Tuesday, August 9, 2022

ಭದ್ರಾ ನದಿಯಲ್ಲಿ ಪ್ರವಾಹ : ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತ

ಭದ್ರಾವತಿ ನಗರಸಭೆ ೨ನೇ ವಾರ್ಡಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿ ಪ್ರವಾಹದಿಂದಾಗಿ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿರುವುದು.
    ಭದ್ರಾವತಿ, ಆ. ೯: ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ೨ನೇ ಬಾರಿಗೆ ಪ್ರವಾಹ ಉಂಟಾಗಿದ್ದು, ನದಿ ತೀರದ ತಗ್ಗು ಪ್ರದೇಶದಲ್ಲಿನ ಸುಮಾರು ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
    ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಡಲಾಗಿದ್ದು, ಇದರಿಂದಾಗಿ ನಗರ ವ್ಯಾಪ್ತಿಯಲ್ಲಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶದಲ್ಲಿನ ಮನೆಗಳು ಜಲಾವೃತಗೊಂಡಿವೆ. ಪ್ರವಾಹ ನಿಯಂತ್ರಿಸುವಲ್ಲಿ ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
    ಸೋಮವಾರ ಮಧ್ಯ ರಾತ್ರಿಯಿಂದಲೇ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ತಗ್ಗು ಪ್ರದೇಶದಲ್ಲಿನ ನಿವಾಸಿಗಳನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು.



    ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತ್ತ :
    ಗುಂಡೂರಾವ್ ಶೆಡ್‌ನಲ್ಲಿ ಸುಮಾರು ೧೦, ಎಕಿನ್ಸಾ ಕಾಲೋನಿಯಲ್ಲಿ ಸುಮಾರು ೨೫, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ನಗರದಲ್ಲಿ ಸುಮಾರು ೩೫ ಹಾಗು ಕವಲಗುಂದಿ ಎ.ಕೆ ಕಾಲೋನಿಯಲ್ಲಿ ಸುಮಾರು ೩೨ ಮನೆಗಳು ಸೇರಿದಂತೆ ಒಟ್ಟು ಸುಮಾರು ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
    ೨ ಕಾಳಜಿ ಕೇಂದ್ರ, ೧೫೦ಕ್ಕೂ ಹೆಚ್ಚು ಮಂದಿ ಆಶ್ರಯ :
   ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪ ಮತ್ತು ಕವಲಗುಂದಿಯಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯ ೨ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.
    ವಯೋವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೧೫೦ಕ್ಕೂ ಹೆಚ್ಚು ಮಂದಿ ತಾತ್ಕಾಲಿಕ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ನಡುವೆ ಬಿಸಿಎಂ ವಿದ್ಯಾರ್ಥಿ ನಿಲಯದ ಕಾಳಜಿ ಕೇಂದ್ರದಲ್ಲಿ ನವಜಾತ ಶಿಶುವಿನೊಂದಿಗೆ ಬಾಣಂತಿ ಮಹಿಳೆ ಇದ್ದು, ಇವರ ಪರದಾಟ ಹೇಳತಿಹದು. ಈ ನಡುವೆ ಅಂಬೇಡ್ಕರ್ ನಗರದ ಸಂತ್ರಸ್ಥರು ಕಾಳಜಿ ಕೇಂದ್ರಗಳಿಗೆ ತೆರಳಲು ನಿರಾಕರಿಸಿದ್ದು, ಇವರಿಗೆ ಇಲ್ಲಿಯೇ ಊಟ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ.


ಭದ್ರಾವತಿ ನಗರಸಭೆ ೨ನೇ ವಾರ್ಡಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿ ಪ್ರವಾದಿಂದಾಗಿ ಸಂತ್ರಸ್ಥರಾದವರು ಬಿಸಿಎಂ ವಿದ್ಯಾರ್ಥಿ ನಿಲಯದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವುದು.
    ಶಾಸಕರ ವಿರುದ್ಧ ಸಂತ್ರಸ್ಥರ ಆಕ್ರೋಶ :
    ಗುಂಡೂರಾವ್ ಶೆಡ್  ಸಂತ್ರಸ್ಥರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ನೀಡಿ ಹೋಗುತ್ತಾರೆ. ಪುನಃ ಈ ಕಡೆ ತಿರುಗಿ ನೋಡುವುದಿಲ್ಲ. ಪ್ರತಿ ವರ್ಷ ಮನೆಗಳು ಜಲಾವೃತಗೊಳ್ಳುತ್ತಿವೆ. ಇದರಿಂದಾಗಿ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ನಮಗೆ ಬೇರೆ ಕಡೆ ನಿವೇಶನ ನೀಡಿ ತೆರವುಗೊಳಿಸಬಹುದು. ಆದರೆ ಮನೆ ನಿರ್ಮಿಸಿಕೊಳ್ಳುವಷ್ಟು ಹಣ ನಮ್ಮ ಬಳಿ ಇಲ್ಲ ಎಂದು ತಮ್ಮ ಅಳಲು ತೋರ್ಪಡಿಸಿಕೊಳ್ಳುವ ಜೊತೆಗೆ ತಕ್ಷಣ ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  
    ಮುಳುಗಡೆಗೊಂಡ ಹೊಸ ಸೇತುವೆ ವೀಕ್ಷಿಸಲು ಜನರ ದಂಡು :
    ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಹೊಸಸೇತುವೆ ೩ನೇ ಬಾರಿಗೆ ಪುನಃ ಮುಳುಗಡೆಗೊಂಡಿದ್ದು, ಸೇತುವೆಯನ್ನು ವೀಕ್ಷಿಸಲು ನಗರದ ವಿವಿಧೆಡೆಗಳಿಂದ ಜನರ ದಂಡು ಆಗಮಿಸುತ್ತಿದೆ. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಕಂಡು ಬಂದರೇ, ಮತ್ತೆ ಕೆಲವರು ಸೆಲ್ಫಿ ತೆಗೆದುಕೊಳ್ಳುವುದು ಕಂಡು ಬಂದಿತು.
    ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದ್ದು, ಸೇತುವೆ ಎರಡು ಬದಿಯಲ್ಲೂ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದೆ.
    ವಾಹನ ದಟ್ಟಣೆ :
    ಪ್ರವಾಹದಿಂದ ಹೊಸಸೇತುವೆ ಮುಳುಗಡೆಗೊಂಡಿರುವ ಹಿನ್ನಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಎಲ್ಲಾ ವಾಹನಗಳು ಹಳೇ ಸೇತುವೆ ಮೇಲೆ ಸಂಚರಿಸುವಂತಾಗಿದೆ. ಬಿ.ಎಚ್ ರಸ್ತೆ ಹಾಗು ಸಿ.ಎನ್ ರಸ್ತೆ ಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ.


ಭದ್ರಾವತಿ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿರುವುದು.  


ಸುರಗಿತೋಪಿನಲ್ಲಿ ಭಾರಿ ಮಳೆಗೆ ೧೦-೧೨ ಹಂಚಿನ ಮನೆಗಳ ಗೋಡೆ ಕುಸಿತ

ತಿರುಗಿ ನೋಡದ ಅಧಿಕಾರಿಗಳು : ಸಂತ್ರಸ್ಥರ ಆರೋಪ

ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿರುವುದು.
    ಭದ್ರಾವತಿ, ಆ. ೯: ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರಗಿತೋಪಿನಲ್ಲಿ ಭಾರಿ ಮಳೆಯಿಂದಾಗಿ ಸುಮಾರು ೧೦-೧೨ ಹಂಚಿನ ಮನೆಗಳ ಗೋಡೆಗಳು ಕುಸಿದು ಬಿದ್ದಿರುವ ಘಟನೆ ನಡೆದಿದೆ.
    ಸುರಗಿತೋಪಿನ ೨, ೩ ಮತ್ತು ೪ನೇ ರಸ್ತೆಯಲ್ಲಿರುವ ಹಂಚಿನ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಸುಂದ್ರಮ್ಮ, ಸಂತೋಷ್, ವೆಂಕಟೇಶ್ ಮತ್ತು ರಮೇಶ್ ಎಂಬುವರ ಮನೆಗಳ ಗೋಡೆಗಳು ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದ್ದು, ಉಳಿದಂತೆ ಕೆಲವು ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಗಳಾಗಿವೆ.
    ಇದುವರೆಗೂ ಯಾರು ಬಂದಿಲ್ಲ :
    ಇಲ್ಲಿನ ಸುಮಾರು ೮೦ರಷ್ಟು ಮನೆಗಳಿಗೆ ಇನ್ನೂ ಹಕ್ಕು ಪತ್ರ ನೀಡಿಲ್ಲ. ಮೇಲಾಧಿಕಾರಿಗಳು ಹಕ್ಕು ಪತ್ರ ನೀಡುವುದನ್ನು ತಡೆ ಹಿಡಿದಿದ್ದಾರೆ ಎನ್ನುವ ಮಾಹಿತಿ ಇದ್ದು, ಇದೀಗ ಮನೆಗಳು ಕುಸಿದು ಬಿದ್ದಿದ್ದರೂ ಸಹ ಯಾವ ಅಧಿಕಾರಿಯೂ ಈ ಕಡೆ ತಿರುಗಿ ನೋಡಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಕಷ್ಟಕ್ಕೆ ಸ್ಪಂದಿಸುವಂತೆ ಸಂತ್ರಸ್ಥರು ಅಳಲು ವ್ಯಕ್ತಪಡಿಸಿದ್ದಾರೆ.
    ಸರ್ಕಾರದಿಂದ ಸೂಕ್ತ ಪರಿಹಾರ ನೀಡಿ:  
    ವಾರ್ಡ್ ಸದಸ್ಯೆ ಜಯಶೀಲ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಗೌರವ ಅಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್ ಪಕ್ಷದ ಮುಖಂಡರಾದ ಸುರೇಶ್(ಕ್ಲಬ್), ನಿರ್ಲಮಕುಮಾರಿ, ಉಮೇಶ್ ಸುರಗಿತೋಪು ಸೇರಿದಂತೆ ಇನ್ನಿತರರು, ಸಂತ್ರಸ್ಥರ ಮನೆಗಳಿಗೆ ತಕ್ಷಣ ಹಕ್ಕು ಪತ್ರ ನೀಡುವ ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.  



ಗೋಡೆ ಕುಸಿದು ಬಿದ್ದು ಮೃತಪಟ್ಟ ಮಹಿಳೆ ಅಂತ್ಯ ಸಂಸ್ಕಾರ : ೫ ಲಕ್ಷ ರು. ಪರಿಹಾರ ವಿತರಣೆ

ಗೋಡೆ ಕುಸಿದು ಬಿದ್ದ ಪರಿಣಾಮ ಮೃತಪಟ್ಟ ಮಹಿಳೆ ಭಾಗ್ಯಮ್ಮ
    ಭದ್ರಾವತಿ, ಆ. ೯: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೋಮವಾರ ನಗರಸಭೆ ವ್ಯಾಪ್ತಿಯ ಕಾಚಗೊಂಡನಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ(೬೨) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.
    ಸೋಮವಾರ ರಾತ್ರಿ ನಡೆದ ದುರ್ಘಟನೆಯಲ್ಲಿ ಮನೆಯಲ್ಲಿದ್ದ ಕೃಷ್ಣಮೂರ್ತಿ ಎಂಬುವರು ಗಾಯಗೊಂಡಿದ್ದು, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಭಾರಿ ಮಳೆ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಚಗೊಂಡನಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವರ ಮನೆ ಗೋಡೆ ಕುಸಿದಿರುವುದು.
    ಮೃತಪಟ್ಟ ಭಾಗ್ಯಮ್ಮನವರ ಅಂತ್ಯಸಂಸ್ಕಾರ ಮಧ್ಯಾಹ್ನ ಸುಮಾರು ೧೨.೩೦ಕ್ಕೆ ಗ್ರಾಮದ ಸ್ಮಶಾನ ಭೂಮಿಯಲ್ಲಿ ನೆರವೇರಿತು. ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಪರಿಷತ್ ಸದಸ್ಯ ಡಿ.ಎಸ್ ಅರುಣ್, ತಹಸೀಲ್ದಾರ್ ಆರ್. ಪ್ರದೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಗ್ರಾಮದ ಮುಖಂಡ ಮಂಜುನಾಥ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಪಕ್ಷಗಳ  ಸೇರಿದಂತೆ ಇನ್ನಿತರರು ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.


ಗೋಡೆ ಕುಸಿದು ಬಿದ್ದ ಪರಿಣಾಮ ಮೃತಪಟ್ಟ ಮಹಿಳೆ ಭಾಗ್ಯಮ್ಮನವರ ಅಂತ್ಯ ಸಂಸ್ಕಾರ ಮಂಗಳವಾರ ನಡೆಯಿತು. ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    ಪ್ರವಾಹ ಸಂತ್ರಸ್ಥರ ನಿಧಿಯಿಂದ ಹಾನಿಯಾದ ಮನೆ ಪುನರ್ ನಿರ್ಮಾಣಕ್ಕೆ ೫ ಲಕ್ಷ ರು. ಹಾಗು ಮೃತಪಟ್ಟ ಮಹಿಳೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೨ ಲಕ್ಷ ರು. ಒಟ್ಟು ೭ ಲಕ್ಷ ರು. ಈ ಪೈಕಿ ಸ್ಥಳದಲ್ಲಿಯೇ ೫ ಲಕ್ಷ ರು. ಪರಿಹಾರದ ಚೆಕ್ ಕುಟುಂಬಸ್ಥರಿಗೆ ವಿತರಿಸಲಾಯಿತು.

Monday, August 8, 2022

ಭಾರಿ ಮಳೆಗೆ ಗೋಡೆ ಕುಸಿದು ಓರ್ವ ಗೃಹಿಣಿ ಮೃತ

    ಭದ್ರಾವತಿ, ಆ. ೮: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸೋಮವಾರ ಕಾಚಗೊಂಡನಹಳ್ಳಿ ಗ್ರಾಮದ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ಗೃಹಿಣಿಯೋರ್ವಳು ಮೃತಪಟ್ಟಿರುವ ಘಟನೆ ನಡೆದಿದೆ.
    ನಗರಸಭೆ ವ್ಯಾಪ್ತಿಯ ಕಾಚಗೊಂಡನಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮ(62) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕೃಷ್ಣಮೂರ್ತಿ  ಎಂಬುವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಮತ್ತೊಂದೆಡೆ ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹೊಳೆಹೊನ್ನೂರು ಗೇಜ್ ಮಾಹಿತಿಯಂತೆ ರಾತ್ರಿ ೧೦ರ ವೇಳೆಗೆ ಜಲಾಶಯದ ಒಳ ಹರಿವು ೭೬,೦೦೦ ಕ್ಯೂಸೆಕ್ಸ್ ಹೊಂದಿದ್ದು, ೧೮೩.೮ ಅಡಿ ಭರ್ತಿಯಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯದ ೪ ಕ್ರಸ್ಟ್ ಗೇಟ್‌ಗಳನ್ನು ೧೦ ಅಡಿ ತೆರೆದು ೫೬,೧೦೪.೨೯ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ತಿಳಿಸಿದ್ದಾರೆ.

ಆರ್‌ಎಎಫ್ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ

ರಾಷ್ಟ್ರ ಧ್ವಜ ಖರೀದಿ ಮಾಡಿ ಜಾಗೃತಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಿಗೆ ರಾಷ್ಟ್ರ ಧ್ವಜ ವಿತರಣೆ

ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ರ್‍ಯಾಪಿಡ್ ಆಕ್ಷನ್ ಫೋರ್ಸ್(ಆರ್‌ಎಎಫ್) ೯೭ ಬೆಟಾಲಿಯನ್ ವತಿಯಿಂದ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೋಮವಾರ ರಾಷ್ಟ್ರ ಧ್ವಜಗಳನ್ನು ವಿತರಿಸಲಾಯಿತು.
    ಭದ್ರಾವತಿ, ಆ. ೮: ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ರ್‍ಯಾಪಿಡ್ ಆಕ್ಷನ್ ಫೋರ್ಸ್(ಆರ್‌ಎಎಫ್) ೯೭ ಬೆಟಾಲಿಯನ್ ವತಿಯಿಂದ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೋಮವಾರ ರಾಷ್ಟ್ರ ಧ್ವಜಗಳನ್ನು ವಿತರಿಸಲಾಯಿತು.
    ಕಾರ್ಯಕ್ರಮಕ್ಕೆ ತಹಸೀಲ್ದಾರ್ ಆರ್. ಪ್ರದೀಪ್ ಚಾಲನೆ ನೀಡಿದರು. ರಂಗಪ್ಪ ವೃತ್ತ, ತಾಲೂಕು ಕಛೇರಿ ರಸ್ತೆ, ಸಿ.ಎನ್ ರಸ್ತೆ, ಹೊಸಮನೆ ಮುಖ್ಯ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ರಾಷ್ಟ್ರ ಧ್ವಜಗಳನ್ನು ವಿತರಿಸಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸುವಂತೆ ಜಾಗೃತಿ ಮೂಡಿಸಲಾಯಿತು.
    ಆರ್‌ಎಎಫ್ ೯೭ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಭಾರತಿ, ಎಎಸ್‌ಐ ಈಶ್ವರ್,  ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್, ಮಾಜಿ ಸೈನಿಕರ ಸಂಘದ ಪ್ರಮುಖರಾದ ಸುಬೇದಾರ್ ಗುಳ್‌ಗುಳೆ, ಬೋರೇಗೌಡ, ಉಮೇಶ್, ರಮೇಶ್, ಕೃಷ್ಣೋಜಿರಾವ್, ಗಿರೀಶ್, ಶ್ರೀಧರ್, ಕವಿತಾರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಸದಸ್ಯರು ಸೋಮವಾರ ರಾಷ್ಟ್ರ ಧ್ವಜ ಖರೀದಿಸಿ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಿದರು.
    ರಾಷ್ಟ್ರ ಧ್ವಜ ಖರೀದಿ :
    ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಸದಸ್ಯರು ಸೋಮವಾರ ರಾಷ್ಟ್ರ ಧ್ವಜ ಖರೀದಿಸಿ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಿದರು.
    ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಸ್ವಂತ ಹಣದಲ್ಲಿ ರಾಷ್ಟ್ರ ಖರೀದಿಸಿ ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಅಭಿಯಾನ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಮನುಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್, ವ್ಯವಸ್ಥಾಪಕಿ ಸುನೀತಾಕುಮಾರಿ, ಸಮುದಾಯ ಸಂಘಟನಾಧಿಕಾರಿ ಸುವಾಸಿನಿ ಸೇರಿದಂತೆ ನಗರಸಭೆ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ತಾಲೂಕಿನಾದಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ಮುಂದಾಗಿದ್ದು, ಬೂತ್‌ಮಟ್ಟದಲ್ಲಿ ಅಭಿಯಾನ ಕುರಿತು ಜಾಗೃತಿ ಮೂಡಿಸಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಿಗೆ ರಾಷ್ಟ್ರ ಧ್ವಜ ವಿತರಿಸಲಾಗಿದೆ.
    ಮಹಾಶಕ್ತಿ ಕೇಂದ್ರದ ಅಧ್ಯಕ್ಷರಿಗೆ ರಾಷ್ಟ್ರ ಧ್ವಜ ವಿತರಣೆ :
    ತಾಲೂಕಿನಾದಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ಮುಂದಾಗಿದ್ದು, ಬೂತ್‌ಮಟ್ಟದಲ್ಲಿ ಅಭಿಯಾನ ಕುರಿತು ಜಾಗೃತಿ ಮೂಡಿಸಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಿಗೆ ರಾಷ್ಟ್ರ ಧ್ವಜ ವಿತರಿಸಲಾಗಿದೆ.
ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು ಅಭಿಯಾನ ಕುರಿತು ಹೆಚ್ಚಿನ ಮಾಹಿತಿ ನೀಡುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದರು.

ಸಣ್ಣ ಸಣ್ಣ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ನಿಷೇಧಿಸಿ : ಮಕ್ಕಳಲ್ಲಿ ಜಾಗೃತಿ ಮೂಡಿಸಿ

ಭದ್ರಾವತಿ ನಗರದೆಲ್ಲೆಡೆ ಅಂಗಡಿ ಮುಂಗಟ್ಟುಗಳಲ್ಲಿ ಸಣ್ಣ ಸಣ್ಣ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದ್ದು, ತಕ್ಷಣ ಮಾರಾಟ ಮಾಡುವುದನ್ನು ತಡೆಗಟ್ಟುವ ಮೂಲಕ ಮಕ್ಕಳಲ್ಲಿ ರಾಷ್ಟ್ರ ಧ್ವಜದ ಬಗ್ಗೆ ಅರಿವು ಮೂಡಿಸಬೇಕೆಂದು ಆಗ್ರಹಿಸಿ ಸೋಮವಾರ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೮: ನಗರದೆಲ್ಲೆಡೆ ಅಂಗಡಿ ಮುಂಗಟ್ಟುಗಳಲ್ಲಿ ಸಣ್ಣ ಸಣ್ಣ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದ್ದು, ತಕ್ಷಣ ಮಾರಾಟ ಮಾಡುವುದನ್ನು ತಡೆಗಟ್ಟುವ ಮೂಲಕ ಮಕ್ಕಳಲ್ಲಿ ರಾಷ್ಟ್ರ ಧ್ವಜದ ಬಗ್ಗೆ ಅರಿವು ಮೂಡಿಸಬೇಕೆಂದು ಆಗ್ರಹಿಸಿ ಸೋಮವಾರ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
    ದೇಶದ ರಾಷ್ಟ್ರ ಧ್ವಜ ತನ್ನದೇ ಆದ ವಿಶಿಷ್ಟತೆ ಹಾಗು ಗೌರವ ಸ್ಥಾನಮಾನಗಳನ್ನು ಹೊಂದಿದ್ದು, ಇಂತಹ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಂತೆ ಪ್ಲಾಸ್ಟಿಕ್ ಬಳಸಿ ಸಣ್ಣ ಸಣ್ಣ ಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಪ್ರಾಥಮಿಕ ಹಂತದ ಕೆಲವು ಶಾಲಾ ಮಕ್ಕಳಿಗೆ ದೇಶದ ರಾಷ್ಟ್ರ ಧ್ವಜದ ಬಗ್ಗೆ ಅರಿವು ಕಡಿಮೆ ಇದ್ದು, ಮಕ್ಕಳು ಧ್ವಜವನ್ನು ಎಲ್ಲಿ ಬೇಕೆಂದರಲ್ಲಿ ಹಾಕುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಗೌರವ ಮತ್ತು ರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಲಾಯಿತು.  
    ಸಣ್ಣ ಸಣ್ಣ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವುದು ಖಂಡನೀಯವಾಗಿದ್ದು, ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದೆ. ಈಗಾಗಲೇ ಸರ್ಕಾರ ಪ್ಲಾಸ್ಟಿಕ್ ನಿಷೇಧಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡದಂತೆ ಅಂಗಡಿಮುಂಗಟ್ಟುಗಳಿಗೆ ಆದೇಶಿಸಬೇಕೆಂದು ಆಗ್ರಹಿಸಲಾಗಿದೆ.
    ವೇದಿಕೆ ಅಧ್ಯಕ್ಷೆ ಜಗದೀಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ನಗರಸಭೆ ಮಾಜಿ ಸದಸ್ಯ ಫ್ರಾನ್ಸಿಸ್, ಮಾಜಿ ಸೈನಿಕ ರವಿ, ಬಿ.ಆರ್ ಮಂಜುಳ ರಾಮಚಂದ್ರ, ಸುಮಿತ್ರಾ ಅಂಬೋರೆ, ಬಿ.ಕೆ ಗೀತಾ, ಸತ್ಯ ಜಗದೀಶ್, ಬಿ.ಎಂ ಅನಿತಾ, ಪ್ರಸನ್ನಕುಮಾರ್, ಸುಬ್ಬು, ರಾಜೇಶ್, ಅಶೋಕ್, ಆರ್. ಭೂಪಾಲ, ಶ್ರೀನಿವಾಸ್ ಮತ್ತು ಪುರುಷೋತ್ತಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಎಪಿ ಅಧ್ಯಕ್ಷರಾಗಿ ಡಿ.ಎಸ್ ಪರಮೇಶ್ವರ ಆಚಾರ್ ನೇಮಕ

ಡಿ.ಎಸ್ ಪರಮೇಶ್ವರ ಆಚಾರ್
    ಭದ್ರಾವತಿ, ಆ. ೮: ಆಮ್ ಆದ್ಮಿ ಪಾರ್ಟಿ(ಎಎಪಿ) ತಾಲೂಕು ಅಧ್ಯಕ್ಷರಾಗಿ ಪಕ್ಷದ ಹಿರಿಯ ಕಾರ್ಯಕರ್ತರಾದ ಡಿ.ಎಸ್ ಪರಮೇಶ್ವರ ಆಚಾರ್ ಅವರನ್ನು ನೇಮಕಗೊಳಿಸಲಾಗಿದೆ.
    ಪಕ್ಷದ ಜಿಲ್ಲಾ ಸಂಘಟನಾ ಸಂಯೋಜಕ ನವಿಲೇಶ್ ಅವರು ಪಕ್ಷದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿದ್ದಾರೆ.
    ಸುಮಾರು ೮ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಿ.ಎಸ್ ಪರಮೇಶ್ವರ ಆಚಾರ್ ಅವರನ್ನು ಅಧ್ಯಕ್ಷರನ್ನಾಗಿ, ಚಂದರಪ್ಪ ಅವರನ್ನು ಗೌರವ ಅಧ್ಯಕ್ಷರನ್ನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಎ. ಮಸ್ತಾನ್, ಮಾಧ್ಯಮ ಸಲಹೆಗಾರರಾಗಿ ಅಬ್ದುಲ್ ಖದೀರ್, ಅಂತರಜಾಲತಾಣಗಳ ವಕ್ತಾರರಾಗಿ ಟಿ.ವಿ ಜೋಸೆಫ್ ಹಾಗು ಮಹಿಳಾ ಘಟಕದ ಅಧ್ಯಕ್ಷರಾಗಿ ರೇಷ್ಮಾಬಾನು ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
    ಮುಂಬರುವ ೨೦೨೪ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಯುವ ಮುಖಂಡ, ಉದ್ಯಮಿ ಮಾರುತಿ ಮೆಡಿಕಲ್ ಆನಂದ್ ನೇತೃತ್ವದಲ್ಲಿ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಕಾರ್ಯ ಆರಂಭಗೊಂಡಿದೆ. ಪ್ರತಿ ಮನೆ ಮನೆಗೆ ತೆರಳಿ ಪಕ್ಷದ ಸಾಧನೆಗಳು ಹಾಗು ಭವಿಷ್ಯದಲ್ಲಿ ಪಕ್ಷ ಹೊಂದಿರುವ ಆಶಯಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.