Sunday, May 16, 2021

೨೦೨ ಮಂದಿಗೆ ಸೋಂಕು, ೮ ಬಲಿ

ಭದ್ರಾವತಿ, ಮೇ. ೧೬:  ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಮಧ್ಯೆ ತಾಲೂಕಿನಲ್ಲಿ ತಪಾಸಣೆ ಕಡಿಮೆಗೊಳಿಸಿರುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಭಾನುವಾರ ಕೇವಲ ೯೪ ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಈ ನಡುವೆಯೂ ೨೦೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
      ಒಟ್ಟು ೯೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ೮ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ೬೮ ಮಂದಿ ಮೃತಪಟ್ಟಿದ್ದು, ೨೦೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.
      ಕೋವಿಶೀಲ್ಡ್ ಲಸಿಕೆ ಅಂತರ ಹೆಚ್ಚಳ :
    ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, ೧೮ ರಿಂದ ೪೪ ಹಾಗು ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾಕರಣ ನಡೆಯುತ್ತಿದ್ದು, ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದ ನಂತರ ೬ ರಿಂದ ೮ ವಾರಗಳ ಅಂತರದಲ್ಲಿ ೨ನೇ ಡೋಸ್ ಪಡೆಯಲು ಈ ಹಿಂದೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಲಸಿಕಾಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(ಎನ್‌ಟಿಎಜಿಐ) ಮತ್ತು ಲಸಿಕಾಕರಣದ ಕುರಿತು ರಾಷ್ಟ್ರೀಯ ಪರಿಣಿತಿ ಗುಂಪು(ಎನ್‌ಇಜಿವಿಎಸಿ)ಗಳ ಶಿಫಾರಸ್ಸಿನ ಆಧಾರದ ಮೇಲೆ  ಲಸಿಕೆ ಪಡೆಯುವ ಅಂತರವನ್ನು ೧೨ ರಿಂದ ೧೬ವಾರಗಳಿಗೆ ಪರಿಷ್ಕರಣೆ ನಡೆಸಿದೆ. ಈ ಹಿನ್ನಲೆಯಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಪಡೆದ ನಂತರ ೧೨ ವಾರಗಳು ಪೂರ್ಣಗೊಂಡ ನಂತರವೇ ೨ನೇ ಡೋಸ್ ನೀಡಲಾಗುವುದು. ಈ ಪರಿಷ್ಕರಣೆ ಕೋವ್ಯಾಕ್ಸಿನ್ ಲಸಿಕೆಗೆ ಅನ್ವಯವಾಗುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಅರಿತು ಕೊಂಡು ಲಸಿಕೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಕೋರಿದ್ದಾರೆ.  

Saturday, May 15, 2021

ವಿವಿಧ ಬೇಡಿಕೆ ಈಡೇರಿಕೆಗಾಗಿ ಕಟ್ಟಡ ಕಾರ್ಮಿಕರಿಂದ ವಿನೂತನ ಪ್ರತಿಭಟನೆ

ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡೆವೆಯೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಭದ್ರಾವತಿಯಲ್ಲಿ ಶನಿವಾರ ವಿನೂತನ ರೀತಿಯ ಪ್ರತಿಭಟನೆ ಕೈಗೊಳ್ಳುವ ಮೂಲಕ ಗಮನ ಸೆಳೆದರು.
     ಭದ್ರಾವತಿ, ಮೇ. ೧೫: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡೆವೆಯೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಶನಿವಾರ ವಿನೂತನ ರೀತಿಯ ಪ್ರತಿಭಟನೆ ಕೈಗೊಳ್ಳುವ ಮೂಲಕ ಗಮನ ಸೆಳೆದರು.
     ಲಾಕ್‌ಡೌನ್ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಕನಿಷ್ಠ ೩ ತಿಂಗಳು ಮಾಸಿಕ ೧೦ ಸಾವಿರ ರು. ಪರಿಹಾರ ನೀಡುವುದು, ಕೊರೋನಾ ಪೀಡಿತ ಕಟ್ಟಡ ಕಾರ್ಮಿಕರಿಗೆ ಹಾಗು ಕುಟುಂಬ ವರ್ಗದವರಿಗೆ ಉಚಿತ ಚಿಕಿತ್ಸೆ ನೀಡುವುದು ಹಾಗು ಕೊರೋನಾ ಸೋಂಕಿನಿಂದ ಮೃತಪಟ್ಟ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ರು. ೧೦ ಲಕ್ಷ ಹಾಗು ನೋಂದಾಯಿತರಲ್ಲದ ಕಾರ್ಮಿಕರಿಗೆ ರು. ೫ ಲಕ್ಷ ಪರಿಹಾರ ನೀಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ 'ಮನೆ ಮನೆಗಳಲ್ಲಿ ಪ್ರತಿಭಟನೆ' ಎಂಬ ವಿನೂತನ ಶೈಲಿಯ ಹೋರಾಟದ ಮೂಲಕ ಆಗ್ರಹಿಸಲಾಯಿತು. ರಾಜ್ಯಾದ್ಯಂತ ಈ ವಿನೂತನ ಪ್ರತಿಭಟನೆ ನಡೆದಿದ್ದು, ತಾಲೂಕಿನ ಹಲವೆಡೆ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
    ನಗರದ ಕೂಲಿಬ್ಲಾಕ್ ಶೆಡ್ ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಮುಂಭಾಗ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎಂ.ಪಿ ನಾರಾಯಣಸ್ವಾಮಿ, ತಾಂತ್ರಿಕ ಸಲಹೆಗಾರ ಕೆ.ಪಿ ಮೋಹನ್, ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುಂದರ್ ಬಾಬು, ಜಿಲ್ಲಾ ಉಪಾಧ್ಯಕ್ಷ ಕೆ. ಚಂದ್ರಶೇಖರ್, ತಾಲೂಕು ಪದಾಧಿಕಾರಿಗಳಾದ ಸುಬ್ರಮಣ್ಯ, ಅಭಿಲಾಷ್, ನಾಗೇಂದ್ರರೆಡ್ಡಿ, ಶಿವಕುಮಾರ್, ಮಂಜಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇಂದಿರಾ ಕ್ಯಾಂಟಿನ್ ಉಪಹಾರ, ಊಟ ದುರ್ಬಳಕೆ ಆರೋಪ

ನೂತನ ನಗರಸಭಾ ಸದಸ್ಯರು, ಬಿಜೆಪಿ ಮುಖಂಡರಿಂದ ಕ್ಯಾಂಟಿನ್‌ಗೆ ಮುತ್ತಿಗೆ


ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ, ಊಟ ಯೋಜನೆ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿಯಲ್ಲಿ ಬಿಜೆಪಿ ಮುಖಂಡರು ಹಾಗು ನೂತನ ನಗರಸಭಾ ಸದಸ್ಯರು ಕ್ಯಾಂಟಿನ್‌ಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆದಿದೆ.
    ಭದ್ರಾವತಿ, ಮೇ. ೧೫: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ನಿರ್ಗತಿಕರು, ಅಸಹಾಯಕರು ಸೇರಿದಂತೆ ಬಡ ವರ್ಗದವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ ಹಾಗು ಊಟದ ವ್ಯವಸ್ಥೆ ಕೈಗೊಂಡಿದೆ. ಆದರೆ ಈ ಯೋಜನೆ ನಗರದಲ್ಲಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
   ನಗರದಲ್ಲಿ ವಾರ್ಡ್ ನಂ.೧೨ರ ಸಂತೆ ಮೈದಾನದಲ್ಲಿ ಹಾಗು ವಾರ್ಡ್ ನಂ.೩ರ ಖಾಸಗಿ ಬಸ್ ನಿಲ್ದಾಣದ ಬಳಿ ಒಟ್ಟು ೨ ಇಂದಿರಾ ಕ್ಯಾಂಟಿನ್‌ಗಳಿದ್ದು, ಸರ್ಕಾರ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್‌ಗಳಲ್ಲಿ ಉಚಿತವಾಗಿ ಉಪಹಾರ ಹಾಗು ಊಟ ನೀಡುವಂತೆ ಆದೇಶ ಹೊರಡಿಸಿದ ನಂತರ  ಇಲ್ಲಿ ಸುಮಾರು ಒಂದು ಸಾವಿರ ಜನರಿಗೆ ಅಗತ್ಯವಿರುವಷ್ಟು ಉಪಹಾರ ಹಾಗು ಊಟ ತಯಾರಿಸಲಾಗುತ್ತಿದೆ. ಆದರೆ ನಗರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ತೀರ ಕಡಿಮೆ ಇದೆ. ಇದರಿಂದಾಗಿ ಸಾಕಷ್ಟು ಉಳಿದುಕೊಳ್ಳಲಿದ್ದು, ಈ ಉಳಿಕೆ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ದುರ್ಬಳಕೆಯಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
         ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ :
    ಯೋಜನೆ ದುರ್ಬಳಕೆಯಾಗುತ್ತಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಸ್ಥಳೀಯ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲು ಸಿದ್ದಗೊಳಿಸಲಾಗಿದ್ದ ಉಪಹಾರ ಹಾಗು ಊಟದ ಲೆಕ್ಕಚಾರದಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ದುರ್ಬಳಕೆ ನಡೆದಿರುವುದು ತಿಳಿದು ಬಂದಿದೆ.
     ದುರ್ಬಳಕೆ ಹಿಂದೆ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದು, ತಕ್ಷಣ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಅಲ್ಲದೆ ಗುತ್ತಿಗೆದಾರರು ದುರ್ಬಳಕೆ ತಡೆಯುವಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಎಚ್ಚರಿಸಲಾಯಿತು.
     ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ಮಣಿ, ರಾಮನಾಥ ಬರ್ಗೆ, ಅವಿನಾಶ್, ಚನ್ನೇಶ್, ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರಾದ ಪಲ್ಲವಿ ದಿಲೀಪ್, ಸವಿತಾ ಉಮೆಶ್ ಹಾಗು ಪಕ್ಷೇತರ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಮಕೃಷ್ಣೇಗೌಡ ನಿಧನ

ರಾಮಕೃಷ್ಣೇಗೌಡ(ಕ್ಯಾಂಟಿನ್ ಗೌಡ)
      ಭದ್ರಾವತಿ, ಮೇ. ೧೫: ನಗರಸಭೆ ಮಾಜಿ ಸದಸ್ಯ, ಕಂಚಿನಬಾಗಿಲು ಸಮೀಪದ ಹನುಮಂತನಗರದ ನಿವಾಸಿ ರಾಮಕೃಷ್ಣೇಗೌಡ(೬೯) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
   ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ರಾಮಕೃಷ್ಣೇಗೌಡರವರು ಕ್ಯಾಂಟಿನ್ ಗೌಡ ಎಂದು ಚಿರಪರಿಚಿತರಾಗಿದ್ದರು. ಈ ಹಿಂದೆ ಸಮಾಜವಾದಿ ಜನತಾ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು.
       ಸಮಾಜ ಸೇವೆ:
  ರಾಮಕೃಷ್ಣಗೌಡರವರು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ ಹಲವು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ದೀನದಲಿತರು, ನಿರ್ಗತಿಕರು, ಅಸಹಾಯಕರು, ವಿಕಲಚೇತನರು ಸೇರಿದಂತೆ ಬಡ ವರ್ಗದವರಿಗೆ  ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಉಚಿತವಾಗಿ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
     ಸಂತಾಪ:
   ಕಾಂಗ್ರೆಸ್ ಪಕ್ಷದ  ಹಿರಿಯ ಮುಖಂಡ ರಾಮಕೃಷ್ಣೇಗೌಡರವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗು ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಕ್ಮಾಬಾಯಿ ನಿಧನ

ರಕ್ಮಾಬಾಯಿ
    ಭದ್ರಾವತಿ, ಮೇ. ೧೫: ಹಳೇನಗರದ ದೊಡ್ಡಕುರುಬರ ಬೀದಿ ನಿವಾಸಿ ರಕ್ಮಾಬಾಯಿ(೮೫) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. 
ಪತಿ ನಿವೃತ್ತ ಮುಖ್ಯ ಪೇದೆ ಟಿ.ಟಿ ರಂಗಪ್ಪ, ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳನ್ನು ಹಾಗು ಮರಿಮೊಮ್ಮಕ್ಕಳನ್ನು ಹೊಂದಿದ್ದರು. ಹಳೇನಗರ ಭಾಗದಲ್ಲಿ ಚಿರಪರಿಚಿತರಾಗಿದ್ದರು. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Friday, May 14, 2021

ಬಸವ ಜಯಂತಿಯಂದು ಭದ್ರಾವತಿ ೧೦೩ ಸೋಂಕು ಪತ್ತೆ

   ಭದ್ರಾವತಿ, ಮೇ. ೧೪: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿ ೫ ದಿನ ಕಳೆದಿದ್ದು, ಈ ನಡುವೆಯೂ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿಲ್ಲ. ಶುಕ್ರವಾರ ೧೦೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
   ಒಟ್ಟು ೨೦೪ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೦೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ೧೨೯ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.  ಒಂದು ಬಲಿಯಾಗಿದ್ದು, ಇದುವರೆಗು ಒಟ್ಟು ೫೯ ಮಂದಿ ಮೃತಪಟ್ಟಿದ್ದಾರೆ. ೩೮೨ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಹಸಿದವರಿಗೆ ನೆರವು : ವಿವಿಧ ಸಂಘ-ಸಂಸ್ಥೆಗಳಿಂದ ಮುಂದುವರೆದ ಸೇವಾ ಕಾರ್ಯ

ಭದ್ರಾವತಿಯಲ್ಲಿ ಜೀವಾಮೃತ ಚಾರಿಟಬಲ್ ಟ್ರಸ್ಟ್ ಕೈಗೊಂಡಿರುವ ೧೧ನೇ ದಿನದ ಸೇವಾ ಕಾರ್ಯದಲ್ಲಿ ಟೊಮೊಟೋ ಬಾತ್ ಹಾಗು ಮೈಸೂರು ಪಾಕ್ ತಯಾರಿಸಿ ಹಸಿವಿನಿಂದ ಸಂಕಷ್ಟದಲ್ಲಿ ಬಳಲುತ್ತಿರುವವರಿಗೆ ವಿತರಿಸಲಾಯಿತು.
    ಭದ್ರಾವತಿ, ಮೇ. ೧೪: ಸೆಮಿ ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿ ಹಸಿವಿನಿಂದ ಬಳಲುತ್ತಿರುವವರ ನೆರವಿಗೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಮುಂದಾಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
    ಕೆಲವು ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ನೆರವಿಗೆ ಮುಂದಾಗಿವೆ. ಇನ್ನೂ ಕೆಲವು ತಮಗೆ ಸಾಧ್ಯವಿರುವಷ್ಟು ಮಟ್ಟಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಒಟ್ಟಾರೆ ಎಲ್ಲಾ ಸಂಘಟನೆಗಳು ಮಾನವೀಯ ನೆಲೆಯಲ್ಲಿ ಸೇವಾ ಕಾರ್ಯಕ್ಕೆ ಮುಂದಾಗಿವೆ.
        ೧೧ನೇ ದಿನ ಪೂರೈಸಿದ ಜೀವಾಮೃತ ಚಾರಿಟಬಲ್ ಟ್ರಸ್ಟ್:
      ಜೀವಾಮೃತ ಚಾರಿಟಬಲ್ ಟ್ರಸ್ಟ್ ಕೈಗೊಂಡಿರುವ ೧೧ನೇ ದಿನದ ಸೇವಾ ಕಾರ್ಯಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯನವರ ಹುಟ್ಟುಹಬ್ಬ ಹಾಗು ಶ್ರೀ ಜಗಜ್ಯೊತಿ ಬಸವೇಶ್ವರರ ಜನ್ಮದಿನಾಚರಣೆ ಅಂಗವಾಗಿ ಒಂದು ದಿನದ ನೆರವು ನೀಡಲಾಯಿತು.
     ಶುಕ್ರವಾರ ವಿಶೇಷವಾಗಿ ಟೊಮೊಟೋ ಬಾತ್ ಮತ್ತು ಮೈಸೂರ್ ಪಾಕ್ ತಯಾರಿಸಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ, ಅಸಹಾಯಕರಿಗೆ, ಭಿಕ್ಷುಕರಿಗೆ, ಜೊತೆಗೆ ಕೊರೋನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆ ಸಿಬ್ಬಿಂದಿಗಳಿಗೆ, ಕೊರೋನಾ ಸೋಂಕಿಗೆ ಒಳಗಾಗಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ವಿತರಿಸಲಾಗುತ್ತಿದೆ.


ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಭದ್ರಾವತಿಯಲ್ಲಿ ಹಿರಿಯ ಉಪಾಧ್ಯಕ್ಷ ಫಾಸ್ಟರ್ ದೇವನೇಸಂರವರ ಮಾರ್ಗದರ್ಶನದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯ ಶುಕ್ರವಾರ ೩ನೇ ದಿನ ಯಶಸ್ವಿಯಾಗಿ ಪೂರೈಸಿತು.
       ೩ನೇ ದಿನದ ಸೇವಾ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಕ್ರೈಸ್ತ ಸಂಘ-ಸಂಸ್ಥೆಗಳ ಒಕ್ಕೂಟ:
     ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಹಿರಿಯ ಉಪಾಧ್ಯಕ್ಷ ಫಾಸ್ಟರ್ ದೇವನೇಸಂರವರ ಮಾರ್ಗದರ್ಶನದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯ ಶುಕ್ರವಾರ ೩ನೇ ದಿನ ಯಶಸ್ವಿಯಾಗಿ ಪೂರೈಸಿದೆ.
    ಸೆಲ್ವರಾಜ್, ಎಂ.ಜಿ ರಾಮಚಂದ್ರನ್, ವಿಲ್ಸನ್ ಬಾಬು, ಡಾರ್ವಿನ್, ದಾಸ್, ಹಬಕ್ಕೂರ್, ಪ್ರೇಮ್, ಅನಿಲ್, ಭಾಸ್ಕರ್ ಮತ್ತು ನಗರಸಭೆ ಮಾಜಿ ಸದಸ್ಯ ಫ್ರಾನ್ಸಿಸ್ ಸೇರಿದಂತೆ ಇನ್ನಿತರರು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪ್ರತಿ ದಿನ ಸುಮಾರು ೧೦೦ ಮಂದಿಗೆ ಸಾಕಾಗುವಷ್ಟು ಆಹಾರ ತಯಾರಿಸಿ ವಿತರಿಸಲಾಗುತ್ತಿದೆ.


ಭದ್ರಾವತಿ ನಗರಸಭೆ ೧೨ನೇ ವಾರ್ಡ್ ನಿವಾಸಿಗಳಿಗೆ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು.
       ಸಂಕಷ್ಟಕ್ಕೆ ಸ್ಪಂದಿಸಿದ ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್:
    ನೂತನ ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ನೇತೃತ್ವದಲ್ಲಿ ಗುರುವಾರ ನಗರಸಭೆ ವಾರ್ಡ್ ನಂ. ೧೨ರಲ್ಲಿ ಎಲ್ಲಾ ರಸ್ತೆಗಳಿಗೂ ಸ್ಯಾನಿಟೈಜರ್ ಸಿಂಪಡಿಸಲಾಯಿತು.
     ಅಲ್ಲದೆ ವಾರ್ಡ್‌ನ ಪ್ರತಿಯೊಂದು ಮನೆಗೂ ಸಿದ್ದಪಡಿಸಿದ ಆಹಾರ ವಿತರಿಸಲಾಯಿತು. ವಾರ್ಡ್ ಪ್ರಮುಖರಾದ ಗಿರೀಶ್, ನವೀನ್, ಪ್ರಕಾಶ್, ಅಶೋಕ್, ಚರಣ್, ರಘು, ಆಕಾಶ್, ಸುನಿಲ್, ಕಿಶೋರ್ ಸೇರಿದಂತೆ ಇನ್ನಿತರರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
   ಕಳೆದ ಬಾರಿ ಸಹ ಲಾಕ್‌ಡೌನ್ ಸಮಯದಲ್ಲೂ ಸುದೀಪ್‌ಕುಮಾರ್ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಅಲ್ಲದೆ ಜಯಕರ್ನಾಟಕ ಜನಪರ ವೇದಿಕೆ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
       ಸಿದ್ದಪಡಿಸಿದ ಆಹಾರ ಖರೀದಿಸಿ ಬಡವರಿಗೆ ವಿತರಣೆ:
     ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಿವಾಸಿ, ಬಿಜೆಪಿ ಕಾರ್ಯಕರ್ತ ಭರತ್‌ರಾವ್ ಹಾಗು ಸ್ನೇಹಿತರು ಕಳೆದ ಕೆಲವು ದಿನಗಳಿಂದ ಉಜ್ಜನಿಪುರ, ಆನೇಕೊಪ್ಪ ಹಾಗು ಕಾಗದನಗರ ವ್ಯಾಪ್ತಿಯಲ್ಲಿ ದೀನದಲಿತರು, ನಿರ್ಗತಿಕರು, ಅಸಹಾಯಕರು, ಭಿಕ್ಷುಕರಿಗೆ ಸಿದ್ದಪಡಿಸಿದ ಆಹಾರ ವಿತರಿಸಲಾಗುತ್ತಿದೆ.
ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಸುಮಾರು ೨೦೦ ಮಂದಿಗೆ ಸಾಕಾಗುವಷ್ಟು ಸಿದ್ದಪಡಿಸಿದ ಆಹಾರ ಖರೀದಿಸಿ ಸಂಕಷ್ಟಕ್ಕೆ ವಿತರಿಸಲಾಗುತ್ತಿದೆ. ಕಳೆದ ಬಾರಿ ಸಹ ಲಾಕ್‌ಡೌನ್ ಸಮಯದಲ್ಲಿ ಹಸಿದವರ ಸಂಕಷ್ಟಕ್ಕೆ ಈ ತಂಡ ಸ್ಪಂದಿಸಿತ್ತು.