
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಕರೆಯ ಮೇರೆಗೆ ಭದ್ರಾವತಿ ತಹಸೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ದಲಿತರ ಭೂಮಿಯ ಹಕ್ಕಿಗಾಗಿ ಪ್ರತಿಭಟನಾ ಧರಣಿ'ಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ತಾಲೂಕಿನಲ್ಲಿ ಪರಿಶಿಷ್ಟ ಜಾತಿ/ವರ್ಗದ ಸೂರಿಲ್ಲದ ಜನರಿಗೆ ಸೂರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಹಾಲಿ ವಾಸಿಸುವ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಖಾತೆ ಮಾಡಿಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ತಾಲೂಕು ಪ್ರಧಾನ ಸಂಚಾಲಕ ಬಿ.ಎಸ್ ಪುಟ್ಟರಾಜು ಆಗ್ರಹಿಸಿದರು.
ಅವರು ರಾಜ್ಯ ಸಮಿತಿ ಕರೆಯ ಮೇರೆಗೆ ತಹಸೀಲ್ದಾರ್ ಕಚೇರಿ ಮುಂಭಾಗ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ `ದಲಿತರ ಭೂಮಿಯ ಹಕ್ಕಿಗಾಗಿ ಪ್ರತಿಭಟನಾ ಧರಣಿ' ನೇತೃತ್ವವಹಿಸಿ ಮಾತನಾಡಿ, ಪರಿಶಿಷ್ಟರ ಪಿ.ಟಿ.ಸಿ.ಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಉಚ್ಛ ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎಲ್ ಪ್ರಕರಣಗಳು ವಜಾಗೊಳ್ಳುತಿದ್ದು, ಈ ಹಿನ್ನಲೆಯಲ್ಲಿ ನುರಿತ ಹಿರಿಯ ವಕೀಲರನ್ನು ನೇಮಿಸಿ ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ/ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ (ದರ ಖಾಸ್ತು ಮಂಜೂರಾತಿ ಸಕ್ರಮೀಕರಣ) ಇತ್ಯರ್ಥಗೊಳಿಸಬೇಕು. ವಿನಾಕಾರಣ ವಜಾಗೊಳಿಸಿರುವ ಬಗರ್ಹುಕುಂ ಸಾಗುವಳಿಯ ಅರ್ಜಿಗಳನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಕಸಬಾ ಹೋಬಳಿ ಸರ್ವೆ ನಂಬರ್ ೧೩೯ ಖಾತೆದಾರರಾದ ಕಮಲಮ್ಮ ಕೋಂ ಬಿ.ಆರ್ ಕೃಷ್ಣಮೂರ್ತಿ ಇವರ ಪೌತಿ ನಂತರ ಜಂಟಿ ಖಾತೆ ೨ ಎಕರೆ ೨೬ ಗುಂಟೆ ಜಮೀನಿದ್ದು, ಈ ಜಮೀನಿನ ಮೇಲ್ಬಾಗದಲ್ಲಿ ಲಗತ್ತಾಗಿ ೦-೧೬ ಗುಂಟೆ ಖರಾಬು ಜಮೀನಿದೆ. ಇಲ್ಲಿ ಸುಮಾರು ೫೦ ವರ್ಷಗಳಿಂದಲೂ ಗುಡಿಸಲು ಕಟ್ಟಿಕೊಂಡು ಸಾಗುವಳಿ ಮಾಡುತ್ತಾ ಸ್ವಾಧೀನಾನುಭವದಲ್ಲಿರುತ್ತಾರೆ. ಈ ಹಿನ್ನಲೆಯಲ್ಲಿ ೦-೧೬ ಗುಂಟೆ ಜಮೀನು ಇವರ ಹೆಸರಿಗೆ ಮಂಜೂರು ಮಾಡಬೇಕು. ಅರಣ್ಯ ಭೂಮಿಯಲ್ಲಿ ೧೯೭೮ಕ್ಕಿಂತ ಹಿಂದಿನಿಂದ ಸಾಗುವಳಿ ನೀಡಿರುವ ಭೂಮಿಗೆ ಈಗ ಅರಣ್ಯ ಭೂಮಿ ಎಂದು ನೋಟಿಸ್ ನೀಡಿ ಖಾತೆ ವಜಾ ಮಾಡಲು ಹುನ್ನಾರ ನಡೆಸಲಾಗುತ್ತಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಖಾತೆ ವಜಾ ಮಾಡಬಾರದು. ಸಾಗುವಳಿದಾರರಿಗೆ ತೊಂದರೆಯಾಗದಂತೆ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು. ಭೂಹೀನ ದಲಿತರಿಗೆ ಮಂಜೂರಾದ ಭೂಮಿಯನ್ನು ಎಂಪಿಎಂ ಕಾರ್ಖಾನೆಯವರು ಅತಿಕ್ರಮಿಸಿ ದಲಿತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿರುವುದನ್ನು ಸರ್ಕಾರ ಕೂಡಲೇ ಹಿಂಪಡೆದು ಭೂಮಿಯನ್ನು ಮಂಜೂರುದಾರರಿಗೆ ಬಿಡಿಸಿ ಕೊಡಬೇಕೆಂದು ಆಗ್ರಹಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದ ಆದೇಶದನ್ವಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೇಮಕಾತಿಯಲ್ಲಿ ರೋಸ್ಟರ್ ಪದ್ಧತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಹೋರಾಟ ಬೆಂಬಲಿಸಿ ಮಾತನಾಡಿದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಶಾಸಕರು, ತಹಸೀಲ್ದಾರ್ ಹಾಗೂ ಮುಖಂಡರುಗಳೊಂದಿಗೆ ಚರ್ಚಿಸಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಕೈಗೊಳ್ಳುವುದಾಗಿ ಭರವಸೆನೀಡಿದರು.
ತಾಲೂಕು ಸಮಿತಿ ವತಿಯಿಂದ ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಧರಣಿಯಲ್ಲಿ ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಜಿಲ್ಲಾ ಕೆಡಿಪಿ ಸದಸ್ಯ ಚಿರಾಗ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಗೋವಿಂದರಾಜ್, ಕೂಡ್ಲಿಗೆರೆ ಚಂದ್ರಪ್ಪ, ಹಿರಿಯೂರು ಎಚ್.ಎಲ್ ಅಣ್ಣಪ್ಪ, ಸಿಂಗನಮನೆ ಗಿರೀಶ್ ಮಾಳೇನಹಳ್ಳಿ, ತಾಲೂಕು ಸಂಘಟನಾ ಸಂಚಾಲಕ ರಾದ ಪ್ರಭಾಕರ್ ಹೆಬ್ಬಂಡಿ, ಮಹೇಶ್ಕುಮಾರ್ ಅತ್ತಿಗುಂದ, ರಾಮಯ್ಯ ಶಾಂತಿನಗರ, ಗೌರವ ಸಲಹೆಗಾರ ಗಾಂಧಿನಗರ ಪ್ರಭಾಕರ್ ಸೇರಿದಂತೆ ಗಿರೀಶ್ ಶಾಂತಿನಗರ, ವೀಣಾ, ಕಾವ್ಯ, ಅನ್ನಪೂರ್ಣ, ಲಕ್ಷ್ಮಮ್ಮ, ಮಹೇಶ್, ವಿಜಯ್, ಅಭಿ ಮುಂತಾದವರು ಪಾಲ್ಗೊಂಡಿದ್ದರು.