Monday, May 11, 2020

ಅಗ್ನಿಶಾಮಕ ಇಲಾಖೆ ಸಹಕಾರದೊಂದಿಗೆ ೨ನೇ ಹಂತದಲ್ಲಿ ಔಷಧಿ ಸಿಂಪಡಣೆ

ಭದ್ರಾವತಿ, ಮೇ. ೧೧: ಜನದಟ್ಟಣೆ ಅಧಿಕಗೊಳ್ಳುವ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ೨ನೇ ಹಂತದ ಔಷಧಿ ಸಿಂಪಡಣೆ ಕಾರ್ಯ ಸೋಮವಾರದಿಂದ ನಡೆಯುತ್ತಿದೆ.
ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಉಲ್ಬಣಗೊಂಡ ಪರಿಣಾಮ ಆರಂಭಿಕ ಹಂತದಲ್ಲಿಯೇ ಸ್ಥಳೀಯ ಸಂಸ್ಥೆಗಳು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಒಂದು ಹಂತದಲ್ಲಿ  ನೀರಿನೊಂದಿಗೆ ಸೋಡಿಯಂ ಹೈಪೋ ಕ್ಲೋರೈಟ್ ಮಿಶ್ರಣದ ಔಷಧಿ ಸಿಂಪಡಣೆ ಕಾರ್ಯ ಕೈಗೊಳ್ಳಲಾಗಿತ್ತು.
ಇದೀಗ ೨ನೇ ಹಂತವಾಗಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಸಿಂಪಡಣೆ ಕಾರ್ಯ ನಡೆಯಿತು. ಘಟಕ ವ್ಯವಸ್ಥಾಪಕಿ ಅಂಬಿಕಾ ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಮಧ್ಯಾಹ್ನ ಚನ್ನಗಿರಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಔಷಧಿ ಸಿಂಪಡಣೆ ಕಾರ್ಯ ನಡೆಯಿತು. ಸಮಿತಿ ಅಧ್ಯಕ್ಷ ಲವೇಶ್‌ಗೌಡ, ಸದಸ್ಯ ಡಾ. ಎನ್‌ಟಿಸಿ ನಾಗೇಶ್, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.





Virus-free. www.avast.com

Sunday, May 10, 2020

ಭದ್ರಾವತಿ : ಉಕ್ಕಿನ ನಗರಕ್ಕೆ ಕೊರೋನಾ ವೈರಸ್‌ ಭೀತಿ


ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ಗೆ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲ್ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಕ್ವಾರಂಟೈನ್ ಆಗಿ ಬಳಕೆ ಮಾಡಿಕೊಳ್ಳುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. 
ಭದ್ರಾವತಿ, ಮೇ. ೧೦: ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲ್ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಹೊರ ರಾಜ್ಯಗಳಿಂದ ಬಂದ ತಾಲೂಕಿನ ನಿವಾಸಿಗಳನ್ನು ನಿಗಾದಲ್ಲಿರಿಸಲು ಕ್ವಾರಂಟೈನ್ ಆಗಿ ಸಿದ್ದಗೊಳಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. 
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ನಿವಾಸಿಗಳು ರಾತ್ರೋರಾತಿ ಏಕಾಏಕಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ನಗರಸಭೆ ಸದಸ್ಯ ಗುಣಶೇಖರ್, ಮುಖಂಡರಾದ ಉಮೇಶ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ನಿಲಯಗಳನ್ನು ಬಳಸಿಕೊಳ್ಳಬಾರದು. ಜನವಸತಿ ಪ್ರದೇಶವಾಗಿರುವ ಕಾರಣ ಬೇರೆಡೆ ಕ್ವಾರಂಟೈನ್ ತೆರೆಯುವಂತೆ ಆಗ್ರಹಿಸಿದರು. ಜಿಲ್ಲಾಡಳಿತ ಬೇರೆಡೆ ಕ್ವಾರಂಟೈನ್ ತೆರೆಯುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.  

ಆಹಾರ ತಯಾರಿಕೆಗೆ ಸಹಕರಿಸಿದವರಿಗೆ ಸನ್ಮಾನ, ಕೃತಜ್ಞತೆ

ಭದ್ರಾವತಿಯಲ್ಲಿ ಪ್ರತಿದಿನ ಮಧ್ಯಾಹ್ನ ಕಡುಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ಕೆ ಸಹಕರಿಸಿದರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. 
ಭದ್ರಾವತಿ: ಕೊರೋನಾ ವೈರಸ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಪ್ರತಿ ದಿನ ಮಧ್ಯಾಹ್ನ ಆಹಾರ ತಯಾರಿಸಿ ಪೂರೈಕೆ ಮಾಡುತ್ತಿರುವ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಸಹ ಸೇವಾ ಕಾರ್ಯ ಕೈಗೊಂಡಿತು.
ಲಾಕ್‌ಡೌನ್ ಆರಂಭಗೊಂಡಾಗಿನಿಂದಲೂ ಸಂಘದ ವತಿಯಿಂದ ಪ್ರತಿದಿನ ಮಧ್ಯಾಹ್ನ ಸುಮಾರು ೧೨೦ ಮಂದಿಗೆ ಸಾಕಾಗುವಷ್ಟು ಆಹಾರ ತಯಾರಿಸಿ ವಿತರಿಸಲಾಗುತ್ತಿದ್ದು, ಹಳೇನಗರದ ಹೊಸಸೇತುವೆ ರಸ್ತೆಯ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಶಾರದ ಭಜನಾ ಮಂಡಳಿ  ಒಂದು ದಿನದ ಆಹಾರ ತಯಾರಿಕೆ ಕೈಜೋಡಿಸಿ ಸಂಘದ ಕಾರ್ಯಕ್ಕೆ ಸಹಕರಿಸಿದೆ.
ಸಂಘದ ವತಿಯಿಂದ ಇದುವರೆಗೂ ಅಡುಗೆ ತಯಾರಿಕೆಗೆ ಸಹಕರಿಸಿದ ಅಡುಗೆ ತಯಾರಕರಾದ ಕುಮಾರ್ ಮತ್ತು ಕೃಷ್ಣ ಭಟ್ ಹಾಗೂ ಶ್ರೀ ಶಾರದ ಭಜನಾ ಮಂಡಳಿಯವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ವಿಲ್ಸನ್ ಬಾಬು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಅರಳಿಕಟ್ಟೆ ಯುವಕರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.  

Saturday, May 9, 2020

ಮಾಸ್ಕ್ ಧರಿಸದೆ ಸರ್ಕಾರಿ ಆಸ್ಪತ್ರೆ ಪ್ರವೇಶಿದರೆ ದಂಡ..!

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಮಾಸ್ಕ್ ಧರಿಸದೆ ಆಸ್ಪತ್ರೆ ಪ್ರವೇಶಿಸಿದವರಿಗೆ ದಂಡ ವಿಧಿಸಲಾಯಿತು. 
ಭದ್ರಾವತಿ, ಮೇ. ೯: ಇನ್ನು ಮುಂದೆ ಯಾರಾದರೂ ಮಾಸ್ಕ್ ಧರಿಸದೆ ಸಾರ್ವಜನಿಕ ಆಸ್ಪತ್ರೆ ಪ್ರವೇಶಿಸಿದರೆ ದಂಡ ಕಟ್ಟಬೇಕಾಗುತ್ತದೆ. ಮಾಸ್ಕ್ ಧರಿಸದವರ ವಿರುದ್ಧ ದಂಡ ಹಾಕುವ ಅಧಿಕಾರ ಆರೋಗ್ಯ ಇಲಾಖೆಗೂ ಇದೆ.
ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರದಿಂದ ಮಾಸ್ಕ್ ಧರಿಸದೆ ಆಸ್ಪತ್ರೆಗೆ ಬರುವವರಿಗೆ ೫೦ ರು. ದಂಡ ವಿಧಿಸಲಾಗುತ್ತಿದೆ. ಒಟ್ಟು ೧೦ ಮಂದಿಗೆ ಮಂದಿಗೆ ದಂಡ ವಿಧಿಸಲಾಗಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಡಿ. ದರ್ಜೆ ನೌಕರರಾದ ಮುನಿರಾಜ್, ಪ್ರವೀಣ್, ಸೋಮು ಹಾಗೂ ಪೊಲೀಸ್ ಇಲಾಖೆ ವಾಹನ ಚಾಲಕ ಪ್ರಶಾಂತ್ ಪಾಲ್ಗೊಂಡಿದ್ದರು.



೨,೨೦೦ ರು. ಮೌಲ್ಯದ ಅಕ್ರಮ ಮದ್ಯ ವಶ

ಭದ್ರಾವತಿ: ತಾಲೂಕಿನ ಅರಳಿಕೊಪ್ಪ ಗ್ರಾಮದ ಕಿರಣಿ ಅಂಗಡಿಯೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.
ಕಿರಣಿ ಅಂಗಡಿ ಮಾಲೀಕ ಮಹಾದೇವಪ್ಪ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ವಿಂಡ್‌ಸರ್ ೧೧ ಪೌಚ್, ಚಾಯ್ಸ್ ೧೧ ಪೌಚ್, ಓರಿಜಿನಲ್ ಚಾಯ್ಸ್ ೫೧ ಪೌಚ್ ಸೇರಿದಂತೆ ಒಟ್ಟು ೨,೨೦೦ ರು. ಮೌಲ್ಯದ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾದೇವಪ್ಪ ತಲೆ ಮರೆಸಿಕೊಂಡಿದ್ದು, ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕೋಟ್ಬಾ ಕಾಯ್ದೆಯಡಿ ದಾಳಿ : ೨,೮೦೦ ರು. ವಶ

ಭದ್ರಾವತಿ ತಾಲೂಕಿನ ಮೈದೊಳಲು, ಆನವೇರಿ, ಮಲ್ಲಾಪುರ ಗ್ರಾಮಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.  ಎಂ.ಆರ್. ಗಾಯತ್ರಿ ನೇತೃತ್ವದಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ಕೋಟ್ಬಾ ಕಾಯ್ದೆಯಡಿ ದಾಳಿ ಶನಿವಾರ ನಡೆಸಲಾಯಿತು.  
ಭದ್ರಾವತಿ, ಮೇ. ೯: ಕೋಟ್ಬಾ ಕಾಯ್ದೆಯಡಿ ತಾಲೂಕಿನ ಗ್ರಾಮೀಣ ಪ್ರದೇಶದ ಅಂಗಡಿ ಮುಂಗಟ್ಟುಗಳ ಮೇಲೆ ಶನಿವಾರ ದಾಳಿ ನಡೆಸಿ ಒಟ್ಟು ೧೬ ಪ್ರಕರಣಗಳನ್ನು ದಾಖಲಿಸಿಕೊಂಡು ೨,೮೦೦ ರು. ದಂಡ ವಸೂಲಾತಿ ಮಾಡಲಾಗಿದೆ. 
ತಾಲೂಕಿನ ಮೈದೊಳಲು, ಆನವೇರಿ, ಮಲ್ಲಾಪುರ ಗ್ರಾಮಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.  ಎಂ.ಆರ್. ಗಾಯತ್ರಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್, ಕಿರಿಯ ಆರೋಗ್ಯ ಸಹಾಯಕರಾದ ಆನಂದಮೂರ್ತಿ, ಉಮೇಶ್ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆ ಸಹಾಯಕ ಠಾಣಾಧಿಕಾರಿ, ಕೃಷ್ಣ ನಾಯ್ಕ,  ತಂಬಾಕು ನಿಯಂತ್ರಣ ವಿಭಾಗ ಹೇಮಂತ್‌ರಾಜ್ ಅರಸ್, ಚಾಲಕರಾದ ಪ್ರಶಾಂತ್ ಮತ್ತು ಭರತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಟರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆ ಕುರಿತು ಸಾರ್ವಜನಿಕರು ಹಾಗೂ ತಂಬಾಕು ಮಾರಾಟಗಾರರಿಗೆ ಅರಿವು ಮೂಡಿಸಲಾಯಿತು.