Friday, October 6, 2023

ಜ್ಞಾನದೀಪಿಕಾ ಶಾಲೆ ಖೋ ಖೋ ತಂಡ ದ್ವಿತೀಯ ಸ್ಥಾನ

4 ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮದ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಖೋ ಖೋ ತಂಡ ದ್ವಿತೀಯ ಸ್ಥಾನ ಪಡೆದಿದೆ.
    ಭದ್ರಾವತಿ: ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಯರೇಹಳ್ಳಿ ಗ್ರಾಮದ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಖೋ ಖೋ ತಂಡ ದ್ವಿತೀಯ ಸ್ಥಾನ ಪಡೆದಿದೆ.
    ವಿದ್ಯಾರ್ಥಿನಿಯರಾದ ಸಿ. ಅರ್ಪಿತ, ಟಿ.ಡಿ ದಿಶಾ, ಪಿ. ಸಿಂಚನ ಮತ್ತು ಸಿ. ಬೇಬಿಶ್ರೀ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರನ್ನು ವಿದ್ಯಾಸಂಸ್ಥೆ ಕಾರ್ಯದರ್ಶಿ ಮಂಜುಳಾ, ರಾಜಶೇಖರ್ ಹಾಗು ಮುಖ್ಯೋಪಾಧ್ಯಾಯರು, ತರಬೇತಿದಾರರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

1755ನೇ ಮದ್ಯವರ್ಜನ ಶಿಬಿರ ಪೂರ್ವಭಾವಿ ಸಭೆ

1755ನೇ ಮದ್ಯವರ್ಜನ ಶಿಬಿರ ಪೂರ್ವಭಾವಿ ಸಭೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ವಲಯದ ಶ್ರೀರಾಮನಗರ ಶ್ರಮಜೀವಿ ಮರಿಸಿದ್ದಯ್ಯ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯನ್ನು ಪಾಲಾಕ್ಷಪ್ಪ, ಜಯರಾಂ ಗೊಂದಿ, ಸುಧಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.

    ಭದ್ರಾವತಿ: ಜಿಲ್ಲಾ ಜನಜಾಗೃತಿ ವೇದಿಕೆ ಹಾಗು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು, ನ.2 ರಿಂದ 9ರವರೆಗೆ 1755ನೇ ಮದ್ಯವರ್ಜನ ಶಿಬಿರ ಆಯೋಜಿಸಲಾಗುವುದು. ಈ ಸಂಬಂಧ ಸಮಿತಿ ರಚನೆ ಮಾಡಲಾಗಿದೆ ಎಂದು ಶಿಬಿರದ ಯೋಜನಾಧಿಕಾರಿ ನಾಗರಾಜ್ ತಿಳಿಸಿದರು.

    ಅವರು ತಾಲೂಕಿನ ನಾಗತಿಬೆಳಗಲು ವಲಯದ ಶ್ರೀರಾಮನಗರ ಶ್ರಮಜೀವಿ ಮರಿಸಿದ್ದಯ್ಯ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ದುಶ್ಚಟ ದುರಭ್ಯಾಸ ವಿರುದ್ಧ ಜನಜಾಗೃತಿ ಕಾರ್ಯಕ್ರಮ, ಮದ್ಯವರ್ಜನ ಶಿಬಿರಗಳು, ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳಿಗೆ ದುಶ್ಚಟ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದರು.

    1755ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷರಾಗಿ ಯಶೋಧರಯ್ಯ, ಗೌರವ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷರಾಗಿ ಎಸ್.ಎಂ ರಮೇಶ್, ಬಷೀರ್ ಅಹಮದ್, ಕೃಷ್ಣಮೂರ್ತಿ ನಾಯ್ಡು, ಧರ್ಮೇಗೌಡ(ಕುಮ್ರಿ ಚಂದ್ರಣ್ಣ) ಮತ್ತು ನಿರಂಜನ್, ಕಾರ್ಯದರ್ಶಿಯಾಗಿ ಪಿ. ಶ್ರೀನಿವಾಸ್, ಜಿ.ಎಂ ನಿಂಗಪ್ಪ, ಕೋಶಾಧಿಕಾರಿಯಾಗಿ ಮಹೇಶ್ ಹಾಗು ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

    ಸಭೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ಚನ್ನಪ್ಪ, ಅನಿತಾ ಮಲ್ಲೇಶ್, ಆರ್. ಕರುಣಾಮೂರ್ತಿ, ಜಯರಾಂ ಗೊಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪಾಲಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಾಧವ ಸ್ವಾಗತಿಸಿ, ಕವಿತಾ ಪ್ರಾರ್ಥಿಸಿದರು.

Thursday, October 5, 2023

ಯೋಗಪಟು ಡಿ. ನಾಗರಾಜ್ 4 ದಶಕಗಳ ಸಾಧನೆ : ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ

ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಛೇರ್ಮನ್, ಅಂತರರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ರವರಿಗೆ ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಲಭಿಸಿದೆ.

    ಭದ್ರಾವತಿ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಛೇರ್ಮನ್, ಅಂತರರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ರವರಿಗೆ ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಲಭಿಸಿದೆ.

    ಕಳೆದ 4 ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಾಗರಾಜ್ ರವರು ಇದುವರೆಗೂ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 31, ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 54 ಹಾಗು ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ 45 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

    ನಾಗರಾಜ್ ರವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜೇಸೀಸ್, ರೋಟರಿ, ಲಯನ್ಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳ ನೆರವಿನೊಂದಿಗೆ 10 ದಿನಗಳ ಅವಧಿಯ 441 ಯೋಗ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದು, ಅಲ್ಲದೆ ವಿದ್ಯಾರ್ಥಿಗಳಿಗೆ 1 ಗಂಟೆ ಅವಧಿಯ 720ಕ್ಕೂ ಹೆಚ್ಚು ಯೋಗ ಉಪನ್ಯಾಸ ಹಾಗು ಯೋಗ ಪ್ರದರ್ಶನ ನೀಡಿ ಯೋಗದ ಬಗ್ಗೆ ಅರಿವು ಮೂಡಿಸಿದ್ದಾರೆ. ಲಕ್ಷಾಂತರ ಜನರಿಗೆ ಆರೋಗ್ಯವಂತ ಹಾಗು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಇವರು ಯೋಗ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ರಾಜ್ಯ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿದೆ.

    ಬೆಂಗಳೂರಿನ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಡಿ.ನಾಗರಾಜ್ ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರದ ಕಾರ್ಯದರ್ಶಿ ಡಾ. ಜಿ.ಸಿ ಪ್ರಕಾಶ್ ಮತ್ತು ಇಲಾಖೆ ನಿರ್ದೇಶಕ ಎಂ. ಸಿದ್ದೇಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ, ಕಾರ್ಯದರ್ಶಿ ಡಾ. ಡಿ. ಪುಟ್ಟೇಗೌಡ ಹಾಗು ಯೋಗ ಪಟುಗಳು ಡಿ. ನಾಗರಾಜ್ ರವರನ್ನು ಅಭಿನಂದಿಸಿದ್ದಾರೆ.

ಮಾಳಮ್ಮ ನಿಧನ

ಮಾಳಮ್ಮ

    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮದ ನಿವಾಸಿ ಮಾಳಮ್ಮ(90) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು.

    ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನೇತ್ರಾಧಿಕಾರಿ ಶಂಕರ್ ಸೇರಿದಂತೆ 4 ಗಂಡು, 2 ಹೆಣ್ಣು ಹಾಗು 10 ಮೊಮ್ಮಕ್ಕಳಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ನೆರವೇರಲಿದೆ. ಮಾಳಮ್ಮ ನಿಧನಕ್ಕೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗದವರು, ತರೀಕೆರೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನಿಲೇಶ್ ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭಾರತೀಯ ನೌಕದಳ ಸೈನಿಕ ದಿನೇಶ್ ಕುಮಾರ್ ಅರಣ್ಯ ಇಲಾಖೆ ಆರ್.ಎಫ್.ಓ

ಭದ್ರಾವತಿ : ಬಿ.ಆರ್ ದಿನೇಶ್ ಕುಮಾರ್ ಉಪ ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಮುಂಬಡ್ತಿಯೊಂದಿ ವಲಯ ಅರಣ್ಯಾಧಿಕಾರಿ(ಆರ್.ಎಫ್.ಓ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಭದ್ರಾವತಿ :ಬಿ.ಆರ್ ದಿನೇಶ್ ಕುಮಾರ್ ಉಪ ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಮುಂಬಡ್ತಿಯೊಂದಿ ವಲಯ ಅರಣ್ಯಾಧಿಕಾರಿ(ಆರ್.ಎಫ್.ಓ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ನಗರದಲ್ಲಿಯೇ ಹುಟ್ಟಿ ಬೆಳೆದಿರುವ ದಿನೇಶ್ ಕುಮಾರ್, ವಿಐಎಸ್ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಬಡ್ಡಿ ಆಟಗಾರ ದಿವಂಗತ ಬೆಣ್ಣೆಕೃಷ್ಣ ಮತ್ತು ಗೌರಮ್ಮ ದಂಪತಿ ಪುತ್ರರಾಗಿದ್ದಾರೆ.

    ದಿನೇಶ್ ಕುಮಾರ್ ಅವರು ನೌಕದಳದಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಇವರಿಗೆ ಡಿಸಿಎಫ್ ಆಶೀಶ್ ರೆಡ್ಡಿ(ಐಎಫ್ಎಸ್), ಎಸಿಎಫ್ ರತ್ನಪ್ರಭಾ ಮತ್ತು ಅರಣ್ಯ ಇಲಾಖೆ ಜಿಲ್ಲಾ ಅಧಿಕಾರಿಗಳು ಶುಭಾಶಯ ಕೋರಿದ್ದಾರೆ.

    ಅರಣ್ಯ ಇಲಾಖೆ ಸಹದ್ಯೋಗಿಗಳಾದ ಇ.ಎಂ ಶಫೀಉಲ್ಲಾ, ಅಣ್ಣಾ ನಾಯಕ, ನವೀನ್ ಕುಮಾರ್, ರಶೀದ್ ಬೇಗ್ ಮತ್ತು ಇತರರು ಉಪಸ್ಥಿತರಿದ್ದರು.

ಅತಿಯಾದ ಮದ್ಯ ಸೇವನೆ : ವಾರಸುದಾರರಿಲ್ಲದ ವ್ಯಕ್ತಿ ಮೃತ

    ಭದ್ರಾವತಿ : ವಾರಸುದಾರರಿಲ್ಲದ ವ್ಯಕ್ತಿಯೊಬ್ಬರು ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹೊಸಮನೆ ನಿವಾಸಿ ಜಗನ್ನಾಥರಾವ್ ಎಂಬುವರಿಗೆ ಸೇರಿದ ಕೊಠಡಿಯಲ್ಲಿ ಸುಮಾರು 4 ವರ್ಷದಿಂದ ಬಾಡಿಗೆಗೆ ವಾಸವಿದ್ದ ಹಿಟ್ಟಿನ ಗಿರಣಿ ರಿಪೇರಿ ಕೆಲಸ ಮಾಡುವ ಹನುಮಂತಪ್ಪ(48) ಎಂಬುವರು ಮೃತಪಟ್ಟಿದ್ದು, 5.6 ಅಡಿ ಎತ್ತರ, ಕೋಲು ಮುಖ, ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ತಲೆಯ ಮುಂಭಾಗ ಬೋಳಾಗಿರುತ್ತದೆ. ಬಿಳಿ ಬಣ್ಣದ ಚೆಕ್ಸ್ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಇವರ ಮೃತದೇಹ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶವಗಾರದಲ್ಲಿದ್ದು, ವಾರಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

Wednesday, October 4, 2023

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರ ಮುಷ್ಕರ

ಆಲ್ ಇಂಡಿಯಾ ಗ್ರಾಮೀಣ್ ಡಿಎಕೆ ಸೇವಕ್ ಯೂನಿಯನ್(ಎಐಜಿಡಿಎಸ್ ಯು) ಕರ್ನಾಟಕ ಸರ್ಕಲ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಅಂಚೆ ಕಛೇರಿ ಮುಂಭಾಗ ಸಾಂಕೇತಿಕವಾಗಿ ಮುಷ್ಕರ ನಡೆಸಲಾಯಿತು.

    ಭದ್ರಾವತಿ: ಆಲ್ ಇಂಡಿಯಾ ಗ್ರಾಮೀಣ್ ಡಿಎಕೆ ಸೇವಕ್ ಯೂನಿಯನ್(ಎಐಜಿಡಿಎಸ್ ಯು) ಕರ್ನಾಟಕ ಸರ್ಕಲ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ನಗರದ ಅಂಚೆ ಕಛೇರಿ ಮುಂಭಾಗ ಸಾಂಕೇತಿಕವಾಗಿ ಮುಷ್ಕರ ನಡೆಸಲಾಯಿತು.

    ವಲಯ ರಾಜ್ಯಾಧ್ಯಕ್ಷ ಎಚ್.ವಿ ರಾಜ್ ಕುಮಾರ್ ಮಾತನಾಡಿ, ಈಗಾಗಲೇ 7ನೇ ವೇತನ ಆಯೋಗದ ಕಮಲೇಶ್ ಚಂದ್ರ ವರದಿ ಪ್ರಕಾರ ಅಂಚೆ ನೌಕರರಿಗೆ ಹಲವಾರು ಶಿಫಾರಸ್ಸುಗಳನ್ನು ಮಾಡಲಾಗಿದ್ದು, ಆದರೆ ಶಿಫಾರಸ್ಸುಗಳನ್ನು ಇಲಾಖೆ ಅಥವಾ ಸರ್ಕಾರ ಇದುವರೆಗೂ ಯಥಾವತ್ತಾಗಿ ಅನುಮೋದನೆ ಮಾಡಿಲ್ಲ. ಇದರಿಂದಾಗಿ ನೌಕರರು ಸಮಸ್ಯೆ ಎದುರಿಸುವಂತಾಗಿದ್ದು, ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

    8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದು. ಸೇವಾ ಹಿರಿತನದ ಆಧಾರದ ಮೇಲೆ 12-14-36 ಸೇವೆ ಸಲ್ಲಿಸಿದ ಜಿಎಸ್ ಡಿ ನೌಕರರಿಗೆ ವಿಶೇಷ ಇನ್ ಕ್ರೀಮೆಂಟ್ ನೀಡುವುದು. ಗ್ರೂಪ್ ಇನ್ಸೂರೆನ್ಸ್ ಕವರೇಜ್ ರು.5 ಲಕ್ಷದವರೆಗೆ ಹೆಚ್ಚಿಸುವುದು. ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವುದು. ಜಿಡಿಎಸ್ ಗ್ರಾಚ್ಯುಟಿ ಹಣ ರು. 5 ಲಕ್ಷಗಳವರೆಗೆ ಹೆಚ್ಚಿಸುವುದು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಹಾಗು ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

    ಈಗಾಗಲೇ ಹಲವಾರು ಬಾರಿ ಹೋರಾಟ ನಡೆಸಲಾಗಿದ್ದು, ಇದುವರೆಗೂ ಬೇಡಿಕೆ ಈಡೇರಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಡಿ.12ರಿಂದ ವಿಭಾಗೀಯ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಉಪಾಧ್ಯಕ್ಷ ಜವರೇಗೌಡ್ರು, ಸಂಘಟನಾ ಕಾರ್ಯದರ್ಶಿ ಕೆ. ಮಂಜುನಾಥ್, ಸಂಗಮೇಶ್ ಆಚಾರ್, ಶ್ರೀಲಕ್ಷ್ಮೀ, ಸರಸ್ವತಿ, ಲಿಂಗರಾಜ್, ವೆಂಕಟರಮಣ, ಚೇತನ ಸೇರಿದಂತೆ ಇನ್ನಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.