ಭದ್ರಾವತಿ ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ, ಆ. ೧: ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
೧೯೯೮-೯೯ರಲ್ಲಿ ತಹಸೀಲ್ದಾರ್ರವರು ಅಧಿಕೃತವಾಗಿ ಪಹಣಿಯಲ್ಲಿ ಗ್ರಾಮದ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗ ಎಂದು ನಮೂದಿಸಿದ್ದಾರೆ. ಆದರೂ ಸಹ ಕೆಲವರು ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಸಹ ಈ ಜಾಗ ನಮ್ಮದು ಎಂದು ಕಬಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಧಿಕಾರಿಗಳು ಹಾಗು ರಾಜಕಾರಣಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಲಾಯಿತು.
೨೦೧೭ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಲೋಕೇಶ್ರವರು ಮನವಿಗೆ ಸ್ಪಂದಿಸಿ ಖುದ್ದಾಗಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಜೊತೆಗೆ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ ಗಡಿ ಗುರುತಿಸಿ ಅಳತೆ ಮಾಡುವಂತೆ ಹಾಗು ಒತ್ತುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಆದೇಶಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಗ್ರಾಮಗಳಿಗೆ ಅಗತ್ಯವಿರುವ ಸ್ಮಶಾನ ಜಾಗ ಕಡ್ಡಾಯವಾಗಿ ಕಲ್ಪಿಸಿಕೊಡುವಂತೆ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಬಿ.ಆರ್.ಪಿ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ ಗ್ರಾಮಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣ ಸ್ಮಶಾನ ಜಾಗ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು.
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ಪ್ರಮುಖರಾದ ಶಶಿಕುಮಾರ್ ಗೌಡ, ಈ. ಕೃಷ್ಣ, ಅಭಿಮನ್ಯು, ಕೃಷ್ಣಮೂರ್ತಿ, ಜಿ. ಸಂತೋಷ್, ಎಲ್.ಬಿ ನಂದಕುಮಾರ್, ಎಂ.ಬಿ ವಿಶ್ವನಾಥ್, ಶ್ರೀನಿವಾಸ್, ನೇತ್ರಾ, ಜಲಜಾಕ್ಷಿ, ಮೀನಾ, ಸಿದ್ದಮ್ಮ, ಚಲುವಿ, ಭಾಗ್ಯ, ಲಕ್ಷ್ಮಮ್ಮ, ಲಲಿತಾ, ಗಂಗಮ್ಮ, ಯಲ್ಲಮ್ಮ, ಎಂ.ಕೆ ಪುಷ್ಪ, ವಾಣಿ, ವರಲಕ್ಷ್ಮಿ, ಮುನಿಯಮ್ಮ, ಸುಲೋಚನ, ಶಕೀಲ, ಮಹೇಶ್ವರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.