ಭಾನುವಾರ, ಮೇ 25, 2025

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಚುನಾವಣೆ : ಪುನಃ ಹಾಲಿ ಪದಾಧಿಕಾರಿಗಳು ಆಯ್ಕೆ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಪುನಃ ಹಾಲಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ ೩ ವರ್ಷಗಳ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪುನಃ ಬಹುತೇಕ ಹಾಲಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷರಾಗಿ ಮಂಜುನಾಥ್ ಮತ್ತು ಎನ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಹಾಗು ಸಹಕಾರ್ಯದರ್ಶಿಯಾಗಿ ಅಂತೋಣಿ ದಾಸ್, ಎಚ್.ಡಿ ತ್ಯಾಗರಾಜ್ ಮತ್ತು ಎನ್.ಬಿ ಮಂಜುನಾಥ್ ಹಾಗು ಖಜಾಂಚಿಯಾಗಿ ಆನಂದ ಆಯ್ಕೆಯಾಗಿದ್ದಾರೆ. 
      ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಿತು. ನಂತರ ಮತದಾನ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಂಡಿತು.  . ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. 

ವಿಜೃಂಭಣೆಯಿಂದ ಜರುಗಿದ ಶ್ರೀ ಕರುಮಾರಿಯಮ್ಮ ದೇವಿಯ ೪೫ನೇ ವರ್ಷದ ಕರಗ ಉತ್ಸವ

ಭದ್ರಾವತಿ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಕರಗ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ನಗರದ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೫ನೇ ವರ್ಷದ ಕರಗ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ಅಮ್ಮನವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. ಮಧ್ಯಾಹ್ನ ಬುಳ್ಳಾಪುರ ಚಾನಲ್ ಬಳಿ ಅಮ್ಮನವರಿಗೆ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. 
    ಭಕ್ತರಿಂದ ಅಂಬಲಿ ಸಮರ್ಪಣೆಯೊಂದಿಗೆ ಅನ್ನದಾನ ನೆರವೇರಿತು. ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಕಾಂತರಾಜ್, ಗುತ್ತಿಗೆದಾರ ಎಂ.ಜಿ ರಾಮಚಂದ್ರ ಸೇರಿದಂತೆ ಇನ್ನಿತರರು ಭಕ್ತರಿಗೆ ಅಂಬಲಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಸಂಜೆ ದೇವಿಗೆ ಅರಿಶಿನ ಅಭಿಷೇಕ ಮತ್ತು ಮಹಾ ಮಂಗಳಾರತಿಯೊಂದಿಗೆ ಕರಗ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು. 
ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಕಾಂತರಾಜ್, ಗುತ್ತಿಗೆದಾರ ಎಂ.ಜಿ ರಾಮಚಂದ್ರ ಸೇರಿದಂತೆ ಇನ್ನಿತರರು ಭಕ್ತರಿಗೆ ಅಂಬಲಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. 
    ಪ್ರತಿವರ್ಷದಂತೆ ಈ ಬಾರಿ ಸಹ ವಿಜಯ್ ಕುಮಾರ್-ಮಮತಾಶ್ರೀ ದಂಪತಿ ಕರಗ ಅಲಂಕಾರದ ಸೇವಾಕರ್ತರಾಗಿ ಅಮ್ಮನವರಿಗೆ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದು ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕಾಶಿಪತಿ ಅವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು.  
    ದೇವಸ್ಥಾನ ಸಮಿತಿ ಪ್ರಮುಖರಾದ ಅಧ್ಯಕ್ಷ ಬಿ. ಕುಪ್ಪಸ್ವಾಮಿ, ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಕಾಳಿಯಪ್ಪ, ಖಜಾಂಚಿ ಡಿ. ಶಬರಿವಾಸನ್, ನಿರ್ದೇಶಕರಾದ ದೊರೆಸ್ವಾಮಿ, ಧರ್ಮಪ್ಪ, ಮುರುಗನ್, ಕುಪ್ಪರಾಜ್, ಪಳನಿಸ್ವಾಮಿ, ಕೆ. ರವಿ, ಶ್ರೀನಿವಾಸ್, ಜೆ. ಬಾಲು, ವಿಕ್ರಂ, ರಮೇಶ್, ಧನಶೇಖರ್ ಮತ್ತು ಎ. ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಜನ್ನಾಪುರ, ನ್ಯೂಟೌನ್, ವಿದ್ಯಾಮಂದಿರ, ಗಣೇಶ್ ಕಾಲೋನಿ, ಹುಡ್ಕೋಕಾಲೋನಿ, ಆಂಜನೇಯ ಅಗ್ರಹಾರ, ಸುರಗಿತೋಪು, ಬಾಲಭಾರತಿ, ಜೆಪಿಎಸ್ ಕಾಲೋನಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. 

ಸದಾ ಉದ್ವಿಗ್ನತೆಯಲ್ಲಿರುವ ಪೊಲೀಸರಿಗೆ ಧ್ಯಾನ ಸಹಕಾರಿ : ಕೃಷ್ಣಕುಮಾರ್ ಮಾನೆ

ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಕಾರ್ಯಕ್ರಮ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಪೊಲೀಸ್ ತರಬೇತಿಯಲ್ಲಿ ಧ್ಯಾನ ಸಹ  ಒಂದು ಕಲಿಕೆಯ ವಿಭಾಗವಾಗಿರುತ್ತದೆ ಎಂದು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಹೇಳಿದರು.
  ಅವರು  ಭಾನುವಾರ ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಿತ್ರ ಲೈಟ್ ಫೌಂಡೇಷನ್ ಜೊತೆ ಐಕ್ಯತೆಯಲ್ಲಿ `ಬೃಹತ್ ಸಸ್ಯಹಾರ ಜನಜಾಗೃತಿ ಜಾಥಾ' ಉದ್ಘಾಟಿಸಿ ಮಾತನಾಡಿದರು. 
    ಪ್ರಸ್ತುತ ಧ್ಯಾನದ ಮಹತ್ವ ಪೊಲೀಸ್ ಇಲಾಖೆಗೆ ಸದಾ ಅತ್ಯವಶ್ಯಕವಾಗಿದ್ದು, ಸದಾ ಉದ್ವಿಗ್ನತೆಯಲ್ಲಿರುವ ಪೊಲೀಸರಿಗೆ ಧ್ಯಾನ ಸಹಕಾರಿಯಾಗಿದೆ. ದೇಹವನ್ನು ಮನಸ್ಸು ಒಂದುಗೂಡಿಸುವುದು ಧ್ಯಾನ. ಹಣವೆಂಬುದು ಸಂಬಂಧಕ್ಕೆ ಬೆಲೆ ಕಡಿಮೆ ಮಾಡುತ್ತದೆ. ಇದನ್ನು ಕಡಿವಾಣ ಹಾಕಲು ಧ್ಯಾನ ಅವಶ್ಯಕ ಎಂದರು.
    ಪ್ರಸ್ತುತ ಮೊಬೈಲ್ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚಳವಾಗುತ್ತಿವೆ. ಇದರಿಂದಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಮೊಬೈಲ್‌ಗಳಲ್ಲಿ ಕಾಲಹರಣ ಮಾಡುವವರು ಧ್ಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಯ ಮೀಸಲಿಡಬೇಕು. ಮಾಂಸಹಾರ ಸೇವನೆಯಿಂದ ದೂರವಿದ್ದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಉತ್ತಮ ಆರೋಗ್ಯದೊಂದಿಗೆ ಬದಕಲು ಸಾಧ್ಯ ಎಂದರು. 
    ವಿಶ್ವ ಮಿತ್ರ ಲೈಟ್ ಫೌಂಡೇಷನ್ ದಾವಣಗೆರೆ ಹಿರಿಯ ಮಾರ್ಗದರ್ಶಕ ಮಾರುತಿ ರಾವ್ ಮಾತನಾಡಿ, ಧ್ಯಾನವು ಋಷಿಗಳಿಂದ ಪ್ರಾರಂಭವಾಗಿದೆ. ಪ್ರಸ್ತುತ ಜಟಿಲತೆಯಿಂದ ಬಳಲುವ ಮನಸ್ಸಿಗೆ ಭೇದಭಾವವಿಲ್ಲದ ಧ್ಯಾನವೊಂದೇ ಮಾರ್ಗವಾಗಿದ್ದು, ಋಷಿ ಮುನಿಗಳು ಧ್ಯಾನದ ಮೂಲಕ ತಪಸ್ಸನ್ನು ಮಾಡಿ ಪ್ರಪಂಚಕ್ಕೆ ಒಳಿತನ್ನು ತಂದು ಕೊಟ್ಟವರು ಅದನ್ನು ಉಳಿಸಿಕೊಳ್ಳಲು ನಾವಿಂದು ಧ್ಯಾನ ಮಾಡುವುದು ಆತ್ಯವಶ್ಯಕ ಎಂದರು. 
    ಧ್ಯಾನಕ್ಕೆ ವಯಸ್ಸಿನ ಅಂತರವಿಲ್ಲ, ಯಾವುದೇ ಸ್ಥಳದಲ್ಲಾದರೂ ಧ್ಯಾನ ಮಾಡಬಹುದು. ಧ್ಯಾನ ಯಾವುದೇ ಧರ್ಮ ಅಥವಾ ಆಚರಣೆ ಅಲ್ಲ. ಶ್ವಾಸದ ಮೇಲೆ ಸಂಪೂರ್ಣ ಗಮನ ನೀಡುವ ಮೂಲಕ ನಾವು ಆತ್ಮಜ್ಞಾನ ಹೊಂದಬಹುದು. ಇದು ಈ ಜನ್ಮದ ಪರಮ ಉದ್ದೇಶ ಎಂದರು.  
    ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಧ್ಯಾನ ಮರೆತರೆ ನಮ್ಮನ್ನು ನಾವು ಕಳೆದುಕೊಂಡಂತೆ. ಇದರಿಂದಾಗಿ ಪರಿಸರ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಮೈ ಮನಸ್ಸುಗಳಿಗೆ ಧ್ಯಾನವೇ ಉತ್ತಮವಾದ ಆರೋಗ್ಯಕರವಾದ ಔಷಧಿ. ಧ್ಯಾನಕ್ಕೆ ಬರುವಾಗ ತಮ್ಮ ಅಕ್ಕಪಕ್ಕದವರನ್ನು, ಸ್ನೇಹಿತರನ್ನು, ಬಂಧುಗಳನ್ನು ಕರೆತಂದು ಧ್ಯಾನದಲ್ಲಿ ಪಾಲ್ಗೊಳ್ಳಿ ಎಂದರು. 
      ಆರ್ಯವೈಶ್ಯ ಸಮಾಜದ ಅಧ್ಯಕ್ಷ ನಾಗೇಶ್ ಉಪಸ್ಥಿತರಿದ್ದರು. ವಿಸ್ಮಯ ಪ್ರಾರ್ಥಿಸಿ, ಸೌಮ್ಯ ಸ್ವಾಗತಿಸಿದರು. ಶುಭ ಗಿರಿರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮೇಘ ಗೌಡ ಮಾತನಾಡಿ, ಧ್ಯಾನ ಕುರಿತು ಅಂತರ್ಜಾಲದ ಮೂಲಕ ಮಾಹಿತಿ ನೀಡಲಾಗುತ್ತಿದ್ದು,  ಸೇರಲು ಇಚ್ಚಿಸುವರು ಮೊಬೈಲ್ ೮೯೭೧೩೩೫೯೫೫ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದರು. 
    ಜಾಥಾ ಶಿವಾಜಿ ಸರ್ಕಲ್ ಮಾರ್ಗವಾಗಿ, ಮಾರಿಯಮ್ಮ ದೇವಸ್ಥಾನ ಮತ್ತು ಸಂತೆ ಮೈದಾನ ಮೂಲಕ ರಂಗಪ್ಪ ವೃತ್ತದವರೆಗೂ ನಡೆಯಿತು. 

ಶನಿವಾರ, ಮೇ 24, 2025

ಅಪಘಾತ : ವ್ಯಕ್ತಿ ಸಾವು

ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿ 
    ಭದ್ರಾವತಿ : ನಗರದ ಜೇಡಿಕಟ್ಟೆ ಬಳಿ ಶುಕ್ರವಾರ ಮಧ್ಯ ರಾತ್ರಿ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
    ಸುಮಾರು ೫೦ ರಿಂದ ೬೦ ವರ್ಷ ವಯಸ್ಸಿನ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಅಪಘಾತ ಮಾಡಿ ಹೋಗಿರುವ ವಾಹನದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಮೃತಪಟ್ಟಿರುವ ವ್ಯಕ್ತಿ ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ವಾಸಿ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ಸಂಚಾರಿ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ. 

ಮೇ.೨೫ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಚುನಾವಣೆ

ಭದ್ರಾವತಿ:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ ೩ ವರ್ಷಗಳ ಅವಧಿಗೆ ಮೇ.೨೫ರ ಭಾನುವಾರ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಲಿದೆ. 
ಸುಮಾರು ೩೦ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ, ಗುತ್ತಿಗೆ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಖಾನೆ ಮುಂಭಾಗದಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು ಇದೀಗ ತಮ್ಮ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. 
    ಒಟ್ಟು ಕಾರ್ಖಾನೆಯಲ್ಲಿ ೧೩೦೦ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದು, ಈ ಪೈಕಿ ಸಂಘದಲ್ಲಿ ೧೦೪೪ ಮಂದಿ ಸದಸ್ಯರಿದ್ದಾರೆ. ಉಳಿದಂತೆ ಗುತ್ತಿಗೆ ಕಾರ್ಮಿಕರು ಎಐಟಿಯುಸಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ ೩ ವರ್ಷಗಳ ಅಧಿಕಾರಾವಧಿಯಲ್ಲಿ ಬಹುತೇಕ ಅವಧಿ ಹೋರಾಟದಲ್ಲಿಯೇ ಕಳೆದಿದ್ದಾರೆ. ಆದರೆ ಕಾರ್ಖಾನೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳಿಂದ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ ಹೊರತು ಯಾವುದೇ ಭರವಸೆ ಇದುವರೆಗೂ ಈಡೇರಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪುನಃ ಹೊಸ ನಾಯಕರ ಆಯ್ಕೆಯಲ್ಲಿ ಗುತ್ತಿಗೆ ಕಾರ್ಮಿಕರು ತೊಡಗಿಸಿಕೊಂಡಿರುವುದು ಕ್ಷೇತ್ರದಲ್ಲಿ ಇದೀಗ ಗಮನ ಸೆಳೆಯುತ್ತಿದೆ. 
ಈ ನಡುವೆ ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಶುಕ್ರವಾರ ಕಾರ್ಖಾನೆಯನ್ನು ಮರುನಿರ್ಮಾಣಗೊಳಿಸುವ ಕುರಿತು ಹೇಳಿಕೆ ನೀಡಿರುವುದು ಗುತ್ತಿಗೆ ಕಾರ್ಮಿಕರಲ್ಲೂ ಹೊಸ ಸಂಚಲನ ಮೂಡಿಸಿದೆ. ನೂತನ ನಾಯಕರ ಆಯ್ಕೆ ನಂತರ ಹೋರಾಟ ಮುಂದುವರೆಯುವುದೇ ಅಥವಾ ಸ್ಥಗಿತಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. 
     ಮೇ.೨೫ರಂದು ಮತದಾನ ನಂತರ  ಮತ ಎಣಿಕೆ ನಡೆಯಲಿದೆ. ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಕಾಮಗಾರಿ ವೇಳೆ ನಿರ್ಲಕ್ಷ್ಯತನ : ಕುಸಿದು ಬಿದ್ದ ಗೋಡೆ

ಜೆಸಿಬಿಯಿಂದ ಪಾಯ ತೆಗೆಯುವಾಗ ದುರ್ಘಟನೆ : ಲಕ್ಷಾಂತರ ರು. ನಷ್ಟ


    ಭದ್ರಾವತಿ: ಪಕ್ಕದ ಮನೆಯವರು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿಯಿಂದ ಪಾಯ ತೆಗೆದ ಕಾರಣ ನಮ್ಮ ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ನಾವುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅಲ್ಲದೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಹಳೇನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. 
    ಭೂತನಗುಡಿ ೨ನೇ ತಿರುವಿನ ನಿವಾಸಿ ಜಿ.ಎನ್ ನಾಗರಾಜರಾವ್ ಎಂಬುವರು ನೀಡಿದ್ದು, ಮಳೆಯಿಂದಾಗಿ ಗೋಡೆ ಕುಸಿದಿಲ್ಲ ಬದಲಾಗಿ ನಮ್ಮ ಮನೆಯ ಪಕ್ಕದ ರಂಗನಾಥ ಎಂಬುವರು ತಮ್ಮ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ನಮ್ಮಿಬ್ಬರ ಮನೆಗಳ ನಡುವೆ ಜಾಯಿಂಟ್ ಗೋಡೆ ಇದ್ದು,  ರಂಗನಾಥರವರು ತಮ್ಮ ಮನೆಯನ್ನು ನೆಲಸಮ ಮಾಡಿ ಜೆಸಿಬಿ ಮೂಲಕ ಪಾಯ ತೆಗೆಸಿದಾಗ ನಮ್ಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಈ ಸಂಬಂಧ ದೂರು ಕೊಡಲು ಮುಂದಾದ ಸಂದರ್ಭದಲ್ಲಿ ಕೆಲವರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿ ಉಂಟಾಗಿರುವ ನಷ್ಟ ತುಂಬಿ ಕೊಡುವ ಭರವಸೆ ನೀಡಿದ್ದರು.
    ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆ ಶೀತಗೊಂಡು ಕಳೆದ ತಿಂಗಳು ಏ. ೨೭ ರಂದು ರಾತ್ರಿ ಕುಟುಂಬ ಸದಸ್ಯರು ಊಟ ಮಾಡುವಾಗ ಗೋಡೆ ಕುಸಿದು ಬಿದ್ದಿದೆ.  ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ.  ಗೋಡೆ ಕುಸಿದು ಬಿದ್ದ ಕಾರಣ ಮನೆಯಲ್ಲಿದ್ದ ಅನೇಕ ವಸ್ತುಗಳು ಹಾಳಾಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ದುರ್ಘಟನೆ ನಡೆದರೂ ಸಹ ಪಕ್ಕದ ಮನೆಯ ರಂಗನಾಥ ಆಗಲಿ ಅಥವಾ ಈ ಹಿಂದೆ ಪರಿಹಾರ ಕೊಡಿಸುವುದಾಗಿ ಹೇಳಿದವರಾಗಲಿ ಯಾರು ಸಹ ಏನಾಗಿದೆ ಎಂದು ಬಂದು ನೋಡಿಲ್ಲ. ಮಾನವೀಯತೆ ತೋರದೆ ದುರ್ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮನನೊಂದು ಪೊಲೀಸ್ ಠಾಣೆಗೆ ಪರಿಹಾರಕ್ಕಾಗಿ ದೂರು ನೀಡಲಾಗಿ ಪ್ರಕರಣ ದಾಖಲಾಗಿದೆ. 

ಶುಕ್ರವಾರ, ಮೇ 23, 2025

ಮೇ. ೨೫ರಂದು ಶ್ರೀ ಕರುಮಾರಿಯಮ್ಮ ದೇವಿಯ ೪೫ನೇ ವರ್ಷದ ಕರಗ ಉತ್ಸವ

ಭದ್ರಾವತಿ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನ
    ಭದ್ರಾವತಿ : ನಗರದ ನ್ಯೂಟೌನ್, ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೫ನೇ ವರ್ಷದ ಕರಗ ಮಹೋತ್ಸವ ಶುಕ್ರವಾರದಿಂದ ಆರಂಭಗೊಂಡಿದ್ದು, ಮೇ.೨೫ರ ಭಾನುವಾರ ಕರಗ ಉತ್ಸವ ನಡೆಯಲಿದೆ. 
    ಮೇ.೨೪ರ ಬೆಳಿಗ್ಗೆ ೧೦ ಗಂಟೆಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ ೬ ಗಂಟೆಗೆ ಉಮಾ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿಗೀತೆಗಳು ನಡೆಯಲಿವೆ. ಮೇ.೨೫ರ ಭಾನುವಾರ ೯ ಗಂಟೆಗೆ ಅಮ್ಮನವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ೧೨ ಗಂಟೆಗೆ ಶ್ರೀ ದೇವಿಗೆ ಬುಳ್ಳಾಪುರ ಚಾನೆಲ್ ಬಳಿ ಶಕ್ತಿ ಕರಗ ಸ್ಥಾಪನೆ ಮಾಡಿ ಮೆರವಣಿಗೆಯ ಮೂಲಕ ದೇವಸ್ಥಾನ ತಂದು ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ. 
    ನಂತರ ದೇವಿಗೆ ಅಂಬಲಿ ಮತ್ತು ಅನ್ನದಾನ ಸಮರ್ಪಣೆ ನಡೆಯಲಿದ್ದು, ಸಂಜೆ ದೇವಿಗೆ ಅರಿಶಿನ ಅಭಿಷೇಕ ಮತ್ತು ಮಹಾ ಮಂಗಳಾರತಿಯೊಂದಿಗೆ ಕರಗ ಭದ್ರಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ. 
    ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸದಸ್ಯರಾದ ಬಿ.ಕೆ ಮೋಹನ್, ಸರ್ವಮಂಗಳ ಭೈರಪ್ಪ, ಕಾಂತರಾಜ್, ನಾಗರತ್ನ ಅನಿಲ್‌ಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ನಗರಸಭೆ ಮಾಜಿ ಸದಸ್ಯರಾದ ಎಂ.ಎ ಅಜಿತ್, ಎಂ. ರಾಜು, ಆಂಜನಪ್ಪ, ಲಲಿತಮ್ಮ ಕೃಷ್ಣಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಉದ್ಯಮಿ ಎ. ಮಾಧು, ಎಂ. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕರಗ ಮಹೋತ್ಸವ ಯಶಸ್ವಿಗೊಳಿಸುವಂತೆ ದೇವಸ್ಥಾನ ಸೇವಾ ಸಮಿತಿ ಕೋರಿದೆ.