ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಭದ್ರಾವತಿ ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ: ಸರ್ಕಾರದಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಮಂಜೂರಾಗಿರುವ ಜಮೀನು ನ್ಯಾಯಾಲಯದ ಆದೇಶದಂತೆ ಪಿಟಿಸಿಎಲ್ ಕಾಯ್ದೆಯಡಿ ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಳ್ಳಿಕೆರೆ ಗ್ರಾಮದ ಸ.ನಂ ೧೪/೬ ರಲ್ಲಿ ಸೋಮ್ಲಾನಾಯ್ಕ ಬಿನ್ ಭಜನಾನಾಯ್ಕ ರವರಿಗೆ (ಆರ್.ಆರ್ ನಂ.೧೫೨ ರಂತೆ ಆದೇಶ ನಂ.ಜಿ.ಡಿ ೩೫/೫೨-೫೩ ದಿನಾಂಕ: ೨೮-೧೧-೧೯೫೬ರ ರೀತ್ಯಾ ಸಾಗುವಳಿ ಚೀಟಿ ಸಂಖ್ಯೆ ೬೫/೫೬-೫೭) ೪ ಎಕರೆ ಜಮೀನು ೧೦ ವರ್ಷ ಪರಭಾರೆ ಮಾಡಬಾರದೆಂಬ ನಿಬಂಧನೆಗಳಿಗೆ ಒಳಪಟ್ಟು ದರಖಾಸ್ತಿನಡಿ ಮಂಜೂರಾಗಿತ್ತು.
ಸೋಮ್ಲಾನಾಯ್ಕ ಅವರಿಗೆ ಮಂಜೂರಾದ ಈ ಜಮೀನನ್ನು ಇತರೆ ವ್ಯಕ್ತಿಗಳು ಖರೀದಿಸಿದ್ದು, ಪಿಟಿಸಿಎಲ್ ಕಾಯ್ದೆಯಡಿ ಸರ್ಕಾರದ ಅನುಮತಿ ಇಲ್ಲದೆ ಜಮೀನು ಖರೀದಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಜಮೀನಿನ ಸಂಬಂಧ ಉಪ ವಿಭಾಗಾಧಿಕಾರಿಗಳ ಪ್ರಾಧಿಕಾರದಲ್ಲಿ ವಿಚಾರಣೆ ನಡೆದು ಪಿ.ಟಿ.ಸಿ.ಎಲ್.ಸಿ ಆರ್.೦೬/೮೧-೮೨ ರ ದಿನಾಂಕ: ೨೪-೦೧-೧೯೮೬ ರಂತೆ ಆದೇಶವಾಗಿದ್ದು, ಈ ಆದೇಶದಂತೆ ಅಂದಿನಿಂದ ಇಂದಿನವರೆಗೂ ವಾರಸುದಾರರಿಗೆ ಜಮೀನಿನ ಸ್ವಾಧೀನತೆಯನ್ನು ಬಿಡಿಸಿಕೊಟ್ಟಿರುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಈ ಸಂಬಂಧ ಉಪ ವಿಭಾಗಾಧಿಕಾರಿಗಳಿಗೆ ಜಮೀನು ಬಿಡಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಆದರೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ತಕ್ಷಣ ಜಮೀನು ಮೂಲ ಜಮೀನುದಾರರಿಗೆ ಬಿಡಿಸಿಕೊಡುವಂತೆ ಆಗ್ರಹಿಸಿದರು.
ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಸೇರಿದಂತೆ ದಲಿತ ಮುಖಂಡರು, ಜಮೀನಿನ ಮೂಲ ವಾರಸುದಾರ ಕುಟುಂಬದವರು, ಸ್ಥಳೀಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.