡಿಲ್ಲ. ಮಾನವೀಯತೆ ತೋರದೆ ದುರ್ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮನನೊಂದು ಪೊಲೀಸ್ ಠಾಣೆಗೆ ಪರಿಹಾರಕ್ಕಾಗಿ ದೂರು ನೀಡಲಾಗಿ ಪ್ರಕರಣ ದಾಖಲಾಗಿದೆ.