Thursday, November 14, 2024

ಬಾಲ್ಯದಲ್ಲಿಯೇ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮಾನಸಿಕ, ದೈಹಿಕವಾಗಿ ಸದೃಢರಾಗಿ : ಜೆ.ಎನ್ ಬಸವರಾಜಪ್ಪ


ಭದ್ರಾವತಿ ನಗರದ ಹೊಸಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರುರವರ ೧೩೫ನೇ ಜನ್ಮದಿನ ಆಚರಿಸಲಾಯಿತು. 
    ಭದ್ರಾವತಿ: ಮಕ್ಕಳು ಬಾಲ್ಯದಲ್ಲಿಯೇ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬೇಕೆಂದು ನಗರದ ಹಿರಿಯ ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಹೇಳಿದರು. 
  ಅವರು ಗುರುವಾರ ನಗರದ ಹೊಸಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರುರವರ ೧೩೫ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಕ್ಕಳ ಮನಸ್ಸು ಪರಿಶುದ್ಧವಾಗಿರಬೇಕು. ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನೆಹರುರವರು ಮಕ್ಕಳ ಮೇಲೆ ಹೊಂದಿರುವ ಪ್ರೀತಿ ಅಪಾರವಾಗಿದ್ದು, ಅವರ ಆಶಯದಂತೆ ಅವರ ಜನ್ಮದಿನ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು. 
    ಶಿಕ್ಷಕಿ ಭಾಗ್ಯ ನೆಹರುರವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ಮುಖ್ಯ ಶಿಕ್ಷಕ ನಾಗೇಶ್ ನೆಹರುರವರ ಕಾಲಾವಧಿಯಲ್ಲಿ ದೇಶ ಕಂಡ ಪ್ರಗತಿಯ ಕುರಿತು ಮಾತನಾಡಿದರು. 
    ವಿದ್ಯಾರ್ಥಿಗಳಾದ  ಪೂರ್ವಿಕ, ಲಕ್ಷ್ಮಿ ಮತ್ತು ಜಯಶ್ರೀ ಮಕ್ಕಳ ದಿನಾಚರಣೆ ಕುರಿತು ಕಿರು ಭಾಷಣ ಮಾಡಿದರು. ವಿದ್ಯಾರ್ಥಿಗಳಿಂದ ನೃತ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. 

ಜವಾಹರಲಾಲ್ ನೆಹರು ವೇಷ ಧರಿಸಿ ಗಮನ ಸೆಳೆದ ಯು.ಕೆ.ಜಿ ವಿದ್ಯಾರ್ಥಿ

ಭದ್ರಾವತಿ ನ್ಯೂಟೌನ್ ಸೈಂಟ್ ಚಾರ್ಲ್ಸ್ ಶಾಲೆಯ ಯು.ಕೆ.ಜಿ ವಿದ್ಯಾರ್ಥಿ ಎಂ.ಕೆ ಸ್ಟೀಫನ್ ಗುರುವಾರ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವೇಷಭೂಷಣ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರುರವರ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. 
    ಭದ್ರಾವತಿ : ನ್ಯೂಟೌನ್ ಸೈಂಟ್ ಚಾರ್ಲ್ಸ್ ಶಾಲೆಯ ಯು.ಕೆ.ಜಿ ವಿದ್ಯಾರ್ಥಿ ಎಂ.ಕೆ ಸ್ಟೀಫನ್ ಗುರುವಾರ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವೇಷಭೂಷಣ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರುರವರ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು.  
    ಅಲ್ಲದೆ ಮಕ್ಕಳ ದಿನಾಚರಣೆ ವಿಷಯವಾಗಿ ಮಾತನಾಡಿ ಶಿಕ್ಷಕರ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದು, ಸ್ಟೀಫನ್ ಹಳೇನಗರ ಭೂತನಗುಡಿ ನಿವಾಸಿ ಪತ್ರಕರ್ತ ಕಿರಣ್‌ಕುಮಾರ್-ರೀನಾ ದಂಪತಿ ಪುತ್ರ. ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಶಾಲೆ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. 

ವೃದ್ಧರ ಸೇವೆ ಮಾಡುವ ಮನೋಭಾವವಿದ್ದಾಗ ಮಾತ್ರ. ವೃದ್ದಾಶ್ರಮಗಳಲ್ಲೂ ನೆಮ್ಮದಿ : ಬಿ.ಕೆ ಮೋಹನ್


ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹ ಸಭಾಂಗಣದಲ್ಲಿ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ನೂತನವಾಗಿ ಜಾರಿಗೆ ತಂದಿರುವ `ಕಾರುಣ್ಯ ದಾರಿ ದೀಪ ಯೋಜನೆ' ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ವೃದ್ಧರ ಸೇವೆ ಮಾಡುವ ಮನೋಭಾವವಿದ್ದಾಗ ಮಾತ್ರ. ವೃದ್ದಾಶ್ರಮಗಳಲ್ಲೂ ನೆಮ್ಮದಿ ಕಾಣಲು ಸಾಧ್ಯ. ಇಂತಹ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಗುರುವಾರ ವಿಐಎಸ್‌ಎಲ್ ಅತಿಥಿಗೃಹ ಸಭಾಂಗಣದಲ್ಲಿ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ನೂತನವಾಗಿ ಜಾರಿಗೆ ತಂದಿರುವ `ಕಾರುಣ್ಯ ದಾರಿ ದೀಪ ಯೋಜನೆ' ಉದ್ಘಾಟಿಸಿ ಮಾತನಾಡಿದರು. 
    ಎಲ್ಲರ ಸಹಕಾರದೊಂದಿಗೆ ವೃದ್ಧಾಶ್ರಮಗಳನ್ನು ತೆರೆಯುವುದು ಸುಲಭ. ಆದರೆ ಆ ವೃದ್ಧಾಶ್ರಮಗಳಲ್ಲಿ ವೃದ್ಧರ ಸೇವೆ ಮಾಡುವವರ ಅಗತ್ಯವಿದೆ.  ಇಂದು ನಮ್ಮನ್ನು ಬೆಳೆಸಿದ ತಂದೆ ತಾಯಿಯರನ್ನೇ ಅವರ ವೃದ್ದಾಪ್ಯದಲ್ಲಿ ನೋಡಿ ಕೊಳ್ಳುವುದು ಕಷ್ಟ. ಅಂತಹ ದಿನಗಳಲ್ಲಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವಯೋವೃದ್ದರನ್ನು ಗೌರವಿಸಿ, ಪೋಷಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. 
    ಮಕ್ಕಳು ತಮ್ಮ ಶಿಕ್ಷಣ ಹಾಗೂ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು.  ಸರ್ಕಾರದಿಂದ ಸಾಕಷ್ಟು ಸೌಲಭ್ಯ ದೊರೆಯುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಟ್ರಸ್ಟ್ ಜಾರಿಗೆ ತಂದಿರುವ ನೂತನ ಯೋಜನೆ ಯಶಸ್ವಿಯಾಗಿ ಮುನ್ನಡೆಯಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಟ್ರಸ್ಟ್ ಸೇವಾ ಕಾರ್ಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯುವಂತಾಗಬೇಕು. 
    ಟ್ರಸ್ಟ್ ಮುನ್ನಡೆಸಿಕೊಂಡು ಹೋಗುತ್ತಿರುವ ಜಿ. ರಾಜುರವರು ಮೂಲತಃ ಹೋರಾಟದಿಂದ ಬೆಳೆದುಬಂದವರು. ಇದೀಗ ಸೇವಾಮನೋಭಾವನೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವಾಕಾರ್ಯಕ್ಕೆ ಅಭಿನಂದನೆ ಸಲ್ಲಿಸುವ ಜೊತೆಗೆ ಶಾಸಕರು ಟ್ರಸ್ಟ್‌ಗೆ ೫ ಲಕ್ಷ ರು. ನೆರವು ನೀಡಿದ್ದು, ಅದನ್ನು ಸ್ವೀಕರಿಸಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಟ್ರಸ್ಟ್‌ಗೆ ಶಾಶ್ವತ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಭರವಸೆ ನೀಡಿದರು. 
  ಹೋರಾಟಗಾರ ಕೆ.ಎಲ್ ಅಶೋಕ್ ಮಾತನಾಡಿ, ವೃದ್ದರು ಅನಾಥರಲ್ಲ. ವೃದ್ದರನ್ನು ಹೊರಹಾಕುವವರ ಅನಾಥರು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ನಿಸ್ವಾರ್ಥತೆಯಿಂದ ಎಲ್ಲರೊಡನೆ ಬದುಕುವುದು ಕಲಿತಾಗ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ. ನಿಸ್ವಾರ್ಥ ಸೇವಾ ಮನೋಭಾವದಿಂದ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಹೊರಟಿರುವ ಕಾರುಣ್ಯ ಟ್ರಸ್ಟಿನ ಕೆಲಸ ರಾಜ್ಯದ ಉದ್ದಗಲಕ್ಕೂ ಹರಡುವಂತಾಗಲಿ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಮನುಷ್ಯ ಮಾನವೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಆತ ದೈವತ್ವವನ್ನು ಪಡೆಯಲು ಸಾಧ್ಯ. ಆಗ ಮಾತ್ರ ಅವರ ಮೇಲೆ ಪೂಜ್ಯ ಭಾವನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಬುದ್ದನ ಶಾಂತಿ ಮಂತ್ರ,  ಬಸವಣ್ಣನವರ ಆದರ್ಶ, ಅಂಬೇಡ್ಕರ್‌ರವರ ಜ್ಞಾನದ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ೧೫ ಪ್ರೌಢಶಾಲೆಗಳಿಂದ ವಿಶೇಷ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಶಿಕ್ಷಣ ಕೊಡಿಸುವಲ್ಲಿ ಮುಂದಾಗಿರುವ ಕಾರುಣ್ಯ ಟ್ರಸ್ಟ್‌ಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ನ್ಯಾಯವಾದಿ ಕೆ.ಎನ್ ಶ್ರೀಹರ್ಷ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಸೂಡಾ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿ, ಟ್ರಸ್ಟ್ ಸೇವಾ ಕಾರ್ಯವನ್ನು ಪ್ರಶಂಸಿಸಿದರು. 
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ರಾಜು ಅಧ್ಯಕ್ಷತೆ ವಹಿಸಿದ್ದರು.  ಟ್ರಸ್ಟ್ ಪ್ರಮುಖರಾದ ಗೌರವಾಧ್ಯಕ್ಷ ಡಾ. ವಿಜಯ್ ಜಿ. ದುಬೈ, ನಿರ್ದೇಶಕ ವಿ.ಟಿ ರಮೇಶ್, ಡಾ. ನರೇಂದ್ರ ಬಾಬು, ರಘುರಾಮ್, ಸುರೇಶ್(ಕ್ಲಬ್), ಕೆಡಿಪಿ ಸದಸ್ಯ ರಾಜೇಂದ್ರ, ಡಿಎಸ್‌ಎಸ್ ಮುಖಂಡ ವಿ. ವಿನೋದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಶಿಕ್ಷಕ ಎ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಖಜಾಂಚಿ ನಾಗವೇಣಿ ಸ್ವಾಗತಿಸಿ, ನಗರಸಭೆ ಮಾಜಿ ಸದಸ್ಯೆ ಅನ್ನಪೂರ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದಾಧಿಕಾರಿಗಳಾದ ನಾಗರಾಜ್, ಭಾಸ್ಕರ್, ಕಾರ್ತಿಕ್ ಸೇರಿದಂತೆ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.  
 

Wednesday, November 13, 2024

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ

ಶಿವಮೊಗ್ಗ ಸಿ.ಇ.ಎನ್  ಕ್ರೈಂ ಠಾಣೆವತಿಯಿಂದ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಅಧಿಕಾರಿಗಳು ಹಾಗು ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಯಿತು. 
    ಭದ್ರಾವತಿ : ಶಿವಮೊಗ್ಗ ಸಿ.ಇ.ಎನ್  ಕ್ರೈಂ ಠಾಣೆವತಿಯಿಂದ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಅಧಿಕಾರಿಗಳು ಹಾಗು ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಯಿತು. 
     ಸಿ.ಇ.ಎನ್ ಕ್ರೈಂ ಠಾಣೆ ಉಪಾಧೀಕ್ಷಕರ ನೇತೃತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳು ಹಾಗು ಮುನ್ನಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳು ಹಾಗು ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಯಿತು. 
    ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಬಂಧಕ ಎಲ್. ಪ್ರವೀಣ್‌ಕುಮಾರ್ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಭದ್ರತಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು, ಸಿ.ಎನ್.ಎನ್ ಕ್ರೈಂ ಠಾಣೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

ಕ್ರೈಸ್ತ ಸಮುದಾಯದ ಧರ್ಮೋಪದೇಶ ಶಿಕ್ಷಕಿಯರ ದಿನಾಚರಣೆ

ಭದ್ರಾವತಿ ತಾಲೂಕಿನ ಕಾರೆಹಳ್ಳಿ ಗ್ರಾಮದ ಸಂತ ಅಂತೋಣಿಯವರ ಧರ್ಮ ಕೇಂದ್ರದಲ್ಲಿ ಧರ್ಮೋಪದೇಶ ಶಿಕ್ಷಕರ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಆಚರಿಸಲಾಯಿತು. 
    ಭದ್ರಾವತಿ: ಕ್ರೈಸ್ತ ಸಮುದಾಯದ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮೋಪದೇಶ ಶಿಕ್ಷಕಿಯರ ದಿನಾಚರಣೆ ಶಿವಮೊಗ್ಗ ಧರ್ಮಕ್ಷೇತ್ರಾದ್ಯಂತ ಎಲ್ಲಾ ಕ್ರೈಸ್ತ ಸಮುದಾಯದ ದೇವಾಲಯಗಳಲ್ಲಿ ಆಚರಿಸಲಾಯಿತು.
    ತಾಲೂಕಿನ ಕಾರೆಹಳ್ಳಿ ಗ್ರಾಮದ ಸಂತ ಅಂತೋಣಿಯವರ ಧರ್ಮ ಕೇಂದ್ರದಲ್ಲಿ ಧರ್ಮೋಪದೇಶ ಶಿಕ್ಷಕರ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಆಚರಿಸಲಾಯಿತು. ಈ ನಿಟ್ಟಿನಲ್ಲಿ ಧರ್ಮೋಪದೇಶ ಶಿಕ್ಷಕಿಯರಿಗೆ ಉಡುಗೊರೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಧರ್ಮ ಕೇಂದ್ರದ ಗುರುಗಳಾದ ಸಂತೋಷ ಅಲ್ಮೇಡ, ಧರ್ಮ ಭಗಿನಿಯರು, ಮಕ್ಕಳು, ಪೋಷಕರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ : ನಗರ ಸಂಕೀರ್ತನೆ

ಶ್ರೀ ವಿಜಯದಾಸರ ಆರಾಧನಾ ಅಂಗವಾಗಿ ಅಖಿಲ ಭಾರತ ಮಾಧ್ವ ಮಹಾ ಮಂಡಳಿ ವತಿಯಿಂದ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರಗೆ ನಗರ ಸಂಕೀರ್ತನೆ ನೆಡೆಸಲಾಯಿತು. 
    ಭದ್ರಾವತಿ: ಶ್ರೀ ವಿಜಯದಾಸರ ಆರಾಧನಾ ಅಂಗವಾಗಿ ಅಖಿಲ ಭಾರತ ಮಾಧ್ವ ಮಹಾ ಮಂಡಳಿ ವತಿಯಿಂದ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರಗೆ ನಗರ ಸಂಕೀರ್ತನೆ ನೆಡೆಸಲಾಯಿತು. 
    ನಂತರ ಜನ್ನಾಪುರ ಶ್ರೀ ಮಠದಲ್ಲಿ  ಉಡುಪಿ ವಂಶಿ ಕೃಷ್ಣಚಾರರವರು ಉಪನ್ಯಾಸ ನೀಡಿದರು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮಹಾ ಮಂಡಳಿ ವತಿಯಿಂದ ಪ್ರತಿ ವರ್ಷ ಶ್ರೀ ವಿಜಯ ದಾಸರ ಆರಾಧನಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. 
    ಮಹಾ ಮಂಡಳಿ ಅಧ್ಯಕ್ಷ ವಿ. ಜಯತೀರ್ಥ ಪ್ರಧಾನ ಕಾರ್ಯದರ್ಶಿ ಕೆ.ಆರ್ ವೆಂಕಟೇಶ ಹಾಗೂ ದಾಸರ ವೇಷದಲ್ಲಿ ಎನ್.ಎಂ ಸುಧೀಂದ್ರ, ಶ್ರೀ ಗೋಪಾಲಾಚಾರ್, ಶ್ರೀನಿವಾಸಚಾರ್, ರಮಾಕಾಂತ್, ಹರಿದಾಸ ಮಹಿಳಾ ಮಂಡಳಿ ಸದಸ್ಯರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

Tuesday, November 12, 2024

ಕಾಡು ಪ್ರಾಣಿ ಕಡವೆ ಭೇಟೆ : ಓರ್ವನ ಸೆರೆ

ಕಾಡು ಪ್ರಾಣಿ ಕಡವೆ  ಭೇಟೆಯಾಡಿದ ವ್ಯಕ್ತಿಯೋರ್ವನನ್ನು ಭದ್ರಾವತಿ ಉಪವಲಯ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ: ಕಾಡು ಪ್ರಾಣಿ ಕಡವೆ  ಭೇಟೆಯಾಡಿದ ವ್ಯಕ್ತಿಯೋರ್ವನನ್ನು ಇಲ್ಲಿನ ಉಪವಲಯ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಒಟ್ಟು ೪ ಜನರ ತಂಡ ಕಾಡು ಪ್ರಾಣಿ ಕಡವೆ ಭೇಟೆಯಾಡಿದ್ದು, ಈ ಪೈಕಿ ತಾಲೂಕಿನ ಅರೆಬಿಳಚಿ ಕ್ಯಾಂಪ್ ನಿವಾಸಿ ಮಂಜುನಾಥ್‌ನನ್ನು ಬಂಧಿಸಲಾಗಿದೆ. ಉಳಿದ ಮೂವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. 
  ತಾಲೂಕಿನ ದಾನವಾಡಿ ಅರಣ್ಯದಲ್ಲಿ ಮಂಜುನಾಥ್ ಸೇರಿದಂತೆ ನಾಲ್ವರು ಕಡವೆ ಭೇಟೆಯಾಗಿದ್ದು, ಈ ಸಂಬಂಧ ಮಂಜುನಾಥ್‌ನನ್ನು ಬಂಧಿಸುವಲ್ಲಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ನೇತೃತ್ವದ ತಂಡ ಯಶಸ್ವಿಯಾಗಿದೆ. ಉಳಿದ ಮೂವರು ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಬಲೆ ಬೀಸಲಾಗಿದೆ. 
    ಕೂಡ್ಲಿಗೆರೆ ಶಾಖೆಯ ಹೊಸೂರು ಗ್ರಾಮದ ಸರ್ವೆ ನಂ.೨೨ರ ದಾನವಾಡಿ ಕಿರು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿ ಕಡವೆ ಬೇಟೆಯಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.  
    ಈ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶಿಶ್ ರೆಡ್ಡಿ, ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ ಇವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿಗಳಾದ ಬಿ.ಎಚ್ ದುಗ್ಗಪ್ಪ ರವರ ನೇತೃತ್ವದ ತಂಡ ರಚಿಸಲಾಗಿತ್ತು.  
    ಉಪ ವಲಯ ಅರಣ್ಯಾಧಿಕಾರಿಗಳಾದ ಶೇಖರ್ ಎ ಚೌಗುಲೆ(ಕೂಡ್ಲಿಗೆರೆ ಶಾಖೆ), ಜಿ. ಹನುಮಂತರಾಯ, ಸಿ. ಚಂದ್ರಶೇಖರ್, ಕಾಂತೇಶ್ ನಾಯ್ಕ, ಗಸ್ತು ಅರಣ್ಯ ಪಾಲಕ ಕೆ.ವಿ ಪ್ರತಾಪ್ ಹಾಗೂ ದಿನಗೂಲಿ ನೌಕರರಾದ ಕೋಠಿ, ಅವಿನಾಶ್ ಮತ್ತು ಮಂಜು ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು. ಬಂಧಿತ ಮಂಜುನಾಥ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.