Sunday, December 10, 2023

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಎಸ್. ಅರುಣ್ ಕುಮಾರ್

 

ಭದ್ರಾವತಿ ಹೊಸ ಸಿದ್ದಾಪುರ ನಿವಾಸಿ ಎಸ್. ಅರುಣ್ ಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.

     ಭದ್ರಾವತಿ : ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಗೆಲುವಿಗೆ ಶ್ರಮಿಸಿದ್ದ ನಗರದ ಹೊಸ ಸಿದ್ದಾಪುರ ನಿವಾಸಿ ಎಸ್. ಅರುಣ್ ಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

   ಎಸ್. ಅರುಣ್ ಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಆದೇಶದ ಮೇರೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಶಿಫಾರಸ್ಸಿನಂತೆ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

   ಎಸ್. ಅರುಣ್ ಕುಮಾರ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅತಿ ಕಡಿಮೆ ಅವಧಿಯಲ್ಲಿ ಪಕ್ಷ ಸಂಘಟಿಸುವ ಜೊತೆಗೆ ಕ್ಷೇತ್ರದಾದ್ಯಂತ ಹೆಚ್ಚಿನ ಪ್ರಚಾರ ಕೈಗೊಂಡು ಗೆಲುವಿಗೆ ಕಾರಣಕಾರ್ತರಾಗಿದ್ದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಹಾಗು ಪಕ್ಷದ ಜಿಲ್ಲಾ ಹಾಗು ಸ್ಥಳೀಯ ಪ್ರಮುಖರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದುವಲ್ಲಿ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ಎನ್ನಲಾಗಿದೆ.

 ಎಸ್. ಅರುಣ್ ಕುಮಾರ್ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಮುಖಂಡರಾದ ಬಿ.ಕೆ ಮೋಹನ್, ಬಿ.ಎಸ್ ಗಣೇಶ್, ಎಚ್ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.


Friday, December 8, 2023

ಎಚ್. ಕಾಂತರಾಜ ಆಯೋಗದ ವರದಿ ಜಾರಿಗೊಳಿಸಲು ಆಗ್ರಹಿಸಿ ಡಿ.೧೧ರಂದು ಧರಣಿ ಸತ್ಯಾಗ್ರಹ

    ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆ ಪ್ರಮುಖರು ಮಾತನಾಡಿದರು.
    ಭದ್ರಾವತಿ: ರಾಜ್ಯ ಸರ್ಕಾರ ತಕ್ಷಣ ಎಚ್. ಕಾಂತರಾಜ ಆಯೋಗದ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಡಿ.೧೧ರಂದು ಜಿಲ್ಲಾ ಹಾಗು ತಾಲೂಕು ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಎಚ್. ರಾಚಪ್ಪ ಮತ್ತು ಅಧ್ಯಕ್ಷ ತೀ.ನ. ಶ್ರೀನಿವಾಸ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾವಿರಾರು ವರ್ಷಗಳಿಂದ ಜಾತಿ ಪದ್ಧತಿ ಹಿನ್ನಲೆಯಲ್ಲಿ ಶೋಷಣೆಗೆ ಒಳಗಾಗಿರುವ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯದ ಹರಿಕಾರರಾದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ಇಚ್ಛಾಶಕ್ತಿಯಿಂದಾಗಿ ಹಾವನೂರು ವರದಿ ಜಾರಿಗೆ ಬಂದ ನಂತರ ಮೀಸಲಾತಿ ಲಭಿಸಿ ಸಾಮಾಜಿಕ ನ್ಯಾಯದ ರಥ ಚಲಿಸಲಾರಂಭಿಸಿತು. ಶೋಷಣೆಗೆ ಒಳಪಟ್ಟ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಹಿಂದುಳಿದ ಆಯೋಗ ರಚಿಸಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಸೂಕ್ತ ಮೀಸಲಾತಿ ಜಾರಿ ಮಾಡಬೇಕೆಂದು ಡಾ. ಬಿ.ಆರ್ ಅಂಬೇಡ್ಕರ್‌ರವರು ಸಂವಿಧಾನದ ಪರಿಚ್ಛೇದ ೧೫(೪), ೧೬(೪) ಹಾಗು ಪರಿಚ್ಛೇದ ೩೪೦ರಲ್ಲಿ ಉಲ್ಲೇಖಿಸಿರುವುದನ್ನು ನೋಡಿದರೆ ಹಿಂದುಳಿದ ಜಾತಿ-ವರ್ಗದವರಿಗೆ ನೀಡುತ್ತಿರುವ ಮೀಸಲಾತಿ ಭಿಕ್ಷೆಯಲ್ಲ ಅದು ಅವರ ಸಂವಿಧಾನ ಬದ್ಧ ಹಕ್ಕು ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
    ಭಾರತದಲ್ಲಿ ಶ್ರೇಣಿಕೃತ ಜಾತಿ ಪದ್ಧತಿ ಇರುವುದು ವಾಸ್ತವಿಕ ಸತ್ಯ. ಆದ್ದರಿಂದ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಮತ್ತು ಆಯಾ ಜಾತಿಗಳಿಗೆ ವಿಶೇಷ ಸವಲತ್ತು, ಹಣಕಾಸಿನ ನೆರವು, ಯೋಜನೆ ಇತ್ಯಾದಿಗಳನ್ನು ರೂಪಿಸಲು ಅಂಕಿಅಂಶಗಳು ಅತ್ಯಂತ ಅವಶ್ಯಕ ಎಂಬ ಮಾಹಿತಿಯನ್ನು ೧೯೯೨ರಲ್ಲಿ ಮಂಡಲ್ ವರದಿಗೆ ಸಂಬಂಧಿಸಿದ ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿವಿಧ ಕಾಲಘಟ್ಟಗಳಲ್ಲಿ ಹಿಂದುಳಿದ ಜಾತಿ-ವರ್ಗಗಳಿಗೆ ಮೀಸಲಾತಿಯನ್ನು ನೀಡುವ ಸಂದರ್ಭದಲ್ಲಿ ನಿಖರವಾದ ಅಂಕಿ-ಅಂಶಗಳ ಕೊರತೆಯಿಂದಾಗಿ ವಿವಿಧ ರಾಜ್ಯ ಸರ್ಕಾರಗಳು ಹಿಂದುಳಿದ ಜಾತಿ-ವರ್ಗಗಳಿಗೆ ನೀಡಿದ್ದ ಮೀಸಲಾತಿಯನ್ನು ಆಯಾ ರಾಜ್ಯದ ಉಚ್ಛನ್ಯಾಯಾಲಯಗಳು ರದ್ದುಪಡಿಸಿರುವುದನ್ನು ಕಾಣಬಹುದಾಗಿದೆ. ಈ ವಿಚಾರದಲ್ಲಿ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ಹಿಂದುಳಿದ ಜಾತಿಗಳ ಮೀಸಲಾತಿ ಸವಲತ್ತುಗಳಿಗೆ ಅಂಕಿ-ಅಂಶಗಳು ಅವಶ್ಯಕ ಎನ್ನುವ ನಿಟ್ಟಿನಲ್ಲಿ ಎಲ್.ಜಿ ಹಾವನೂರು, ಟಿ. ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಸಿದ್ದಗೊಂಡವು. ಈ ದಾರಿಯಲ್ಲಿ ಸಾಗಿದ ಮತ್ತೊಂದು ಆಯೋಗದ ವರದಿಯೇ ಕಾಂತರಾಜ ಆಯೋಗದ ವರದಿ ಎಂದರು.
    ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ೨೦೧೪ರಲ್ಲಿ ಎಚ್. ಕಾಂತರಾಜ ಅವರ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕಗೊಂಡಿತು. ಹಿರಿಯ ವಕೀಲರು ಹಾಗು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ಎಚ್. ಕಾಂತರಾಜ ಅವರು ೫ ವರ್ಷಗಳ ಕಾಲ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ೫೫ ಮಾನದಂಡಗಳನ್ನು ಅಳವಡಿಸಿ ಹಿಂದುಳಿದ ವರ್ಗಗಳ ಜಾತಿ, ರಾಜಕೀಯ ಅಧಿಕಾರ, ಸಾಮಾಜಿಕ, ಅರ್ಥಿಕ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಹಿಂದುಳಿದ ವರ್ಗಗಳ `ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ' ವರದಿಯನ್ನು ೨೦೧೮ರಲ್ಲಿ ಅಂದಿನ ಸರ್ಕಾರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ವಿಧಾನಸಭೆ ಚುನಾವಣೆಯಿಂದಾಗಿ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗದೆ ಹಾಗೆಯೇ ಉಳಿಯಿತು. ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲೂ ಸ್ವೀಕಾರಗೊಳ್ಳದೆ ಉಳಿಯಿತು ಎಂದರು.
  ಎಚ್. ಕಾಂತರಾಜ ಆಯೋಗದ ವರದಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದಿದ್ದರೂ ಈ ಸಮೀಕ್ಷೆಯಲ್ಲಿ ಜಾತಿ ವಿವರಗಳು, ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕ ಸ್ಥಿತಿಗತಿಗಳನ್ನು ಕಲೆ ಹಾಕಲಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ನೀಡಲಾಗಿರುವ ಇಂತಹ ಮಾಹಿತಿಗಳಿಂದ ಶೋಷಣೆಗೆ ಒಳಗಾಗಿರುವ ಹಿಂದುಳಿದ ಜಾತಿ-ವರ್ಗಗಳಿಗೆ ನಿಜವಾಗಿಯೂ ಸಾಮಾಜಿಕ ನ್ಯಾಯ ದೊರೆಯುವುದರಲ್ಲಿ ಯಾವ ಅನುಮಾನ ಸಹ ಇಲ್ಲ ಎಂದರು.
    ಇದೀಗ ಎಚ್. ಕಾಂತರಾಜ ಆಯೋಗದ ವರದಿ ಜಾರಿಗೊಳಿಸಲು ಒತ್ತಡಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಲಾಡ್ಯ ಜಾತಿಗಳ ಮುಖಂಡರು, ಮಠಾಧೀಶರು ವರದಿ ಜಾರಿಯಾಗದಂತೆ ತಡೆಯಲು ಅನೇಕ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆಂದು ಆರೋಪಿಸಿದ ತೀ.ನ ಶ್ರೀನಿವಾಸ್ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಬೇಕು. ಈ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳುತ್ತಿದ್ದು, ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
    ವೇದಿಕೆ ಸಂಚಾಲಕರಾದ ಬಿ. ಜನಮೇಜಿರಾವ್, ಆರ್.ಟಿ ನಟರಾಜ್, ಮುಖಂಡರಾದ ಜಿ. ರಾಜು, ಬಿ. ಮೂರ್ತಿ, ಮಹಮದ್ ಸನಾವುಲ್ಲಾ, ಶಂಕರ್‌ರಾವ್, ಸಿ. ಜಯಪ್ಪ, ಪುಟ್ಟರಾಜ್, ಚಂದ್ರಣ್ಣ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಶೇಷ ಚೇತನ ಮಕ್ಕಳಿಗೆ ಜೀವನ ಕೌಶಲ್ಯ ನೀಡುವುದು ಸುಲಭದ ಕೆಲಸವಲ್ಲ : ಎ.ಕೆ ನಾಗೇಂದ್ರಪ್ಪ

ಭದ್ರಾವತಿಯಲ್ಲಿ ಶುಕ್ರವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರದ ವತಿಯಿಂದ ವಿಶೇಷ ಚೇತನ ಮಕ್ಕಳ ಅಗತ್ಯ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
    ಭದ್ರಾವತಿ: ವಿಶೇಷ ಚೇತನ ಮಕ್ಕಳಿಗೆ ಜೀವನ ಕೌಶಲ್ಯ ನೀಡುವುದು ಸುಲಭದ ಕೆಲಸವಲ್ಲ. ಇವರಿಗೆ ಶಕ್ತಿ ತುಂಬಲು ಪೋಷಕರು ಸೇರಿದಂತೆ ಎಲ್ಲರೂ ಸಹ ಆಶಾಕಿರಣದಂತೆ ಕೈಜೋಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶುಕ್ರವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಚೇತನ ಮಕ್ಕಳ ಅಗತ್ಯ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಸಾಮಾನ್ಯ ಶಿಕ್ಷಣಕ್ಕಿಂತ ವಿಶೇಷಚೇತನ ಮಕ್ಕಳಿಗೆ ನೀಡುವ ಜೀವನ ಕೌಶಲ್ಯದ ಶಿಕ್ಷಣ ಮಹತ್ವವಾದದ್ದು. ಶಿಕ್ಷಣದ ಅರ್ಥ ಮತ್ತು ವ್ಯಾಪ್ತಿ ವಿಶಾಲವಾದದ್ದು. ನಾಲ್ಕು ಗೋಡೆಗಳ ನಡುವೆ ಕಲಿಕೆ ಮೂಲಕ ದೊರೆಯುತ್ತಿದ್ದ ಶಿಕ್ಷಣ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಶಾಲೆ ಮಾತ್ರವಲ್ಲದೆ ಸಮಾಜದ ಸಹಭಾಗಿತ್ವವನ್ನು ಹೊಂದಿದೆ. ಎಲ್ಲಾ ಅಂಗಾಂಗಗಳು ಉತ್ತಮವಿರುವ ಮಕ್ಕಳು ಪುಸ್ತಕದ ಶಿಕ್ಷಣ ಪಡೆದರೆ, ವಿಶಿಷ್ಟಚೇತನ ಮಕ್ಕಳು ಜೀವನದ ಶಿಕ್ಷಣ ಪಡೆಯುತ್ತಾರೆ. ಈ ಮೂಲಕವೂ ಸಾಧನೆ ಸಾಧ್ಯವಿದೆ. ಶಿಕ್ಷಣದಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ. ಸಮುದಾಯ ಸುಖವಾಗಿದ್ದರೆ ದೇಶ ಸುಖವಾಗಿರುತ್ತದೆ ಎಂದರು.
    ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಯೋಜನೆಗಳಿಂದ ಮಾತ್ರವೇ ವಿಶಿಷ್ಟಚೇತನರ ಸಮಸ್ಯೆಗಳ ನಿವಾರಣೆ ಅಸಾಧ್ಯ. ಸರ್ಕಾರೇತರ ಸಂಸ್ಥೆಗಳಿಂದ ಹಾಗು ಸಮಾಜದ ವಿವಿಧ ಸಂಘ ಸಂಸ್ಥೆಗಳಿಂದ ಸ್ಪಂದನೆ ದೊರೆತಾಗ ಮಾತ್ರ ವಿಶಿಷ್ಟಚೇತನ ಮಕ್ಕಳ ಸಮಸ್ಯೆಗಳ ನಿವಾರಣೆ ಸಾಧ್ಯ ಎಂದರು.
    ಕಾರ್ಯಕ್ರಮದಲ್ಲಿ ದಾವಣಗೆರೆ ಸಿ.ಆರ್.ಸಿ ಕೇಂದ್ರದ ಡಾ. ವಿಜಯರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಬಾಯಿ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ಶಿಕ್ಷಣ ಇಲಾಖೆಯ ಪ್ರಭಾಕರ್, ವೇಣುಗೋಪಾಲ್, ವಿಜಯ್ ಮತ್ತಿತರರಿದ್ದರು. ಕಾರ್ಯಕ್ರಮದಲ್ಲಿ ೩೮ ಮಕ್ಕಳಿಗೆ ಶೈಕ್ಷಣಿಕ ವಸ್ತುಗಳ ಕಿಟ್ ವಿತರಿಸಲಾಯಿತು.
    ಹಳೆನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಸಮನ್ವಯ ಸಂಪನ್ಮೂಲ ವ್ಯಕ್ತಿ ಡಿ.ಎಚ್ ತೀರ್ಥಪ್ಪ ಸ್ವಾಗತಿಸಿದರು. ರೇಣುಕ ನಿರೂಪಿಸಿದರು. ಜಯಲ           ಕ್ಷ್ಮೀ ವಿಶೇಷ ಮಕ್ಕಳ ಪಟ್ಟಿ ಓದಿದರು. ಟಿ.ಎನ್ ಪ್ರತಿಭಾ ವಂದಿಸಿದರು.

Thursday, December 7, 2023

ಕುಡಿದು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ಸವಾರನಿಗೆ ೧೧ ಸಾವಿರ ರು. ದಂಡ

    ಭದ್ರಾವತಿ: ಕುಡಿದು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಸವಾರನೊಬ್ಬನಿಗೆ ಸ್ಥಳೀಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ೧೧ ಸಾವಿರ ರು. ದಂಡ ವಿಧಿಸಿದೆ.
    ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಯಶ್ರೀ ವೃತ್ತದಲ್ಲಿ ಠಾಣಾಧಿಕಾರಿ ರಮೇಶ್‌ರವರು ಡಿ.೪ರಂದು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ದ್ವಿಚಕ್ರ ವಾಹನ ಸವಾರನೋರ್ವ ಮದ್ಯಪಾನ ಮಾಡಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ೧೧ ಸಾವಿರ ರು. ದಂಡ ವಿಧಿಸಿದೆ ಆದೇಶಿಸಿದೆ.   

ಪ್ರೊ. ಎಸ್.ಎಸ್ ವಿಜಯಾದೇವಿ `ಶಕುಂತಲ ಜಯದೇವ ಶರಣ ಪ್ರಶಸ್ತಿ'ಗೆ ಆಯ್ಕೆ

ಪ್ರೊ.ಎಸ್.ಎಸ್ ವಿಜಯಾದೇವಿ
    ಭದ್ರಾವತಿ: ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊ. ಎಸ್.ಎಸ್ ವಿಜಯಾದೇವಿ ಅವರು ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ `ಶಕುಂತಲ ಜಯದೇವ ಶರಣ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
    ವಿಜಯಾದೇವಿಯವರು ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪರಿಷತ್ ವತಿಯಿಂದ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ವಿಜಯಾದೇವಿಯವರು ಆಯ್ಕೆಯಾಗಿದ್ದು, ಪರಿಷತ್ ಅವರಿಗೆ ಅಭಿನಂದಿಸುತ್ತದೆ ಎಂದು ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ.

ಡಿ.೧೦, ೧೧ ಶ್ರೀ ಉದ್ದಾಮ ಕ್ಷೇತ್ರದಲ್ಲಿ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ

ಶ್ರೀ ಉದ್ದಾಮ ಕ್ಷೇತ್ರ, ಶ್ರೀ ಉದ್ದಾಂಜನೇಯ ಸ್ವಾಮಿ
    ಭದ್ರಾವತಿ: ತಾಲೂಕಿನ ಗಂಗೂರಿನ ಪುರಾಣ ಪ್ರಸಿದ್ದ ಶ್ರೀ ಉದ್ದಾಮ ಕ್ಷೇತ್ರ, ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿ.೧೦ ಮತ್ತು ೧೧ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ.
    ೧೦ರಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಫಲಪಂಚಾಮೃತ ಅಭಿಷೇಕ, ಕಂಕಣಧಾರಣೆ, ಧ್ವಜಾರೋಹಣ, ಬೆಳಿಗ್ಗೆ ೧೧ ಗಂಟೆಗೆ ಸುಹಾಸಿನಿಯರಿಂದ ಗಂಗಾಪೂಜೆ, ಸಮಜೆ ೬ಕ್ಕೆ ಕಳಸಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಲಕ್ಷ್ಮೀ ನಾರಾಯಣ ಸಹಿತ ಶ್ರೀ ಲಕ್ಷ್ಮೀನರಸಿಂಹ, ಶ್ರೀ ವೈಜಯಂತಿ ಮಹಾಸುದರ್ಶನ ಹೋಮ, ಪೂರ್ಣಾಹುತಿ, ಅಷ್ಟಾವದಾನ ಸೇವೆ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
    ೧೧ರಂದು ಪ್ರಾಥಃಕಾಲ, ಸುಪ್ರಭಾತ ಸೇವೆ, ವೇದಪಾರಾಯಣ, ಶ್ರೀರಾಮ-ಸೀತಾದೇವರ ಫಲಪಂಚಾಮೃತ ಅಭಿಷೇಕ, ೯.೪೦ ರಿಂದ ೧೦.೨೫ರ ವರೆಗೆ ಶ್ರೀ ಸೀತಾ-ರಾಮದೇವರ ಮಾಂಗಲ್ಯಧಾರಣ ಕಲ್ಯಾಣ ಮಹೋತ್ಸವ, ಮಹಾಮಂಗಳಾರತಿ, ಶಾತುಮೊರೈ, ಅಷ್ಟಾವಧಾನ ಸೇವೆ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
    ಅವಧೂತ ಶ್ರೀ ಸದ್ಗರು ಶ್ರೀ ಬಿಂಧುಮಾಧವ ಶರ್ಮ ಗುರುಗಳ ದಿವ್ಯ ಸಾನಿಧ್ಯದಲ್ಲಿ ಬೆಲಗೂರು ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ, ಶ್ರೀ ಮಾರುತಿ ಪೀಠ ಪೀಠಾಧ್ಯಕ್ಷರಾದ ಶ್ರೀ ವಿಜಯ ಮಾರುತಿ ಶರ್ಮ ಅವರ ಮಾರ್ಗದರ್ಶನದಲ್ಲಿ ಹಿರೇಮಗಳೂರು ಶ್ರೀ ಕೋದಂಡಸ್ವಾಮಿ ದೇವಸ್ಥಾನದ ವೇದಬ್ರಹ್ಮ ಶ್ರೀ ವೈಷ್ಣವ ಸಿಂಹ ಹಾಗು ದೇವರನರಸೀಪುರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಪ್ರಧನ ಅರ್ಚಕ ವೇದಬ್ರಹ್ಮ ಶ್ರೀ ಜಗನ್ನಾಥ್ ಭಟ್ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೮೨೧೭೭೯೭೩೫೬ ಅಥವಾ ೬೩೬೧೧೫೯೧೬೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ತಾಲೂಕು ಪಂಚಾಯಿತಿಯಲ್ಲಿ ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ಭ್ರಷ್ಟಾಚಾರ

ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಚಿವರಿಗೆ ಮನವಿ

ಭದ್ರಾವತಿ ತಾಲೂಕು ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ವಾಟರ್ ಪ್ಯೂರಿಫೈಯರ್.
    ಭದ್ರಾವತಿ : ತಾಲೂಕು ಪಂಚಾಯಿತಿಯಲ್ಲಿ ಕಳಪೆ ಗುಣಮಟ್ಟದ ವಾಟರ್ ಪ್ಯೂರಿಫೈಯರ್ ಖರೀದಿಸಿ ಅವ್ಯವಹಾರ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ತಾಲೂಕಿನ ಉಕ್ಕುಂದ ಗ್ರಾಮದ ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಮನವಿ ಸಲ್ಲಿಸಿದ್ದಾರೆ.
    ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯಲು ಗಡಸು ನೀರು ಬಳಸುತ್ತಿರುವ ಪ್ರದೇಶಗಳ ಸುಮಾರು ೮೦ ಅಂಗನವಾಡಿ ಕೇಂದ್ರಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ ೨೦೨೩-೨೪ನೇ ಸಾಲಿನ ಸಂಯುಕ್ತ ಅನುದಾನದ ಸುಮಾರು ೪,೭೬,೦೦೦ ರು. ವೆಚ್ಚದಲ್ಲಿ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಿ ತಲಾ ಒಂದರಂತೆ ನೀಡಲಾಗಿದೆ. ಒಂದು ವಾಟರ್ ಪ್ಯೂರಿಫೈಯರ್‌ಗೆ ೫,೯೫೦ ರು. ದಾಖಲಿಸಲಾಗಿದ್ದು, ಆದರೆ ವಾಸ್ತವವಾಗಿ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ಪ್ಯೂರಿಫೈಯರ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ ೧,೨೦೦ ರು. ಮೌಲ್ಯ ಹೊಂದಿರುವಂತೆ ಕಂಡು ಬರುತ್ತಿದೆ. ಬಳಸಲು ಯೋಗ್ಯವಿಲ್ಲದ ಕಾರಣ ಬಹಳಷ್ಟು ವಾಟರ್ ಪ್ಯೂರಿಫೈಯರ್‌ಗಳು ಅಂಗನವಾಡಿ ಕೇಂದ್ರಗಳಲ್ಲಿ ಮೂಲೆ ಸೇರಿವೆ ಎಂದು ಆರೋಪಿಸಿದ್ದಾರೆ.
    ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಸೂಕ್ತ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಶಿವಕುಮಾರ್, ಸಾಮಾಜಿಕ ಹೋರಾಟಗಾರ.
ಅಂಗನವಾಡಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಲಾಗಿದ್ದು, ಇಲ್ಲೂ ಸಹ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೆ ಭ್ರಷ್ಟಾಚಾರ ನಡೆಸಿರುವವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾಗೊಳಿಸಬೇಕು.
                                                                                        -ಶಿವಕುಮಾರ್, ಸಾಮಾಜಿಕ ಹೋರಾಟಗಾರ