Tuesday, December 3, 2024

ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಉಳಿವಿಗೆ ಯಾವುದೇ ತ್ಯಾಗಕ್ಕೂ ಬದ್ಧರಾಗಿ : ಬಿ.ಕೆ ಮೋಹನ್

ಭದ್ರಾವತಿ ನಗರದ ಅಪೇಕ್ಷ ನೃತ್ಯ ಕಲಾವೃಂದ ಮತ್ತು ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಆಂಗವಾಗಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಮತ್ತು ಡಾ. ವಿಷ್ಣುವರ್ಧನ್  ಪ್ರಶಸ್ತಿ, ಅಪೇಕ್ಷ ರಾಜ್ಯ ಪ್ರಶಸ್ತಿ, ಕನ್ನಡ ಕುವರ ಕುವರಿ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಕನ್ನಡ ರಾಜ್ಯೋತ್ಸವ ಕೇವಲ ನ.೧ಕ್ಕೆ ಸೀಮಿತವಾಗಬಾರದು. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಉಳಿವಿಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ನಗರದ ಅಪೇಕ್ಷ ನೃತ್ಯ ಕಲಾವೃಂದ ಮತ್ತು ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಆಂಗವಾಗಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಮತ್ತು ಡಾ. ವಿಷ್ಣುವರ್ಧನ್  ಪ್ರಶಸ್ತಿ, ಅಪೇಕ್ಷ ರಾಜ್ಯ ಪ್ರಶಸ್ತಿ, ಕನ್ನಡ ಕುವರ ಕುವರಿ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 
    ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಡಾ. ರಾಜ್‌ಕುಮಾರ್ ಅವರಂತಹ ಮೇರುನಟರು, ಗೋಕಾಕ್ ಚಳುವಳಿ ಸೇರಿದಂತೆ ಅನೇಕ ಕನ್ನಡ ಪರ ಚಳುವಳಿಗಳಲ್ಲಿ ಭಾಗವಹಿಸುವ ಮೂಲಕ ಕನ್ನಡಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನತನವನ್ನು ಹೊಂದಿದೆ ಎಂದರು. 
    ನಮ್ಮ ಉಸಿರಿರುವವರೆಗೂ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದುವ, ಕನ್ನಡ ಸಂಸ್ಕೃತಿಯನ್ನು ಅಭಿಮಾನಿಸಿ, ಪ್ರೀತಿಸುವ ಮನೋಭಾವ ನಮ್ಮಲ್ಲಿ ಬರಬೇಕು.  ಮೊದಲು ಕನ್ನಡವನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಿ.  ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ಮರೆಯಬೇಡಿ. ಸರ್ಕಾರಿ ಶಾಲೆಯಲ್ಲಿ ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವಂತಾಗಬೇಕು ಎಂದರು.
    ಅಪೇಕ್ಷ ಕಲಾವೃಂದದ ವತಿಯಿಂದ ಕ್ಷೇತ್ರದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಅಭೂತಪೂರ್ವ ಕಾರ್ಯಕ್ರಮ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ಕಲಾವಿದರಲ್ಲಿ ಕೆಲವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ಕಲಾವಿದರಿಗೆ ಸರ್ಕಾರಿ ಸೌಲಭ್ಯಗಳು ಹಾಗೂ ಆರ್ಥಿಕ ನೆರವು ಸಿಗುವಂತಾಗಬೇಕೆಂದರು.  
    ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಪೇಕ್ಷ ಮಂಜುನಾಥ್ ಅವರಿಗೆ ಈ ಬಾರಿ ರಾಷ್ಟ್ರಪ್ರಶಸ್ತಿ ಲಭಿಸಬೇಕಿತ್ತು. ಕಾರಣಾಂತರಗಳಿಂದ ಕೈತಪ್ಪಿದೆ. ೨೦೨೫ರ ರಾಜ್ಯೋತ್ಸವದ ವೇಳೆಗೆ ಅಪೇಕ್ಷ ಮಂಜುನಾಥ್ ಅವರಿಗೆ ಅವರ ಕಲಾ ಸೇವೆ ಗುರುತಿಸಿ ರಾಜ್ಯ ಪ್ರಶಸ್ತಿ ನೀಡುವಂತೆ ತಾವು ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಒಟ್ಟಿಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು. 
    ಕಲಾ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ವಿಷ್ಣುವರ್ಧನ್ ಅವರ ಕಲೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಮ್ಮೂರಿನ ಹೆಸರನ್ನು ರಾಜ್ಯದ ಉದ್ದಗಲಕ್ಕೂ ಹರಡಿರುವ ಅಪೇಕ್ಷ ಮಂಜುನಾಥ್ ಅವರ ಕಲಾ ಸೇವೆ ಹೀಗೇ ಮುಂದುವರೆಯಲಿ ಎಂದು ಆಶಿಸಿದರು. 
    ಬೆಂಗಳೂರಿನ ಕೇಶ ವಿನ್ಯಾಸಕ ನಾಗೇಶ್ವರರಾವ್ `ಡಾ. ವಿಷ್ಣುವರ್ಧನ್ ಪ್ರಶಸ್ತಿ' ಸ್ವೀಕರಿಸಿ, ಕಲೆ, ಕಲಾವಿದರ ಮೇಲಿನ ಪ್ರೀತಿ ಹುಟ್ಟಿದ್ದೇ ಭದ್ರಾವತಿಯಲ್ಲಿ ಎನಿಸುತ್ತಿದೆ. ಇಲ್ಲಿನ ಕಲಾವಿದರಿಗೆ, ಮಹಾಜನತೆಗೆ ಧನ್ಯವಾದಗಳು ಎಂದರು. 
    ಹಿರಿಯ ಗಾಯಕ ಬಿ.ಲೋಕನಾಥ್‌ರವರಿಗೆ ದಿ. ಜಯಶೀಲನ್ ಪ್ರಶಸ್ತಿ ಹಾಗೂ ಹಿರಿಯ ಪತ್ರಕರ್ತ ಸುದರ್ಶನ್‌ರವರಿಗೆ ದಿ.ವೀರಯೋಧ ಮುರಳಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ವರ್ಷಾ, ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ರಾಜು, ಸಮಾಜ ಸೇವಕಿ ಡಾ. ನಾಗರತ್ನ, ಸ್ಟೆಲ್ಲಾ ಮಾರ್ಟಿನ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಪೇಕ್ಷ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.  
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದು ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ತಾಲ್ಲೂಕಿನ ವಿವಿಧ ಶಾಲೆಗಳ ೪೭ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ "ಕನ್ನಡ ಕುವರ - ಕನ್ನಡ ಕುವರಿ" ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. 
    ಅಪೇಕ್ಷ ನೃತ್ಯ ಕಲಾ ವೃಂದದ ಅಧ್ಯಕ್ಷೆ ಭಾರತಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಂಸ್ಥಾಪಕ ಶಿವಕುಮಾರ್, ಹೊಸ ಸಿದ್ದಾಪುರ ವೃದ್ಧಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಜೀಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ  ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಅಪೇಕ್ಷ ನೃತ್ಯ ಕಲಾ ವೃಂದ ಕಾರ್ಯದರ್ಶಿ ಡಾ. ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೀಲಪ್ಪ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಖ್ಯಾತ ಗಾಯಕ ಬಿ.ಎ ಮಂಜುನಾಥ್, ಗಾಯಕ ಮನೋಹರ್(ಮನು) ಮತ್ತು ಜ್ಯೂ. ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷ ನೃತ್ಯ ಕಲಾವೃಂದದವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ಕಲಾಭಿಮಾನಿಗಳ ಮನಸೂರೆಗೊಂಡಿತು. 

ಸಿಲಿಂಡರ್ ಸೋರಿಕೆಯಿಂದ ಗಾಯಗೊಂಡಿದ್ದ ಗೋಬಿ ಮಂಚೂರಿ ಅಂಗಡಿ ಮಾಲೀಕ ಕೇಶವಮೂರ್ತಿ ಮೃತ

ಕೇಶವಮೂರ್ತಿ 
    ಭದ್ರಾವತಿ: ಕಾಳಿಕಾಂಬ ದೇವಸ್ಥಾನ ರಸ್ತೆ ನಿವಾಸಿ ಹಾಗೂ ಹೊಸಮನೆ ಮೇಘನಾ ಗೋಬಿ ಮಂಚೂರಿ ಅಂಗಡಿ ಮಾಲೀಕ ಕೇಶವಮೂರ್ತಿ(೬೧) ಮಂಗಳವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. 
    ಶುಕ್ರವಾರ ಸಂಜೆ ಕೇಶವಮೂರ್ತಿ ಮನೆಯಲ್ಲಿ ಸಿಲಿಂಡರ್ ಸೋರಿಕೆಯಿಂದ ಗಂಭೀರವಾಗಿ ಗಾಯಗೊಂಡು ಶಿವಮೊಗ್ಗ ನಾರಾಯಣ ಹೃದಯಾಲಯ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮೆಡ್‌ಕೇರ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 
   ಪತ್ನಿ ಕನಕಲಕ್ಷ್ಮಿ, ಪುತ್ರ ಹಾಗು ಇಬ್ಬರು ಪುತ್ರಿಯರಿದ್ದಾರೆ.  ಅಂತ್ಯಕ್ರಿಯೆ ಬುಧವಾರ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕೇಶವಮೂರ್ತಿ ಅವರು ನಗರದ ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗು ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ದಾಸೋಹ ಅನ್ನ ಸಂತರ್ಪಣೆ ಸಮಿತಿ ಅಧ್ಯಕ್ಷರಾಗಿ ಮತ್ತು ತಾಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.  
   ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಬ್ರಾಹ್ಮಣ ಸಂಘ, ಶ್ರೀ ಕನ್ಯಕಾ ಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ, ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ,  ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ದಾಸೋಹ ಅನ್ನಸಂತರ್ಪಣೆ ಸಮಿತಿ, ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ದ ಅಡಳಿತ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ವಿಐಎಸ್‌ಎಲ್ ಕಾರ್ಖಾನೆ ಕುರಿತು ಚರ್ಚೆ : ಬಿ.ವಿ ಶ್ರೀನಿವಾಸ್ ಭರವಸೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮೂಲತಃ ನಗರದ ನಿವಾಸಿ ಬಿ.ವಿ ಶ್ರೀನಿವಾಸ್ ಭೇಟಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದರು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮೂಲತಃ ನಗರದ ನಿವಾಸಿ ಬಿ.ವಿ ಶ್ರೀನಿವಾಸ್ ಭೇಟಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದರು. 
    ಈ ಸಂದರ್ಭದಲ್ಲಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಹಾಗು ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಕಲ್ಪಿಸಿಕೊಡುವ ಮೂಲಕ ಅವರ ಹಿತರಕ್ಷಣೆ ಮಾಡುವಂತೆ ಸ್ಥಳಿಯರು ಮನವಿ ಮಾಡಿದರು. 
    ಶೀಘ್ರದಲ್ಲಿ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಈ ಸಂಬಂಧ ಚರ್ಚಿಸುವುದಾಗಿ ಬಿ.ವಿ ಶ್ರೀನಿವಾಸ್ ಭರವಸೆ ನೀಡಿದರು.
    ದೇವಸ್ಥಾನದ ಪ್ರಧಾನ ಅರ್ಚಕ ಮುರಳೀಧರ, ಮುಖಂಡರಾದ ರಾಮಕೃಷ್ಣ, ಕಾಶಿ, ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ರತ್ನಾಪುರ ಗ್ರಾಮದ ಮನೆಯೊಂದರ ಮುಂಭಾಗ ಮಾಟಮಂತ್ರ : ಸ್ಥಳೀಯರಲ್ಲಿ ಆತಂಕ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ಮನೆಯೊಂದರ ಮುಂಭಾಗ ಮಾಟಮಂತ್ರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 
    ಭದ್ರಾವತಿ: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ಮನೆಯೊಂದರ ಮುಂಭಾಗ ಮಾಟಮಂತ್ರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 
  ಡಿ.೧ರ ಅಮಾವಾಸ್ಯೆ ದಿನ ರಾತ್ರಿ ರತ್ನಾಪುರ ಗ್ರಾಮದ ಮಂಜ ಅಲಿಯಾಸ್ ಕುಳ್ಳಮಂಜ ಎಂಬುವರ ಮನೆಯ ಮುಂದೆ ಮಾಟಮಂತ್ರ ಮಾಡಲಾಗಿದ್ದು, ಯಾರು ಎಂಬುದು ತಿಳಿದಿಲ್ಲ. ಅದೇ ದಿನ ದೇವಸ್ಥಾನಕ್ಕೆಂದು ಹೊರ ಜಿಲ್ಲೆಗೆ ಹೋಗಿದ್ದ ಮಂಜ ಹಾಗೂ ಅವರ ಮನೆಯವರು ಮನೆಯಲ್ಲಿ ಇಬ್ಬರು ಮಕ್ಕಳು ಮಾತ್ರ ಇದ್ದು, ಮಧ್ಯರಾತ್ರಿ ಅವಘಡ ನಡೆದಿದೆ. ಸ್ಥಳದಲ್ಲಿ ಮೀನುಗಳು, ಮೊಟ್ಟೆಗಳು, ಮಣ್ಣಿನಿಂದ ಮಾಡಿದ ಗೊಂಬೆಗಳು, ತೆಂಗಿನಕಾಯಿ, ಬಾಳೆಹಣ್ಣು ಇನ್ನಿತರ ಪದಾರ್ಥಗಳು ಪತ್ತೆಯಾಗಿವೆ.
    ಬಾಳೆಹಣ್ಣಿನಲ್ಲಿ ವಿಕೃತವಾಗಿ ಬರೆದ ಹೆಸರುಗಳು ಹಾಗೂ ಅವರ ಕುಟುಂಬಗಳು ನಾಶವಾಗಲಿ ಎಂದು ಬರೆದಿರುತ್ತಾರೆ. ಇದರಿಂದ ಅವರ ಕುಟುಂಬ ಭಯಭೀತರಾಗಿದ್ದು, ಅಕ್ಕಪಕ್ಕದ ಮನೆಯವರು ಸಹಿತ ಭಯಭಿತರಾಗಿದ್ದಾರೆ.  ಪೊಲೀಸರು ರಾತ್ರಿ ವೇಳೆ ಗ್ರಾಮಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. 

ಅಮಲಾಮಾತಾ ಆಸ್ಪತ್ರೆಗೆ ಬೆಂಕಿ ನಂದಿಸುವ ಉಪಕರಣ ವಿತರಣೆ

ಎನ್‌ಎಸ್‌ಯುಐ ವತಿಯಿಂದ ಭದ್ರಾವತಿ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು. 
    ಭದ್ರಾವತಿ : ಎನ್‌ಎಸ್‌ಯುಐ ವತಿಯಿಂದ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು. 
    ಅಮಲಾಮಾತಾ ಆಸ್ಪತ್ರೆಗೆ ಪ್ರತಿದಿನ ರೋಗಿಗಳು ಹಾಗು ಅವರ ಕುಟುಂಬಸ್ಥರು ಸೇರಿದಂತೆ ಸಾವಿರಾರು ಮಂದಿ ಆಗಮಿಸುತ್ತಿದ್ದು, ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಹಾಗು ಸಿಬ್ಬಂದಿ ವರ್ಗದವರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಬೆಂಕಿ ನಂದಿಸುವ ಉಪಕರಣ ಇಲ್ಲದಿರುವುದನ್ನು ಮನಗಂಡು ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ವಿತರಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಲಾಯಿತು. 
    ಅಮಲಾಮಾತಾ ಆಸ್ಪತ್ರೆಯ ವ್ಯವಸ್ಥಾಪಕಿ ಡಾ. ಮೇರಿ ಹಾಗೂ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ವೀರೇಶ್, ಎನ್‌ಎಸ್‌ಯುಐ ಗೌರವ ಅಧ್ಯಕ್ಷ ಮುರುಗೇಶ್, ಉಪಾಧ್ಯಕ್ಷ ಗಂಗಾಧರ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Monday, December 2, 2024

ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ವರ್ಗಾವಣೆ : ಅಭಿನಂದನೆ

ಭದ್ರಾವತಿ ತಾಲೂಕು ದಂಡಾಧಿಕಾರಿಯಾಗಿ ಕಳೆದ ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದು, ಇವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಭಿನಂದಿಸಲಾಯಿತು. 
    ಭದ್ರಾವತಿ: ತಾಲೂಕು ದಂಡಾಧಿಕಾರಿಯಾಗಿ ಕಳೆದ ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದು, ಇವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಭಿನಂದಿಸಲಾಯಿತು. 
    ಕಳೆದ ಕೆಲವು ದಿನಗಳ ಹಿಂದೆ ಇವರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಈ ಹಿನ್ನಲೆಯಲ್ಲಿ ಇವರನ್ನು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ತಹಸೀಲ್ದಾರ್ ಕಛೇರಿಗೆ ತೆರಳಿ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಡಿಎಸ್‌ಎಸ್ ಮುಖಂಡ ಈಶ್ವರಪ್ಪ ಹಾಗು ಸಮಿತಿ ಪ್ರಮುಖರು ಉಪಸ್ಥಿತರಿದ್ದರು. 
    ತಾಲೂಕು ಕಛೇರಿಯಲ್ಲಿ ಗ್ರೇಡ್-೨ ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಗಮ್ಮ ಅವರಿಂದ ತೆರವಾದ ಹುದ್ದೆ ಕೆಲವು ತಿಂಗಳುಗಳಿಂದ ಖಾಲಿ ಇದ್ದು, ಈ ಹುದ್ದೆಗೆ ಇದೀಗ ಸರ್ಕಾರ ಹೊಸದಾಗಿ ಗ್ರೇಡ್-೨ ತಹಸೀಲ್ದಾರ್ ನೇಮಕಗೊಳಿಸಿ ಆದೇಶ ಹೊರಡಿಸಿದೆ. 

ವಿಐಎಸ್‌ಎಲ್ ನಿವೃತ್ತ ನೌಕರ ಮಹಾದೇವಪ್ಪ ನಿಧನ

ಮಹಾದೇವಪ್ಪ 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಮಹಾದೇವಪ್ಪ(೭೩) ನಿಧನ ಹೊಂದಿದರು. 
    ಪತ್ನಿ, ೩ ಗಂಡು, ೨ ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಸಂಸ್ಕಾರ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದಲ್ಲಿ ಸೋಮವಾರ ನೆರವೇರಿತು. ಮಹಾದೇವಪ್ಪರವರು ವಿಐಎಸ್‌ಎಲ್ ಕಾರ್ಖಾನೆ ಕ್ಯಾಂಟೀನ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ.