ಬುಧವಾರ, ಆಗಸ್ಟ್ 13, 2025

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಬೈಕ್‌ರ್‍ಯಾಲಿ

ಆರ್‌ಎಎಫ್ ಅಧಿಕಾರಿಗಳು, ಸಿಬ್ಬಂದಿಗಳಿಂದ ಅರಿವು 

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್)-೯೭ ಬೆಟಾಲಿಯನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹರ್ ಘರ್ ತಿರಂಗ ಬೈಕ್‌ರ್‍ಯಾಲಿ ನಡೆಸಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.       
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್)-೯೭ ಬೆಟಾಲಿಯನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹರ್ ಘರ್ ತಿರಂಗ ಬೈಕ್‌ರ್‍ಯಾಲಿ ನಡೆಸಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.       
    ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ದೇಶದ ಸ್ವಾತಂತ್ರ್ಯದ ಮಹತ್ವ ತಿಳಿಸಲು ಮತ್ತು ತ್ರಿವರ್ಣ ಧ್ವಜದ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಹೆಚ್ಚಿಸಲು ಬೆಟಾಲಿಯನ್ ಕಮಾಂಡರ್ ಕಮಲೇಶ್ ನೇತೃತ್ವದಲ್ಲಿ ರ್‍ಯಾಲಿ ನಡೆಸಲಾಯಿತು. .
    ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಪ್ರಮುಖ ರಸ್ತೆಗಳಲ್ಲಿ ರ್‍ಯಾಲಿ ನಡೆಸಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗು ಶಿಕ್ಷಕರೊಂದಿಗೆ ಸಂವಾದ ಮತ್ತು ದೇಶ ಭಕ್ತಿ ವಿಚಾರದ ಅರಿವು ಮೂಡಿಸಿ ಪ್ರತಿ ಮನೆಯ ಮೇಲೂ ದೇಶ ಭಕ್ತಿಗಾಗಿ ತಿರಂಗ ಬಾವುಟ ಹಾರಿಸಲು ಕರೆ ನೀಡಲಾಯಿತು. 
    ಆರ್‌ಎಎಫ್ ಕಮಾಂಡರ್-೨ ಸಂತೋ ಹಾಗು ಸಿಬ್ಬಂದಿ ವರ್ಗದವರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಶಾಲಾ ಮಕ್ಕಳು ಮತ್ತು ಶಿಕ್ಷಕರು ಆರ್‌ಎಎಫ್ ಅಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ತ್ರಿವರ್ಣ ಧ್ವಜ ಹಿಡಿದು ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಸಂತಸ ವ್ಯಕ್ತ ಪಡಿಸಿದರು.
 

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ಶಿಕ್ಷಕರು ಆರ್‌ಎಎಫ್ ಅಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ತ್ರಿವರ್ಣ ಧ್ವಜ ಹಿಡಿದು ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಸಂತಸ ವ್ಯಕ್ತ ಪಡಿಸಿದರು.


ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬ : ಆ.೧೬ರಂದು ವಿವಿಧ ಕಾರ್ಯಕ್ರಮ

ಭದ್ರಾವತಿಯಲ್ಲಿ ಬಿ.ವೈ ರಾಘವೇಂದ್ರ ಅಭಿಮಾನಿ ಬಳಗದಿಂದ ಬುಧವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ, ಆನಂದ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಜಿ. ಆನಂದಕುಮಾರ್ ಮಾತನಾಡಿದರು.  
    ಭದ್ರಾವತಿ: ಸಂಸದ ಬಿ.ವೈ ರಾಘವೇಂದ್ರರವರ ಹುಟ್ಟುಹಬ್ಬದ ಪ್ರಯುಕ್ತ ಆ.೧೬ರಂದು ನಗರದ ಬಿ.ವೈ ರಾಘವೇಂದ್ರ ಅಭಿಮಾನಿ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ, ಆನಂದ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಜಿ. ಆನಂದಕುಮಾರ್ ತಿಳಿಸಿದರು. 
    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಬಿ.ವೈ ರಾಘವೇಂದ್ರರವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿ ಎಂಬ ಆಶಾಭಾವನೆ ನಮ್ಮದಾಗಿದೆ. ಅವರ ಅಭಿಮಾನಿ ಬಳಗದಿಂದ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಗಿದೆ ಎಂದರು. 
    ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೮.೩೦ಕ್ಕೆ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಜಿ. ಆನಂದಕುಮಾರ್ ಮತ್ತು ತಂಡದಿಂದ ಕುಂಕುಮಾರ್ಚನೆ, ೯ಕ್ಕೆ ಬಿ.ಎಚ್ ರಸ್ತೆ, ಕಡದಕಟ್ಟೆ ಶ್ರೀ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ೯.೩೦ಕ್ಕೆ ರವಿ ಮತ್ತು ಸ್ನೇಹಿತರಿಂದ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ೧೧ ಗಂಟೆಗೆ ಪ್ರಸನ್ನ ಮತ್ತು ಸ್ನೇಹಿತರಿಂದ ಬಾರಂದೂರು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗು ಪ್ರಸಾದ ವಿನಿಯೋಗ ಮತ್ತು ಮಧ್ಯಾಹ್ನ ೧ಕ್ಕೆ ಮಂಗೋಟೆ ರುದ್ರೇಶ್ ಮತ್ತು ಸಾಗರ್ ಅವರಿಂದ ತಾಲೂಕಿನ ದೊಡ್ಡೇರಿ, ಉದ್ದಾಮ ಕ್ಷೇತ್ರ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದರು. 
ಈ ನಡುವೆ ಬೆಳಿಗ್ಗೆ ೮ ಗಂಟೆಗೆ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ತಿಂಡಿ ವ್ಯವಸ್ಥೆ, ೧೦ ಗಂಟೆಗೆ ತಾಲೂಕಿನ ಹೊಸಮನೆ, ಗುಡ್ಡದ ನೇರಲೇಕೆರೆ, ಸಿಂಗನಮನೆ ಮತ್ತು ಕೂಡ್ಲಿಗೆರೆ ಗ್ರಾಮಗಳ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಪೆನ್ ವಿತರಣೆ, ಮಧ್ಯಾಹ್ನ ನ್ಯೂಟೌನ್ ತರಂಗ ಕಿವುಡು ಮಕ್ಕಳ ಶಾಲೆ ಹಾಗು ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೊಮ್ಮನಕಟ್ಟೆ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ ಹಾಗು ಬೈಪಾಸ್ ರಸ್ತೆ, ಎಂಪಿಎಂ ಬಡಾವಣೆಯ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಸಿಹಿ ಮತ್ತು ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದರು.  
ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಹುಟ್ಟುಹಬ್ಬ ಆಚರಣೆ, ಮಹಾತ್ಮಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ೬ಕ್ಕೆ ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆ ಹಾಗು ರಾತ್ರಿ ೮ಕ್ಕೆ ನ್ಯೂಟೌನ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ. ಆನಂದಕುಮಾರ್, ದುಗ್ಗೇಶ್ ತೇಲ್ಕರ್, ಹನುಮಂತನಾಯ್ಕ, ಮಂಗೋಟೆ ರುದ್ರೇಶ್, ಬಿ.ಜಿ ರಾಮಲಿಂಗಯ್ಯ, ಛಲವಾದಿ ಕೃಷ್ಣ, ಎಂ. ಮಂಜುನಾಥ್, ರಘುರಾವ್, ಚನ್ನೇಶ್, ವಿನೋದ್ ಕುಮಾರ್, ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಂಗಳವಾರ, ಆಗಸ್ಟ್ 12, 2025

ಆ.೧೭ರಂದು ತಾರೀಕಟ್ಟೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ತನ್ನ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ(ಸಿಎಸ್‌ಆರ್) ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ  ಆ.೧೭ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ. 
    ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗು ತಾರೀಕಟ್ಟೆ ಶ್ರೀರಾಮ ದೇವಸ್ಥಾನ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ತಾರೀಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. 
    ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ನೇತ್ರ, ಹೃದಯ, ಮೂಳೆ, ದಂತ ಹಾಗು ಮಧುಮೇಹ ತಪಾಸಣೆ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಗುವುದು. ಅಲ್ಲದೆ ಉಚಿತ ಔಷಧಿ ಸಹ ವಿತರಿಸಲಾಗುವುದು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಳ್ಳುವಂತೆ ಕಾರ್ಖಾನೆ ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಕೋರಿದ್ದಾರೆ.  

ವಿವಿಧೆಡೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. 
ಭದ್ರಾವತಿ: ನಗರದ ವಿವಿಧೆಡೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ರಾಯರ ದರ್ಶನ ಪಡೆದರು. 
ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಬೃಂದಾವನ ವಿವಿಧ ಫಲಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಸುಮಾರು ೧೧.೩೦ರ ವೇಳೆಗೆ ರಾಯರ ರಥೋತ್ಸವ ಆರಂಭಗೊಂಡು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೂ ಸಾಗಿ ಪುನಃ ಮಠಕ್ಕೆ ಬಂದು ತಲುಪಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ರಾಯರಿಗೆ ಜಯಘೋಷಗಳನ್ನು ಹಾಕಿ ಸಂಭ್ರಮಿಸಿದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ನೆರವೇರಿತು. 


ಭದ್ರಾವತಿ ಜನ್ನಾಪುರ ಶ್ರೀಮದ್ ಜಯತೀರ್ಥಗುರುಸಾರ್ವಭೌಮರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ೩ ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಮಂಗಳವಾರ ರಾಯರ ರಥೋತ್ಸವದ ನಂತರ ಶ್ರೀಮಠದಲ್ಲಿರುವ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. 
    ಶ್ರೀ ಗುರುರಾಜ ಸೇವಾಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ ಹಾಗು ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ನಿರಂಜನಾಚಾರ್ಯ, ಮಾಧುರಾವ್, ಗಿರಿ ಆಚಾರ್, ಪವನ್ ಕುಮಾರ್ ಉಡುಪ, ಪ್ರಮೋದ್ ಕುಮಾರ್, ಶುಭ ಗುರುರಾಜ್, ವಿದ್ಯಾನಂದನಾಯಕ, ಪ್ರಶಾಂತ್, ಶಶಿಧರ್, ಕೆ.ಎಸ್ ಸುಧೀಂದ್ರ ಸೇರಿದಂತೆ ಶ್ರೀ ಮಠದ ಸೇವಾಕರ್ತರು ಉಪಸ್ಥಿತರಿದ್ದರು. 
    ಹಳೇನಗರ, ಭೂತನಗುಡಿ, ಚಾಮೇಗೌಡ ಏರಿಯಾ, ಕೇಶವಪುರ ಬಡಾವಣೆ, ಮಾಧವನಗರ, ಹೊಸಮನೆ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. 
    ಜನ್ನಾಪುರ ಶ್ರೀಮದ್ ಜಯತೀರ್ಥಗುರುಸಾರ್ವಭೌಮರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ೩ ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಪ್ರತಿ ದಿನ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ-ಅಷ್ಟೋತ್ತರ ಪಾರಾಯಣ, ವಿದ್ವಾಂಸರಿಂದ ಉಪನ್ಯಾಸ, ಮಹಾಪೂಜೆ, ನೈವೇದ್ಯ, ಅಲಂಕಾರ, ಬ್ರಾಹ್ಮಣರ ಪೂಜೆ, ಹಸ್ತೋದಕ, ಮಹಾಮಂಗಳಾರತಿ, ಭಜನೆ, ಸಾಂಸ್ಕೃತಿ ಕಾರ್ಯಕ್ರಮಗಳು, ಪಲ್ಲಕ್ಕಿ ಸೇವೆ, ಅಷ್ಠಾವಧಾನ ಮತ್ತು ತೊಟ್ಟಿಲು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು. 


ಭದ್ರಾವತಿ ಜನ್ನಾಪುರ ಶ್ರೀಮದ್ ಜಯತೀರ್ಥಗುರುಸಾರ್ವಭೌಮರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ೩ ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಮಂಗಳವಾರ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. 
    ಮಂಗಳವಾರ ಮಧ್ಯಾಹ್ನ ಶ್ರೀ ಗುರುರಾಜರ ದಿವ್ಯ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಶ್ರೀ ರಾಘವೇಂದ್ರ ಗುರುಸಾರ್ವಭೌಮ ಸೇವಾ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸೇವಾಕರ್ತರು ಉಪಸ್ಥಿತರಿದ್ದರು. 
    ಜನ್ನಾಪುರ, ಗಣೇಶ್ ಕಾಲೋನಿ, ವಿದ್ಯಾಮಂದಿರ, ಹುತ್ತಾ ಕಾಲೋನಿ, ವೇಲೂರು ಶೆಡ್, ಹುಡ್ಕೋ ಕಾಲೋನಿ, ನ್ಯೂಟೌನ್, ಆಂಜನೇಯ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

ಮಾಜಿ ಮುಖ್ಯಮಂತ್ರಿ ಡಿ. ದೇವರಾಜಅರಸು ಜನ್ಮದಿನಾಚರಣೆ ಪೂರ್ವಭಾವಿ ಸಭೆ

ಪ್ರತಿಭಾ ಪುರಸ್ಕಾರ, ಹಿರಿಯ ಸಮಾಜವಾದಿ ಹೋರಾಟಗಾರರಿಗೆ ಸನ್ಮಾನ 

ಭದ್ರಾವತಿ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ದಿವಂಗತ ಡಿ. ದೇವರಾಜ ಅರಸು ಜನ್ಮ ದಿನಾಚರಣೆ ಅದ್ದೂರಿಯಾಗಿ ಆಚರಿಸಲು ಪೂರ್ವಭಾವಿ ಸಭೆ ನಡೆಸಲಾಯಿತು.      
ಭದ್ರಾವತಿ : ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆ.೨೦ರಂದು ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜಅರಸುರವರ ಜನ್ಮದಿನಾಚರಣೆ ಅದ್ದೂರಿಯಾಗಿ ಆಚರಿಸಿಲು ತೀರ್ಮಾನಿಸಲಾಯಿತು.
  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲು ಹಾಗೂ ಹಿರಿಯ ಹೋರಾಟಗಾರರಾದ ಸಮಾಜವಾದಿ ಕಡಿದಾಳ ಶಾಮಣ್ಣ ಅಥವಾ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ತಾಲೂಕಿನ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಸಭೆ ನಿರ್ಣಯ ಕೈಗೊಂಡಿತು.
  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಪೌರಾಯುಕ್ತ ಕೆ.ಎನ್ ಹೇಮಂತ್, ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶೈಲಜಾ, ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಈಶ್ವರಪ್ಪ, ವಿನೋದ್‌ಕುಮಾರ್, ತೀರ್ಥೇಶ್, ವೈ. ಶಶಿಕುಮಾರ್, ಶಿವುಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

     



ಸೋಮವಾರ, ಆಗಸ್ಟ್ 11, 2025

ಕುಟುಂಬ ವೈದ್ಯರಿಂದ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಲಭಿಸುತ್ತದೆ : ಡಾ. ಬಿ.ಎಸ್ ಶ್ರೀನಾಥ್

ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಕ್ಯಾನ್ಸರ್ ಚಿಕಿತ್ಸೆ, ಪರಿಣಾಮ, ಅದರ ನಿಯಂತ್ರಣ. ಜೀವನ ನಿರ್ವಹಣೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯ ಡಾ.ಬಿ.ಎಸ್ ಶ್ರೀನಾಥ್ ಭಾಗವಹಿಸಿ ಮಾತನಾಡಿದರು.
    ಭದ್ರಾವತಿ: ಕುಟುಂಬ ವೈದ್ಯರುಗಳು ರೋಗಿಗಳ ರೋಗ ಪತ್ತೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಮೂಲಕ ಅವರ ಚಿಕಿತ್ಸೆಗೆ ಸರಿಯಾದ ಮಾರ್ಗದರ್ಶನ ಹಾಗು ವೆಚ್ಚ ಕಡಿತ ಮಾಡುವ ವಿಚಾರದಲ್ಲಿ ಸೂಕ್ತ ಮಾಹಿತಿ ನೀಡುತ್ತಾರೆಂದು ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯ ಡಾ.ಬಿ.ಎಸ್ ಶ್ರೀನಾಥ್ ಹೇಳಿದರು.
    ಅವರು ನಗರದ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಕ್ಯಾನ್ಸರ್ ಚಿಕಿತ್ಸೆ, ಪರಿಣಾಮ, ಅದರ ನಿಯಂತ್ರಣ. ಜೀವನ ನಿರ್ವಹಣೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಪ್ರಾರಂಭಿಕ ಹಂತದಲ್ಲಿಯೇ ಶೇ.೬೦ರಷ್ಟು ರೋಗದ ಮೂಲವನ್ನು ಪತ್ತೆಹಚ್ಚಿ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸಬಹುದು. ಆದರೆ ಚಿಕಿತ್ಸೆ ಪಡೆಯುವ ವಿಚಾರದಲ್ಲಿ ರೋಗಿಗಳು ತಾಳ್ಮೆವಹಿಸುವುದು ಬಹಳ ಮುಖ್ಯವಾಗಿದೆ. ರೋಗ ಗುಣಮುಖವಾಗಿಲ್ಲ ಎಂದು ಪದೇ ಪದೇ ವೈದ್ಯರುಗಳನ್ನು ಬದಲಾಯಿಸಿದರೆ ರೋಗದ ಸಮಗ್ರ ಮಾಹಿತಿ ಅರಿಯಲು ಸಾಧ್ಯವಾಗದ ಕಾರಣ ಚಿಕತ್ಸೆ ವಿಳಂಬ ಹಾಗು ದುಬಾರಿಯಾಗುತ್ತಾ ಹೋಗುತ್ತದೆ ಎಂದರು.  
    ಸಾಮಾನ್ಯ ವರ್ಗದ ಜನರು ತಮ್ಮ ಆರೋಗ್ಯದ ಬಗ್ಗೆ ತಾವೇ ಮೊದಲು ಕಾಳಜಿ ವಹಿಸಬೇಕು. ಆರೋಗ್ಯವಂತ ಜೀವನ ನಡೆಸಬೇಕು. ಆರೋಗ್ಯದ ಬಗೆಗಿನ ಸಾಮಾನ್ಯ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು. ರೋಗ ಕಾಣಿಸಿಕೊಂಡ ನಂತರ ಚಿಕಿತ್ಸೆ ದುಬಾರಿ ಎಂದು ನರಳುವುದು ಸರಿಯಲ್ಲ. ಹಣವಂತರೂ ಸಹ ಹಣ ಇದ್ದರೂ ಸರಿಯಾದ ಚಿಕಿತ್ಸೆ ಪಡೆಯಯುವಲ್ಲಿ ಹಿಂದೇಟು ಹಾಕುತ್ತಾರೆ. ಒಟ್ಟಾರೆ ಎಲ್ಲರೂ ಆರೋಗ್ಯದ ಬಗ್ಗೆ ಜಾಗೃತರಾದಾಗ ಮಾತ್ರ ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು. 
       ವ್ಯಕ್ತಿಯ ದೇಹದಲ್ಲಿನ ಜೀವಕೋಶಗಳು ಆರೋಗ್ಯಕರ ನಿಯಂತ್ರಣದಲ್ಲಿ ಬೆಳೆದು ವಿಭಜಿಸುತ್ತವೆ, ಸಾಯುತ್ತವೆ. ಈ ಪ್ರಕ್ರಿಯೆಯಲ್ಲಿ ಲೋಪವಾಗಿ ಅಸಹಜ ಕೋಶಗಳ ಅನಿಯಂತ್ರಿತ ಬೆಳವಣಿಗೆ ಉಂಟಾಗಿ ಅದರ ಹರಡುವಿಕೆ ಕಾರ್ಯ ನಡೆದಾಗ ಕೆಟ್ಟ ಕಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ. ಇದನ್ನು ಕೂಡಲೆ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಅದು ದೇಹದ ಇತರ ಹತ್ತಿರದ ಅಂಗಾಂಶಗಳನ್ನು ಆಕ್ರಮಿಸಬಹುದು ಅಥವಾ ದೂರದ ಅಂಗಗಳಿಗೂ ಹರಡುವ ಮೂಲಕ ಕ್ಯಾನ್ಸರ್ ಉಂಟಾಗಿ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟಾಗುತ್ತದೆ ಎಂದರು.
    ಬೆಂಗಳೂರಿನ ಶಂಕರಪುರಂನಲ್ಲಿ ಶೃಂಗೇರಿ ಶ್ರೀ ಶಂಕರ ಮಠದ ಸಹಕಾರದೊಂದಿಗೆ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿತವಾಗಿದೆ. ಇಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಅತ್ಯತ್ತಮ ಗುಣಮಟ್ಟದ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಕ್ಯಾನ್ಸರ್ ಅರಿವು ಮತ್ತು ತಪಾಸಣೆ ಮೂಲಕ ೬.೫ ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. ೨.೫ ಲಕ್ಷ ಉಚಿತ ಸ್ಕ್ರೀನಿಂಗ್ ಮತ್ತು ೧೪೬ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿದೆ. ೮೩ ಬೆಂಬಲಿತ ಪ್ರಕರಣಗಳು ಸೇರಿದಂತೆ ೩೬.೩೮೭ ಶಸ್ತ್ರಚಿಕಿತ್ಸೆಗಳು, ೧೫೭ ಬಿಎಂಟಿನಡೆಸಲಾಗಿದೆ ಎಂದರು. 
    ಸಂಶೋಧನೆ ಜೊತೆಗೆ ಶ್ರೀ ಶಂಕರ ನ್ಯಾಷನಲ್ ಸೆಂಟರ್ ಫಾರ್ ಕ್ಯಾನ್ಸರ್ ಪ್ರಿವೆಂಕ್ಷನ್ ಅಂಡ್ ರಿಸರ್ಚ್ ಮೂಲಕ ಅನ್ವಯಿಕ ರೋಗ ನಿರ್ಣಯ, ಆರಂಭಿಕ ಪತ್ತೆ ಕಾರ್ಯ ಗ್ರಾಮೀಣ ಮಾದರಿಗಳಲ್ಲಿ ಬೆಂಚ್ ಟು ಬೆಡ್ ಸೈಡ್ ಅವಿಷ್ಕಾರ ನಿರಂತರವಾಗಿ ನಡೆಸುತ್ತಿದೆ. ಇದಕ್ಕೆ ಅಮೇರಿಕ ಮೇಯೋ ಕ್ಲಿನಿಕ್, ಲಂಡನ್ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗಳ ಜೊತೆಗಿನ ಸಹಕಾರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಜಾಗತೀಕ ಹೆಜ್ಜೆ ಗುರುತನ್ನು ಮೂಡಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎಂದರು. 
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಭವಿಷ್ಯ ರೂಪಿಸಲಾಗುತ್ತಿದೆ. ಕೇವಲ ಔಷಧ ಚಿಕಿತ್ಸೆ ಮಾತ್ರ ನೀಡದೆ, ಅಪ್ತ ಸಮಾಲೋಚನೆ, ಧ್ಯಾನ, ಯೋಗ, ಪ್ರಾಣಾಯಾಮ ಇತ್ಯಾದಿಗಳನ್ನು ಹೇಳಿಕೋಡುವ ಮೂಲಕ ರೋಗಿಗೆ ಆತ್ಮಸ್ಥೈರ್ಯ ತುಂಬುವ ಮಾನವೀಯ ಕಾರ್ಯ ಮಾಡುತ್ತಿದೆ. ಆ ಮೂಲಕ ಕ್ಯಾನ್ಸರ್ ರೋಗಿಗೆ ತನ್ನ ಬದುಕಿನಲ್ಲಿ ಭವಿಷ್ಯದ ಬಗ್ಗೆ ಹೊಸ ಆಶಾಕಿರಣ ಮೂಡಿಸುತ್ತಿದೆ ಎಂದರು.
    ಎಲ್ಲದಕ್ಕಿಂತ ಬಹುಮುಖ್ಯವಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹಾಗು ಇದರ ಇತ್ತೀಚಿನ ಅವಿಷ್ಕಾರಗಳ ಬಗ್ಗೆ ವೈದ್ಯರುಗಳಿಗೆ ಸಾಕಷ್ಟು ತಿಳುವಳಿಕೆ ಇರಬೇಕು. ಕ್ಯಾನ್ಸರ್ ತಂತ್ರಜ್ಞಾನದ ಬಗ್ಗೆ, ಅದರ ಪರಿಕರಗಳ ಬಗ್ಗೆ, ನಿರ್ವಹಣೆಯ ಬಗ್ಗೆ, ಆಸ್ಪತ್ರೆಯ ಪರಿಸರ, ಸ್ವಚ್ಚತೆ, ರೋಗ ಹರುಡುವ ಬಗ್ಗೆ ಮುಂಜಾಗ್ರತೆ ಎಷ್ಟು ಎಚ್ಚರವಹಿಸಿದರೂ ಸಾಲುತ್ತಿಲ್ಲ. ಐಸಿಯುನಂತಹ ಘಟಕಗಳಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಮೂಲಕ ಸೋಂಕು ಉಂಟಾಗಿ ರೋಗಿಗೆ ಖಾಯಿಲೆ ಉಲ್ಬಣ ಮಾಡುತ್ತದೆ. ಈ ಕಾರಣ ಚಿಕಿತ್ಸೆ ನೀಡಿದರೂ ರೋಗ ಸರಿಯಾಗಿ ನಿರ್ಮೂಲನೆಯಾಗುತ್ತಿಲ್ಲ. ಸೋಂಕುಗಳು ಉತ್ಪತ್ತಿಯಾಗಿ ಹರಡುತ್ತದೆ. ಬೇರೆ ಆಸ್ಪತ್ರೆಯಲ್ಲಿ ಈ ಪ್ರಮಾಣ ೮ ರಿಂದ ೧೬ರಷ್ಟು ಇದ್ದರೆ ಈ ಆಸ್ಪತ್ರೆಯಲ್ಲಿ ಶೇ.೧ರಷ್ಟು ಇದೆ. ಇದಕ್ಕೆ ಮುಖ್ಯ ಕಾರಣ ಸೋಂಕುಗಳು ಹರಡದಂತೆ ತೆಗೆದುಕೊಂಡ ಕ್ರಮಗಳು ಮುಖ್ಯ ಕಾರಣ. ಈ ಸ್ವಚ್ಚತಾ ಕಾರ್ಯಕ್ಕೆ ಹಣ ಹೆಚ್ಚು ಖರ್ಚಾಗುತ್ತದೆ. ಆದರೂ ರೋಗಿಯ ಹಿತದೃಷ್ಟಿಯಿಂದ ಇದು ಅನಿವಾರ್ಯ. ಇದರಿಂದ ಪರೋಕ್ಷವಾಗಿ ರೋಗಿಯ ಚಿಕಿತ್ಸೆಯ ವೆಚ್ಚದಲ್ಲಿ ಖರ್ಚಿನ ಹೊರೆ ಕಡಿಮೆಯಾಗುತ್ತದೆ  ಎಂದರು.
    ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹುಹಂತದ ಪರೀಕ್ಷೆಗಳನ್ನು ನಡೆಸಬೇಕು. ಕೇವಲ ಒಬ್ಬ ತಜ್ಞ ವೈದ್ಯರಿಂದ ಇದಕ್ಕೆ ಚಿಕಿತ್ಸೆ ನೀಡುವುದಿಲ್ಲ. ಅದರಲ್ಲಿ ಆಂಕೋಲೋಜಿಸ್ಟ್, ರೇಡಿಯಾಜಿಸ್ಟ್, ಪೆಥಾಲಜಿಸ್ಟ್, ಶಸ್ತ್ರ ಚಿಕಿತ್ಸಕರ ಟ್ಯೂಮರ್ ಬೋರ್ಡ್ ತಂಡಗಳ ವೈದ್ಯರುಗಳು ಸೇರಿ ರೋಗಿಯ ರೋಗದ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ತೀರ್ಮನಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಚಿಕಿತ್ಸಾ ವಿಧಾನ ತಿಳಿಸಿದರು.
    ತಜ್ಞ ವೈದ್ಯರುಗಳಾದ ಡಾ. ರೇಖಾ, ಡಾ. ವಿನಾಯಕ, ಡಾ. ಎಂ. ರವೀಂದ್ರನಾಥ ಕೋಠಿ, ಡಾ. ರಾಮಕೃಷ್ಣ, ಡಾ. ಸ್ವರ್ಣಲತಾ, ಡಾ. ಪ್ರೀತಿ ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಮಿಯಾನ ಕೆಲಸದಿಂದ ಸಾಹಿತ್ಯ ಕಡೆಗೆ ಸಂತೋಷ್ ಎನ್ ಶೆಟ್ಟಿ

ಆ.೧೫ರಂದು ಬೆಂಗಳೂರಿನಲ್ಲಿ ೩ ಹಾಡುಗಳ ಬಿಡುಗಡೆ 

ಸಂತೋಷ್ ಎನ್ ಶೆಟ್ಟಿ 
    ಭದ್ರಾವತಿ : ಶಾಮಿಯಾನ ಕೆಲಸದಿಂದ ಇದೀಗ ಸಾಹಿತ್ಯದ ಕಡೆಗೆ ಒಲವು ತೋರಿಸಿರುವ ನಗರದ ಉಜ್ಜನಿಪುರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್ ಎನ್ ಶೆಟ್ಟಿ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯದ ೩ ಹಾಡುಗಳು(ಆಲ್ಬಮ್ ಸಾಂಗ್) ಆ.೧೫ರಂದು ಬಿಡುಗಡೆಗೊಳ್ಳುತ್ತಿದೆ. 
  ಬೆಂಗಳೂರಿನ ಮಾಗಡಿ ರೋಡ್, ಜಿಟಿ ಮಾಲ್‌ನಲ್ಲಿ ಸಂಜೆ ೬೦೩ಕ್ಕೆ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಪ್ರಪ್ರಥಮ ಬಾರಿಗೆ ಬಿಡುಗಡೆಗೊಳ್ಳುತ್ತಿರುವ ಹಾಡುಗಳಿಗೆ ಎಲ್ಲರ ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹವಿರಲಿ ಎಂದು ಸಂತೋಷ್ ಎನ್ ಶೆಟ್ಟಿ ಕೋರಿದ್ದಾರೆ. 
    ವಸಂತ ಮಾಧವ ಭದ್ರಾವತಿಯವರ ಸಂಗೀತ ಮತ್ತು ಗಾಯನದಲ್ಲಿ ಮೊದಲ ಹಾಡು `ತುತ್ತು ನೀಡುವ ಹೆತ್ತ ತಾಯಿಯು', ಬೆಂಗಳೂರಿನ ಎ.ಟಿ ರವೀಶ್ ಸಂಗೀತದಲ್ಲಿ ಎರಡನೇ ಹಾಡು `ಗಣೇಶ ಡಿಜೆ ಹಾಡು' ಮತ್ತು  ಮೂರನೇ ಹಾಡು `ಪೋಲ್ಸ್ ಪೆಂಡಾಲ್, ಪೈಪ್ ಪೆಂಡಾಲ್' ಸಂತೋಷ್ ಎನ್. ಶೆಟ್ಟಿ ಸಾಹಿತ್ಯ ಹಾಗು ನಿರ್ಮಾಣದಲ್ಲಿ ಬಿಡುಗಡೆಗೊಳ್ಳುತ್ತಿರುವ ಹಾಡುಗಳಾಗಿವೆ. 
    ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಸಂತೋಷ್ ಎನ್ ಶೆಟ್ಟಿ ಶಾಮಿಯಾನ ಕೆಲಸದೊಂದಿಗೆ ಸಾಹಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು, ಈಗಾಗಲೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕುರಿತು ಭಕ್ತಿ ಗೀತೆಗಳ ಧ್ವನಿಸುರಳಿ ಸಹ ಬಿಡುಗಡೆಗೊಳಿಸಿದ್ದಾರೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗಡೆಯವರು ಧ್ವನಿಸುರಳಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
    ಇದೀಗ ಕನ್ನಡ ಚಲನಚಿತ್ರ ರಂಗಕ್ಕೆ ಚಿತ್ರ ಸಾಹಿತಿಯಾಗಿ ಪ್ರವೇಶಿಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನದಲ್ಲಿದ್ದು, ಈಗಾಗಲೇ ಕನ್ನಡ ಚಲನಚಿತ್ರ ರಂಗದ ಪ್ರಸಿದ್ದ ಸಾಹಿತಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಂಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಕನ್ನಡಿಗರ  ಮೆಚ್ಚುಗೆ, ಅಭಿಮಾನ, ಪ್ರೋತ್ಸಾಹ ಹೆಚ್ಚಿದ್ದಾಗಿದೆ.