ಶುಕ್ರವಾರ, ಸೆಪ್ಟೆಂಬರ್ 19, 2025

ಶಾಲಾ ಮಕ್ಕಳಿಗೆ ಉಚಿತ ಪರೀಕ್ಷಾ ಸಾಮಗ್ರಿ ವಿತರಣೆ

ಭದ್ರಾವತಿ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹುಡ್ಕೋ ಕಾಲೋನಿ ಪುಟ್ಟು ಮತ್ತು ಸ್ನೇಹಿತರು ನಗರಸಭೆ ವ್ಯಾಪ್ತಿಯ ಹೊಸಬುಳ್ಳಾಪುರ ಸರ್ಕಾರಿ ಶಾಲಾ ಮಕ್ಕಳಿಗೆ ಪರೀಕ್ಷೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. 
    ಭದ್ರಾವತಿ: ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹುಡ್ಕೋ ಕಾಲೋನಿ ಪುಟ್ಟು ಮತ್ತು ಸ್ನೇಹಿತರು ನಗರಸಭೆ ವ್ಯಾಪ್ತಿಯ ಹೊಸಬುಳ್ಳಾಪುರ ಸರ್ಕಾರಿ ಶಾಲಾ ಮಕ್ಕಳಿಗೆ ಪರೀಕ್ಷೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. 
    ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಹುಟ್ಟುಹಬ್ಬ ಹಾಗು ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ವೆಂಕಟೇಶ್‌ರವರ ತಂದೆ-ತಾಯಿಯವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಮಗ್ರಿಗಳನ್ನು ವಿತರಿಸಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಯಿತು. 
    ಡಿಎಸ್‌ಎಸ್ ಮುಖಂಡ ಪರಮೇಶ್, ನಗರಸಭೆ ಸೂಪರ್‌ವೈಸರ್ ನರಸಿಂಹ, ಸುಬ್ರಮಣಿ, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕರ್ನಾಟಕರತ್ನ, ಸಾಹಸಸಿಂಹ ಡಾ. ವಿಷ್ಣುವರ್ಧನ್ ೭೫ನೇ ಜನ್ಮದಿನ ಆಚರಣೆ

ವಾಹನ ಚಾಲಕರು, ಮಾಲೀಕರು, ಅಭಿಮಾನಿಗಳಿಂದ ರಕ್ತದಾನ 


ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪದ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ವಿಷ್ಣುಸೇನಾ  ಸಮಿತಿಯಿಂದ ಕರ್ನಾಟಕ ರತ್ನ, ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ೭೫ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪದ ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ವಿಷ್ಣುಸೇನಾ  ಸಮಿತಿಯಿಂದ ಕರ್ನಾಟಕ ರತ್ನ, ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ೭೫ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
    ನಗರದ ಹಾಲಪ್ಪ ವೃತ್ತ, ಜೀವ ಸಂಜೀವಿನಿ ರಕ್ತ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ ವಾಹನ ಚಾಲಕರು, ಮಾಲೀಕರು ಹಾಗು ವಿಷ್ಣುವರ್ಧನ್ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಜನ್ಮದಿನ ಕಾರ್ಯಕ್ರಮದಲ್ಲಿ ಗಮನ ಸೆಳೆದರು. 
    ಕುವೆಂಪು ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ವಿಷ್ಣುಸೇನಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಜೀವ ಸಂಜೀವಿನಿ ರಕ್ತ ಕೇಂದ್ರದ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸೆ.೨೦ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ೨೨೦ ಕೆ.ವಿ ಎಂ.ಆರ್.ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಸೀಗೆಬಾಗಿ ಹಾಗು ಕೂಡ್ಲಿಗೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಸೆ.೨೦ರ ಶನಿವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೪.೩೦ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಹಳೇನಗರ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ ಏರಿಯಾ, ಕಂಚಿನಬಾಗಿಲು, ಶ್ರೀ ಹಳದಮ್ಮ ದೇವಿ ದೇವಸ್ಥಾನ ಬೀದಿ ಖಾಜಿ ಮೊಹಲ್ಲಾ, ಭೂತನಗುಡಿ, ಹೊಸಮನೆ, ಎನ್.ಎಂ.ಸಿ ರಸ್ತೆ, ಭೋವಿ ಕಾಲೊನಿ, ಸಂತೆ ಮೈದಾನ, ಕೇಶವಪುರ, ಬಾಬಳ್ಳಿ ರಸ್‌ತೆ, ಸತ್ಯಸಾಯಿ ನಗರ, ಶಿವಾಜಿ ವೃತ್ತ, ಹನಮಂತ ನಗರ, ತಮ್ಮಣ್ಣ ಕಾಲೋನಿ, ಸುಭಾಷ್ ನಗರ, ವಿಜಯನಗರ, ಕುವೆಂಪುನಗರ, ನೃಪತುಂಗ ನಗರ, ಸೈಯ್ಯದ್ ಕಾಲೋನಿ, ಸೀಗೇಬಾಗಿ, ಹಳೇ ಸೀಗೇಬಾಗಿ, ಅಶ್ವತ್ಥನಗರ, ಕಬಳಿಕಟ್ಟೆ, ಭದ್ರಾಕಾಲೋನಿ, ಕಣಕಟ್ಟೆ, ಚನ್ನಗಿರಿ ರಸ್ತೆ, ಗೌರಾಪುರ, ಕೃ.ಉ.ಮಾ.ಸ(ಎಪಿಎಂಸಿ), ಗಾಂಧಿವೃತ್ತ, ಕೋಡಿಹಳ್ಳಿ, ಹೊಸಸೇತುವೆ ರಸ್ತೆ, ಸಿದ್ದಾರೂಢನಗರ, ಶಂಕರಮಠ, ಕನಕನಗರ, ಸ್ಮಶಾನ ಪ್ರದೇಶ, ಕ.ರಾ.ರ.ಸಾ.ನಿ ಘಟಕ, ಹೊಳೆಹೊನ್ನೂರು ರಸ್ತೆ, ಖಲಂದರ್ ನಗರ, ಜಟ್‌ಪಟ್‌ನಗರ, ಅನ್ವರ್ ಕಾಲೋನಿ, ಮೊಮಿನ್ ಮೊಹಲ್ಲಾ, ಅಮೀರ್‌ಜಾನ್ ಕಾಲೋನಿ, ಅರಳಿಹಳ್ಳಿ, ಬದನೆಹಾಳು, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಳ್ಳಿ, ಕಲ್ಪನಹಳ್ಳಿ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಬಾಬಳ್ಳಿ, ವೀರಾಪುರ, ಶ್ರೀರಾಮನಗರ, ಕಲ್ಲಾಪುರ, ದಾನವಾಡಿ, ಡಿ.ಬಿ ಹಳ್ಳಿ, ಅರಕೆರೆ, ಮಾರಶೆಟ್ಟಿಹಳ್ಳಿ ಕಲ್ಲಿಹಾಳ್, ಅರಬಿಳಚಿ, ತಿಮ್ಲಾಪುರ, ಅತ್ತಿಗುಂದ, ಗುಡ್ಡದನೇರಳೆಕೆರೆ, ದೇವರಹಳ್ಳಿ, ಕೊಮಾರನಹಳ್ಳಿ, ಬಸಲಿಕಟ್ಟೆ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 


ಗುರುವಾರ, ಸೆಪ್ಟೆಂಬರ್ 18, 2025

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮಾನವ ಸರಪಳಿ

ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ

ಸಾಗರ ಗಡಿಭಾಗದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಗುರುವಾರ ಭದ್ರಾವತಿ ನಗರದಲ್ಲಿ ಪರಿಸರ ಪ್ರೇಮಿಗಳಿಂದ ಮಾನವ ಸರಪಳಿ ನಿರ್ಮಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 

 ಭದ್ರಾವತಿ: ಸಾಗರ ಗಡಿಭಾಗದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಗುರುವಾರ ನಗರದಲ್ಲಿ ಪರಿಸರ ಪ್ರೇಮಿಗಳಿಂದ ಮಾನವ ಸರಪಳಿ ನಿರ್ಮಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 
     ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ಸಿ. ತೀರ್ಥೇಶ್ ನೇತೃತ್ವದಲ್ಲಿ ಸಂಜೆ ಮಾಧವಚಾರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಯಿತು. ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು. 
  ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವುದು ಸರಿಯಲ್ಲ. ಅಲ್ಲದೆ ಯೋಜನೆಯಿಂದ ಯಾವುದೇ ರೀತಿ ಲಾಭವಿಲ್ಲ. ನಷ್ಟದ ಜೊತೆಗೆ ಪರಿಸರ ನಾಶವಾಗಲಿದೆ ತಕ್ಷಣ ಜಿಲ್ಲಾಧಿಕಾರಿಗಳು ಈ ಸಂಬಂಧ ಗಮನ ಹರಿಸಿ ಯೋಜನೆ ಸ್ಥಗಿತಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಮನವಿಯಲ್ಲಿ ಕೋರಲಾಯಿತು. 
ತಹಸೀಲ್ದಾರ್ ಮಂಜಾನಾಯ್ಕ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪರಿಸರ ಪ್ರೇಮಿಯಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. 
 

ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲರ ಹೆಸರಿನಲ್ಲಿ ವಿ.ವಿ ಆರಂಭಿಸಿ, ಹೆಸರಿಡಿ

ಮಾಜಿ ಮುಖ್ಯಮಂತ್ರಿ, ಸಮಾಜವಾದಿ ದಿವಂಗತ ಜೆ.ಎಚ್. ಪಟೇಲ್‌ರವರ ಹೆಸರಿನಲ್ಲಿ ನೂತನ ವಿಶ್ವವಿದ್ಯಾಲಯ ಆರಂಭಿಸುವಂತೆ ಅಥವಾ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕೆಂದು ಒತ್ತಾಯಿಸಿ ಭದ್ರಾವತಿ ನಗರದ ಜನ್ನಾಪುರ, ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ. 
    ಭದ್ರಾವತಿ: ಮಾಜಿ ಮುಖ್ಯಮಂತ್ರಿ, ಸಮಾಜವಾದಿ ದಿವಂಗತ ಜೆ.ಎಚ್. ಪಟೇಲ್‌ರವರ ಹೆಸರಿನಲ್ಲಿ ನೂತನ ವಿಶ್ವವಿದ್ಯಾಲಯ ಆರಂಭಿಸುವಂತೆ ಅಥವಾ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕೆಂದು ಒತ್ತಾಯಿಸಿ ನಗರದ ಜನ್ನಾಪುರ, ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ. 
    ಸಮಾಜವಾದಿ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಹೋರಾಟದ ಹಾದಿಯಲ್ಲಿ ಬೆಳೆದುಬಂದ ಪಟೇಲರು ತಮ್ಮ ಅಧಿಕಾರದ ಅವಧಿಯಲ್ಲಿ ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಕ್ಕೆ, ಎಲ್ಲಾ ಸಮಾಜದ ಪರವಾಗಿ ತೆಗೆದುಕೊಂಡ ಉತ್ತಮ ಕಾರ್ಯಗಳ ಬಗ್ಗೆ, ಲೋಕಸಭೆಯಲ್ಲಿ ಪ್ರಪ್ರಥಮವಾಗಿ ಕನ್ನಡದಲ್ಲಿ ಮಾತನಾಡಿರುವ ಬಗ್ಗೆ, ವಿಧಾನಸಭೆ ಒಳಗೆ ಮತ್ತು ಹೊರಗೆ ಭಾಷಣಗಳ ಕುರಿತು ಹಾಗು ಸಮಗ್ರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಲುವಾಗಿ ಅವರ ಹೆಸರಿನಲ್ಲಿ ನೂತನ ವಿಶ್ವವಿದ್ಯಾಲಯ ಆರಂಭಿಸುವಂತೆ ಅಥವಾ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಬೇಕು ಹಾಗೂ ಪಟೇಲರ ಹೆಸರಿನಲ್ಲಿ ಸಾರ್ವಜನಿಕ ನೀತಿ ಮತ್ತು ಆಡಳಿತ ಅಕಾಡೆಮಿ ನಿರ್ಮಿಸಿ ಮುಂದಿನ ರಾಜಕಾರಣಿಗಳಿಗೆ, ಯುವಕರಿಗೆ, ಆಡಳಿತಗಾರರಿಗೆ ಧೀಮಂತ ನಾಯಕನ ಜೀವನ ಚರಿತ್ರೆ ಪರಿಚಯಿಸುವ ಮೂಲಕ ಪಟೇಲರ ಚಿಂತನೆಗಳು ಉಳಿಯಬೇಕೆಂದು ಮನವಿಯಲ್ಲಿ ಕೋರಿದ್ದಾರೆ. 
    ಮನವಿಯನ್ನು ತಾಲೂಕು ಆಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪೌರಾಯುಕ್ತ ಎನ್.ಕೆ ಹೇಮಂತ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಗಾಂಜಾ ಪ್ರಕರಣದ ಆರೋಪಿ ಆದಿಲ್ ಬಾಷಾ ಬಂಧನ

ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಭದ್ರಾವತಿ ನಗರದ ಕೂಲಿ ಬ್ಲಾಕ್ ಶೆಡ್ ನಿವಾಸಿ ಆದಿಲ್ ಬಾಷಾನನ್ನು ಬಂಧಿಸಲಾಗಿದೆ.
    ಭದ್ರಾವತಿ: ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಆದೇಶದಂತೆ ನಗರದ ಕೂಲಿ ಬ್ಲಾಕ್ ಶೆಡ್ ನಿವಾಸಿ ಆದಿಲ್ ಬಾಷಾನನ್ನು ಬಂಧಿಸಲಾಗಿದೆ.
    ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಅಡಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಸ್ಪೆಷಲ್ ಸಿ ೨೪೮ /೨೨ ಕಲಂ ೨೦(ಬಿ)(೨)(ಬಿ) ಪ್ರಕರಣದಲ್ಲಿ ಆರೋಪಿ ಎ೪ ಆದಿಲ್ ಬಾಷಾನನ್ನು ಬಂಧಿಸಲು ವಾರೆಂಟ್ ಹೊರಡಿಸಲಾಗಿತ್ತು.
    ಈ ಹಿನ್ನೆಲೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪನಿರೀಕ್ಷಕ ರಮೇಶ್‌ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರ ಮಾಡಲಾಗಿದೆ.

ಬುಧವಾರ, ಸೆಪ್ಟೆಂಬರ್ 17, 2025

ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಚಾಲಕ ಸಾವು

ಆಟೋ ಹಾಗು ಲಾರಿ ಚಾಲಕ ಚನ್ನಕೇಶವ 
    ಭದ್ರಾವತಿ : ತಾಲೂಕಿನ ಯರೇಹಳ್ಳಿ ಗಾಂಧಿನಗರದ ನಿವಾಸಿ, ಆಟೋ ಹಾಗು ಲಾರಿ ಚಾಲಕ ಚೆನ್ನಕೇಶವ(೪೮) ಮಂಗಳವಾರ ತಿಪಟೂರಿನಲ್ಲಿ ಲಾರಿ ಹಳ್ಳಕ್ಕೆ ಉರುಳಿ ಬಿದ್ದು ಹಿನ್ನಲೆಯಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. 
    ಆಟೋ ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಇವರು ಕಳೆದ ಎರಡು ತಿಂಗಳಿನಿಂದ ತಿಪಟೂರಿನ ಕಲ್ಲು ಕ್ವಾರೆಯಲ್ಲಿ ಲಾರಿ ಚಾಲಕ ಕೆಲಸಕ್ಕೆಂದು ತೆರಳಿದ್ದರು. ಕ್ವಾರೆಯಲ್ಲಿ ನಿಯಂತ್ರಣ ಕಳೆದುಕೊಂಡು ಲಾರಿ ಸುಮಾರು ೪೦ ಅಡಿ ಎತ್ತರದಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾರೆ. ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ಬುಧುವಾರ ಬೆಳಗಿನ ಜಾವ ಮೃತದೇಹ ಗಾಂಧಿನಗರದ ಮನೆಗೆ ತರಲಾಗಿದ್ದು, ಸಂಜೆ ಗ್ರಾಮದ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
    ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಬಸವನಗುಡಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಆರ್ ಶಿವರಾಮ್, ಮುಖಂಡರಾದ ಸ್ವಾಮಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.