Sunday, July 16, 2023

ಕಾರ್ಪೆಂಟರ್‌ ಶಂಕರ್‌ ನಿಧನ

ಕಾರ್ಪೆಂಟರ್‌ ಶಂಕರ್‌
    ಭದ್ರಾವತಿ, ಜು. ೧೬: ನಗರಸಭೆ ವ್ಯಾಪ್ತಿ ಜನ್ನಾಪುರ ಗಣೇಶ್‌ ಕಾಲೋನಿ ನಿವಾಸಿ, ಕಾರ್ಪೆಂಟರ್‌ ಶಂಕರ್‌(೫೦) ಭಾನುವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಇವರು ಹಲವಾರು ವರ್ಷಗಳಿಂದ ಕಾರ್ಪೆಂಟರ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಬುಳ್ಳಾಪುರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಹೆಚ್ಚುವರಿ ಪಟಾಕಿ ದಾಸ್ತಾನು : ಅಂಗಡಿ, ಗೋದಾಮು ಮೇಲೆ ದಾಳಿ

ನಿಗದಿಪಡಿಸಿದ ದಾಸ್ತಾನು ಮೀರಿ ಹೆಚ್ಚುವರಿ ಪಟಾಕಿ ದಾಸ್ತಾನು ಮಾಡಲಾಗಿದೆ ಎಂಬ ದೂರಿನ ಮಾಹಿತಿ ಮೇರೆಗೆ ಭದ್ರಾವತಿ ನಗರಸಭೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಪಟಾಕಿ ಅಂಗಡಿ ಮತ್ತು ಗೋದಾಮಿನ ಮೇಲೆ  ದಾಳಿ ನಡೆಸಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. 16 : ನಿಗದಿಪಡಿಸಿದ ದಾಸ್ತಾನು ಮೀರಿ ಹೆಚ್ಚುವರಿ ಪಟಾಕಿ ದಾಸ್ತಾನು ಮಾಡಲಾಗಿದೆ ಎಂಬ ದೂರಿನ ಮಾಹಿತಿ ಮೇರೆಗೆ ನಗರಸಭೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಪಟಾಕಿ ಅಂಗಡಿ ಮತ್ತು ಗೋದಾಮಿನ ಮೇಲೆ  ದಾಳಿ ನಡೆಸಿರುವ ಘಟನೆ ನಡೆದಿದೆ.
    ಹಸಿರು ಪಟಾಕಿ ಮಾರಾಟ ಮಾಡದೆ ನಿಗದಿಪಡಿಸಿದ ದಾಸ್ತಾನು ಮೀರಿ ಹೆಚ್ಚುವರಿ ಪಟಾಕಿ ದಾಸ್ತಾನು ಮಾಡಲಾಗಿದೆ . ಸ್ಪೋಟಕ ವಸ್ತುಗಳ ಮಾರಾಟದ ನಿಯಮ ಉಲ್ಲಂಘನೆಯಾಗಿದ್ದು, ರಂಗಪ್ಪ ವೃತ್ತ ಸಮೀಪದ ಪಟಾಕಿ ಅಂಗಡಿ  ಮತ್ತು ಸಿ.ಎನ್‌ ರಸ್ತೆ, ಆರ್‌ಎಂಸಿ ಮುಂಭಾಗ ಗೋದಾಮು(ಅಯ್ಯಪ್ಪ ಟ್ರೇಡರ್ಸ್‌)  ಮೇಲೆ ದಾಳಿ ನಡೆಸಲಾಗಿದೆ.
    ಮಾಲೀಕರು ೧ ವರ್ಷದ ಅವಧಿಗೆ ಪರವಾನಗಿ ಪಡೆದುಕೊಂಡಿದ್ದು, ವರ್ಷ ಪೂರ್ತಿ ಮಾರಾಟಕ್ಕೆ ಅವಕಾಶವಿದೆ. ದಾಸ್ತಾನು ಕುರಿತು ಮಾಹಿತಿ ಪಡೆದಿದ್ದು, ಹೆಚ್ಚುವರಿ ದಾಸ್ತಾನು ಕುರಿತು ಪರಿಶೀಲಿಸಲಾಗುತ್ತಿದೆ.

Saturday, July 15, 2023

ನಿವೃತ್ತ ದೈಹಿಕ ಶಿಕ್ಷಕ ಶಿವಲಿಂಗೇಗೌಡರಿಗೆ ಸನ್ಮಾನ

ಭದ್ರಾವತಿಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ, ನಿವೃತ್ತ ದೈಹಿಕ ಶಿಕ್ಷಕ  ಶಿವಲಿಂಗೇಗೌಡರ ಸಾಧನೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಮಂಡಳಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ, ಜು. ೧೫: ರಾಷ್ಟ್ರಪ್ರಶಸ್ತಿ ವಿಜೇತ, ನಿವೃತ್ತ ದೈಹಿಕ ಶಿಕ್ಷಕ  ಶಿವಲಿಂಗೇಗೌಡರ ಸಾಧನೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಮಂಡಳಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ದೈಹಿಕ ಶಿಕ್ಷಕರಾಗಿ ಶಿವಲಿಂಗೇಗೌಡರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದು,  ಅಲ್ಲದೆ ವೃತ್ತಿ ಬದುಕಿನ ಜೊತೆಗೆ ಸೇವಾ ಮನೋಭಾವನೆಯೊಂದಿಗೆ  ಗುರುತಿಸಿಕೊಂಡಿದ್ದಾರೆ.  ಪ್ರಸ್ತುತ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದಾರೆ.  ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ಅಲ್ಲದೆ ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ.
    ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನಡೆದ  ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ತ್ರೈಮಾಸಿಕ ಸಭೆಯಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವಿದ್ಯಾಸಂಸ್ಥೆ  ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ಮಂಜುನಾಥ್ ಪವಾರ್, ಸಹಕಾರ್ಯದರ್ಶಿ ಬೋಸುರಾಜ್ ರಾವ್, ಮುಖ್ಯೋಪಾಧ್ಯಾಯ ಸುರೇಶ್ ನಾಯ್ಕ, ಕ್ಷೇತ್ರ ಸಂಪನ್ಮೂಲ ಶಿಕ್ಷಕರಾದ ಯುವರಾಜ್ ಮತ್ತು ದಿವ್ಯ, ದೈಹಿಕ ಶಿಕ್ಷಣಾಧಿಕಾರಿ ಪ್ರಭು, ದೈಹಿಕ ಶಿಕ್ಷಣ ಶಿಕ್ಷಕ ರಾಜ ನಾಯ್ಕ, ರವಿ, ಗಿರೀಶ್  ಹಾಗು ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ

ಭದ್ರಾವತಿ ತಾಲೂಕಿನ ಶ್ರೀ ರಾಮನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಮತ್ತು ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜು. ೧೫ : ತಾಲೂಕಿನ ಶ್ರೀ ರಾಮನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಆಯ್ಕೆಯಾಗಿದ್ದಾರೆ.
    ಒಟ್ಟು ೧೩ ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಸಂಘದಲ್ಲಿ ೧ ಸ್ಥಾನ ಖಾಲಿ ಉಳಿದಿದ್ದು, ೧೨ ನಿರ್ದೇಶಕರಿದ್ದಾರೆ. ಶನಿವಾರ ನಡೆದ  ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಹಾಗು ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧವಾಗಿ ಆಯ್ಕಯಾದರು.
    ರಾಮನಗರ ನಿವಾಸಿಯಾಗಿರುವ ನಿರಂಜನ ಅವರು ಸಂಘದಲ್ಲಿ ಈ ಹಿಂದೆ ೨ ಬಾರಿ ನಿರ್ದೇಶಕರಾಗಿದ್ದರು. ಇದೀಗ ೩ನೇ ಅವಧಿಯಲ್ಲಿ ಅಧ್ಯಕ್ಷರಾಗಿದ್ದು, ಇದೆ ರೀತಿ ಕೃಷ್ಣೇಗೌಡ ಸಹ ಈ ಹಿಂದೆ ೨ ಬಾರಿ ನಿರ್ದೇಶಕರಾಗಿದ್ದು, ಇದೀಗ ೩ನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದಾರೆ.
    ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಪೋಪಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.  ನೂತನ ಅಧ್ಯಕ್ಷ ನಿರಂಜನ್‌ ಹಾಗು ಉಪಾಧ್ಯಕ್ಷ ಕೃಷ್ಣೇಗೌಡರಿಗೆ ಗ್ರಾಮಸ್ಥರು, ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಸಂಘಕ್ಕೆ ಸುಮಾರು ೫೦ ವರ್ಷಗಳ ಇತಿಹಾಸವಿದ್ದು, ತಾಲೂಕಿನ ಪ್ರಮುಖ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಗಮನ ಸೆಳೆದ ಜನಪದ, ಸಾಂಸ್ಕೃತಿಕ ಹಬ್ಬ

ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಜನಪದ ಮತ್ತು ಸಾಂಸ್ಕೃತಿಕ ಹಬ್ಬ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಂ ನಾಸಿರ್‌ಖಾನ್‌ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ,  ಜು. ೧೫ : ನಗರದ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷವಾಗಿ ಜನಪದ ಮತ್ತು ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿತ್ತು.
    ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು  ಸಾಂಪ್ರಾದಾಯಿಕ ಮತ್ತು ಜನಪದ ಉಡುಗೆ ತೊಡುಗೆಗಳೊಂದಿಗೆ ಕಂಗೊಳಿಸಿದರು.
    ವಿದ್ಯಾರ್ಥಿಗಳು ತಾವೇ ತಯಾರಿಸಿದ ರುಚಿಶುಚಿಯಾದ ಮನೆ ಅಡುಗೆ ಪದಾರ್ಥಗಳನ್ನು ಮಳಿಗೆಗಳನ್ನು ನಿರ್ಮಿಸಿ ಮಾರಾಟದಲ್ಲಿ ತೊಡಗಿರುವುದು ಹಾಗು ತಾವೇ ರೂಪಿಸಿದ  ಜನಪದ ನೃತ್ಯಗಳು ಮತ್ತು ಹಾಡುಗಳನ್ನು ಹಾಡಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ವಿಶೇಷವಾಗಿ ಕಂಡು ಬಂದಿತು.
    ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.‌ ರವಿ ಸೇರಿದಂತೆ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  ಹಲವು ವರ್ಷಗಳ ನಂತರ ಜನಪದ ಮತ್ತು ಸಾಂಸ್ಕೃತಿಕ ಹಬ್ಬ ಆಚರಿಸುವ ಮೂಲಕ ಕಾಲೇಜು ಎಲ್ಲರ ಗಮನ ಸೆಳೆದಿರುವುದು ವಿಶೇಷವಾಗಿದೆ.


ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಜನಪದ ಮತ್ತು ಸಾಂಸ್ಕೃತಿಕ ಹಬ್ಬದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ರುಚಿಶುಚಿಯಾದ ಮನೆ ಅಡುಗೆ ಪದಾರ್ಥಗಳನ್ನು ಮಳಿಗೆಗಳನ್ನು ನಿರ್ಮಿಸಿ ಮಾರಾಟದಲ್ಲಿ ತೊಡಗಿರುವುದು ಕಂಡು ಬಂದಿತು.

Friday, July 14, 2023

ಎ.ಸಿ ಸದಾನಂದ ನಿಧನ

ಎ.ಸಿ ಸದಾನಂದ
    ಭದ್ರಾವತಿ:  ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿ ಎ.ಸಿ ಸದಾನಂದ(೫೫) ಶುಕ್ರವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರರು ಇದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಗ್ರಾಮದಲ್ಲಿರುವ ಇವರ ತೋಟದಲ್ಲಿ ನೆರವೇರಲಿದೆ. ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

ಸಾಧು ವೀರಶೈವ ಸಮಾಜದ ಅಧ್ಯಕ್ಷರಾಗಿ ಕೆ.ಜಿ ರವಿಕುಮಾರ್‌

ಸಿರೆಗೆರೆ ಶ್ರೀ ತರಳಬಾಳು ನ್ಯಾಯಪೀಠದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ರೈತ ಮುಖಂಡ ಎಚ್.ಆರ್‌ ಬಸವರಾಜಪ್ಪ ಭದ್ರಾವತಿ ತಾಲೂಕಿನ ಸಾಧು ವೀರಶೈವ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಆದೇಶ ಪತ್ರ ನೂತನ ಅಧ್ಯಕ್ಷ ಕೆ.ಜಿ ರವಿಕುಮಾರ್‌ಗೆ ವಿತರಿಸಿದರು.
    ಭದ್ರಾವತಿ, ಜು. ೧೪ : ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷರಾಗಿ ಕಡದಕಟ್ಟೆ ಕೆ.ಜಿ ರವಿಕುಮಾರ್‌ ಆಯ್ಕೆಯಾಗಿದ್ದಾರೆ.
    ಉಪಾಧ್ಯಕ್ಷರಾಗಿ ಪರಮೇಶ್ವರಪ್ಪ, ಕಾರ್ಯದರ್ಶಿಯಾಗಿ ಸಿ.ಎಸ್‌ ಭರಣೇಶ್‌, ಸಹ ಕಾರ್ಯದರ್ಶಿಯಾಗಿ ಬಿ.ಎಸ್‌ ಪರಮೇಶ್ವರಪ್ಪ, ಖಜಾಂಚಿಯಾಗಿ ನವೀನ್‌, ಸದಸ್ಯರಾಗಿ ಎಚ್.ಇ ಮಲ್ಲಿಕಾರ್ಜುನ್‌, ವಸಂತಕುಮಾರ್‌, ನಾಗರಾಜ, ಮಮತ ನರೇಂದ್ರ, ಕೆ.ಜಿ ಮಹೇಶ್ವರಪ್ಪ, ಡಿ.ಬಿ ದಿನೇಶ್‌, ಆಶಾರಾಣಿ ನಟರಾಜ್‌, ಸಿ.ವಿ ಮಹದೇವಪ್ಪ, ಎ.ಎಸ್‌ ರವಿಕುಮಾರ್‌, ತೇಜಸ್ವಿನಿ ರವಿಕುಮಾರ್‌, ಕೆ.ಎಚ್‌ ರಾಜ್‌ಕುಮಾರ್‌, ಸತೀಶ್‌ಗೌಡ, ಮಂಜುಳ ರಂಗಪ್ಪ, ಎಚ್. ರುದ್ರಪ್ಪ, ಶಿವಕುಮಾರ್‌ ಗಂಗಮ್ಮ ಮಲ್ಲೇಶಪ್ಪ ಅವರನ್ನು ಆಯ್ಕೆ ಮಾಡಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆದೇಶ ಹೊರಡಿಸಿದ್ದಾರೆ.
    ಸಿರೆಗೆರೆ ಶ್ರೀ ತರಳಬಾಳು ನ್ಯಾಯಪೀಠದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ರೈತ ಮುಖಂಡ ಎಚ್.ಆರ್‌ ಬಸವರಾಜಪ್ಪ ನೂತನ ಪದಾಧಿಕಾರಿಗಳ ಆಯ್ಕೆ ಆದೇಶ ಪತ್ರ ನೂತನ ಅಧ್ಯಕ್ಷ ಕೆ.ಜಿ ರವಿಕುಮಾರ್‌ಗೆ ವಿತರಿಸಿದರು.