Monday, December 21, 2020

ನಗರ ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯರಿಗೆ ಪೌರಾಯುಕ್ತ ಮನೋಹರ್ ಅಭಿನಂದನೆ

ಭದ್ರಾವತಿ ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
  ಭದ್ರಾವತಿ, ಡಿ. ೨೧: ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನಾರ್ಮನಿರ್ದೇಶನಗೊಂಡಿರುವ ನೂತನ ಸದಸ್ಯರನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಅಭಿನಂದಿಸಿದರು.
   ಸಾಮಾನ್ಯ ವರ್ಗದಿಂದ ಭಂಡಾರಹಳ್ಳಿ ನಿವಾಸಿ ದೇವರಾಜ್, ಹಿಂದುಳಿದ ವರ್ಗದಿಂದ ಹುತ್ತಾ ಕಾಲೋನಿ ನಿವಾಸಿ ಸತೀಶ್‌ಕುಮಾರ್, ಅಲ್ಪ ಸಂಖ್ಯಾತರ ವರ್ಗದಿಂದ ಜೈನ ಸಮಾಜದ ಭೂತನಗುಡಿ ನಿವಾಸಿ ಸಂಪತ್‌ರಾಜ್ ಬಾಂಟಿಯಾ ಮತ್ತು ಪರಿಶಿಷ್ಟ ಜಾತಿ ವರ್ಗದಿಂದ ಅರಳಿಹಳ್ಳಿ ಬಸಲೀಕಟ್ಟೆ ಗ್ರಾಮದ ನಿವಾಸಿ ಗೌರಮ್ಮರವರು ನಾಮನಿರ್ದೇಶನಗೊಂಡಿದ್ದಾರೆ. ಈ ೪ ಸದಸ್ಯರನ್ನು ಪೌರಾಯುಕ್ತರು ಅಭಿನಂದಿಸುವ ಮೂಲಕ ಸಮಿತಿಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವ ಜೊತೆಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
   ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಾಮನಿರ್ದೇಶಿತ ಸದಸ್ಯ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಕೆ. ಮಂಜಪ್ಪ, ರಾಜು, ಸುನಿತಾ, ಸರಸ್ವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿ ವಿದ್ಯುತ್ ಕಂಬದಲ್ಲೇ ಸಾವು

ವಿದ್ಯುತ್ ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಕಂಬದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಭದ್ರಾವತಿ ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಭದ್ರಾವತಿ, ಡಿ. ೨೧: ವಿದ್ಯುತ್ ದುರಸ್ತಿಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಕಂಬದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ನಡೆದಿದೆ.
    ಸುರೇಶ್(೨೧) ಎಂಬಾತ ಮೃತಪಟ್ಟಿದ್ದು, ಗ್ರಾಮದ ಸರ್ವೆ ನಂ.೬ರ ಅಣ್ಣಯ್ಯ ಎಂಬುವರ ಜಮೀನಿನ ಬೋರ್ವೆಲ್‌ಗೆ ಸಂಪರ್ಕಗೊಂಡಿದ್ದ ವಿದ್ಯುತ್ ಕಡಿತಗೊಂಡಿದ್ದು, ಈ ಹಿನ್ನಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಕಂಬದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳು ಮತದಾನದ ಬಗ್ಗೆ ಅರಿವು ಹೊಂದಲಿ : ಟಿ.ಎನ್ ಸೋಮಶೇಖರಯ್ಯ

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಭದ್ರಾವತಿಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚಾಲನೆ ನೀಡಿದರು.
ಭದ್ರಾವತಿ, ಡಿ. ೨೧: ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಮತದಾನದ ಬಗ್ಗೆ ಅರಿವು ಹೊಂದಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕರೆ  ನೀಡಿದರು.
ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
     ೧೮ ವರ್ಷ ಪೂರೈಸಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಹೊಂದಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕೆಂದು ಕರೆ ನೀಡಿದರು.
   ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು. ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ ಮೂಲಕ, ಸಿ.ಎನ್ ರಸ್ತೆ, ನಂತರ ಕನಕಮಂಟಪ ಮೈದಾನದವರೆಗೂ ಜಾಥಾ ಸಾಗಿತು.  
    'ಮತದಾರರು ತಮ್ಮ ಪವಿತ್ರ ಮತಗಳನ್ನು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗಿ ಮಾರಿಕೊಳ್ಳಬೇಡಿ', 'ಕಡ್ಡಾಯವಾಗಿ ಮತದಾನ ಮಾಡಿ' ಇತ್ಯಾದಿ ಘೋಷ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.  


ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭದ್ರಾವತಿಯಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಜಾಥಾ ನಡೆಸಲಾಯಿತು.
    ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಕ್ಷೇತ್ರ ಸಮನ್ವಯಾಧಿಕಾರಿ ವೈ. ಗಣೇಶ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪಂಚಾಲ್, ಕನಕ ವಿದ್ಯಾಸಂಸ್ಥೆ ಮಂಜುನಾಥ್, ಸಹ್ಯಾದ್ರಿ ಪ್ರೌಢಶಾಲೆ ಸಂಪನ್ಮೂಲ ಶಿಕ್ಷಕ ಬಿ. ಮಂಜಪ್ಪ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರುಗಳು, ಶಾಲಾ ಹಂತದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ೩೦೦ ವಿದ್ಯಾರ್ಥಿಗಳು, ಶಿಕ್ಷಣ ಸಂಯೋಜಕರು, ಬಿಆರ್‌ಪಿಗಳು ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
    ಮತದಾರರ ಸಾಕ್ಷರತಾ ಸಂಘ(ಇಎಲ್‌ಸಿ) ತಾಲೂಕು ನೋಡಲ್ ಅಧಿಕಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಆಹ್ಮದ್ ಪರ್ವೀಜ್ ಸ್ವಾಗತಿಸಿದರು. ಇಸಿಓ ಶ್ಯಾಮಲಾ ನಿರೂಪಿಸಿದರು. ಸಂಪನ್ಮೂಲ ಶಿಕ್ಷಕ ಎಂ.ಜಿ ನವೀನ್ ವಂದಿಸಿದರು.
     ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತದಾನ ವ್ಯವಸ್ಥೆ ಮತ್ತು ಮತದಾರರು ಪರಿಕಲ್ಪನೆ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಫರ್ಧೆ, ಭಿತ್ತಿಚಿತ್ರ ಮತ್ತು  ಕೊಲೇಜ್ ಮೇಕಿಂಗ್ ಹಾಗೂ ರಸಪ್ರಶ್ನೆ ಒಟ್ಟು ೪ ರೀತಿಯ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
    ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು:
    ಪ್ರಬಂಧ ಸ್ಪರ್ಧೆ(ಕನ್ನಡ ಭಾಷೆ)ಯಲ್ಲಿ ಅನುಷ ಎಸ್. (ನ್ಯಾಷನಲ್ ಪ್ರೌಢಶಾಲೆ, ಬಿ.ಆರ್.ಪ್ರಾಜೆಕ್ಟ್), ಅಕ್ಷತ ಎಂ ಶೇಟ್ (ಸೇಂಟ್ ಮೇರಿಸ್ ಶಾಲೆ, ಹೊಳೆಹೊನ್ನೂರು) ಪ್ರಿಯಾಂಕ ವಿ. ಕರ್ನಾಟಕ ಪಬ್ಲಿಕ್ ಶಾಲೆ, ಅಂತರಗಂಗೆ ಮತ್ತು  ಭಿತ್ತಿ ಪತ್ರ ಹಾಗು ಕೊಲೇಜ್ ಮೇಕಿಂಗ್ ಸ್ಪರ್ಧೆಯಲ್ಲಿ ವಿನಾಯಕ ಎಂ.ಎಸ್. (ಸೇಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆ, ನ್ಯೂಟೌನ್), ಹರ್ಷಿತ ಎಸ್ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಇಂಪನ ಜಿ.ಎಂ. (ಸರ್ಕಾರಿ ಬಾಲಿಕಾ ಪ್ರೌಢಶಾಲೆ, ನ್ಯೂಟೌನ್) ಹಾಗು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪೂರ್ಣಚಂದ್ರ & ತನುಶ್ರೀ ಎ (ಸಹ್ಯಾದ್ರಿ ಇಂಗ್ಲಿಷ್ ಪ್ರೌಢಶಾಲೆ, ಹುತ್ತಾ ಕಾಲೋನಿ), ಮೇಘನ ಆರ್. & ಭೂಮಿಕ ಐ. (ಸರ್ಕಾರಿ ಪ್ರೌಢಶಾಲೆ, ಬಾಳೆಮಾರನಹಳ್ಳಿ), ತುಳಸಿ ಬಿ ಕೆ. & ನಚಿಕೇತನ್ ಎಂ (ಶ್ರೀ ಆದಿಚುಂಚನಗಿರಿ ಆಂಗ್ಲಪ್ರೌಢಶಾಲೆ, ಕಾರೆಹಳ್ಳಿ) ಮತ್ತು ಪ್ರಬಂಧ ಸ್ಪರ್ಧೆ(ಆಂಗ್ಲ ಭಾಷೆ)ಯಲ್ಲಿ ನಿಫಾ (ಶ್ರೀ ಕನಕ ವಿದ್ಯಾ ಸಂಸ್ಥೆ, ಹಳೇ ನಗರ), ಭೂಮಿಕ ಜಿ (ಪೇಪರ್ ಟೌನ್ ಆಂಗ್ಲ ಪ್ರೌಢಶಾಲೆ) ಹಾಗು ಹಿತೇಶ ಎಲ್. (ಸರ್ಕಾರಿ ಪ್ರೌಢಶಾಲೆ, ಹೊಸ ಸಿದ್ಧಾಪುರ).

Sunday, December 20, 2020

ಇಂದು ೪೦೦ ವರ್ಷಗಳಿಗೊಮ್ಮೆ ಕಂಡು ಬರುವ ಆಕಾಶ ಕಾಯಗಳ ವಿಸ್ಮಯ

೪೦೦ ವರ್ಷಗಳಿಗೊಮ್ಮೆ ಕಂಡು ಬರುವ ಆಕಾಶ ಕಾಯಗಳ ವಿಸ್ಮಯ ಟೆಲಿಸ್ಕೋಪ್ ಮೂಲಕ ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟಿರುವ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ.
   ಭದ್ರಾವತಿ, ಡಿ. ೨೦:  ೪೦೦ ವರ್ಷಗಳಿಗೊಮ್ಮೆ ಆಕಾಶ ಕಾಯಗಳಲ್ಲಿ ಕಂಡು ಬರುವ ವಿಸ್ಮಯಗಳಲ್ಲಿ ಒಂದಾಗಿರುವ ಗುರು ಮತ್ತು ಶನಿ ಗ್ರಹಗಳ ಸನಿಹ ಸಮಾಗಮ ಡಿ.೨೧ರಂದು ಕಂಡು ಬರಲಿದ್ದು, ಈ ಶತಮಾನದ ಅಪರೂಪದ ವಿಶೇಷಗಳಲ್ಲಿ ಒಂದಾಗಿರುವ ಈ ವಿಸ್ಮಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜೊತೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವಲ್ಲಿ ನಗರದ ಹವ್ಯಾಸಿ ಖಗೋಳ ವೀಕ್ಷಕ, ಶಿಕ್ಷಕ ಹರೋನಹಳ್ಳಿ ಸ್ವಾಮಿ ಮುಂದಾಗಿದ್ದಾರೆ.
    ಗುರು ಮತ್ತು ಶನಿ ಈ ಎರಡು ದೈತ್ಯ ಗ್ರಹಗಳು ಅತಿ ಸಮೀಪದಲ್ಲಿರುವಂತೆ ಭೂಮಿಯಿಂದ ನೋಡುವ ವೀಕ್ಷಕರಿಗೆ ಕಂಡು ಬರುತ್ತದೆ. ಈ ವಿಸ್ಮಯ ೪೦೦ ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ವಿಸ್ಮಯವನ್ನು ಬರಿಗಣ್ಣಿನಿಂದಲೂ, ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳ ಮೂಲಕವೂ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
    ಭೂಮಿ, ಗುರು ಮತ್ತು ಶನಿ ಗ್ರಹಗಳು ಒಂದೇ ನೇರದಲ್ಲಿ ಕಂಡು ಬರುತ್ತಿರುವುದೇ ಈ ವಿಸ್ಮಯಕ್ಕೆ ಕಾರಣವಾಗಿದ್ದು, ಚಲನೆ, ಅವುಗಳ ದೀರ್ಘವೃತ್ತಾಕಾರದ ಪಥ, ಆ ಕಕ್ಷೆಗಳಿಗೆ ಗ್ರಹಗಳ ಓರೆ ಇವೆಲ್ಲ ಅಂಶಗಳೂ ಸಹ ಕಾರಣವಾಗಿವೆ ಎನ್ನುತ್ತಾರೆ ಹರೋನಹಳ್ಳಿ ಸ್ವಾಮಿ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: ೯೮೮೦೪೯೮೩೦೦ ಅಥವಾ ೭೮೯೨೧೫೪೬೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ, ಕಾಪಾಡಿಕೊಳ್ಳುವ ಇಚ್ಛಾ ಶಕ್ತಿ ಇರಲಿ : ಶಾಸಕ ಬಿ.ಕೆ ಸಂಗಮೇಶ್ವರ್

ನಗರಸಭೆ ಮೆಸ್ಕಾಂ ಘಟಕ-೧ರ ವ್ಯಾಪ್ತಿಯ ಜೆಪಿಎಸ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಶ್ವೇಶ್ವರಾಯ ಉದ್ಯಾನವನದಲ್ಲಿ ಕುಡಿಯುವ ನೀರಿನ ಘಟಕ, ವ್ಯಾಯಾಮ ಸಲಕರಣೆಗಳು ಮತ್ತು ಮಕ್ಕಳ ಆಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

   ಭದ್ರಾವತಿ, ಡಿ. ೨೦: ಪ್ರತಿಯೊಬ್ಬರಿಗೂ ಆರೋಗ್ಯವೇ ಮುಖ್ಯ. ಈ ಹಿನ್ನಲೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
   ಅವರು ನಗರಸಭೆ ಮೆಸ್ಕಾಂ ಘಟಕ-೧ರ ವ್ಯಾಪ್ತಿಯ ಜೆಪಿಎಸ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಶ್ವೇಶ್ವರಾಯ ಉದ್ಯಾನವನದಲ್ಲಿ ಕುಡಿಯುವ ನೀರಿನ ಘಟಕ, ವ್ಯಾಯಾಮ ಸಲಕರಣೆಗಳು ಮತ್ತು ಮಕ್ಕಳ ಆಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬರು ಉತ್ತಮ ಆರೋಗ್ಯದೊಂದಿಗೆ ಸದೃಢರಾಗಬೇಕು. ಆರೋಗ್ಯ ಕಾಪಾಡಿಕೊಳ್ಳಲು ಹಣ ವ್ಯಯ ಮಾಡಬೇಕಾಗಿಲ್ಲ. ಬದಲಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಸ್ವಲ್ಪ ಸಮಯ ಮೀಸಲಿಟ್ಟು ಉತ್ತಮ ಪರಿಸರದಲ್ಲಿ ನಡಿಗೆ, ಕ್ರೀಡಾ ಚಟುವಟಿಕೆಗಳು, ವ್ಯಾಯಾಮ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಬೇಕು. ಇದರಿಂದಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
   ಸಾರ್ವಜನಿಕರ ಹಣದಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಪ್ರತಿಯೊಬ್ಬ ನಾಗರೀಕ ಸಹ ಉದ್ಯಾನವನ ಕಾಪಾಡಿಕೊಳ್ಳುವ ಜವಾಬ್ದಾರಿ ಹೊಂದಬೇಕು. ಟ್ರಸ್ಟ್‌ನ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಬೇಕು. ಯಾವುದೇ ರೀತಿ ಕಾನೂನು ಬಾಹಿರ, ಅನೈತಿಕ ಚಟುವಟಿಕೆಗಳು ನಡೆಯದಂತೆ ಎಚ್ಚರವಹಿಸಬೇಕೆಂದರು.
   ಜೆಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಹಾಗು ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ದುರಸ್ತಿಪಡಿಸಿಕೊಡುವಂತೆ ಹಾಗು ಸುತ್ತಮುತ್ತಲ ನಿವಾಸಿಗಳು ಸಮರ್ಪಕ ಕುಡಿಯುವ ನೀರಿನ ಪೂರೈಕೆ, ಬೀದಿ ದೀಪ ವ್ಯವಸ್ಥೆ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.
    ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಜಯರಾಜ್, ಮಹೇಶ್, ಅರುಣ್, ನಗರಸಭಾ ಸದಸ್ಯರಾದ ಮಹೇಶ್, ಆಂಜನಪ್ಪ, ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ವಿಜಯ್‌ಕುಮಾರ್, ನಗರಸಭೆ ಇಂಜಿನಿಯರ್ ಎಸ್.ಆರ್ ಸತೀಶ್, ಹೇಮಣ್ಣ, ಸಿದ್ದರಾಜು, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರ್ ನಿರೂಪಿಸಿದರು. ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹಳ್ಳಿ ಯುದ್ದಕ್ಕೆ ೨ ದಿನ ಬಾಕಿ : ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಪೈಪೋಟಿ

೩೫ ಪಂಚಾಯಿತಿ, ೩೭೫ ಸ್ಥಾನಗಳು, ೧,೧೯,೨೨೫ ಮತದಾರರು, ೧೦೭೦ ಮಂದಿ ಕಣದಲ್ಲಿ

ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳುತ್ತಿದ್ದು, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಭಾನುವಾರ ಪರಿಶೀಲನೆ ನಡೆಸಿದರು.

* ಅನಂತಕುಮಾರ್
   ಭದ್ರಾವತಿ: ತಾಲೂಕಿನಲ್ಲಿ ೩೫ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ೨ ದಿನ ಮಾತ್ರ ಬಾಕಿ ಉಳಿದಿದ್ದು, ತೆರೆಮರೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಕಂಡು ಬರುತ್ತಿದೆ. ವ್ಯಕ್ತಿ ಪ್ರತಿಷ್ಠೆ ಕಣವಾಗಿರುವ ತಾಲೂಕಿನಲ್ಲಿ ಇದೀಗ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಮತ್ತು ಕರಿಯಣ್ಣ ಕಣ್ಮರೆಯಾಗಿದ್ದು, ಅವರಿಲ್ಲದೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
    ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿವೆ. ಕ್ಷೇತ್ರದಲ್ಲಿ ಈ ಹಿಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದರು. ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎರಡರಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾಗಿದ್ದರು. ಆದರೆ ಇದೀಗ ಅವರಿಲ್ಲದೆ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಪೂರ‍್ಯಾನಾಯ್ಕ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಾಗುತ್ತಿದೆ. ಅಪ್ಪಾಜಿಯ ರಾಜಕೀಯ ಒಡನಾಡಿಯಾಗಿರುವ ಕರುಣಾಮೂರ್ತಿ ಈ ಬಾರಿ ಸಹ ಮತದಾರರು ತಮ್ಮ ಪಕ್ಷದ ಬೆಂಬಲಿಗರನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎನ್ನುವ ಭರವಸೆ ಹೊಂದಿದ್ದಾರೆ.
    ಈ ಬಾರಿ ಚುನಾವಣೆಯ ಬಹಿರಂಗ ಪ್ರಚಾರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹೆಚ್ಚಾಗಿ ಪಾಲ್ಗೊಂಡಿಲ್ಲ. ಬದಲಾಗಿ ಅವರ ಸಹೋದರ ಬಿ.ಕೆ ಮೋಹನ್ ನೇತೃತ್ವದಲ್ಲಿ ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಸೇರಿದಂತೆ ಇನ್ನಿತರರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಾಸಕರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎನ್ನುವ ಆಶಾಭಾವನೆ ಟಿ. ಚಂದ್ರೇಗೌಡ ಹೊಂದಿದ್ದಾರೆ. ಈ ನಡುವೆ ಜೆಡಿಎಸ್ ಪಕ್ಷದ ಮುಖಂಡ, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ತೆರೆಮರೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆಂಬ ಆರೋಪಗಳು ಸಹ ಕೇಳಿ ಬರುತ್ತಿವೆ.
    ಈ ಬಾರಿ ಚುನಾವಣೆಯನ್ನು ಬಿಜೆಪಿ ಗಂಭಿರವಾಗಿ ಪರಿಗಣಿಸಿದ್ದು, ಪಕ್ಷದ ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಖಂಡರು ಎಡೆಬಿಡದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರಚಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ವ್ಯಕ್ತಿ ಪ್ರತಿಷ್ಠೆ ಎಂಬುದು ಬದಲಾಗಿದೆ. ದೇಶದ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಇದೆ ರೀತಿ ಕ್ಷೇತ್ರದಲ್ಲೂ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಚುಕ್ಕಾಣಿ ಬಿಜೆಪಿ ಪಕ್ಷದ ಪಾಲಾಗಲಿದೆ ಎನ್ನುವ ನಂಬಿಕೆ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹೊಂದಿದ್ದಾರೆ
   ತಾಲೂಕಿನ ಒಟ್ಟು ೪೧ ಗ್ರಾಮ ಪಂಚಾಯಿತಿಗಳ ಪೈಕಿ ಕೊಮಾರನಹಳ್ಳಿ ಮತ್ತು ವೀರಾಪುರ ಈ ಎರಡು ಗ್ರಾಮ ಪಂಚಾಯಿತಿಗಳ ಅವಧಿ ಡಿಸೆಂಬರ್ ನಂತರ ಮುಕ್ತಾಯಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ. ಉಳಿದಂತೆ ಸರ್ಕಾರ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅಧಿಸೂಚನೆ ಹೊರಡಿಸಿರುವ ಹಿನ್ನಲೆಯಲ್ಲಿ ಹೊಳೆಹೊನ್ನೂರು, ಹನುಮಂತಾಪುರ, ಸಿದ್ಲಿಪುರ ಮತ್ತು ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ೩೫ ಗ್ರಾಮ ಪಂಚಾಯಿತಿಗಳಿಗೆ ಡಿ.೨೨ರಂದು ಚುನಾವಣೆ ನಡೆಯುತ್ತಿದೆ.
    ಮತದಾರರು, ಮತಗಟ್ಟೆ ವಿವರ:
 ಕೋವಿಡ್-೧೯ ಕಾಣಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಚುನಾವಣೆಯಾಗಿರುವ ಹಿನ್ನಲೆಯಲ್ಲಿ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಒಟ್ಟು ೧,೧೯,೨೨೫ ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ೫೮,೭೮೩ ಪುರುಷ ಹಾಗು ೬೦,೪೪೨ ಮಹಿಳಾ ಮತದಾರರು ಸೇರಿದ್ದಾರೆ. ಈ ಬಾರಿ ೧೦೦೦ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಪೂರಕ ಮತಗಟ್ಟೆಗಳನ್ನು ರೂಪಿಸಲಾಗಿದ್ದು, ೩೦ ಪೂರಕ ಮತಗಟ್ಟೆಗಳು ಸೇರಿದಂತೆ ಒಟ್ಟು ೧೮೫ ಮತಗಟ್ಟೆಗಳನ್ನು ತೆರೆಯಲಾಗಿದೆ. ೫೮ ಸೂಕ್ಷ, ೨೦ ಅತಿಸೂಕ್ಷ್ಮ ಮತ್ತು ೧೦೭ ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
     ಸಿಬ್ಬಂದಿಗಳ ವಿವರ:
   ಈ ಚುನಾವಣೆಯಲ್ಲಿ ೧೦೩೭ ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ ೨೦೪ ಪಿಆರ್‌ಓ, ೨೦೪ ಎಪಿಆರ್‌ಓ, ೪೪೪ ಪಿ.ಓ ಮತ್ತು ೧೮೫ ಡಿ' ಗ್ರೂಪ್ ನೌಕರರ ಒಳಗೊಂಡಿದ್ದಾರೆ. ಅಲ್ಲದೆ ೩೫ ಚುನಾವಣಾಧಿಕಾರಿಗಳು, ೩೫ ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು ೭೦ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ೧, ಹೋಬಳಿ ಮಟ್ಟದಲ್ಲಿ ೩ ಮಾದರಿ ನೀತಿ ಸಂಹಿತೆ ತಂಡಗಳು ಕಾರ್ಯನಿರ್ವಹಿಸುತ್ತಿವೆ. ೩೪ ಬಸ್ಸು ಹಾಗು ೬ ಜೀಪುಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
    ಒಟ್ಟು ೩೭೫ ಸ್ಥಾನಗಳಿಗೆ ಚುನಾವಣೆ:
   ತಾಲೂಕಿನಲ್ಲಿ ಒಟ್ಟು ೧೬೫ ಕ್ಷೇತ್ರಗಳ ಒಟ್ಟು ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಈ ಹಿನ್ನಲೆಯಲ್ಲಿ ಉಳಿದ ೩೭೫ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು ೧೦೭೦ ಮಂದಿ ಕಣದಲ್ಲಿದ್ದು, ಗೆಲುವಿಗಾಗಿ ತೀವ್ರ ಪೈಪೋಟಿಗೆ ಮುಂದಾಗಿದ್ದಾರೆ.
    ಉಪವಿಭಾಗಾಧಿಕಾರಿ ಪರಿಶೀಲನೆ:
ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮಾರ್ಗದರ್ಶನದಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದಲ್ಲಿ ತಾಲೂಕು ಆಡಳಿತ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಭಾನುವಾರ ಟಿ.ವಿ ಪ್ರಕಾಶ್ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.

Saturday, December 19, 2020

೪ನೇ ವರ್ಷದ ದೀಪೋತ್ಸವ : ಹೋಮ, ಸತ್ಯನಾರಾಯಣ ಪೂಜೆ

ಭದ್ರಾವತಿ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ೪ನೇ ವರ್ಷದ ದೀಪೋತ್ಸವ ಅಂಗವಾಗಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ, ಡಿ. ೧೯: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ  ೪ನೇ ವರ್ಷದ ದೀಪೋತ್ಸವ ಅದ್ದೂರಿಯಾಗಿ ಜರುಗಿತು.
    ಈ ಸಂಬಂಧ ದೇವಸ್ಥಾನದ ಮೂಲ ವಿಗ್ರಹಕ್ಕೆ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ದೇವಸ್ಥಾನದ ಪ್ರಧಾನ ಅರ್ಚಕ ಸಂಜೀವ್‌ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಮುನಿರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನೂರಾರು ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.