Thursday, November 3, 2022

ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ವೀರಪ್ಪ ನಿಧನ

ವೀರಪ್ಪ
    ಭದ್ರಾವತಿ, ನ. ೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ ವೀರಪ್ಪ(೭೨) ಬುಧವಾರ ನಿಧನ ಹೊಂದಿದರು.
    ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಹುತ್ತಾಕಾಲೋನಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದ ಕಾರ್ಖಾನೆಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು.
    ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಿವೃತ್ತ ಕಾರ್ಮಿಕರು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಕೃಷ್ಣಮೂರ್ತಿ ನಿಧನ


ಕೃಷ್ಣಮೂರ್ತಿ
    ಭದ್ರಾವತಿ, ನ. ೩ : ನಗರದ ಸುರಗಿತೋಪು ೨ನೇ ಕ್ರಾಸ್ ನಿವಾಸಿ ಕೃಷ್ಣಮೂರ್ತಿ(ಬೆಣ್ಣೆ)(೩೮) ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
    ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ ಬೈಪಾಸ್ ರಸ್ತೆ, ಬುಳ್ಳಾಪುರ ಶಂಕರಪ್ಪ ಕಟ್ಟೆ ಸಮೀಪದ ಶ್ರೀ ಸತ್ಯಹರಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
    ಇವರ ನಿಧನಕ್ಕೆ ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಜಯಶೀಲ ಸುರೇಶ್,  ಕಾಂಗ್ರೆಸ್ ಮುಖಂಡರಾದ ಜಯರಾಜ್, ಮಹೇಶ್, ಬಿಜೆಪಿ ಮುಖಂಡರಾದ ಛಲವಾದಿ ಕೃಷ್ಣ ಸೇರಿದಂತೆ ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕರತ್ನ ಪುರಸ್ಕೃತರಿಗೆ ದೇವಾಲಯ : ಶೀಘ್ರದಲ್ಲಿಯೇ ಲೋಕಾರ್ಪಣೆ

ಡಾ. ರಾಜ್‌ಕುಮಾರ್ ಅಭಿಮಾನಿಗಳು, ಕರ್ನಾಟಕರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ, ರೈಲ್ವೆ ನಿಲ್ದಾಣ ಮುಂಭಾಗ ನಗರಸಭೆ ಮಾರುಕಟ್ಟೆ ಸಮೀಪ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ರವರ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಸಂಘದ ಅಧ್ಯಕ್ಷ ಅಪ್ಪು(ಬಾಳೆಮಂಡಿ), ವಾರ್ಡ್ ನಗರಸಭಾ ಸದಸ್ಯ ಜಾರ್ಜ್ ಹಾಗು ಅಭಿಮಾನಿಗಳು ಉಪಸ್ಥಿತರಿದ್ದರು.
    ಭದ್ರಾವತಿ, ನ. ೨ : ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣ ಮುಂಭಾಗ ನಗರಸಭೆ ಮಾರುಕಟ್ಟೆ ಸಮೀಪ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ರವರ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ.  
      ನಗರಸಭೆ ೩ನೇ ವಾರ್ಡ್ ವ್ಯಾಪ್ತಿಯ ಚಾಮೇಗೌಡ ಏರಿಯಾದಲ್ಲಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳು, ಕರ್ನಾಟಕರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ರಾಜ್‌ಕುಮಾರ್ ಅಭಿಮಾನಿ ಎಸ್. ಕುಮಾರ್ ನೇತೃತ್ವದಲ್ಲಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ.
      ದೇವಾಲಯ ನಿರ್ಮಾಣಕ್ಕೆ ನಗರಸಭೆ ವತಿಯಿಂದ ಸ್ಥಳ ಕಲ್ಪಿಸಲಾಗಿದ್ದು, ಸುಮಾರು ೪೦ ಲಕ್ಷ ರು. ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ. ದೇವಾಲಯದಲ್ಲಿ ಡಾ. ರಾಜ್‌ಕುಮಾರ್ ಮತ್ತು ಡಾ. ಪುನೀತ್‌ರಾಜ್‌ಕುಮಾರ್‌ರವರ ಕಂಚಿನ ಪ್ರತಿಮೆಗಳ ಪ್ರತಿಷ್ಠಾಪನೆ ನಡೆಯಲಿದೆ. ದೇವಾಲಯ ನಿರ್ಮಾಣ
ಕಾರ್ಯಕ್ಕೆ  ಸುಮಾರು ೯ ತಿಂಗಳ ಹಿಂದೆ ಸಂಸದ ಬಿ.ವೈ ರಾಘವೇಂದ್ರರವರು ಭೂಮಿ ಪೂಜೆ ನೆರವೇರಿಸುವ ಮೂಲಕ ವೈಯಕ್ತಿಕವಾಗಿ ಆರ್ಥಿಕ ನೆರವು ಸಹ ನೀಡಿದ್ದರು. ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಇದುವರೆಗೂ ಯಾವುದೇ ಆರ್ಥಿಕ ನೆರವು ಲಭಿಸಿಲ್ಲ. ಆದರೂ ದಾನಿಗಳು, ಅಭಿಮಾನಿಗಳ ಸಹಕಾರದಿಂದ ದೇವಾಲಯ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಬಂದು ತಲುಪಿದೆ.
      ಡಾ. ರಾಜ್‌ಕುಮಾರ್ ಮತ್ತು ಡಾ. ಪುನೀತ್‌ರಾಜ್‌ಕುಮಾರ್‌ರವರ ಈ ಎರಡು ಕಂಚಿನ ಪ್ರತಿಮೆಗಳ ಒಟ್ಟು ವೆಚ್ಚ ರು. ೭ ಲಕ್ಷಗಳಾಗಿದ್ದು, ಈಗಾಗಲೇ ಈ ಎರಡು ಪ್ರತಿಮೆಗಳು ಸಹ ಬಹುತೇಕ ಪೂರ್ಣಗೊಂಡಿವೆ. ದೇವಾಲಯದ ಕಟ್ಟಡ ಕಾಮಗಾರಿ ಮುಂದಿನ ೨-೩ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದ್ದು, ಬೃಹತ್ ಸಮಾರಂಭ ಆಯೋಜಿಸುವ ಮೂಲಕ ದೇವಾಲಯ ಲೋಕಾರ್ಪಣೆಗೂ ಈಗಾಗಲೇ ರೂಪುರೇಷೆಗಳು ಸಿದ್ದಗೊಂಡಿವೆ.
      ಕಳೆದ ಕೆಲವು ದಿನಗಳ ಹಿಂದೆ ಡಾ. ಪುನೀತ್‌ರಾಜ್‌ಕುಮಾರ್‌ರವರ ಅಭಿನಯದ ಗಂಧದಗುಡಿ ಚಲನಚಿತ್ರ ಬಿಡುಗಡೆಗೊಂಡ ಸಂದರ್ಭದಲ್ಲಿ ನಗರದಲ್ಲಿ ಸಂಭ್ರಮಾಚರಣೆ ನಡೆಸಿದ್ದ ಅಭಿಮಾನಿಗಳು ಇದೀಗ ದೇವಾಲಯ ಪೂರ್ಣಗೊಳ್ಳುವುದನ್ನು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಅಭಿಮಾನಿ ದೇವರುಗಳ ಮನಗೆದ್ದ ಕರ್ನಾಟಕ ರತ್ನ ಪುರಸ್ಕೃತರಿಗೆ ದೇವಾಲಯ ನಿರ್ಮಿಸುವ ಮೂಲಕ ಉಕ್ಕಿನ ನಗರದ ಹಿರಿಮೆ ಮತ್ತಷ್ಟು ಹೆಚ್ಚಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

Wednesday, November 2, 2022

ಕೇರಳ ಸಮಾಜಂ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಅಚರಿಸಲಾಯಿತು.
    ಭದ್ರಾವತಿ, ನ. ೨: ಪ್ರತಿ ವರ್ಷದಂತೆ ಈ ಬಾರಿ ಸಹ ಕೇರಳ ಸಮಾಜಂ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಅಚರಿಸಲಾಯಿತು.
      ನಗರದಲ್ಲಿ ಕೇರಳ ಸಮಾಜಂ ವಿಶೇಷವಾಗಿ ಗುರುತಿಸಿಕೊಂಡಿದ್ದು, ಅದರಲ್ಲೂ ಪ್ರತಿವರ್ಷ ಓಣಂ ಆಚರಣೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಜನ್ನಾಪುರದಲ್ಲಿರುವ ಸಮಾಜಂ ಕಛೇರಿ ಕಟ್ಟಡದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
       ಸಮಾಜಂ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ವಿ.ಕೆ ಮಾಹಿನ್, ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್, ಖಂಚಾಚಿ ಎ. ಚಂದ್ರಶೇಖರ್, ಸಲಹೆಗಾರಾದ ಸುಕುಮಾರನ್ ಹಾಗೂ ಸದಸ್ಯರಾದ ರಾಧಾಕೃಷ್ಣನ್, ಸತ್ಯನಾರಾಯಣ, ಕೆ.ಸಿ ರಾಜಶೇಖರ್, ಮಹಿಳಾ ವಿಭಾಗಂ ಪ್ರಧಾನ ಕಾರ್ಯದರ್ಶಿ ಕಲ್ಯಾಣಿ ಶಶಿಧರನ್ ಹಾಗೂ ಜಂಟಿ ಕಾರ್ಯದರ್ಶಿ ರೇಖಾ ಚಂದ್ರನ್, ಯೂತ್ ವಿಂಗ್ಸ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಉದ್ಯೋಗಿ ಆನಂದನ್ ನಿಧನ

ಆನಂದನ್
    ಭದ್ರಾವತಿ, ನ.೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಉದ್ಯೋಗಿ ಆನಂದನ್(೫೧) ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.
    ಕಾಗದನಗರ ೧ನೇ ವಾರ್ಡ್ ಅಧಿಕಾರಿಗಳ ವಸತಿ ಗೃಹದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ಈ ದಂಪತಿ ಮಕ್ಕಳಿಲ್ಲದ ಕಾರಣ ಮಗುವೊಂದನ್ನು ದತ್ತು ಪಡೆದಿದ್ದರು. ಕಾರ್ಖಾನೆಯ ಪಲ್ಪ್ ಮಿಲ್-೨ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದನ್ ೨೦೧೭ರಲ್ಲಿ ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಕಳೆದ ೩ ವರ್ಷಗಳಿಂದ ಎಂಪಿಎಂ ಜೆಂಟ್ಸ್ ರಿಕ್ರಿಯೇಷನ್ ಕ್ಲಬ್ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ನಡೆಯಲಿದೆ.
    ೧೫ ವರ್ಷಗಳಿಂದ ಬೀದಿನಾಯಿಗಳಿಗೆ ಅನ್ನ :
    ಕಳೆದ ಸುಮಾರು ೧೫ ವರ್ಷಗಳಿಂದ ಆನಂದನ್‌ರವರು ಕಾರ್ಖಾನೆ ಒಳಭಾಗದಲ್ಲಿ ಹಾಗು ಕಾಗದನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಬೆಳಿಗ್ಗೆ, ರಾತ್ರಿ ಅನ್ನ   ಹಾಕುವ ಮೂಲಕ ಮಾನವೀಯತೆ ಮೆರೆದಿದ್ದರು.  ಮನೆಯಲ್ಲಿಯೇ ಅಡುಗೆ ತಯಾರಿಸಿ ಬೀದಿನಾಯಿಗಳಿಗೆ ಅನ್ನ ಹಾಕುವ ಇವರ ಕಾರ್ಯ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಇವರ ನಿಧನಕ್ಕೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಸೇರಿದಂತೆ ಕಾರ್ಮಿಕ ಮುಖರು ಹಾಗು ಕಾಗದನಗರ ವ್ಯಾಪ್ತಿಯ ನಿವಾಸಿಗಳು ಸಂತಾಪ ಸೂಚಿಸಿದ್ದಾರೆ.  

ಸಮಾಜಮುಖಿ ಚಿಂತನೆಗಳೊಂದಿಗೆ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ನೆರವೇರಿಸಿದರು.
    ಭದ್ರಾವತಿ, ನ. ೨ : ಒಕ್ಕಲಿಗ ಸಮುದಾಯದ ಮಹಿಳೆಯರ ಹಿತರಕ್ಷಣೆ ಹಾಗು ಸಮಾಜಮುಖಿ ಚಿಂತನೆಗಳೊಂದಿಗೆ ನೂತನವಾಗಿ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ, ನಗರಸಭಾ ಸದಸ್ಯೆ ಲತಾ ಚಂದ್ರಶೇಖರ್ ಹೇಳಿದರು.
      ಅವರು ಬುಧವಾರ ಅಪ್ಪರ್ ಹುತ್ತಾದಲ್ಲಿರುವ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
      ಪ್ರಸ್ತುತ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಾಕಷ್ಟು ಮಹಿಳೆಯರು ಹಲವಾರು ಸಮಸ್ಯೆಗಳಿಗೆ ಒಳಗಾಗಿದ್ದು, ಇಂತಹ ಮಹಿಳೆಯರ ನೆರವಿಗೆ ಮುಂದಾಗುವ ಜೊತೆಗೆ ಸಾಮಾಜಿಕ ಚಿಂತನೆಗಳೊಂದಿಗೆ ಟ್ರಸ್ಟ್  ಮುನ್ನಡೆಯಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
      ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಟ್ರಸ್ಟ್ ಉದ್ಘಾಟಿಸಿದರು.
      ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ವಿಶ್ವ ಒಕ್ಕಲಿಗ ಮಹಿಳಾ ವೇದಿಕೆ ಅಧ್ಯಕ್ಷೆ ಭಾರತಿ ಶಂಕರ್, ಕರ್ನಾಟಕ ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುರಭಿ ರಘು, ಟಾಟಾ ಇನ್‌ಸ್ಟಿಟ್ಯೂಟ್ ಫಂಡಮೆಂಟಲ್ ರಿಸರ್ಜ್ ಹಿರಿಯ ವಿಜ್ಞಾನಿ ಡಾ. ಗೀತಾ ತಿಮ್ಮೇಗೌಡ, ಟ್ರಸ್ಟ್ ಗೌರವಾಧ್ಯಕ್ಷೆ ಲಕ್ಷ್ಮೀರಾಜು, ಪ್ರಧಾನ ಕಾರ್ಯದರ್ಶಿ ಶಾಲಿನಿ ವಸಂತಕುಮಾರ್, ಖಜಾಂಚಿ ಯುಮನಾ ರಕ್ಷಿತ್, ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ಈಶ್ವರ್, ಸಹಕಾರ್ಯದರ್ಶಿ ಅಂಬಿಕ ಕಿರಣ್‌ಕುಮಾರ್, ಸಲಹೆಗಾರರಾದ ನೇತ್ರಾವತಿ ಮರೀಗೌಡ, ಲೋಹಿತ ನಂಜಪ್ಪ, ನಿರ್ದೇಶಕರಾದ ಜಯಮಾಲ, ಭಾಗ್ಯಲಕ್ಷ್ಮಿ, ಮಂಜುಳ, ವಸಂತ, ಗೀತಾ, ಪದ್ಮಿನಿ, ಶೋಭಾ, ಸಾವಿತ್ರಮ್ಮ, ಲೀಲಾವತಿ, ಪ್ರೇಮ, ಗೀತಾ, ಶೃತಿ, ಕವಿತ, ರೂಪ ಮತ್ತು ಶೃತಿ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Tuesday, November 1, 2022

ಅಧಿಕಾರ ಶಾಶ್ವತವಲ್ಲ, ಸೇವೆ ಮುಖ್ಯ : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಬಿಜೆಪಿ ಯುವ ಮುಖಂಡ, ನ್ಯಾಯವಾದಿ ಮಂಗೋಟೆ ರುದ್ರೇಶ್‌ರವರ ಹುಟ್ಟುಹಬ್ಬ ಆಚರಣೆಯಲ್ಲಿ ಸಂಸದ ಬಿ.ವೈ ರಾಘವೇಂದ್‌ರ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ನ. ೧ ; ಅಧಿಕಾರ ಯಾರಿಗೂ ಶಾಶ್ವತವಲ್ಲ. ನಾವು ಮಾಡುವ ಸೇವೆ ಬಹಳ ಮುಖ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಮಂಗಳವಾರ ಬಿಜೆಪಿ ಯುವ ಮುಖಂಡ, ನ್ಯಾಯವಾದಿ ಮಂಗೋಟೆ ರುದ್ರೇಶ್‌ರವರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರಲ್ಲೂ ಸೇವೆ ಮಾಡುವ ಮನೋಭಾವವಿರಬೇಕು. ರಾಜಕೀಯ ಕ್ಷೇತ್ರವನ್ನೂ ಸಹ ಸೇವೆಗಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸೇವೆಯನ್ನು ಪ್ರಾಮಾಣಿಕವಾಗಿ ಕೈಗೊಂಡಲ್ಲಿ ಸೂಕ್ತ ಸಮಯದಲ್ಲಿ ಲಭಿಸಬೇಕಾದ ಸ್ಥಾನಮಾನಗಳು ತಾನಾಗಿಯೇ ಬರಲಿವೆ ಎಂದರು.
    ಮಂಗೋಟೆ ರುದ್ರೇಶ್‌ರವರು ಆರಂಭದಿಂದಲೂ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದರು.
    ಶಿವಮೊಗ್ಗ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಮುಖರಾದ ನಗರಸಭೆ ಸದಸ್ಯೆ ಅನುಪಮ ಚನ್ನೇಶ್, ಅನಿತಾ ಮಲ್ಲೇಶ್, ಮಾಜಿ ಸದಸ್ಯ ಜಿ. ಆನಂದಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್, ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ಪ್ರಮುಖರಾದ ಬಿ.ಎಸ್ ಶ್ರೀನಾಥ್, ಗೋಕುಲ್ ಕೃಷ್ಣ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಬೂತ್‌ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.