Tuesday, June 30, 2020

ದನದ ದೊಡ್ಡಿ ಜಾಗ ಖಾಸಗಿಯವರಿಗೆ ನೀಡದಿರಿ : ಬಿ.ಎನ್ ರಾಜು

ಕೋಟ್ಯಾಂತರ ರು. ಮೌಲ್ಯದ ಜಾಗ ಸದ್ಬಳಕೆಯಾಗಲಿ 

ಭದ್ರಾವತಿ ನಗರಸಭೆಗೆ ಸೇರಿದ ನಗರದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗದಲ್ಲಿರುವ ದನದೊಡ್ಡಿ ಜಾಗವನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡದಿರುವಂತೆ ಮಾನಗ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. 
ಭದ್ರಾವತಿ, ಜೂ. ೩೦: ನಗರದ ಜೆಎಂಎಫ್‌ಸಿ ನ್ಯಾಯಾಲಯದ ಮುಂಭಾಗದಲ್ಲಿರುವ ನಗರಸಭೆಗೆ ಸೇರಿದ ದನದ ದೊಡ್ಡಿ ಜಾಗವನ್ನು ಯಾವುದೇ ಕಾನಕ್ಕೂ ಖಾಸಗಿಯವರಿಗೆ ನೀಡಬಾರದೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಆಗ್ರಹಿಸಿದೆ. 
ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಈ ಹಿಂದೆ ದನದ ದೊಡ್ಡಿಯಾಗಿದ್ದ ಜಾಗ ಅನೇಕ ವರ್ಷಗಳಿಂದಲೂ ವಿವಾದದಿಂದ ಕೂಡಿದೆ. ನಗರಸಭೆ ಖಾತೆ ನಂ. ೧೭೪/೧೭೪ರಲ್ಲಿ ಜಾಗದ ಅಳತೆ ೨೫*೮೦ ಅಡಿಗಳಾಗಿದ್ದು, ಈ ಜಾಗವನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ರವರು ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದವರಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಮಂಜೂರಾತಿಗಾಗಿ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು. 
ಶಾಸಕರು ಸ್ವಜಾತಿಯ ಪ್ರೀತಿಯಿಂದ ಪ್ರಸ್ತಾವನೆ ಸಲ್ಲಿಸಿರುವ ಕ್ರಮವನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕೋಟ್ಯಾಂತರ ರು. ಬೆಲೆ ಬಾಳುವ ಜಾಗವನ್ನು ನಗರಸಭೆಗೆ ಆದಾಯ ಬರುವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಅಥವಾ ಸರ್ಕಾರದ ವಿವಿಧ ಇಲಾಖೆಗಳ ಕಟ್ಟಡ ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದೆಂದು ಆಗ್ರಹಿಸಿದರು. 
ಜಾಗವನ್ನು ಖಾಸಗಿಯವರಿಗೆ ನೀಡುವ ಸಂಬಂಧ ಮೇ.೨೯ರಂದು ತಿಂಗಳೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಮಿತಿಯು ಈ ಸಂಬಂಧ ತಕರಾರು ಸಲ್ಲಿಸಲಿದೆ. ಅಲ್ಲದೆ ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದರು. 
ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷ ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಮ್ ಖಾನ್, ಬ್ರಹ್ಮಲಿಂಗಯ್ಯ, ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment