Saturday, December 4, 2021

ಅರಣ್ಯ ಇಲಾಖೆಯಲ್ಲಿ ಅವ್ಯವಹಾರ : ತನಿಖೆಗೆ ಸಚಿವರ ಆದೇಶ


ಭದ್ರಾವತಿ ವಿಭಾಗದ ಅರಣ್ಯದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲು ಅರಣ್ಯ ಸಚಿವ ಉಮೇಶ್ ಕತ್ತಿ ಆದೇಶಿಸಿರುವುದು.
    ಭದ್ರಾವತಿ, ಡಿ. ೪: ತಾಲೂಕಿನ ಭದ್ರಾವತಿ ವಿಭಾಗದ ಅರಣ್ಯದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲು ಅರಣ್ಯ ಸಚಿವ ಉಮೇಶ್ ಕತ್ತಿ ಆದೇಶಿಸಿದ್ದಾರೆ.
    ಶಾಂತಿಸಾಗರ ವಲಯದಲ್ಲಿ ಸರಿಯಾದ ರೀತಿಯಲ್ಲಿ ನೆಡುತೋಪುಗಳನ್ನು ಮಾಡದೆ ಪ್ಲಾಸ್ಟಿಕ್ ಚೀಲಗಳನ್ನು ಬೇರ್ಪಡಿಸದೆ ಸಸಿಗಳನ್ನು ನೆಡುವ ಮೂಲಕ ಅರಣ್ಯ ನಾಶ ಮಾಡಲಾಗಿದ್ದು, ಸರ್ಕಾರದ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಜೊತೆಗೆ ಅರಣ್ಯ ಒತ್ತುವರಿ ನಡೆಸಲಾಗಿದ್ದು, ಅಲ್ಲದೆ ಅರಣ್ಯ ಕಾವಲು ಪಡೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗೆ ಒಟ್ಟು ೧೨ ಅಂಶಗಳನ್ನು ಒಳಗೊಂಡ ದೂರನ್ನು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅರಣ್ಯ ಪಡೆ ಮುಖ್ಯಸ್ಥರಿಗೆ ಜ.೯, ೨೦೨೦ರಂದು ಅಂಚೆ ಮೂಲಕ ಸಲ್ಲಿಸಿದ್ದರು.


ಸಾಮಾಜಿಕ ಹೋರಾಟಗಾರ ಶಿವಕುಮಾರ್
    ಶಿವಕುಮಾರ್‌ರವರು ೨೦೧೯ರಿಂದ ನಿರಂತರವಾಗಿ ಈ ಸಂಬಂಧ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಅರಣ್ಯ ನಾಶ ಒತ್ತುವರಿ ಹಾಗು ಮರುಳುದಂಧೆ ಕುರಿತು ಮೇ.೨೫, ೨೦೧೯ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ,  ಶಾಂತಿ ಸಾಗರ(ಮಾವಿನಕಟ್ಟೆ) ವಲಯದಲ್ಲಿ ಅರಣ್ಯೀಕರಣದ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಡಿ.೪, ೨೦೧೯ರಂದು ಸಿ.ಸಿ.ಎಫ್ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ ಇವರಿಗೆ ದೂರು ಸಲ್ಲಿಸಿದ್ದರು.
    ಸೂಕ್ತ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರೂ ಸಹ ಪ್ರಕರಣದ ತನಿಖೆ ಆರಂಭಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಶಿವಕುಮಾರ್‌ರವರು ಸೆ.೨೩ರಂದು ಅರಣ್ಯ ಸಚಿವರಿಗೆ ಅಂಚೆ ಮೂಲಕ ದೂರು ಸಲ್ಲಿಸಿದ್ದರು. ದೂರಿಗೆ ಸ್ಪಂದಿಸಿರುವ ಸಚಿವರು ನ.೨೯ರಂದು ಪ್ರಕರಣಗಳ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಇಲಾಖೆಯ ಆಪ್ತ ಕಾರ್ಯದರ್ಶಿ ಸುರೇಶ ಕ. ಅಳಗುಂಡಿ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
    ಪತ್ರಿಕೆ ಜೊತೆ ಮಾತನಾಡಿ, ತಕ್ಷಣ ತಪ್ಪಿತಸ್ಥ ಅಧಿಕಾರಿಗಳು ಹಾಗು ನೌಕರರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಬೇಕು. ಅಲ್ಲದೆ ಸರ್ಕಾರ ತಪ್ಪಿತಸ್ಥರನ್ನು ಕರ್ತವ್ಯದಿಂದ ವಜಾಗೊಳಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಭ್ರಷ್ಟ ಅಧಿಕಾರಿಗಳು ಹಾಗು ನೌಕರರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

ದೀಪದ ಬೆಳಕಿನಲ್ಲಿ ಕಂಗೊಳಿಸಿದ ಶ್ರೀ ಶಿವ ಸಾಯಿ ಕೃಪ ಧಾಮ


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪ ಧಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶನಿವಾರ ಲಕ್ಷ ದೀಪೋತ್ಸವ ಯಶಸ್ವಿಯಾಗಿ ಜರುಗಿತು.
    ಭದ್ರಾವತಿ, ಡಿ. ೪: ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪ ಧಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಶನಿವಾರ ಲಕ್ಷ ದೀಪೋತ್ಸವ ಯಶಸ್ವಿಯಾಗಿ ಜರುಗಿತು.
    ದೀಪೋತ್ಸವದ ಅಂಗವಾಗಿ ಧಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರಗಳೊಂದಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ದೀಪದ ಬೆಳಕಿನಲ್ಲಿ ಕಂಗೊಳಿಸಿದ ಧಾಮ:
    ಶ್ರೀ ಶಿವ ಸಾಯಿ ಕೃಪ ಧಾಮದ ವಿಶಾಲವಾದ ಆವರಣ ಸೇರಿದಂತೆ ಎಲ್ಲೆಡೆ ದೀಪಗಳು ಕಂಗೊಳಿಸಿದವು. ಭಕ್ತಾಧಿಗಳು ಸರದಿ ಸಾಲಿನಲ್ಲಿ ಬಂದು ದೀಪಗಳನ್ನು ಬೆಳಗುವ ಜೊತೆಗೆ ಕಣ್ತುಂಬಿ ಕೊಂಡರು.
    ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಶ್ರೀ ಶಿವ ಸಾಯಿ ಕೃಪ ಧಾಮದ ಟ್ರಸ್ಟಿಗಳು, ಪ್ರಧಾನ ಅರ್ಚಕರು ಹಾಗು ಸೇವಾಕರ್ತರು ಉಪಸ್ಥಿತರಿದ್ದರು. ನ್ಯೂಟೌನ್, ಆಂಜನೇಯ ಅಗ್ರಹಾರ, ಕೂಲಿಬ್ಲಾಕ್‌ಶೆಡ್, ವಿದ್ಯಾಮಂದಿರ, ಜನ್ನಾಪುರ, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.

ಡಿ.5 ರಂದು ಕೋವಿಡ್ ಲಸಿಕೆ ಅಭಿಯಾನ

  


ಭದ್ರಾವತಿ, ಡಿ. 4: ಅಮಲೋದ್ಭವಿ ಮಾತೆಯ ದೇವಾಲಯ ಹಾಗೂ ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವತಿಯಿಂದ ಡಿ.5 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಕೋವಿಡ್  ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ಆವರಣದಲ್ಲಿ ನಡೆಯಲಿರುವ ಅಭಿಯಾನದಲ್ಲಿ ಇದುವರೆಗೂ ಲಸಿಕೆ ಪಡೆಯದವರು ಹಾಗೂ ಮೊದಲನೇ  ಡೋಸ್ ಪಡೆದರು ಪಾಲ್ಗೊಳ್ಳಬಹುದಾಗಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್  ಎರಡೂ ಬಗೆಯ ಲಸಿಕೆಗಳನ್ನು ನೀಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಮಲೋದ್ಭವಿ ಮಾತೆಯ ದೇವಾಲಯದ ಧರ್ಮಗುರು  ಫಾದರ್ ಲಾನ್ಸಿ  ಡಿಸೋಜಾ ಮತ್ತು ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಕೋರಿದ್ದಾರೆ . 

Friday, December 3, 2021

ನಿವೃತ್ತಿಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ

ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಹಾಗು ಸಹಾಯಕ ಸಿಬ್ಬಂದಿಯವರಿಗೆ ಶುಕ್ರವಾರ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
    ಭದ್ರಾವತಿ, ಡಿ. ೩: ನಗರ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿಯರಿಗೆ ಹಾಗು ಸಹಾಯಕ ಸಿಬ್ಬಂದಿಯವರಿಗೆ ಶುಕ್ರವಾರ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
    ಆಡಳಿತ ಮಂಡಳಿಯ ಹಿರಿಯ ಸದಸ್ಯ ಡಾ. ಮಹಾಬಲೇಶ್ವರ್, ಮುಖ್ಯ ಶಿಕ್ಷಕಿ ಶಕುಂತಲ ಹಾಗು ಸಹದ್ಯೋಗಿಗಳು ಶಿಕ್ಷಕಿಯರು ಹಾಗು ಸಹಾಯಕ ಸಿಬ್ಬಂದಿಯವರ ವೃತ್ತಿ ಸೇವೆಯನ್ನು ಸ್ಮರಿಸಿದರು.
    ಶಿಕ್ಷಕಿಯರಾಗಿ ವೃತ್ತಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಾಂತಮ್ಮ, ಉಮಾದೇವಿ ಹಾಗು ಸಹಾಯಕ ಸಿಬ್ಬಂದಿ ಅನಸೂಯಮ್ಮ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
    ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್, ಖಜಾಂಚಿ ಎಚ್. ವಿಶ್ವನಾಥ್, ವಿಶ್ವಸ್ಥ ಮಂಡಳಿಯ ಮಧುಕರ್ ಕಾನಿಟ್ಕರ್, ಸುಭಾಷ್, ಶಿಕ್ಷಕಿಯರಾದ ಸುಜಾತ, ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಪಡಿತರ ವಿತರಕರ ಸಭೆ : ತಕ್ಷಣ ಕಮೀಷನ್ ಬಿಡುಗಡೆಗೆ ಮನವಿ


ರಾಜ್ಯದಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಗಳ ಸಮಸ್ಯೆ ಕುರಿತು ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
    ಭದ್ರಾವತಿ, ಡಿ. ೩: ರಾಜ್ಯದಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಗಳ ಸಮಸ್ಯೆ ಕುರಿತು ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಚರ್ಚಿಸಲಾಯಿತು.
    ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ತುರ್ತು ಸಭೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ, ಕೆವೈಸಿಹಾಗು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಮೀಷನ್ ವಿಚಾರಗಳ ಕುರಿತು ಚರ್ಚಿಸಲಾಯಿತು.
    ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಮೀಷನ್ ಈಗಾಗಲೇ ಬಿಡುಗಡೆಗೊಂಡಿದ್ದು, ಆದರೂ ಸಹ ಇದುವರೆಗೂ ಖಾತೆಗಳಿಗೆ ಜಮಾ ಆಗಿಲ್ಲ. ತಕ್ಷಣ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅರಬಿಳಚಿ ಕ್ಯಾಂಪ್‌ನಲ್ಲಿ ಕನ್ನಡ ರಾಜ್ಯೋತ್ಸವ


ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ವಿಶ್ವನಗರದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಭದ್ರಾವತಿ, ಡಿ. ೩: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ  ತಾಲೂಕಿನ ಅರಬಿಳಚಿ ಕ್ಯಾಂಪ್ ವಿಶ್ವನಗರದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಸಾಹಿತಿ ಜೆ.ಎನ್ ಬಸವರಾಜಪ್ಪ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆಯ  ವೈಶಿಷ್ಟತೆಗಳನ್ನು, ಕೊಡುಗೆಗಳನ್ನುವಿವರಿಸಿದರು.
    ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್ ಮಾತನಾಡಿ, ನಾವೆಲ್ಲರೂ ಜಾತಿ, ಬೇಧಭಾವವಿಲ್ಲದೆ ಒಗ್ಗಟ್ಟಾಗಿ ಕನ್ನಡ ನಾಡು-ನುಡಿ ಕಟ್ಟಿ ಬೆಳೆಸುವ ಕಾರ್ಯದಲ್ಲಿ ಮುನ್ನಡೆಯೋಣ ಎಂದು ಕರೆ ನೀಡಿದರು.
    ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಣ್ಣಾಮಲೈ, ಕರವೇ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್,  ತಾಲೂಕು ಕಾರ್ಯದರ್ಶಿ ಅಶೋಕ ಘೋರ್ಪಡೆ, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ, ಘಟಕ ಉಪಾಧ್ಯಕ್ಷ ಗೋಪಿನಾಥ್, ವಿಶ್ವ ನಗರ ಘಟಕದ ಅಧ್ಯಕ್ಷ ಪ್ರವೀಣ್ ಹಾಗೂ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಡಿಎಸ್‌ಎಸ್ ಮುಖಂಡ ಪಳನಿರಾಜ್ ನಿರೂಪಿಸಿದರು.

ಮೂಲ ಆಕಾರ ಗ್ರಂಥಗಳನ್ನು ಅಧ್ಯಯನ ನಡೆಸಿ : ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಪ್ರದರ್ಶನ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು.
    ಭದ್ರಾವತಿ, ಡಿ. ೩: ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕ್ರಮಬದ್ಧವಾಗಿ ಮತ್ತು ಯೋಜಿತವಾಗಿ ಮೂಲ ಪಠ್ಯ ಪುಸ್ತಕಗಳನ್ನು ಅಧ್ಯಯನ ನಡೆಸಬೇಕು. ಎಲ್ಲವನ್ನು ಅಂತರ್ಜಾಲದ ಮೂಲಕ ಪಡೆಯುವುದನ್ನು ನಿಲ್ಲಿಸಿ, ನೋಟ್ಸ್ ಮತ್ತು ಗೈಡ್‌ಗಳ ಬದಲಾಗಿ ಮೂಲ ಆಕಾರ ಗ್ರಂಥಗಳನ್ನು ಅಧ್ಯಯನ ನಡೆಸಿ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಸಲಹೆ ನೀಡಿದರು.
    ಅವರು ಶುಕ್ರವಾರ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಪುಸ್ತಕ ಪ್ರದರ್ಶನ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಗ್ರಂಥಾಲಯಗಳು ಜ್ಞಾನದ ದೇಗುಲಗಳಿದಂತೆ, ಪುಸ್ತಕಗಳ ಅಧ್ಯಯನದಿಂದ ಜ್ಞಾನ ಸಂಪಾದನೆ ಮತ್ತು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಜಗತ್ತಿನ ಶ್ರೇಷ್ಠ ಮತ್ತು ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ರೂಪುಗೊಂಡದ್ದು ಗ್ರಂಥಾಲಯಗಳಿಂದ ಎನ್ನುವುದು ಸರ್ವಕಾಲಿಕ ಸತ್ಯ ಎಂದರು.
    ಗ್ರಂಥಗಳ ಅಧ್ಯಯನ ಹೊಸ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಡಾ. ಬಿ.ಆರ್ ಅಂಬೇಡ್ಕರ್‌ರವರು ನಿರಂತರವಾಗಿ ಅಧ್ಯಯನ ನಡೆಸುವ ಮೂಲಕ ಜಗತ್ತು ಮೆಚ್ಚುವ ವಿದ್ವಾಂಸರಾದರು. ಈ ದಾರಿಯಲ್ಲಿ ನಾವುಗಳು ಸಹ ಸಾಗಬೇಕಾಗಿದೆ ಎಂದರು.
    ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ಜಿ.ಆರ್ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ಪ್ರದರ್ಶನದ ಮುಖ್ಯ ಉದ್ದೇಶಗಳನ್ನು ವಿವರಿಸಿದರು. ಡಾ. ಬಸವರಾಜ್, ಮಲ್ಲಪ್ಪ, ಡಾ. ತಿಪ್ಪೇಶ್, ಅಜಯ್, ಸತೀಶ್, ಚಂದ್ರಪ್ಪ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೇವಣ ಸಿದ್ದಪ್ಪ ಸ್ವಾಗತಿಸಿದರು. ಉಮೇಶ್ ವಂದಿಸಿದರು.